ಮಂಗಳವಾರ, ಏಪ್ರಿಲ್ 9, 2024


 

ಆನಂದದ ಪರಿಭಾಷೆ

ಲೇಖಕ: ಡಾ. ಕಿರಣ್ ವಿ.ಎಸ್.

 ಆನಂದವಾಗಿ ಬದುಕುವುದು ಯಾರಿಗೆ ಬೇಕಿಲ್ಲ? ಜೀವನದಲ್ಲಿ ಹಣ ಮತ್ತು ಆನಂದಗಳ ನಡುವೆ ಯಾವುದಾದರೂ ಒಂದನ್ನು ಆಯ್ದುಕೊಳ್ಳಿ ಎಂದರೆ ಬಹುತೇಕರ ಆಯ್ಕೆ ಆನಂದವೇ ಇದ್ದೀತು. ಇಂದು ಕಷ್ಟಪಟ್ಟು ಕೆಲಸ ಮಾಡಬೇಕು ಎನ್ನುವುದು ನಾಳಿನ ಬದುಕು ಆನಂದ, ನೆಮ್ಮದಿಯಿಂದ ಕೂಡಿರಲಿ ಎಂಬ ಆಶಾಭಾವನೆಯಿಂದಲೇ. ಆನಂದ ಎಂದರೇನು? ಅದು ಹೇಗೆ ಸಿಗುತ್ತದೆ? ಎಂಬ ಪ್ರಶ್ನೆಗಳು ಕಠಿಣ.  ಆನಂದವನ್ನು ವಿವರಿಸಲು ಮನೋವಿಜ್ಞಾನಿಗಳು, ದಾರ್ಶನಿಕರು ಬಳಸುವ ಸಂಕೀರ್ಣ ಭಾಷೆ ಸಾಮಾನ್ಯ ಜನರ ತಲೆಯ ಮೇಲಿಂದ ಹಾರಿಹೋಗಿರಲು ಸಾಧ್ಯ. “ಹೆಸರಿಗಿಂತಲೂ ಭಾವ ಮುಖ್ಯ” ಎಂದು ಆಲೋಚಿಸುವ ಹಲವಾರು ಸಂಗತಿಗಳ ಪೈಕಿ ಆನಂದವೂ ಒಂದು. 

 ಆನಂದಕ್ಕೆ ಅನೇಕ ಆಯಾಮಗಳಿವೆ. ಸಂತಸದ ಭಾವ, ಸ್ವಾತಂತ್ರ್ಯ, ಜೀವನದ ಅರ್ಥೋದ್ದೇಶಗಳನ್ನು ಕಂಡುಕೊಳ್ಳುವಿಕೆ, ಏಳಿಗೆ, ಸಮಾಧಾನದ ಬದುಕು, ವೈಯಕ್ತಿಕ ವಿಕಸನ – ಮುಂತಾದುವು ಆನಂದದ ಪರಿಭಾಷೆಗಳು. ಆನಂದಕ್ಕೂ, ಆರೋಗ್ಯಕ್ಕೂ ಪರಸ್ಪರ ಪೂರಕ ಸಂಬಂಧವಿದೆ. ಒಳ್ಳೆಯ ಜೀವನಶೈಲಿ, ನಿಯಮಿತ ವ್ಯಾಯಾಮ, ಕ್ರಮಬದ್ಧ ಆಹಾರ, ಮನಸ್ಸಿಗೆ ಹಿತವಾದವರ ಜೊತೆಗಿನ ಒಡನಾಟಗಳು ದೀರ್ಘಕಾಲಿಕ ಆನಂದಕ್ಕೆ ಕಾರಣವಾಗಬಲ್ಲವು. ಆನಂದಕರ ಮನಸ್ಸು ಶರೀರದ ಹಾರ್ಮೋನ್ಗಳನ್ನು ಸಮಸ್ಥಿತಿಯಲ್ಲಿ ಇಡುತ್ತದೆ; ರೋಗನಿರೋಧಕ ಶಕ್ತಿಯನ್ನು ಬೆಳೆಸುತ್ತದೆ; ಚಯಾಪಚಯಗಳನ್ನು ನಿಯಂತ್ರಣದಲ್ಲಿ ಇಡುತ್ತದೆ. ಇವೆಲ್ಲವೂ ಉತ್ತಮ ಆರೋಗ್ಯದ ನಿರ್ವಹಣೆಯಲ್ಲಿ ಧನಾತ್ಮಕ ಅಂಶಗಳು. 

