ಶನಿವಾರ, ಅಕ್ಟೋಬರ್ 25, 2025

 


ನಮಗೆ ಅರ್ಥವಾಗದ ವಿಷಯ ಹೆಚ್ಚು ಬೈಗುಳಕ್ಕೆ ಒಳಗಾಗುತ್ತದೆ ಎನ್ನುವ ಮಾತಿದೆ. ವೈದ್ಯಕೀಯ ಕ್ಷೇತ್ರ ಇದಕ್ಕೆ ಹೊರತಲ್ಲ. ಅಸಾಧಾರಣ ಮಟ್ಟದಲ್ಲಿ ಸಂಕೀರ್ಣವಾಗಿ ಬೆಳೆದಿರುವ ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯನ್ನು ವಿವರಿಸುವುದು ಮಹಾ ಸಾಹಸದ ಸಂಗತಿ. ಸಾಮಾನ್ಯದವರು ಇದಕ್ಕೆ ಕೈ ಹಾಕುವುದಿಲ್ಲ. ಇಂತಹ ಅಸಾಮಾನ್ಯ ಸಾಹಸಿಗರು ಪ್ರಖ್ಯಾತ ನರರೋಗ ತಜ್ಞರಾದ ಡಾ. Suryanarayana Sharma P M ಅವರು. ಮೊದಲ ಬಾರಿಗೆ ಕನ್ನಡಿಗರಿಗೆ ವೈದ್ಯಕೀಯ ಕ್ಷೇತ್ರದಲ್ಲಿನ ನವನೂತನ ತಂತ್ರಜ್ಞಾನಗಳ ಪರಿಚಯ ಮಾಡಿಸುವ ಅತ್ಯುನ್ನತ ಗುಣಮಟ್ಟದ ಪುಸ್ತಕವನ್ನು ಹೊರತಂದಿದ್ದಾರೆ. ಒಬ್ಬರು ತಜ್ಞವೈದ್ಯರ 5-ನಿಮಿಷದ ಅಪಾಯಿಂಟ್ಮೆಂಟ್ ಪಡೆಯಲು ತತ್ತರಿಸಿ ಹೋಗುವ ಇಂದಿನ ದಿನಗಳಲ್ಲಿ ಅವರು ಇದಕ್ಕಾಗಿ ಹದಿನೇಳು ಮಂದಿ ವೈದ್ಯಕೀಯ ತಜ್ಞರನ್ನು ಒಗ್ಗೂಡಿಸಿದ್ದಾರೆ ಎಂದರೆ ಆ ಸಾಹಸದ ಒಂದು ಝಲಕ್ ಓದುಗರಿಗೆ ದೊರೆಯಬಹುದು!
ಈ ಮಹತ್ತರ ಪ್ರಯತ್ನಕ್ಕೆ ನನ್ನಿಂದ ಮುನ್ನುಡಿ ಬರೆಸಿದ್ದಾರೆ. ಅದ್ಯಾವ ಆಧಾರದ ಮೇಲೆ ನಾನು ಇಂತಹ ಗೌರವಕ್ಕೆ ಭಾಜನನಾದೆನೋ ನನಗೇ ತಿಳಿಯದು! ಅದು ಅವರು ನನ್ನ ಮೇಲಿಟ್ಟ ಪ್ರೀತಿ-ವಿಶ್ವಾಸಗಳ ಸಂಕೇತ ಎಂದು ಮಾತ್ರ ಹೇಳಬಲ್ಲೆ.
ಪುಸ್ತಕದ ಮುನ್ನುಡಿಯನ್ನು ಯಥಾವತ್ತಾಗಿ ಇಲ್ಲಿಡುತ್ತಿದ್ದೇನೆ. ಅದು ಪುಸ್ತಕದ ಕಿರು-ಪರಿಚಯವೂ ಹೌದು. ಸಮಸ್ತ ಕನ್ನಡಿಗರು ಈ ಪುಸ್ತಕವನ್ನು ಓದಿದರೆ ಅರಿವಿನ ವಿಸ್ತಾರಕ್ಕೆ ಅವಕಾಶ ಎನ್ನುವುದರಲ್ಲಿ ಸಂಶಯವೇ ಇಲ್ಲ.
ವೈದ್ಯಕೀಯ ಕ್ಷೇತ್ರದಲ್ಲಿನ ನೂತನ ತಂತ್ರಜ್ಞಾನಗಳು ಕೃತಿಯ ಮುನ್ನುಡಿ:
ಜಗದ್ವಿಖ್ಯಾತ Harrison’s Principles of Internal Medicine ಕೃತಿ ಆರಂಭವಾಗುವುದೇ “Medicine is an ever-changing science” ಎನ್ನುವ ಮಾತುಗಳಿಂದ. ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ ಸತ್ಯ. ವೈದ್ಯಕೀಯ ವಿಜ್ಞಾನವು ಇತಿಹಾಸದಲ್ಲಿ ಹಿಂದೆಂದೂ ಆಗಿರದಷ್ಟು ವೇಗವಾಗಿ ಬದಲಾಗುತ್ತಿದೆ. ಒಂದೆಡೆ ತಂತ್ರಜ್ಞಾನಗಳ ವಿಸ್ಮಯಕರ ಪ್ರಗತಿಯಾದರೆ, ಮತ್ತೊಂದೆಡೆ ಅದನ್ನು ಅತ್ಯಂತ ಕ್ಷಿಪ್ರವಾಗಿ ಆಚರಣ-ಯೋಗ್ಯ ಹಾದಿಗಳಿಗೆ ಬದಲಾಯಿಸುವ ವಿಧಾನಗಳ ಅಭಿವೃದ್ಧಿ ಜೊತೆಜೊತೆಗೆ ಸಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಸದ್ಯಕ್ಕಂತೂ ತಂತ್ರಜ್ಞಾನ ಪ್ರಭಾವಿಸದ ವಿಭಾಗ ವೈದ್ಯಕೀಯ ಕ್ಷೇತ್ರದಲ್ಲಿ ಇಲ್ಲವೇ ಇಲ್ಲ. ಹೊರ-ರೋಗಿ ವಿಭಾಗದಲ್ಲಿ ನಡೆಯುವ ದೈನಂದಿನ ರೋಗನಿರ್ಣಯಯಿಂದ ಆರಂಭಿಸಿ, ಮಾಹಿತಿ ಸಂರಕ್ಷಣೆ, ಅತ್ಯಾಧುನಿಕ ಚಿಕಿತ್ಸಾ ವಿಧಾನಗಳು, ಉನ್ನತ ಮಟ್ಟದ ರೋಗ ನಿರ್ವಹಣೆ, ಅತ್ಯಂತ ನಿಖರ ಶಸ್ತ್ರಚಿಕಿತ್ಸೆಯ ಪದ್ದತಿಗಳು – ಹೀಗೆ ಹೊಸ ತಂತ್ರಜ್ಞಾನಗಳ ಹರಹು ವಿಶಾಲವಾದದ್ದು. ‘ತಂತ್ರಜ್ಞಾನ ಪರ್ವ’ ಎಂದೇ ಕರೆಯಬಹುದಾದ ಇಂದಿನ ದಿನಗಳಲ್ಲಿ, ವೈದ್ಯಕೀಯ ಕ್ಷೇತ್ರವು ಒಂದೆಡೆ ಮಾನವನ ಆಯುಷ್ಯವನ್ನು ಹೆಚ್ಚಿಸುವ, ಮತ್ತೊಂದೆಡೆ ಎಲ್ಲರಿಗೂ ಗುಣಮಟ್ಟದ ಆರೋಗ್ಯವನ್ನು ನೀಡುವ ಪ್ರಯತ್ನಗಳನ್ನು ಜೊತೆಜೊತೆಗೆ ಮಾಡುತ್ತಿದೆ.
ಆದರೆ ನಾಗಾಲೋಟದ ಈ ಪ್ರಗತಿಯನ್ನು ಜನಸಾಮಾನ್ಯರಿಗೆ ವಿವರಿಸುವುದು ಸುಲಭವಲ್ಲ. ವೈದ್ಯಕೀಯದಲ್ಲಿ ತಂತ್ರಜ್ಞಾನದ ವೇಗ ಎಷ್ಟಿದೆಯೆಂದರೆ, ಒಂದು ಕ್ಷೇತ್ರದ ತಜ್ಞ ವೈದ್ಯರು ಮತ್ತೊಂದು ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಲು ಕೆಲವು ಗಂಟೆಗಳೇ ಹಿಡಿಯುತ್ತವೆ! ಹೀಗಿರುವಾಗ ಅದನ್ನು ಸಾಮಾನ್ಯ ಓದುಗರಿಗೆ ಸರಳ ಭಾಷೆಯಲ್ಲಿ ಅರ್ಥವಾಗುವಂತೆ ತಲುಪಿಸುವುದು ತೀರಾ ಸಾಹಸದ ವಿಷಯ. ಇಂತಹ ಸಾಹಸದಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ನುರಿತ ಹಲವಾರು ತಜ್ಞರು ಒಗ್ಗೂಡಿ ಸಫಲರಾಗಿದ್ದಾರೆ. ಈ ಪುಸ್ತಕವನ್ನು ರಚಿಸುವ ಉದ್ದೇಶ, ವೈದ್ಯಕೀಯ ತಂತ್ರಜ್ಞಾನಗಳ ಇಂದಿನ ಸ್ಥಿತಿಗತಿಯು ಯಾವ ಎತ್ತರಕ್ಕೆ ತಲುಪಿದೆ ಎಂಬುದನ್ನು ಸರಳವಾಗಿ, ವೈಜ್ಞಾನಿಕವಾಗಿ, ಹಾಗೂ ಸಮಗ್ರವಾಗಿ ಪರಿಚಯಿಸುವುದು. ಹದಿನೇಳು ಅಧ್ಯಾಯಗಳಲ್ಲಿ “ಆಸ್ಪತ್ರೆಗಳ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ” ಯಾವ ರೀತಿ ಆಗುತ್ತಿದೆ ಎನ್ನುವ ಮೂಲಭೂತ ಹಂತದಿಂದ ಹಿಡಿದು, “ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ರೋಬೋಟಿಕ್ ತಂತ್ರಜ್ಞಾನ” ಎನ್ನುವ ಅಸಾಧಾರಣ ಪ್ರಗತಿಯ ವಿವರಣೆಯವರೆಗೆ ಈ ಪುಸ್ತಕ ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸಿದೆ. ಆಸ್ಪತ್ರೆಯ ಆಧುನಿಕ ಪ್ರಯೋಗಾಲಯದಲ್ಲಿ ತಂತ್ರಜ್ಞಾನ ತಂದಿರುವ ಕ್ರಾಂತಿ; ತುರ್ತು ಚಿಕಿತ್ಸಾ ಘಟಕದಲ್ಲಿ ತಂತ್ರಜ್ಞಾನದ ಬಳಕೆಯಿಂದ ಆಗಿರುವ ಕ್ಷಿಪ್ರ ನಿರ್ವಹಣೆ; ಅಂಗ ಕಸಿಯಂತಹ ನಾಜೂಕು ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನ ತಂದಿರುವ ನಿಖರತೆಯ ಆಯಾಮ; ಈ ಮುನ್ನ ಬಹಳ ಅಪಾಯಕಾರಿ ಎಂದು ಪರಿಗಣಿಸಲಾಗುತ್ತಿದ್ದ ಚಿಕಿತ್ಸೆಗಳು ತಂತ್ರಜ್ಞಾನದ ನೆರವಿನಿಂದ ಯಾವ ರೀತಿ ಸುರಕ್ಷಿತವಾಗುತ್ತಿವೆ; ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಗಳನ್ನು ಈಗ ಶರೀರದ ಮೇಲೆ ಒಂದು ಗೆರೆಯೂ ಬೀಳದಂತೆ ಮಾಡುವ ವಿಧಾನಗಳು – ಇವುಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬಹುದಾದ ಸರಳ ನಿರೂಪಣೆಯಲ್ಲಿ ವಿವರಿಸಿರುವುದು ಈ ಕೃತಿಯ ವೈಶಿಷ್ಟ್ಯ. ಕನ್ನಡದ ಮಟ್ಟಿಗೆ ಇದು ಅನನ್ಯ. ನಮ್ಮ ಭಾಷೆಯಲ್ಲಿ ಈ ರೀತಿಯ ಕೃತಿ ಈವರೆಗೆ ಬಂದಿಲ್ಲ. ಕನ್ನಡದಲ್ಲಿ ಇಂತಹ ಮಾಹಿತಿಗೆ ಇದ್ದ ದೊಡ್ಡ ಕೊರತೆಯನ್ನು ಈ ಕೃತಿ ಸಾಕಷ್ಟು ಸಮರ್ಥವಾಗಿ ತುಂಬಿದೆ.
ಈ ಕೃತಿಯ ಪ್ರತಿಯೊಂದು ಅಧ್ಯಾಯವೂ ವೈದ್ಯಕೀಯ ರಂಗದ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ತಂತ್ರಜ್ಞಾನದ ಅದ್ಭುತ ಬಳಕೆಯಿಂದ ಆದ ಮಹತ್ತರ ಬದಲಾವಣೆಗಳನ್ನು ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ವಿವರಿಸುತ್ತದೆ. ಕೆಲವು ಉದಾಹರಣೆಗಳನ್ನು ಗಮನಿಸಬಹುದು. ಹೃದಯದ ಕವಾಟಗಳನ್ನು ಬದಲಿಸುವ ಶಸ್ತ್ರಚಿಕಿತ್ಸೆ ಎಂದರೆ ಎಂತಹವರಿಗಾದರೂ ಅಳ್ಳೆದೆಯಾಗಬಹುದು. ಎದೆಗೋಡೆಯ ಮೂಲಕ ಹೃದಯದ ಒಳಗಿಳಿದು, ಹೊಸ ಕವಾಟವನ್ನು ಜೋಡಿಸುವ ಶಸ್ತ್ರಚಿಕಿತ್ಸೆ ಹಲವಾರು ಗಂಟೆಗಳದ್ದು. ಶಸ್ತ್ರಚಿಕಿತ್ಸೆಯ ನಂತರ ಕೆಲವು ದಿನ ಆಸ್ಪತ್ರೆಯಲ್ಲಿ ಚೇತರಿಸಿಕೊಂಡು, ಆಮೇಲೆ ಕೆಲ ವಾರಗಳ ಕಾಲ ವಿಶ್ರಾಂತಿ ಪಡೆಯುವುದನ್ನು ಬಲ್ಲೆವು. ಇದರ ಬದಲಿಗೆ, ಎದೆಯನ್ನು ಮುಟ್ಟದೆಯೇ ಕಾಲಿನ ರಕ್ತನಾಳವೊಂದರಿಂದ ನಳಿಕೆಗಳ ಮೂಲಕ ಹೃದಯವನ್ನು ತಲುಪಿ, ಒಂದು ಗಂಟೆಯ ಅವಧಿಯಲ್ಲಿ ಕವಾಟವನ್ನು ಜೋಡಿಸಿ, ಮರುದಿನ ರೋಗಿ ಮನೆಗೆ ಹಿಂದಿರುಗುವುದು ಈಗ ಸಾಧ್ಯ.
ಒಂದು ಕಾಲದಲ್ಲಿ ಇಂಚುಗಳ ಉದ್ದದಲ್ಲಿ ಹೊಟ್ಟೆಯನ್ನು ಸೀಳಿ, ಹಲವರಿಂದ ರಕ್ತದಾನ ಮಾಡಿಸಿ ರೋಗಿಗೆ ನೀಡಿ, ವಾರಗಟ್ಟಲೆ ರೋಗಿಯನ್ನು ಆಸ್ಪತ್ರೆಯಲ್ಲಿ ಇಟ್ಟು ನಿಗಾ ವಹಿಸುತ್ತಿದ್ದ ಕಠಿಣ ಶಸ್ತ್ರಚಿಕಿತ್ಸೆಗಳು ಈಗ ಉದರದರ್ಶಕ ಯಂತ್ರದ ಮೂಲಕ ಆಗುತ್ತಿವೆ. ಇಂತಹ ರೋಗಿಗಳಿಗೆ ರಕ್ತಪೂರಣದ ಅಗತ್ಯವೇ ಇಲ್ಲದಷ್ಟು ಕಡಿಮೆ ರಕ್ತ ನಷ್ಟವಾಗುತ್ತದೆ. ಎಲ್ಲಿ ಅಗತ್ಯವೋ ಅಲ್ಲಿ ಮಾತ್ರ ಅತ್ಯಂತ ನಿಖರವಾಗಿ ಶಸ್ತ್ರಕ್ರಿಯೆ ಜರುಗುತ್ತದೆ. ಹೆಚ್ಚಿನ ವಿಳಂಬವಿಲ್ಲದೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಸಾಮಾನ್ಯ ಜೀವನ ಸಾಗುತ್ತದೆ.
ಮಂಡಿ ಬದಲಿ ಶಸ್ತ್ರಚಿಕಿತ್ಸೆ ಎಂದರೆ ಅತ್ಯಂತ ಹೆಚ್ಚು ನಿಖರತೆಯನ್ನು ಬಯಸುವ ಪ್ರಕ್ರಿಯೆ. ಇದನ್ನು ಸಾಧಿಸಲು ಈಗ ರೋಬೋಟಿಕ್ ತಂತ್ರಜ್ಞಾನ ಲಭ್ಯವಿದೆ. ಇಂಪ್ಲಾಂಟ್ ಗಳ ಕರಾರುವಾಕ್ ಜೋಡಣೆ ಮತ್ತು ಹೊಂದಾಣಿಕೆಯಿಂದ ಇಂತಹ ಕ್ಲಿಷ್ಟಕರ ಪ್ರಕ್ರಿಯೆಗಳು ಯಾವ ರೀತಿ ಅತ್ಯಂತ ಸುರಕ್ಷಿತವಾಗಿ ಮಾರ್ಪಟ್ಟಿವೆ ಎನ್ನುವ ಅಚ್ಚರಿಗಳನ್ನು ಅರಿಯಲು ಪುಸ್ತಕ ಓದಿಯೇ ರೋಮಾಂಚನಗೊಳ್ಳಬೇಕು.
ಈ ಪುಸ್ತಕ ಯಾರಿಗಾಗಿ? ನಮ್ಮ ಭಾಷೆಯನ್ನು ಓದಬಲ್ಲ ಪ್ರತಿಯೊಬ್ಬರಿಗಾಗಿ ಎನ್ನುವುದು ಉತ್ತರ. ಆರೋಗ್ಯವೆಂಬುದು ನಮ್ಮ ಹಕ್ಕು ಮತ್ತು ಜವಾಬ್ದಾರಿ. ತಮ್ಮ ಮತ್ತು ತಮ್ಮವರ ಆರೋಗ್ಯ ರಕ್ಷಣೆಯ ಕರ್ತವ್ಯ ಹೊತ್ತಿರುವ ಎಲ್ಲರಿಗೂ ಸಹಾಯಕವಾಗುವಂತೆ ಈ ಕೃತಿಯನ್ನು ರಚಿಸಲಾಗಿದೆ. ಮಾಹಿತಿಯ ಗಾಂಭೀರ್ಯವನ್ನು ಕಾಪಾಡಿಕೊಂಡು, ಕ್ಲಿಷ್ಟಕರ ತಾಂತ್ರಿಕ ವಿಷಯಗಳನ್ನು ಅತ್ಯಂತ ಸರಳವಾಗಿ ಬಿಂಬಿಸುವ ಪ್ರಯತ್ನ ಮಾಡಲಾಗಿರುವುದು ಕೃತಿಯ ವೈಶಿಷ್ಟ್ಯ. ತಂತ್ರಜ್ಞಾನವೆಂದರೆ ರೋಗಿಯನ್ನು ವೈದ್ಯರಿಂದ ದೂರ ಮಾಡುವ ವಿಧಾನವಲ್ಲ; ಬದಲಿಗೆ ಚಿಕಿತ್ಸೆಗೆ ಮಾನವೀಯ ಸಂಸ್ಪರ್ಶವನ್ನು ನೀಡುವ ಆಯಾಮ ಎನ್ನುವುದು ಈ ಕೃತಿಯನ್ನು ಓದಿದವರಿಗೆ ಮನದಟ್ಟಾಗುತ್ತದೆ. ರೋಗಿಯ ಆರೋಗ್ಯವನ್ನು ಕೇಂದ್ರಬಿಂದುವಾಗಿರಿಸಿ, ಅದಕ್ಕೆ ತಂತ್ರಜ್ಞಾನದ ನೆರವಿನಿಂದ ಯೋಗ-ಕ್ಷೇಮಗಳನ್ನು ಅಭಿವೃದ್ಧಿಗೊಳಿಸುವುದು ಪ್ರಸ್ತುತ ವೈದ್ಯಕೀಯ ಕ್ಷೇತ್ರದ ಮೂಲ ಧ್ಯೇಯ.
ಮನುಕುಲದ ಆರೋಗ್ಯಕ್ಕಾಗಿ ತುಡಿಯುವ ತಂತ್ರಜ್ಞಾನಗಳ ಅರಿವಿಗಾಗಿ ಈ ಕೃತಿಯು ಒಂದು ಮಹತ್ವದ ಹೆಜ್ಜೆಯಾಗಲಿ ಎಂದು ಹೃತ್ಪೂರ್ವಕ ಹಾರೈಕೆ.
ಡಾ. ಕಿರಣ್ ವಿ.ಎಸ್.
ವೈದ್ಯರು
--------------------
ವೈದ್ಯಕೀಯ ಕ್ಷೇತ್ರದಲ್ಲಿನ ನೂತನ ತಂತ್ರಜ್ಞಾನಗಳ ಅರಿವಿನ ಯಾತ್ರೆಗೆ ಎಲ್ಲ ಕನ್ನಡಿಗರಿಗೂ ಸ್ವಾಗತ! ಪುಸ್ತಕ ಖರೀದಿಸಲು ಫೋನ್ ಸಂಖ್ಯೆ 7760291482 ಸಂಪರ್ಕಿಸಬಹುದು.


