ಸೋಮವಾರ, ಜೂನ್ 23, 2025


 

ಮತ್ತೆ ಕೋವಿಡ್ – ಭೀತಿ ಬೇಡ; ಎಚ್ಚರವಿರಲಿ

ಡಾ. ಕಿರಣ್ ವಿ.ಎಸ್.

ವೈದ್ಯರು

ನಮ್ಮ ದೃಶ್ಯ ಮಾಧ್ಯಮಗಳಲ್ಲಿ “ಮರುಕಳಿಸಿದ ಮಹಾಮಾರಿ” ಮಾದರಿಯ ಆರ್ಭಟಗಳು ಏರಿವೆ. ಕೋವಿಡ್-19 ರೋಗಿಗಳು ಮತ್ತೆ ವರದಿಯಾಗಿದ್ದಾರೆ. ಅಲ್ಲಲ್ಲಿ ಸಾವು-ನೋವುಗಳು ಸಂಭವಿಸಿವೆ. ನಾಲ್ಕೈದು ವರ್ಷಗಳ ಹಿಂದೆ ಜಗತ್ತನ್ನು ಇನ್ನಿಲ್ಲದಂತೆ ತಲ್ಲಣಗೊಳಿಸಿದ್ದ ಕೋವಿಡ್-19 ಪುನಃ ಅದೇ ಪ್ರಮಾಣದಲ್ಲಿ ನಮ್ಮನ್ನು ಕಾಡಲಿದೆಯೇ ಎನ್ನುವುದು ಜನಸಾಮಾನ್ಯರ ಪ್ರಶ್ನೆ. ಇದಕ್ಕೆ ಉತ್ತರಿಸುವ ಮುನ್ನ ಕೆಲವು ವಿಷಯಗಳನ್ನು ಸ್ಪಷ್ಟಗೊಳಿಸಬೇಕು.

ಕೋವಿಡ್-19 ಕಾಯಿಲೆಯ ಮೇಲೆ ನಿಯಂತ್ರಣ ಸಾಧಿಸಿದ್ದೆವಲ್ಲವೇ? ಮತ್ತೆ ಏನಾಯಿತು?

ಮಾನವನ ನಿಯಂತ್ರಣಕ್ಕೆ ಒಳಗಾಗಿ ಸಂಪೂರ್ಣ ತಹಬಂದಿಗೆ ಬಂದಿರುವ ಕಾಯಿಲೆಗಳು ತೀರಾ ಬೆರಳೆಣಿಕೆಯಷ್ಟು ಮಾತ್ರ. ಉಳಿದವು ಸಮಯಾನುಸಾರ ಮರುಕಳಿಸುತ್ತಲೇ ಇರುತ್ತವೆ. ಚಳಿಗಾಲ ಆರಂಭ ಆಗುತ್ತಿದ್ದಂತೆ ಉಸಿರಾಟದ ಕಾಯಿಲೆಗಳು ಉಲ್ಬಣವಾಗುತ್ತವೆ. ಆಗ ಅಂತಹ ರೋಗಿಗಳ ಸಂಖ್ಯೆ ಹಠಾತ್ ಏರುತ್ತದೆ. ಕೆಲದಿನಗಳಲ್ಲಿ ಈ ಸಂಖ್ಯೆ ಒಂದು ಮಟ್ಟಕ್ಕೆ ತಲುಪಿ, ನಂತರ ಇಳಿಯುತ್ತದೆ. ಬೇಸಿಗೆಯ ಆರಂಭದಲ್ಲಿ ನೀರಿನಿಂದ ಹರಡುವ ಅತಿಸಾರದಂತಹ ರೋಗಗಳ ಸಂಖ್ಯೆ ಏರುತ್ತದೆ. ಹೀಗೆ, ಪ್ರತಿಯೊಂದು ಕಾಯಿಲೆಗೂ ಏರಿಳಿತಗಳು ಇದ್ದೇ ಇವೆ. ಕೋವಿಡ್-19 ಜಗತ್ತಿನಿಂದ ನಿರ್ನಾಮವಾಗಿಲ್ಲ. ಅದು ಹೊಸ ರೂಪದಲ್ಲಿ ಆಗಾಗ್ಗೆ ಬರುತ್ತದೆ. ಹೀಗಾಗಿ, ಸತತ ಎಚ್ಚರ ಮುಖ್ಯ.

ಪ್ರಸ್ತುತ ಕೋವಿಡ್-19 ವೈರಸ್ ತಳಿ ಹೆಚ್ಚು ಅಪಾಯಕಾರಿಯೇ?

ತಳಿ ರೂಪಾಂತರ ಯಾವುದೇ ವೈರಸ್ನ ಸಹಜ ಗುಣ. ಇಂತಹ ರೂಪಾಂತರಿ ತಳಿ ಅಧಿಕ ರೋಗಕಾರಕವೂ ಆಗಿರಬಹುದು; ಇಲ್ಲವೇ ಶಕ್ತಿಹೀನವೂ ಆಗಬಹುದು. ಕೋವಿಡ್-19 ರೂಪಾಂತರಗೊಳ್ಳುವುದು ಮನುಷ್ಯರ ದೇಹದಲ್ಲಿ. ಅಧಿಕ ಮಂದಿ ಕಾಯಿಲೆಗೆ ಈಡಾದರೆ ವೈರಸ್ ರೂಪಾಂತರದ ಸಾಧ್ಯತೆಗಳು ಹೆಚ್ಚಾಗುತ್ತವೆ. ಒಮ್ಮೆ ರೂಪಾಂತರ ಹೊಂದಿದರೆ ಇನ್ನೂ ಹೆಚ್ಚು ಜನರು ಕಾಯಿಲೆಗೆ ತುತ್ತಾಗುತ್ತಾರೆ. ಆಗ ವೈರಸ್ ಮತ್ತೊಮ್ಮೆ ರೂಪಾಂತರ ಹೊಂದಬಹುದು. ಇದೊಂದು ವಿಷಮ ಆವರ್ತನ ಚಕ್ರ. ಕಾಯಿಲೆಯನ್ನು ನಿಯಂತ್ರಿಸಬೇಕೆಂದರೆ ಈ ಚಕ್ರವನ್ನು ಮುರಿಯಬೇಕು. ಅತ್ಯಂತ ಸಫಲವಾಗಿ ಈ ಚಕ್ರವನ್ನು ಭಿನ್ನ ಮಾಡುವ ಸಾಧ್ಯತೆ ಇರುವುದು ಕಾಯಿಲೆಯ ಪ್ರಮಾಣವನ್ನು ಕಡಿಮೆ ಮಾಡುವುದರಲ್ಲಿ. ಅಂದರೆ ಎಷ್ಟು ಕಡಿಮೆ ಜನರಿಗೆ ಕಾಯಿಲೆ ತಗಲುತ್ತದೋ ವೈರಸ್ ರೂಪಾಂತರ ಹೊಂದುವ ಸಾಧ್ಯತೆ ಅಷ್ಟೇ ಕಡಿಮೆಯಾಗುತ್ತದೆ. ಹೀಗಾಗಿ, ವೈರಸ್ ಹರಡುವಿಕೆಯನ್ನು ಮಿತಗೊಳಿಸುವುದು ಬಹಳ ಮುಖ್ಯ. ಈ ಬಾರಿಯ ಕಾಯಿಲೆ ಅಪಾಯಕಾರಿಯೇ ಎನ್ನುವ ಪ್ರಶ್ನೆಗೆ ಹೌದು” ಅಥವಾ “ಇಲ್ಲ” ಎಂದು ಉತ್ತರಿಸುವುದು ಪ್ರಜೆಗಳ ನಿಯಂತ್ರಣದಲ್ಲಿದೆ. ಪ್ರಪಂಚದ ಯಾವುದೇ ಸರ್ಕಾರವೂ ಎಷ್ಟೇ ಕಟ್ಟುನಿಟ್ಟಿನ ಕಾಯಿದೆಗಳನ್ನು ಮಾಡಿದರೂ, ಜನರ ಸಹಕಾರವಿಲ್ಲದೆ ಅದು ಸಫಲವಾಗದು. ಯಾವುದೇ ಕಾಯಿಲೆಯ  ನಿಯಂತ್ರಣದಲ್ಲಿ ಸರ್ಕಾರದ ಪಾತ್ರಕ್ಕಿಂತಲೂ ಜನರ ಶಿಸ್ತುಬದ್ಧ ನಡವಳಿಕೆಯೇ ಮುಖ್ಯ.

ಈ ಬಾರಿಯ ಕೋವಿಡ್-19 ಅಲೆ ಏರದಂತೆ ನಾವೇನು ಮಾಡಬಹುದು?