 1954ರಲ್ಲಿ ಅಮೆರಿಕೆಯ ಪ್ರಸಿದ್ಧ ಮನೋತಜ್ಞ ಅಬ್ರಹಾಮ್ ಮಾಸ್ಲೊ “ಮನುಷ್ಯರು ಸಾಧಿಸುತ್ತಿರುವ ಪ್ರತಿಯೊಂದು ಪ್ರಗತಿಯೂ ಜೀವವನ್ನು ಹೆಚ್ಚು ಕಾಲ ಉಳಿಸಲು ಹೆಣಗುತ್ತಿದೆಯೇ ಹೊರತು ಜೀವನದ ಮೌಲ್ಯಾಭಿವೃದ್ಧಿಗೆ ಪೂರಕವಾಗುತ್ತಿಲ್ಲ” ಎಂದು ಅಭಿಪ್ರಾಯ ಪಟ್ಟಿದ್ದರು. ಆನಂತರದ ದಶಕಗಳಲ್ಲಿ ಬದುಕನ್ನು ಹೆಚ್ಚು ಒಳಿತುಗೊಳಿಸುವುದು ಹೇಗೆಂಬ ಚಿಂತನೆಗಳು ನಡೆದವು. ಅಭಿವೃದ್ಧಿಯನ್ನು ಯಶಸ್ಸಿನ ಅಳತೆಗೋಲುಗಳ ಮೇಲೆ ಅಳೆಯುತ್ತಿದ್ದ ಬಹುತೇಕ ಪಾಶ್ಚಾತ್ಯ ಸಂಶೋಧಕರು, “ಜೀವನ ಪಯಣದಲ್ಲಿ ಆನಂದದ ಪಾತ್ರ ಬಹಳ ದೊಡ್ಡದು” ಎಂಬುದನ್ನು ಮನಗಂಡರು.

 ಜೀವನ ಸರಳ ರೇಖೆಯ ಪಯಣವಲ್ಲ; ಅದು ಹಲವಾರು ಏಳು-ಬೀಳುಗಳ ಮೂಲಕ ಹಾದುಹೋಗುವ ಕಸರತ್ತು. ಬದುಕನ್ನು ಸಹ್ಯವಾಗಿಸುವ ಮೂರು ಆಧಾರಗಳನ್ನು ತಜ್ಞರು ಗುರುತಿಸುತ್ತಾರೆ: ವೈಯಕ್ತಿಕ ಧನಾತ್ಮಕ ಅನುಭವಗಳು (ಆನಂದ, ತೃಪ್ತಿ); ವ್ಯಕ್ತಿ-ವಿಶೇಷ ಲಕ್ಷಣಗಳು (ಒಳ್ಳೆಯ ನಡತೆ, ಸಮಾಜದ ಅಂಗೀಕಾರ); ವ್ಯಕ್ತಿಯು ತೊಡಗಿಸಿಕೊಂಡ ಸಂಘಗಳು (ಕುಟುಂಬ, ಕೆಲಸದ ತಾಣ, ಸಾಮಾಜಿಕ ಚಟುವಟಿಕೆಗಳ ಕೇಂದ್ರಗಳು). ಇಲ್ಲೆಲ್ಲ ಉತ್ತಮ ಫಲಿತಾಂಶಗಳು ದೊರೆಯುತ್ತಿದ್ದರೆ ವ್ಯಕ್ತಿಯ ಆನಂದದ ಮಟ್ಟ ಸಹಜವಾಗಿಯೇ ಏರುತ್ತದೆ. ಅಂತೆಯೇ, ಜೀವನದ ಪಯಣ ಇಳಿಮುಖವಾದಾಗ ಈ ಎಡೆಗಳಲ್ಲಿನ ಉತ್ತಮ ಸಂಬಂಧಗಳು ವ್ಯಕ್ತಿಯ ಆಧಾರಕ್ಕೆ ನಿಲ್ಲುತ್ತವೆ; ಕಷ್ಟಗಳನ್ನು ಸಹ್ಯವಾಗಿಸುತ್ತವೆ; ಶೀಘ್ರ ಚೇತರಿಕೆಗೆ ಕಾರಣವಾಗುತ್ತವೆ.

