ಸೋಮವಾರ, ಏಪ್ರಿಲ್ 19, 2021

 


ಭವಿಷ್ಯದ ವೈದ್ಯಕೀಯ ತಂತ್ರಜ್ಞಾನ

ಡಾ. ಕಿರಣ್ ವಿ ಎಸ್

ಬೇರೆ ಯಾವುದೇ ಜೀವಿಗಿಂತಲೂ ಮನುಷ್ಯ ಭಿನ್ನವಾಗಿರುವುದೇ ಅಸಾಧಾರಣ ಚಿಂತನೆಯ ಶಕ್ತಿಯಿಂದ. ಪ್ರಶ್ನೆಗಳನ್ನು ಕೇಳುವುದು; ಆಧಾರಗಳನ್ನು ಹುಡುಕುವುದು; ಅದರಿಂದ ಉತ್ತರಗಳನ್ನು ಪಡೆಯುವುದು – ಈ ಪ್ರಕ್ರಿಯೆಗಳು ನಮ್ಮನ್ನು ಬೇರೆಲ್ಲಾ ಜೀವಿಗಳಿಗಿಂತಲೂ ಅನನ್ಯವನ್ನಾಗಿ ಮಾಡಿವೆ. ತಂತ್ರಜ್ಞಾನದ ಅಭಿವೃದ್ಧಿಗೂ ಈ ಪ್ರಕ್ರಿಯೆಯೇ ಕಾರಣ. ಆಧುನಿಕ ತಂತ್ರಜ್ಞಾನದ ಕೆಲವು ಮಹತ್ವದ ಹೆಜ್ಜೆಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿ ಹೇಗೆ ಬಳಸಿಕೊಳ್ಳಲಾಗುತ್ತಿದೆ?