ಎಲ್ಲಕ್ಕಿಂತ ಮುಖ್ಯವಾಗಿ ಸಾಂಘಿಕ ಹೊಣೆಗಾರಿಕೆಯಿಂದ ಕಾಯಿಲೆಯನ್ನು ನಿಯಂತ್ರಿಸುತ್ತೇವೆ ಎನ್ನುವ ಧೈರ್ಯದ ಮನಸ್ಥಿತಿ ಇರಬೇಕು. ಕಳೆದ ಅಲೆಗಳ ವೇಳೆ ‘ಕೋವಿಡ್-19 ಅಲೆಗಳು ತಾವಾಗಿಯೇ ಬರುವುದಿಲ್ಲ; ಬಹಳ ಮಟ್ಟಿಗೆ ನಾವಾಗಿಯೇ ತಂದುಕೊಳ್ಳುತ್ತೇವೆ’ ಎನ್ನುವ ಸಾಂಕ್ರಾಮಿಕ ರೋಗ ತಜ್ಞರ ಮಾತುಗಳು ನೆನಪಿರಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ. ಪ್ರಸ್ತುತ ಕೋವಿಡ್-19 ಕಾಯಿಲೆ ಅಲೆಯ ಸ್ವರೂಪ ಪಡೆಯುವುದಕ್ಕೆ ಹಲವಾರು ಕಾರಣಗಳು ಇರುತ್ತವೆ. ಇದನ್ನು ಅರಿತು, ನಿಗ್ರಹಕ್ಕೆ ಬೇಕಾದ ಶಿಸ್ತಿನ ಕ್ರಮಗಳನ್ನು ಪಾಲಿಸಿದರೆ ಕಾಯಿಲೆಯಿಂದ ಮುಕ್ತರಾಗಬಹುದು. ಶಿಸ್ತಿನ ಅಗತ್ಯವನ್ನು ಮರೆತು, ತಜ್ಞರ ಸಲಹೆಗಳನ್ನು ಕಡೆಗಣಿಸಿ, ಮನಸೋ ಇಚ್ಛೆ ವ್ಯವಹರಿಸಿದರೆ ಹಿಂದಿನ ದಿನಗಳು ಮರುಕಳಿಸಬಹುದು ಎನ್ನುವ ಎಚ್ಚರ ಬೇಕು. ನಮ್ಮದು ಮೂಲತಃ ಅಶಿಸ್ತಿನ, ಉಡಾಫೆ ಸ್ವಭಾವದ ಸಮಾಜ. ಅಪಾಯದ ಸಂದರ್ಭಗಳಲ್ಲೂ ಸರಿ-ತಪ್ಪುಗಳ ವಿವೇಚನೆ ನಮಗೆ ಕಡಿಮೆ. ಒತ್ತಾಯಪೂರ್ವಕವಾಗಿ ಗಟ್ಟಿಯಾದ ನಿಯಮಗಳನ್ನು ತಂದರೆ ನಮ್ಮ ಜನರ ಪ್ರತಿರೋಧ ಬೆಳೆಯುತ್ತದೆ ಎನ್ನುವ ಕಾರಣಕ್ಕೆ ಸರ್ಕಾರಗಳು ಈ ವಿಷಯಗಳಲ್ಲಿ ಮೃದುಧೋರಣೆ ತಳೆಯುತ್ತವೆ. ಆದರೆ ಸರ್ಕಾರದ ಸಡಿಲ ನಿಲುವು ಅಶಿಸ್ತಿಗೆ ಆಹ್ವಾನವಾಗಬಾರದು. ಕೋವಿಡ್-19 ಅಲೆ ಮರುಕಳಿಸಿದರೆ ಅತ್ಯಧಿಕ ಸಂಕಟಕ್ಕೆ ಒಳಗಾಗುವವರು ಸಾಮಾನ್ಯ ಪ್ರಜೆಗಳೇ ಎಂಬುದು ನಮ್ಮ ಗಮನದಲ್ಲಿರಬೇಕು. ಸರ್ಕಾರದ ನೀತಿ ಹೇಗೆಯೇ ಇದ್ದರೂ, ನಾವು ವೈಯಕ್ತಿಕ ಮತ್ತು ಸಮಷ್ಟಿ ಶಿಸ್ತನ್ನು ಪಾಲಿಸುವುದು ಬಹಳ ಮುಖ್ಯ. ಸರಳವಾಗಿ ಏನು ಮಾಡಬೇಕೆಂಬುದನ್ನು ಹಿಂದಿನ ಅಲೆಗಳು ನಮಗೆ ಕಲಿಸಿವೆ. ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ ತೊಳೆದು ಸ್ವಚ್ಚವಿಡುವುದು; ವೈಯಕ್ತಿಕ ನೈರ್ಮಲ್ಯ; ಇತರರನ್ನು ಸುರಕ್ಷಿತವಾಗಿ ಇರುವಂತೆ ಪ್ರೇರೇಪಿಸುವುದು; ಎಚ್ಚರಿಕೆಯ ಅಂಶಗಳನ್ನು ಕುಟುಂಬ ಸದಸ್ಯರ ಜೊತೆ ಕಾಲಕಾಲಕ್ಕೆ ಚರ್ಚಿಸುತ್ತಾ ಅವರನ್ನು ಸನ್ನದ್ಧರಾಗಿ ಇಡುವುದು; ರೋಗದ ಮೊದಲ ಲಕ್ಷಣಗಳು ಕಂಡ ಒಡನೆಯೇ ಅಂತಹವರನ್ನು ಇತರರಿಂದ ಪ್ರತ್ಯೇಕಿಸುವುದು; ವೈದ್ಯರ ಸಲಹೆ ಪಡೆದು ಪರೀಕ್ಷೆ, ಚಿಕಿತ್ಸೆ ಮಾಡಿಸುವುದು – ಮೊದಲಾದ ಎಚ್ಚರಗಳು ಸದಾ ಇರಬೇಕು. ಇದರಲ್ಲಿ ಯಾವ ರೀತಿಯ ವಿನಾಯತಿಯೂ ಸಲ್ಲದು. ಅದನ್ನು ಕ್ರಮಬದ್ಧವಾಗಿ ಪಾಲಿಸುವುದು ಮಾತ್ರ ನಮ್ಮ ಕೈಲಿದೆ.

ಕೋವಿಡ್-19 ಇನ್ನೂ ಕೊನೆಯಾಗಿಲ್ಲ; ಸದ್ಯದಲ್ಲೇ ಕೊನೆಯಾಗುವುದೂ ಇಲ್ಲ; ಕಾಯಿಲೆಯ ಪ್ರಸ್ತುತ ಮರುಕಳಿಕೆ ಅದರ ಮುಕ್ತಾಯವಲ್ಲ. ಯಾವುದೇ ಕಾಯಿಲೆಯ ಅಲೆಗಳು ತಾವಾಗಿಯೇ ಬರುವುದಿಲ್ಲ. ಬೇಜವಾಬ್ದಾರಿ ಸಮಾಜ ಅದನ್ನು ಬರಮಾಡಿಕೊಳ್ಳುತ್ತದೆ. ಅವಜ್ಞೆ ಹೆಚ್ಚಿದಷ್ಟೂ ಅವು ವೇಗವಾಗಿ, ತೀಕ್ಷ್ಣವಾಗಿ ಬರುತ್ತವೆ. ಶಿಸ್ತನ್ನು ಪಾಲಿಸದಿದ್ದರೆ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ; ಸಂಯಮರಹಿತ ಸಮಾಜಗಳು ತಮ್ಮ ಸರದಿಗಾಗಿ ಕಾದಿರುತ್ತವೆ. ನಮ್ಮ ದೇಶ ಕೋವಿಡ್-19 ಅಲೆಗೆ ಮತ್ತೊಮ್ಮೆ ತುತ್ತಾಗದಿರುವುದು ಸಾರ್ವಜನಿಕರ ಕಟ್ಟೆಚ್ಚರದಲ್ಲಿದೆ.

----------------------------

ದಿನಾಂಕ 3/ಜೂನ್/2025 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಪ್ರಕಟಿತ ಲೇಖನ ಕೊಂಡಿ: https://www.prajavani.net/health/special-article-about-covid-and-its-control-3320797


 

ಆಂಟಿಬಯಾಟಿಕ್ ಔಷಧಗಳ ತಪ್ಪು-ಒಪ್ಪು

ಡಾ. ಕಿರಣ್ ವಿ.ಎಸ್.

ವೈದ್ಯರು

ಆರೋಗ್ಯ ಕ್ಷೇತ್ರದಲ್ಲಿ ಇಪ್ಪತ್ತನೆಯ ಶತಮಾನದ ಅತ್ಯಂತ ಮಹತ್ವದ ಸಾಧನೆ ಎಂದರೆ ಆಂಟಿಬಯಾಟಿಕ್ ಔಷಧಗಳ ಆವಿಷ್ಕಾರ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಸೋಂಕುಗಳ ಚಿಕಿತ್ಸೆಗೆ ಪ್ರಾಯೋಗಿಕವಾಗಿ ಲಭ್ಯವಾದ ಪೆನಿಸಿಲಿನ್ ಎಂಬ ಆಂಟಿಬಯಾಟಿಕ್, ಔಷಧ ವಿಜ್ಞಾನದ ಮಹಾಸಂಕ್ರಮಣವೊಂದಕ್ಕೆ ನಾಂದಿ ಹಾಡಿತು. ನೂರಾರು ಬಗೆಯ ಆಂಟಿಬಯಾಟಿಕ್ ಔಷಧಗಳು ಈಗ ಲಭ್ಯವಿವೆ. ಇಂದಿಗೂ ಪ್ರತಿದಿನವೂ ಸಾವಿರಾರು ಪ್ರಾಣಗಳು ಆಂಟಿಬಯಾಟಿಕ್ ಔಷಧಗಳ ನೆರವಿನಿಂದ ಉಳಿಯುತ್ತಿವೆ.

ಆಂಟಿಬಯಾಟಿಕ್ ಔಷಧಗಳಿಗೆ ವ್ಯತಿರಿಕ್ತ ಪರಿಣಾಮಗಳೂ ಇವೆ. ಶರೀರದ ಮೇಲೆ ಆಂಟಿಬಯಾಟಿಕ್ ಔಷಧಗಳ ದುಷ್ಪರಿಣಾಮಗಳೂ ಸಾಕಷ್ಟಿವೆ. ಹೊಟ್ಟೆ ತೊಳಸುವುದು, ವಾಂತಿ, ಭೇದಿ, ತಲೆಸುತ್ತು, ರಕ್ತಕೋಶಗಳ ವ್ಯತ್ಯಯ, ಸುಸ್ತು, ಹಸಿವಾಗದಿರುವುದು ಮೊದಲಾದ ಅಡ್ಡ ಪರಿಣಾಮಗಳು ಆಂಟಿಬಯಾಟಿಕ್ ಔಷಧಗಳನ್ನು ಸೇವಿಸುವ ಬಹಳಷ್ಟು ಜನರಲ್ಲಿ ಕಾಣುತ್ತವೆ. ಕೆಲವು ಆಂಟಿಬಯಾಟಿಕ್ ಔಷಧಗಳು ಕೆಲವು ನಿರ್ದಿಷ್ಟ ವ್ಯಕ್ತಿಗಳಲ್ಲಿ ತೀವ್ರವಾದ ಅಲರ್ಜಿ ಪ್ರತಿಕ್ರಿಯೆಯ ಮೂಲಕ ಪ್ರಾಣಾಪಾಯ ಉಂಟುಮಾಡಬಲ್ಲವು. ಎಗ್ಗಿಲ್ಲದೆ ಬಳಸುವ ಆಂಟಿಬಯಾಟಿಕ್ ಔಷಧಗಳ ವಿರುದ್ಧ ಬ್ಯಾಕ್ಟೀರಿಯಾದಂತಹ ಸೋಂಕುಕಾರಕ ಜೀವಿಗಳು ಪ್ರತಿರೋಧ ಬೆಳೆಸಿಕೊಳ್ಳಬಲ್ಲವು. ಇದರಿಂದ ಆಂಟಿಬಯಾಟಿಕ್ ಔಷಧದ ಪರಿಣಾಮ ಕುಗ್ಗಿ, ಕೆಲಸಕ್ಕೆ ಬಾರದಂತಾಗುತ್ತದೆ. ಹೀಗಾಗಿ, ಆಂಟಿಬಯಾಟಿಕ್ ಔಷಧಗಳ ಬಳಕೆಯ ಬಗ್ಗೆ ಕಟ್ಟೆಚ್ಚರ ಇರಬೇಕು.

ಆಂಟಿಬಯಾಟಿಕ್ ಔಷಧಗಳ ವಿರುದ್ಧ ಬ್ಯಾಕ್ಟೀರಿಯಾಗಳು ಪ್ರತಿರೋಧ ಬೆಳೆಸಿಕೊಳ್ಳುವುದು ನಮ್ಮ ಕಾಲಘಟ್ಟದ ಅತ್ಯಂತ ಗಂಭೀರ ಸಮಸ್ಯೆಯಾಗುತ್ತಿದೆ. ಜಗತ್ತಿನ ಯಾವ ದೇಶವೂ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಇಂತಹ ಪ್ರತಿರೋಧದ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದರೆ 2050ರ ವೇಳೆಗೆ ವಾರ್ಷಿಕವಾಗಿ ಸುಮಾರು ಒಂದು ಕೋಟಿ ಮಂದಿ ಚಿಕಿತ್ಸೆಯ ನಿಯಂತ್ರಣಕ್ಕೆ ಸಿಗದ ಸೋಂಕುಗಳಿಗೆ ಬಲಿಯಾಗುತ್ತಾರೆ ಎಂಬ ಆಘಾತಕಾರಿ ಅಂಶ ವ್ಯವಸ್ಥಿತ ಅಧ್ಯಯನಗಳ ಮೂಲಕ ಬೆಳಕಿಗೆ ಬಂದಿದೆ.

