ಗುರುವಾರ, ಜೂನ್ 28, 2018




ದೇಶದ ಅಂತಿಮ ಪ್ರಜೆ ಕೂಡ ಆರೋಗ್ಯದಿಂದ ವಂಚಿತನಾಗಬಾರದು.
ಡಾ. ಕಿರಣ್ ವಿ. ಎಸ್.
ಸರ್ಕಾರೀ ವ್ಯವಸ್ಥೆ ಪ್ರದರ್ಶಿಸುವ ಉಡಾಫೆ ಮನೋಭಾವ ನಮ್ಮ ದೇಶಕ್ಕೆ ಅಂಟಿದ ಶಾಪ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ದೇಶದಲ್ಲಿ ಅತ್ಯಂತ ಕಂಗೆಟ್ಟಿರುವ ಎರಡು ಕ್ಷೇತ್ರಗಳೆಂದರೆ ಶಿಕ್ಷಣ ಮತ್ತು ಆರೋಗ್ಯ. ಯಾವುದೇ ದೇಶದ ಅಭಿವೃದ್ಧಿಗೆ ಪ್ರಾಥಮಿಕ ಅವಶ್ಯಕತೆಗಳಾದ ಈ ಎರಡೂ ಕ್ಷೇತ್ರಗಳನ್ನು ಅಭಿವೃದ್ಧಿ ಹೊಂದಿರುವ ದೇಶಗಳ ಸರ್ಕಾರಗಳು ಬಹಳ ಜತನದಿಂದ, ನಿಷ್ಠೆಯಿಂದ ಸ್ವತಃ ನಿಭಾಯಿಸುತ್ತವೆ. ಖಾಸಗಿಯವರ ಭಾಗದಾರಿಕೆ ಅಂತಹ ದೇಶಗಳಲ್ಲಿ ಬಹಳ ಕಡಿಮೆ. ಅದೇ ರೀತಿ, ಈ ಎರಡೂ ಕ್ಷೇತ್ರಗಳನ್ನು ನಿರ್ಲಕ್ಷಿಸುವ ದೇಶಗಳು ಸಂಕಷ್ಟಗಳ ಸರಮಾಲೆಯಿಂದ ಹೊರಬರಲಾರದೇ ತೊಳಲುತ್ತವೆ. ಪ್ರಸ್ತುತ ನಮ್ಮ ದೇಶದ ಪರಿಸ್ಥಿತಿಯೂ ಇದೇ.

