ಕ್ಯಾನ್ಸರ್ – ಇರಲಿ ಅರಿವು; ಬೇಡ ಭೀತಿ
ಡಾ. ಕಿರಣ್ ವಿ.ಎಸ್.
ವೈದ್ಯರು
ಮನುಷ್ಯರಿಗೆ ಬರಬಹುದಾದ ಕಾಯಿಲೆಗಳ
ಪಟ್ಟಿಯಲ್ಲಿ ಎಲ್ಲರನ್ನೂ ಹೆದರಿಸುವ ಹೆಸರು – ಕ್ಯಾನ್ಸರ್. ಬಹಳಷ್ಟು ಜನರಿಗೆ ಕ್ಯಾನ್ಸರ್
ಎನ್ನುವುದು ಹೆಸರಿನ ತಿಳಿವು; ಅದರ
ವಿವರಗಳನ್ನು ಅರಿತವರು ಕಡಿಮೆ. ಏನಿದು ಕ್ಯಾನ್ಸರ್?
ಏತಕ್ಕಾಗಿ ಅದರ ಬಗ್ಗೆ ಎಲ್ಲರಿಗೂ ಭೀತಿ? ಕ್ಯಾನ್ಸರ್
ಎನ್ನುವುದು ಮರಣದ ಸೂಚಕವೇ?
ನಮ್ಮ ದೇಹ ಕೋಟ್ಯಂತರ ಜೀವಕೋಶಗಳ ರಾಶಿ.
ಹಲವಾರು ಅಂಗಗಳ ರೂಪದಲ್ಲಿ ಈ ಜೀವಕೋಶಗಳು ಒತ್ತೊಟ್ಟಾಗಿರುತ್ತವೆ. ನರಕೋಶಗಳಿಂದ ಆದ ಮಿದುಳು, ವಿಶಿಷ್ಟ ಸ್ನಾಯುಗಳಿಂದ ಆದ
ಹೃದಯ, ಪೋಷಕಾಂಶಗಳನ್ನು ಸೆಳೆದುಕೊಳ್ಳುವಂತೆ ನಿರ್ಮಾಣವಾಗಿರುವ ಕರುಳು,
ನಾಳಗಳ ಮೂಲಕ ಎಲ್ಲೆಡೆ ಸಂಚಾರವಾಗುವ ರಕ್ತಕೋಶಗಳು, ದೇಹದ
ಬಹುತೇಕ ರಾಸಾಯನಿಕ ಪ್ರಕ್ರಿಯೆಗಳನ್ನು ನಿಭಾಯಿಸುವ ಯಕೃತ್ – ಹೀಗೆ ಹಲವಾರು ಅಂಗಗಳು ನಮ್ಮ
ದೇಹದಲ್ಲಿವೆ. ಪ್ರತಿಯೊಂದು ಅಂಗದ ಜೀವಕೋಶವೂ ಆಯಾ ಅಂಗದ ಕಾರ್ಯ ನಿರ್ವಹಣೆಗೆ ಪೂರಕವಾಗಿ ಕೆಲಸ
ಮಾಡುತ್ತದೆ. ಪ್ರತಿಯೊಂದು ಜೀವಕೋಶವೂ ತನ್ನ ಅಂಗದ ಶಿಸ್ತಿನ ಅಂಕೆಯಲ್ಲಿಯೇ ಇರುತ್ತದೆ; ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತದೆ; ಮಿದುಳಿನ
ಮೂಲಕ ಬಂದ ಸಂಕೇತಗಳನ್ನು ಗ್ರಹಿಸಿ, ಅದಕ್ಕೆ ಸರಿಯಾಗಿ ವರ್ತಿಸುತ್ತದೆ.
ಅಂಗಗಳು ದೇಹವೆನ್ನುವ ಸಂಕೀರ್ಣ ಯಂತ್ರದ ಘಟಕಗಳು. ಎಲ್ಲ ಅಂಗಗಳೂ ಪರಸ್ಪರ ಹೊಂದಿಕೊಂಡು
ಸಮಂಜಸವಾಗಿ ಕೆಲಸ ಮಾಡುತ್ತಿದ್ದರೆ ಆರೋಗ್ಯ; ವ್ಯವಸ್ಥೆ ಕೆಟ್ಟರೆ ಅನಾರೋಗ್ಯ.
