ಗುಲ್ಮದ ಗಣಿತ
ಡಾ. ಕಿರಣ್ ವಿ.ಎಸ್.
ವೈದ್ಯರು
ಹಿಂದೂಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪರಿಕಲ್ಪನೆ ಇದೆ. ಇವರುಗಳು ಕ್ರಮವಾಗಿ
ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣ ಎಂಬ ನಂಬಿಕೆ
ಇದೆ. ಇವರಿಂದಲೇ ಜಗತ್ತಿನ ಜೀವರಾಶಿ ಒಂದು ಸಮತೋಲನದಲ್ಲಿ ಇರುತ್ತದೆ ಎನ್ನುವ ಭಾವನೆಯಿದೆ. ನಮ್ಮ
ದೇಹದಲ್ಲಿ ಅತ್ಯಂತ ಅಧಿಕ ಸಂಖ್ಯೆಯಲ್ಲಿ ಕಾಣುವುದು ಕೆಂಪು ರಕ್ತಕಣಗಳು. ಒಂದು ಮಿಲಿಲೀಟರ್
ರಕ್ತದಲ್ಲಿ ಸುಮಾರು 500-ಕೋಟಿ ಕೆಂಪು ರಕ್ತಕಣಗಳು ಇರುತ್ತವೆ. ಆರೋಗ್ಯವಂತ ವ್ಯಕ್ತಿಯಲ್ಲಿ ಸುಮಾರು
5 ಲೀಟರ್ ರಕ್ತ ಎನ್ನುವ ಲೆಕ್ಕದಲ್ಲಿ ದೇಹದ ಕೆಂಪು ರಕ್ತಕಣಗಳ ಒಟ್ಟು ಸಂಖ್ಯೆ 25-ಲಕ್ಷ-ಕೋಟಿಯನ್ನು
ಮೀರುತ್ತದೆ. ಒಂದು ಸೆಕೆಂಡಿಗೆ ಸುಮಾರು 25-ಲಕ್ಷ ಕೆಂಪು ರಕ್ತಕಣಗಳು ಉತ್ಪಾದನೆ ಆಗುತ್ತವೆ. ಕೆಂಪು
ರಕ್ತಕಣದ ಸರಾಸರಿ ಆಯುಸ್ಸು 120 ದಿನಗಳು. ವಯಸ್ಸಾದ ಕೆಂಪು ರಕ್ತಕಣಗಳು ಸೆಕೆಂಡಿಗೆ 20-25 ಲಕ್ಷ
ಸಂಖ್ಯೆಯಲ್ಲಿ ನಿರ್ನಾಮವೂ ಆಗಬೇಕು.
ಆಕ್ಸಿಜನ್ ಹೊತ್ತೊಯ್ದು ಶರೀರದ ಕೋಶಗಳಿಗೆ
ಪೂರೈಕೆ ಮಾಡುವ, ಸ್ವಂತ ಕೋಶಕೇಂದ್ರವಿಲ್ಲದ, ಜೀವಂತ ಕೋಶ ಎಂದೂ ಪರಿಗಣಿಸಲಾಗದ
ಕೆಂಪು ರಕ್ತಕಣಗಳ ಸೃಷ್ಟಿ ಮುಖ್ಯವಾಗಿ ಆಗುವುದು ಮೂಳೆಯ ಒಳಭಾಗದಲ್ಲಿರುವ ಅಸ್ಥಿಮಜ್ಜೆಯಲ್ಲಿ. ಕೆಂಪು
ರಕ್ತಕಣಗಳು ಸರಾಗವಾಗಿ ರಕ್ತದಲ್ಲಿ ಹರಿದಾಡುತ್ತಾ ಆಕ್ಸಿಜನ್ ಹೊತ್ತು ಅಂಗಗಳನ್ನು ತಲುಪುವುದು
ಹೃದಯ ಮತ್ತು ರಕ್ತನಾಳಗಳ ಮೂಲಕ. ಇಷ್ಟು ವಿಷಯಗಳನ್ನು ಬಹುತೇಕ ಎಲ್ಲರೂ ತಿಳಿದಿರುತ್ತಾರೆ. ಆದರೆ,
ವಯಸ್ಸಾದ ಕೆಂಪು ರಕ್ತಕಣಗಳನ್ನು ಶರೀರದಲ್ಲಿ ನಿರ್ಮೂಲನ ಮಾಡುವುದು ಯಾವ ಅಂಗ
