ಭಾನುವಾರ, ಜುಲೈ 10, 2022

 

ಜೀವನಶೈಲಿ ಮತ್ತು ಆರೋಗ್ಯ

ಡಾ. ಕಿರಣ್ ವಿ.ಎಸ್.

ವೈದ್ಯರು

ಆರೋಗ್ಯವೆಂದರೆ ಕೇವಲ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದಲ್ಲ! ವಿಶ್ವ ಆರೋಗ್ಯ ಸಂಸ್ಥೆ “ಆರೋಗ್ಯವೆಂಬುದು ಸಂಪೂರ್ಣ ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಯೋಗಕ್ಷೇಮದ ಸ್ಥಿತಿ; ಅದು ಕೇವಲ ಕಾಯಿಲೆಯ ಅಥವಾ ಶರೀರ ದೌರ್ಬಲ್ಯದ ಅನುಪಸ್ಥಿತಿ ಅಲ್ಲ” ಎಂದು ವ್ಯಾಖ್ಯಾನ ಮಾಡಿದೆ. ಆರೋಗ್ಯವಂತ ವ್ಯಕ್ತಿ ತನಗಷ್ಟೇ ಅಲ್ಲದೆ, ತನ್ನ ಕುಟುಂಬಕ್ಕೆ ಮತ್ತು ತಾನು ವಾಸಿಸುವ ಸಮಾಜಕ್ಕೂ ಆಸ್ತಿ. ಅಲ್ಪಾವಧಿ ಮತ್ತು ದೀರ್ಘಾವಧಿ ಆರೋಗ್ಯ ನಿರ್ವಹಣೆಯಲ್ಲಿ ಜೀವನಶೈಲಿಯ ಪಾತ್ರದ ಬಗ್ಗೆ ಮಹತ್ವದ ಅಧ್ಯಯನಗಳು ನಡೆಯುತ್ತಿವೆ.

ಜೀವನಶೈಲಿಯ ಪರಿಣಾಮ ಆರೋಗ್ಯದ ಮೇಲೆ ಪೂರಕವಾಗಿಯೂ ಆಗಬಹುದು; ವ್ಯತಿರಿಕ್ತವಾಗಿಯೂ ಆಗಬಹುದು. ಸಾವಿರಾರು ಅಧ್ಯಯನಗಳಲ್ಲಿ ಲಕ್ಷಾಂತರ ಜನರ ಜೀವನಶೈಲಿಯನ್ನು ವಿವೇಚಿಸಿದ ನಂತರ ವಿಜ್ಞಾನಿಗಳು ಉತ್ತಮ ಆರೋಗ್ಯ ನಿರ್ವಹಣೆಗೆ ಆರು ಸೂತ್ರಗಳನ್ನು ಸೂಚಿಸಿದ್ದಾರೆ. ಇವನ್ನು ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳುವುದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

1.      ನಿಯಮಿತ ವ್ಯಾಯಾಮ: ಜೀವಿಗಳ ದೇಹವೆಂಬುದು ನಿಸರ್ಗ ವಿನ್ಯಾಸಗೊಳಿಸಿದ ಯಂತ್ರ. ಕೃತಕ ಯಂತ್ರಗಳ ಸಮಯಾನುಸಾರ ನಿರ್ವಹಣೆ ಹೇಗೆ ಮುಖ್ಯವೋ, ಶರೀರವೆಂಬ ಸಹಜ ಯಂತ್ರದ ನಿರ್ವಹಣೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ವ್ಯಾಯಾಮದ ಪಾತ್ರ ಪ್ರಮುಖವಾದದ್ದು. ನಿಯಮಿತ ವ್ಯಾಯಾಮವೆಂಬುದು ಆಯ್ಕೆಯಲ್ಲ; ಶರೀರದ ನಿರ್ವಹಣೆಯ ಕಡ್ಡಾಯ ಅಂಶ. “ಎಂತಹ ವ್ಯಾಯಾಮ ಮಾಡಬೇಕು” ಎಂಬುದು ಮಾತ್ರ ವೈಯಕ್ತಿಕ ಆಯ್ಕೆ. ವ್ಯಾಯಾಮ ಆರೋಗ್ಯದ ಸಮಗ್ರ ನಿರ್ವಹಣೆಗೆ ನೆರವಾಗುತ್ತದೆ. ಮೂಳೆಗಳ, ಕೀಲುಗಳ, ಸ್ನಾಯುಗಳ ಸರಾಗ ಚಲನೆಗೆ, ಅವುಗಳಿಗೆ ಹಾನಿಯಾಗದಂತೆ ಕಾಪಾಡುವುದಕ್ಕೆ ನಿಯಮಿತ ವ್ಯಾಯಾಮ ಸಹಾಯಕಾರಿ. ವ್ಯಾಯಾಮದಿಂದ ದೀರ್ಘಕಾಲೀನ ಪ್ರಯೋಜನಗಳಿವೆ. ವೃದ್ಧಾಪ್ಯದಲ್ಲಿ ಕಾಡುವ ಕೀಲು ನೋವುಗಳು, ಬೆನ್ನು ನೋವು, ಬೊಜ್ಜು, ನಿಶ್ಶಕ್ತಿ, ಮೂಳೆಗಳ ಸವೆತ, ನಿದ್ರಾಹೀನತೆ, ಮುಂತಾದುವು ಬಹಳ ಕಾಲದಿಂದ ನಿಯಮಿತ ವ್ಯಾಯಾಮ ಮಾಡುವವರಲ್ಲಿ ಕಾಣುವ ಸಂಭವ ಕಡಿಮೆ. ಅಲ್ಲದೇ, ಹೃದ್ರೋಗ, ಮಧುಮೇಹ, ರಕ್ಷಕ ಶಕ್ತಿಯ ನ್ಯೂನತೆ, ಕೆಲವು ಬಗೆಯ ಕ್ಯಾನ್ಸರ್ ಗಳು, ಖಿನ್ನತೆ ಮುಂತಾದ ಕೆಲವು ಅಸೌಖ್ಯಗಳು ಬಾರದಂತೆ ನಿಯಮಿತ ವ್ಯಾಯಾಮ ತಡೆಯಬಲ್ಲದು.