ಯಂತ್ರವೊಂದು ಸರಾಗವಾಗಿ ಕೆಲಸ
ಮಾಡಬೇಕೆಂದರೆ ಒಳ್ಳೆಯ ನಿರ್ವಹಣೆ ಬೇಕು. ಕೆಟ್ಟು ಹೋದ ಬಿಡಿಭಾಗಗಳನ್ನು ಬದಲಾಯಿಸಬೇಕು; ಅಡ್ಡಿಗಳನ್ನು ನಿವಾರಿಸಬೇಕು;
ಜೀರ್ಣಾವಸ್ಥೆಗೆ ಬಂದಿರುವ ಭಾಗಗಳನ್ನು ರಿಪೇರಿ ಮಾಡಬೇಕು. ಅಂತೆಯೇ ದೇಹ
ಯಂತ್ರವೂ. ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು, ಒಳ್ಳೆಯ
ವಾತಾವರಣವನ್ನು ಕಲ್ಪಿಸಿದರೆ ರಿಪೇರಿ ಕೆಲಸವನ್ನು ನಮ್ಮ ದೇಹ ತಂತಾನೇ ಮಾಡಿಕೊಳ್ಳುತ್ತದೆ.
ತೊಂದರೆಯಾಗುವುದು ರಿಪೇರಿ ಕೆಲಸ ಸರಿಯಾಗಿ ಆಗದಿದ್ದಾಗ ಇಲ್ಲವೇ ರಿಪೇರಿಯ ಸಾಮರ್ಥ್ಯವನ್ನು ಮೀರಿದ
ಸಮಸ್ಯೆ ಬಂದು ಒದಗಿದಾಗ.
ಒಂದು ಪರಿಸ್ಥಿತಿ ಊಹಿಸಿಕೊಳ್ಳೋಣ.
ಯಾವುದೋ ಒಂದು ಅಂಗದಲ್ಲಿ ಇರುವ ಜೀವಕೋಶಗಳ ಪೈಕಿ ಕೆಲವು ಅಸಹಜವಾಗಿ, ಅನಿಯಂತ್ರಿತವಾಗಿ ಬೆಳೆಯಲು
ಆರಂಭಿಸಿದರೆ? ಮಾಡಬೇಕಾದ ಕೆಲಸ ಮಾಡದಿರುವುದು; ಪೋಷಕಾಂಶಗಳನ್ನು ಯದ್ವಾತದ್ವಾ ಕಬಳಿಸುವುದು; ತನ್ನ ನಿಶ್ಚಿತ
ಗಾತ್ರಕ್ಕಿಂತ ಕೆಲವು ಪಟ್ಟು ಹಿಗ್ಗುವುದು; ಅಕ್ಕಪಕ್ಕದ ಜೀವಕೋಶಗಳ
ಮೇಲೆ ಒತ್ತಡ ಹಾಕುವುದು; ತನ್ನ ಅಶಿಸ್ತನ್ನು ಇತರ ಜೀವಕೋಶಗಳಿಗೂ