ಪರಿಣಾಮಕಾರಿ ಕ್ರಮಗಳು ಎಂದರೇನು? ತಾರ್ಕಿಕ ಆಲೋಚನೆಯ ಪ್ರಕಾರ ನಿರುಪಯುಕ್ತ ಔಷಧದ ಸ್ಥಾನದಲ್ಲಿ ಹೊಸ ಆಂಟಿಬಯಾಟಿಕ್ ಔಷಧದ ಆವಿಷ್ಕಾರ ಆಗಬೇಕು. ಇದು ಸುಲಭದ ಮಾತಲ್ಲ. ಔಷಧ ಆವಿಷ್ಕರಣ ನಿಯಮಗಳು ವಿಪರೀತ ಕಠಿಣ. ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ವಿಷಯದಲ್ಲಿ ರಾಜಿಯಾಗುವ ಮಾತಿಲ್ಲ. ಹೀಗಾಗಿ ಆಂಟಿಬಯಾಟಿಕ್ ಔಷಧಗಳ ಆವಿಷ್ಕರಣ ಪ್ರಕ್ರಿಯೆ ಬಹಳ ದುಬಾರಿಯೂ, ದೀರ್ಘಕಾಲಿಕವೂ ಆಗುತ್ತದೆ. ಹೊಸದೊಂದು ಆಂಟಿಬಯಾಟಿಕ್ ಔಷಧವನ್ನು ಪತ್ತೆ ಮಾಡಲು ಸುಮಾರು 10-15 ವರ್ಷಗಳ ಕಾಲ ಹಿಡಿಯುತ್ತದೆ. ಇದಕ್ಕೆ ಆಗುವ ಖರ್ಚು ಸುಮಾರು ಒಂದು ಬಿಲಿಯನ್ ಡಾಲರ್ (ಸುಮಾರು 8500 ಕೋಟಿ ರೂಪಾಯಿಗಳು). ಇಷ್ಟು ಖರ್ಚು ಮತ್ತು ಕಾಲವನ್ನು ವ್ಯಯಿಸುವುದು ಕೆಲವೇ ದೈತ್ಯ ಔಷಧ ಕಂಪನಿಗಳಿಗೆ ಮಾತ್ರ ಸಾಧ್ಯ. ಹೀಗಿರುವಾಗ, ಇನ್ನು ಇಪ್ಪತ್ತೈದು ವರ್ಷಗಳಲ್ಲಿ ಎಷ್ಟು ಹೊಸ ಆಂಟಿಬಯಾಟಿಕ್ ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲು ಸಾಧ್ಯ? ದುಬಾರಿ ಬೆಲೆಯನ್ನು ತೆತ್ತು ಅವುಗಳನ್ನು ಖರೀದಿಸಲು ಎಷ್ಟು ಜನರಿಗೆ ಚೈತನ್ಯ ಇದ್ದೀತು? ಅದನ್ನು ಜನರು ದುರುಪಯೋಗ ಪಡಿಸಿಕೊಂಡು, ಪ್ರತಿರೋಧ ಬೆಳೆಯುವಂತೆ ಮಾಡಿ ಹಾಳುಗೆಡವುದಿಲ್ಲವೆಂಬ ಖಾತ್ರಿ ಏನು? ತತ್ಕಾರಣ, ತಾರ್ಕಿಕವಾದರೂ ಇದು ಸಮರ್ಥವಾದ ಆಯ್ಕೆಯಲ್ಲ.

ಆಂಟಿಬಯಾಟಿಕ್ ಔಷಧಗಳನ್ನು ಜತನದಿಂದ ಬಳಸುವುದು ಮತ್ತೊಂದು ದಾರಿ. ಇದು ಕೇವಲ ನಿಯಮಗಳಿಂದ ಸಾಧ್ಯವಾಗುವ ಮಾತಲ್ಲ. ಪ್ರಗತಿಶೀಲ ದೇಶಗಳಲ್ಲಿ ಜನಸಾಮಾನ್ಯರಿಗೆ ಅನ್ವಯವಾಗುವ ಆರೋಗ್ಯಸಂಬಂಧಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಬಹಳ ಕಷ್ಟ. ಇಂತಹ ನಿಯಮಗಳು ಫಲಕಾರಿಯಾಗಲು ಸಮಷ್ಟಿಯ ಶಿಸ್ತು ಅಗತ್ಯವಾಗುತ್ತದೆ. ನಮ್ಮ ದೇಶವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಔಷಧ ಮಾರಾಟ ಮಾಡುವ ಮಳಿಗೆಗಳು ವೈದ್ಯರ ಸಲಹೆಯ ಚೀಟಿ ಇಲ್ಲದೆ ಯಾವುದೇ ಆಂಟಿಬಯಾಟಿಕ್ ಔಷಧವನ್ನಾದರೂ ಮಾರಾಟ ಮಾಡುತ್ತವೆ. ವೈದ್ಯರು ಯಾವಾಗಲೋ ಯಾವುದೋ ಅಸೌಖ್ಯಕ್ಕೆ ಬರೆದು ಕೊಟ್ಟಿದ್ದ ಔಷಧಗಳನ್ನು ಪುನಃ ಖರೀದಿಸಿ, ಪ್ರತಿಯೊಂದು ಕಾಯಿಲೆಗೂ ಬಳಸುವ ಜನರಿದ್ದಾರೆ. ಜೊತೆಗೆ, ಆಂಟಿಬಯಾಟಿಕ್ ಔಷಧಗಳ ಬಗ್ಗೆ ತಮ್ಮ ವ್ಯಾಸಂಗದಲ್ಲಿ ಅಧ್ಯಯನವನ್ನೇ ಮಾಡದ ವೈದ್ಯಪದ್ದತಿಯವರೂ ಮುಕ್ತವಾಗಿ ಅವುಗಳನ್ನು ಸೇವಿಸುವ ಅಧಿಕೃತ ಸಲಹೆಗಳನ್ನು ನೀಡುತ್ತಾರೆ. ಆಸ್ಪತ್ರೆಗಳು ರೋಗಿಗಳನ್ನು ಶೀಘ್ರವಾಗಿ ಗುಣಪಡಿಸುವ ಉದ್ದೇಶದಿಂದ ಕಡಿಮೆ ಶಕ್ತಿಯ ಆಂಟಿಬಯಾಟಿಕ್ ಔಷಧಗಳನ್ನು ಹೆಚ್ಚು ಕಾಲ ನೀಡುವ ಬದಲಿಗೆ, ಹೆಚ್ಚು ಶಕ್ತಿಯ ಆಂಟಿಬಯಾಟಿಕ್ ಔಷಧಗಳನ್ನು ಕಡಿಮೆ ಕಾಲ ನೀಡುವ ಅಪಾಯಕಾರಿ ಪದ್ದತಿಗಳನ್ನು ಪಾಲಿಸುತ್ತವೆ. ಮುಂದುವರೆದ ದೇಶಗಳಲ್ಲಿ ಜನರ ಆರೋಗ್ಯದ ಹೊಣೆಯನ್ನು ಸರ್ಕಾರ ವಹಿಸುತ್ತದೆ. ಅಲ್ಲಿನ ಚಿಕಿತ್ಸೆಗಳಿಗೆ ತಜ್ಞ ಸಮಿತಿ ರಚಿಸಿರುವ ಕಟ್ಟುನಿಟ್ಟಿನ ನಿಯಮಾವಳಿಗಳು ಇರುತ್ತವೆ. ಯಾವುದಾದರೂ ನಿಯಮವನ್ನು ಉಲ್ಲಂಘಿಸಿದರೆ ವಿಚಾರಣೆಗೆ ಒಳಗಾಗಬೇಕಾಗುತ್ತದೆ. ಆದರೆ ನಮ್ಮಂತಹ ಬಹುತೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಜನಸಾಮಾನ್ಯರ ಆರೋಗ್ಯದ ಬಗ್ಗೆ ಸರ್ಕಾರ ಜವಾಬ್ದಾರಿ ವಹಿಸುವುದಿಲ್ಲ. ಆರೋಗ್ಯದ ಹೊಣೆಗಾರಿಕೆ ಜನರ ಸ್ವಂತದ್ದೇ ಆಗಿರುತ್ತದೆ. ಇದರಲ್ಲಿ ಖಾಸಗಿ ಆಸ್ಪತ್ರೆಗಳ ಪಾರುಪತ್ಯ ಹೆಚ್ಚು. ಜವಾಬ್ದಾರಿಯಿಂದ ವಿಮುಖವಾದ ವ್ಯವಸ್ಥೆಗೆ ಯಾವುದೇ ನಿಯಮವನ್ನೂ ಕಟ್ಟುನಿಟ್ಟಾಗಿ ಜಾರಿ ಮಾಡುವ ನೈತಿಕತೆ ಇಲ್ಲವಾಗುತ್ತದೆ. ಆಂಟಿಬಯಾಟಿಕ್ಗಳನ್ನು ಬೇಕಾಬಿಟ್ಟಿ ಉಪಯೋಗಿಸುವುದರ ದುಷ್ಪರಿಣಾಮಗಳನ್ನು ಇಡೀ ಪ್ರಪಂಚ ಅನುಭವಿಸಬೇಕಾಗುತ್ತದೆ. ಆಂಟಿಬಯಾಟಿಕ್ ಬಳಕೆಯಲ್ಲಿ ಸಂಯಮ ಮತ್ತು ನಿಯಮಪಾಲನೆ ಸುರಕ್ಷೆಯ ಪ್ರಬಲವಾದ ಮಾರ್ಗವಾದರೂ, ಅದನ್ನು ಆಚರಣೆಗೆ ಯುಕ್ತವಾಗುವಂತೆ ಜಾರಿಗೊಳಿಸುವುದು ತೀರಾ ಕಷ್ಟ.

ಆಹಾರ, ನೈರ್ಮಲ್ಯ, ಶಿಸ್ತುಬದ್ಧ ಜೀವನಗಳು ಆರೋಗ್ಯ ರಕ್ಷಣೆಯ ಪ್ರಮುಖ ಭಾಗಗಳು. ಆರೋಗ್ಯವೆನ್ನುವುದು ಕಾಯಿಲೆ ಬಂದ ನಂತರ ಅದನ್ನು ಗುಣಪಡಿಸುವುದು ಮಾತ್ರವಲ್ಲ; ಕಾಯಿಲೆ ಬಾರದಂತೆ ಸಂರಕ್ಷಿಸಿಕೊಳ್ಳುವುದು ಕೂಡ. ಲಭ್ಯವಿರುವ ಆಂಟಿಬಯಾಟಿಕ್ಗಳ ಸತ್ಪರಿಣಾಮಗಳು ನಮ್ಮ ಮುಂದಿನ ಪೀಳಿಗೆಗೂ ಲಭ್ಯವಾಗುವಂತೆ ಮಾಡುವುದು ನಮ್ಮೆಲ್ಲರ ಸಂಘಟಿತ ಜವಾಬ್ದಾರಿ.

-------------------

ದಿನಾಂಕ 13/5/2025 ರ ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಮೂಲ ಲೇಖನದ ಕೊಂಡಿ: https://www.prajavani.net/health/use-and-abuse-of-antibiotics-antibiotic-resistance-misuse-health-awareness-medicine-overuse-drug-regulation-india-3283573


 

ಶುಚಿಯಾದ ನೀರು ಮತ್ತು ಆಹಾರ – ರೋಗಗಳನ್ನು ತಡೆಗಟ್ಟುವ ಮೂಲ ಮಂತ್ರ

ಡಾ. ಕಿರಣ್ ವಿ.ಎಸ್.