2.     ಆಹಾರ: “ನಾವು ಏನನ್ನು ತಿನ್ನುತ್ತೇವೆಯೋ, ಅದೇ ಆಗುತ್ತೇವೆ” ಎನ್ನುವ ಮಾತಿದೆ. ಆಯುರ್ವೇದದಲ್ಲಿ ಸಾತ್ವಿಕ, ರಾಜಸಿಕ, ಮತ್ತು ತಾಮಸಿಕ ಆಹಾರಗಳ ವಿಂಗಡಣೆಯಿದೆ. ಶರೀರಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಉಳ್ಳ ತಾಜಾ ಆಹಾರ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಈಚೆಗೆ ಜೀವನಶೈಲಿಯ ಕಾಯಿಲೆಗಳು ಎಂದು ಕರೆಯಲಾಗುವ ಹೃದ್ರೋಗ, ಮಧುಮೇಹ, ಪಾರ್ಶ್ವವಾಯು, ಕೆಲಬಗೆಯ ಕ್ಯಾನ್ಸರ್, ಬೊಜ್ಜು ಇತ್ಯಾದಿ ಸಮಸ್ಯೆಗಳ ಮೂಲ ಆಹಾರ ಮತ್ತು ಆಹಾರಸೇವನೆಯ ದೋಷಗಳು ಎಂದು ಪರಿಗಣಿಸಲಾಗಿದೆ. ತಾಜಾ ಹಣ್ಣು, ತರಕಾರಿ, ನಾರಿನ ಅಂಶ ಅಧಿಕವಾಗಿರುವ ಸಂಪೂರ್ಣಧಾನ್ಯಗಳು, ಜಿಡ್ಡಿನ ಅಂಶ ಕಡಿಮೆ ಇರುವ ಡೇರಿ ಉತ್ಪನ್ನಗಳು, ಮೀನು, ಕಾಳು ಮೊದಲಾದುವು ಆರೋಗ್ಯರಕ್ಷಣೆಯ ಭಾಗಗಳಾಗುತ್ತಿವೆ. ಸಂಸ್ಕರಿತ ಆಹಾರಗಳನ್ನು ದೂರಮಾಡಿದಷ್ಟೂ ಆರೋಗ್ಯ ವೃದ್ಧಿಸುತ್ತದೆ ಎನ್ನುವ ಸೂತ್ರ ಮನೆಮಾತಾಗುತ್ತಿದೆ. ಕಳೆದ ಎರಡು ದಶಕಗಳಿಂದ ಆಹಾರದ ಪ್ರಮಾಣ, ಘಟಕಗಳ ಜೊತೆಯಲ್ಲಿ ಆಹಾರ ಸೇವನೆಯ ಪದ್ದತಿಗಳು, ಕ್ಲುಪ್ತ ಸಮಯಗಳ ಅರಿವು ಮೂಡುತ್ತಿದೆ; ಸಸ್ಯಾಹಾರದ ಬಗ್ಗೆ ಒಲವು ಹೆಚ್ಚುತ್ತಿದೆ. ನೈಸರ್ಗಿಕ ಜೀವನ ವಿಧಾನಗಳು ಮತ್ತು ನೈಸರ್ಗಿಕ ಆಹಾರ ಸೇವನೆ ಆರೋಗ್ಯ ರಕ್ಷಣೆಯ ಮುಖ್ಯ ಭಾಗಗಳಾಗಿವೆ.