ಹರಡುವುದು; ದುಷ್ಟತನವನ್ನು ಅಕ್ಕಪಕ್ಕದ ಅಂಗಗಳಿಗೂ ತಲುಪಿಸಿ, ಅವುಗಳ ಕೆಲಸವನ್ನೂ ಕೆಡಿಸುವುದು. ಈ ರೀತಿಯ ಅಶಿಸ್ತು ಒಂದು ಸಂಘಟನೆಯಲ್ಲೋ, ಒಂದು ಕಾರ್ಖಾನೆಯಲ್ಲೋ ಆದರೆ ಇಡೀ ವ್ಯವಸ್ಥೆಯ ಕೆಲಸ ಹದಗೆಡುತ್ತದೆ. ಅಂತೆಯೇ, ಶರೀರದ ಅಂಗಗಳಲ್ಲಿ ಅಶಿಸ್ತಿನ ಕೋಶಗಳು ಒಂದು ಮಿತಿಗಿಂತಲೂ ಅಧಿಕವಾದರೆ, ಆಯಾ ಅಂಗಕ್ಕೂ ಹಾನಿ; ಇಡೀ ಶರೀರಕ್ಕೂ ಸಮಸ್ಯೆ. ಇಂತಹ ಅಸಹಜ,
ಅಶಿಸ್ತಿನ ಕೋಶಗಳ ಸಮೂಹಕ್ಕೆ ಕ್ಯಾನ್ಸರ್ ಎನ್ನಬಹುದು. ವಿವಿಧ ಅಂಗಗಳನ್ನು
ಕಾಡಬಲ್ಲ 200ಕ್ಕೂ ಹೆಚ್ಚು ಬಗೆಯ ಕ್ಯಾನ್ಸರ್’ಗಳನ್ನು
ಗುರುತಿಸಲಾಗಿದೆ. ಕ್ಯಾನ್ಸರ್ ಎಂದರೆ ಒಂದು ಕಾಯಿಲೆಯಲ್ಲ; ಬಹಳ
ಪ್ರಭೇದಗಳಿರುವ ಅನಾರೋಗ್ಯದ ಸಾಮಾನ್ಯ ಹೆಸರು.
ಕ್ಯಾನ್ಸರ್ ವಿನಾಶಕಾರಿ, ಪ್ರಾಣಘಾತಕ ಎಂದೇನಿಲ್ಲ.
ಅಪಾಯಕಾರಿಯಲ್ಲದ ಕ್ಯಾನ್ಸರ್’ಗಳ ಸಂಖ್ಯೆಯೇ ಹೆಚ್ಚು. ಇವು ಗಂತಿಯ
ಸ್ವರೂಪ ಪಡೆಯುವ ಭಿನ್ನರೂಪದ ಜೀವಕೋಶಗಳು. ಅಕ್ಕಪಕ್ಕದ ಕೋಶಗಳ ಮೇಲೆ ಒತ್ತಡ ಹಾಕುವುದನ್ನು
ಬಿಟ್ಟರೆ ಇವುಗಳಿಂದ ಹೆಚ್ಚು ಅಪಾಯವಿಲ್ಲ. ಸ್ನಾಯುಗಳ ಗಂಟುಗಳು, ಚರ್ಮದ
ಮೇಲೆ ಬೆಳೆಯುವ ಸಣ್ಣಪುಟ್ಟ ಗೆಡ್ಡೆಗಳು ಮೊದಲಾದುವುದು ಈ ಗುಂಪಿಗೆ ಸೇರುತ್ತವೆ. ಇವುಗಳಿಂದ
ಸಮಸ್ಯೆಯಾದರೆ ಶಸ್ತ್ರಚಿಕಿತ್ಸೆಯ ಮೂಲಕ ನಿವಾರಿಸಬಹುದು. ತೆಗೆದು ಹಾಕಿದ ಭಾಗವನ್ನು
ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿ “ಹಾನಿಕಾರಕವಲ್ಲ” ಎಂದು ಖಚಿತಪಡಿಸಬಹುದು.
