ಹೃದ್ರೋಗ ತಪಾಸಣೆ ಮತ್ತು ಚಿಕಿತ್ಸೆ - ಭಾಗ 1 – ಹೃದಯಾಘಾತ ಹೇಗೆ ಆಗುತ್ತದೆ?
ಡಾ. ಶ್ರೀಕಾಂತ್ ಕೆ.ವಿ.
ಹೃದ್ರೋಗ ಮತ್ತು ಕೃದಯ ಕಸಿ ತಜ್ಞರು
ನಮ್ಮ ದೇಹದಲ್ಲಿ ಹಲವಾರು ಅಂಗಗಳಿವೆ. ಪ್ರತಿಯೊಂದು ಅಂಗವೂ ತನ್ನ ಕೆಲಸವನ್ನು ಇತರ
ಅಂಗಗಳ ಕೆಲಸಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಆರೋಗ್ಯವಂತ ಶರೀರದ ಪ್ರತಿಯೊಂದು
ಅಂಗವ್ಯವಸ್ಥೆಯೂ, ಅವುಗಳ ಜೀವಕೋಶಗಳೂ ಸಮರ್ಪಕವಾಗಿ
ಕಾರ್ಯನಿರ್ವಹಿಸುತ್ತಿರಬೇಕು. ಇದಕ್ಕಾಗಿ ಜೀವಕೋಶಗಳಿಗೆ ನಿರಂತರವಾಗಿ ಆಕ್ಸಿಜನ್ ಮತ್ತು ಪೋಷಕಾಂಶಗಳ
ಪೂರೈಕೆ ಆಗುತ್ತಲೇ ಇರಬೇಕು. ಜೀವಕೋಶಗಳ ಚಯಾಪಚಯಗಳ ಕಾಲದಲ್ಲಿ ಉತ್ಪತ್ತಿ ಆಗುವ ಕಾರ್ಬನ್
ಡೈಆಕ್ಸೈಡ್’ನಂತಹ ಮಾಲಿನ್ಯಗಳ ತೆರವು ಸಾಧ್ಯವಾಗಬೇಕು. ಈ
ಪ್ರಕ್ರಿಯೆಗಳನ್ನು ನಿರ್ವಹಿಸುವ ರಕ್ತಪರಿಚಲನಾ ವ್ಯವಸ್ಥೆಯ ಕೇಂದ್ರಬಿಂದುವಾಗಿರುವ ಹೃದಯ, ಸದಾ ರಕ್ತವನ್ನು ಪಂಪ್ ಮಾಡುತ್ತಾ, ರಕ್ತನಾಳಗಳ ಬೃಹತ್ ಜಾಲದ
ಮೂಲಕ ಎಲ್ಲ ಜೀವಕೋಶಗಳಿಗೂ ರಕ್ತವನ್ನು ಪೂರೈಸುತ್ತದೆ.
ಹೃದಯದೊಳಗೆ ರಕ್ತದ ಮಡುವಿದ್ದರೂ,
ಅದನ್ನು ತನ್ನ ಸ್ವಂತ ಕೆಲಸಕ್ಕೆ ಬಳಸಿಕೊಳ್ಳಲಾಗದು. ಹೀಗಾಗಿ, ಸ್ವಂತ ಜೀವಕೋಶಗಳ
ಕಾರ್ಯನಿರ್ವಹಣೆಗಾಗಿ ಹೃದಯ ಕರೊನರಿ ರಕ್ತನಾಳಗಳೆನ್ನುವ ಮೂರು ಪ್ರತ್ಯೇಕ ರಕ್ತನಾಳಗಳನ್ನು
ಹೊಂದಿದೆ. ಕ್ಷಣದ ಬಿಡುವೂ ಇಲ್ಲದಂತೆ ಕೆಲಸ ಮಾಡುವ ಹೃದಯಕ್ಕೆ, ನಿಮಿಷದ
ಗಡುವೂ ಇಲ್ಲದಂತೆ ನಿರಂತರವಾಗಿ ರಕ್ತದ ಪೂರೈಕೆ ಆಗುತ್ತಲೇ ಇರಬೇಕು. ಕರೊನರಿ ರಕ್ತನಾಳಗಳ ರಕ್ತದ
ಪ್ರವಹನಕ್ಕೆ ಅಡೆತಡೆಗಳು ಉಂಟಾದರೆ ಹೃದಯ ಕೆಲಸ
ಮಾಡಲಾಗದು. ಆಗ ಇಡೀ ಶರೀರದ ವ್ಯವಸ್ಥೆ ಕುಸಿದು, ಜೀವಕ್ಕೆ
ಮಾರಕವಾಗಬಹುದು.