ನೂರ ಮೂವತ್ತು ಕೋಟಿ ಜನರ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಸರ್ಕಾರದ ಪಾಲುದಾರಿಕೆ ಎಷ್ಟು ಗೊತ್ತೇ? ಹೊರರೋಗಿಗಳಲ್ಲಿ ನೂರಕ್ಕೆ ಹದಿನೆಂಟು ಮಂದಿ ಮಾತ್ರ ಸರ್ಕಾರೀ ಆಸ್ಪತ್ರೆಗೆ ಹೋಗುತ್ತಾರೆ. ಇವರಲ್ಲಿ ಬಹಳಷ್ಟು ಜನ ಅಲ್ಲಿಗೆ ಬೇರೆ ವಿಧಿ ಇಲ್ಲದೆ ಹೋಗುತ್ತಾರೆ. ಅದಕ್ಕೆ ಕಾರಣ ಬಡತನವೋ ಅಥವಾ ಖಾಸಗೀ ಆಸ್ಪತ್ರೆಗಳ ಅನುಪಸ್ಥಿತಿಯೋ ಆಗಿರುತ್ತದೆ. ಅಂದರೆ, ಎಂಭತ್ತೆರಡು ಪ್ರತಿಶತ ಹೊರರೋಗಿಗಳ ಚಿಕಿತ್ಸೆ ಖಾಸಗೀ ಆಸ್ಪತ್ರೆ ಅಥವಾ ಕ್ಲಿನಿಕ್ ಗಳಲ್ಲಿ ನಡೆಯುತ್ತದೆ. ಶೇಕಡಾ ಎಪ್ಪತ್ತಕ್ಕಿಂತ ಹೆಚ್ಚು ಮಂದಿ ಒಳರೋಗಿ ಚಿಕಿತ್ಸೆ ಪಡೆಯಲೂ ಕೂಡ ಖಾಸಗೀ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಇವರಲ್ಲಿ ಬಹಳಷ್ಟು ಜನ ಸಾಲ-ಸೋಲ ಮಾಡಿಯಾದರೂ ಖಾಸಗೀ ಆಸ್ಪತ್ರೆಗಳಿಗೆ ಹೋಗುತ್ತಾರೆ. ಆದರೆ ಕೈಗೆಟಕುವ ಖರ್ಚಿನ ಸರಕಾರೀ ಚಿಕಿತ್ಸಾಲಯಕ್ಕೆ ಮಾತ್ರ ಹೋಗಲಾರರು. ಅನೇಕ ಅಧ್ಯಯನಗಳಲ್ಲಿ ಈ ಮನೋಭಾವಕ್ಕೆ ಕಾರಣಗಳನ್ನು ಹುಡುಕಲಾಗಿವೆ. ಮುಖ್ಯವಾಗಿ ಸರ್ಕಾರೀ ಆಸ್ಪತ್ರೆಗಳ ಅವ್ಯವಸ್ಥೆ, ವಿಪರೀತ ಜನಸಂದಣಿ, ಅನುಕೂಲಗಳ ಕೊರತೆ, ಗಲೀಜು, ಅಶುಚಿತ್ವ, ಲಂಚಕೋರತನ, ಪ್ರತಿಯೊಂದು ಕೆಲಸಕ್ಕೂ ತಗಲುವ ವಿಪರೀತ ಸಮಯ, ಬೇರೆಬೇರೆ ವಿಭಾಗಗಳಲ್ಲಿ ಸಮನ್ವಯದ ಕೊರತೆ, ಸಿಬ್ಬಂದಿಯ ಅಮಾನವೀಯ ವರ್ತನೆ, ಸೌಕರ್ಯಗಳ ಅಲಭ್ಯತೆ ಹೀಗೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಸರ್ಕಾರ ಮಾತ್ರ ಇದ್ಯಾವುದನ್ನೂ ಲೆಕ್ಕಿಸದೆ ತನ್ನ ಜಡತೆಯನ್ನು ಪ್ರದರ್ಶಿಸುತ್ತಲೇ ಇರುತ್ತದೆ.