ಎನ್ನುವುದು ಹೆಚ್ಚು ಜನರಿಗೆ ತಿಳಿದಿರಲಿಕ್ಕಿಲ್ಲ. ಇದಕ್ಕೆ ಉತ್ತರ “ಗುಲ್ಮ”. ಇದನ್ನು
ಇಂಗ್ಲೀಷಿನಲ್ಲಿ “ಸ್ಪ್ಲೀನ್” ಎಂದು ಕರೆಯುತ್ತಾರೆ. ಶರೀರದ ಕೆಂಪು ರಕ್ತಕಣಗಳ ಲಯ ಆಗುವುದು
ಇಲ್ಲಿಯೇ. ಗುಲ್ಮದ ಕಾರಣದಿಂದಲೇ ಶರೀರದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯಲ್ಲಿ ಸಮತೋಲನ
ಇರುತ್ತದೆ. ಇದರ ಜೊತೆಗೆ ಶರೀರದ ರಕ್ಷಕ ವ್ಯವಸ್ಥೆಯ ಭಾಗವಾಗಿಯೂ ಗುಲ್ಮಕ್ಕೆ ಮುಖ್ಯ ಪಾತ್ರವಿದೆ.
ಸುಮಾರು 7-14 ಸೆಂಟಿಮೀಟರ್ ಉದ್ದ, 5-8 ಸೆಂಟಿಮೀಟರ್ ಅಗಲ,
3 ಸೆಂಟಿಮೀಟರ್ ದಪ್ಪದ, 70-150 ಗ್ರಾಂ ತೂಗುವ ಆರೋಗ್ಯಕರ
ಗುಲ್ಮ ನೇರಳೆ ಬಣ್ಣದ್ದು. ವ್ಯಕ್ತಿಯ ಎತ್ತರ ಮತ್ತು ತೂಕಗಳನ್ನು ಆಧರಿಸಿ ಗುಲ್ಮದ ಗಾತ್ರ
ಇರುತ್ತದೆ. ಇದರ ಸ್ಥಾನ ಜಠರದ ಎಡಭಾಗ. ಎದೆ ಮತ್ತು ಹೊಟ್ಟೆಯ ಭಾಗಗಳನ್ನು ಪ್ರತ್ಯೇಕಿಸುವ ವಪೆ
ಎಂಬ ಮಾಂಸದ ಹಾಳೆಯ ಅಡಿಯಲ್ಲಿ, ಪಕ್ಕೆಲುಬುಗಳ ರಕ್ಷಣೆಯಲ್ಲಿ, ಎಡ ಮೂತ್ರಪಿಂಡದ ಮೇಲ್ಭಾಗದಲ್ಲಿ ಮೇಲ್ನೋಟಕ್ಕೆ ಕಾಣದಂತೆ ಗುಲ್ಮ ಇರುತ್ತದೆ. ಮೇದೊಜೀರಕ
ಗ್ರಂಥಿಯ ಬಾಲದ ಭಾಗ ಗುಲ್ಮದ ಮೇಲೆಯೇ ಚಾಚಿರುತ್ತದೆ. ಗುಲ್ಮವನ್ನು ಸ್ವಸ್ಥಾನದಲ್ಲಿ ಇರಿಸಲು
ನಾಲ್ಕು ರಜ್ಜುಗಳಿವೆ. ರಜ್ಜುಗಳ ಒಂದು ಭಾಗ ಗುಲ್ಮಕ್ಕೆ ಅಂಟಿಕೊಂಡರೆ, ಮತ್ತೊಂದು
ಭಾಗ ಕ್ರಮವಾಗಿ ಜಠರ, ಎಡಗಡೆಯ ಮೂತ್ರಪಿಂಡ, ಎಡಭಾಗದಲ್ಲಿ
ಸಾಗುವ ದೊಡ್ಡ ಕರುಳು, ಮತ್ತು ಎಡಭಾಗದ ವಪೆಗೆ ಸೇರಿರುತ್ತವೆ. ಒಂದು
ಅರ್ಥದಲ್ಲಿ ಗುಲ್ಮ ಸ್ವತಂತ್ರ ಅಂಗ; ಇದಕ್ಕೆ ಬೇರೆ ಯಾವುದೇ ಅಂಗದ
ಜೊತೆಯಲ್ಲೂ ನೇರ ಸಂಪರ್ಕವಿಲ್ಲ; ಇದಕ್ಕೆ ಯಾವುದೇ ಪ್ರತ್ಯೇಕ
ನಾಳಗಳಿಲ್ಲ; ಇತರ ಯಾವುದೇ ಅಂಗದ ಆಸರೆಯೂ ಇದಕ್ಕಿಲ್ಲ. ಅಂತೆಯೇ,
ತನ್ನ ಕೆಲಸಕ್ಕೆ ಬೇರೆ ಯಾವುದೇ ಅಂಗದ ನೆರವನ್ನೂ ಗುಲ್ಮ ಬಯಸುವುದಿಲ್ಲ.
