ಮಧುಮೇಹಿಗಳಲ್ಲಿ ಹೃದ್ರೋಗ
ಡಾ. ಕಿರಣ್ ವಿ.ಎಸ್.
ವೈದ್ಯರು
ಮಧುಮೇಹಿಗಳಲ್ಲಿ ಹೃದ್ರೋಗದ ಸಮಸ್ಯೆಯನ್ನು
ನಿಯಂತ್ರಣದಲ್ಲಿ ಇಡಲು ತಜ್ಞರು ಕೆಲವು ಸೂತ್ರಗಳನ್ನು ಶಿಫಾರಸ್ಸು ಮಾಡಿದ್ದಾರೆ. ಇವುಗಳ
ಪಾಲನೆಯಿಂದ ಮಧುಮೇಹಿಗಳು ತಮ್ಮ ಹೃದಯವನ್ನು ಸುರಕ್ಷಿತವಾಗಿರಸಬಹುದು.
·
ಹೃದಯದ
ಸಮಸ್ಯೆ ಇರುವ ಹಲವಾರು ರೋಗಿಗಳಲ್ಲಿ ಮಧುಮೇಹ ಇರುವುದು ಪತ್ತೆಯಾಗದೇ ಇರಬಹುದು. ಅಂದರೆ, ಹೃದ್ರೋಗವೇ ಮಧುಮೇಹದ ಮೊದಲ
ಚಿಹ್ನೆಯಾಗಿ ಕಾಣಬಹುದು. ಹೀಗಾಗಿ,
ಹೃದ್ರೋಗ ಇರುವ ಪ್ರತಿಯೊಬ್ಬರೂ ಮಧುಮೇಹ ಪತ್ತೆಮಾಡುವ ಪರೀಕ್ಷೆಗಳನ್ನು
ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.
·
ಮಧುಮೇಹದ
ಪ್ರತಿಯೊಬ್ಬ ರೋಗಿಯೂ ಕಾಲಕಾಲಕ್ಕೆ ಹೃದಯದ ಕಾರ್ಯಕ್ಷಮತೆಯ ತಪಾಸಣೆ ಮಾಡಿಸುವುದು ಅಗತ್ಯ. ಹೃದ್ರೋಗದ
ಚಿಹ್ನೆಗಳಿಗಾಗಿ ಕಾಯುವುದು ಸೂಕ್ತವಲ್ಲ. ಯಾವುದೇ ಕಾಯಿಲೆಯನ್ನಾದರೂ ಆರಂಭಿಕ ಹಂತದಲ್ಲಿ ಪತ್ತೆ
ಮಾಡಿದರೆ ಚಿಕಿತ್ಸೆ ಸುಲಭ, ಸೋವಿ, ಮತ್ತು ಸರಳವಾಗುತ್ತದೆ.
·
ಮಧುಮೇಹ
ನಿಯಂತ್ರಣದಲ್ಲಿ ಇಲ್ಲದ ಪ್ರತಿಯೊಬ್ಬ ರೋಗಿಯನ್ನೂ ಹೃದ್ರೋಗಿಯ ರೀತಿಯಲ್ಲೇ ಪರಿಗಣಿಸಬೇಕು.
ಕರೋನರಿ ರಕ್ತನಾಳಗಳ ತಪಾಸಣೆ ಮತ್ತು ಹೃದಯದ ಕಾರ್ಯಕ್ಷಮತೆಯ ಪರೀಕ್ಷೆ ಅತ್ಯಗತ್ಯ.
·
ಮಧುಮೇಹದಲ್ಲಿ
ಘಾಸಿಗೊಳಗಾಗುವ ಮತ್ತೊಂದು ಪ್ರಮುಖ ಅಂಗ ಮೂತ್ರಪಿಂಡಗಳು. ಶರೀರದ ರಕ್ತದೊತ್ತಡವನ್ನು
ನಿರ್ವಹಿಸುವಲ್ಲಿ ಮೂತ್ರಪಿಂಡಗಳ ಪಾತ್ರ ಹಿರಿದು. ಮಧುಮೇಹದ ಕಾರಣದಿಂದ ಮೂತ್ರಪಿಂಡಗಳು ಹಾಳಾದರೆ, ಅದರ ಪರೋಕ್ಷ ಪರಿಣಾಮವನ್ನು
ಹೃದಯವೇ ಅನುಭವಿಸಬೇಕು.
·
ಮಧುಮೇಹದ
ಔಷಧಗಳ ಜೊತೆಗೆ ಹೃದಯದ ಸಮಸ್ಯೆಗಳನ್ನು ನಿರ್ವಹಿಸುವ ಔಷಧಗಳನ್ನೂ ಇಂತಹ ರೋಗಿಗಳು ಸೇವಿಸಬೇಕು.
ಕೇವಲ ಮಧುಮೇಹದ ಔಷಧಗಳನ್ನು ಮಾತ್ರ ಸೇವಿಸುವುದು ಹೃದ್ರೋಗಕ್ಕೆ ಪರಿಹಾರವಲ್ಲ.
·
ಬೊಜ್ಜು
ಅಥವಾ ಅಧಿಕ ಮೈತೂಕ ಹೃದಯ ಕಾಯಿಲೆಗಳಿಗೆ ಮತ್ತೊಂದು ಪ್ರಮುಖ ಕಾರಣ ಮಧುಮೇಹಿಗಳಲ್ಲಿ ಬೊಜ್ಜಿನ
ಸಾಧ್ಯತೆ ಸಾಮಾನ್ಯ ಜನರಿಗೆ ಹೋಲಿಸಿದರೆ ಎರಡರಿಂದ ಮೂರು ಪಟ್ಟು ಹೆಚ್ಚು. ಬೊಜ್ಜಿನ ನಿಯಂತ್ರಣ
ಮಧುಮೇಹದ ಮೇಲೆ ಮತ್ತು ಹೃದ್ರೋಗದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ, ಸರಿಯಾದ ಮೈತೂಕವನ್ನು ಹೊಂದುವ
ಪ್ರತಿಯೊಂದು ಸುರಕ್ಷಿತ ವಿಧಾನವನ್ನೂ ಅನುಸರಿಸಲು ಮಧುಮೇಹಿಗಳನ್ನು ಪ್ರೋತ್ಸಾಹಿಸಬೇಕು.
·
ನಿಯಮಿತ
ವ್ಯಾಯಾಮ ಮಧುಮೇಹದ ನಿಯಂತ್ರಣದಲ್ಲಿ ಔಷಧ ಚಿಕಿತ್ಸೆಯಷ್ಟೇ ಪರಿಣಾಮಕಾರಿ. ಸಮಂಜಸ ಆಹಾರ, ಸರಿಯಾದ ಔಷಧ ಚಿಕಿತ್ಸೆ
ಮತ್ತು ನಿಯಮಿತ ವ್ಯಾಯಾಮಗಳು ಮಧುಮೇಹ ಚಿಕಿತ್ಸೆಯ ಮೂರು ಅತ್ಯಗತ್ಯ ಅಂಗಗಳು. ಇವುಗಳಲ್ಲಿ ಒಂದು
ಭಾಗ ಮುಕ್ಕಾದರೂ ಮಧುಮೇಹ ನಿಯಂತ್ರಣ ಅಪೂರ್ಣವೆಂದೇ ಅರ್ಥ.