ಈಗಾಗಲೇ ಖಾಸಗಿಯವರ ಅಧೀನದಲ್ಲಿರುವ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಭವಿಷ್ಯ ಜನರ ಹಿತದೃಷ್ಟಿಯಿಂದ ಅಷ್ಟೇನೂ ಆಶಾದಾಯಕವಾಗಿಲ್ಲ. ಸರ್ಕಾರದ ದಶಕಗಳ ನಿಷ್ಕ್ರಿಯತೆ, ಆರೋಗ್ಯ ಕ್ಷೇತ್ರಕ್ಕೆ ಹಣ ನೀಡುವಲ್ಲಿ ಮಾಡಿದ ಕಂಜೂಸಿತನ, ಜನರ ಅವಶ್ಯಕತೆಗಳಿಗೆ ಸ್ಪಂದಿಸದೇ ಕೇವಲ ಇನ್ನೊಬ್ಬರನ್ನು ದೂರುವದರಲ್ಲಿಯೇ ಕಳೆದ ಕಾಲ, ವಿಪರೀತ ಅಹಂಕಾರದ ದರ್ಪದಲ್ಲಿ ವ್ಯವಹರಿಸುವ ಅಧಿಕಾರಶಾಹಿ, ಯಾವುದೇ ಮುಂದಾಲೋಚನೆ ಇಲ್ಲದೆ ಕೆಲಸ ಮಾಡುವ ಇಲಾಖೆ - ಇವೆಲ್ಲಾ ಸರ್ಕಾರೀ ಆರೋಗ್ಯ ವ್ಯವಸ್ಥೆಯನ್ನು ಸಿಕ್ಕಾಪಟ್ಟೆ ಹಾಳುಗೆಡವಿವೆ. ತಿಂಗಳುಗಳು ಅಂತಿರಲಿ; ವರ್ಷಗಳು, ದಶಕಗಳು ಕಳೆದರೂ ಜಡ್ಡು ಹಿಡಿದ ಈ ವ್ಯವಸ್ಥೆ ಸುಧಾರಿಸುವುದು ಕಷ್ಟ. ಈ ಮಧ್ಯೆ ಖಾಸಗಿಯವರ ಹಿಡಿತ ಇನ್ನೂ ಬಲವಾಗುತ್ತಾ ಹೋಗುತ್ತವೆ. ಈಗಂತೂ ಬೃಹತ್ ಹಣ ಹೂಡಿಕೆ ಮಾಡಬಲ್ಲ ಬಹುರಾಷ್ಟ್ರೀಯ ಕಂಪೆನಿಗಳು ಕೂಡ ಈ ಕ್ಷೇತ್ರಕ್ಕೆ ಇಳಿಯುತ್ತಿವೆ. ಕಾರ್ಪೊರೇಟ್ ಆಸ್ಪತ್ರೆಗಳ ಸಂಖ್ಯೆ ದಿನೇದಿನೇ ಏರುತ್ತಿದೆ. ಸರ್ಕಾರದ ನಿರ್ಲಕ್ಷ್ಯ ಒಂದೆಡೆಯಾದರೆ ಬೃಹತ್ ಖಾಸಗೀ ಸಂಸ್ಥೆಗಳ ಮಾರುಕಟ್ಟೆ ವಿಸ್ತರಣಾ ತಂತ್ರಗಾರಿಕೆ ಇನ್ನೊಂದೆಡೆ. ಒಟ್ಟಿನಲ್ಲಿ ಜನರ ಕಷ್ಟದ ಉಳಿತಾಯವೆಲ್ಲ ಇಂಗಿ ಹೋಗುವುದೇ ಭವಿಷ್ಯ!

ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡಬಹುದು? ಸರ್ಕಾರೀ ಆಸ್ಪತ್ರೆಗಳನ್ನು ಉನ್ನತ ಮಟ್ಟಕ್ಕೆ ಏರಿಸಿ ಖಾಸಗಿಯವರ ಜೊತೆ ಪೈಪೋಟಿಗೆ ಇಳಿಯುವಂತೆ ಮಾಡುವುದು ದೂರದ ಮಾತು. ಪ್ರಾಮಾಣಿಕ ಪ್ರಯತ್ನ ನಡೆದರೂ ಇದಕ್ಕೆ ವರ್ಷಗಳೇ ಬೇಕಾಗಬಹುದು. ಗೋಸುಂಬೆಗಳನ್ನೂ ಮೀರಿಸುವ ನಮ್ಮ ವ್ಯವಸ್ಥೆಯ ಪರಿಪಾಠಗಳು ಇದಕ್ಕೆ ಆಸ್ಪದ ನೀಡುವುದು ಕೂಡ ಕಷ್ಟ.

ಕೆಲವು ಪರಿಹಾರಗಳನ್ನು ಸೂಚಿಸಬಹುದು. ಮೊದಲನೆಯದು – ಈಗ ಇರುವ ವ್ಯವಸ್ಥೆಯನ್ನು ಬಲಪಡಿಸುವುದು. ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಈಗ ನೀಡುತ್ತಿರುವ ಅನುದಾನ ಶೇಕಡಾ 1 ಕ್ಕಿಂತಾ ಕಡಿಮೆ. ಇದು ಕನಿಷ್ಠ ಶೇಕಡಾ 2.5 ಕ್ಕೆ ಏರಬೇಕು. ಈ ರೀತಿ ಬರುವ ಅಧಿಕ ಹಣ ವ್ಯವಸ್ಥೆಯೊಳಗಿನ ದಗಾಕೋರರ ಪಾಲಾಗದಂತೆ ತಡೆಯಬೇಕು. ತಜ್ಞರ ಸಲಹೆ ಪಡೆದು ಈ ಹಣ ಜನರ ಒಳಿತಿಗೆ ಹೇಗೆ ಬಳಕೆ ಆಗಬಹುದೆಂದು ನಿರ್ಧರಿಸಿ, ಹಣ ವ್ಯವಹಾದ ನಿಯಂತ್ರಣವವನ್ನು ಕೇಂದ್ರೀಕರಿಸಬೇಕು. ದುಷ್ಟರ ಕೈಲಿ ಹಣ ಪೋಲಾಗದಂತೆ ತಡೆಯಬೇಕು.