ಅಪಾಯಕಾರಿ ಕ್ಯಾನ್ಸರ್ ಹಲವಾರಿವೆ. ಶರೀರದ ಒಂದು ಭಾಗದಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿ
ಕ್ಯಾನ್ಸರ್ ತನ್ನ ಅಕ್ಕಪಕ್ಕದ ಕೋಶಗಳನ್ನು ಆಕ್ರಮಿಸಬಹುದು. ರಕ್ತ ಅಥವಾ ಹಾಲ್ರಸದ ಮೂಲಕ ಶರೀರದ ಇತರ ಭಾಗಗಳಿಗೆ ಕ್ಷಿಪ್ರವಾಗಿ
ಹರಡಬಹುದು. ಶರೀರದ ಯಾವುದೇ ಭಾಗಕ್ಕಾದರೂ ಕ್ಯಾನ್ಸರ್ ಬರಬಹುದು. ರಕ್ತ, ಸ್ತನ, ಕರುಳು, ಶ್ವಾಸಕೋಶ,
ವೃಷಣ, ಅಂಡಾಶಯ, ಪ್ರಾಸ್ಟೇಟ್
ಗ್ರಂಥಿ, ಮೂಳೆಗಳ ಕ್ಯಾನ್ಸರ್ ಹೆಚ್ಚಾಗಿ ಕಾಣುತ್ತದೆ. ಹೃದಯದ
ಕ್ಯಾನ್ಸರ್ ಅಪರೂಪ. ಒಂದೇ ವ್ಯಕ್ತಿಯಲ್ಲಿ ಒಂದಕ್ಕಿಂತ ಹೆಚ್ಚಿನ ಅಂಗಗಳ ಕ್ಯಾನ್ಸರ್ ಆಗಬಹುದು. ಆರು
ರೋಗಿಗಳಲ್ಲಿ ಒಬ್ಬರಿಗೆ ಒಂದಕ್ಕಿಂತ ಹೆಚ್ಚಿನ ಅಂಗಗಳ ಕ್ಯಾನ್ಸರ್ ಕಾಣಬಹುದು.
ಅಪಾಯಕಾರಿ ಕ್ಯಾನ್ಸರ್’ನಲ್ಲಿ ಹಲವಾರು ಹಂತಗಳಿವೆ.
ಆರಂಭಿಕ ಹಂತಗಳಲ್ಲಿ ಅವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ. ನಿರ್ದಿಷ್ಟ ಹಂತವನ್ನು ದಾಟಿ
ಹರಡಿರುವ ಕ್ಯಾನ್ಸರ್ ಮಾತ್ರ ಪ್ರಾಣಾಂತಿಕ. ಈ ಹಂತಕ್ಕಿಂತ ಮೊದಲು ಪತ್ತೆಯಾದರೆ ಕ್ಯಾನ್ಸರ್
ಅನ್ನು ಗುಣಪಡಿಸಬಹುದು ಇಲ್ಲವೇ ಉಲ್ಬಣವಾಗದಂತೆ ನಿಯಂತ್ರಣದಲ್ಲಿ ಇಡಬಹುದು. ಹೀಗಾಗಿ ಕ್ಯಾನ್ಸರ್
ಎನ್ನುವುದು ಸಾವು ಎನ್ನುವುದರ ಸಮಾನಾರ್ಥಕ ಪದವಲ್ಲ.
ಕ್ಯಾನ್ಸರ್’ಗೆ ಕಾರಣಗಳು ಹಲವಾರು.
ಕೆಲವೊಂದನ್ನು ತಡೆಗಟ್ಟಬಹುದು; ಕೆಲವು ನಮ್ಮ ನಿಯಂತ್ರಣದಲ್ಲಿ
ಇಲ್ಲದವು. ಕ್ಯಾನ್ಸರ್’ನ ಅತಿ ಮುಖ್ಯ ಕಾರಣ ತಂಬಾಕು ಬಳಕೆ. ಯಾವುದೇ
ರೂಪದಲ್ಲೂ ತಂಬಾಕು ಕ್ಯಾನ್ಸರ್ ತರಬಲ್ಲದು. ಶರೀರದ ಎಂಟು ಅಂಗಗಳ, 12 ಬಗೆಯ
ಕ್ಯಾನ್ಸರ್’ಗಳಿಗೆ ತಂಬಾಕು ಕಾರಣ. ಯಾವುದೇ ವಯಸ್ಸಿನಲ್ಲೂ, ಯಾವುದೇ ರೂಪದಲ್ಲೂ ತಂಬಾಕು ಆರೋಗ್ಯಕ್ಕೆ ಶತ್ರು. ಈಗಾಗಲೇ ಕ್ಯಾನ್ಸರ್ ಬಂದಿರುವ
ರೋಗಿಗಳು ತಂಬಾಕು ಸೇವನೆ ನಿಲ್ಲಿಸಿದರೆ ಕ್ಯಾನ್ಸರ್ ನಿಯಂತ್ರಣ ಸಾಧ್ಯ. ಕೇವಲ ತಂಬಾಕು
ಸೇವನೆಯನ್ನು ನಿಲ್ಲಿಸುವುದರಿಂದ ಜಗತ್ತಿನ ಕ್ಯಾನ್ಸರ್ ಪ್ರಮಾಣ ಮಹತ್ತರವಾಗಿ ಇಳಿಯಬಲ್ಲದು.