ನ್ಯಾನೋ ತಂತ್ರಜ್ಞಾನ: ನ್ಯಾನೋಮೀಟರ್ ಎನ್ನುವುದು ಅತ್ಯಂತ ಸಣ್ಣ ಗಾತ್ರದ ಅಳತೆ. ಒಂದು ಕೂದಲ ತುದಿಯನ್ನು ಎರಡೆರಡು ಸಮಾನ ಭಾಗಗಳಂತೆ ಹದಿನೈದು ಬಾರಿ ಸೀಳಿದರೆ, ಕೊನೆಯಲ್ಲಿ ದೊರಕುವ ಅಂತಹ ಪ್ರತಿಯೊಂದು ಭಾಗವೂ ಗಾತ್ರದಲ್ಲಿ ಒಂದು ನ್ಯಾನೋ ಕೊಳವೆಗೆ ಸಮಾನ. ಸಾಮಾನ್ಯ ಜನರ ಊಹೆಗೆ ನಿಲುಕದ ಇಂತಹ ಸಣ್ಣ ಗಾತ್ರಗಳ ನ್ಯಾನೋ ತಂತ್ರಜ್ಞಾನವನ್ನು ವಿಜ್ಞಾನಿಗಳು ಈಗಾಗಲೇ ಅಭಿವೃದ್ಧಿಗೊಳಿಸಿದ್ದಾರೆ. ಭವಿಷ್ಯದ ಅತ್ಯಂತ ಪ್ರಮುಖ ವೈದ್ಯಕೀಯ ಬೆಳವಣಿಗೆ ಯಾವುದು ಎಂಬ ಪ್ರಶ್ನೆಗೆ “ವೈದ್ಯಕೀಯ ಕ್ಷೇತ್ರದಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆ” ಎನ್ನುವುದೇ ಉತ್ತರ. ನಮ್ಮ ಶರೀರದಲ್ಲಿ ಸುಮಾರು 5 ಲೀಟರ್ ರಕ್ತ ಇರುತ್ತದೆ. ಅಂದರೆ, ಸುಮಾರು 5000 ಮಿಲಿಲೀಟರ್. ಇಂತಹ ಪ್ರತಿಯೊಂದು ಮಿಲಿಲೀಟರ್ ರಕ್ತದಲ್ಲೂ ಸುಮಾರು 50 ಲಕ್ಷ ಕೆಂಪು ರಕ್ತ ಕಣಗಳು ಇರುತ್ತವೆ! ಅಂದರೆ ನಮ್ಮ ದೇಹದಲ್ಲಿ ಒಟ್ಟಾರೆ ಸುಮಾರು 2500 ಕೋಟಿ ಕೆಂಪು ರಕ್ತ ಕಣಗಳಿವೆ! ಪ್ರತಿಯೊಂದು ಕೆಂಪು ರಕ್ತ ಕಣದ ಅಗಲ ಸುಮಾರು 7 ಮೈಕ್ರೋಮೀಟರ್ ಅಥವಾ 7000 ನ್ಯಾನೋಮೀಟರ್. ಎಂತಹ ಸಣ್ಣ ರಕ್ತನಾಳಗಳಲ್ಲೂ ನುಗ್ಗಬಲ್ಲ ಕೆಂಪು ರಕ್ತ ಕಣಗಳು ಶರೀರದ ಬಹುತೇಕ ಎಲ್ಲಾ ಅಂಗಗಳಿಗೂ ಆಹಾರ ಒಯ್ಯುವ ಮತ್ತು ಕೋಶಗಳ ಕಶ್ಮಲಗಳನ್ನು ಹೊರಹಾಕುವ ಮುಖ್ಯ ಸಾಧನ. ನ್ಯಾನೋ ತಂತ್ರಜ್ಞಾನದ ಮೂಲಕ ನ್ಯಾನೋಮೀಟರ್ ಗಾತ್ರದ ಔಷಧಗಳನ್ನು ತಯಾರಿಸಿ, ಔಷಧದ ಸಾವಿರಾರು ಭಾಗಗಳನ್ನು ಒಂದು ಕೆಂಪು ರಕ್ತಕಣದ ಮೇಲೆ ಸವಾರಿ ಕೂರಿಸಿ ಶರೀರದ ಯಾವುದೇ ಭಾಗಕ್ಕೂ ಒಯ್ಯಬಹುದು! ಕ್ಯಾನ್ಸರ್ ನಿಂದ ಬಳಲುತ್ತಿರುವ ಅಂಗಕ್ಕೆ ರಕ್ತ ಸರಬರಾಜು ಮಾಡುವ ಧಮನಿಯನ್ನು ಗುರುತಿಸಿ, ಒಂದು ತೂರ್ನಳಿಕೆಯಿಂದ ಆ ಧಮನಿಯನ್ನು ಪ್ರವೇಶಿಸಿ, ನ್ಯಾನೋ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಿರುವ ಔಷಧಗಳನ್ನು ಅಲ್ಲಿ ಹರಿಯುವ ಕೆಂಪು ರಕ್ತಕಣಗಳ ಮೇಲೆ ಕೂರಿಸಿ ಒಯ್ದರೆ, ಆ ಔಷಧದ ಪರಿಣಾಮ ಅಂತಹ ಕ್ಯಾನ್ಸರ್ ಕೋಶದ ಮೇಲೆ ಮಾತ್ರ ಆಗುತ್ತದೆ. ಇದರಿಂದ, ಬೇರೆ ಬೇರೆ ಅಂಗಗಳು ಕ್ಯಾನ್ಸರ್ ನಿರೋಧಕ ಔಷಧಗಳ ಅಡ್ಡ ಪರಿಣಾಮಕ್ಕೆ ಸಿಲುಕುವುದು ತಪ್ಪುತ್ತದೆ. ಅಂತೆಯೇ, ಹೃದಯಾಘಾತ ಆದಾಗ, ಹೃದಯದ ಯಾವ ರಕ್ತನಾಳದಲ್ಲಿ ರಕ್ತಸಂಚಾರಕ್ಕೆ ಅಡ್ಡಿ ಇದೆಯೋ, ಅದರಲ್ಲಿ ಆ ಅಡ್ಡಿಯನ್ನು ನಿವಾರಿಸಬಲ್ಲ ರಾಸಾಯನಿಕವನ್ನು ಕೆಂಪು ರಕ್ತಕಣಗಳ ಮೇಲೆ ಕೂರಿಸಿ ಪ್ರಯೋಗಿಸಿದರೆ, ರಕ್ತ ಸಂಚಾರ ಸರಾಗವಾಗುತ್ತದೆ. ಅದರ ನಂತರ, ಜಖಂ ಆಗಿರುವ ರಕ್ತನಾಳವನ್ನು ಕೂಡಲೇ ತೇಪೆ ಹಾಕಿ ಬಲಪಡಿಸಬಲ್ಲ ನ್ಯಾನೋ ಕೊಳವೆಗಳನ್ನು ಅಳವಡಿಸಿ ದೀರ್ಘಕಾಲಿಕ ಪರಿಣಾಮಗಳನ್ನು ಪಡೆಯಬಹುದು. ಹೀಗೆ ವೈದ್ಯಕೀಯ ಚಿಕಿತ್ಸೆಯನ್ನು ಬಹಳ ಸುರಕ್ಷಿತವನ್ನಾಗಿ ಮಾಡುವಲ್ಲಿ ನ್ಯಾನೋ ತಂತ್ರಜ್ಞಾನ ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಚರ್ಮದ ಮೂಲಕ ಶರೀರದ ಪ್ರಕ್ರಿಯೆಗಳ ಗ್ರಹಿಕೆ: ಮಾರುಕಟ್ಟೆಯಲ್ಲಿ ದೊರೆಯುವ ಸ್ಮಾರ್ಟ್ ಕೈಗಡಿಯಾರಗಳು ಅದನ್ನು ಧರಿಸಿದ ವ್ಯಕ್ತಿಯ ಹೃದಯದ ಬಡಿತ, ಲಯಗಳನ್ನು ಗ್ರಹಿಸಿ, ಅದರಲ್ಲಿ ಏರುಪೇರು ಕಂಡುಬಂದರೆ ಕೂಡಲೇ ಸಂಬಂಧಪಟ್ಟವರಿಗೆ ಆ ಮಾಹಿತಿ ರವಾನಿಸಬಲ್ಲದು. ಇದು ಮುಂದುವರೆದು ಭವಿಷ್ಯದಲ್ಲಿ ಚರ್ಮದ ಮೇಲೆ ಹಚ್ಚಬಲ್ಲ ಸಣ್ಣ ಅಂಟುಪಟ್ಟಿಯಿಂದ ಶರೀರದ ತಾಪಮಾನ, ದೇಹದಲ್ಲಿನ ನೀರಿನ ಅಂಶ, ರಕ್ತದಲ್ಲಿನ ಸಕ್ಕರೆಯ ಪ್ರಮಾಣ, ರಕ್ತದ ಆಕ್ಸಿಜನ್ ಮಟ್ಟ – ಇಂತಹ ಮೂಲಭೂತ ಮಾಹಿತಿಗಳು ತಿಳಿಯಲಿವೆ. ಹಲವಾರು ಕಾಯಿಲೆಗಳು ಆರಂಭದ ಹಂತದಲ್ಲೇ ಕೆಲವು ವಿಶಿಷ್ಟ ರಾಸಾಯನಿಕಗಳನ್ನು ಅಲ್ಪ ಪ್ರಮಾಣದಲ್ಲಿ ಶರೀರದೊಳಗೆ ಸೃಜಿಸುತ್ತವೆ. ಇಂತಹ ರಾಸಾಯನಿಕಗಳನ್ನು ಪತ್ತೆ ಮಾಡಬಲ್ಲ ಮಾದರಿಗಳು ಸಿದ್ಧವಾದರೆ, ಹಲವಾರು ರೋಗಗಳನ್ನು ಚಿಗುರಿನಲ್ಲೇ ಪತ್ತೆ ಹಚ್ಚಿ, ಅವು ಉಲ್ಬಣವಾಗುವುದಕ್ಕೆ ಮೊದಲೇ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಈ ಅಂಟುಪಟ್ಟಿಗಳು ತೆಳುವಾಗಿ, ಶರೀರದ ಮೇಲೆ ಮೂಡಿಸಿಕೊಳ್ಳುವ ಹಚ್ಚೆಯಂತೆ ಕಾಣಬಲ್ಲವು! ಈ ರೀತಿ ಪತ್ತೆ ಮಾಡಿದ ಸಂಕೇತಗಳನ್ನು ಸ್ಮಾರ್ಟ್ ಫೋನಿಗೆ ರವಾನಿಸಿ, ಅದರಲ್ಲಿನ ವಿಶೇಷವಾಗಿ ವಿನ್ಯಾಸ ಮಾಡಿದ ಆಪ್ ಗಳ ಮೂಲಕ ಮಾಹಿತಿ ವಿಶ್ಲೇಷಣೆ  ಮಾಡಿ ಅದನ್ನು ಸಂಬಂಧಿಸಿದ ತಜ್ಞರಿಗೆ ಕೂಡಲೇ ತಲುಪಿಸುವುದು ಸಾಧ್ಯ. ಹೃದಯದ ಬಡಿತವನ್ನು ನಿಯಂತ್ರಿಸುವ ಪೇಸ್-ಮೇಕರ್ ಯಂತ್ರಗಳ ವಿಷಯದಲ್ಲಿ ಈ ಮಾದರಿಯ ಸಂವಹನ ಈಗಾಗಲೇ ಸಾಕಷ್ಟು ಪ್ರಗತಿ ಪಡೆದಿದೆ.