ಎರಡನೆಯದು – ಖಾಸಗಿಯವರ ಮೇಲೆ ಸಮನ್ವಯವನ್ನು ಹೆಚ್ಚಿಸಬೇಕು. ಸರ್ಕಾರ ಅರ್ಥಹೀನ ಕಾಯಿದೆಗಳನ್ನು ಹೇರುತ್ತಾ ಹೋದರೆ ಖಾಸಗಿಯವರ ಜೊತೆ ಅಂತರ ಹೆಚ್ಚುತ್ತಲೇ ಹೋಗುತ್ತದೆ. ತನ್ನ ಗುರುತರ ಜವಾಬ್ದಾರಿಯನ್ನು ಖಾಸಗೀ ಆಸ್ಪತ್ರೆಗಳು, ವೈದ್ಯರು ನಿರ್ವಹಿಸುತ್ತಿದ್ದಾರೆ ಎಂಬ ಪ್ರಜ್ಞೆ ಸರ್ಕಾರಕ್ಕೆ ಇರಬೇಕು. ಅದಕ್ಕೆ ಸರ್ಕಾರ ಸ್ವಲ್ಪ ಕೃತಜ್ಞತೆಯನ್ನೂ ತೋರಬಹುದು! ಈ ನಿಟ್ಟಿನಲ್ಲಿ ಎರಡೂ ಪಕ್ಷದವರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಿಗೆ ಕೆಲಸ ಮಾಡಬೇಕು. ಖಾಸಗಿ ಆಸ್ಪತ್ರೆಯವರಿಗೆ ವಿಧಿಸುವ ಅಧಿಕ ಸುಂಕ, ಮೇಲ್ಸ್ತರದ ವ್ಯಾಪಾರೀ ದರಗಳು, ಕಟ್ಟುನಿಟ್ಟಿನ ವ್ಯಾಪಾರೀ ಕಾಯಿದೆಗಳು, ವೈದ್ಯಕೀಯ ಉಪಕರಣಗಳ ಮೇಲಿನ ಆಮದು ಸುಂಕ ಇವನ್ನು ಸರ್ಕಾರ ಸಡಿಲಗೊಳಿಸಬೇಕು. ಇದಕ್ಕೆ ಪ್ರತಿಯಾಗಿ ಹೊರರೋಗಿಗಳು, ಸಾಮಾನ್ಯ ವಾರ್ಡ್ ನ ರೋಗಿಗಳಿಗೆ ರಿಯಾಯತಿ ದರದಲ್ಲಿ ಚಿಕಿತ್ಸೆ ಮಾಡುವಂತೆ ಒಡಂಬಡಿಕೆ ಮಾಡಿಕೊಳ್ಳಬೇಕು. ಆಸ್ಪತ್ರೆಗಳ ಲಾಭಾಂಶ ತೀರಾ ಕಡಿಮೆ ಆಗದಂತೆ ಹಣಕಾಸು ತಜ್ಞರ ಸಲಹೆ ಪಡೆದು ಇದನ್ನು ನಿಭಾಯಿಸಬೇಕು. ಖಾಸಗೀ ಆಸ್ಪತ್ರೆಗಳನ್ನು ತಮ್ಮ ವೈರಿಯಂತೆ ಕಾಣದೇ, ದೇಶದ ಆರೋಗ್ಯ ನಿರ್ವಹಣೆಯಲ್ಲಿ ಸರ್ಕಾರದ ಪಾಲುದಾರನಂತೆ ಮಾನ್ಯತೆ ನೀಡಬೇಕು. ಉತ್ತಮ ಕಾರ್ಯಸಂಬಂಧದ ನಿರ್ಮಾಣ ಆಗಬೇಕು.