ವೈದ್ಯರು

 

“ಪ್ರೀತಿಯಿಲ್ಲದೆ ಜೀವಿಸಲಾರೆ” ಎನ್ನುವುದು ಕೇವಲ ಕವಿಚಾತುರ್ಯದ ಮಾತು. ಬದುಕಿನ ಅಸಲಿ ಆವಶ್ಯಕತೆಗಳು ನೀರು ಮತ್ತು ಆಹಾರ. ಪ್ರಾಣಿ-ಪಕ್ಷಿಗಳು ಮಲಿನ ನೀರು, ಆಹಾರಗಳನ್ನು ಸೇವಿಸಿಯೂ ಬದುಕುತ್ತವಾದರೂ, ನಾಗರಿಕತೆಗೆ ಹೊಂದಿಕೊಂಡಿರುವ ಮನುಷ್ಯರಿಗೆ ರೋಗದಿಂದ ಕಾಪಾಡಿಕೊಳ್ಳಲು ಆಹಾರ-ಪಾನೀಯಗಳು ಶುಚಿಯಾಗಿರುವುದು ಅತ್ಯಗತ್ಯ. ನಮ್ಮನ್ನು ಕಾಡುವ ಬಹುತೇಕ ಸಾಂಕ್ರಾಮಿಕ ರೋಗಗಳು ಮಲಿನವಾದ ನೀರು ಅಥವಾ ಆಹಾರಗಳಿಂದಲೇ ಸಂಭವಿಸುತ್ತವೆ.

ಮಲಿನ ಆಹಾರ-ಪಾನೀಯಗಳು ಎರಡು ರೀತಿಗಳಿಂದ ಅನಾರೋಗ್ಯಕ್ಕೆ ಕಾರಣವಾಗತ್ತವೆ. ಮೊದಲನೆಯದು - ಅವುಗಳಲ್ಲಿ ಇರಬಹುದಾದ ಸೋಂಕುಕಾರಕ ಪರೋಪಜೀವಿಗಳು ಸಾಂಕ್ರಾಮಿಕ ಕಾಯಿಲೆಗಳನ್ನು ಹರಡುವ ಪ್ರಬಲ ಮಾಧ್ಯಮ. ಎರಡನೆಯದು - ಅದರೊಳಗಿನ ಹಾನಿಕಾರಕ ರಾಸಾಯನಿಕಗಳು ಬಾಯಿ ಮತ್ತು ಗಂಟಲಿನ ಸೂಕ್ಷ್ಮವಾದ ಲೋಳೆಪದರಕ್ಕೆ ಹಾನಿ ಮಾಡುತ್ತವೆ. ಲೋಳೆಪದರ ಸ್ರವಿಸುವ ಲೋಳೆಯು ಕಾಯಿಲೆ ಉಂಟು ಮಾಡುವ ಕ್ರಿಮಿಗಳನ್ನು ನಿಯಂತ್ರಿಸಿ,  ನಮ್ಮ ಶರೀರವನ್ನು ರೋಗಗಳಿಂದ ಕಾಪಾಡುತ್ತವೆ. ಆದರೆ, ಬಿರುಕು ಬಿಟ್ಟ ಲೋಳೆಪದರದ ಮೂಲಕ ಸೋಂಕುಕಾರಕ ಪರೋಪಜೀವಿಗಳು ಸುಲಭವಾಗಿ ಶರೀರದ ಒಳಗೆ ನುಗ್ಗಿ, ಕಾಯಿಲೆಗೆ ಕಾರಣವಾಗುತ್ತವೆ. ಶರೀರದ ಸಹಜ ರಕ್ಷಕ ವ್ಯವಸ್ಥೆ ಚೆನ್ನಾಗಿರುವವರಲ್ಲಿ ಇಂತಹ ಸೋಂಕು ಹೆಚ್ಚು ತೊಂದರೆ ನೀಡದೆ, ತಾನಾಗಿಯೇ ನಿಗ್ರಹವಾಗುತ್ತದೆ. ಆದರೆ ರಕ್ಷಕ ವ್ಯವಸ್ಥೆ ಕ್ಷೀಣವಾಗಿರುವ ಮಧುಮೇಹಿಗಳು, ಚಿಕ್ಕ ಮಕ್ಕಳು, ವೃದ್ಧರು, ನಿಯಮಿತವಾಗಿ ಸ್ಟೀರಾಯ್ಡ್ ಔಷಧಗಳನ್ನು ಸೇವಿಸುತ್ತಿರುವ ರೋಗಿಗಳು, ಮೊದಲಾದವರಲ್ಲಿ ಈ ಸೋಂಕುಗಳು ಅಪಾಯಕಾರಿಯಾಗಬಲ್ಲವು.

ಮಲಿನ ಆಹಾರ ಮತ್ತು ನೀರಿನ ಮೂಲಕ ಹರಡುವ ಗಂಟಲಿನ, ಜೀರ್ಣಾಂಗದ ರೋಗಗಳು ಬೇಸಿಗೆಯಲ್ಲಿ ಅಧಿಕ. ಮಕ್ಕಳಿಗೆ ರಜೆ ಇರುವುದರಿಂದ ಪ್ರವಾಸಗಳಿಗೆ ಹೋಗುವವರು ಹೆಚ್ಚು. ಪ್ರವಾಸದಲ್ಲಿ ತಿನಿಸು-ಪಾನೀಯಗಳ ಮೇಲೆ ಸಂಪೂರ್ಣ ನಿಯಂತ್ರಣ ಇರುವುದಿಲ್ಲ. ಅಂತಹ ವೇಳೆ ಸಾಧ್ಯವಾದಷ್ಟೂ ಬಿಸಿಯಾಗಿ ತಯಾರಿಸಿದ ತಾಜಾ ಆಹಾರ ಸೇವನೆ ಸೂಕ್ತ. ಸ್ವಚ್ಚವಾದ ನೀರು, ಭದ್ರಪಡಿಸಿದ ಪಾನೀಯಗಳ ಬಳಕೆ ಒಳ್ಳೆಯದು. 

ಮಲಿನ ಆಹಾರ-ಪಾನೀಯಗಳ ಸೇವನೆಯಿಂದ ಆಗುವ ಬಹುತೇಕ ಸಣ್ಣ-ಪುಟ್ಟ ಸೋಂಕುಗಳನ್ನು ಶರೀರದ ರಕ್ಷಕ ವ್ಯವಸ್ಥೆಯೇ ಸರಿಪಡಿಸುತ್ತದೆ. ಅದರ ಸಾಮರ್ಥ್ಯವನ್ನು ಮೀರಿದ ಬೇನೆಗಳಿಗೆ ಮಾತ್ರ ವೈದ್ಯಕೀಯ ಸಲಹೆ ಬೇಕಾಗುತ್ತದೆ. ನಲವತ್ತೆಂಟು ಗಂಟೆಗಳಿಗಿಂತಲೂ ಹೆಚ್ಚಿನ ಕಾಲ ಅಸೌಖ್ಯ ಎನಿಸಿದರೆ ವೈದ್ಯರನ್ನು ಕಾಣುವುದು ಸೂಕ್ತ. ಸೋಂಕು ಹೆಚ್ಚುತ್ತಿರುವ ಸೂಚನೆಗಳು ಕಂಡುಬಂದರೆ ಯಾವುದೇ ಕಾರಣಕ್ಕೂ ಸ್ವಯಂ-ವೈದ್ಯ ಮಾಡಿಕೊಂಡು ಪರಿಸ್ಥಿತಿಯನ್ನು ಹದಗೆಡಿಸಬಾರದು.

ಮಲಿನ ಆಹಾರ-ಪಾನೀಯಗಳನ್ನು ಸೇವಿಸಿ ತಂದುಕೊಳ್ಳುವ ಸೋಂಕಿನ ಚಿಕಿತ್ಸೆಗಿಂತಲೂ, ಅವು ಬಾರದಂತೆ ನಿರ್ವಹಿಸುವುದು ಜಾಣತನ. ಮನೆಯಲ್ಲಿ ಕೈ ತೊಳೆಯದೇ ಏನನ್ನೂ ಸೇವಿಸದವರು, ವೈದ್ಯರು ಯಾವುದಾದರೂ ಔಷಧವನ್ನು ಸೂಚಿಸಿದಾಗ ಅದರ ಅಡ್ಡಪರಿಣಾಮಗಳ ಬಗ್ಗೆ ಪ್ರಶ್ನಿಸುವವರು, ಮಕ್ಕಳಿಗೆ ಶುಚಿತ್ವದ ಬಗ್ಗೆ ಪಾಠ ಹೇಳುವವರು ಕೂಡ ರಸ್ತೆಬದಿಯ ಅಶುಚಿಯಾದ ಆಹಾರವನ್ನು ಮುಲಾಜಿಲ್ಲದೆ ಬಾಯಿಗಿಳಿಸುವುದು ಸೋಜಿಗ. ಹತ್ತಾರು ಜನ ಅದನ್ನು ತಿನ್ನುತ್ತಿದ್ದಾರೆಂಬ ನಂಬಿಕೆಯೋ, ರುಚಿಯ ಚಪಲವೋ, ಜೊತೆಯಲ್ಲಿ ಇರುವವರ ಒತ್ತಾಯವೋ, "ಆಗಾಗ ಇಂತಹದ್ದನ್ನು ತಿನ್ನುತ್ತಿದ್ದರೆ ಇಮ್ಯುನಿಟಿ ಬೆಳೆಯುತ್ತದೆ" ಎನ್ನುವ ಭ್ರಮೆಯೋ, "ಜಗತ್ತಿನಾದ್ಯಂತ ಸ್ಟ್ರೀಟ್-ಫುಡ್ ತಿನ್ನುವವರಿದ್ದಾರೆ" ಎನ್ನುವ ಸಾಂಘಿಕ ಉಡಾಫೆಯ ಮನೋಭಾವವೋ - ಒಟ್ಟಿನಲ್ಲಿ ಏನೋ ಒಂದು ನೆಪದಲ್ಲಿ ಕಾಣದ ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ಇಂತಹ ಪ್ರಲೋಭನೆಗಳನ್ನು ಹತ್ತಿಕ್ಕುವುದು ಬಹಳ ಮುಖ್ಯ.