ಆರೋಗ್ಯವಂತ ವ್ಯಕ್ತಿಯ ನೂರು ಮಿಲಿಲೀಟರ್ ಶುದ್ಧ ರಕ್ತದಲ್ಲಿ, ಸುಮಾರು 20 ಮಿಲಿಲೀಟರ್ ಆಕ್ಸಿಜನ್ ಇರುತ್ತದೆ. ಬಹುತೇಕ ಅಂಗಾಂಗಗಳು
ಇದರಲ್ಲಿ 5 ಮಿಲಿಲೀಟರ್ ಆಕ್ಸಿಜನನ್ನು ಮಾತ್ರ ಹೀರಿ, 15 ಮಿಲಿಲೀಟರ್ ಆಕ್ಸಿಜನ್
ಉಳಿಸಿರುತ್ತವೆ. ಅಂಗಗಳಿಗೆ ಹೆಚ್ಚಿನ ಆಕ್ಸಿಜನ್ ಅವಶ್ಯಕತೆ ಇರುವಾಗ, 5 ಮಿಲಿಲೀಟರ್’ಗಿಂತ ಹೆಚ್ಚು ಪ್ರಮಾಣದ ಆಕ್ಸಿಜನ್ ಅನ್ನು
ಸೆಳೆದುಕೊಳ್ಳಬೇಕು. ಜೊತೆಗೆ, ರಕ್ತದ ಹರಿವಿನ ಪ್ರಮಾಣ ಹೆಚ್ಚಿಸಿಕೊಳ್ಳುತ್ತಾ, ಬೇಕಿರುವಷ್ಟು ಆಕ್ಸಿಜನ್ ಪಡೆದುಕೊಳ್ಳಬೇಕು. ಉಳಿದ ಅಂಗಗಳಿಗೆ ಹೋಲಿಸಿದರೆ, ಹೃದಯ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಹೀರುತ್ತದೆ. ಸಾಮಾನ್ಯ ಕೆಲಸದ ವೇಳೆ ಹೃದಯವು 100
ಮಿಲಿಲೀಟರ್ ರಕ್ತದಿಂದ 15 ಮಿಲಿಲೀಟರ್ ಆಕ್ಸಿಜನ್
ಸೆಳೆಯುತ್ತದೆ. ಹೀಗಾಗಿ, ಹೃದಯಕ್ಕೆ ಆಕ್ಸಿಜನ್ ಅಗತ್ಯ ಅಧಿಕವಾದಾಗ, ರಕ್ತನಾಳಗಳು ಹಿಗ್ಗಿ, ರಕ್ತದ ಹರಿವನ್ನು ಹೆಚ್ಚಿಸಿಕೊಳ್ಳುವ
ಮೂಲಕ ಬೇಡಿಕೆಯನ್ನು ಪೂರೈಸಿಕೊಳ್ಳುತ್ತದೆ. ಅತಿಶ್ರಮದ ಕೆಲಸ ಮಾಡುವಾಗ ಆರೋಗ್ಯವಂತ ವ್ಯಕ್ತಿಯ
ಹೃದಯವು ರಕ್ತ ಹರಿಯುವ ಪ್ರಮಾಣವನ್ನು ಐದರಿಂದ ಆರು ಪಟ್ಟು ಹೆಚ್ಚಾಗಿಸಿ, ಆಕ್ಸಿಜನ್ನಿನ ಬೇಡಿಕೆಯನ್ನು ಈಡೇರಿಸಿಕೊಳ್ಳುತ್ತದೆ.