ಅಸಹಜ ಆಹಾರ ಪದ್ಧತಿ ಕ್ಯಾನ್ಸರ್’ನ ಮತ್ತೊಂದು ಕಾರಣ. ನೈಸರ್ಗಿಕ
ಆಹಾರವನ್ನು ತ್ಯಜಿಸಿ, ಸಂಸ್ಕರಿತ ಆಹಾರವನ್ನು ಅವಲಂಬಿಸಿರುವ
ಸಮಾಜಗಳಲ್ಲಿ ಕರುಳಿನ ಕ್ಯಾನ್ಸರ್ ಬಹಳ ಹೆಚ್ಚು. ಅಂತೆಯೇ, ಲೈಂಗಿಕ
ಸೋಂಕು, ವಾಯುಮಾಲಿನ್ಯ, ವಿಕಿರಣ, ವೈರಸ್ ಸೋಂಕು, ಅಪಾಯಕಾರಿ ರಾಸಾಯನಿಕಗಳ ಸಂಪರ್ಕ, ಚರ್ಮದ ಮೇಲೆ ಊದಾತೀತ ಕಿರಣಗಳ ಪ್ರಭಾವ ಮೊದಲಾದುವು ಕ್ಯಾನ್ಸರ್ ತಡೆಗಟ್ಟಬಹುದಾದ
ಕಾರಣಗಳು. ದೇಹದ ಜೆನೆಟಿಕ್ ರಚನೆ, ವಂಶವಾಹಿಯಲ್ಲಿ ಬರುವ ಅಪಾಯಕಾರಿ ಜೀನ್’ಗಳು, ಶರೀರದಲ್ಲಿ ಕಿಣ್ವಗಳ ಕೊರತೆ, ಅಂಗಗಳ ಉತ್ಪತ್ತಿಯ ದೋಷಗಳು, ಶರೀರದ ಆಂತರಿಕ ಸಮಸ್ಯೆಗಳು,
ಹಾರ್ಮೋನುಗಳ ಏರುಪೇರು, ಸಾಧಾರಣ ಸಮಸ್ಯೆಗಳಿಗೆ
ತೀವ್ರವಾಗಿ ಪ್ರತಿಸ್ಪಂದಿಸುವ ಶರೀರದ ಗುಣ, ಜೀವಕೋಶದ ಕಾರ್ಯದಲ್ಲಿನ
ದೋಷಗಳು ಮೊದಲಾದುವುಗಳನ್ನು ನಿಯಂತ್ರಿಸಲಾಗದು. ಇಂತಹ ಸಮಸ್ಯೆಗಳು ಉಳ್ಳವರಲ್ಲಿ ಕ್ಯಾನ್ಸರ್
ಆಗುವುದನ್ನು ತಡೆಗಟ್ಟುವುದು ಬಹುತೇಕ ಅಶಕ್ಯ.