ಮುಂದುವರೆದ ದೇಶಗಳ ಪ್ರವಾಸಿ ತಾಣಗಳಲ್ಲಿ "ಸ್ಟ್ರೀಟ್-ಫುಡ್" ಎನ್ನುವುದು ದೊಡ್ಡ ಪಾತ್ರ ವಹಿಸುತ್ತದೆ ಎನ್ನುವ ಮಾತು ಸತ್ಯ. ಆದರೆ ಅಲ್ಲಿನ ವ್ಯವಸ್ಥೆ ಅದರ ಬಗ್ಗೆ ಬಹಳ ಕಠಿಣ ನಿರ್ಬಂಧಗಳನ್ನು ಹೇರಿ, ಸುರಕ್ಷತೆಯ ಬಗ್ಗೆ ಗಮನ ನೀಡಿರುತ್ತದೆ. ನಮ್ಮ ದೇಶದಲ್ಲಿ ಅಂತಹ ಕಟ್ಟುನಿಟ್ಟನ್ನು ಅಪೇಕ್ಷಿಸುವುದು ಕಷ್ಟ. ನಮ್ಮಲ್ಲಿ ರಸ್ತೆಬದಿಯ ಆಹಾರ ಮಾರಾಟ ಮಾಡುವ ಬಹುತೇಕರಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಹೀಗಾಗಿ, ಅವರ ಬಳಿ ಸುರಕ್ಷತೆಯ ಖಾತ್ರಿಯೂ ಇಲ್ಲ. ಅಲ್ಲಿ ಆಹಾರ ಸೇವಿಸುತ್ತಿರುವ ಹತ್ತಾರು ಅಪರಿಚಿತ ಮಂದಿಗೆ ಮುಂದಿನ ಕೆಲದಿನಗಳಲ್ಲಿ ಯಾವ-ಯಾವ ಆರೋಗ್ಯ ಸಮಸ್ಯೆಗಳು ಬಂದವು ಎಂದು ತಿಳಿಯುವುದು ಅಸಾಧ್ಯ. ಹೊರಗೆ ತಿನ್ನುವ ಅನಿವಾರ್ಯ ಪ್ರಸಂಗಗಳಲ್ಲಿ ಶುಚಿಯಾದ ಹೋಟೆಲಿನಲ್ಲಿ ಬಿಸಿಬಿಸಿಯಾದ, ಚೆನ್ನಾಗಿ ಬೇಯಿಸಿದ, ಹಬೆಯಾಡುತ್ತಿರುವ ಆಹಾರ ಸೇವನೆ ಸೂಕ್ತ. ಆಹಾರ-ಪಾನೀಯಗಳ ಗುಣಮಟ್ಟದಲ್ಲಿ ರಾಜಿಯಾಗುವುದು ಆರೋಗ್ಯಕ್ಕೆ ಹಾನಿಕರ.

ಆಹಾರ-ಪಾನೀಯಗಳ ಸ್ವಚ್ಛತೆಯನ್ನು ಪ್ರಜ್ಞಾಪೂರ್ವಕವಾಗಿ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಪ್ರಸ್ತುತ ಸಂಕೀರ್ಣ ಸಮಾಜದಲ್ಲಿ ಜನರು ಹೊಸ ಬಗೆಯ ಜೀವನಶೈಲಿಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಹೀಗಾಗಿ, ನಮ್ಮ ವೈಯಕ್ತಿಕ ಮತ್ತು ಸಾಂಘಿಕ ಬದುಕಿನ ವಾತಾವರಣಗಳು ಸ್ವಚ್ಛವಾಗಿರುವುದು ಪ್ರಾಥಮಿಕ ಅಗತ್ಯ. ಈ ಮುನ್ನ ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದ ಅನೇಕರು ಈಗ ದಿನನಿತ್ಯದ ಊಟವನ್ನೂ ಹೊರಗಿನಿಂದ ತರಿಸಿಕೊಂಡು ಸೇವಿಸುತ್ತಿದ್ದಾರೆ. ಈ ರೀತಿಯ ಆಹಾರವನ್ನು ಸಿದ್ಧಪಡಿಸುವ ಸ್ಥಳಗಳು, ಅದನ್ನು ತಯಾರಿಸುವ ಬಾಣಸಿಗರು, ಅದನ್ನು ಪ್ಯಾಕ್ ಮಾಡುವ ಕೆಲಸಗಾರ, ಅದನ್ನು ಹೊತ್ತು ತಂದು ನಮ್ಮ ಮನೆಗೆ ತಲುಪಿಸುವ ವ್ಯಕ್ತಿ – ಇವರೆಲ್ಲರ ಸ್ವಚ್ಛತೆಯ ಮಟ್ಟ ಸಮಂಜಸವಾಗಿದ್ದರೆ ಮಾತ್ರ ಅಂತಹ ಆಹಾರ-ಪಾನೀಯಗಳು ನಮ್ಮ ಆರೋಗ್ಯವನ್ನು ಕಾಯಬಲ್ಲವು. ಇಲ್ಲವಾದರೆ, ಅವೇ ಅನಾರೋಗ್ಯದ ಕಾರಣವಾಗುತ್ತವೆ. ಈ ಪ್ರತಿಯೊಂದು ಹಂತವನ್ನೂ, ಪ್ರತಿದಿನವೂ ಪರೀಕ್ಷಿಸುವ ಸಾಧ್ಯತೆಗಳು ಇರುವುದಿಲ್ಲ. ಹೀಗಾಗಿ, ಇಡೀ ಸಮಾಜವೇ ತನ್ನ ನೈರ್ಮಲ್ಯದ ಮಟ್ಟವನ್ನು ಸಂದೇಹಕ್ಕೆ ಆಸ್ಪದವಿಲ್ಲದಂತೆ ಏರಿಸಿಕೊಳ್ಳಬೇಕು. ಆಹಾರ-ಪಾನೀಯಗಳಲ್ಲಿ ಶುಚಿಯನ್ನು ಸಾಧಿಸುವುದು ಈಗ ವೈಯಕ್ತಿಕ ಮಟ್ಟವನ್ನು ಮೀರಿ, ಸಾಮಾಜಿಕ ಬಾಧ್ಯತೆಯ ಭಾಗವಾಗಿದೆ. ಈ ಸ್ಥಿತ್ಯಂತರ ಸುಲಭವಲ್ಲ ಎನ್ನುವ ಎಚ್ಚರ ಎಲ್ಲರಿಗೂ ಇರಬೇಕು.  

-------------------

ದಿನಾಂಕ 22/4/2025 ರ ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/food-water-hygiene-health-safety-clean-eating-habits-foodborne-illness-prevention-3255228


 

ಮಾನವ ಶರೀರದ ಗಣಿತ ವಿಸ್ಮಯಗಳು

 

ಡಾ. ಕಿರಣ್ ವಿ.ಎಸ್.

ವೈದ್ಯರು

 

ಕಳೆದ 21 ತಿಂಗಳುಗಳಿಂದ ಮಾನವ ಶರೀರದ ವಿವಿಧ ಅಂಗಗಳ ಗಣಿತೀಯ ಮಾಹಿತಿಗಳನ್ನು ನೋಡಿದ್ದೇವೆ. ಇದು ಈ ಸರಣಿಯ ಅಂತಿಮ ಲೇಖನ. ಇದು ಮಾನವ ದೇಹದ ಕೆಲ ವಿಸ್ಮಯಗಳನ್ನು ಗಣಿತದ ಪರಿಭಾಷೆಯಲ್ಲಿ ಅರಿಯುವ ಪ್ರಯತ್ನ.

 

ಗಣಿತದಲ್ಲಿ ಸ್ವರ್ಣಾನುಪಾತ (Golden Ratio) ಎನ್ನುವುದೊಂದಿದೆ. ಗ್ರೀಕ್ ಅಕ್ಷರಮಾಲೆಯಲ್ಲಿ  ಫೈ (φ) ಎಂದು ಕರೆಯಲಾಗುವ ಇದರ ಮೌಲ್ಯ 1.618. ಇದರ ವೈಶಿಷ್ಟ್ಯ ದಂಗುಬಡಿಸುವಂತಹದ್ದು. ಜೀವಸೃಷ್ಟಿಯ ಅನೇಕಾನೇಕ ಅನುಪಾತಗಳು ಇದಕ್ಕೆ ಸಮನಾಗುತ್ತವೆ. ನಮ್ಮ ದೇಹದ ಬಹಳಷ್ಟು ಅನುಪಾತಗಳು ಇದೇ ಆಗಿವೆ. ಉದಾಹರಣೆಗೆ, ದೇಹದ ಒಟ್ಟು ಉದ್ದವನ್ನು ತಲೆಯಿಂದ ಹೊಕ್ಕುಳ ನಡುವಿನ ಉದ್ದದಿಂದ ಭಾಗಿಸಿದರೆ ದೊರೆಯುವುದು 1.618; ಮೊಳ ಅಳೆಯುವಷ್ಟು ಕೈನ ಭಾಗದ ಉದ್ದವನ್ನು ಹಸ್ತದ ಉದ್ದದಿಂದ ಭಾಗಿಸಿದರೂ ಇದೇ ಫಲಿತಾಂಶ. ಮೂಗಿನ ತುದಿಯಿಂದ ಆರಂಭಿಸಿ ಗಲ್ಲದ ತುದಿಯವರೆಗಿನ ಅಳತೆಯನ್ನು ಹುಬ್ಬಿನಿಂದ ಮೂಗಿನ ತುದಿಯವರೆಗಿನ ಉದ್ದದಿಂದ ಭಾಗಿಸಿದರೆ ಮತ್ತೆ ಇದೇ ಮೌಲ್ಯ ಕಾಣುತ್ತದೆ. ಸೌಂದರ್ಯದ ಪರಿಭಾಷೆ ಈ φ ಮೌಲ್ಯದ ಮೇಲೆ ನಿಂತಿದೆ ಎಂದು ಅನೇಕರ ಆಂಬೋಣ. ಇಡೀ ಸೃಷ್ಟಿ ರಚನೆಯ ಹಿಂದೆ ಈ ಮೌಲ್ಯವಿದೆ ಎಂದು ಭಾವಿಸುವವರೂ ಇದ್ದಾರೆ. ಶಂಖುಹುಳುವಿನ ಸುರಳಿಗಳಿಂದ ಹಿಡಿದು ಬೃಹತ್ ಗಾತ್ರದ ತಿಮಿಂಗಲಗಳ ರಚನಾ ಶಿಲ್ಪ ಈ ಮೌಲ್ಯವನ್ನೇ ಸಾರುತ್ತದೆ. ಅಷ್ಟೇ ಏಕೆ; ಮರಗಿಡಗಳ ಹಲವಾರು ಅನುಪಾತಗಳೂ ಇದಕ್ಕೇ ಸಮನಾಗುತ್ತವೆ. ಇನ್ನು ಮಹಾಸೃಷ್ಟಿಯ ಸಣ್ಣ ಭಾಗವಾದ ನಮ್ಮ ದೇಹ ಇದೇ ಅನುಪಾತವನ್ನು ಪಾಲಿಸುವುದು ಅಚ್ಚರಿಯಲ್ಲ. ಈಚೆಗೆ ಈ ಅನುಪಾತವನ್ನು ಸೌಂದರ್ಯ ಮೀಮಾಂಸೆಯಲ್ಲೂ ಪ್ರಯೋಗಕ್ಕೆ ತರಲಾಗಿದೆ. ಸುರೂಪಿ ಶಸ್ತ್ರಚಿಕಿತ್ಸಕರು ಈ ಅನುಪಾತವನ್ನು ಹಿಡಿದು ವ್ಯಕ್ತಿಗಳ ಹಣೆ, ಹುಬ್ಬು, ಮೂಗು, ಗಲ್ಲ, ದವಡೆ ಮೊದಲಾದ ಜಾಗಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತಿದ್ದಿ ತೀಡಿ ಎಂತಹವರನ್ನು ಬೇಕಾದರೂ ಜಗತ್ತಿನ ಕಣ್ಣಿಗೆ ಸುಂದರರನ್ನಾಗಿ ಮಾಡಬಲ್ಲವರಾಗಿದ್ದಾರೆ. ಅರಿಯದ ಜನರು ಗೊಡ್ಡು ಎಂದು ಭಾವಿಸುವ ಗಣಿತ ಈಗ ಸೃಷ್ಟಿ ಸೌಂದರ್ಯದ ಅಡಿಪಾಯವಾಗಿದೆ.