 

ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕು – ವ್ಯತ್ಯಾಸಗಳೇನು?

ಡಾ. ಕಿರಣ್ ವಿ.ಎಸ್.

ವೈದ್ಯರು

 ಇಂದಿನ ಜಂಜಾಟದ ಜೀವನದಲ್ಲಿ ಬದುಕಿನ ಆದ್ಯತೆಗಳು ಏರುಪೇರಾಗಿವೆ. ಆಹಾರ, ಆರೋಗ್ಯ, ವ್ಯಾಯಾಮ, ನಿದ್ರೆಯಂತಹ ಮೂಲಭೂತ ಅಗತ್ಯಗಳನ್ನು ಜನರು ನಿರ್ಲಕ್ಷಿಸುತಿದ್ದಾರೆ. ಇದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡಗಳು ಹೆಚ್ಚಾಗುತ್ತಿವೆ. ಪರಿಣಾಮವಾಗಿ ಶರೀರವನ್ನು ಕಾಡುವ ಸೋಂಕುಗಳು ಏರುತ್ತಿವೆ. ಹಲವಾರು ಪರೋಪಜೀವಿಗಳು ದೇಹವನ್ನು ಕಾಡಬಹುದಾದರೂ, ಇದರ ಬಹುಭಾಗ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು. ಇವೆರಡರ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿದರೆ, ಅವುಗಳ ನಿರ್ವಹಣೆ ಸಮಂಜಸವಾಗುತ್ತದೆ.

ಬ್ಯಾಕ್ಟೀರಿಯಾ ಸ್ವತಂತ್ರ ಪರೋಪಜೀವಿ. ಅಂದರೆ, ಅದು ತನ್ನ ಬೆಳವಣಿಗೆಗಾಗಿ ಅಗತ್ಯವಾದ ಪೋಷಕಾಂಶಗಳು ದೊರೆತರೆ ಸ್ವತಂತ್ರವಾಗಿ ಬದುಕಬಲ್ಲದು. ಇಂತಹ ಪೋಷಕಾಂಶಗಳನ್ನು ನೀಡಿ ಅವುಗಳನ್ನು ಪ್ರಯೋಗಶಾಲೆಯಲ್ಲಿ ಬೆಳೆಸಬಹುದು. ಹೀಗಾಗಿ ಅವು ಅಭಿವೃದ್ಧಿಗೊಳ್ಳಲು ಜೀವಕೋಶಗಳೇ ಬೇಕು ಎನ್ನುವ ಕಡ್ಡಾಯವಿಲ್ಲ. ಜಗತ್ತಿನಲ್ಲಿ ಸಾವಿರಾರು ಬಗೆಯ ಬ್ಯಾಕ್ಟೀರಿಯಾಗಳು ಇವೆಯಾದರೂ, ಅವುಗಳಲ್ಲಿ ಕೆಲವು ಮಾತ್ರ ಮಾನವರಲ್ಲಿ ಸೋಂಕು ಉಂಟು ಮಾಡುತ್ತವೆ. ಸೋಂಕು ಉಂಟುಮಾಡದ ಕೋಟ್ಯಂತರ ಬ್ಯಾಕ್ಟೀರಿಯಾಗಳು ನಮ್ಮ ಕರುಳಿನೊಳಗೇ ವಾಸ ಮಾಡುತ್ತಾ, ನಮ್ಮೊಡನೆ ಸಹಜೀವನ ನಡೆಸುತ್ತಾ, ನಮ್ಮ ದೇಹದ ಕಾರ್ಯಗಳನ್ನು ನಿಯಂತ್ರಿಸುತ್ತಿರುತ್ತವೆ. ನಮ್ಮೊಳಗಿನ ಒಡನಾಡಿ ಬ್ಯಾಕ್ಟೀರಿಯಾಗಳ ಸಂಖ್ಯೆ ನಮ್ಮ ಶರೀರದ ಒಟ್ಟಾರೆ ಎಲ್ಲ ಜೀವಕೋಶಗಳಿಗಿಂತಲೂ ಹೆಚ್ಚು.

ಇದರ ಹೊರತಾಗಿ, ನಮ್ಮ ದೇಹಕ್ಕೆ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳೂ ನೂರಾರು ಬಗೆಯವು. ಇವುಗಳಲ್ಲಿ ಕೆಲವು ತೀವ್ರ ಪ್ರಮಾಣದ ಸೋಂಕು ಉಂಟುಮಾಡಿ, ಶರೀರವನ್ನು ಅಪಾಯಕ್ಕೆ ಸಿಲುಕಿಸಬಲ್ಲವು. ಶರೀರವನ್ನು ಸೇರಿದ ಬ್ಯಾಕ್ಟೀರಿಯಾಗಳು ಮೊದಲು ದೇಹದ ಜೀವಕೋಶಗಳನ್ನು ಹಿಡಿದು, ಪೋಷಕಾಂಶಗಳನ್ನು ಸೆಳೆಯುತ್ತವೆ. ಆನಂತರ ತಮ್ಮ ಸಂಖ್ಯೆಯನ್ನು ವೃದ್ಧಿಸುತ್ತವೆ. ಕೆಲವೇ ಕಾಲದಲ್ಲಿ ಇಂತಹ ಸೋಂಕುಕಾರಕ ಬ್ಯಾಕ್ಟೀರಿಯಾಗಳ ಸಂಖ್ಯೆ ವಿಪರೀತವಾಗುತ್ತದೆ. ಶರೀರದಲ್ಲಿ ಲಭ್ಯವಿರುವ ಪೋಷಕಾಂಶಗಳನ್ನು ಬ್ಯಾಕ್ಟೀರಿಯಾಗಳು ಬಳಸಿಕೊಳ್ಳುವುದರಿಂದ, ಶರೀರಕ್ಕೆ ಸಹಜವಾಗಿ ದೊರೆಯಬೇಕಿದ್ದ ಪೋಷಕಾಂಶಗಳು ತಲುಪದೆ ಅಂಗಗಳು ಸೊರಗುತ್ತವೆ; ಅವುಗಳ ಕೆಲಸ ಕುಂಠಿತವಾಗುತ್ತದೆ. ಬ್ಯಾಕ್ಟೀರಿಯಾ ಉತ್ಪಾದಿಸುವ ವಿಷಕಾರಿ ವಸ್ತುಗಳಿಂದ ದೇಹಕ್ಕೆ ಬಾಧೆಯಾಗುತ್ತದೆ. ಅಪಾಯಕಾರಿ ಪರೋಪಜೀವಿಯೊಂದು ದೇಹವನ್ನು ಕಂಗೆಡಿಸುತ್ತಿದೆ ಎನ್ನುವ ಸೂಚನೆ ಬಂದ ಕೂಡಲೇ ಶರೀರದ ರಕ್ಷಕ ವ್ಯವಸ್ಥೆ ಜಾಗೃತವಾಗಿ, ಬ್ಯಾಕ್ಟೀರಿಯಾ ವಿರುದ್ಧ ಹೊಡೆದಾಟಕ್ಕೆ ಸಜ್ಜಾಗುತ್ತದೆ. ಕೆಲವೊಮ್ಮೆ ಬ್ಯಾಕ್ಟೀರಿಯಾ ಸೋಂಕಿನ ತೀವ್ರತೆಗಿಂತಲೂ ರಕ್ಷಕ ವ್ಯವಸ್ಥೆಯ ಪ್ರತಿಕ್ರಿಯೆ ದೇಹದ ಪಾಲಿಗೆ ಹೆಚ್ಚು ಭಯಂಕರವಾಗಿರುತ್ತದೆ. ರಕ್ಷಕ ವ್ಯವಸ್ಥೆಯ ಹುಚ್ಚಾಪಟ್ಟೆ ಕಾದಾಟದಲ್ಲಿ ಶರೀರ ಹೆಚ್ಚು ನಷ್ಟ ಅನುಭವಿಸುವ ಪ್ರಸಂಗಗಳೂ ಇವೆ.

ಬ್ಯಾಕ್ಟೀರಿಯಾ ನಿಗ್ರಹದಲ್ಲಿ ದೇಹದ ರಕ್ಷಕ ವ್ಯವಸ್ಥೆ ಬಹುತೇಕ ಯಶಸ್ವಿಯಾಗಬಲ್ಲದಾದರೂ, ಕೆಲವೊಮ್ಮೆ ಈ ಸಂಗ್ರಾಮದಲ್ಲಿ ಬ್ಯಾಕ್ಟೀರಿಯಾದ್ದೇ ಮೇಲುಗೈ ಆಗಬಹುದು. ಇಂತಹ ಸಂದರ್ಭಗಳಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ಆಂಟಿಬಯಾಟಿಕ್ ಔಷಧಗಳ ನೆರವು ಬೇಕಾಗುತ್ತದೆ. ಒಂದೇ ಆಂಟಿಬಯಾಟಿಕ್ ಎಲ್ಲ ರೀತಿಯ ಬ್ಯಾಕ್ಟೀರಿಯಾ ಮೇಲೂ ಪರಿಣಾಮಕಾರಿ ಆಗಲಾರದು. ಒಂದೊಂದು ಬಗೆಯ ಬ್ಯಾಕ್ಟೀರಿಯಾಗೆ ಒಂದೊಂದು ಬಗೆಯ ಆಂಟಿಬಯಾಟಿಕ್ ಕೆಲಸ ಮಾಡುತ್ತದೆ. ಆಂಟಿಬಯಾಟಿಕ್ಗಳು ಶರೀರದ ಇತರ ಜೀವಕೋಶಗಳ ಮೇಲೆಯೂ ಧಾಳಿ ಮಾಡಿ, ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತವೆ. ರೋಗದ ಲಕ್ಷಣಗಳನ್ನು ಗಮನಿಸಿ ವೈದ್ಯರು ಸೂಕ್ತವಾದ ಆಂಟಿಬಯಾಟಿಕ್ ಅಂದಾಜು ಮಾಡಬಹುದು. ತೀವ್ರ ಸೋಂಕುಗಳಲ್ಲಿ ಈ ಅಂದಾಜು ಕೆಲಸಕ್ಕೆ ಬಾರದು. ಆಗ ಮೊದಲು ರೋಗಕಾರಕ ಬ್ಯಾಕ್ಟೀರಿಯಾ ಯಾವುದೆಂದು ಗುರುತಿಸಿ, ಅದಕ್ಕೆ ಯಾವ ಆಂಟಿಬಯಾಟಿಕ್ ಕೆಲಸ ಮಾಡುತ್ತದೆ ಎಂಬುದನ್ನು ಪ್ರಯೋಗಾಲಯದ ದುಬಾರಿ ಪರೀಕ್ಷೆಗಳ ಮೂಲಕ ತಿಳಿಯಬೇಕು. ಇದಕ್ಕೆ ಎರಡು-ಮೂರು ದಿನಗಳ ಕಾಲಾವಧಿ ಹಿಡಿಯುತ್ತದೆ. ಬಹಳಷ್ಟು ಬಾರಿ ಚಿಕಿತ್ಸೆಗಿಂತಲೂ ಪರೀಕ್ಷೆಗಳೇ ದುಬಾರಿ. “ನಾಲ್ಕಾಣೆ ಕೋತಿಗೆ ಹನ್ನೆರಡಾಣೆ ಬೆಲ್ಲ” ಎನ್ನುವ ಮಾತಿನಂತಾಗುತ್ತದೆ.

ವೈರಸ್ ಸೋಂಕು ಬ್ಯಾಕ್ಟೀರಿಯಾಗಿಂತ ಭಿನ್ನ. ವೈರಸ್ ಎಂಬುದು ಸ್ವತಂತ್ರ ಜೀವಿಯಲ್ಲ; ಅದು ಜೀವ-ನಿರ್ಜೀವಗಳ ಗಡಿಯಲ್ಲಿರುವುದು. ವೈರಸ್ ಮೂಲತಃ ಪ್ರೋಟೀನ್ ಕೋಟೆಯೊಳಗಿನ ಡಿ.ಎನ್.ಎ. ಇಲ್ಲವೇ ಆರ್.ಎನ್.ಎ. ಎನ್ನುವ ಜೀವದ್ರವ್ಯ. ಪರಕೀಯ ಜೀವಕೋಶದೊಳಗೆ ಪ್ರವೇಶಿಸುವ ವೈರಸ್, ಅಲ್ಲಿಯ ಪೋಷಕಾಂಶಗಳಿಂದ ನೇರವಾಗಿ ಬೆಳೆಯುವುದಿಲ್ಲ. ಬದಲಿಗೆ ತನ್ನ ಪ್ರೋಟೀನ್ ಆವರಣವನ್ನು ಕಳಚಿ, ಡಿ.ಎನ್.ಎ. ಇಲ್ಲವೇ ಆರ್.ಎನ್.ಎ. ಎನ್ನುವ ತನ್ನ ಜೆನೆಟಿಕ್ ದ್ರವ್ಯವನ್ನು ಪರಕೀಯ ಜೀವಕೋಶದ ನ್ಯೂಕ್ಲಿಯಸ್ ಒಳಗೆ ಸೇರಿಸಿ, ಇಡೀ ಕೋಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ತನ್ನ ಪ್ರಭೇದದ ಹೊಸ ವೈರಸ್ಗಳನ್ನು ಉತ್ಪಾದಿಸುವ ಕಾರ್ಖಾನೆ ಆಗುತ್ತದೆ. ಹೀಗೆ ಉತ್ಪತ್ತಿಯಾದ ಹೊಸ ವೈರಸ್ಗಳು ಅಕ್ಕಪಕ್ಕದ ಕೋಶಗಳಿಗೆ ಲಗ್ಗೆ ಇಟ್ಟು ಅದೇ ಪ್ರಕ್ರಿಯೆಯನ್ನು ಮುಂದುವರೆಸುತ್ತವೆ.

ವೈರಸ್ ಧಾಳಿಗೂ ಶರೀರದ ರಕ್ಷಕ ವ್ಯವಸ್ಥೆ ಸ್ಪಂದಿಸುತ್ತದೆ; ಬಹುತೇಕ ವೈರಸ್ಗಳನ್ನು ನಿರ್ಮೂಲನ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತರಬಲ್ಲದು. ವೈರಸ್ ಸೋಂಕಿನ ವಿರುದ್ಧ ಆಂಟಿಬಯಾಟಿಕ್ ಔಷಧಗಳು ಯಾವುದೇ ಪರಿಣಾಮ ಉಂಟುಮಾಡಲಾರವು. ಬಹಳ ತೀವ್ರವಾದ ವೈರಸ್ ಸೋಂಕಿನಲ್ಲಿ ಮಾತ್ರ ಆಂಟಿ-ವೈರಲ್ ಔಷಧಗಳನ್ನು ನೀಡಬೇಕಾಗುತ್ತದೆ. ಬ್ಯಾಕ್ಟೀರಿಯಾಗಳನ್ನು ಪ್ರಯೋಗಾಲಯದಲ್ಲಿ ನೇರವಾಗಿ ಪತ್ತೆ ಮಾಡುವಂತೆ ವೈರಸ್ಗಳನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಕೆಲವು ಪರೋಕ್ಷ ವಿಧಾನಗಳು ಮಾತ್ರ ಇವೆ. ಕೆಲವೇ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅವನ್ನು ಬಳಸಬೇಕು.

ಸೋಂಕು ಎಂದ ಕೂಡಲೇ ಆಂಟಿಬಯಾಟಿಕ್ ಎನ್ನುವುದು ಸರಿಯಲ್ಲ. ವೈರಸ್ ಕಾಯಿಲೆಗಳಲ್ಲಿ ಆಂಟಿಬಯಾಟಿಕ್ಗಳ ಪಾತ್ರವೇ ಇಲ್ಲ. ಅಕಾರಣವಾಗಿ ಆಂಟಿಬಯಾಟಿಕ್ ಬಳಸುತ್ತಿದ್ದರೆ ಬ್ಯಾಕ್ಟೀರಿಯಾಗಳು ಅವುಗಳ ವಿರುದ್ಧ ಪ್ರತಿರೋಧ ಬೆಳೆಸಿಕೊಳ್ಳುತ್ತವೆ; ಅದರಿಂದ ಆಂಟಿಬಯಾಟಿಕ್ ಪರಿಣಾಮ ಕಡಿಮೆಯಾಗಿ, ಕಾಯಿಲೆಯ ಚಿಕಿತ್ಸೆಗಳು ಮತ್ತಷ್ಟು ದುಬಾರಿಯೂ, ಕೆಲವೊಮ್ಮೆ ನಿಷ್ಫಲವೂ ಆಗುತ್ತವೆ. ಈ ಎಚ್ಚರವನ್ನು ಮೀರಿದರೆ ಇಡೀ ಮನುಕುಲ ದೊಡ್ಡ ಬೆಲೆ ತೆರುವಂತಾಗುತ್ತದೆ.

------------------------

22/7/2025 ಪ್ರಜಾವಾಣಿ ದಿನಪತ್ರಿಕೆಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ:  https://www.prajavani.net/health/difference-between-bacterial-and-viral-infections-3417421


 

ರಕ್ತದ ಗಣಿತ – ಭಾಗ 1 – ಕೋಶಗಳು

ಡಾ. ಕಿರಣ್.ವಿ.ಎಸ್.

ವೈದ್ಯರು

 ಷೇಕ್ಸ್ಪಿಯರ್ ಮಹಾಶಯನ ಎಲ್ಲ ನಾಟಕಗಳಲ್ಲಿ ಇರುವ ಸಾಮಾನ್ಯ ಅಂಶ ಎಂದರೆ “ರಕ್ತ” ಎನ್ನುವ ಪದದ ಬಳಕೆ! ಜಗತ್ತಿನ ಬಹಳಷ್ಟು ಜನರನ್ನು ಭಾವನಾತ್ಮಕವಾಗಿ ಬೆಸೆಯಬಲ್ಲ ಅಂಗಾಂಶ ರಕ್ತ. ಕವಿಗಳು, ಸಾಹಿತಿಗಳು, ವಾಗ್ಮಿಗಳು, ಸಿನೆಮಾದವರು ರಕ್ತದ ಬಗ್ಗೆ ಸಾಕಷ್ಟು ಮನಮುಟ್ಟುವ ಮಾತುಗಳನ್ನು ಹೇಳಿದ್ದಾರೆ; ಜನರ ಅಂತರಂಗವನ್ನು ತಟ್ಟಿದ್ದಾರೆ. ವೈಜ್ಞಾನಿಕ ದೃಷ್ಟಿಯಿಂದಲೂ ರಕ್ತ ಶರೀರದ ಬಹು ಮುಖ್ಯ ಅಂಗಾಂಶ. ಇದರ ಅತಿ ದೊಡ್ಡ ವಿಸ್ಮಯ ಎಂದರೆ, ಇದು ದ್ರವರೂಪದ್ದು. ಶರೀರದಲ್ಲಿ ಇರುವ ಎಲ್ಲ ವಿಶಿಷ್ಟ ದ್ರವಗಳೂ ರಕ್ತದ ಜರಡಿಯಿಂದ ಬಂದಂಥವುಗಳೇ.