ಸರಿಯಾದ ಸಮಯಕ್ಕೆ ಕ್ಯಾನ್ಸರ್
ಪತ್ತೆಮಾಡುವುದು ಚಿಕಿತ್ಸೆಯಷ್ಟೇ ಮುಖ್ಯ. ಹೆಚ್ಚು ಪ್ರಮಾಣದಲ್ಲಿ ಕಂಡುಬರುವ ಕೆಲವು ಕ್ಯಾನ್ಸರ್
ಪತ್ತೆಗೆ ಒಂದು ವಯಸ್ಸಿನ ನಂತರ ಎಲ್ಲರನ್ನೂ ಒಳಪಡಿಸುವ ಸ್ಕ್ರೀನಿಂಗ್ ವಿಧಾನ ಅಗ್ಗ ಮತ್ತು
ಸೂಕ್ತ. ಉದಾಹರಣೆಗೆ, ಸ್ತನ ಕ್ಯಾನ್ಸರ್ ಮತ್ತು ಗರ್ಭದ ಕೊರಳಿನ ಕ್ಯಾನ್ಸರ್. ನಿಗದಿತ ಅವಧಿಗೆ ಒಮ್ಮೆಯಂತೆ
ಸ್ತ್ರೀಯರನ್ನು ಸರಳ ಪರೀಕ್ಷೆಗಳಿಗೆ ಒಳಪಡಿಸಿ ಕ್ಯಾನ್ಸರ್ ಅನ್ನು ಆರಂಭಿಕ ಹಂತಗಳಲ್ಲೇ
ಪತ್ತೆಮಾಡಬಹುದು. ಇದರಿಂದ ಕ್ಯಾನ್ಸರ್ ವ್ಯಾಪಿಸುವ ಮುನ್ನವೇ ಅದಕ್ಕೆ ಚಿಕಿತ್ಸೆ ನೀಡಿ, ಗುಣಪಡಿಸಬಹುದು.
ಈಗಾಗಲೇ ಶರೀರದಲ್ಲಿ ಇರಬಹುದಾದ
ಕ್ಯಾನ್ಸರ್ ಪತ್ತೆಗೆ ಭೌತಿಕ ಪರೀಕ್ಷೆ,
ರಕ್ತದ ಪರೀಕ್ಷೆ, ಸ್ಕ್ಯಾನಿಂಗ್, ಗಂತಿಯ ಸಣ್ಣ ಭಾಗವನ್ನು ಸೂಕ್ಷ್ಮದರ್ಶಕದ ಸಹಾಯದಿಂದ ಕ್ಯಾನ್ಸರ್ ಕೋಶಗಳನ್ನು ಪತ್ತೆ
ಮಾಡುವ ಬಯಾಪ್ಸಿ, ನ್ಯೂಕ್ಲಿಯರ್ ಇಮೇಜ್, ಶಸ್ತ್ರಚಿಕಿತ್ಸೆ,
ವರ್ಣತಂತು ತಳಿಗುಣಗಳ ಜೆನೆಟಿಕ್ ಪರೀಕ್ಷೆ, ಅಂಗಾಶದ
ಕೋಶಗಳ ರಾಸಾಯನಿಕ ಪರೀಕ್ಷೆ ಮೊದಲಾದುವುಗಳನ್ನು ಬಳಸಬಹುದು. ಕ್ಯಾನ್ಸರ್ ಪತ್ತೆಗೆ ಮಾತ್ರವಲ್ಲದೆ,
ಕ್ಯಾನ್ಸರ್ ಯಾವ ಹಂತದಲ್ಲಿದೆ; ಚಿಕಿತ್ಸೆಯ ಪರಿಣಾಮಗಳೆಷ್ಟು
ಎನ್ನುವ ನಿರ್ಧಾರ ಕೂಡ ಸಾಧ್ಯ.
ವೈವಿಧ್ಯಮಯ ಕ್ಯಾನ್ಸರ್’ಗಳಿಗೆ ಒಂದು ಸಾಮಾನ್ಯ ಲಸಿಕೆ
ಸಾಧ್ಯವಿಲ್ಲ. ವೈರಸ್ ಸೋಂಕುಗಳ ಮೂಲಕ ಬರುವ ಕ್ಯಾನ್ಸರ್ ತಡೆಯಲು ಲಸಿಕೆಗೆ ಸಾಧ್ಯ. ಗರ್ಭಕೋಶದ
ಕೊರಳಿನ ಸೋಂಕು, ಯಕೃತ್ತಿನ ಒಂದು ಬಗೆಯ ಸೋಂಕು ತಡೆಯುವ ಲಸಿಕೆಗಳ ಬಳಕೆ
ಸೂಕ್ತ. ಸೋಂಕು ಇಲ್ಲವೆಂದ ಮೇಲೆ ಅವು ಕ್ಯಾನ್ಸರ್’ಗೆ ತಿರುಗುವುದೂ
ಇಲ್ಲ. ಹೀಗೆ ಕ್ಯಾನ್ಸರ್ ಲಸಿಕೆಗಳದ್ದು ಪರೋಕ್ಷ ಪ್ರಭಾವ.