 

ಮಿದುಳಿನ ಬಲವನ್ನು ಕಂಡದ್ದಾಗಿದೆ. ಮಿದುಳನ್ನು ಕಾಪಾಡುವ ಸಲುವಾಗಿಯೇ ನಮ್ಮ ಇಡೀ ಶರೀರ ಸೃಷ್ಟಿಯಾಗಿದೆ ಎಂದು ಬಹುಕಾಲ ನಂಬಲಾಗಿತ್ತು. ಮಿದುಳಿನಿಂದ ನರಮಂಡಲಕ್ಕೆ ಹೊರ ಚಿಮ್ಮುವ ಸಂಕೇತಗಳು ಗಂಟೆಗೆ ಸುಮಾರು 280 ಕಿಲೋಮೀಟರ್ ವೇಗದಲ್ಲಿ ಸಾಗುತ್ತವೆ. ಮಿದುಳಿನಲ್ಲಿ ಉತ್ಪತ್ತಿಯಾಗುವ ವಿದ್ಯುದಾವೇಶದಿಂದ ಸುಮಾರು 10 ವ್ಯಾಟ್ ಬಲ್ಬನ್ನು ಬೆಳಗಬಹುದು. ಮಿದುಳಿನ ನೆನಪಿನ ಸಾಮರ್ಥ್ಯ ಅಪಾರ. ವಿಜ್ಞಾನಿಗಳು ಇದನ್ನು ಸುಮಾರು 1000 ಟೆರಬೈಟ್ ಎಂದು ಲೆಕ್ಕ ಹಾಕಿದ್ದಾರೆ. ಅಂದರೆ ಮಿದುಳಿನ ಪ್ರತಿಯೊಂದು ಕೋಶವೂ ನಮ್ಮ ಜ್ಞಾನಗಂಗೋತ್ರಿ ಗಾತ್ರದ ಪುಸ್ತಕವನ್ನು ಹಿಡಿದಿಡುವಷ್ಟು ನೆನಪು ಹೊಂದಿದೆ. ಇಷ್ಟಾಗಿಯೂ, ಕಣ್ಣುಗಳು ಸ್ಥಿರವಾಗಿ ನಿಂತು ನೋಡಿದ ಚಿತ್ರಗಳನ್ನು ಮಾತ್ರ ಮಿದುಳು ಗ್ರಹಿಸಬಲ್ಲದು. ಕಣ್ಣುಗಳು ಒಂದೆಡೆಯಿಂದ ಮತ್ತೊಂದೆಡೆಗೆ ನೋಡುವ ವೇಳೆ ಕ್ಷಿಪ್ರ ಸಂಚಾರದಲ್ಲಿರುವಾಗ ಕಾಣುವ ಯಾವ ಚಿತ್ರವೂ ಮಿದುಳಿಗೆ ಗ್ರಾಹ್ಯವಾಗುವುದಿಲ್ಲ. ಸಾಮರ್ಥ್ಯ ಎಷ್ಟೇ ಇದ್ದರೂ ಪ್ರತಿಯೊಂದಕ್ಕೂ ಮಿತಿಗಳಿವೆ ಎನ್ನುವುದು ಮಿದುಳು ನಮಗೆ ಕಲಿಸುವ ಪಾಠ.

 

ನಮ್ಮ ದೇಹದ ಅತ್ಯಂತ ವಿಸ್ಮಯಕಾರಿ ಅಂಗ ಯಕೃತ್. ಅದರ ಎಷ್ಟೋ ಕೆಲಸಗಳು ನಮಗಿನ್ನೂ ತಿಳಿದೇ ಇಲ್ಲ! ಸದ್ಯಕ್ಕೆ ಯಕೃತ್ ಮಾಡಬಲ್ಲ ಸುಮಾರು 500 ಕೆಲಸಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಇಷ್ಟೇ ಸಂಖ್ಯೆಯ ಇನ್ನಷ್ಟು ಕೆಲಸಗಳನ್ನು ಅದು ಮಾಡುತ್ತಿದೆ ಎಂದು ಅಂದಾಜು. ಆದರೆ ಅದನ್ನು ಪತ್ತೆ ಮಾಡುವಷ್ಟು ನಮ್ಮ ತಂತ್ರಜ್ಞಾನ ಬೆಳೆದಿಲ್ಲ. ದೇಹದ ಕೌತುಕಗಳು ನಮ್ಮ ಪ್ರಸ್ತುತ ಜ್ಞಾನದ ಪರಿಧಿಗಿಂತ ತುಂಬಾ ವಿಸ್ತಾರವಾಗಿವೆ.  

 

ಶರೀರ ಎಷ್ಟೇ ಸಂಕೀರ್ಣ ಎಂದರೂ, ಶರೀರದ ಎಲ್ಲ ಭಾಗಗಳೂ ಬದುಕಲು ಅತ್ಯಗತ್ಯ ಎಂದೇನಿಲ್ಲ. ಕೆಲ ಅಂಗಗಳು ಬಹಳ ಮುಖ್ಯ – ಉದಾಹರಣೆಗೆ ಮಿದುಳು, ಹೃದಯ, ಯಕೃತ್ - ಇವು ಇಲ್ಲದಿದ್ದರೆ ಜೀವಿಸುವುದು ಸಾಧ್ಯವಿಲ್ಲ. ಆದರೆ ಜಠರವಿಲ್ಲದೆ ಜೀವನ ಸಾಧ್ಯ. ಅಂತೆಯೇ, ಗುಲ್ಮ, ಕಿಬ್ಬೊಟ್ಟೆಯ ಸಾಕಷ್ಟು ಅಂಗಗಳು, ಒಂದು ಶ್ವಾಸಕೋಶ, ಒಂದು ಮೂತ್ರಪಿಂಡ, ಯಕೃತ್ತಿನ ಮುಕ್ಕಾಲು ಭಾಗ, ಕರುಳಿನ ಮುಕ್ಕಾಲು ಭಾಗಗಳು ಇಲ್ಲದಿದ್ದರೂ ಜೀವಂತ ಇರಲು ಸಾಧ್ಯ. ಆದರೆ, ಅಂತಹ ಜೀವನದ ಆರೋಗ್ಯ ಸಮಸ್ಯೆಗಳು ಬಹಳ ಹೆಚ್ಚು.

 

ದೇಹದ ಅತ್ಯಂತ ವೇಗದ ಕ್ರಿಯೆ ಸೀನುವುದು – ಗಂಟೆಗೆ ಸುಮಾರು 160 ಕಿಲೋಮೀಟರ್ ವೇಗದಲ್ಲಿ ಸೀನು ಸಂಚರಿಸುತ್ತದೆ. ಕೆಮ್ಮಿನ ವೇಗ ಗಂಟೆಗೆ ಸುಮಾರು 95 ಕಿಲೊಮೀಟರ್ ಇರುತ್ತದೆ. ಬದುಕಿನ ಉದ್ದಕ್ಕೂ ನಾವು ಉತ್ಪಾದಿಸುವ ಎಂಜಲು ಸುಮಾರು ಎರಡು ಈಜುಕೊಳಗಳನ್ನು ಭರ್ತಿ ಮಾಡಬಲ್ಲದು! ಸ್ತ್ರೀಯರ ಋತುಚಕ್ರದ ವೇಳೆ ಹೊರಬರುವ ಅಂಡಾಣು ಮಾನವ ಶರೀರದ ಅತ್ಯಂತ ದೊಡ್ಡ ಜೀವಕೋಶ. ಅಂತೆಯೇ, ಪುರುಷರಲ್ಲಿನ ವೀರ್ಯಾಣು ದೇಹದ ಅತಿ ಚಿಕ್ಕ ಜೀವಕೋಶ. ಅಂದರೆ, ಹೊಸ ಜೀವ ಉತ್ಪತ್ತಿ ಆಗಲು ದೇಹದ ಅತ್ಯಂತ ದೊಡ್ದಗಾತ್ರದ ಕೋಶ ಅತ್ಯಂತ ಚಿಕ್ಕ ಗಾತ್ರದ ಕೋಶದ ಜೊತೆ ಬೆರೆಯಬೇಕು. ಹೀಗೆ ಬೆರೆತು ತಯಾರಾದ ಕೋಶ ದೇಹ ನಿರ್ಮಾಣದ ಮೊಟ್ಟ ಮೊದಲ ಜೀವಕೋಶ. ಸುಮಾರು ಮೂವತ್ತು ನಿಮಿಷಗಳ ನಂತರ ಈ ಜೀವಕೋಶ ಎರಡಾಗಿ ಒಡೆಯುತ್ತದೆ. ಅಂದರೆ, ತನ್ನ ಜೀವಮಾನದ ಮೊದಲ 30 ನಿಮಿಷಗಳ ಕಾಲ ಮಾನವ ಏಕಕೋಶಜೀವಿಯಾಗಿ ಕಳೆಯುತ್ತಾನೆ. ಜೀವವಿಕಾಸದಲ್ಲಿ ಮೊದಲ ಏಕಕೋಶಜೀವಿಯು ಎರಡಾಗಿ ಒಡೆಯಲು ಸುಮಾರು 2 ಬಿಲಿಯನ್ ವರ್ಷಗಳಾದವು ಎಂದು ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ. ಅದೀಗ 30 ನಿಮಿಷಗಳಿಗೆ ಇಳಿದಿದೆ. ತತ್ತ್ವಜ್ಞಾನಿಗಳಿಗೆ ಒಳ್ಳೆಯ ಲೆಕ್ಕಾಚಾರವನ್ನು ಒದಗಿಸಬಲ್ಲ ಸರಕು ಇದು. ಒಂದೆಡೆ ಇಂತಹ ಕ್ಲಿಷ್ಟಕರ ಗಣಿತದ ತರ್ಕವಾದರೆ, ಮತ್ತೊಂದೆಡೆ “ಆರೋಗ್ಯವಂತ ವ್ಯಕ್ತಿ ದಿನಕ್ಕೆ ಸರಾಸರಿ 14 ಬಾರಿ ಹೂಸು ಬಿಡುತ್ತಾನೆ” ಎಂಬುದನ್ನೂ ಸಂಶೋಧಕರು ಲೆಕ್ಕ ಹಾಕಿದ್ದಾರೆ! 

 

ಕೇವಲ ತಿನ್ನುವುದಕ್ಕಾಗಿಯೇ ಬದುಕುವ ಪೀಳಿಗೆ ಇಂದು ನಮ್ಮ ಮುಂದಿದೆ. ಆಹಾರದ ಯಾವುದೇ ಖಾತ್ರಿಯಿಲ್ಲದೆ ಲಕ್ಷಾಂತರ ವರ್ಷ ಬದುಕಿದ ಪ್ರಾಣಿಗಳು ಇಂದು ಆಹಾರ ಖಾತ್ರಿಯನ್ನು ಮೂಲಭೂತ ಹಕ್ಕನ್ನಾಗಿ ಪರಿವರ್ತಿಸುವಷ್ಟು ನಾಗರಿಕತೆ ಬೆಳೆದಿದೆ. ಆದರೆ ನಮ್ಮ ದೇಹಕ್ಕೆ ಇದ್ಯಾವುದೂ ತಿಳಿದೇ ಇಲ್ಲ. ಅದಿನ್ನೂ ಜೀವವಿಕಾಸ ತನ್ನನ್ನು ಹೇಗೆ ನಿರ್ದೇಶಿಸುತ್ತಿದೆಯೋ ಹಾಗೆಯೇ ಉಳಿದಿದೆ. ಹೀಗಾಗಿ ಆಹಾರ ಸಿಕ್ಕಾಗಲೆಲ್ಲ ತಿನ್ನುವ ವಾಂಛೆ ನೀಡುತ್ತದೆ. ಆಹಾರ ಸೇವಿಸಿದ ಮೇಲೆ ಶರೀರದ ಶಕ್ತಿಯನ್ನು ಅದರ ಪಚನಕ್ಕೆ ವ್ಯಯಿಸುತ್ತದೆ. ಆ ಸಮಯದಲ್ಲಿ ಮಿದುಳು ಕೂಡ ಸಹಕಾರ ನೀಡಬೇಕಾದ್ದೇ. ಹಾಗಾಗಿ, ಗಡದ್ದಾಗಿ ತಿಂದ ಮೇಲೆ ನಿದ್ರೆ ಬರುತ್ತದೆ; ಕಣ್ಣು ಮಂಜಾಗುತ್ತದೆ; ತರ್ಕ ಕಡಿಮೆಯಾಗುತ್ತದೆ; ಮೂಗಿನ ವಾಸನೆ ಗ್ರಹಿಸುವ ಶಕ್ತಿಯೂ ಇಳಿಮುಖವಾಗುತ್ತದೆ! ಮಾನವರ ಮೂಗಿಗೆ ಸುಮಾರು 50,000 ವಿವಿಧ ವಾಸನೆಗಳನ್ನು ಗುರುತಿಸುವ ಶಕ್ತಿಯನ್ನು ನಿಸರ್ಗ ನೀಡಿದ್ದರೂ, ನಾವು ಇಂದು ಅದರ ಶೇಕಡಾ 1 ಭಾಗವನ್ನೂ ಬಳಸುವುದಿಲ್ಲ.