ನದಿಗಳು ದೇಶದ ಜೀವನಾಡಿ ಎಂದು ಕೇಳಿದ್ದೇವೆ. ನೀರಿನ ಸ್ರೋತವಾಗಿ, ಕೃಷಿಗೆ ಆಧಾರವಾಗಿ, ಪ್ರಯಾಣಕ್ಕಾಗಿ, ಹಲವಾರು ಸ್ಥಳಗಳನ್ನು ಬೆಸೆಯುವುದಕ್ಕಾಗಿ, ಸಾಮಾನು-ಸರಂಜಾಮುಗಳ ಸಾಗಣೆಗಾಗಿ, ಒಟ್ಟಾರೆ ನಾಗರಿಕ ಜೀವನದ ಆಧಾರಶಕ್ತಿಯಾಗಿ ನದಿಗಳ ಪಾತ್ರವಿದೆ. ಅಂತೆಯೇ ನಮ್ಮ ಶರೀರದಲ್ಲಿ ರಕ್ತವೂ ಕೂಡ. ಇಡೀ ದೇಹದಲ್ಲಿ, ಒಂದು ನಿಗದಿತ ಸ್ಥಳದಲ್ಲಿ ಹೆಚ್ಚು ಚಲನೆ ಇಲ್ಲದೆ ವ್ಯಾಪಿಸಿಕೊಂಡಿರುವ ಎಲ್ಲ ಅಂಗಾಂಗಗಳನ್ನು ಬೆಸೆಯುವುದು ರಕ್ತ; ಅವುಗಳ ಬೇಕು-ಬೇಡಗಳನ್ನು ಪೂರೈಸುವುದು ರಕ್ತ. ಆಯಾ ಅಂಗಗಳ ಸಂದೇಶಗಳನ್ನು ಮಿದುಳಿಗೆ ಒಯ್ಯುವ ಕೆಲಸವನ್ನು ಕೂಡ ರಕ್ತ ಮಾಡುತ್ತದೆ. ನಿರ್ನಾಳ ಗ್ರಂಥಿಗಳ ಹಾರ್ಮೋನ್ ಸ್ರವಿಕೆಗಳ ವಾಹಕವೂ ರಕ್ತ. ಹೀಗೆ ರಕ್ತ ಜೀವದ್ರವ; ರಕ್ತವೇ ಜೀವ.

ಶರೀರದೊಳಗೆ ರಕ್ತದ ಪರಿಚಲನೆ ಅತ್ಯಂತ ವ್ಯವಸ್ಥಿತವಾಗಿ ಆಗುವಂತಹ ಕ್ರಿಯೆ. ಅಸಲಿಗೆ ರಕ್ತ ಎನ್ನುವ ದ್ರವ ಕೇವಲ ರಕ್ತನಾಳಗಳ ಒಳಗೆ ಮಾತ್ರ ಇರುವಂತಹದ್ದು. ಈ ರಕ್ತನಾಳಗಳ ಹರಹು ಅತ್ಯಂತ ವಿಶಾಲ. ಎದೆಗೂಡಿನಲ್ಲಿ ಸುರಕ್ಷಿತವಾಗಿ ಕುಳಿತಿರುವ ಹೃದಯದ ಎಡಭಾಗದಿಂದ ಅಯೋರ್ಟಾ ಎನ್ನುವ ಮಹಾಧಮನಿ ಟಿಸಿಲು ಟಿಸಿಲಾಗಿ ಕವಲೊಡೆಯುತ್ತಾ, ಅತ್ಯಂತ ಸೂಕ್ಷ್ಮರೂಪದ ರಕ್ತನಾಳಗಳ ಮೂಲಕ ಇಡೀ ಶರೀರವನ್ನು ವ್ಯಾಪಿಸುತ್ತದೆ. ರಕ್ತನಾಳಗಳ ನೇರ ಸರಬರಾಜು ಇಲ್ಲದ ದೇಹದ ಭಾಗಗಳೂ ರಕ್ತದಿಂದಲೇ ಪರೋಕ್ಷವಾಗಿ ಸಾರವನ್ನು ಹೀರುತ್ತವೆ. ಹೀಗೆ ರಕ್ತ ಶರೀರದ ಎಲ್ಲ ಅಂಗಗಳನ್ನು ತಲುಪಿದರೂ ಎಲ್ಲಿಯೂ ಮುಕ್ತವಾಗಿ ಚೆಲ್ಲಾಡುವುದಿಲ್ಲ; ಎಲ್ಲೆಡೆಯೂ ರಕ್ತನಾಳಗಳ ಒಳಗೇ ಉಳಿಯುತ್ತದೆ.

ರಕ್ತದಲ್ಲಿ ಮುಖ್ಯವಾಗಿ ಎರಡು ಭಾಗಗಳು – ರಕ್ತದ 45% ಕೋಶಗಳು ಮತ್ತು ಉಳಿದ 55% ದ್ರವರೂಪದಲ್ಲಿನ ಪ್ಲಾಸ್ಮಾ. ಇದರಲ್ಲಿ ಕೋಶದ ಭಾಗವನ್ನು ಪ್ರಸ್ತುತ ಸಂಚಿಕೆಯಲ್ಲಿ ವಿವರಿಸಲಾಗುತ್ತದೆ. ಎರಡನೆಯ ಭಾಗದಲ್ಲಿ ಪ್ಲಾಸ್ಮಾ ಕುರಿತಾದ ವಿವರಣೆ ಬರುತ್ತದೆ.

ರಕ್ತದ ಕೋಶಗಳಲ್ಲಿ ಮೂರು ವಿಧ – ಕೆಂಪು ರಕ್ತಕಣಗಳು, ಬಿಳಿಯ ರಕ್ತಕೋಶಗಳು ಮತ್ತು ಪ್ಲೇಟ್ಲೆಟ್ ಕಣಗಳು. ಇದರಲ್ಲಿ ಅತ್ಯಂತ ವಿಫುಲ ಸಂಖ್ಯೆಯಲ್ಲಿ ಇರುವುದು ಕೆಂಪು ರಕ್ತಕಣಗಳು. ನಮ್ಮ ಶರೀರದಲ್ಲಿ ಇರುವ ಎಲ್ಲ ಕೋಶಗಳ ಪೈಕಿ ಶೇಕಡಾ 80 ಕ್ಕಿಂತಲೂ ಅಧಿಕ ಸಂಖ್ಯೆ ಕೆಂಪು ರಕ್ತಕಣಗಳದ್ದು. ವಯಸ್ಕರ ಶರೀರದಲ್ಲಿ ಕನಿಷ್ಠ 25 ಟ್ರಿಲಿಯನ್ (25 ಲಕ್ಷ-ಕೋಟಿ) ಕೆಂಪು ರಕ್ತಕಣಗಳಿವೆ ಎಂದು ಅಂದಾಜು. ಒಂದು ಮಿಲಿಲೀಟರ್ ರಕ್ತದಲ್ಲಿ ಸುಮಾರು 500-ಕೋಟಿ ಕೆಂಪು ರಕ್ತಕಣಗಳು ಇರುತ್ತವೆ. ಪ್ರತಿಯೊಂದು ಕೆಂಪು ರಕ್ತಕಣದ ವ್ಯಾಸ ಸುಮಾರು 6-8 ಮೈಕ್ರೋಮೀಟರ್. ಅಂದರೆ, ಒಂದು ಮಿಲಿಮೀಟರ್ ಅನ್ನು ಸಾವಿರ ಭಾಗ ಮಾಡಿದರೆ, ಅದರಲ್ಲಿ 6-8 ಭಾಗ. ಕೆಂಪು ರಕ್ತಕಣದ ಆಕಾರ ಎರಡೂ ಬದಿಯ ನಿಮ್ನ ಮಸೂರದ್ದು. ಸರಳವಾಗಿ ಹೇಳುವುದಾದರೆ ಎರಡು ತಟ್ಟೆಗಳನ್ನು ಬೆನ್ನು-ಬೆನ್ನಿಗೆ ಒತ್ತಿ ಹಿಡಿದಂತೆ. ಇದರಿಂದ ಕೆಂಪು ರಕ್ತಕಣಗಳು ಮಗುಚಿ, ಬಳುಕಿ, ಬಾಗಿ ತಮಗಿಂತ ಸಣ್ಣ ವ್ಯಾಸದ ರಕ್ತನಾಳಗಳ ಒಳಗೂ ನುಸುಳುತ್ತವೆ.

ಕೆಂಪು ರಕ್ತಕಣಗಳ ಅತಿ ಮುಖ್ಯ ಅಂಶವೆಂದರೆ, ಅವುಗಳಲ್ಲಿ ಕೋಶಕೇಂದ್ರ ಇಲ್ಲ; ಅವುಗಳು ವಿಭಜಿಸುವುದಿಲ್ಲ. ಕೋಶದ್ರವ್ಯವನ್ನು ಹೊರತುಪಡಿಸಿ, ಸಾಮಾನ್ಯ ಜೀವಕೋಶದಲ್ಲಿರುವ ಬೇರಾವ ಅಂಶಗಳೂ ಕೆಂಪು ರಕ್ತಕಣಗಳಲ್ಲಿ ಇಲ್ಲ. ಒಂದು ಲೆಕ್ಕಕ್ಕೆ, ಅವುಗಳಿಗೆ ಜೀವವೇ ಇಲ್ಲ. ಅವೇನಿದ್ದರೂ ಆಕ್ಸಿಜನ್ ಎನ್ನುವ ಸರಂಜಾಮು ಹೊತ್ತೊಯ್ಯುವ ವಾಹನಗಳು ಇದ್ದಂತೆ. ಅದರೊಳಗೆ ಆಕ್ಸಿಜನ್ ಎನ್ನುವ ಸರಕು ತುಂಬುವುದು ಶ್ವಾಸಕೋಶಗಳು. ಬಂಡಿ ಓಡಿಸುವ ಚಾಲಕ ಹೃದಯದ ಎಡಭಾಗದ ಪಂಪ್. ಆಯಾ ಅಂಗಗಳ ಜೀವಕೋಶಗಳು ಈ ಸರಕಿನ ಗ್ರಾಹಕರು. ತಮ್ಮ ಮನೆಯ ಬಳಿ ಕೆಂಪು ರಕ್ತಕಣ ಎನ್ನುವ ವಾಹನ ಬಂದಾಗ ಆಕ್ಸಿಜನ್ ಎನ್ನುವ ಸರಕನ್ನು ತಮಗೆ ಬೇಕಾದ ಪ್ರಮಾಣದಲ್ಲಿ ಇಳಿಸಿಕೊಳ್ಳುವುದು ಆಯಾ ಅಂಗದ ಕರ್ತವ್ಯ. ಹೀಗೆ ಸರಕು ಇಳಿಸಿಕೊಂಡ ನಂತರ ಖಾಲಿ ಬಂಡಿ ವಾಪಸ್ ಕಳಿಸುವುದು ಹೇಗೆ? ಹಾಗಾಗಿ, ತಮಗೆ ಬೇಡವಾದ ಇಂಗಾಲದ ಡೈ-ಆಕ್ಸೈಡ್ ಎನ್ನುವ ತ್ಯಾಜ್ಯವನ್ನು ಕೆಂಪು ರಕ್ತಕಣವೆಂಬ ವಾಹನಕ್ಕೆ ತುಂಬಿ ಮತ್ತೆ “ರೈಟ್-ರೈಟ್” ಎಂದರೆ ಹೃದಯದ ಬಲಭಾಗದ ಕಡೆಗೆ, ಅಲ್ಲಿಂದ ಶ್ವಾಸಕೋಶಗಳತ್ತ ಮತ್ತೆ ಅವುಗಳ ಪಯಣ ಆರಂಭ. ಕೆಂಪು ರಕ್ತಕಣಗಳ ಬಂಡಿ ಹೀಗೆ ಶ್ವಾಸಕೋಶ ತಲುಪಿದಾಗ ಅದರ ಇಂಗಾಲದ ಡೈ-ಆಕ್ಸೈಡ್ ಅನ್ನು ಇಳಿಸಿಕೊಂಡು, ಅದರೊಳಗೆ ಮತ್ತೆ ಆಕ್ಸಿಜನ್ ಸರಕನ್ನು ತುಂಬುವುದು ಶ್ವಾಸಕೋಶಗಳ ಕೆಲಸ. ಈ ಲೋಡಿಂಗ್-ಅನ್ಲೋಡಿಂಗ್ ಕೆಲಸ ಬದುಕಿನ ಉದ್ದಕ್ಕೂ ನಿರಂತರ ಸಾಗುತ್ತಲೇ ಇರಬೇಕು. ಅದಕ್ಕಾಗಿಯೇ, ಉಸಿರಾಟ ಮತ್ತು ಹೃದಯ ಬಡಿತಗಳಿಗೆ ಜೀವನದ ಉದ್ದಕ್ಕೂ ಪುರುಸೊತ್ತು ಎಂಬುದು ಇಲ್ಲವೇ ಇಲ್ಲ. ಅವುಗಳು ದಣಿದು “ಸಾಕು” ಎಂದರೆ ಜೀವವೂ ಇಲ್ಲ.

ತಮ್ಮನ್ನು ತಾವು ರಿಪೇರಿ ಮಾಡಿಕೊಳ್ಳದ ವಾಹನಗಳು ಎಷ್ಟು ಕಾಲ ಬಾಳಿಕೆ ಬಂದಾವು? ಯಾವುದೇ ಸಮಸ್ಯೆ ಬಾರದಿದ್ದರೆ ಕೆಂಪು ರಕ್ತಕಣ ಎನ್ನುವ ಬಂಡಿ ಸುಮಾರು 120 ದಿನಗಳ ಕಾಲ ತನ್ನ ಕೆಲಸ ಮಾಡಿಕೊಂಡು ಹೋಗುತ್ತದೆ. ಅದಕ್ಕೆ ವಯಸ್ಸಾಯಿತು; ಬಳುಕುವ, ಬಾಗುವ ಸಾಮರ್ಥ್ಯ ನಶಿಸಿತು; ಆಕ್ಸಿಜನ್ ಹೊರುವ ತ್ರಾಣ ಇಲ್ಲವಾಯಿತು ಎಂದಾಗ ಅದನ್ನು ಗುಲ್ಮದ ಗುಜರಿ ಅಂಗಡಿಗೆ ನುಗ್ಗಿಸಿ, ಮುರಿದು ಹಾಕುವುದು ಒಂದೇ ದಾರಿ. ಹೀಗೆ ಗುಲ್ಮದಲ್ಲಿ ಮುರಿದು ಬೀಳುವ ಕೆಂಪು ರಕ್ತಕಣಗಳ ಸಂಖ್ಯೆ ಒಂದು ಸೆಕೆಂಡಿಗೆ ಸುಮಾರು 20-25 ಲಕ್ಷ. ಅಷ್ಟೇ ಸಂಖ್ಯೆಯ ಹೊಸ ಕೆಂಪು ರಕ್ತಕಣಗಳನ್ನು ನಮ್ಮ ಅಸ್ಥಿಮಜ್ಜೆ ಎನ್ನುವ ಎಲುಬಿನ ನೆಣ ತಯಾರಿಸುತ್ತದೆ. ಹೀಗಾಗಿ, ಶರೀರದಲ್ಲಿನ ಒಟ್ಟಾರೆ ಕೆಂಪು ರಕ್ತಕಣಗಳ ಸಂಖ್ಯೆ ಸ್ಥಿರವಾಗಿ ಉಳಿಯುತ್ತದೆ.

ಕೆಂಪು ರಕ್ತಕಣಗಳ ಒಡಲಿನಲ್ಲಿರುವ, ಅದರ ಕೆಂಪು ಬಣ್ಣಕ್ಕೆ ಕಾರಣವಾದ ಹೀಮೋಗ್ಲೋಬಿನ್ ಎನ್ನುವ ವಿಶಿಷ್ಟ ರಾಸಾಯನಿಕ ವಸ್ತುವೇ ನಮ್ಮ ಶರೀರದ ಆಕ್ಸಿಜನ್ ವಾಹಕ. ಹೀಮೋಗ್ಲೋಬಿನ್ ಎಂಬುದು ರಾಸಾಯನಿಕ ಸಂಯುಕ್ತ: ಹೀಮ್ ಎನ್ನುವ, ಆಕ್ಸಿಜನ್ ಅನ್ನು ತನ್ನೊಳಗೆ ಬಿಗಿದು ಇಡುವ ಅಣುಗಳ ಗುಂಪು ಮತ್ತು ಅದರ ಸುತ್ತ ಗ್ಲೋಬಿನ್ ಎನ್ನುವ ಪ್ರೋಟೀನಿನ ಗೋಡೆ ಸೇರಿದರೆ ಹೀಮೋಗ್ಲೋಬಿನ್. ಹೀಮ್ ರಾಸಾಯನಿಕ ಕೆಲಸ ಮಾಡಲು ಅತ್ಯಗತ್ಯವಾದ ಧಾತು ಕಬ್ಬಿಣ. ಹೀಗಾಗಿ, ಶರೀರದಲ್ಲಿ ಕಬ್ಬಿಣದ ಅಂಶ ಕಡಿಮೆಯಾದರೆ ಆಕ್ಸಿಜನ್ ಒಯ್ಯುವ ಸಾಮರ್ಥ್ಯವೂ ನಶಿಸಿ, ದೇಹ ನಿತ್ರಾಣಗೊಳ್ಳುತ್ತದೆ. ಒಂದು ಕೆಂಪು ರಕ್ತಕಣದಲ್ಲಿ 27 ಕೋಟಿ ಹೀಮೋಗ್ಲೋಬಿನ್ ಅಣುಗಳಿರುತ್ತವೆ. ಪ್ರತಿಯೊಂದು ಹೀಮೋಗ್ಲೋಬಿನ್ ಅಣುವೂ 4 ಆಕ್ಸಿಜನ್ ಅಣುಗಳನ್ನು ಸಾಗಿಸುತ್ತವೆ. ಹೀಗೆ, ಒಂದು ಕೆಂಪು ರಕ್ತಕಣ ಸುಮಾರು 100 ಕೋಟಿ ಆಕ್ಸಿಜನ್ ಅಣುಗಳನ್ನು ಹೊತ್ತೊಯ್ಯಬಲ್ಲದು. ಅಂದರೆ, ಶರೀರದಲ್ಲಿ ಯಾವುದೇ ಘಳಿಗೆಯಲ್ಲೂ ಸುಮಾರು 12 ಕೋಟಿ ಕೋಟಿ ಕೋಟಿ ಆಕ್ಸಿಜನ್ ಅಣುಗಳಿರುತ್ತವೆ (12 ರ ಮುಂದೆ 21 ಸೊನ್ನೆಗಳು). ಇದೊಂದು ರೀತಿಯಲ್ಲಿ ಊಹೆಗೂ ನಿಲುಕದ ಸಂಖ್ಯೆ!

ಬಿಳಿಯ ರಕ್ತಕಣಗಳ ಸಂಖ್ಯೆ ಸೀಮಿತ. ಅವುಗಳಲ್ಲಿ ಕೋಶಕೇಂದ್ರವಿದೆ. ಇದರಲ್ಲಿ ಮೂರು ಮುಖ್ಯ ಪ್ರಭೇದಗಳು; ಅವುಗಳ ಎಲ್ಲ ಉಪವಿಭಾಗಗಳೂ ಸೇರಿ 50ಕ್ಕೂ ಹೆಚ್ಚು ಬಗೆಯ ಕೋಶಗಳನ್ನು ಗುರುತಿಸಲಾಗಿದೆ. ಒಂದು ಮಿಲಿಲೀಟರ್ ರಕ್ತದಲ್ಲಿ ಸುಮಾರು 40-100 ಲಕ್ಷ ಬಿಳಿಯ ರಕ್ತಕಣಗಳು ಇರುತ್ತವೆ. ಕಾಯಿಲೆಗಳ ವಿರುದ್ಧ ಹೋರಾಡುವುದು ಇವುಗಳ ಮುಖ್ಯ ಕರ್ತವ್ಯ. ಹೀಗಾಗಿ, ಕಾಯಿಲೆಗಳ ವೇಳೆ ಇವುಗಳ ಸಂಖ್ಯೆ ವೃದ್ಧಿಸುತ್ತದೆ. ಹಾಗಾಗಿ, ರಕ್ತದಲ್ಲಿನ ಬಿಳಿಯ ರಕ್ತಕಣಗಳ ಸಂಖ್ಯೆಯನ್ನು ಲೆಕ್ಕ ಹಾಕಿದರೆ ಶರೀರದಲ್ಲಿ ಕಾಯಿಲೆ ಇರುವಿಕೆ ತಿಳಿಯುತ್ತದೆ. ಅದರ ಜೊತೆಗೆ ಮಾನಸಿಕ ಒತ್ತಡ, ಕ್ಯಾನ್ಸರ್, ಅಲರ್ಜಿ ಸಮಸ್ಯೆಗಳು, ಔಷಧ ಸೇವನೆ ಮೊದಲಾದ ವೇಳೆ ಬಿಳಿಯ ರಕ್ತಕಣಗಳ ಸಂಖ್ಯೆ ಏರುಪೇರಾಗುತ್ತದೆ.