ಮೂರನೆಯದು – ಎಂ ಬಿ ಬಿ ಎಸ್ ವ್ಯಾಸಂಗದ ವಿಧಾನವನ್ನು ಬದಲಾಯಿಸಬೇಕು. ಸೈದ್ಧಾಂತಿಕ ವ್ಯಾಸಂಗವನ್ನು ಮಿತಿಗೊಳಿಸಿ ಪ್ರಾಯೋಗಿಕ ಅಂಶಗಳ ಕಡೆ ಹೆಚ್ಚು ಒತ್ತು ನೀಡುವ ಪಠ್ಯಕ್ರಮ ಜಾರಿಗೆ ಬರಬೇಕು. ಎಂ ಬಿ ಬಿ ಎಸ್ ಅಂತಿಮ ಪರೀಕ್ಷೆಯ ನಂತರದ ತರಬೇತಿ ಅವಧಿಯನ್ನು ಜಿಲ್ಲಾಸ್ಪತ್ರೆ ಅಥವಾ ತಾಲೂಕು ಆಸ್ಪತ್ರೆಗಳಲ್ಲಿ ಮಾಡಿಸಬೇಕು. ವಿದ್ಯಾರ್ಥಿಗಳಿಗೆ ಅಲ್ಲಿ ಕೈಯಾರೆ ಕಲಿಯಲು ಅವಕಾಶಗಳು ದೊರೆಯುತ್ತವೆ. ಅಲ್ಲದೇ ಅಂತಹ ಆಸ್ಪತ್ರೆಗಳ ಹಿರಿಯ ವೈದ್ಯರಿಗೆ ಅಗತ್ಯವಾಗಿ ಬೇಕಾದ ನುರಿತ ಸಹಾಯಕರೂ ದೊರೆತಂತಾಗುತ್ತದೆ. ಇದರ ಜೊತೆ, ವ್ಯಾಸಂಗದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸುವ ನವವೈದ್ಯರಿಗೆ ಹಣ ಸಹಾಯ ಒದಗಿಸಿ ಐದು ವರ್ಷಗಳ ಕರಾರು ಪತ್ರವನ್ನೂ ಮಾಡಬಹದು. ಆರೋಗ್ಯ ಸೇವೆಗಳು ನಗರದಿಂದ ವಿಕೇಂದ್ರಿತಗೊಂಡು ಗ್ರಾಮೀಣ ಪ್ರದೇಶಗಳನ್ನೂ ತಲುಪಬೇಕು. 

ನಾಲ್ಕನೆಯದು – ಕಾರ್ಪೊರೇಟ್ ಕಂಪೆನಿಗಳಿಗೆ ಸಾಮಾಜಿಕ ಜವಾಬ್ದಾರಿಯ ಹೆಸರಿನಲ್ಲಿ ಅವರ ಲಾಭಾಂಶದ ಶೇಕಡಾ ಎರಡನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಲು ಪ್ರೇರೆಪಿಸಲಾಗಿದೆ. ಅಂತೆಯೇ, ಇಂತಹ ಹಲವು ಕಂಪೆನಿಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವ ಜವಾಬ್ದಾರಿ ನೀಡಬೇಕು. ಒಂದು ಹೋಬಳಿ ಅಥವಾ ಸಣ್ಣ ತಾಲೂಕು ಕೇಂದ್ರದಲ್ಲಿ ಹೊರರೋಗಿ ವಿಭಾಗ ಅಥವಾ ಸಣ್ಣ ಆಸ್ಪತ್ರೆಯನ್ನು ಸ್ಥಾಪಿಸಿ ಸಂಪೂರ್ಣವಾಗಿ ಆ ಕಂಪನಿಯೇ ಉಚಿತವಾಗಿಯೋ ಇಲ್ಲವೇ ಸಾಂಕೇತಿಕವಾದ ಶುಲ್ಕಕ್ಕೋ ನಡೆಸಬೇಕು. ಇದರಲ್ಲಿ ಕೆಲಸ ಮಾಡುವ ವೈದ್ಯರಿಗೆ ಆಯಾ ಕಂಪೆನಿ ಉದ್ಯೋಗಿಗಳ ಭತ್ಯೆ ಮತ್ತು ಇತರ ಪ್ರಯೋಜನಗಳನ್ನು ನೀಡಬೇಕು. ಆಗ ಇಂತಹ ಸ್ಥಳಗಳಲ್ಲಿ ಕೆಲಸ ಮಾಡಲು ಹಲವಾರು ವೈದ್ಯರು ಮುಂದಾಗುತ್ತಾರೆ. ಹೀಗೆ ಸೌಲಭ್ಯ ವಂಚಿತ ಪ್ರದೇಶಗಳೂ ಆರೋಗ್ಯ ಕ್ಷೇತ್ರದ ವ್ಯಾಪ್ತಿಗೆ ಬರಬೇಕು.