 

ನಮ್ಮ ದೇಹದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಕಾಣುವುದು ರಕ್ತದಲ್ಲಿನ ಕೆಂಪು ರಕ್ತಕಣಗಳು. ಇವುಗಳು ಜೀವಂತ ಕೋಶಗಳಲ್ಲ. ಅಂದರೆ ದೇಹದ ಸಾಕಷ್ಟು ಭಾಗ ನಿರ್ಜೀವ! ಪ್ರತಿಯೊಂದು ಕೆಂಪು ರಕ್ತಕಣದಲ್ಲೂ ಕಬ್ಬಿಣದ ಅಂಶವಿದೆ. ಇಡೀ ಶರೀರದ ಕಬ್ಬಿಣವನ್ನು ಪ್ರತ್ಯೇಕಿಸಿದರೆ ಎಂಟು ಸೆಂಟಿಮೀಟರ್ ಉದ್ದದ ಮೊಳೆ ತಯಾರಿಸಬಹುದು ಎಂದು ಹೇಳಲಾಗಿದೆ. ಜಗತ್ತಿನ ಮಹಾಶಕ್ತಿಗೆ ಹೋಲಿಸಿದರೆ ನಮ್ಮ ರಕ್ತದ ಸಾಮರ್ಥ್ಯ ಮೂರಿಂಚು ಮೊಳೆ. ಶರೀರದ ಉಷ್ಣತೆ ಅರ್ಧ ಗಂಟೆಯಲ್ಲಿ ಸುಮಾರು ಎರಡು ಲೀಟರ್ ನೀರನ್ನು ಕುದಿಸಬಲ್ಲದು.

 

ಚತುಷ್ಪಾದಿ ಪ್ರಾಣಿಯಾಗಿ ಆರಂಭವಾದ ಮನುಷ್ಯ ದ್ವಿಪಾದಿಯಾಗಿ ಬದಲಾದದ್ದು ನಾವು ಇಂದಿಗೂ ಜೀವಂತ ಇರುವ ಮುಖ್ಯ ಕಾರಣ. ಇಲ್ಲವಾದರೆ ಮಾನವ ಪ್ರಭೇದ ಬಲಶಾಲಿ ಮೃಗಗಳ ಕೈಗೆ ಸಿಕ್ಕಿ ಎಂದೋ ನಶಿಸಿ ಹೋಗುತ್ತಿತ್ತು. ದ್ವಿಪಾದಿ ದೇಹದ ಸಂತುಲನವನ್ನು ಕಾಯ್ದುಕೊಳ್ಳಲು ಬಹಳ ಶ್ರಮವಾಗುತ್ತದೆ. ಒಂದು ಹೆಜ್ಜೆ ಮುಂದಿಡಲು ಸುಮಾರು 200 ಸ್ನಾಯುಗಳು ಸಹಕರಿಸಬೇಕು. ಸುಮಾರು 25 ಟ್ರಿಲಿಯನ್ ಕೋಶಗಳ ಸಂಗಮವಾದ ವಯಸ್ಕರ ದೇಹದಲ್ಲಿ ಪ್ರತಿ ನಿಮಿಷ 30 ಕೋಟಿ ಕೋಶಗಳು ನಶಿಸಿದರೆ, ಪ್ರತಿ ನಿಮಿಷ 21 ಕೋಟಿ ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತವೆ. ಹೀಗೆ ವಯಸ್ಸಾಗುತ್ತಾ ಹೋದಂತೆ ದೇಹದಲ್ಲಿ ಉಳಿಯುವ ಕೋಶಗಳ ಸಂಖ್ಯೆ ಕಡಿಮೆಯಾಗುತ್ತದೆ. ಮನುಷ್ಯ ಶರೀರವನ್ನು ಸುಟ್ಟರೆ ಸುಮಾರು ಮೂರರಿಂದ ನಾಲ್ಕು ಕಿಲೋಗ್ರಾಂ ಬೂದಿ ಆಗುತ್ತದೆ ಎನ್ನಲಾಗುತ್ತದೆ. ಬಹುತೇಕ ಮಾನವ ಶಿಶುಗಳು ಹುಟ್ಟುವ ವೇಳೆ ಇಷ್ಟೇ ತೂಕ ಇರುತ್ತವೆ. ಅಲ್ಲಿಗೆ, ಜಗತ್ತಿಗೆ ನಾವು ತಂದದ್ದು ಎಷ್ಟೋ ಬಿಟ್ಟು ಹೋದದ್ದೂ ಅಷ್ಟೇ ಎಂದಾಯಿತು.  

 

ದೇಹದ ಗಣಿತದ ಸೋಜಿಗಗಳಿಗೆ ಅಂತ್ಯವೇ ಇಲ್ಲ!

------------------------

ಕುತೂಹಲಿ ಮಾರ್ಚ್ 2025 ರಲ್ಲಿ ಪ್ರಕಟವಾದ ಅಂತಿಮ ಲೇಖನ. ಸಂಚಿಕೆಯನ್ನು ಓದಲು ಕೊಂಡಿ: https://www.flipbookpdf.net/web/site/2dfdc43cec3b6736075d4ea52eb66edc101d369bFBP32051436.pdf.html?fbclid=IwY2xjawLGSuhleHRuA2FlbQIxMABicmlkETAxR3BBNVdvd09jeHJ0ZDlsAR7KAQCFRrJzjEDmrLcafnHdguWbhhq4uZaFrqrnh1a52aK8E6jMSuzlPitLig_aem_3Gzo8YvlzZw2aBzR3SLKTg


 

ಹೃದ್ರೋಗ ತಪಾಸಣೆ ಮತ್ತು ಚಿಕಿತ್ಸೆ– ಭಾಗ 3 – ಹೃದಯಾಘಾತದ ಚಿಕಿತ್ಸೆಗಳು

 

ಡಾ. ಶ್ರೀಕಾಂತ್ ಕೆ. ವಿ.

ಹೃದ್ರೋಗ ಮತ್ತು ಹೃದಯ ಕಸಿ ತಜ್ಞರು

 

ರೋನರಿ ಅಥಿರೋಸ್ಕ್ಲಿರೋಸಿಸ್ ಚಿಕಿತ್ಸೆಯ ಪ್ರಮುಖ ಉದ್ದೇಶಗಳು – ಹೃದಯದ ಮಾಂಸಖಂಡಗಳಿಗೆ ರಕ್ತದ ಹರಿವಿನ ಕೊರತೆಯನ್ನು ನೀಗಿಸುವುದು ಮತ್ತು ಹೃದಯಾಘಾತದಿಂದ ಆಗಬಹುದಾದ ಸಾವು-ನೋವು ತಡೆಗಟ್ಟುವುದು. ಇದಕ್ಕೆ ಔಷಧಗಳು, ಆಂಜಿಯೋಪ್ಲಾಸ್ಟಿ ಮೂಲಕ ಸ್ಟೆಂಟ್ ಸೇರ್ಪಡಿಕೆ, ಹಾಗೂ ಶಸ್ತ್ರಚಿಕಿತ್ಸೆ ಎಂಬ ಮೂರು ಮಾರ್ಗಗಳಿವೆ. ರೋಗಿಗೆ ಯಾವ ಚಿಕಿತ್ಸಾಮಾರ್ಗ ಸೂಕ್ತ ಎನ್ನುವುದನ್ನು ಹೃದ್ರೋಗತಜ್ಞರು ನಿರ್ಧರಿಸುತ್ತಾರೆ.

 

ಔಷಧಗಳು ಕರೋನರಿ ಅಥಿರೋಸ್ಕ್ಲಿರೋಸಿಸ್ ಕಾಯಿಲೆಯನ್ನು ನೇರವಾಗಿ ನಿವಾರಿಸುವುದಿಲ್ಲ; ಆದರೆ ಪರೋಕ್ಷವಾಗಿ ಸಹಕರಿಸುತ್ತವೆ. ರಕ್ತನಾಳಗಳಲ್ಲಿನ ಜಿಡ್ಡಿನ ಅಂಶ ಆಂತರಿಕ ವ್ಯಾಸವನ್ನು ಕಿರಿದಾಗಿಸುತ್ತವಷ್ಟೇ? ರಕ್ತದಲ್ಲಿನ ಕೊಲೆಸ್ಟ್ರಾಲ್ ಹತೋಟಿಯಲ್ಲಿ ಇಡುವ ಔಷಧಗಳನ್ನು ನೀಡುವುದರಿಂದ ಮತ್ತಷ್ಟು ಜಿಡ್ಡಿನ ಅಂಶ ಸೇರದಂತೆ ತಡೆಯಬಹುದು. ಕಿರಿದಾದ ರಕ್ತನಾಳಗಳಲ್ಲೂ ಸರಾಗವಾಗಿ ಸಂಚರಿಸುವಂತೆ ರಕ್ತವನ್ನು ತೆಳುವಾಗಿ ಮಾಡಬಲ್ಲ ಔಷಧಗಳನ್ನು ಬಳಸಬಹುದು. ನೈಟ್ರೇಟ್ ಅಂಶ ಇರುವ ಮಾತ್ರೆಗಳು ಹೃದಯದ ರಕ್ತನಾಳಗಳನ್ನು ತಾತ್ಕಾಲಿಕವಾಗಿ ಹಿಗ್ಗಿಸಿ, ರಕ್ತದ ಹರಿವನ್ನು ಹೆಚ್ಚಿಸಿ, ಸ್ವಲ್ಪ ಸಮಯದವರೆಗೆ ಪ್ರಯೋಜನಕಾರಿಯಾಗುತ್ತವೆ. ಕೆಲವು ಔಷಧಗಳು ಹೃದಯದ ಆಕ್ಸಿಜನ್ನಿನ ಅವಶ್ಯಕತೆಯನ್ನು ಕಡಿಮೆಯಾಗಿಸಿ ಪರಿಹಾರ ನೀಡುತ್ತವೆ. ಆರಂಭಿಕ ಮಟ್ಟದ ಕರೋನರಿ ಅಥಿರೋಸ್ಕ್ಲಿರೋಸಿಸ್ ಇರುವವರು ನಿಯಮಿತ ಔಷಧ ಬಳಕೆ, ಪೋಷಕಾಂಶಯುಕ್ತ ಆಹಾರ ಸೇವನೆ, ದೈಹಿಕ ವ್ಯಾಯಾಮ, ತಂಬಾಕು ತ್ಯಜಿಸುವಿಕೆ, ಅಧಿಕ-ರಕ್ತದೊತ್ತಡ ಹಾಗೂ ಮಧುಮೇಹಗಳ ಹತೋಟಿಯಲ್ಲಿಡುವಿಕೆ, ಮತ್ತು ಸಕಾಲಿಕ ವೈದ್ಯಕೀಯ ತಪಾಸಣೆಗಳನ್ನು ಜೀವನಪರ್ಯಂತ ತಪ್ಪದೇ ಪಾಲಿಸಿದಲ್ಲಿ, ಹೃದಯ-ಸಂಬಂಧಿ ಸಾವು-ನೋವುಗಳನ್ನು ತಡೆಗಟ್ಟಬಹುದು. ಒಂದು ವೇಳೆ ಔಷಧ ಮತ್ತು ಜೀವನಶೈಲಿಯ ಬದಲಾವಣೆಗಳಿಂದ ಪರಿಹಾರ ಕಂಡುಬಾರದಿದ್ದಲ್ಲಿ, ಮುಂದಿನ ಹಂತಗಳ ಚಿಕಿತ್ಸೆ ಬೇಕಾಗುತ್ತದೆ.