ಒಡೆದ, ಬಿರುಕು ಬಿಟ್ಟ ರಕ್ತನಾಳಗಳನ್ನು ರಿಪೇರಿ ಮಾಡುವುದು, ರಕ್ತ ಹೆಪ್ಪುಗಟ್ಟುವುದನ್ನು ಪ್ರಚೋದಿಸುವುದು ಪ್ಲೇಟ್ಲೆಟ್ ಕೋಶಗಳ ಮುಖ್ಯ ಕೆಲಸ. ಕೆಂಪು ರಕ್ತಕಣಗಳಂತೆಯೇ ಇವುಗಳಿಗೂ ಕೋಶಕೇಂದ್ರವಿಲ್ಲ; ವಿಭಜನೆಯಿಲ್ಲ. ಹೆಚ್ಚೆಂದರೆ 8-9 ದಿನಗಳ ಕಾಲ ಇವು ಕೆಲಸ ಮಾಡುತ್ತವೆ. ಆದರೆ ಇಷ್ಟು ಅವಧಿಗೆ ಮುನ್ನವೇ ಅವು ಉಪಯೋಗಿಸಲ್ಪಟ್ಟು ಖರ್ಚಾಗಿ ಹೋಗುತ್ತವೆ. ಒಂದು ಮಿಲಿಲೀಟರ್ ರಕ್ತದಲ್ಲಿ 15-45 ಕೋಟಿ ಪ್ಲೇಟ್ಲೆಟ್ ಕೋಶಗಳಿರುತ್ತವೆ. ದಿನವೊಂದಕ್ಕೆ ಶರೀರದಲ್ಲಿ ಸುಮಾರು ಹತ್ತುಸಾವಿರ-ಕೋಟಿ ಪ್ಲೇಟ್ಲೆಟ್ ಗಳು ಉತ್ಪತ್ತಿಯಾಗುತ್ತವೆ.

ರಕ್ತದಿಂದ ಕೋಶಗಳನ್ನು ತೆಗೆದರೆ ಉಳಿಯುವ ನುಸುಹಳದಿ ಬಣ್ಣದ ದ್ರವವನ್ನು ಪ್ಲಾಸ್ಮಾ ಎನ್ನಲಾಗುತ್ತದೆ. ಇದು ರಕ್ತದ ದ್ರವಭಾಗ. ರಕ್ತದ ಶೇಕಡಾ 55 ಭಾಗ ಪ್ಲಾಸ್ಮಾ; ಉಳಿದದ್ದು ಕೋಶಗಳು. ಅಂದರೆ, ಶರೀರದಲ್ಲಿ ಸುಮಾರು 3 ಲೀಟರ್ನಷ್ಟು ಪ್ಲಾಸ್ಮಾ ಇರುತ್ತದೆ. ಶರೀರಕ್ಕೆ ಅಗತ್ಯವಾದ ಹಲವಾರು ಪ್ರೋಟೀನುಗಳು, ಗ್ಲುಕೋಸ್, ಖನಿಜಾಂಶಗಳು, ಹಾರ್ಮೋನುಗಳು, ರಕ್ತವನ್ನು ಹೆಪ್ಪುಗಟ್ಟಿಸುವ ಅಂಶಗಳು ಇರುತ್ತವೆ. ರಕ್ತವನ್ನು ಹೆಪ್ಪುಗಟ್ಟಿಸುವ ಅಂಶಗಳನ್ನು ಪ್ಲಾಸ್ಮಾದಿಂದ ತೆಗೆದರೆ ಉಳಿಯುವ ದ್ರವಾಂಶವನ್ನು ಸೀರಮ್ ಎನ್ನುತ್ತಾರೆ. ಪ್ಲಾಸ್ಮಾದ ಶೇಕಡಾ 95 ಭಾಗ ನೀರು. ಅದರ ಉಳಿದ ಎಲ್ಲ ಅಂಶಗಳೂ ಸೇರಿ ಶೇಕಡಾ 5. ಹೀಗಾಗಿಯೇ ಪ್ಲಾಸ್ಮಾದ ಸಾಂದ್ರತೆ ಸರಿಸುಮಾರು ನೀರಿನಷ್ಟೇ ಇರುತ್ತದೆ (1.025). ಅನೇಕ ಕಾಯಿಲೆಗಳಲ್ಲಿ ಪ್ಲಾಸ್ಮಾದ ಬಣ್ಣ ಬದಲಾಗಿರುತ್ತದೆ; ಕಾಯಿಲೆಯನ್ನು ಅಂದಾಜಿಸಲು ಇದು ಸಹಕಾರಿ.  

ಶರೀರದಲ್ಲಿನ ದ್ರವವನ್ನು ಎರಡು ಮುಖ್ಯ ಭಾಗಗಳನ್ನಾಗಿ ವಿಂಗಡಿಸಬಹುದು – ಜೀವಕೋಶಗಳ ಒಳಗೆ ಇರುವ ದ್ರವ ಮತ್ತು ಜೀವಕೋಶಗಳ ಹೊರಗೆ ಇರುವ ದ್ರವ. ಈ ಎರಡನೆಯ ಭಾಗವನ್ನು ರಕ್ತನಾಳಗಳ ಒಳಗೆ ಮತ್ತು ಹೊರಗೆ ಇರುವ ದ್ರವಗಳು ಎನ್ನುವ ಮತ್ತೆರಡು ವಿಭಾಗಗಳನ್ನಾಗಿಸಬಹುದು. ಇದರ ಪೈಕಿ ರಕ್ತನಾಳಗಳ ಒಳಗೆ ಇರುವ ಶರೀರದ ದ್ರವಾಂಶ ಪ್ಲಾಸ್ಮಾ. ಶರೀರದ ಇತರ ಭಾಗದಲ್ಲಿ ನೀರಿನ ಅಂಶ ಕಡಿಮೆಯಾದಾಗ ಪ್ಲಾಸ್ಮಾದಿಂದ ಸ್ವಲ್ಪ ಭಾಗ ನೀರಿನ ಅಂಶ ರಕ್ತನಾಳಗಳಿಂದ ಹೊರಗೆ ಹರಿದು, ಸಹಾಯ ಮಾಡಬಲ್ಲದು. ಆದರೆ ಇಂತಹ ಪ್ರಮಾಣಕ್ಕೆ ಮಿತಿ ಇರುತ್ತದೆ.

ಪ್ಲಾಸ್ಮಾದ ಪ್ರೋಟೀನ್ಗಳು ಶರೀರದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಲ್ಬ್ಯುಮಿನ್ ಎನ್ನುವುದು ಇಲ್ಲಿ ಕಾಣುವ ಅತಿ ಹೆಚ್ಚು ಪ್ರಮಾಣದ ಪ್ರೋಟೀನ್. ಒಂದು ಲೀಟರ್ ಪ್ಲಾಸ್ಮಾದಲ್ಲಿ 35-50 ಗ್ರಾಂ ಆಲ್ಬ್ಯುಮಿನ್ ಇರುತ್ತದೆ. ಯಕೃತ್ತಿನಲ್ಲಿ ಉತ್ಪತ್ತಿಯಾಗುವ ಆಲ್ಬ್ಯುಮಿನ್ ನೀರಿನಲ್ಲಿ ಕರಗುವಂತಹದ್ದು. ಸುಮಾರು 67 ಕಿಲೋಡಾಲ್ಟನ್ ತೂಕದ ಆಲ್ಬ್ಯುಮಿನ್ನಲ್ಲಿ 585 ಅಮೈನೊ-ಆಮ್ಲಗಳಿವೆ. ಇದು ಯಕೃತ್ತಿನಲ್ಲಿ ಉತ್ಪತ್ತಿಯಾಗಿ, ಪ್ಲಾಸ್ಮಾ ಸೇರುತ್ತದೆ. ಹಲವಾರು ಹಾರ್ಮೋನುಗಳನ್ನು ಹೊತ್ತೊಯ್ಯುವ ಪ್ರಮುಖ ಜವಾಬ್ದಾರಿ ಇದರದ್ದು. ಇದರ ಜೊತೆಗೆ ಮೇದಸ್ಸಿನ ಆಮ್ಲಗಳು, ಔಷಧಗಳು, ಕ್ಯಾಲ್ಸಿಯಂ, ಬಿಲಿರುಬಿನ್ ಮೊದಲಾದುವುಗಳನ್ನು ಕೂಡ ಹೊತ್ತು, ಅವುಗಳ ಗಮ್ಯಸ್ಥಾನಕ್ಕೆ ತಲುಪಿಸುತ್ತವೆ.

ಪ್ಲಾಸ್ಮಾ ಪ್ರೋಟೀನುಗಳ ಪೈಕಿ ಎರಡನೆಯ ಸ್ಥಾನ ಗ್ಲಾಬ್ಯುಲಿನ್ ಪಂಗಡದ್ದು. ಇವುಗಳ ಪ್ರಮಾಣ ಒಂದು ಲೀಟರ್ ಪ್ಲಾಸ್ಮಾಗೆ 25-35 ಗ್ರಾಂ. ಇವುಗಳಲ್ಲಿ ಮೂರು ಪ್ರಭೇದಗಳಿವೆ. ಮೊದಲನೆಯ ಆಲ್ಫಾ ಪ್ರವರ್ಗ ಯಕೃತ್ತಿನಲ್ಲಿ ಉತ್ಪತ್ತಿಯಾಗಿ, ಶರೀರದಲ್ಲಿ ಖನಿಜಗಳ ಸಾಗಣೆಗೆ ನೆರವಾಗುತ್ತದೆ. ಎರಡನೆಯ ಬೀಟಾ ಪ್ರವರ್ಗ ಮೇದಸ್ಸಿನ ಜೊತೆಗೂಡಿ, ಶರೀರದ ಸ್ಟೀರಾಯ್ಡುಗಳ ಉತ್ಪಾದನೆಗೆ, ಕೋಶಗಳ ಹೊರ ಆವರಣದ ತಯಾರಿಗೆ ಸಹಾಯ ಮಾಡುತ್ತದೆ. ಮೂರನೆಯ ಗ್ಯಾಮಾ ಪ್ರವರ್ಗವನ್ನು ಪ್ರತಿಕಾಯಗಳು ಎಂದೂ ಕರೆಯಲಾಗುತ್ತದೆ. ಇದು ಶರೀರದ ರಕ್ಷಕ ವ್ಯವಸ್ಥೆಯ ಭಾಗವಾಗಿ, ರೋಗಗಳ ವಿರುದ್ಧದ ಹೊಡೆದಾಟದಲ್ಲಿ ಕೆಲಸ ಮಾಡುತ್ತದೆ.

ಪ್ಲಾಸ್ಮಾ ಪ್ರೋಟೀನುಗಳಲ್ಲಿ ಮೂರನೆಯ ಭಾಗ ಯಕೃತ್ತಿನಲ್ಲಿ ತಯಾರಾಗುವ ಫಿಬ್ರಿನೋಜೆನ್ ಎನ್ನುವ ಸಕ್ಕರೆ-ಮಿಶ್ರಿತ ಪ್ರೋಟೀನ್. ಇದು ರಕ್ತ ಹೆಪ್ಪುಗಟ್ಟುವಿಕೆಯ ಪ್ರಮುಖ ಪಾತ್ರಧಾರಿ. ಒಂದು ಲೀಟರ್ ಪ್ಲಾಸ್ಮಾದಲ್ಲಿ ಇದರ ಭಾಗ 1.5-3 ಗ್ರಾಂ. ಇದರ ಜೊತೆಗೆ ಪ್ಲಾಸ್ಮಾದಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುವ ಇತರ ಅಂಶಗಳೂ ಇರುತ್ತವೆ. ಒಟ್ಟು 12 ಬಗೆಯ ಇಂತಹ ಅಂಶಗಳನ್ನು ಗುರುತಿಸಲಾಗಿದೆ. ಇದರ ಜೊತೆಗೆ ಇನ್ನೂ 20 ರಾಸಾಯನಿಕಗಳನ್ನು ರಕ್ತ ಹೆಪ್ಪುಗಟ್ಟಿಸುವ ಮತ್ತು ಅದನ್ನು ಕರಗಿಸುವ ಪ್ರಕ್ರಿಯೆಯ ಸಹಕಾರಿಗಳೆಂದು ಪತ್ತೆ ಮಾಡಲಾಗಿದೆ.

ಒಂದು ಕಾಲದಲ್ಲಿ ರಕ್ತವನ್ನು ದಾನಿಯಿಂದ ಪಡೆದು, ಗುಂಪು ಹೊಂದುವ ರೋಗಿಗೆ ಇಡಿಯಾಗಿ ನೀಡುವುದಿತ್ತು. ಈಗ ಆ ಪದ್ದತಿ ಬಹಳ ಅಪರೂಪ. ಈಗ ದಾನಿಯಿಂದ ಪಡೆದ ರಕ್ತವನ್ನು ಹಲವಾರು ಬಗಗಳಲ್ಲಿ ವಿಂಗಡಣೆ ಮಾಡಬಹುದು. ರಕ್ತಹೀನತೆಯ ರೋಗಿಗಳಿಗೆ ಪ್ಲಾಸ್ಮಾ ಅಗತ್ಯ ಇರುವುದಿಲ್ಲ. ಅಂತಹವರಿಗೆ ಕೇವಲ ಕೆಂಪು ರಕ್ತಕಣಗಳನ್ನು ಮಾತ್ರ ನೀಡಬಹುದು. ಅಂತೆಯೇ, ಸಾಂದ್ರಗೊಳಿಸಿದ ಪ್ಲೇಟ್ಲೆಟ್ ದ್ರವವನ್ನೂ ನೀಡಲು ಸಾಧ್ಯ. ಹೀಗೆ ರಕ್ತಕಣಗಳನ್ನು ವಿಂಗಡಿಸಿದ ನಂತರ ಉಳಿಯುವ ಪ್ಲಾಸ್ಮಾವನ್ನು ಹಲವಾರು ರೋಗಗಳ ಆಂಗಿಕ ಚಿಕಿತ್ಸೆಯಾಗಿ ಬಳಸಬಹುದು. ರಕ್ತದಲ್ಲಿ ದ್ರವಾಂಶ ಕಡಿಮೆಯಾದವರಿಗೆ, ಕಾಯಿಲೆಯ ವೇಳೆ ರಕ್ತದ ಪ್ರೋಟೀನ್ ಕಳೆದುಕೊಂಡವರಿಗೆ, ರಕ್ತವನ್ನು ಹೆಪ್ಪುಗಟ್ಟಿಸುವ ಅಂಶಗಳ ಕೊರತೆ ಇರುವವರಿಗೆ ಪ್ಲಾಸ್ಮಾ ಮರುಪೂರಣ ಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಅತ್ಯಗತ್ಯ ಔಷಧಗಳ ಪಟ್ಟಿಯಲ್ಲಿ ಪ್ಲಾಸ್ಮಾ ಉಲ್ಲೇಖವಿದೆ. ದಾನಿಯ ರಕ್ತದಿಂದ ಪ್ರತ್ಯೇಕಿಸಿ ತೆಗೆದ ಪ್ಲಾಸ್ಮಾವನ್ನು ಶೈತ್ಯೀಕರಣಗೊಳಿಸಿ, ಮೈನಸ್ 30 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಕಾದಿಟ್ಟು, ಸುಮಾರು ಒಂದು ವರ್ಷ ಕಾಲದವರೆಗೆ ಬಳಕೆ ಮಾಡಬಹುದು. ಹೀಗೆ ಶೈತ್ಯೀಕರಿಸಿದ ಪ್ಲಾಸ್ಮಾವನ್ನು ಸಾಮಾನ್ಯ ತಾಪಮಾನಕ್ಕೆ ತಂದ ನಂತರ ಕೂಡಲೇ ಬಳಸಬೇಕು; ಮತ್ತೊಮ್ಮೆ ಶೈತ್ಯೀಕರಣ ಮಾಡಲಾಗದು. ರಕ್ತದ ಹೆಪ್ಪುಗಟ್ಟುವಿಕೆಗೆ ಕಾರಣವಾದ ಪ್ರಮುಖ ಅಂಶವೊಂದನ್ನು ಮಾತ್ರ ಪ್ಲಾಸ್ಮಾದಿಂದ ಪ್ರತ್ಯೇಕಿಸಿ, ಅದನ್ನು ಅಗತ್ಯ ರೋಗಿಗಳಿಗೆ ಮರುಪೂರಣ ಮಾಡುವ ವ್ಯವಸ್ಥೆಯೂ ಇದೆ. ರಕ್ತದಾನಿಗಳು ಈಗ ಕೇವಲ ಪ್ಲಾಸ್ಮಾವನ್ನು ಮಾತ್ರ ದಾನ ಮಾಡಲು ಕೂಡ ಸಾಧ್ಯ. ಅಂದರೆ, ದಾನಿಯ ರಕ್ತವನ್ನು ತೆಗೆದು, ಅದರಿಂದ ಪ್ಲಾಸ್ಮಾವನ್ನು ಪ್ರತ್ಯೇಕಿಸಿ, ರಕ್ತಕಣಗಳನ್ನು ಪುನಃ ದಾನಿಗೆ ವಾಪಸ್ ನೀಡುವ ವ್ಯವಸ್ಥೆ. ಸಾಮಾನ್ಯ ರಕ್ತದಾನಿಯಿಂದ 300 ಮಿಲಿಲೀಟರ್ ರಕ್ತವನ್ನು ಒಮ್ಮೆಗೆ ಪಡೆಯಲಾಗುತ್ತದೆ. ಆದರೆ, ಕೇವಲ ಪ್ಲಾಸ್ಮಾವನ್ನು ಮಾತ್ರ ನೀಡುವ ದಾನಿಯಿಂದ ಒಂದು ಬಾರಿಗೆ ಸುಮಾರು ಒಂದು ಲೀಟರ್ ಪ್ಲಾಸ್ಮಾವನ್ನು ಪಡೆಯಲು ಸಾಧ್ಯ. ಇದರ ಬದಲಿಗೆ ಅಷ್ಟು ಪ್ರಮಾಣದ ಖನಿಜಯುಕ್ತ ದ್ರವವನ್ನು ದಾನಿಗೆ ಮರುಪೂರಣ ಮಾಡಬಹುದು. ಪ್ಲಾಸ್ಮಾ ದಾನಿಗಳ ಶರೀರದಲ್ಲಿ 24 ತಾಸುಗಳಲ್ಲಿ ಸಹಜ ಪ್ಲಾಸ್ಮಾ ತಯಾರಾಗಿರುತ್ತದೆ. ಸಾಮಾನ್ಯ ರಕ್ತದಾನಿಗೆ ಎರಡು ರಕ್ತದಾನಗಳ ಸುಮಾರು 2-3 ತಿಂಗಳ ಅಂತರ ಇರಬೇಕಾಗುತ್ತದೆ. ಆದರೆ ಕೇವಲ ಪ್ಲಾಸ್ಮಾ ದಾನವನ್ನು ಮಾತ್ರ ಮಾಡುವವರು ಒಂದು ವಾರಕ್ಕೆ ಒಮ್ಮೆಯಂತೆ ಕೂಡ ಮಾಡಲು ಸಾಧ್ಯ.

ಶರೀರದ ರಕ್ಷಕ ವ್ಯವಸ್ಥೆಗೆ ಸಂಬಂಧಿಸಿದ ಕೆಲವು ಕಾಯಿಲೆಗಳು ಇರುತ್ತವೆ. ಇದರಲ್ಲಿ ಕಾಯಿಲೆಗಳ ಉಲ್ಬಣಕ್ಕೆ ಕಾರಣವಾದ ಕೆಲವು ರಾಸಾಯನಿಕ ಸಂಯುಕ್ತಗಳು ರೋಗಿಯ ಪ್ಲಾಸ್ಮಾದಲ್ಲಿ ಹರಿದಾಡುತ್ತಿರುತ್ತವೆ. ಇಂತಹ ಸಂದರ್ಭಗಳಲ್ಲಿ ರೋಗಿಯ ರಕ್ತದಲ್ಲಿನ ಪ್ಲಾಸ್ಮಾವನ್ನು ಸೋಸಿ, ಕಾಯಿಲೆಗೆ ಕಾರಣವಾಗಬಲ್ಲ ಅಂಶಗಳನ್ನು ನಿವಾರಿಸಿ, ಚಿಕಿತ್ಸೆ ನೀಡಬಹುದು. ಇದನ್ನು ಪ್ಲಾಸ್ಮಾಫೆರೆಸಿಸ್ ಎಂದು ಕರೆಯುತ್ತಾರೆ. ರೋಗಿಯ ಪ್ಲಾಸ್ಮಾವನ್ನು ಸೋಸಿ, ಕಾಯಿಲೆಕಾರಕ ಅಂಶಗಳನ್ನು ನಿವಾರಿಸಿ, ಅದನ್ನೇ ಮರುಪೂರಣ ಮಾಡಬಹುದು. ಇಲ್ಲವೇ, ರೋಗಿಯ ರಕ್ತದಲ್ಲಿನ ಎಲ್ಲ ಪ್ಲಾಸ್ಮಾವನ್ನು ಪ್ರತ್ಯೇಕಿಸಿ, ಅದನ್ನು ಹೊರ ಹಾಕಿ, ಅದರ ಬದಲಿಗೆ ದಾನಿಯ ಪ್ಲಾಸ್ಮಾ ನೀಡಿ ಮರುಪೂರಣ ಮಾಡಬಹುದು. ಹಲವಾರು ಕ್ಲಿಷ್ಟಕರ ಕಾಯಿಲೆಗಳ ಚಿಕಿತ್ಸೆಯಲ್ಲಿ ಈ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.