ಕೆಂಪು ರಕ್ತಕಣಗಳ ಸಂಹಾರಕ್ಕೆ ಕಾರಣವಾಗುವ
ಗುಲ್ಮಕ್ಕೆ,
ಅದರ ಗಾತ್ರದ ಅಗತ್ಯಕ್ಕಿಂತಲೂ ಹೆಚ್ಚಿನ ಸುತ್ತಳತೆಯ ಧಮನಿಯಿಂದ ರಕ್ತ ಪೂರೈಕೆ ಆಗುತ್ತದೆ. ಶರೀರದ
ಬಹುತೇಕ ಅಂಗಗಳು ತಮ್ಮ ಅಶುದ್ಧ ರಕ್ತವನ್ನು ನೇರವಾಗಿ ಹೃದಯಕ್ಕೆ ತಲುಪುವ ಮುಖ್ಯ ರಕ್ತನಾಳಕ್ಕೆ
ಸೇರಿಸುತ್ತವೆ. ಆದರೆ ಗುಲ್ಮ ಹಾಗಲ್ಲ; ಗುಲ್ಮದಿಂದ ರಕ್ತವನ್ನು ಹೊರಗೆ
ಒಯ್ಯುವ ಧಮನಿ ಬೇರೆಲ್ಲೂ ಹೋಗದೆ ನೇರವಾಗಿ ಯಕೃತ್ತಿನ ರಕ್ತನಾಳಗಳನ್ನು ಸೇರುತ್ತದೆ. ಇದರ ಹಿಂದೆ
ಒಂದು ಮಹತ್ವದ ಕಾರಣವಿದೆ. ಗುಲ್ಮದ ಮುಖ್ಯ ಕೆಲಸ ವಯಸ್ಸಾದ ಕೆಂಪು ರಕ್ತಕಣಗಳ “ಸುರಕ್ಷಿತ” ನಾಶ.
ಈ ಸುರಕ್ಷೆ ಅಗತ್ಯ. ಏಕೆಂದರೆ, ಕೆಂಪು ರಕ್ತಕಣಗಳ ಒಡಲಿನಲ್ಲಿರುವ
ಹೀಮೋಗ್ಲೋಬಿನ್ ಎನ್ನುವ ವಿಶಿಷ್ಟ ರಾಸಾಯನಿಕ ವಸ್ತುವೇ ನಮ್ಮ ಶರೀರದ ಆಕ್ಸಿಜನ್ ವಾಹಕ. ಇದರ ಕೇಂದ್ರದಲ್ಲಿ ಹೀಮ್ ಎನ್ನುವ, ಆಕ್ಸಿಜನ್ ಅನ್ನು ತನ್ನೊಳಗೆ ಬಿಗಿದು ಇಡುವ ರಾಸಾಯನಿಕವಿದೆ.