3.     ಶರೀರತೂಕದ ನಿರ್ವಹಣೆ: ಜೀವನಶೈಲಿ ಕಾಯಿಲೆಗಳ ಪ್ರತಿನಿಧಿ ಎಂದು ಬೊಜ್ಜು ಮತ್ತು ಅಧಿಕ ಶರೀರತೂಕಗಳನ್ನು ತೋರಲಾಗುತ್ತದೆ. ಮಧ್ಯಮ ಮತ್ತು ಸಿರಿವಂತ ದೇಶಗಳಲ್ಲಿ ಅತಿ-ಪೌಷ್ಟಿಕತೆಯ ಸಮಸ್ಯೆ ತೀವ್ರವಾಗುತ್ತಿದೆ. ಅಧಿಕ ಕ್ಯಾಲೊರಿಯುಕ್ತ ಸಂಸ್ಕರಿತ ಆಹಾರ ಸೇವನೆಯಿಂದ ಬೊಜ್ಜು ರೋಗಿಗಳು ಹೆಚ್ಚುತ್ತಿದ್ದಾರೆ. ಆಹಾರದ ವಿಷಯದಲ್ಲಿ ಅಶಿಸ್ತಿನ ಕಾರಣದಿಂದ, ತಿನ್ನುವ ಆಹಾರವನ್ನು ಯಾವ ಹಂತದಲ್ಲಿ ನಿಲ್ಲಿಸಬೇಕು ಎಂದು ತಿಳಿಯದ ಕಾರಣ ಜನರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಬೊಜ್ಜಿನ ಚಿಕಿತ್ಸೆಯಲ್ಲಿ ಯಾವುದೇ ಜಾದೂ ಮಾದರಿಯ ಪರಿಹಾರವಿಲ್ಲ ಎಂಬುದು ಪ್ರತಿಯೊಬ್ಬರಿಗೂ ನೆನಪಿರಬೇಕು. ಬೊಜ್ಜಿನ ಚಿಕಿತ್ಸೆ ಮೂಲತಃ ಜೀವನಶೈಲಿಯ ಸರಿಯಾದ ನಿರ್ವಹಣೆ. ದೀರ್ಘಕಾಲಿಕ ಸಮತೋಲನ ಆಹಾರಸೇವನೆ ಮತ್ತು ನಿಯಮಿತ ವ್ಯಾಯಾಮಗಳು ಬೊಜ್ಜಿನ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

4.    ತಂಬಾಕು ಸೇವನೆಯನ್ನು ನಿಲ್ಲಿಸುವಿಕೆ: ಕೆಟ್ಟ ಚಟಗಳಿಗೆ ಪ್ರಮುಖ ಉದಾಹರಣೆಯಾಗಿ ನಿಲ್ಲುವ ಧೂಮಪಾನ ಹಲವಾರು ಕಾಯಿಲೆಗಳಿಗೆ ಕಾರಣವಾಗಿದೆ. ಯಾವುದೇ ರೀತಿಯ ತಂಬಾಕು ಸೇವನೆಯೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಜೀವನಶೈಲಿಗೆ ಸಂಬಂಧಿಸಿದ ಪ್ರತಿಯೊಂದು ಕಾಯಿಲೆಯೂ ತಂಬಾಕು ಸೇವನೆಯಿಂದ ಹೆಚ್ಚಾಗುತ್ತದೆ. ಅಂತೆಯೇ, ತಂಬಾಕು ಸೇವನೆ ನಿಲ್ಲಿಸಿದಲ್ಲಿ ಈ ಕಾಯಿಲೆಗಳ ಸಾಧ್ಯತೆ ಕಡಿಮೆಯಾಗುತ್ತದೆ. ಈ ಕುರಿತಾದ ಸಾಮಾಜಿಕ ಕಾಳಜಿ ಹೆಚ್ಚುತ್ತಿದ್ದರೂ ಪ್ರಪಂಚದ ಶೇಕಡಾ ಹದಿನೈದು ಮಂದಿ ಈಗಲೂ ತಂಬಾಕು ಸೇವನೆ ಮಾಡುತ್ತಾರೆ. ಇವರ ಕಾರಣದಿಂದ ಉಂಟಾಗುವ ಪರೋಕ್ಷ ಧೂಮಪಾನದಿಂದಲೂ ಜೀವನಶೈಲಿಯ ಸಮಸ್ಯೆಗಳು ಕಾಣುತ್ತವೆ. ಈ ಕಾರಣಕ್ಕೆ ಮನೆಯಲ್ಲಿ ಒಬ್ಬ ಧೂಮಪಾನಿಯಿದ್ದರೂ ಇಡೀ ಕುಟುಂಬ ಸಮಸ್ಯೆಗೆ ಒಳಗಾಗುತ್ತದೆ.