ರೋಬೋಟಿಕ್ ತಂತ್ರಜ್ಞಾನ: ಜನ್ಮಜಾತ ಸಮಸ್ಯೆಯಿಂದಲೋ, ಪಾರ್ಶ್ವವಾಯು ಕಾಯಿಲೆಯಿಂದಲೋ ಸ್ನಾಯುಮಂಡಲ ದುರ್ಬಲವಾದಾಗ, ಮೆದುಳಿನ ನಿರ್ದೇಶಗಳನ್ನು ಪಾಲಿಸಲು ಸ್ನಾಯುಗಳಿಗೆ ಸಾಧ್ಯವಾಗದು. ಇದರಿಂದ ಶರೀರ ನಿತ್ರಾಣವಾಗುತ್ತದೆ. ನ್ಯಾನೋ ತಂತ್ರಜ್ಞಾನ ಮತ್ತು ರೋಬೋಟಿಕ್ ತಂತ್ರಜ್ಞಾನದ ನೆರವಿನಿಂದ ಕೈಗಳಿಗೆ, ಕಾಲುಗಳಿಗೆ ಮತ್ತು ಬೆನ್ನಿಗೆ ಕವಚದಂತಹ ಹೊದಿಕೆ ಅಳವಡಿಸಿ, ಮಾಂಸಖಂಡಗಳ ಸಂಕೋಚನ-ವಿಕಸನಕ್ಕೆ ಅನುವಾಗುವ ಸೂಕ್ಷ್ಮ ಮೋಟರ್ ಗಳನ್ನು ಸೇರಿಸಲಾಗುತ್ತದೆ. ಮೆದುಳಿನ ಸಂಕೇತಗಳನ್ನು ಗ್ರಹಿಸಲು ಕೆಲವು ಸೂಕ್ಷ್ಮ ಸಂಕೇತ-ಗ್ರಾಹಿಗಳನ್ನು (sensor) ನೆತ್ತಿಯ ಮೇಲೆ ಹೊಂದಿಸಲಾಗುತ್ತದೆ. ಇವು ಮೆದುಳಿನ ನಿರ್ದೇಶನಗಳನ್ನು ಕವಚದ ಸೂಕ್ಷ್ಮ ಮೋಟರ್ ಗಳಿಗೆ ರವಾನಿಸಿ ಚಲನೆಯನ್ನು ಉಂಟುಮಾಡುತ್ತವೆ.