 ಆನಂದದ ಮೂಲಗಳು ಯಾವುವು? ಯಾವುದೇ ವ್ಯಕ್ತಿ ಮೂರು ವಿಧಗಳಿಂದ ಆನಂದ ಪಡೆಯಬಹುದು: ಇತರರಿಗೆ ಒಳಿತನ್ನು ಮಾಡುವುದರಿಂದ; ತನಗೆ ನೈಪುಣ್ಯವಿರುವ ಕೆಲಸಗಳನ್ನು ಮಾಡುವುದರಿಂದ; ಹಾಗೂ ತನ್ನ ಸ್ವಂತಕ್ಕೆ ಮತ್ತು ಕುಟುಂಬಕ್ಕೆ ಒಳಿತನ್ನು ಮಾಡುವುದರಿಂದ. 2005 ರಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಬ್ರಿಟನ್ನಿನ ಸಂಶೋಧಕರು ಶರೀರದ ಜೈವಿಕ ಕ್ರಿಯೆಗಳ ಮೇಲೆ ಆನಂದದ ಮನಸ್ಥಿತಿಯ ಪರಿಣಾಮಗಳನ್ನು ಅಳೆದರು. ಸತತ ಮೂರು ವರ್ಷಗಳ ಕಾಲ ನಡೆದ ಈ ಸಂಶೋಧನೆಯಲ್ಲಿ, ಆಯಾ ದಿನದ ಕೆಲಸದ ಕೊನೆಯಲ್ಲಿ ಮಧ್ಯವಯಸ್ಕ ವ್ಯಕ್ತಿಗಳ ಆನಂದದ ಸ್ಥಿತಿಯನ್ನು ಅವರ ಶರೀರದ ಸಹಜ ಸ್ಟೀರಾಯ್ಡ್ ಹಾರ್ಮೋನುಗಳ ಮಟ್ಟ; ಒತ್ತಡದ ಸಮಯದಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳ ಮಟ್ಟ; ಹೃದಯ ಬಡಿತದ ಗತಿ; ರಕ್ತದ ಒತ್ತಡ ಮೊದಲಾದುವುಗಳ ಜೊತೆಯಲ್ಲಿ ಹೋಲಿಕೆ ಮಾಡಿದರು. ಒಂದೇ ರೀತಿಯ ಕೆಲಸ ಮಾಡುವ, ಸರಿಸುಮಾರು ಒಂದೇ ವಯಸ್ಸಿನ, ಒಂದೇ ರೀತಿಯ ಸಾಮಾಜಿಕ ಹಿನ್ನೆಲೆಯ ವ್ಯಕ್ತಿಗಳ ಮಧ್ಯೆ ಸಂತಸದ ಮನಸ್ಥಿತಿ ಉಳ್ಳವರು ಹೆಚ್ಚು ಆರೋಗ್ಯಶಾಲಿಗಳೂ, ಕಡಿಮೆ ಕಾಯಿಲೆ ಬೀಳುವವರೂ, ಅನಾರೋಗ್ಯಗಳಿಂದ ಬೇಗನೇ ಚೇತರಿಸಿಕೊಳ್ಳುವವರೂ ಆಗಿದ್ದರು. ಈ ರೀತಿಯ ಪರಿಣಾಮಗಳು ವೃದ್ಧಾಪ್ಯಕ್ಕೂ ವಿಸ್ತರಿಸುತ್ತವೆ ಎಂದು ಸಂಶೋಧಕರ ಅಭಿಪ್ರಾಯ. ಅಂದರೆ, ಆನಂದದ ಮನಸ್ಥಿತಿ ಉಳ್ಳವರ ವೃದ್ಧಾಪ್ಯ ಹೆಚ್ಚು ಆರೋಗ್ಯಕರವೂ, ಫಲಕಾರಿಯೂ, ಮತ್ತು ಧನಾತ್ಮಕವೂ ಆಗಿರುತ್ತದೆಂದು ವಿಜ್ಞಾನಿಗಳ ಅಭಿಮತ.