ಮುಕ್ತರೂಪದಲ್ಲಿ ಹೀಮ್ ಶರೀರದ ಕೋಶಗಳಿಗೆ ಅಪಾಯಕಾರಿ. ಇದರ ಅಪಾಯದಿಂದ ಕೋಶಗಳನ್ನು ಕಾಪಾಡಲು ಇದರ ಸುತ್ತ ಗ್ಲೋಬಿನ್ ಎನ್ನುವ ಪ್ರೋಟೀನಿನ ಗೋಡೆಯಿದೆ. ವಯಸ್ಸಾದ ಕೆಂಪು ರಕ್ತಕಣಗಳು ಒಡೆದಾಗ ಹೀಮ್ ಮತ್ತು ಗ್ಲೋಬಿನ್ ಬೇರೆ-ಬೇರೆ ಆಗುತ್ತವೆ. ಹೀಮ್ ಮೊದಲು ಬೇರಾವುದೇ
ಅಂಗವನ್ನು ಸೋಕುವ ಮುನ್ನವೇ ನಿಷ್ಕ್ರಿಯವಾಗಬೇಕು. ಈ ಕೆಲಸ ನಡೆಯುವುದು ಯಕೃತ್ತಿನಲ್ಲಿ. ಇದಕ್ಕಾಗಿ
ಯಕೃತ್ತು ಹ್ಯಾಪ್ಟೋಗ್ಲೋಬಿನ್ ಎಂಬ ವಿಶೇಷ ರಾಸಾಯನಿಕವನ್ನು ಉತ್ಪಾದಿಸಿ, ಹೀಮ್ ಅನ್ನು
ಜೋಪಾನವಾಗಿ ಬಂಧಿಸಿ, ಅದನ್ನು ಬಿಲಿವರೆಡಿನ್ ಎಂಬ ಹಸಿರು ರಾಸಾಯನಿಕವನ್ನಾಗಿ ಬದಲಾಯಿಸಿ, ಶರೀರದಿಂದ
ಹೊರಹಾಕುತ್ತದೆ. ಈ ಕಾರಣಕ್ಕಾಗಿ ಗುಲ್ಮದಿಂದ ಹೊರಹೋಗುವ ಹೀಮ್-ಯುಕ್ತ ರಕ್ತ ಬೇರೆಲ್ಲೂ ಹೋಗದೇ
ಸೀದಾ ಯಕೃತ್ತನ್ನು ಸೇರುತ್ತದೆ. ದಿನವೊಂದಕ್ಕೆ ಸುಮಾರು 20 ಸಾವಿರ ಕೋಟಿ ಕೆಂಪು ರಕ್ತಕಣಗಳು
ಗುಲ್ಮದಲ್ಲಿ ನಿರ್ನಾಮವಾಗುತ್ತವೆ.
ಜೀವವಿಕಾಸ
ಪ್ರಕ್ರಿಯೆಯಲ್ಲಿ ಗುಲ್ಮ ಬಹಳ ಪುರಾತನ ಅಂಗ. ಆದಿಮ ಗುಲ್ಮವನ್ನು ಮೀನಿನಂತಹ ಜೀವಿಗಳ ಮಟ್ಟದಿಂದಲೇ
ಗುರುತಿಸಬಹುದು. ಸರೀಸೃಪಗಳಲ್ಲಿ ಮತ್ತು ಹಕ್ಕಿಗಳಲ್ಲಿ ಇವು ನಿಶ್ಚಿತ ರೂಪ ಪಡೆಯುತ್ತವೆ.
ಬೆನ್ನುಮೂಳೆ ಇರುವ ಜೀವಿಗಳಲ್ಲಿ ಇವು ಸರಿಸುಮಾರು ಮಾನವನಲ್ಲಿ ಇರುವ ರೀತಿಯಲ್ಲೇ ಕಾಣುತ್ತವೆ.