5.     ಮಾನಸಿಕ ಸಮಸ್ಯೆಗಳ ನಿರ್ವಹಣೆ: ಒತ್ತಡ, ಖಿನ್ನತೆ, ಮತ್ತು ಆತಂಕಗಳು ಪ್ರಸ್ತುತ ಜೀವನಶೈಲಿಯ ಕಾರಣದಿಂದ ಹೆಚ್ಚಾಗುತ್ತಿವೆ. ಜೀವನಶೈಲಿಯ ನಿರ್ವಹಣೆ ಮಾನಸಿಕ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಧನಾತ್ಮಕ ಆಲೋಚನೆಗಳು, ಕೃತಜ್ಞತೆಯ ಭಾವ, ಕ್ಷಮಾಗುಣ ಮೊದಲಾದುವು ಮಾನಸಿಕ ಸಂತುಲತೆಯನ್ನು ಹೆಚ್ಚಿಸುತ್ತವೆ.

6.     ನಿದ್ರೆ ಮತ್ತು ವಿಶ್ರಾಂತಿ: ನಿದ್ರೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಭಾಗ. ನಿದ್ರಾಹೀನತೆ ಮತ್ತು ವಿಶ್ರಾಂತಿಯ ಕೊರತೆಯಿಂದ ಆರೋಗ್ಯ ಕೆಡುತ್ತದೆ; ಹಾಗೂ, ಅದರಿಂದ ಪುನಃ ನಿದ್ರಾಹೀನತೆ ಕಾಡುತ್ತದೆ. ಈ ವಿಷಮಚಕ್ರ ಬಾರದಂತೆ ಜೀವನಶೈಲಿಯನ್ನು ಸರಿಯಾಗಿ ನಿರ್ವಹಿಸುವುದು ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಬಹಳ ಮುಖ್ಯ. ನಿಸರ್ಗದ ಸಂಪರ್ಕವನ್ನು ಅಧಿಕಗೊಳಿಸುವುದು, ಮಾಡುವ ಕೆಲಸಗಳನ್ನು ಉದ್ವೇಗವಿಲ್ಲದೆ ಮಾಡುವುದು, ಸಾಕಷ್ಟು ನಿದ್ರಿಸುವುದು, ಕಾಫಿಯಂತಹ ಉತ್ತೇಜಕ ಪೇಯಗಳನ್ನು ಕಡಿಮೆ ಸೇವಿಸುವುದು, ಆರೋಗ್ಯಕರ ದಿನಚರಿಗೆ ಬದ್ಧರಾಗುವುದು, ಸ್ನೇಹಿತರ ಜೊತೆಗಿನ ಒಡನಾಟ, ಕುಟುಂಬದ ಜೊತೆಗೆ ಕಾಲ ಕಳೆಯುವುದು – ಇವೆಲ್ಲವೂ ಮನಸ್ಸಿಗೆ ಆರಾಮ ನೀಡಿ, ನಿದ್ರಾಹೀನತೆಗೆ ಪರಿಹಾರವಾಗುತ್ತವೆ.

    ಶಿಸ್ತುಬದ್ಧ ಜೀವನ, ಮಾನಸಿಕ ನೆಮ್ಮದಿ, ಆತಂಕರಹಿತ ಬದುಕಿಗೆ ನಮ್ಮ ಹಿರಿಯರು ಬಹಳ ಒತ್ತಾಸೆ ನೀಡಿದ್ದಾರೆ. ಆಧುನಿಕ ಯುಗದಲ್ಲಿ ಆ ಹಿಂದಿನ ಪದ್ದತಿಗಳ ಮೌಲ್ಯವನ್ನು ನಾವು ವೈಜ್ಞಾನಿಕವಾಗಿ ಮತ್ತೊಮ್ಮೆ ಕಲಿಯುತ್ತಿದ್ದೇವೆ.

----------------------

2022 ಜೂನ್ ಮಾಹೆಯ "ಸೂತ್ರ" ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