ಕೃತಕ ಅಂಗಾಂಗಗಳಲ್ಲಿ ಮೈಕ್ರೋ ಎಲೆಕ್ಟ್ರಾನಿಕ್ಸ್ ಬಳಕೆ: ಕಣ್ಣುಗಳ ಕೆಲಸ ಬಹಳ ಸಂಕೀರ್ಣ. ಬೆಳಕು ಕಣ್ಣಿನೊಳಗೆ ಪ್ರವೇಶಿಸಿ ಕಣ್ಣಿನ ಹಿಂಬದಿಯ ರೆಟಿನಾ ಪರದೆಯ ಮೇಲೆ ಬಿದ್ದಾಗ, ಅದರೊಳಗೆ ಸಮನ್ವಯಗೊಂಡಿರುವ ಸೂಕ್ಷ್ಮ ನರತಂತುಗಳ ಪ್ರಚೋದನೆಯಿಂದ ಮೆದುಳಿಗೆ ಸಂಕೇತಗಳು ರವಾನೆ ಆಗುತ್ತವೆ. ಅಂದರೆ, ಕಣ್ಣಿನ ಮುಂಭಾಗ ಕ್ಯಾಮೆರಾ ರೀತಿಯಲ್ಲೂ, ಕಣ್ಣಿನ ಹಿಂಭಾಗ ಸಂಕೇತವಾಹಕದಂತೆಯೂ ಕೆಲಸ ಮಾಡುತ್ತದೆ. ನಾವು ನೋಡುವ ದೃಶ್ಯ ಮಾತ್ರ ಮೆದುಳಿನಲ್ಲಿ ಸಂಸ್ಕರಣಗೊಳ್ಳುತ್ತದೆ. ಕಣ್ಣು ಇಲ್ಲದವರಿಗೆ, ಅಥವಾ ಕಣ್ಣು ಕಳೆದುಕೊಂಡವರಿಗೆ ಬಯಾನಿಕ್ ಕಣ್ಣು ಎಂದು ಕರೆಯಲ್ಪಡುವ ಮಾದರಿಯನ್ನು ಪರೀಕ್ಷಾರ್ಥವಾಗಿ ತಯಾರಿಸಲಾಗಿದೆ. ಗಾಜಿನ ಪರದೆಯ ಮೇಲೆ ಬೆಳ್ಳಿಯ ಲೇಪನ ಹಚ್ಚಿ, ಅದರ ಮೇಲೆ ಬೀಳುವ ಬೆಳಕಿನ ಕಿರಣಗಳನ್ನು ವಿದ್ಯುತ್ ಕಾಂತೀಯ ಸಂಕೇತಗಳನ್ನಾಗಿ ಪರಿವರ್ತಿಸಿ, ಅವನ್ನು ಮೆದುಳಿಗೆ ರವಾನಿಸುವ ನರತಂತುಗಳಿಗೆ ಜೋಡಿಸಲಾಗಿದೆ. ನೈಸರ್ಗಿಕ ಕಣ್ಣಿನ ಸಾಮರ್ಥ್ಯಕ್ಕೆ ಹೋಲಿಸಿದರೆ ಬಯೋನಿಕ್ ಕಣ್ಣಿನ ಶಕ್ತಿ ತೀರಾ ಕಡಿಮೆ. ಭವಿಷ್ಯದ ತಂತ್ರಜ್ಞಾನದ ಅಭಿವೃದ್ಧಿ ಈ ಅಂತರವನ್ನು ಕಡಿಮೆ ಮಾಡಬಲ್ಲದು.