ಗುಲ್ಮಕ್ಕೆ ತನ್ನದೇ ಆದ ನರಗಳ ವ್ಯವಸ್ಥೆ ಇದೆ. ಗುಲ್ಮದ ನರಗಳ ನಿಯಂತ್ರಣ ಮಿದುಳಿನ
ಅಡಿಭಾಗದಲ್ಲಿರುವ ಪ್ರಾಥಮಿಕ ಕೇಂದ್ರದಲ್ಲಿ ಇರುತ್ತದೆ. ಶರೀರದ ಅತ್ಯಂತ ಪ್ರಮುಖ ಎನಿಸುವ
ಅಗತ್ಯಗಳಿಗೆ ಈ ಸ್ಥಾನವೇ ನಿಯಂತ್ರಕ ಬಿಂದು. ಹೀಗಾಗಿ, ನಿಸರ್ಗ
ಗುಲ್ಮಕ್ಕೆ ವಿಶಿಷ್ಟ ಸ್ಥಾನ ನೀಡಿದೆ. ಇಂತಹ ಮಹತ್ವ ಗುಲ್ಮದ ಆಜೂಬಾಜೂ ಇರುವ ಬೇರಾವ ಅಂಗಕ್ಕೂ
ಇಲ್ಲ. ಅಂತೆಯೇ, ಭ್ರೂಣದಲ್ಲೂ ಗುಲ್ಮದ ಉಗಮ ಆಗುವುದು ಕೂಡ ವಿಶಿಷ್ಟವಾಗಿಯೇ. ಅದರ ಸುತ್ತಮುತ್ತಲಿನ ಜಠರ
ಮೊದಲಾದ ಬೇರೆಲ್ಲ ಅಂಗಗಳೂ ಒಂದು ಪ್ರಭೇದದ ಅಂಗಾಂಶಗಳಿಂದ ಸೃಷ್ಟಿಯಾದರೆ, ಗುಲ್ಮ ಮಾತ್ರ ಅವುಗಳಿಗೆ ಸಂಬಂಧ ಇಲ್ಲದ ಬೇರೆಯೇ ಕೋಶಗಳ ಮೂಲದಿಂದ ಹುಟ್ಟುತ್ತದೆ. ಹೀಗೆ
“ನಿಮ್ಮೊಡನಿದ್ದೂ ನಿಮ್ಮಂತಲ್ಲದ” ರೀತಿಯ ಅಂಗವಾಗಿ ಗುಲ್ಮ ಪ್ರತ್ಯೇಕತೆ ಕಾಯ್ದುಕೊಂಡಿದೆ.
ಗುಲ್ಮದ ಆಂತರ್ಯದಲ್ಲಿ 2 ಮುಖ್ಯ ಭಾಗಗಳಿವೆ.
ಮೊದಲನೆಯ ಕೆಂಪು ಭಾಗ ಕೆಂಪು ರಕ್ತಕಣಗಳನ್ನು ನಾಶ ಮಾಡುತ್ತದೆ. ಈ ಕೆಲಸಕ್ಕೆ 3 ಬಗೆಯ ಕೋಶಗಳ
ಸಮುಚ್ಚಯಗಳಿವೆ. ಎರಡನೆಯ ಬಿಳಿಯ ಭಾಗದಲ್ಲಿ ಶರೀರದ ರಕ್ಷಕ ವ್ಯವಸ್ಥೆಯ ಕೆಲಸವನ್ನು ನಿರ್ವಹಿಸುವ 4
ಬಗೆಯ ಕೋಶಗಳಿವೆ. ತನ್ನೊಳಗೆ ಪ್ರವೇಶಿಸಿದ ಸೋಂಕುಕಾರಕ ಕೋಶಗಳನ್ನು ಗುಲ್ಮ ನಿರ್ಮೂಲನ
ಮಾಡುತ್ತದೆ. ಜೊತೆಗೆ, ಶರೀರದ ಇತರ ಅಂಗಗಳಲ್ಲಿ ಆಗಿರುವ ಗಾಯಗಳನ್ನು ಗುಣಪಡಿಸುವ ಕೋಶಗಳನ್ನೂ ಸಂಗ್ರಹಿಸಿ,
ಅಗತ್ಯ ಬಂದ ವೇಳೆ ಆಯಾ ಅಂಗಕ್ಕೆ ರವಾನೆ ಮಾಡುತ್ತದೆ. ಭ್ರೂಣದ ಹಂತದಲ್ಲಿ ಗುಲ್ಮ
ಉತ್ಪತ್ತಿಯಾಗದಿದ್ದರೆ, ಅಥವಾ ಶಸ್ತ್ರಚಿಕಿತ್ಸೆಯ ವೇಳೆ ಗುಲ್ಮವನ್ನು
ತೆಗೆದುಹಾಕಬೇಕಾದಲ್ಲಿ, ಅಂತಹ ವ್ಯಕ್ತಿಗೆ ಅನೇಕ ವಿಧದ ಸೋಂಕುಗಳು
ಆವರಿಸುವ ಸಾಧ್ಯತೆ ಇರುತ್ತವೆ. ಅಂತಹವರು ಅದಕ್ಕೆ ಸೂಕ್ತವಾದ ಲಸಿಕೆಗಳನ್ನು ಪಡೆದು ತಮ್ಮನ್ನು
ಕಾಪಾಡಿಕೊಳ್ಳಬೇಕು.