ದೈಹಿಕ ಚಟುವಟಿಕೆ, ವ್ಯಾಯಾಮ, ಮಾನಸಿಕ ಒತ್ತಡದ, ಸೋಂಕು, ಹಾಗೂ
ಅನಾರೋಗ್ಯದ ಸಮಯಗಳಲ್ಲಿ ನಮ್ಮ ರಕ್ತದ ಪರಿಚಲನೆಯು ಹೆಚ್ಚಾಗಿ, ಹೃದಯವು
ಹೆಚ್ಚಿನ ಕಾರ್ಯನಿರ್ವಹಿಸಬೇಕಾಗುತ್ತದೆ. ಆರೋಗ್ಯವಂತ ಹೃದಯ ಇಂಥಹ ಪರಿಸ್ಥಿತಿಯನ್ನು
ಸುಸೂತ್ರವಾಗಿ ನಿಭಾಯಿಸಬಲ್ಲದು. ವಿಶ್ರಾಂತಿ ಪಡೆದ ಕೂಡಲೇ ಪರಿಸ್ಥಿತಿ ಸಾಮಾನ್ಯ ಹಂತಕ್ಕೆ
ಬರುತ್ತದೆ. ರಕ್ತದಲ್ಲಿ ಹಿಮೊಗ್ಲೊಬಿನ್ ಅಂಶ ಕಡಿಮೆಯಾದಾಗ ಅಥವಾ ಶ್ವಾಸಕೋಶಗಳ ಸಮಸ್ಯೆ ಇದ್ದಾಗ ಆಕ್ಸಿಜನ್
ಕೊಂಡೊಯ್ಯುವ ಶಕ್ತಿ ಇಳಿಮುಖವಾಗುತ್ತದೆ. ಅಧಿಕ ರಕ್ತದೊತ್ತಡ, ಹೃದಯ
ಬಡಿತದ ಅಸಹಜ ಏರುವಿಕೆ, ಹೃದಯದ ಕವಾಟಗಳ ಕಾಯಿಲೆ, ಹೃದಯದ ಸ್ನಾಯುಗಳ ಹಿಗ್ಗುವಿಕೆಯ ಸಂದರ್ಭಗಳಲ್ಲಿ ಆಕ್ಸಿಜನ್ನಿನ ಅವಶ್ಯಕತೆಯೂ ಹೆಚ್ಚಾಗುತ್ತದೆ.
ಹೃದಯ ರಕ್ತನಾಳಗಳ ಒಳಭಾಗದಲ್ಲಿ ಕೊಬ್ಬಿನ ಅಂಶ ಸೇರಿದಾಗ ಆಂತರಿಕ ವ್ಯಾಸ ಕಿರಿದಾಗಿ, ರಕ್ತದ ಒಳಹರಿವು ಕಡಿಮೆಯಾಗುತ್ತದೆ. ವಿಶ್ರಾಂತಿಯ
ಸ್ಥಿತಿಯಲ್ಲಿ ಅಗತ್ಯ ಆಕ್ಸಿಜನ್ ಪೂರೈಕೆ ಆಗುತ್ತದಾದರೂ, ದೈಹಿಕ/ಮಾನಸಿಕ
ಶ್ರಮದ ವೇಳೆ ರಕ್ತನಾಳಗಳ ವ್ಯಾಸ ಹಿಗ್ಗಲಾರದೆ, ಹೃದಯದ ರಕ್ತ ಪೂರೈಕೆ
ಕುಂಠಿತಗೊಳ್ಳುತ್ತದೆ. ಅಥೆರೊಸ್ಕ್ಲೀರೊಸಿಸ್
ಎನ್ನಲಾಗುವ ಇದು ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ಹೃದ್ರೋಗ. ಹೀಗೆ, ಆಕ್ಸಿಜನ್ನಿನ
ಬೇಡಿಕೆ-ಪೂರೈಕೆಗಳ ಅಸಮತೋಲನದಿಂದ ಹೃದಯಾಘಾತ ಉಂಟಾಗುತ್ತದೆ; ಎದೆ ನೋವು,
ಉಸಿರಾಟದ ತೊಂದರೆ, ಗಂಟಲು ಉರಿ, ಬೆನ್ನಿನ ನೋವು, ಆತಂಕ ಕಾಣಿಸಿಕೊಳ್ಳುತ್ತದೆ.