·
ಧೂಮಪಾನ
ಮತ್ತು ಮದ್ಯಪಾನ ಮಧುಮೇಹದ ನಿಯಂತ್ರಣವನ್ನು ಏರುಪೇರಾಗಿಸುತ್ತವೆ. ಇವೆರಡೂ ಪ್ರತ್ಯೇಕವಾಗಿ
ಹೃದ್ರೋಗಕ್ಕೆ ಕಾರಣವಾಗಬಲ್ಲವು. ಹೀಗಾಗಿ,
ಮಧುಮೇಹಿಗಳು ಧೂಮಪಾನ ಮತ್ತು ಮದ್ಯಪಾನಗಳಿಂದ ದೂರ ಉಳಿಯುವುದು ತಮ್ಮ ಹೃದಯಕ್ಕೆ
ನೀಡಬಹುದಾದ ಕಾಣಿಕೆ.
·
ಮಾನಸಿಕ
ಸಂತುಲನವನ್ನು ಕಾಯ್ದುಕೊಳ್ಳುವುದು ಮಧುಮೇಹಿ ಹೃದ್ರೋಗಿಗಳಲ್ಲಿ ಬಹಳ ಮುಖ್ಯ. ಮನಸ್ಸು
ವ್ಯಗ್ರವಾದಷ್ಟೂ ಶರೀರದಲ್ಲಿ ಹಾರ್ಮೋನುಗಳ ಮಟ್ಟ ಏರುಪೇರಾಗುತ್ತದೆ. ಇದರ ಪರೋಕ್ಷ ಪರಿಣಾಮ
ರಕ್ತದಲ್ಲಿನ ಸಕ್ಕರೆಯ ಅಂಶದ ಮೇಲೆ, ಹೃದಯದ ಗತಿಯ ಮೇಲೆ ಬೀಳುತ್ತದೆ; ರಕ್ತನಾಳಗಳಲ್ಲಿನ ಒತ್ತಡ
ಏರುತ್ತದೆ. ಇಂತಹ ಒತ್ತಡಗಳು ಪ್ರತಿದಿನವೂ ಹಲವು ಬಾರಿ ಆಗುತ್ತಿದ್ದರೆ ಹೃದಯಕ್ಕೆ ಹಾನಿ ಖಚಿತ.
ಮಧುಮೇಹಿಗಳು ನಿಯಮಿತ ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳ ಮೂಲಕ ತಮ್ಮ ಮನೋವ್ಯಾಪಾರಗಳನ್ನು ಹತೋಟಿಯಲ್ಲಿ ಇಡಬೇಕು.
ಮಧುಮೇಹ ಮತ್ತು ಹೃದ್ರೋಗದ ಅವಿನಾಭಾವ ಸಂಬಂಧವನ್ನು
ಸರಿಯಾಗಿ ಅರ್ಥ ಮಾಡಿಕೊಂಡರೆ ಅವೆರಡನ್ನೂ ಚೆನ್ನಾಗಿ ನಿಯಂತ್ರಿಸಬಹುದು. ಇವೆರಡಕ್ಕೂ ಉತ್ತಮ
ಔಷಧಗಳು ಇಂದು ಲಭ್ಯವಿವೆ. ಸೂಕ್ತ ಆಹಾರ, ಔಷಧ, ಮತ್ತು ವ್ಯಾಯಾಮಗಳ
ನೆರವಿನಿಂದ ಜಗತ್ತಿನಲ್ಲಿ ಲಕ್ಷಾಂತರ ಮಧುಮೇಹಿಗಳು ತಮ್ಮ ಸಮಸ್ಯೆಯನ್ನು ಸರಾಗವಾಗಿ
ನಿರ್ವಹಿಸುತ್ತಿದ್ದಾರೆ. ಇದು ಎಲ್ಲ ಮಧುಮೇಹಿಗಳೂ ತಮ್ಮ ದೈನಂದಿನ ಬದುಕಿನಲ್ಲಿ ಅನುಸರಿಸಬಹುದಾದ ಆಶಾದಾಯಕ
ಸಂಗತಿ.
-------------------------
ದಿನಾಂಕ
6/2/2024 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/heart-problems-and-diabetes-doctor-suggestions-to-control-cholestral-2672435
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