ಪ್ಲಾಸ್ಮಾದ ಮತ್ತೊಂದು ಅಂಶ ಖನಿಜಗಳು. ಇವುಗಳಲ್ಲಿ ಅಯಾನುಗಳ ಮೂಲಕ ವಿದ್ಯುದಾವೇಶವನ್ನು ಹೊಮ್ಮಿಸಬಲ್ಲ ಸೋಡಿಯಂ, ಪೊಟಾಸಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂ ಮೊದಲಾದ ಖನಿಜಾಂಶಗಳಿರುತ್ತವೆ. ಪ್ರತಿಯೊಂದು ಜೀವಕೋಶದ ಹೊರ ಆವರಣದಲ್ಲಿ ಬಾಗಿಲುಗಳು ಇರುತ್ತವೆ. ಇಂತಹ ಬಾಗಿಲುಗಳನ್ನು ತೆರೆಯುವ ಮತ್ತು ಮುಚ್ಚುವ ಮೂಲಕ ಜೀವಕೋಶಗಳಲ್ಲಿನ ಅಯಾನುಗಳ ಮಟ್ಟ ಅದರ ಹೊರಗಿನ ದ್ರವದ ಮಟ್ಟಕ್ಕಿಂತಲೂ ಭಿನ್ನವಾಗಿರುವಂತೆ ವ್ಯವಸ್ಥೆಯಿದೆ. ಇಂತಹ ವ್ಯತ್ಯಾಸದಿಂದಲೇ ಜೀವಕೋಶಗಳ ವಿದ್ಯುದಾವೇಶವೂ ನಿರ್ಧಾರವಾಗುತ್ತದೆ. ಇಂತಹ ಅಯಾನುಗಳ ಖಜಾನೆಯಂತೆ ಪ್ಲಾಸ್ಮಾ ವರ್ತಿಸುತ್ತದೆ. ಶರೀರದ ಜೀವಕೋಶಗಳ ಅಯಾನುಗಳ ಮಟ್ಟದಲ್ಲಿ ಏರುಪೇರಾದರೆ, ಅದು ಪ್ಲಾಸ್ಮಾದಲ್ಲಿನ ಅಯಾನುಗಳ ಮಟ್ಟವನ್ನು ಬದಲಾಯಿಸುತ್ತದೆ. ಜೀವಕೋಶಗಳ ಒಳಗಿನ ಅಯಾನುಗಳನ್ನು ಲೆಕ್ಕ ಹಾಕುವುದು ಆಚರಣೆಯ ದೃಷ್ಟಿಯಿಂದ ಬಹಳ ಕಷ್ಟ. ಆದರೆ, ಪ್ಲಾಸ್ಮಾದಿಂದ ಸೀರಮ್ ಅನ್ನು ಪಡೆದು, ಅದರಲ್ಲಿ ಅಯಾನುಗಳ ಮಟ್ಟವನ್ನು ಲೆಕ್ಕ ಹಾಕುವುದು ಸುಲಭ. ಹೀಗಾಗಿ, ಶರೀರದ ಅಯಾನುಗಳ ಪರಿಸ್ಥಿತಿಗೆ ಪ್ಲಾಸ್ಮಾ ಕನ್ನಡಿ ಹಿಡಿಯುತ್ತದೆ. ಹಲವಾರು ಕಾಯಿಲೆಗಳ ಪತ್ತೆಗೆ (ಅದರಲ್ಲೂ ಮೂತ್ರಪಿಂಡಗಳ ಸಮಸ್ಯೆಗಳ ನಿರ್ಧಾರಕ್ಕೆ), ಚಿಕಿತ್ಸೆಗಳ ಆಯ್ಕೆಗಳಿಗೆ, ನೀಡುತ್ತಿರುವ ಚಿಕಿತ್ಸೆ ಫಲಕಾರಿ ಆಗುತ್ತಿದೆಯೇ ಇಲ್ಲವೇ ಎಂಬ ಆಲೋಚನೆಗಳಿಗೆ ಸೀರಮ್ ಅಯಾನುಗಳ ಮಟ್ಟವನ್ನು ಪರೀಕ್ಷಿಸುವುದು ಬಹಳ ಸಹಕಾರಿ.

ಶರೀರದ ನಿರ್ನಾಳ ಗ್ರಂಥಿಗಳು ಉತ್ಪಾದಿಸುವ ಹಾರ್ಮೋನುಗಳು ಸೀದಾ ಪ್ಲಾಸ್ಮಾಗೆ ಇಳಿಯುತ್ತವೆ. ಪ್ಲಾಸ್ಮಾದಲ್ಲಿನ ಪ್ರೋಟೀನುಗಳ ಸವಾರಿ ಮಾಡುತ್ತಾ ಹಾರ್ಮೋನುಗಳು ತಮ್ಮ ಗಮ್ಯವನ್ನು ತಲುಪುತ್ತವೆ. ಇದಕ್ಕಾಗಿಯೇ ವಿಶೇಷ ಬಗೆಯ ಪ್ರೋಟೀನುಗಳು ಪ್ಲಾಸ್ಮಾದಲ್ಲಿ ಇವೆ. ಇಂತಹ ಹಾರ್ಮೋನುಗಳ ಮಟ್ಟವನ್ನು ಪ್ಲಾಸ್ಮಾದ ಪರೀಕ್ಷೆಯ ಮೂಲಕ ತಿಳಿದು, ನಿರ್ನಾಳ ಗ್ರಂಥಿ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ನಿರ್ಧರಿಸಬಹುದು. ಸಮಸ್ಯೆ ಇದ್ದರೆ ಆಯಾ ಹಾರ್ಮೋನುಗಳ ಚಿಕಿತ್ಸೆ ನೀಡಿ, ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು. ಮಧುಮೇಹಿಗಳಲ್ಲಿ ರಕ್ತವನ್ನು ಪರೀಕ್ಷಿಸಿ, ಸಕ್ಕರೆಯ ಅಂಶವನ್ನು ತಿಳಿದು, ಅದಕ್ಕೆ ಸರಿಯಾಗಿ ಇನ್ಸುಲಿನ್ ಚಿಕಿತ್ಸೆ ಮಾಡುವ ಮೂಲಕ ಸಮಸ್ಯೆಯನ್ನು ಹತೋಟಿಯಲ್ಲಿ ಇಡುವುದು ಬಹುತೇಕ ಎಲ್ಲರೂ ಅರಿತಿರುವ ಸಂಗತಿ.

ಒಟ್ಟಿನಲ್ಲಿ ರಕ್ತ ಎನ್ನುವುದು ಅಚ್ಚರಿಗಳ ಗಣಿ. ಅದರ ಗಣಿತವನ್ನು ಅರಿಯುವುದು ರಕ್ತವನ್ನು, ತನ್ಮೂಲಕ ಇಡೀ ಶರೀರವನ್ನು ಅರ್ಥ ಮಾಡಿಕೊಳ್ಳುವ ಅತ್ಯುತ್ತಮ ವಿಧಾನ.

-------------------- 

#ಮಾನವ_ದೇಹದ_ಗಣಿತ

ಜುಲೈ 2025 ತಿಂಗಳ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ.

ಜುಲೈ 2025 ತಿಂಗಳ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಕೊಂಡಿ: https://www.flipbookpdf.net/web/site/96999c7307f2bff9f7a4b91a6e94f256c5281648FBP32051436.pdf.html?fbclid=IwY2xjawNpTpRleHRuA2FlbQIxMABicmlkETFtR0J5YmZnM1p3TXRDQ0g1AR5LO8UER4NEIWi_HQDVjeVYloFEV-UN09lbBjXfUbxECYAPaJFw_0lSZae0RQ_aem_23UKJlhpAMZeN6qxceswYw  

 


ಸೋಮವಾರ, ಜೂನ್ 23, 2025


 

ಮತ್ತೆ ಕೋವಿಡ್ – ಭೀತಿ ಬೇಡ; ಎಚ್ಚರವಿರಲಿ

ಡಾ. ಕಿರಣ್ ವಿ.ಎಸ್.

ವೈದ್ಯರು

ನಮ್ಮ ದೃಶ್ಯ ಮಾಧ್ಯಮಗಳಲ್ಲಿ “ಮರುಕಳಿಸಿದ ಮಹಾಮಾರಿ” ಮಾದರಿಯ ಆರ್ಭಟಗಳು ಏರಿವೆ. ಕೋವಿಡ್-19 ರೋಗಿಗಳು ಮತ್ತೆ ವರದಿಯಾಗಿದ್ದಾರೆ. ಅಲ್ಲಲ್ಲಿ ಸಾವು-ನೋವುಗಳು ಸಂಭವಿಸಿವೆ. ನಾಲ್ಕೈದು ವರ್ಷಗಳ ಹಿಂದೆ ಜಗತ್ತನ್ನು ಇನ್ನಿಲ್ಲದಂತೆ ತಲ್ಲಣಗೊಳಿಸಿದ್ದ ಕೋವಿಡ್-19 ಪುನಃ ಅದೇ ಪ್ರಮಾಣದಲ್ಲಿ ನಮ್ಮನ್ನು ಕಾಡಲಿದೆಯೇ ಎನ್ನುವುದು ಜನಸಾಮಾನ್ಯರ ಪ್ರಶ್ನೆ. ಇದಕ್ಕೆ ಉತ್ತರಿಸುವ ಮುನ್ನ ಕೆಲವು ವಿಷಯಗಳನ್ನು ಸ್ಪಷ್ಟಗೊಳಿಸಬೇಕು.

ಕೋವಿಡ್-19 ಕಾಯಿಲೆಯ ಮೇಲೆ ನಿಯಂತ್ರಣ ಸಾಧಿಸಿದ್ದೆವಲ್ಲವೇ? ಮತ್ತೆ ಏನಾಯಿತು?

ಮಾನವನ ನಿಯಂತ್ರಣಕ್ಕೆ ಒಳಗಾಗಿ ಸಂಪೂರ್ಣ ತಹಬಂದಿಗೆ ಬಂದಿರುವ ಕಾಯಿಲೆಗಳು ತೀರಾ ಬೆರಳೆಣಿಕೆಯಷ್ಟು ಮಾತ್ರ. ಉಳಿದವು ಸಮಯಾನುಸಾರ ಮರುಕಳಿಸುತ್ತಲೇ ಇರುತ್ತವೆ. ಚಳಿಗಾಲ ಆರಂಭ ಆಗುತ್ತಿದ್ದಂತೆ ಉಸಿರಾಟದ ಕಾಯಿಲೆಗಳು ಉಲ್ಬಣವಾಗುತ್ತವೆ. ಆಗ ಅಂತಹ ರೋಗಿಗಳ ಸಂಖ್ಯೆ ಹಠಾತ್ ಏರುತ್ತದೆ. ಕೆಲದಿನಗಳಲ್ಲಿ ಈ ಸಂಖ್ಯೆ ಒಂದು ಮಟ್ಟಕ್ಕೆ ತಲುಪಿ, ನಂತರ ಇಳಿಯುತ್ತದೆ. ಬೇಸಿಗೆಯ ಆರಂಭದಲ್ಲಿ ನೀರಿನಿಂದ ಹರಡುವ ಅತಿಸಾರದಂತಹ ರೋಗಗಳ ಸಂಖ್ಯೆ ಏರುತ್ತದೆ. ಹೀಗೆ, ಪ್ರತಿಯೊಂದು ಕಾಯಿಲೆಗೂ ಏರಿಳಿತಗಳು ಇದ್ದೇ ಇವೆ. ಕೋವಿಡ್-19 ಜಗತ್ತಿನಿಂದ ನಿರ್ನಾಮವಾಗಿಲ್ಲ. ಅದು ಹೊಸ ರೂಪದಲ್ಲಿ ಆಗಾಗ್ಗೆ ಬರುತ್ತದೆ. ಹೀಗಾಗಿ, ಸತತ ಎಚ್ಚರ ಮುಖ್ಯ.

ಪ್ರಸ್ತುತ ಕೋವಿಡ್-19 ವೈರಸ್ ತಳಿ ಹೆಚ್ಚು ಅಪಾಯಕಾರಿಯೇ?

ತಳಿ ರೂಪಾಂತರ ಯಾವುದೇ ವೈರಸ್ನ ಸಹಜ ಗುಣ. ಇಂತಹ ರೂಪಾಂತರಿ ತಳಿ ಅಧಿಕ ರೋಗಕಾರಕವೂ ಆಗಿರಬಹುದು; ಇಲ್ಲವೇ ಶಕ್ತಿಹೀನವೂ ಆಗಬಹುದು. ಕೋವಿಡ್-19 ರೂಪಾಂತರಗೊಳ್ಳುವುದು ಮನುಷ್ಯರ ದೇಹದಲ್ಲಿ. ಅಧಿಕ ಮಂದಿ ಕಾಯಿಲೆಗೆ ಈಡಾದರೆ ವೈರಸ್ ರೂಪಾಂತರದ ಸಾಧ್ಯತೆಗಳು ಹೆಚ್ಚಾಗುತ್ತವೆ. ಒಮ್ಮೆ ರೂಪಾಂತರ ಹೊಂದಿದರೆ ಇನ್ನೂ ಹೆಚ್ಚು ಜನರು ಕಾಯಿಲೆಗೆ ತುತ್ತಾಗುತ್ತಾರೆ. ಆಗ ವೈರಸ್ ಮತ್ತೊಮ್ಮೆ ರೂಪಾಂತರ ಹೊಂದಬಹುದು. ಇದೊಂದು ವಿಷಮ ಆವರ್ತನ ಚಕ್ರ. ಕಾಯಿಲೆಯನ್ನು ನಿಯಂತ್ರಿಸಬೇಕೆಂದರೆ ಈ ಚಕ್ರವನ್ನು ಮುರಿಯಬೇಕು. ಅತ್ಯಂತ ಸಫಲವಾಗಿ ಈ ಚಕ್ರವನ್ನು ಭಿನ್ನ ಮಾಡುವ ಸಾಧ್ಯತೆ ಇರುವುದು ಕಾಯಿಲೆಯ ಪ್ರಮಾಣವನ್ನು ಕಡಿಮೆ ಮಾಡುವುದರಲ್ಲಿ. ಅಂದರೆ ಎಷ್ಟು ಕಡಿಮೆ ಜನರಿಗೆ ಕಾಯಿಲೆ ತಗಲುತ್ತದೋ ವೈರಸ್ ರೂಪಾಂತರ ಹೊಂದುವ ಸಾಧ್ಯತೆ ಅಷ್ಟೇ ಕಡಿಮೆಯಾಗುತ್ತದೆ. ಹೀಗಾಗಿ, ವೈರಸ್ ಹರಡುವಿಕೆಯನ್ನು ಮಿತಗೊಳಿಸುವುದು ಬಹಳ ಮುಖ್ಯ. ಈ ಬಾರಿಯ ಕಾಯಿಲೆ ಅಪಾಯಕಾರಿಯೇ ಎನ್ನುವ ಪ್ರಶ್ನೆಗೆ ಹೌದು” ಅಥವಾ “ಇಲ್ಲ” ಎಂದು ಉತ್ತರಿಸುವುದು ಪ್ರಜೆಗಳ ನಿಯಂತ್ರಣದಲ್ಲಿದೆ. ಪ್ರಪಂಚದ ಯಾವುದೇ ಸರ್ಕಾರವೂ ಎಷ್ಟೇ ಕಟ್ಟುನಿಟ್ಟಿನ ಕಾಯಿದೆಗಳನ್ನು ಮಾಡಿದರೂ, ಜನರ ಸಹಕಾರವಿಲ್ಲದೆ ಅದು ಸಫಲವಾಗದು. ಯಾವುದೇ ಕಾಯಿಲೆಯ  ನಿಯಂತ್ರಣದಲ್ಲಿ ಸರ್ಕಾರದ ಪಾತ್ರಕ್ಕಿಂತಲೂ ಜನರ ಶಿಸ್ತುಬದ್ಧ ನಡವಳಿಕೆಯೇ ಮುಖ್ಯ.

ಈ ಬಾರಿಯ ಕೋವಿಡ್-19 ಅಲೆ ಏರದಂತೆ ನಾವೇನು ಮಾಡಬಹುದು?

ಎಲ್ಲಕ್ಕಿಂತ ಮುಖ್ಯವಾಗಿ ಸಾಂಘಿಕ ಹೊಣೆಗಾರಿಕೆಯಿಂದ ಕಾಯಿಲೆಯನ್ನು ನಿಯಂತ್ರಿಸುತ್ತೇವೆ ಎನ್ನುವ ಧೈರ್ಯದ ಮನಸ್ಥಿತಿ ಇರಬೇಕು. ಕಳೆದ ಅಲೆಗಳ ವೇಳೆ ‘ಕೋವಿಡ್-19 ಅಲೆಗಳು ತಾವಾಗಿಯೇ ಬರುವುದಿಲ್ಲ; ಬಹಳ ಮಟ್ಟಿಗೆ ನಾವಾಗಿಯೇ ತಂದುಕೊಳ್ಳುತ್ತೇವೆ’ ಎನ್ನುವ ಸಾಂಕ್ರಾಮಿಕ ರೋಗ ತಜ್ಞರ ಮಾತುಗಳು ನೆನಪಿರಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ. ಪ್ರಸ್ತುತ ಕೋವಿಡ್-19 ಕಾಯಿಲೆ ಅಲೆಯ ಸ್ವರೂಪ ಪಡೆಯುವುದಕ್ಕೆ ಹಲವಾರು ಕಾರಣಗಳು ಇರುತ್ತವೆ. ಇದನ್ನು ಅರಿತು, ನಿಗ್ರಹಕ್ಕೆ ಬೇಕಾದ ಶಿಸ್ತಿನ ಕ್ರಮಗಳನ್ನು ಪಾಲಿಸಿದರೆ ಕಾಯಿಲೆಯಿಂದ ಮುಕ್ತರಾಗಬಹುದು. ಶಿಸ್ತಿನ ಅಗತ್ಯವನ್ನು ಮರೆತು, ತಜ್ಞರ ಸಲಹೆಗಳನ್ನು ಕಡೆಗಣಿಸಿ, ಮನಸೋ ಇಚ್ಛೆ ವ್ಯವಹರಿಸಿದರೆ ಹಿಂದಿನ ದಿನಗಳು ಮರುಕಳಿಸಬಹುದು ಎನ್ನುವ ಎಚ್ಚರ ಬೇಕು. ನಮ್ಮದು ಮೂಲತಃ ಅಶಿಸ್ತಿನ, ಉಡಾಫೆ ಸ್ವಭಾವದ ಸಮಾಜ. ಅಪಾಯದ ಸಂದರ್ಭಗಳಲ್ಲೂ ಸರಿ-ತಪ್ಪುಗಳ ವಿವೇಚನೆ ನಮಗೆ ಕಡಿಮೆ. ಒತ್ತಾಯಪೂರ್ವಕವಾಗಿ ಗಟ್ಟಿಯಾದ ನಿಯಮಗಳನ್ನು ತಂದರೆ ನಮ್ಮ ಜನರ ಪ್ರತಿರೋಧ ಬೆಳೆಯುತ್ತದೆ ಎನ್ನುವ ಕಾರಣಕ್ಕೆ ಸರ್ಕಾರಗಳು ಈ ವಿಷಯಗಳಲ್ಲಿ ಮೃದುಧೋರಣೆ ತಳೆಯುತ್ತವೆ. ಆದರೆ ಸರ್ಕಾರದ ಸಡಿಲ ನಿಲುವು ಅಶಿಸ್ತಿಗೆ ಆಹ್ವಾನವಾಗಬಾರದು. ಕೋವಿಡ್-19 ಅಲೆ ಮರುಕಳಿಸಿದರೆ ಅತ್ಯಧಿಕ ಸಂಕಟಕ್ಕೆ ಒಳಗಾಗುವವರು ಸಾಮಾನ್ಯ ಪ್ರಜೆಗಳೇ ಎಂಬುದು ನಮ್ಮ ಗಮನದಲ್ಲಿರಬೇಕು. ಸರ್ಕಾರದ ನೀತಿ ಹೇಗೆಯೇ ಇದ್ದರೂ, ನಾವು ವೈಯಕ್ತಿಕ ಮತ್ತು ಸಮಷ್ಟಿ ಶಿಸ್ತನ್ನು ಪಾಲಿಸುವುದು ಬಹಳ ಮುಖ್ಯ. ಸರಳವಾಗಿ ಏನು ಮಾಡಬೇಕೆಂಬುದನ್ನು ಹಿಂದಿನ ಅಲೆಗಳು ನಮಗೆ ಕಲಿಸಿವೆ. ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ ತೊಳೆದು ಸ್ವಚ್ಚವಿಡುವುದು; ವೈಯಕ್ತಿಕ ನೈರ್ಮಲ್ಯ; ಇತರರನ್ನು ಸುರಕ್ಷಿತವಾಗಿ ಇರುವಂತೆ ಪ್ರೇರೇಪಿಸುವುದು; ಎಚ್ಚರಿಕೆಯ ಅಂಶಗಳನ್ನು ಕುಟುಂಬ ಸದಸ್ಯರ ಜೊತೆ ಕಾಲಕಾಲಕ್ಕೆ ಚರ್ಚಿಸುತ್ತಾ ಅವರನ್ನು ಸನ್ನದ್ಧರಾಗಿ ಇಡುವುದು; ರೋಗದ ಮೊದಲ ಲಕ್ಷಣಗಳು ಕಂಡ ಒಡನೆಯೇ ಅಂತಹವರನ್ನು ಇತರರಿಂದ ಪ್ರತ್ಯೇಕಿಸುವುದು; ವೈದ್ಯರ ಸಲಹೆ ಪಡೆದು ಪರೀಕ್ಷೆ, ಚಿಕಿತ್ಸೆ ಮಾಡಿಸುವುದು – ಮೊದಲಾದ ಎಚ್ಚರಗಳು ಸದಾ ಇರಬೇಕು. ಇದರಲ್ಲಿ ಯಾವ ರೀತಿಯ ವಿನಾಯತಿಯೂ ಸಲ್ಲದು. ಅದನ್ನು ಕ್ರಮಬದ್ಧವಾಗಿ ಪಾಲಿಸುವುದು ಮಾತ್ರ ನಮ್ಮ ಕೈಲಿದೆ.