ಐದನೆಯದು – ಸರ್ಕಾರ ಆರೋಗ್ಯ ವಿಮೆಯ ಸಂಪೂರ್ಣ ಉಸ್ತುವಾರಿ ವಹಿಸಬೇಕು. ತೀರಾ ಕಡಿಮೆ ಬೆಲೆಯಲ್ಲಿ ವಾರ್ಷಿಕ ಎರಡು ಲಕ್ಷ ರೂಪಾಯಿವರೆಗಿನ ಕುಟುಂಬ ಆರೋಗ್ಯ ವಿಮೆ ಎಲ್ಲರಿಗೂ ನೀಡುವಂತೆ ಮಾಡಬೇಕು. ನಂತರ ಪ್ರತಿಯೊಂದು ಲಕ್ಷದ ಸ್ತರಕ್ಕೂ ಈ ಬೆಲೆಯನ್ನು ಘಾತ ರೂಪದಲ್ಲಿ ಏರಿಸುತ್ತಾ ಹೋಗಬಹುದು. ದೇಶದಲ್ಲಿನ ಅರ್ಧದಷ್ಟು ಕುಟುಂಬಗಳು ಈ ವಿಮೆಯ ಅಡಿಯಲ್ಲಿ ಬಂದರೂ ಕೆಲವೇ ವರ್ಷಗಳಲ್ಲಿ ದೇಶದ ಆರೋಗ್ಯ ಕ್ಷೇತ್ರದ ನಕ್ಷೆಯೇ ಬದಲಾಗಿ ಹೋಗುತ್ತದೆ. ಸರ್ಕಾರೀ ಆಸ್ಪತ್ರೆಗಳಲ್ಲಿನ ಜನಸಂದಣಿ ಇಳಿದು ಅಲ್ಲಿನ ಸೇವೆಗಳು ಉತ್ತಮಗೊಳ್ಳುತ್ತವೆ. ಖಾಸಗೀ ವಲಯ ಇನ್ನೂ ಸ್ಪರ್ಧಾತ್ಮಕವಾಗುತ್ತದೆ. ಆದರೆ, ವಿಮೆಯ ಹಣದಲ್ಲಿ ಯಾವುದೇ ಆವ್ಯವಹಾರ ಆಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಸಂಪೂರ್ಣ ಸಹಕಾರ ಪಡೆಯಬೇಕು. ಯಾವುದೇ ಆಸ್ಪತ್ರೆ ಅವ್ಯವಹಾರದಲ್ಲಿ ಭಾಗಿಯಾಗಿರುವುದು ಧೃಡಪಟ್ಟರೆ ಕಟ್ಟುನಿಟ್ಟಾದ ಕ್ರಮ ಜರುಗಿಸಬೇಕು.