 1938 ರಲ್ಲಿ ಆರಂಭವಾಗಿ, ಈಗ ಎರಡನೆಯ ಹಂತಕ್ಕೆ ಸಾಗಿರುವ, ಪ್ರಪಂಚದ ಅತ್ಯಂತ ದೀರ್ಘಾವಧಿ ಅಧ್ಯಯನಗಳಲ್ಲಿ ಒಂದಾದ ಹಾವರ್ಡ್ ವಿಶ್ವವಿದ್ಯಾಲಯದ “ವಯಸ್ಕರ ಅಭಿವೃದ್ಧಿಯ ಅಧ್ಯಯನ” ಆನಂದದ ಪರಿಭಾಷೆಯತ್ತಲೂ ದೃಷ್ಟಿ ಹರಿಸಿದೆ. ಈ ಅಧ್ಯಯನದ ಮೂಲ ಉದ್ದೇಶ ಇದ್ದದ್ದು “ಒಳ್ಳೆಯ ಜೀವನ ಎಂದರೇನು? ಸಾಫಲ್ಯದ ಮಾನದಂಡ ಯಾವುದು?” ಎನ್ನುವ ಪ್ರಶ್ನೆಗಳಿಗೆ ಉತ್ತರ ಪಡೆಯುವುದು. ಈ ಅಧ್ಯಯನದ ಫಲಶ್ರುತಿ ಬಹಳ ಕುತೂಹಲಕಾರಿ. ಯಾವುದೇ ವ್ಯಕ್ತಿಗೆ ದೀರ್ಘಕಾಲಿಕ ಅವಧಿಯಲ್ಲಿ ಹೆಚ್ಚು ಆನಂದ ಮತ್ತು ವೃತ್ತಿ ಸಾಫಲ್ಯವನ್ನು ತಂದುಕೊಡುವುದು ವಿದ್ಯೆಯಾಗಲೀ, ಬುದ್ಧಿಯಾಗಲೀ, ಜಾಣತನವಾಗಲಿ ಅಲ್ಲ; ಬದಲಿಗೆ ನಮ್ಮ ವೃತ್ತಿನಿರತ ಸಂಬಂಧಗಳನ್ನು ಎಷ್ಟು ಪ್ರಾಮಾಣಿಕವಾಗಿ ನಿರ್ವಹಿಸುತ್ತೇವೆ ಎಂಬುದು. ನಾವು ಜೀವನದಲ್ಲಿ ಸಂಬಂಧಗಳನ್ನು ಸಲಹುವ ರೀತಿಯೇ ನಮ್ಮ ಆನಂದದ ಮೂಲ ಸ್ರೋತ. ಜೀವನದಲ್ಲಿ ದೀರ್ಘಕಾಲಿಕ ಆನಂದ ಹೊಂದುವ ಪ್ರಮುಖ ವಿಧಾನವೆಂದರೆ ತಮ್ಮ ಆಪ್ತರೊಡನೆ ಆತ್ಮೀಯ ಒಡನಾಟವನ್ನು ನಿರ್ವಹಿಸುವುದು. ಸಾಮಾಜಿಕ ಸ್ತರ, ಸಂಪತ್ತು, ಕೀರ್ತಿ, ಜಾಣ್ಮೆಗಳಿಗಿಂತಲೂ ಪರಸ್ಪರ ಸಂಬಂಧಗಳ ಮಹತ್ವ ಹೆಚ್ಚೆಂದು ಈ ಅಧ್ಯಯನ ನಿರೂಪಿಸಿದೆ.

 ಆನಂದವೆನ್ನುವುದು ಜೀವನದ ಒಂದು ಆಯ್ಕೆ. ಅದನ್ನು ಸರಿಯಾಗಿ ರೂಢಿಸಿಕೊಳ್ಳುವುದು, ರೂಪಿಸಿಕೊಳ್ಳುವುದು ನಮ್ಮ ಕೈಲಿದೆ. ಆನಂದದ ಮನಸ್ಥಿತಿ ಆರೋಗ್ಯಕರ ಬದುಕಿಗೆ ರಹದಾರಿ ಎನ್ನುವುದು ವೈಜ್ಞಾನಿಕ ಸತ್ಯ.

-------------------------

20/3/2024 ರ ವಿಶ್ವ ಆನಂದ ದಿನದ ಪ್ರಯುಕ್ತ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ.

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