ಕೋವಿಡ್-19 ಇನ್ನೂ ಕೊನೆಯಾಗಿಲ್ಲ; ಸದ್ಯದಲ್ಲೇ ಕೊನೆಯಾಗುವುದೂ ಇಲ್ಲ; ಕಾಯಿಲೆಯ ಪ್ರಸ್ತುತ ಮರುಕಳಿಕೆ ಅದರ ಮುಕ್ತಾಯವಲ್ಲ. ಯಾವುದೇ ಕಾಯಿಲೆಯ ಅಲೆಗಳು ತಾವಾಗಿಯೇ ಬರುವುದಿಲ್ಲ. ಬೇಜವಾಬ್ದಾರಿ ಸಮಾಜ ಅದನ್ನು ಬರಮಾಡಿಕೊಳ್ಳುತ್ತದೆ. ಅವಜ್ಞೆ ಹೆಚ್ಚಿದಷ್ಟೂ ಅವು ವೇಗವಾಗಿ, ತೀಕ್ಷ್ಣವಾಗಿ ಬರುತ್ತವೆ. ಶಿಸ್ತನ್ನು ಪಾಲಿಸದಿದ್ದರೆ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ; ಸಂಯಮರಹಿತ ಸಮಾಜಗಳು ತಮ್ಮ ಸರದಿಗಾಗಿ ಕಾದಿರುತ್ತವೆ. ನಮ್ಮ ದೇಶ ಕೋವಿಡ್-19 ಅಲೆಗೆ ಮತ್ತೊಮ್ಮೆ ತುತ್ತಾಗದಿರುವುದು ಸಾರ್ವಜನಿಕರ ಕಟ್ಟೆಚ್ಚರದಲ್ಲಿದೆ.

----------------------------

ದಿನಾಂಕ 3/ಜೂನ್/2025 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಪ್ರಕಟಿತ ಲೇಖನ ಕೊಂಡಿ: https://www.prajavani.net/health/special-article-about-covid-and-its-control-3320797


 

ಆಂಟಿಬಯಾಟಿಕ್ ಔಷಧಗಳ ತಪ್ಪು-ಒಪ್ಪು

ಡಾ. ಕಿರಣ್ ವಿ.ಎಸ್.

ವೈದ್ಯರು

ಆರೋಗ್ಯ ಕ್ಷೇತ್ರದಲ್ಲಿ ಇಪ್ಪತ್ತನೆಯ ಶತಮಾನದ ಅತ್ಯಂತ ಮಹತ್ವದ ಸಾಧನೆ ಎಂದರೆ ಆಂಟಿಬಯಾಟಿಕ್ ಔಷಧಗಳ ಆವಿಷ್ಕಾರ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಸೋಂಕುಗಳ ಚಿಕಿತ್ಸೆಗೆ ಪ್ರಾಯೋಗಿಕವಾಗಿ ಲಭ್ಯವಾದ ಪೆನಿಸಿಲಿನ್ ಎಂಬ ಆಂಟಿಬಯಾಟಿಕ್, ಔಷಧ ವಿಜ್ಞಾನದ ಮಹಾಸಂಕ್ರಮಣವೊಂದಕ್ಕೆ ನಾಂದಿ ಹಾಡಿತು. ನೂರಾರು ಬಗೆಯ ಆಂಟಿಬಯಾಟಿಕ್ ಔಷಧಗಳು ಈಗ ಲಭ್ಯವಿವೆ. ಇಂದಿಗೂ ಪ್ರತಿದಿನವೂ ಸಾವಿರಾರು ಪ್ರಾಣಗಳು ಆಂಟಿಬಯಾಟಿಕ್ ಔಷಧಗಳ ನೆರವಿನಿಂದ ಉಳಿಯುತ್ತಿವೆ.

ಆಂಟಿಬಯಾಟಿಕ್ ಔಷಧಗಳಿಗೆ ವ್ಯತಿರಿಕ್ತ ಪರಿಣಾಮಗಳೂ ಇವೆ. ಶರೀರದ ಮೇಲೆ ಆಂಟಿಬಯಾಟಿಕ್ ಔಷಧಗಳ ದುಷ್ಪರಿಣಾಮಗಳೂ ಸಾಕಷ್ಟಿವೆ. ಹೊಟ್ಟೆ ತೊಳಸುವುದು, ವಾಂತಿ, ಭೇದಿ, ತಲೆಸುತ್ತು, ರಕ್ತಕೋಶಗಳ ವ್ಯತ್ಯಯ, ಸುಸ್ತು, ಹಸಿವಾಗದಿರುವುದು ಮೊದಲಾದ ಅಡ್ಡ ಪರಿಣಾಮಗಳು ಆಂಟಿಬಯಾಟಿಕ್ ಔಷಧಗಳನ್ನು ಸೇವಿಸುವ ಬಹಳಷ್ಟು ಜನರಲ್ಲಿ ಕಾಣುತ್ತವೆ. ಕೆಲವು ಆಂಟಿಬಯಾಟಿಕ್ ಔಷಧಗಳು ಕೆಲವು ನಿರ್ದಿಷ್ಟ ವ್ಯಕ್ತಿಗಳಲ್ಲಿ ತೀವ್ರವಾದ ಅಲರ್ಜಿ ಪ್ರತಿಕ್ರಿಯೆಯ ಮೂಲಕ ಪ್ರಾಣಾಪಾಯ ಉಂಟುಮಾಡಬಲ್ಲವು. ಎಗ್ಗಿಲ್ಲದೆ ಬಳಸುವ ಆಂಟಿಬಯಾಟಿಕ್ ಔಷಧಗಳ ವಿರುದ್ಧ ಬ್ಯಾಕ್ಟೀರಿಯಾದಂತಹ ಸೋಂಕುಕಾರಕ ಜೀವಿಗಳು ಪ್ರತಿರೋಧ ಬೆಳೆಸಿಕೊಳ್ಳಬಲ್ಲವು. ಇದರಿಂದ ಆಂಟಿಬಯಾಟಿಕ್ ಔಷಧದ ಪರಿಣಾಮ ಕುಗ್ಗಿ, ಕೆಲಸಕ್ಕೆ ಬಾರದಂತಾಗುತ್ತದೆ. ಹೀಗಾಗಿ, ಆಂಟಿಬಯಾಟಿಕ್ ಔಷಧಗಳ ಬಳಕೆಯ ಬಗ್ಗೆ ಕಟ್ಟೆಚ್ಚರ ಇರಬೇಕು.

ಆಂಟಿಬಯಾಟಿಕ್ ಔಷಧಗಳ ವಿರುದ್ಧ ಬ್ಯಾಕ್ಟೀರಿಯಾಗಳು ಪ್ರತಿರೋಧ ಬೆಳೆಸಿಕೊಳ್ಳುವುದು ನಮ್ಮ ಕಾಲಘಟ್ಟದ ಅತ್ಯಂತ ಗಂಭೀರ ಸಮಸ್ಯೆಯಾಗುತ್ತಿದೆ. ಜಗತ್ತಿನ ಯಾವ ದೇಶವೂ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಇಂತಹ ಪ್ರತಿರೋಧದ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದರೆ 2050ರ ವೇಳೆಗೆ ವಾರ್ಷಿಕವಾಗಿ ಸುಮಾರು ಒಂದು ಕೋಟಿ ಮಂದಿ ಚಿಕಿತ್ಸೆಯ ನಿಯಂತ್ರಣಕ್ಕೆ ಸಿಗದ ಸೋಂಕುಗಳಿಗೆ ಬಲಿಯಾಗುತ್ತಾರೆ ಎಂಬ ಆಘಾತಕಾರಿ ಅಂಶ ವ್ಯವಸ್ಥಿತ ಅಧ್ಯಯನಗಳ ಮೂಲಕ ಬೆಳಕಿಗೆ ಬಂದಿದೆ.

ಪರಿಣಾಮಕಾರಿ ಕ್ರಮಗಳು ಎಂದರೇನು? ತಾರ್ಕಿಕ ಆಲೋಚನೆಯ ಪ್ರಕಾರ ನಿರುಪಯುಕ್ತ ಔಷಧದ ಸ್ಥಾನದಲ್ಲಿ ಹೊಸ ಆಂಟಿಬಯಾಟಿಕ್ ಔಷಧದ ಆವಿಷ್ಕಾರ ಆಗಬೇಕು. ಇದು ಸುಲಭದ ಮಾತಲ್ಲ. ಔಷಧ ಆವಿಷ್ಕರಣ ನಿಯಮಗಳು ವಿಪರೀತ ಕಠಿಣ. ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ವಿಷಯದಲ್ಲಿ ರಾಜಿಯಾಗುವ ಮಾತಿಲ್ಲ. ಹೀಗಾಗಿ ಆಂಟಿಬಯಾಟಿಕ್ ಔಷಧಗಳ ಆವಿಷ್ಕರಣ ಪ್ರಕ್ರಿಯೆ ಬಹಳ ದುಬಾರಿಯೂ, ದೀರ್ಘಕಾಲಿಕವೂ ಆಗುತ್ತದೆ. ಹೊಸದೊಂದು ಆಂಟಿಬಯಾಟಿಕ್ ಔಷಧವನ್ನು ಪತ್ತೆ ಮಾಡಲು ಸುಮಾರು 10-15 ವರ್ಷಗಳ ಕಾಲ ಹಿಡಿಯುತ್ತದೆ. ಇದಕ್ಕೆ ಆಗುವ ಖರ್ಚು ಸುಮಾರು ಒಂದು ಬಿಲಿಯನ್ ಡಾಲರ್ (ಸುಮಾರು 8500 ಕೋಟಿ ರೂಪಾಯಿಗಳು). ಇಷ್ಟು ಖರ್ಚು ಮತ್ತು ಕಾಲವನ್ನು ವ್ಯಯಿಸುವುದು ಕೆಲವೇ ದೈತ್ಯ ಔಷಧ ಕಂಪನಿಗಳಿಗೆ ಮಾತ್ರ ಸಾಧ್ಯ. ಹೀಗಿರುವಾಗ, ಇನ್ನು ಇಪ್ಪತ್ತೈದು ವರ್ಷಗಳಲ್ಲಿ ಎಷ್ಟು ಹೊಸ ಆಂಟಿಬಯಾಟಿಕ್ ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲು ಸಾಧ್ಯ? ದುಬಾರಿ ಬೆಲೆಯನ್ನು ತೆತ್ತು ಅವುಗಳನ್ನು ಖರೀದಿಸಲು ಎಷ್ಟು ಜನರಿಗೆ ಚೈತನ್ಯ ಇದ್ದೀತು? ಅದನ್ನು ಜನರು ದುರುಪಯೋಗ ಪಡಿಸಿಕೊಂಡು, ಪ್ರತಿರೋಧ ಬೆಳೆಯುವಂತೆ ಮಾಡಿ ಹಾಳುಗೆಡವುದಿಲ್ಲವೆಂಬ ಖಾತ್ರಿ ಏನು? ತತ್ಕಾರಣ, ತಾರ್ಕಿಕವಾದರೂ ಇದು ಸಮರ್ಥವಾದ ಆಯ್ಕೆಯಲ್ಲ.

ಆಂಟಿಬಯಾಟಿಕ್ ಔಷಧಗಳನ್ನು ಜತನದಿಂದ ಬಳಸುವುದು ಮತ್ತೊಂದು ದಾರಿ. ಇದು ಕೇವಲ ನಿಯಮಗಳಿಂದ ಸಾಧ್ಯವಾಗುವ ಮಾತಲ್ಲ. ಪ್ರಗತಿಶೀಲ ದೇಶಗಳಲ್ಲಿ ಜನಸಾಮಾನ್ಯರಿಗೆ ಅನ್ವಯವಾಗುವ ಆರೋಗ್ಯಸಂಬಂಧಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಬಹಳ ಕಷ್ಟ. ಇಂತಹ ನಿಯಮಗಳು ಫಲಕಾರಿಯಾಗಲು ಸಮಷ್ಟಿಯ ಶಿಸ್ತು ಅಗತ್ಯವಾಗುತ್ತದೆ. ನಮ್ಮ ದೇಶವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಔಷಧ ಮಾರಾಟ ಮಾಡುವ ಮಳಿಗೆಗಳು ವೈದ್ಯರ ಸಲಹೆಯ ಚೀಟಿ ಇಲ್ಲದೆ ಯಾವುದೇ ಆಂಟಿಬಯಾಟಿಕ್ ಔಷಧವನ್ನಾದರೂ ಮಾರಾಟ ಮಾಡುತ್ತವೆ. ವೈದ್ಯರು ಯಾವಾಗಲೋ ಯಾವುದೋ ಅಸೌಖ್ಯಕ್ಕೆ ಬರೆದು ಕೊಟ್ಟಿದ್ದ ಔಷಧಗಳನ್ನು ಪುನಃ ಖರೀದಿಸಿ, ಪ್ರತಿಯೊಂದು ಕಾಯಿಲೆಗೂ ಬಳಸುವ ಜನರಿದ್ದಾರೆ. ಜೊತೆಗೆ, ಆಂಟಿಬಯಾಟಿಕ್ ಔಷಧಗಳ ಬಗ್ಗೆ ತಮ್ಮ ವ್ಯಾಸಂಗದಲ್ಲಿ ಅಧ್ಯಯನವನ್ನೇ ಮಾಡದ ವೈದ್ಯಪದ್ದತಿಯವರೂ ಮುಕ್ತವಾಗಿ ಅವುಗಳನ್ನು ಸೇವಿಸುವ ಅಧಿಕೃತ ಸಲಹೆಗಳನ್ನು ನೀಡುತ್ತಾರೆ. ಆಸ್ಪತ್ರೆಗಳು ರೋಗಿಗಳನ್ನು ಶೀಘ್ರವಾಗಿ ಗುಣಪಡಿಸುವ ಉದ್ದೇಶದಿಂದ ಕಡಿಮೆ ಶಕ್ತಿಯ ಆಂಟಿಬಯಾಟಿಕ್ ಔಷಧಗಳನ್ನು ಹೆಚ್ಚು ಕಾಲ ನೀಡುವ ಬದಲಿಗೆ, ಹೆಚ್ಚು ಶಕ್ತಿಯ ಆಂಟಿಬಯಾಟಿಕ್ ಔಷಧಗಳನ್ನು ಕಡಿಮೆ ಕಾಲ ನೀಡುವ ಅಪಾಯಕಾರಿ ಪದ್ದತಿಗಳನ್ನು ಪಾಲಿಸುತ್ತವೆ. ಮುಂದುವರೆದ ದೇಶಗಳಲ್ಲಿ ಜನರ ಆರೋಗ್ಯದ ಹೊಣೆಯನ್ನು ಸರ್ಕಾರ ವಹಿಸುತ್ತದೆ. ಅಲ್ಲಿನ ಚಿಕಿತ್ಸೆಗಳಿಗೆ ತಜ್ಞ ಸಮಿತಿ ರಚಿಸಿರುವ ಕಟ್ಟುನಿಟ್ಟಿನ ನಿಯಮಾವಳಿಗಳು ಇರುತ್ತವೆ. ಯಾವುದಾದರೂ ನಿಯಮವನ್ನು ಉಲ್ಲಂಘಿಸಿದರೆ ವಿಚಾರಣೆಗೆ ಒಳಗಾಗಬೇಕಾಗುತ್ತದೆ. ಆದರೆ ನಮ್ಮಂತಹ ಬಹುತೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಜನಸಾಮಾನ್ಯರ ಆರೋಗ್ಯದ ಬಗ್ಗೆ ಸರ್ಕಾರ ಜವಾಬ್ದಾರಿ ವಹಿಸುವುದಿಲ್ಲ. ಆರೋಗ್ಯದ ಹೊಣೆಗಾರಿಕೆ ಜನರ ಸ್ವಂತದ್ದೇ ಆಗಿರುತ್ತದೆ. ಇದರಲ್ಲಿ ಖಾಸಗಿ ಆಸ್ಪತ್ರೆಗಳ ಪಾರುಪತ್ಯ ಹೆಚ್ಚು. ಜವಾಬ್ದಾರಿಯಿಂದ ವಿಮುಖವಾದ ವ್ಯವಸ್ಥೆಗೆ ಯಾವುದೇ ನಿಯಮವನ್ನೂ ಕಟ್ಟುನಿಟ್ಟಾಗಿ ಜಾರಿ ಮಾಡುವ ನೈತಿಕತೆ ಇಲ್ಲವಾಗುತ್ತದೆ. ಆಂಟಿಬಯಾಟಿಕ್ಗಳನ್ನು ಬೇಕಾಬಿಟ್ಟಿ ಉಪಯೋಗಿಸುವುದರ ದುಷ್ಪರಿಣಾಮಗಳನ್ನು ಇಡೀ ಪ್ರಪಂಚ ಅನುಭವಿಸಬೇಕಾಗುತ್ತದೆ. ಆಂಟಿಬಯಾಟಿಕ್ ಬಳಕೆಯಲ್ಲಿ ಸಂಯಮ ಮತ್ತು ನಿಯಮಪಾಲನೆ ಸುರಕ್ಷೆಯ ಪ್ರಬಲವಾದ ಮಾರ್ಗವಾದರೂ, ಅದನ್ನು ಆಚರಣೆಗೆ ಯುಕ್ತವಾಗುವಂತೆ ಜಾರಿಗೊಳಿಸುವುದು ತೀರಾ ಕಷ್ಟ.

ಆಹಾರ, ನೈರ್ಮಲ್ಯ, ಶಿಸ್ತುಬದ್ಧ ಜೀವನಗಳು ಆರೋಗ್ಯ ರಕ್ಷಣೆಯ ಪ್ರಮುಖ ಭಾಗಗಳು. ಆರೋಗ್ಯವೆನ್ನುವುದು ಕಾಯಿಲೆ ಬಂದ ನಂತರ ಅದನ್ನು ಗುಣಪಡಿಸುವುದು ಮಾತ್ರವಲ್ಲ; ಕಾಯಿಲೆ ಬಾರದಂತೆ ಸಂರಕ್ಷಿಸಿಕೊಳ್ಳುವುದು ಕೂಡ. ಲಭ್ಯವಿರುವ ಆಂಟಿಬಯಾಟಿಕ್ಗಳ ಸತ್ಪರಿಣಾಮಗಳು ನಮ್ಮ ಮುಂದಿನ ಪೀಳಿಗೆಗೂ ಲಭ್ಯವಾಗುವಂತೆ ಮಾಡುವುದು ನಮ್ಮೆಲ್ಲರ ಸಂಘಟಿತ ಜವಾಬ್ದಾರಿ.