ಮೂರು ಆಯಾಮದ ಮುದ್ರಣ: ಕಾಗದದ ಉದ್ದ ಮತ್ತು ಅಗಲದ ಮೇಲೆ ಮುದ್ರಿಸುವ ಎರಡು ಆಯಾಮದ ಪ್ರಿಂಟರ್ ಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದಕ್ಕೆ “ಆಳ” ಎನ್ನುವ ಮತ್ತೊಂದು ಆಯಾಮ ಸೇರಿದರೆ ಅನೇಕ ಆಕೃತಿಗಳ ವಸ್ತುಗಳನ್ನು ಮುದ್ರಿಸಬಹುದು. ಈಗಾಗಲೇ ಮೂರು ಆಯಾಮದ ಮುದ್ರಣ ಯಂತ್ರಗಳು ಲಭ್ಯವಿವೆ. ವೈದ್ಯಕೀಯದಲ್ಲಿ ಈ ಮೂರು ಆಯಾಮದ ಮುದ್ರಣ ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಗಾಯಕ್ಕೆ ಹಚ್ಚುವ ಪಟ್ಟಿಗಳಿಂದ ಹಿಡಿದು ಕೃತಕ ಅಂಗಾಂಗಗಳವರೆಗೆ ಇದರ ಪ್ರಯೋಜನವಿದೆ. ಹೃದಯದ ಸಮಸ್ಯೆ ಇರುವ ರೋಗಿಯ ಕವಾಟವನ್ನು ಬದಲಾಯಿಸಬೇಕೆಂದರೆ ಪ್ರಸ್ತುತ, ಲೋಹದ ಕವಾಟಗಳೋ ಇಲ್ಲವೇ, ಲೋಳೆ ಪದರದ ಕವಾಟಗಳೋ ಉಪಲಬ್ಧವಿವೆ. ಇವು ವಿಭಿನ್ನ ಗಾತ್ರಗಳಲ್ಲಿ ದೊರಕುತ್ತವೆ. ರೋಗಿಯ ಹೃದಯದ ಸ್ವಂತ ಕವಾಟದ ಸರಿಸುಮಾರು ಗಾತ್ರಕ್ಕೆ ಅನುಗುಣವಾದ ಕೃತಕ ಕವಾಟವನ್ನು ಹೊಂದಿಸಿ ಬದಲಾವಣೆ ಮಾಡಬೇಕಾಗುತ್ತದೆ. ಆದರೆ, ಮೂರು ಆಯಾಮದ ಮುದ್ರಣ ದೊರೆತರೆ, ರೋಗಿಯ ಸ್ವಂತ ಕವಾಟದ ಎಂ.ಆರ್.ಐ ಸ್ಕ್ಯಾನ್ ಮಾಡಿ, ಅದರ ಮಾಹಿತಿಯನ್ನು ಇಂತಹ ಮುದ್ರಣ ಯಂತ್ರಕ್ಕೆ ಉಣಿಸಿದರೆ, ಯಥಾವತ್ ಅದೇ ಮಾದರಿಯ, ಅಷ್ಟೇ ನಿಶ್ಚಿತ ಉದ್ದ-ಅಗಲ-ಆಳ ಉಳ್ಳ, ಪ್ರತಿಯೊಂದು ವಿವರದಲ್ಲೂ ರೋಗಿಯ ಸ್ವಂತ ಕವಾಟದ ರಚನೆಯನ್ನೇ ಹೋಲುವ ಕೃತಕ ಕವಾಟ ತಯಾರಾಗುತ್ತದೆ! ಜೊತೆಗೆ, ಹೃದಯದ ಕಾಯಿಲೆಯ ಸ್ವರೂಪದ ಮೇರೆಗೆ ಅಂತಹ ಮುದ್ರಿತ ಕವಾಟ ಯಾವ ವಸ್ತುವಿನದ್ದು ಆಗಿರಬೇಕು ಎಂದು ಕೂಡ ನಿರ್ಧರಿಸಬಹುದು. ಇದು ಶಸ್ತ್ರಚಿಕಿತ್ಸಕರಿಗೆ ವರದಾನ. ರೋಗಿಗೆ ತನ್ನದೇ ಸ್ವಂತ ಕವಾಟದ ಪ್ರತಿರೂಪ ದೊರೆತಂತೆ! ಜೊತೆಗೆ, ಇನ್ನೆಂದಾದರೂ ಮೂರು ಆಯಾಮದ ಮುದ್ರಣಕ್ಕೆ ನಮ್ಮ ಅಂಗಾಂಶಗಳನ್ನು ಮುದ್ರಿಸುವ ಸೌಲಭ್ಯ ಬಂದರೆ, ಕೆಟ್ಟು ಹೋದ ಇಡೀ ಅಂಗವನ್ನೇ ಪ್ರತಿರೂಪಿ ಮುದ್ರಣ ಮಾಡಿ ಅಂಗಾಂಗ ಕಸಿ ಮಾಡಬಹುದು. ಕೃತಕ ಚರ್ಮ, ಕೃತಕ ಕವಾಟ, ಕೃತಕ ಮೂಳೆಗಳು – ಹೀಗೆ ಮೂರು ಆಯಾಮದ ಮುದ್ರಣ ವೈದ್ಯಕೀಯ ರಂಗದಲ್ಲಿ ಕ್ರಾಂತಿಯನ್ನು ತರಲಿದೆ.

ಬೆರಗು ಹುಟ್ಟಿಸುವ ಇಂದಿನ ತಂತ್ರಜ್ಞಾನದ ವಿಸ್ತಾರವನ್ನು ಜಗತ್ತಿನ ಕಲ್ಯಾಣಕ್ಕೆ ಬಳಸಿಕೊಳ್ಳುವುದರಲ್ಲೇ ಮನುಷ್ಯನ ವಿವೇಚನೆಯ ಗೆಲುವು. ತಂತ್ರಜ್ಞಾನ ಯಾವುದೇ ನಿಟ್ಟಿನಲ್ಲಿ ಮುಂದುವರೆದರೂ, ಎಲ್ಲರಿಗೂ ಒಳಿತನ್ನು ಮಾಡುವುದು ನಮ್ಮ ಅಂತಿಮ ಧ್ಯೇಯವಾಗಿರಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹಾಗೂ ಸುರಕ್ಷತೆಗೆ ಬಳಸಿಕೊಳ್ಳುವುದು ಮಹತ್ವದ ಹೆಜ್ಜೆ.    

-------------------------

 25/02/2021 ರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

 

 

 

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