ಕ್ಯಾನ್ಸರ್ ನಿರ್ವಹಣೆಯಲ್ಲಿ ಕೀಮೊಥೆರಪಿ
ಎನ್ನುವುದು ಔಷಧಗಳ ಚಿಕಿತ್ಸೆ. ಗಂತಿಗಳಿಗೆ ನೇರವಾಗಿ ವಿಕಿರಣ ಹಾಯಿಸುವ ಮೂಲಕ ಕ್ಯಾನ್ಸರ್
ಕೋಶಗಳನ್ನು ನಾಶಮಾಡುವುದು ವಿಕಿರಣ ಚಿಕಿತ್ಸೆ. ಇವೆರಡೂ ಸಾಮಾನ್ಯ ಜೀವಕೋಶಗಳಿಗೂ ಕೆಡುಕು
ಮಾಡಬಲ್ಲವು. ಶಸ್ತ್ರಚಿಕಿತ್ಸೆಯ ಮೂಲಕ ಗಂತಿಗಳನ್ನು ತೆಗೆದುಹಾಕಬಹುದು. ಆದರೆ ಕೆಲವು ಕ್ಯಾನ್ಸರ್
ಕೋಶಗಳು ಶಸ್ತ್ರಚಿಕಿತ್ಸೆಯ ಕತ್ತಿಗೆ ದೊರಕದೆ ಹಾಗೆಯೇ ಉಳಿದುಬಿಡಬಹುದು. ಇದರ ಜೊತೆಗೆ
ಅಸ್ಥಿಮಜ್ಜೆಯ ಬದಲಾವಣೆ, ಮೊನೋಕ್ಲೋನಲ್ ಪ್ರತಿಜೀವಕಗಳು ಮೊದಲಾದ ವಿಧಾನಗಳೂ ಚಾಲ್ತಿಯಲ್ಲಿವೆ. ಒಂದಕ್ಕಿಂತ
ಹೆಚ್ಚಿನ ವಿಧಾನಗಳನ್ನು ಅನುಕ್ರಮವಾಗಿ ಒಗ್ಗೂಡಿಸಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ಚಿಕಿತ್ಸೆಯ ನಂತರ
ಕ್ಯಾನ್ಸರ್ ಮರುಕಳಿಸಬಹುದು. ಕೆಲವು ಕ್ಯಾನ್ಸರ್’ಗಳಲ್ಲಿ ಮರುಕಳಿಕೆಯ ಪ್ರಮಾಣ ಅಧಿಕ. ಮಿದುಳಿನ ಒಂದು ವಿಧದ
ಕ್ಯಾನ್ಸರ್ ಸರಿಸುಮಾರು ಎಲ್ಲ ರೋಗಿಗಳಲ್ಲೂ ಮರುಕಳಿಸುತ್ತದೆ. ಅಂಡಾಶಯದ ಕ್ಯಾನ್ಸರ್ ಮರುಕಳಿಕೆ ಶೇಕಡಾ
80ಕ್ಕಿಂತಲೂ ಅಧಿಕ. ದುಗ್ಧಗ್ರಂಥಿಗಳ ಕೆಲವು ಕ್ಯಾನ್ಸರ್ ನಾಲ್ಕು ರೋಗಿಗಳಲ್ಲಿ ಮೂವರಿಗೆ ಮತ್ತೆ
ಬರುತ್ತದೆ. ಮೂತ್ರಪಿಂಡ ಮತ್ತು ಮೂತ್ರಕೋಶಗಳ ಕ್ಯಾನ್ಸರ್ ಮರುಕಳಿಕೆ ಶೇಕಡಾ 50. ಚರ್ಮದ
ಕ್ಯಾನ್ಸರ್’ನ ಕೆಲವು ಪ್ರಭೇದಗಳಲ್ಲಿ ಮೂಲ ಕ್ಯಾನ್ಸರ್ ಗುಣವಾದರೂ,
ಶೇಕಡಾ 85 ರೋಗಿಗಳಲ್ಲಿ ಶರೀರದ ಬೇರೆಡೆ ಹರಡಿರುತ್ತದೆ. ಚಿಕಿತ್ಸೆಗೆ ರೋಗಿ