-------------------

ದಿನಾಂಕ 13/5/2025 ರ ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಮೂಲ ಲೇಖನದ ಕೊಂಡಿ: https://www.prajavani.net/health/use-and-abuse-of-antibiotics-antibiotic-resistance-misuse-health-awareness-medicine-overuse-drug-regulation-india-3283573


 

ಶುಚಿಯಾದ ನೀರು ಮತ್ತು ಆಹಾರ – ರೋಗಗಳನ್ನು ತಡೆಗಟ್ಟುವ ಮೂಲ ಮಂತ್ರ

ಡಾ. ಕಿರಣ್ ವಿ.ಎಸ್.

ವೈದ್ಯರು

 

“ಪ್ರೀತಿಯಿಲ್ಲದೆ ಜೀವಿಸಲಾರೆ” ಎನ್ನುವುದು ಕೇವಲ ಕವಿಚಾತುರ್ಯದ ಮಾತು. ಬದುಕಿನ ಅಸಲಿ ಆವಶ್ಯಕತೆಗಳು ನೀರು ಮತ್ತು ಆಹಾರ. ಪ್ರಾಣಿ-ಪಕ್ಷಿಗಳು ಮಲಿನ ನೀರು, ಆಹಾರಗಳನ್ನು ಸೇವಿಸಿಯೂ ಬದುಕುತ್ತವಾದರೂ, ನಾಗರಿಕತೆಗೆ ಹೊಂದಿಕೊಂಡಿರುವ ಮನುಷ್ಯರಿಗೆ ರೋಗದಿಂದ ಕಾಪಾಡಿಕೊಳ್ಳಲು ಆಹಾರ-ಪಾನೀಯಗಳು ಶುಚಿಯಾಗಿರುವುದು ಅತ್ಯಗತ್ಯ. ನಮ್ಮನ್ನು ಕಾಡುವ ಬಹುತೇಕ ಸಾಂಕ್ರಾಮಿಕ ರೋಗಗಳು ಮಲಿನವಾದ ನೀರು ಅಥವಾ ಆಹಾರಗಳಿಂದಲೇ ಸಂಭವಿಸುತ್ತವೆ.

ಮಲಿನ ಆಹಾರ-ಪಾನೀಯಗಳು ಎರಡು ರೀತಿಗಳಿಂದ ಅನಾರೋಗ್ಯಕ್ಕೆ ಕಾರಣವಾಗತ್ತವೆ. ಮೊದಲನೆಯದು - ಅವುಗಳಲ್ಲಿ ಇರಬಹುದಾದ ಸೋಂಕುಕಾರಕ ಪರೋಪಜೀವಿಗಳು ಸಾಂಕ್ರಾಮಿಕ ಕಾಯಿಲೆಗಳನ್ನು ಹರಡುವ ಪ್ರಬಲ ಮಾಧ್ಯಮ. ಎರಡನೆಯದು - ಅದರೊಳಗಿನ ಹಾನಿಕಾರಕ ರಾಸಾಯನಿಕಗಳು ಬಾಯಿ ಮತ್ತು ಗಂಟಲಿನ ಸೂಕ್ಷ್ಮವಾದ ಲೋಳೆಪದರಕ್ಕೆ ಹಾನಿ ಮಾಡುತ್ತವೆ. ಲೋಳೆಪದರ ಸ್ರವಿಸುವ ಲೋಳೆಯು ಕಾಯಿಲೆ ಉಂಟು ಮಾಡುವ ಕ್ರಿಮಿಗಳನ್ನು ನಿಯಂತ್ರಿಸಿ,  ನಮ್ಮ ಶರೀರವನ್ನು ರೋಗಗಳಿಂದ ಕಾಪಾಡುತ್ತವೆ. ಆದರೆ, ಬಿರುಕು ಬಿಟ್ಟ ಲೋಳೆಪದರದ ಮೂಲಕ ಸೋಂಕುಕಾರಕ ಪರೋಪಜೀವಿಗಳು ಸುಲಭವಾಗಿ ಶರೀರದ ಒಳಗೆ ನುಗ್ಗಿ, ಕಾಯಿಲೆಗೆ ಕಾರಣವಾಗುತ್ತವೆ. ಶರೀರದ ಸಹಜ ರಕ್ಷಕ ವ್ಯವಸ್ಥೆ ಚೆನ್ನಾಗಿರುವವರಲ್ಲಿ ಇಂತಹ ಸೋಂಕು ಹೆಚ್ಚು ತೊಂದರೆ ನೀಡದೆ, ತಾನಾಗಿಯೇ ನಿಗ್ರಹವಾಗುತ್ತದೆ. ಆದರೆ ರಕ್ಷಕ ವ್ಯವಸ್ಥೆ ಕ್ಷೀಣವಾಗಿರುವ ಮಧುಮೇಹಿಗಳು, ಚಿಕ್ಕ ಮಕ್ಕಳು, ವೃದ್ಧರು, ನಿಯಮಿತವಾಗಿ ಸ್ಟೀರಾಯ್ಡ್ ಔಷಧಗಳನ್ನು ಸೇವಿಸುತ್ತಿರುವ ರೋಗಿಗಳು, ಮೊದಲಾದವರಲ್ಲಿ ಈ ಸೋಂಕುಗಳು ಅಪಾಯಕಾರಿಯಾಗಬಲ್ಲವು.

ಮಲಿನ ಆಹಾರ ಮತ್ತು ನೀರಿನ ಮೂಲಕ ಹರಡುವ ಗಂಟಲಿನ, ಜೀರ್ಣಾಂಗದ ರೋಗಗಳು ಬೇಸಿಗೆಯಲ್ಲಿ ಅಧಿಕ. ಮಕ್ಕಳಿಗೆ ರಜೆ ಇರುವುದರಿಂದ ಪ್ರವಾಸಗಳಿಗೆ ಹೋಗುವವರು ಹೆಚ್ಚು. ಪ್ರವಾಸದಲ್ಲಿ ತಿನಿಸು-ಪಾನೀಯಗಳ ಮೇಲೆ ಸಂಪೂರ್ಣ ನಿಯಂತ್ರಣ ಇರುವುದಿಲ್ಲ. ಅಂತಹ ವೇಳೆ ಸಾಧ್ಯವಾದಷ್ಟೂ ಬಿಸಿಯಾಗಿ ತಯಾರಿಸಿದ ತಾಜಾ ಆಹಾರ ಸೇವನೆ ಸೂಕ್ತ. ಸ್ವಚ್ಚವಾದ ನೀರು, ಭದ್ರಪಡಿಸಿದ ಪಾನೀಯಗಳ ಬಳಕೆ ಒಳ್ಳೆಯದು. 

ಮಲಿನ ಆಹಾರ-ಪಾನೀಯಗಳ ಸೇವನೆಯಿಂದ ಆಗುವ ಬಹುತೇಕ ಸಣ್ಣ-ಪುಟ್ಟ ಸೋಂಕುಗಳನ್ನು ಶರೀರದ ರಕ್ಷಕ ವ್ಯವಸ್ಥೆಯೇ ಸರಿಪಡಿಸುತ್ತದೆ. ಅದರ ಸಾಮರ್ಥ್ಯವನ್ನು ಮೀರಿದ ಬೇನೆಗಳಿಗೆ ಮಾತ್ರ ವೈದ್ಯಕೀಯ ಸಲಹೆ ಬೇಕಾಗುತ್ತದೆ. ನಲವತ್ತೆಂಟು ಗಂಟೆಗಳಿಗಿಂತಲೂ ಹೆಚ್ಚಿನ ಕಾಲ ಅಸೌಖ್ಯ ಎನಿಸಿದರೆ ವೈದ್ಯರನ್ನು ಕಾಣುವುದು ಸೂಕ್ತ. ಸೋಂಕು ಹೆಚ್ಚುತ್ತಿರುವ ಸೂಚನೆಗಳು ಕಂಡುಬಂದರೆ ಯಾವುದೇ ಕಾರಣಕ್ಕೂ ಸ್ವಯಂ-ವೈದ್ಯ ಮಾಡಿಕೊಂಡು ಪರಿಸ್ಥಿತಿಯನ್ನು ಹದಗೆಡಿಸಬಾರದು.

ಮಲಿನ ಆಹಾರ-ಪಾನೀಯಗಳನ್ನು ಸೇವಿಸಿ ತಂದುಕೊಳ್ಳುವ ಸೋಂಕಿನ ಚಿಕಿತ್ಸೆಗಿಂತಲೂ, ಅವು ಬಾರದಂತೆ ನಿರ್ವಹಿಸುವುದು ಜಾಣತನ. ಮನೆಯಲ್ಲಿ ಕೈ ತೊಳೆಯದೇ ಏನನ್ನೂ ಸೇವಿಸದವರು, ವೈದ್ಯರು ಯಾವುದಾದರೂ ಔಷಧವನ್ನು ಸೂಚಿಸಿದಾಗ ಅದರ ಅಡ್ಡಪರಿಣಾಮಗಳ ಬಗ್ಗೆ ಪ್ರಶ್ನಿಸುವವರು, ಮಕ್ಕಳಿಗೆ ಶುಚಿತ್ವದ ಬಗ್ಗೆ ಪಾಠ ಹೇಳುವವರು ಕೂಡ ರಸ್ತೆಬದಿಯ ಅಶುಚಿಯಾದ ಆಹಾರವನ್ನು ಮುಲಾಜಿಲ್ಲದೆ ಬಾಯಿಗಿಳಿಸುವುದು ಸೋಜಿಗ. ಹತ್ತಾರು ಜನ ಅದನ್ನು ತಿನ್ನುತ್ತಿದ್ದಾರೆಂಬ ನಂಬಿಕೆಯೋ, ರುಚಿಯ ಚಪಲವೋ, ಜೊತೆಯಲ್ಲಿ ಇರುವವರ ಒತ್ತಾಯವೋ, "ಆಗಾಗ ಇಂತಹದ್ದನ್ನು ತಿನ್ನುತ್ತಿದ್ದರೆ ಇಮ್ಯುನಿಟಿ ಬೆಳೆಯುತ್ತದೆ" ಎನ್ನುವ ಭ್ರಮೆಯೋ, "ಜಗತ್ತಿನಾದ್ಯಂತ ಸ್ಟ್ರೀಟ್-ಫುಡ್ ತಿನ್ನುವವರಿದ್ದಾರೆ" ಎನ್ನುವ ಸಾಂಘಿಕ ಉಡಾಫೆಯ ಮನೋಭಾವವೋ - ಒಟ್ಟಿನಲ್ಲಿ ಏನೋ ಒಂದು ನೆಪದಲ್ಲಿ ಕಾಣದ ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ಇಂತಹ ಪ್ರಲೋಭನೆಗಳನ್ನು ಹತ್ತಿಕ್ಕುವುದು ಬಹಳ ಮುಖ್ಯ.

ಮುಂದುವರೆದ ದೇಶಗಳ ಪ್ರವಾಸಿ ತಾಣಗಳಲ್ಲಿ "ಸ್ಟ್ರೀಟ್-ಫುಡ್" ಎನ್ನುವುದು ದೊಡ್ಡ ಪಾತ್ರ ವಹಿಸುತ್ತದೆ ಎನ್ನುವ ಮಾತು ಸತ್ಯ. ಆದರೆ ಅಲ್ಲಿನ ವ್ಯವಸ್ಥೆ ಅದರ ಬಗ್ಗೆ ಬಹಳ ಕಠಿಣ ನಿರ್ಬಂಧಗಳನ್ನು ಹೇರಿ, ಸುರಕ್ಷತೆಯ ಬಗ್ಗೆ ಗಮನ ನೀಡಿರುತ್ತದೆ. ನಮ್ಮ ದೇಶದಲ್ಲಿ ಅಂತಹ ಕಟ್ಟುನಿಟ್ಟನ್ನು ಅಪೇಕ್ಷಿಸುವುದು ಕಷ್ಟ. ನಮ್ಮಲ್ಲಿ ರಸ್ತೆಬದಿಯ ಆಹಾರ ಮಾರಾಟ ಮಾಡುವ ಬಹುತೇಕರಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಹೀಗಾಗಿ, ಅವರ ಬಳಿ ಸುರಕ್ಷತೆಯ ಖಾತ್ರಿಯೂ ಇಲ್ಲ. ಅಲ್ಲಿ ಆಹಾರ ಸೇವಿಸುತ್ತಿರುವ ಹತ್ತಾರು ಅಪರಿಚಿತ ಮಂದಿಗೆ ಮುಂದಿನ ಕೆಲದಿನಗಳಲ್ಲಿ ಯಾವ-ಯಾವ ಆರೋಗ್ಯ ಸಮಸ್ಯೆಗಳು ಬಂದವು ಎಂದು ತಿಳಿಯುವುದು ಅಸಾಧ್ಯ. ಹೊರಗೆ ತಿನ್ನುವ ಅನಿವಾರ್ಯ ಪ್ರಸಂಗಗಳಲ್ಲಿ ಶುಚಿಯಾದ ಹೋಟೆಲಿನಲ್ಲಿ ಬಿಸಿಬಿಸಿಯಾದ, ಚೆನ್ನಾಗಿ ಬೇಯಿಸಿದ, ಹಬೆಯಾಡುತ್ತಿರುವ ಆಹಾರ ಸೇವನೆ ಸೂಕ್ತ. ಆಹಾರ-ಪಾನೀಯಗಳ ಗುಣಮಟ್ಟದಲ್ಲಿ ರಾಜಿಯಾಗುವುದು ಆರೋಗ್ಯಕ್ಕೆ ಹಾನಿಕರ.

ಆಹಾರ-ಪಾನೀಯಗಳ ಸ್ವಚ್ಛತೆಯನ್ನು ಪ್ರಜ್ಞಾಪೂರ್ವಕವಾಗಿ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಪ್ರಸ್ತುತ ಸಂಕೀರ್ಣ ಸಮಾಜದಲ್ಲಿ ಜನರು ಹೊಸ ಬಗೆಯ ಜೀವನಶೈಲಿಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಹೀಗಾಗಿ, ನಮ್ಮ ವೈಯಕ್ತಿಕ ಮತ್ತು ಸಾಂಘಿಕ ಬದುಕಿನ ವಾತಾವರಣಗಳು ಸ್ವಚ್ಛವಾಗಿರುವುದು ಪ್ರಾಥಮಿಕ ಅಗತ್ಯ. ಈ ಮುನ್ನ ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದ ಅನೇಕರು ಈಗ ದಿನನಿತ್ಯದ ಊಟವನ್ನೂ ಹೊರಗಿನಿಂದ ತರಿಸಿಕೊಂಡು ಸೇವಿಸುತ್ತಿದ್ದಾರೆ. ಈ ರೀತಿಯ ಆಹಾರವನ್ನು ಸಿದ್ಧಪಡಿಸುವ ಸ್ಥಳಗಳು, ಅದನ್ನು ತಯಾರಿಸುವ ಬಾಣಸಿಗರು, ಅದನ್ನು ಪ್ಯಾಕ್ ಮಾಡುವ ಕೆಲಸಗಾರ, ಅದನ್ನು ಹೊತ್ತು ತಂದು ನಮ್ಮ ಮನೆಗೆ ತಲುಪಿಸುವ ವ್ಯಕ್ತಿ – ಇವರೆಲ್ಲರ ಸ್ವಚ್ಛತೆಯ ಮಟ್ಟ ಸಮಂಜಸವಾಗಿದ್ದರೆ ಮಾತ್ರ ಅಂತಹ ಆಹಾರ-ಪಾನೀಯಗಳು ನಮ್ಮ ಆರೋಗ್ಯವನ್ನು ಕಾಯಬಲ್ಲವು. ಇಲ್ಲವಾದರೆ, ಅವೇ ಅನಾರೋಗ್ಯದ ಕಾರಣವಾಗುತ್ತವೆ. ಈ ಪ್ರತಿಯೊಂದು ಹಂತವನ್ನೂ, ಪ್ರತಿದಿನವೂ ಪರೀಕ್ಷಿಸುವ ಸಾಧ್ಯತೆಗಳು ಇರುವುದಿಲ್ಲ. ಹೀಗಾಗಿ, ಇಡೀ ಸಮಾಜವೇ ತನ್ನ ನೈರ್ಮಲ್ಯದ ಮಟ್ಟವನ್ನು ಸಂದೇಹಕ್ಕೆ ಆಸ್ಪದವಿಲ್ಲದಂತೆ ಏರಿಸಿಕೊಳ್ಳಬೇಕು. ಆಹಾರ-ಪಾನೀಯಗಳಲ್ಲಿ ಶುಚಿಯನ್ನು ಸಾಧಿಸುವುದು ಈಗ ವೈಯಕ್ತಿಕ ಮಟ್ಟವನ್ನು ಮೀರಿ, ಸಾಮಾಜಿಕ ಬಾಧ್ಯತೆಯ ಭಾಗವಾಗಿದೆ. ಈ ಸ್ಥಿತ್ಯಂತರ ಸುಲಭವಲ್ಲ ಎನ್ನುವ ಎಚ್ಚರ ಎಲ್ಲರಿಗೂ ಇರಬೇಕು.  

-------------------

ದಿನಾಂಕ 22/4/2025 ರ ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/food-water-hygiene-health-safety-clean-eating-habits-foodborne-illness-prevention-3255228


 

ಮಾನವ ಶರೀರದ ಗಣಿತ ವಿಸ್ಮಯಗಳು

 

ಡಾ. ಕಿರಣ್ ವಿ.ಎಸ್.

ವೈದ್ಯರು

 

ಕಳೆದ 21 ತಿಂಗಳುಗಳಿಂದ ಮಾನವ ಶರೀರದ ವಿವಿಧ ಅಂಗಗಳ ಗಣಿತೀಯ ಮಾಹಿತಿಗಳನ್ನು ನೋಡಿದ್ದೇವೆ. ಇದು ಈ ಸರಣಿಯ ಅಂತಿಮ ಲೇಖನ. ಇದು ಮಾನವ ದೇಹದ ಕೆಲ ವಿಸ್ಮಯಗಳನ್ನು ಗಣಿತದ ಪರಿಭಾಷೆಯಲ್ಲಿ ಅರಿಯುವ ಪ್ರಯತ್ನ.

 

ಗಣಿತದಲ್ಲಿ ಸ್ವರ್ಣಾನುಪಾತ (Golden Ratio) ಎನ್ನುವುದೊಂದಿದೆ. ಗ್ರೀಕ್ ಅಕ್ಷರಮಾಲೆಯಲ್ಲಿ  ಫೈ (φ) ಎಂದು ಕರೆಯಲಾಗುವ ಇದರ ಮೌಲ್ಯ 1.618. ಇದರ ವೈಶಿಷ್ಟ್ಯ ದಂಗುಬಡಿಸುವಂತಹದ್ದು. ಜೀವಸೃಷ್ಟಿಯ ಅನೇಕಾನೇಕ ಅನುಪಾತಗಳು ಇದಕ್ಕೆ ಸಮನಾಗುತ್ತವೆ. ನಮ್ಮ ದೇಹದ ಬಹಳಷ್ಟು ಅನುಪಾತಗಳು ಇದೇ ಆಗಿವೆ. ಉದಾಹರಣೆಗೆ, ದೇಹದ ಒಟ್ಟು ಉದ್ದವನ್ನು ತಲೆಯಿಂದ ಹೊಕ್ಕುಳ ನಡುವಿನ ಉದ್ದದಿಂದ ಭಾಗಿಸಿದರೆ ದೊರೆಯುವುದು 1.618; ಮೊಳ ಅಳೆಯುವಷ್ಟು ಕೈನ ಭಾಗದ ಉದ್ದವನ್ನು ಹಸ್ತದ ಉದ್ದದಿಂದ ಭಾಗಿಸಿದರೂ ಇದೇ ಫಲಿತಾಂಶ. ಮೂಗಿನ ತುದಿಯಿಂದ ಆರಂಭಿಸಿ ಗಲ್ಲದ ತುದಿಯವರೆಗಿನ ಅಳತೆಯನ್ನು ಹುಬ್ಬಿನಿಂದ ಮೂಗಿನ ತುದಿಯವರೆಗಿನ ಉದ್ದದಿಂದ ಭಾಗಿಸಿದರೆ ಮತ್ತೆ ಇದೇ ಮೌಲ್ಯ ಕಾಣುತ್ತದೆ. ಸೌಂದರ್ಯದ ಪರಿಭಾಷೆ ಈ φ ಮೌಲ್ಯದ ಮೇಲೆ ನಿಂತಿದೆ ಎಂದು ಅನೇಕರ ಆಂಬೋಣ. ಇಡೀ ಸೃಷ್ಟಿ ರಚನೆಯ ಹಿಂದೆ ಈ ಮೌಲ್ಯವಿದೆ ಎಂದು ಭಾವಿಸುವವರೂ ಇದ್ದಾರೆ. ಶಂಖುಹುಳುವಿನ ಸುರಳಿಗಳಿಂದ ಹಿಡಿದು ಬೃಹತ್ ಗಾತ್ರದ ತಿಮಿಂಗಲಗಳ ರಚನಾ ಶಿಲ್ಪ ಈ ಮೌಲ್ಯವನ್ನೇ ಸಾರುತ್ತದೆ. ಅಷ್ಟೇ ಏಕೆ; ಮರಗಿಡಗಳ ಹಲವಾರು ಅನುಪಾತಗಳೂ ಇದಕ್ಕೇ ಸಮನಾಗುತ್ತವೆ. ಇನ್ನು ಮಹಾಸೃಷ್ಟಿಯ ಸಣ್ಣ ಭಾಗವಾದ ನಮ್ಮ ದೇಹ ಇದೇ ಅನುಪಾತವನ್ನು ಪಾಲಿಸುವುದು ಅಚ್ಚರಿಯಲ್ಲ. ಈಚೆಗೆ ಈ ಅನುಪಾತವನ್ನು ಸೌಂದರ್ಯ ಮೀಮಾಂಸೆಯಲ್ಲೂ ಪ್ರಯೋಗಕ್ಕೆ ತರಲಾಗಿದೆ. ಸುರೂಪಿ ಶಸ್ತ್ರಚಿಕಿತ್ಸಕರು ಈ ಅನುಪಾತವನ್ನು ಹಿಡಿದು ವ್ಯಕ್ತಿಗಳ ಹಣೆ, ಹುಬ್ಬು, ಮೂಗು, ಗಲ್ಲ, ದವಡೆ ಮೊದಲಾದ ಜಾಗಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತಿದ್ದಿ ತೀಡಿ ಎಂತಹವರನ್ನು ಬೇಕಾದರೂ ಜಗತ್ತಿನ ಕಣ್ಣಿಗೆ ಸುಂದರರನ್ನಾಗಿ ಮಾಡಬಲ್ಲವರಾಗಿದ್ದಾರೆ. ಅರಿಯದ ಜನರು ಗೊಡ್ಡು ಎಂದು ಭಾವಿಸುವ ಗಣಿತ ಈಗ ಸೃಷ್ಟಿ ಸೌಂದರ್ಯದ ಅಡಿಪಾಯವಾಗಿದೆ.