ಭ್ರೂಣದಲ್ಲಿ ಅಸ್ಥಿಮಜ್ಜೆ ಉತ್ಪತ್ತಿ
ಆಗುವುದಕ್ಕಿಂತ ಮುಂಚಿನ ಹಂತದಲ್ಲಿ ಐದನೆಯ ತಿಂಗಳಿನವರೆಗೆ ಗುಲ್ಮ ರಕ್ತಕಣಗಳ ಉತ್ಪಾದನೆಯನ್ನೂ
ಮಾಡುತ್ತದೆ. ಒಂದು ವೇಳೆ ಭ್ರೂಣದ ಅಸ್ಥಿಮಜ್ಜೆಯ ಉತ್ಪತ್ತಿಯಲ್ಲಿ ಏರುಪೇರಾದರೆ ಗುಲ್ಮ ಈ
ಕೆಲಸವನ್ನು ಜನನದ ನಂತವೂ ಮುಂದುವರೆಸಿಕೊಂಡು ಹೋಗುತ್ತದೆ. ರಕ್ತಕಣಗಳ ಉಗ್ರಾಣದಂತೆಯೂ ಗುಲ್ಮ
ಕೆಲಸ ಮಾಡುತ್ತದೆ. ಅಪಘಾತ ಮೊದಲಾದ ಕಾರಣಕ್ಕೆ ಶರೀರ ರಕ್ತ ಕಳೆದುಕೊಂಡಾಗ, ಸುಮಾರು 250 ಮಿಲಿಲೀಟರ್
ಪ್ರಮಾಣದ ರಕ್ತವನ್ನು ಗುಲ್ಮ ಮರುಪೂರಣ ಮಾಡಬಲ್ಲದು. ಮಲೇರಿಯಾ, ರಕ್ತದ
ಕ್ಯಾನ್ಸರ್, ರಕ್ತ ಉತ್ಪಾದನೆಯ ಕಾಯಿಲೆಗಳಲ್ಲಿ ಗುಲ್ಮ ತನ್ನ ಸಹಜ
ಗಾತ್ರಕ್ಕಿಂತಲೂ ಸುಮಾರು 15 ಪಟ್ಟು ದೊಡ್ಡದಾಗಬಹುದು. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಗುಲ್ಮವನ್ನು
ಹೊರಗಿನಿಂದ ಸ್ಪರ್ಶಿಸಲಾಗದು; ಅದು ಸ್ಪರ್ಶಕ್ಕೆ ಸಿಗಲು ಕನಿಷ್ಠ 2
ಪಟ್ಟು ಗಾತ್ರ ದೊಡ್ಡದಾಗಬೇಕು.
ಗ್ರೀಕ್ ಮೂಲದಲ್ಲಿ ಗುಲ್ಮದ ಹೆಸರು ಹೃದಯದ
ಹೆಸರಿನ ಸಂವಾದಿ. ದುಃಖದ ಭಾವಗಳನ್ನು ಸೃಜಿಸುವ ಅಂಗ ಎನ್ನುವ ಪ್ರಾಚೀನ ನಂಬಿಕೆಯಿಂದ ಆ ಹೆಸರು
ಬಂದಿರಬಹುದು. ವಿಡಂಬನೆ ಎಂದರೆ, ನಮ್ಮ ನೈಜ ಸಂತಸವಾದ ಆರೋಗ್ಯ ರಕ್ಷಣೆಯಲ್ಲಿ ಗುಲ್ಮದ ಪಾತ್ರ ದೊಡ್ಡದು; ಅದು ಇಲ್ಲವಾದರೆ ದುಃಖ.
ಗುಲ್ಮದ ಗಣಿತ ವಿಸ್ಮಯಕಾರಿ.
---------------------------
ಜನವರಿ-ಫೆಬ್ರವರಿ 2025 ರ ಕುತೂಹಲಿ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾದ
ಲೇಖನ. ಕುತೂಹಲಿಯ ಇಡೀ ಸಂಚಿಕೆಯನ್ನು ಓದಲು ಕೊಂಡಿ: https://www.flipbookpdf.net/web/site/c2a22bb7de00108256ca5506bcbfc67b50b3d1c4FBP32051436.pdf.html?fbclid=IwY2xjawISXhpleHRuA2FlbQIxMQABHYU5xkHYGbups7LQhJk5zlHZN1MHOv5s95CPBj3TZMtJoLHWVzO7q8_sEQ_aem_stZZ6zynTEPQPm3KtF34fw
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