ರಕ್ತನಾಳಗಳ ಸಮಸ್ಯೆಯಿಂದ ಹೃದಯಕ್ಕೆ ಉಂಟಾಗುವ ತಾತ್ಕಾಲಿಕ ಆಕ್ಸಿಜನ್ ಕೊರತೆಯು ವಿಶ್ರಾಂತಿ
ತೆಗೆದುಕೊಂಡ ಕೂಡಲೇ ನಿವಾರಣೆಯಾಗಬೇಕು; ಇಲ್ಲವಾದರೆ ರೋಗವು
ತೀವ್ರವಾಗಿದೆ ಎಂದರ್ಥ. ಅಗತ್ಯ ಪ್ರಮಾಣದ ರಕ್ತಪೂರೈಕೆ ಆಗದೆ ಹೃದಯದ ಜೀವಕೋಶಗಳು ಸಾವನ್ನಪ್ಪಿದರೆ,
ಟ್ರೋಪೋನಿನ್ ಎಂಬ ಪ್ರೋಟಿನ್ ಬಿಡುಗಡೆಯಾಗುತ್ತದೆ. ಹೃದಯಾಘಾತದ ವೇಳೆ
ಏರುಪ್ರಮಾಣದ ಟ್ರೋಪೋನಿನ್ ರಕ್ತದಲ್ಲಿ ಕಂಡುಬರುತ್ತದೆ. ಅಂತಹ ರೋಗಿಗೆ ತೀವ್ರ-ನಿಗಾ ಘಟಕಗಳಲ್ಲಿ ತುರ್ತುಚಿಕಿತ್ಸೆ
ನೀಡಬೇಕು.
ಕರೊನರಿ ಅಥಿರೋಸ್ಕ್ಲಿರೋಸಿಸ್’ಗೆ
ಪ್ರಮುಖ ಕಾರಣಗಳು ಅತಿಯಾದ ರಕ್ತದೊತ್ತಡ, ಮಧುಮೇಹ, ಅಧಿಕ ಕೊಬ್ಬಿನ ಪ್ರಮಾಣ, ತಂಬಾಕು ಸೇವನೆ, ಅನಾರೋಗ್ಯಕರ ಆಹಾರ, ಮಾನಸಿಕ ಒತ್ತಡ, ಬೊಜ್ಜು, ಸೋಮಾರಿತನದ ಜೀವನಶೈಲಿ, ಆನುವಂಶೀಯತೆ.
ಇಂತಹವರಲ್ಲಿ ಹೆಚ್ಚಿನ ಶ್ರಮಪಟ್ಟು ಕೆಲಸ ಮಾಡಿದಾಗ ಅಥವಾ ಮಾನಸಿಕ ಒತ್ತಡವಾದಾಗ
ಎದೆನೋವಾಗುತ್ತದೆ. ಹೃದಯದ ಬಡಿತದಲ್ಲಿ ಏರುಪೇರು, ಅಸಹಜ ಎದೆಬಡಿತ,
ಪ್ರಜ್ಞೆ ಕಳೆದುಕೊಳ್ಳುವುದು, ರಕ್ತಚಲನೆ ನಿಂತು, ಸಾವನ್ನಪ್ಪಬಹುದು. ರಕ್ತದ ಕೊರತೆಯ ಕಾರಣ ಹೃದಯದ ಸ್ನಾಯುಗಳು ಶಕ್ತಿಗುಂದಿ, ಹೃದಯವೈಫಲ್ಯವಾಗಬಹುದು.
(ಕರೋನರಿ ಅಥಿರೋಸ್ಕ್ಲಿರೋಸಿಸ್ ಗುರುತಿಸುವುದು ಮತ್ತು ಚಿಕಿತ್ಸಾ ವಿಧಾನಗಳು
ಮುಂದಿನ ಸಂಚಿಕೆಯಲ್ಲಿ)
-----------------------
18/3/2025 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. https://www.prajavani.net/health/heart-and-its-problems-health-article-3208983
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