 

ಆಂಜಿಯೋಗ್ರಾಮ್ ಮೊದಲಾದ ಪರೀಕ್ಷೆಗಳು ಕರೋನರಿ ರಕ್ತನಾಳಗಳ ಯಾವ ಭಾಗದಲ್ಲಿ ರಕ್ತದ ಹರಿವಿನ ಕೊರತೆಯಿದೆ ಮತ್ತು ಅದು ಎಷ್ಟು ತೀವ್ರವಾಗಿದೆ ಎಂಬ ಮಾಹಿತಿ ನೀಡುತ್ತವೆ. ಒಂದು ವೇಳೆ ರಕ್ತನಾಳಗಳು ಇಡಿಯಾಗಿ ಮುಚ್ಚಿಹೋಗಿದ್ದರೆ ರಕ್ತದ ಹರಿವು ಸಂಪೂರ್ಣವಾಗಿ ನಿಂತುಹೋಗಿ ಹೃದಯದ ಸ್ನಾಯುಗಳಿಗೆ ಶಾಶ್ವತ ಹಾನಿಯಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಯಾವ ಚಿಕಿತ್ಸೆಯೂ ಫಲಕಾರಿಯಾಗುವುದಿಲ್ಲ. ಆದರೆ ರಕ್ತನಾಳಗಳಲ್ಲಿ ರಕ್ತದ ಹರಿವು ಅಲ್ಪ-ಸ್ವಲ್ಪ ಆಗುತ್ತಿದೆ; ಹೃದಯದ ಸ್ನಾಯುಗಳಿಗೆ ಶಾಶ್ವತ ಹಾನಿ ಆಗಿಲ್ಲ ಎಂದಾದರೆ ಕೊರೋನರಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡಬಹುದು. ಈ ಪ್ರಕ್ರಿಯೆಗೆ ಮುನ್ನ ರಕ್ತವನ್ನು ತೆಳುವಾಗಿಸುವ ಮಾತ್ರೆಗಳನ್ನು ನೀಡಬೇಕು. ಆಂಜಿಯೋಗ್ರಾಮ್ ಪರೀಕ್ಷೆಯಲ್ಲಿ ರಕ್ತದ ಹರಿವಿನ ಅಡ್ಡಿ ರಕ್ತನಾಳದ ಯಾವ ಭಾಗದಲ್ಲಿ, ಶೇಕಡಾವಾರು ಎಷ್ಟು ಪ್ರಮಾಣದಲ್ಲಿ, ಎಷ್ಟು ಉದ್ದವಿದೆ; ಅದರೊಳಗಿನ ಕ್ಯಾಲ್ಸಿಯಂ ಪ್ರಮಾಣವೇನು ಎನ್ನುವ ವಿವರಗಳನ್ನು ಪಡೆಯಲಾಗುತ್ತದೆ. ರಕ್ತನಾಳದ ಮೂಲಕ ಹಾಯಿಸಿರುವ ತೂರ್ನಳಿಕೆಯ ಒಳಗೆ ಸಪೂರವಾದ, ನವಿರಾದ ತಂತಿಯನ್ನು ಅಥಿರೋಸ್ಕ್ಲಿರೋಸಿಸ್ ಆಗಿರುವ ಭಾಗದ ಮೂಲಕ ತೂರಿಸಲಾಗುತ್ತದೆ. ರಕ್ತದ ಹರಿವಿಗೆ ಅಡ್ಡಿಯಾಗಿರುವ ಭಾಗದ ಉದ್ದ ಮತ್ತು ಅಗಲಗಳಿಗೆ ಅನುಗುಣವಾಗಿ ಸರಿಯಾದ ಗಾತ್ರದ ಬಲೂನ್ ಒಂದನ್ನು ತಂತಿಯ ಮೇಲೆ ಹಾಯಿಸಿ, ಅಥಿರೋಸ್ಕ್ಲಿರೋಸಿಸ್ ಆಗಿರುವ ಭಾಗದಲ್ಲಿ ಇರಿಸಿ, ಬಲೂನನ್ನು ಹಿಗ್ಗಿಸಲಾಗುತ್ತದೆ. ಇದರಿಂದ ರಕ್ತನಾಳದಲ್ಲಿ ಕಟ್ಟಿಕೊಂಡಿದ್ದ ಕೊಬ್ಬಿನ ಅಂಶ ಚದುರಿಹೋಗಿ, ಒಳವ್ಯಾಸ ಹೆಚ್ಚಾಗಿ, ರಕ್ತದ ಹರಿವು ಉತ್ತಮಗೊಳ್ಳುತ್ತದೆ. ಆದರೆ ಬಲೂನನ್ನು ತೆಗೆದ ನಂತರ ರಕ್ತನಾಳ ಮತ್ತೊಮ್ಮೆ ಸಂಕುಚಿಸಬಹುದು. ಇದನ್ನು ತಡೆಯಲು ಆ ಭಾಗದಲ್ಲಿ ನವಿರಾದ ಲೋಹದ ಜಾಲರಿಯನ್ನು ಬಲೂನಿನ ಸಹಾಯದಿಂದ ಕೂರಿಸಬಹುದು. ಇದನ್ನು ಸ್ಟೆಂಟ್ ಎನ್ನುತ್ತಾರೆ. ಅಥಿರೋಸ್ಕ್ಲಿರೋಸಿಸ್ ಭಾಗದಲ್ಲಿರುವ ಅಧಿಕ ಕ್ಯಾಲ್ಸಿಯಂ ಮತ್ತು ಹೆಪ್ಪುಗಟ್ಟಿದ ರಕ್ತವನ್ನು ಈಗ ಲಭ್ಯವಿರುವ ಅತ್ಯಾಧುನಿಕ ಸಲಕರಣೆಗಳ ನೆರವಿನಿಂದ ನಿವಾರಿಸಿ, ಸ್ಟೆಂಟ್ ಕೂರಿಸಬಹುದು. ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಪ್ರಜ್ಞೆ ತಪ್ಪಿಸುವಂತಹ ಅರಿವಳಿಕೆ ಬೇಕಿಲ್ಲ; ಚಿಕಿತ್ಸೆಯ ಮರುದಿನ ರೋಗಿಯನ್ನು ಮನೆಗೆ ಕಳುಹಿಸಲಾಗುತ್ತದೆ; ವಾರದೊಳಗೆ ರೋಗಿಯು ತನ್ನ ದೈನಂದಿನ ಕಾರ್ಯಗಳಲ್ಲಿ ತೊಡಗಬಹುದು.

 

ರೋನರಿ ರಕ್ತನಾಳಗಳ ಕೆಲವು ನಾಜೂಕಾದ ಭಾಗಗಳಲ್ಲಿ ಇರಬಹುದಾದ ಅಥಿರೋಸ್ಕ್ಲಿರೋಸಿಸ್ಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಸಾಧ್ಯವಾಗುವುದಿಲ್ಲ. ಆಗ ಪ್ರಜ್ಞೆ ತಪ್ಪಿಸುವಂತಹ ಅರಿವಳಿಕೆ ಬಳಸಿ ಮಾಡುವ ಬೈಪಾಸ್ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ರಕ್ತನಾಳದಲ್ಲಿ ಅಡ್ಡಿ ಇರುವ ಭಾಗದ ಹಿಂದೆ ಮತ್ತು ಮುಂದೆ ಇರುವ ಆರೋಗ್ಯಕರ ಭಾಗಗಳನ್ನು ಬೇರೊಂದು ರಕ್ತನಾಳ ಬಳಸಿ ಪರಸ್ಪರ ಜೋಡಿಸಬಹುದು. ಹೀಗೆ ಜೋಡಿಸಲು ರಕ್ತನಾಳದ ಗಾತ್ರದ ಆವಶ್ಯಕತೆಗೆ ಅನುಗುಣವಾಗಿ ಎದೆಯಲ್ಲಿ, ಕೈಯಲ್ಲಿ, ಅಥವಾ ಕಾಲಿನಲ್ಲಿರುವ ಕೆಲವು ಆರೋಗ್ಯವಂತ ಧಮನಿಗಳನ್ನು ಬಳಸಬಹುದು. ಈ ಶಸ್ತ್ರಚಿಕಿತ್ಸೆಯ ವೇಳೆ ಹೃದಯದಲ್ಲಿ ಬೇರಾವುದೇ ಸಮಸ್ಯೆ ಇದ್ದರೂ ಸರಿಪಡಿಸಬಹುದು; ಐದರಿಂದ ಏಳು ದಿನಗಳ ನಂತರ ರೋಗಿಯ ಬಿಡುಗಡೆ; ನಾಲ್ಕಾರು ವಾರಗಳಲ್ಲಿ ತಮ್ಮ ಕೆಲಸಗಳಲ್ಲಿ ತೊಡಗಬಹುದು. ಇತ್ತೀಚೆಗೆ ವಿಶೇಷ ದುರ್ಬೀನುಗಳನ್ನು ಬಳಸಿ ರೊಬೊಟಿಕ್ ಯಂತ್ರಗಳ ನೆರವಿನಿಂದ ಮಾಡುವ ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ರೋಗಿಗಳು ಮತ್ತೂ ಶೀಘ್ರವಾಗಿ ಗುಣಮುಖರಾಗುತ್ತಿದ್ದಾರೆ.

 

ಆಂಜಿಯೋಪ್ಲಾಸ್ಟಿ ಮತ್ತು ಬೈಪಾಸ್ ಶಸ್ತ್ರಚಿಕಿತ್ಸೆಗಳು ಎಷ್ಟೇ ಸುರಕ್ಷಿತ ಹಾಗೂ ಸುಲಭ ಲಭ್ಯವಿದ್ದರೂ, ರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ಹೃದಯಾಘಾತವಾಗದಂತೆ ತಡೆಗಟ್ಟುವುದೇ ಜಾಣತನ.

-------------------

ದಿನಾಂಕ 01/04/2025 ರ ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/stent-for-heart-coronary-angioplasty-and-stents-3226467