ಸ್ಪಂದಿಸುವ ರೀತಿ, ಪ್ರತಿಯೊಂದು ಹಂತದ ಚಿಕಿತ್ಸೆಯ ಹಂತದ ನಂತರ ಎಷ್ಟು
ಪ್ರಮಾಣದ ಕ್ಯಾನ್ಸರ್ ಕೋಶಗಳು ನಾಶವಾಗಿವೆ ಎಂಬುದರ ಲೆಕ್ಕಾಚಾರ, ಅಡ್ದಪರಿಣಾಮಗಳ
ತೀವ್ರತೆಯಿಂದ ಚಿಕಿತ್ಸೆಯನ್ನು ನಿಲ್ಲಿಸಬೇಕಾದ ತುರ್ತು – ಇಂತಹ ಹಲವಾರು ಅಂಶಗಳನ್ನು ಹಿಡಿದು
ಯಾವ ರೋಗಿಯಲ್ಲಿ ಕ್ಯಾನ್ಸರ್ ಮರುಕಳಿಸಬಹುದು ಎಂಬ ಊಹೆ ಮಾಡಬಹುದು. ಆದರೆ, ನಿಖರವಾಗಿ ಇಂತಹ ರೋಗಿಗೆ ಕ್ಯಾನ್ಸರ್ ಮರುಕಳಿಸುತ್ತದೆ ಎಂದು ಹೇಳುವುದು
ಸಾಧ್ಯವಿಲ್ಲ.
ಕ್ಯಾನ್ಸರ್ ಎನ್ನುವುದು ಈಗ ಭೀತಿಗೆ
ಕಾರಣವಾಗಿ ಉಳಿದಿಲ್ಲ. ನಮ್ಮ ದೇಶದಲ್ಲಿ ಉತ್ತಮವಾದ, ಸೋವಿಯಾದ, ಪರಿಣಾಮಕಾರಿಯಾದ ಕ್ಯಾನ್ಸರ್ ಚಿಕಿತ್ಸೆ ಲಭ್ಯವಿದೆ.
ಕ್ಯಾನ್ಸರ್ ಎಷ್ಟು ಬೇಗ ಪತ್ತೆಯಾಗುತ್ತದೆ ಎನ್ನುವುದು ಚಿಕಿತ್ಸೆಯ ಅತ್ಯಂತ ಪ್ರಮುಖ ಅಂಶ.
ಕ್ಯಾನ್ಸರ್’ನ ಆರಂಭಿಕ ಚಿಹ್ನೆಗಳನ್ನು ನಿರ್ಲಕ್ಷ್ಯ ಮಾಡದೆ, ಸೂಕ್ತವಾಗಿ ತಪಾಸಣೆ ಮಾಡಿಸಿ, ಶೀಘ್ರವಾಗಿ ಚಿಕಿತ್ಸೆ
ನೀಡಿದರೆ ಅದು ಶರೀರದಲ್ಲಿ ಹೇಳಹೆಸರಿಲ್ಲದಂತೆ ಮಾಯವಾಗಬಲ್ಲದು. ಕ್ಯಾನ್ಸರ್ ಬಗ್ಗೆ ಅರಿವು
ಮೂಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಕ್ಯಾನ್ಸರ್ ಅರಿವು ಉಳ್ಳವರಲ್ಲಿ ಅನಗತ್ಯ ಭೀತಿ
ಇರುವುದಿಲ್ಲ.
--------------------
ದಿನಾಂಕ 2/2/2025 ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭ ಪುರವಣಿಯಲ್ಲಿ
ಪ್ರಕಟವಾದ ಲೇಖನ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