 

ಮಿದುಳಿನ ಬಲವನ್ನು ಕಂಡದ್ದಾಗಿದೆ. ಮಿದುಳನ್ನು ಕಾಪಾಡುವ ಸಲುವಾಗಿಯೇ ನಮ್ಮ ಇಡೀ ಶರೀರ ಸೃಷ್ಟಿಯಾಗಿದೆ ಎಂದು ಬಹುಕಾಲ ನಂಬಲಾಗಿತ್ತು. ಮಿದುಳಿನಿಂದ ನರಮಂಡಲಕ್ಕೆ ಹೊರ ಚಿಮ್ಮುವ ಸಂಕೇತಗಳು ಗಂಟೆಗೆ ಸುಮಾರು 280 ಕಿಲೋಮೀಟರ್ ವೇಗದಲ್ಲಿ ಸಾಗುತ್ತವೆ. ಮಿದುಳಿನಲ್ಲಿ ಉತ್ಪತ್ತಿಯಾಗುವ ವಿದ್ಯುದಾವೇಶದಿಂದ ಸುಮಾರು 10 ವ್ಯಾಟ್ ಬಲ್ಬನ್ನು ಬೆಳಗಬಹುದು. ಮಿದುಳಿನ ನೆನಪಿನ ಸಾಮರ್ಥ್ಯ ಅಪಾರ. ವಿಜ್ಞಾನಿಗಳು ಇದನ್ನು ಸುಮಾರು 1000 ಟೆರಬೈಟ್ ಎಂದು ಲೆಕ್ಕ ಹಾಕಿದ್ದಾರೆ. ಅಂದರೆ ಮಿದುಳಿನ ಪ್ರತಿಯೊಂದು ಕೋಶವೂ ನಮ್ಮ ಜ್ಞಾನಗಂಗೋತ್ರಿ ಗಾತ್ರದ ಪುಸ್ತಕವನ್ನು ಹಿಡಿದಿಡುವಷ್ಟು ನೆನಪು ಹೊಂದಿದೆ. ಇಷ್ಟಾಗಿಯೂ, ಕಣ್ಣುಗಳು ಸ್ಥಿರವಾಗಿ ನಿಂತು ನೋಡಿದ ಚಿತ್ರಗಳನ್ನು ಮಾತ್ರ ಮಿದುಳು ಗ್ರಹಿಸಬಲ್ಲದು. ಕಣ್ಣುಗಳು ಒಂದೆಡೆಯಿಂದ ಮತ್ತೊಂದೆಡೆಗೆ ನೋಡುವ ವೇಳೆ ಕ್ಷಿಪ್ರ ಸಂಚಾರದಲ್ಲಿರುವಾಗ ಕಾಣುವ ಯಾವ ಚಿತ್ರವೂ ಮಿದುಳಿಗೆ ಗ್ರಾಹ್ಯವಾಗುವುದಿಲ್ಲ. ಸಾಮರ್ಥ್ಯ ಎಷ್ಟೇ ಇದ್ದರೂ ಪ್ರತಿಯೊಂದಕ್ಕೂ ಮಿತಿಗಳಿವೆ ಎನ್ನುವುದು ಮಿದುಳು ನಮಗೆ ಕಲಿಸುವ ಪಾಠ.

 

ನಮ್ಮ ದೇಹದ ಅತ್ಯಂತ ವಿಸ್ಮಯಕಾರಿ ಅಂಗ ಯಕೃತ್. ಅದರ ಎಷ್ಟೋ ಕೆಲಸಗಳು ನಮಗಿನ್ನೂ ತಿಳಿದೇ ಇಲ್ಲ! ಸದ್ಯಕ್ಕೆ ಯಕೃತ್ ಮಾಡಬಲ್ಲ ಸುಮಾರು 500 ಕೆಲಸಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಇಷ್ಟೇ ಸಂಖ್ಯೆಯ ಇನ್ನಷ್ಟು ಕೆಲಸಗಳನ್ನು ಅದು ಮಾಡುತ್ತಿದೆ ಎಂದು ಅಂದಾಜು. ಆದರೆ ಅದನ್ನು ಪತ್ತೆ ಮಾಡುವಷ್ಟು ನಮ್ಮ ತಂತ್ರಜ್ಞಾನ ಬೆಳೆದಿಲ್ಲ. ದೇಹದ ಕೌತುಕಗಳು ನಮ್ಮ ಪ್ರಸ್ತುತ ಜ್ಞಾನದ ಪರಿಧಿಗಿಂತ ತುಂಬಾ ವಿಸ್ತಾರವಾಗಿವೆ.  

 

ಶರೀರ ಎಷ್ಟೇ ಸಂಕೀರ್ಣ ಎಂದರೂ, ಶರೀರದ ಎಲ್ಲ ಭಾಗಗಳೂ ಬದುಕಲು ಅತ್ಯಗತ್ಯ ಎಂದೇನಿಲ್ಲ. ಕೆಲ ಅಂಗಗಳು ಬಹಳ ಮುಖ್ಯ – ಉದಾಹರಣೆಗೆ ಮಿದುಳು, ಹೃದಯ, ಯಕೃತ್ - ಇವು ಇಲ್ಲದಿದ್ದರೆ ಜೀವಿಸುವುದು ಸಾಧ್ಯವಿಲ್ಲ. ಆದರೆ ಜಠರವಿಲ್ಲದೆ ಜೀವನ ಸಾಧ್ಯ. ಅಂತೆಯೇ, ಗುಲ್ಮ, ಕಿಬ್ಬೊಟ್ಟೆಯ ಸಾಕಷ್ಟು ಅಂಗಗಳು, ಒಂದು ಶ್ವಾಸಕೋಶ, ಒಂದು ಮೂತ್ರಪಿಂಡ, ಯಕೃತ್ತಿನ ಮುಕ್ಕಾಲು ಭಾಗ, ಕರುಳಿನ ಮುಕ್ಕಾಲು ಭಾಗಗಳು ಇಲ್ಲದಿದ್ದರೂ ಜೀವಂತ ಇರಲು ಸಾಧ್ಯ. ಆದರೆ, ಅಂತಹ ಜೀವನದ ಆರೋಗ್ಯ ಸಮಸ್ಯೆಗಳು ಬಹಳ ಹೆಚ್ಚು.

 

ದೇಹದ ಅತ್ಯಂತ ವೇಗದ ಕ್ರಿಯೆ ಸೀನುವುದು – ಗಂಟೆಗೆ ಸುಮಾರು 160 ಕಿಲೋಮೀಟರ್ ವೇಗದಲ್ಲಿ ಸೀನು ಸಂಚರಿಸುತ್ತದೆ. ಕೆಮ್ಮಿನ ವೇಗ ಗಂಟೆಗೆ ಸುಮಾರು 95 ಕಿಲೊಮೀಟರ್ ಇರುತ್ತದೆ. ಬದುಕಿನ ಉದ್ದಕ್ಕೂ ನಾವು ಉತ್ಪಾದಿಸುವ ಎಂಜಲು ಸುಮಾರು ಎರಡು ಈಜುಕೊಳಗಳನ್ನು ಭರ್ತಿ ಮಾಡಬಲ್ಲದು! ಸ್ತ್ರೀಯರ ಋತುಚಕ್ರದ ವೇಳೆ ಹೊರಬರುವ ಅಂಡಾಣು ಮಾನವ ಶರೀರದ ಅತ್ಯಂತ ದೊಡ್ಡ ಜೀವಕೋಶ. ಅಂತೆಯೇ, ಪುರುಷರಲ್ಲಿನ ವೀರ್ಯಾಣು ದೇಹದ ಅತಿ ಚಿಕ್ಕ ಜೀವಕೋಶ. ಅಂದರೆ, ಹೊಸ ಜೀವ ಉತ್ಪತ್ತಿ ಆಗಲು ದೇಹದ ಅತ್ಯಂತ ದೊಡ್ದಗಾತ್ರದ ಕೋಶ ಅತ್ಯಂತ ಚಿಕ್ಕ ಗಾತ್ರದ ಕೋಶದ ಜೊತೆ ಬೆರೆಯಬೇಕು. ಹೀಗೆ ಬೆರೆತು ತಯಾರಾದ ಕೋಶ ದೇಹ ನಿರ್ಮಾಣದ ಮೊಟ್ಟ ಮೊದಲ ಜೀವಕೋಶ. ಸುಮಾರು ಮೂವತ್ತು ನಿಮಿಷಗಳ ನಂತರ ಈ ಜೀವಕೋಶ ಎರಡಾಗಿ ಒಡೆಯುತ್ತದೆ. ಅಂದರೆ, ತನ್ನ ಜೀವಮಾನದ ಮೊದಲ 30 ನಿಮಿಷಗಳ ಕಾಲ ಮಾನವ ಏಕಕೋಶಜೀವಿಯಾಗಿ ಕಳೆಯುತ್ತಾನೆ. ಜೀವವಿಕಾಸದಲ್ಲಿ ಮೊದಲ ಏಕಕೋಶಜೀವಿಯು ಎರಡಾಗಿ ಒಡೆಯಲು ಸುಮಾರು 2 ಬಿಲಿಯನ್ ವರ್ಷಗಳಾದವು ಎಂದು ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ. ಅದೀಗ 30 ನಿಮಿಷಗಳಿಗೆ ಇಳಿದಿದೆ. ತತ್ತ್ವಜ್ಞಾನಿಗಳಿಗೆ ಒಳ್ಳೆಯ ಲೆಕ್ಕಾಚಾರವನ್ನು ಒದಗಿಸಬಲ್ಲ ಸರಕು ಇದು. ಒಂದೆಡೆ ಇಂತಹ ಕ್ಲಿಷ್ಟಕರ ಗಣಿತದ ತರ್ಕವಾದರೆ, ಮತ್ತೊಂದೆಡೆ “ಆರೋಗ್ಯವಂತ ವ್ಯಕ್ತಿ ದಿನಕ್ಕೆ ಸರಾಸರಿ 14 ಬಾರಿ ಹೂಸು ಬಿಡುತ್ತಾನೆ” ಎಂಬುದನ್ನೂ ಸಂಶೋಧಕರು ಲೆಕ್ಕ ಹಾಕಿದ್ದಾರೆ! 

 

ಕೇವಲ ತಿನ್ನುವುದಕ್ಕಾಗಿಯೇ ಬದುಕುವ ಪೀಳಿಗೆ ಇಂದು ನಮ್ಮ ಮುಂದಿದೆ. ಆಹಾರದ ಯಾವುದೇ ಖಾತ್ರಿಯಿಲ್ಲದೆ ಲಕ್ಷಾಂತರ ವರ್ಷ ಬದುಕಿದ ಪ್ರಾಣಿಗಳು ಇಂದು ಆಹಾರ ಖಾತ್ರಿಯನ್ನು ಮೂಲಭೂತ ಹಕ್ಕನ್ನಾಗಿ ಪರಿವರ್ತಿಸುವಷ್ಟು ನಾಗರಿಕತೆ ಬೆಳೆದಿದೆ. ಆದರೆ ನಮ್ಮ ದೇಹಕ್ಕೆ ಇದ್ಯಾವುದೂ ತಿಳಿದೇ ಇಲ್ಲ. ಅದಿನ್ನೂ ಜೀವವಿಕಾಸ ತನ್ನನ್ನು ಹೇಗೆ ನಿರ್ದೇಶಿಸುತ್ತಿದೆಯೋ ಹಾಗೆಯೇ ಉಳಿದಿದೆ. ಹೀಗಾಗಿ ಆಹಾರ ಸಿಕ್ಕಾಗಲೆಲ್ಲ ತಿನ್ನುವ ವಾಂಛೆ ನೀಡುತ್ತದೆ. ಆಹಾರ ಸೇವಿಸಿದ ಮೇಲೆ ಶರೀರದ ಶಕ್ತಿಯನ್ನು ಅದರ ಪಚನಕ್ಕೆ ವ್ಯಯಿಸುತ್ತದೆ. ಆ ಸಮಯದಲ್ಲಿ ಮಿದುಳು ಕೂಡ ಸಹಕಾರ ನೀಡಬೇಕಾದ್ದೇ. ಹಾಗಾಗಿ, ಗಡದ್ದಾಗಿ ತಿಂದ ಮೇಲೆ ನಿದ್ರೆ ಬರುತ್ತದೆ; ಕಣ್ಣು ಮಂಜಾಗುತ್ತದೆ; ತರ್ಕ ಕಡಿಮೆಯಾಗುತ್ತದೆ; ಮೂಗಿನ ವಾಸನೆ ಗ್ರಹಿಸುವ ಶಕ್ತಿಯೂ ಇಳಿಮುಖವಾಗುತ್ತದೆ! ಮಾನವರ ಮೂಗಿಗೆ ಸುಮಾರು 50,000 ವಿವಿಧ ವಾಸನೆಗಳನ್ನು ಗುರುತಿಸುವ ಶಕ್ತಿಯನ್ನು ನಿಸರ್ಗ ನೀಡಿದ್ದರೂ, ನಾವು ಇಂದು ಅದರ ಶೇಕಡಾ 1 ಭಾಗವನ್ನೂ ಬಳಸುವುದಿಲ್ಲ.

 

ನಮ್ಮ ದೇಹದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಕಾಣುವುದು ರಕ್ತದಲ್ಲಿನ ಕೆಂಪು ರಕ್ತಕಣಗಳು. ಇವುಗಳು ಜೀವಂತ ಕೋಶಗಳಲ್ಲ. ಅಂದರೆ ದೇಹದ ಸಾಕಷ್ಟು ಭಾಗ ನಿರ್ಜೀವ! ಪ್ರತಿಯೊಂದು ಕೆಂಪು ರಕ್ತಕಣದಲ್ಲೂ ಕಬ್ಬಿಣದ ಅಂಶವಿದೆ. ಇಡೀ ಶರೀರದ ಕಬ್ಬಿಣವನ್ನು ಪ್ರತ್ಯೇಕಿಸಿದರೆ ಎಂಟು ಸೆಂಟಿಮೀಟರ್ ಉದ್ದದ ಮೊಳೆ ತಯಾರಿಸಬಹುದು ಎಂದು ಹೇಳಲಾಗಿದೆ. ಜಗತ್ತಿನ ಮಹಾಶಕ್ತಿಗೆ ಹೋಲಿಸಿದರೆ ನಮ್ಮ ರಕ್ತದ ಸಾಮರ್ಥ್ಯ ಮೂರಿಂಚು ಮೊಳೆ. ಶರೀರದ ಉಷ್ಣತೆ ಅರ್ಧ ಗಂಟೆಯಲ್ಲಿ ಸುಮಾರು ಎರಡು ಲೀಟರ್ ನೀರನ್ನು ಕುದಿಸಬಲ್ಲದು.

 

ಚತುಷ್ಪಾದಿ ಪ್ರಾಣಿಯಾಗಿ ಆರಂಭವಾದ ಮನುಷ್ಯ ದ್ವಿಪಾದಿಯಾಗಿ ಬದಲಾದದ್ದು ನಾವು ಇಂದಿಗೂ ಜೀವಂತ ಇರುವ ಮುಖ್ಯ ಕಾರಣ. ಇಲ್ಲವಾದರೆ ಮಾನವ ಪ್ರಭೇದ ಬಲಶಾಲಿ ಮೃಗಗಳ ಕೈಗೆ ಸಿಕ್ಕಿ ಎಂದೋ ನಶಿಸಿ ಹೋಗುತ್ತಿತ್ತು. ದ್ವಿಪಾದಿ ದೇಹದ ಸಂತುಲನವನ್ನು ಕಾಯ್ದುಕೊಳ್ಳಲು ಬಹಳ ಶ್ರಮವಾಗುತ್ತದೆ. ಒಂದು ಹೆಜ್ಜೆ ಮುಂದಿಡಲು ಸುಮಾರು 200 ಸ್ನಾಯುಗಳು ಸಹಕರಿಸಬೇಕು. ಸುಮಾರು 25 ಟ್ರಿಲಿಯನ್ ಕೋಶಗಳ ಸಂಗಮವಾದ ವಯಸ್ಕರ ದೇಹದಲ್ಲಿ ಪ್ರತಿ ನಿಮಿಷ 30 ಕೋಟಿ ಕೋಶಗಳು ನಶಿಸಿದರೆ, ಪ್ರತಿ ನಿಮಿಷ 21 ಕೋಟಿ ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತವೆ. ಹೀಗೆ ವಯಸ್ಸಾಗುತ್ತಾ ಹೋದಂತೆ ದೇಹದಲ್ಲಿ ಉಳಿಯುವ ಕೋಶಗಳ ಸಂಖ್ಯೆ ಕಡಿಮೆಯಾಗುತ್ತದೆ. ಮನುಷ್ಯ ಶರೀರವನ್ನು ಸುಟ್ಟರೆ ಸುಮಾರು ಮೂರರಿಂದ ನಾಲ್ಕು ಕಿಲೋಗ್ರಾಂ ಬೂದಿ ಆಗುತ್ತದೆ ಎನ್ನಲಾಗುತ್ತದೆ. ಬಹುತೇಕ ಮಾನವ ಶಿಶುಗಳು ಹುಟ್ಟುವ ವೇಳೆ ಇಷ್ಟೇ ತೂಕ ಇರುತ್ತವೆ. ಅಲ್ಲಿಗೆ, ಜಗತ್ತಿಗೆ ನಾವು ತಂದದ್ದು ಎಷ್ಟೋ ಬಿಟ್ಟು ಹೋದದ್ದೂ ಅಷ್ಟೇ ಎಂದಾಯಿತು.  

 

ದೇಹದ ಗಣಿತದ ಸೋಜಿಗಗಳಿಗೆ ಅಂತ್ಯವೇ ಇಲ್ಲ!

------------------------

ಕುತೂಹಲಿ ಮಾರ್ಚ್ 2025 ರಲ್ಲಿ ಪ್ರಕಟವಾದ ಅಂತಿಮ ಲೇಖನ. ಸಂಚಿಕೆಯನ್ನು ಓದಲು ಕೊಂಡಿ: https://www.flipbookpdf.net/web/site/2dfdc43cec3b6736075d4ea52eb66edc101d369bFBP32051436.pdf.html?fbclid=IwY2xjawLGSuhleHRuA2FlbQIxMABicmlkETAxR3BBNVdvd09jeHJ0ZDlsAR7KAQCFRrJzjEDmrLcafnHdguWbhhq4uZaFrqrnh1a52aK8E6jMSuzlPitLig_aem_3Gzo8YvlzZw2aBzR3SLKTg