ಆರನೆಯದು – ವೈದ್ಯಕೀಯ ಕ್ಷೇತ್ರವನ್ನು ಸ್ವಾಯತ್ತಗೊಳಿಸಬೇಕು. ಸರ್ಕಾರ ಕೇವಲ ಮೇಲ್ವಿಚಾರಕನಂತೆ, ಮಾರ್ಗದರ್ಶಕನಂತೆ ಇರಬೇಕೇ ಹೊರತು ಜಿಗುಟಿನ ಯಜಮಾನನಂತೆ ಇರಬಾರದು! ಇದಕ್ಕೆ ಮುಖ್ಯವಾಗಿ ಭಾರತೀಯ ಆಡಳಿತ ಸೇವೆ, ಪೋಲೀಸ್ ಸೇವೆ ಇರುವಂತೆ ಭಾರತೀಯ ಆರೋಗ್ಯ ಸೇವೆ ಕೂಡ ಇರಬೇಕು. ಯೋಜನೆಗಳ ನಿರ್ಧಾರ, ಕಾರ್ಯಗತಗೊಳಿಸುವಿಕೆ, ಹಣಕಾಸು ನಿಯಂತ್ರಣ, ಸುಪರ್ದಿ, ಅಪರಾಧ ಪ್ರಕರಣಗಳ ವಿಚಾರಣೆ ಮತ್ತು ಶಿಕ್ಷೆ – ಇವೆಲ್ಲಾ ಈ ಸ್ವಾಯತ್ತ ಸಂಸ್ಥೆಯ ಅಧೀನದಲ್ಲಿ ಇರಬೇಕು. ಪ್ರಾಮಾಣಿಕರು ಬೆಳೆಯುವಂತಹ ಪ್ರೋತ್ಸಾಹ, ಉತ್ತೇಜನದ ವಾತಾವರಣ ಇರಬೇಕು.

ಈ ಪಟ್ಟಿಗೆ ಇನ್ನೂ ಹಲವು ಸಲಹೆಗಳನ್ನು ಸೇರಿಸಬಹುದು. ಆದರೆ ಒಂದು ಆರಂಭ ಎಲ್ಲಕ್ಕಿಂತ ಮುಖ್ಯ. ಇದಕ್ಕೆ ರಾಜಕೀಯ ಇಚ್ಚಾಶಕ್ತಿ ಬೇಕು. ನ್ಯಾಯಾಂಗ ಸ್ವಯಂಪ್ರೇರಿತವಾಗಿ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಆದೇಶ ನೀಡಬೇಕು. ದೇಶದ ಅಂತಿಮ ಪ್ರಜೆ ಕೂಡ ಆರೋಗ್ಯದಿಂದ ವಂಚಿತನಾಗಬಾರದು. 

8/ಜುಲೈ/2018 ರಂದು ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. 
ಯುನಿಕೋಡ್ ಕೊಂಡಿ: https://www.vishwavani.news/govt-duty-towards-public-health/
--------



ಮಂಗಳವಾರ, ಜೂನ್ 19, 2018




ಭಾರತದಲ್ಲಿ ವೈದ್ಯಕೀಯ ವೆಚ್ಚ ನಿಜಕ್ಕೂ ದುಬಾರಿಯೇ?
ಡಾ. ಕಿರಣ್ ವಿ. ಎಸ್.



ಕುರ್ಚಿ ಪಂಡಿತರು ಎಂಬ ಮಾತೊಂದಿದೆ! ಇಂತಹವರು ಕೂತ ಜಾಗ ಬಿಟ್ಟು ಏಳದೇ ಪ್ರಪಂಚದ ಎಲ್ಲಾ ವಿಷಯಗಳನ್ನೂ ವಿಮರ್ಶಿಸುತ್ತಾರೆ! ಎವರೆಸ್ಟ್ ಶಿಖರ ಹತ್ತುವುದರಿಂದ ಹಿಡಿದು ಸಮುದ್ರದಲ್ಲಿ ನೌಕಾಯಾನ ಮಾಡುವುದರವರೆಗೆ ಎಲ್ಲಾ ಪರಿಣತಿ ಹೊಂದಿದವರಂತೆ ಮಾತನಾಡುತ್ತಾರೆ. ಆದರೆ ಮನೆಯಿಂದ ಮೂರು ದಾರಿ ದೂರ ಇರುವ ಅಂಗಡಿಯಿಂದ ಕೊತ್ತಂಬರಿ ಸೊಪ್ಪು ಕೂಡ ತರಲಾರರು! ಇಂತಹ ಅನೇಕರು ಭಾರತದಲ್ಲಿನ ದುಬಾರಿ ವೈದ್ಯಕೀಯ ವೆಚ್ಚದ ಬಗ್ಗೆ ಬರೆಯುತ್ತಾರೆ. ಆದರೆ ಅವರಿಗೆ ವಾಸ್ತವಗಳ ಅರಿವೇ ಇರುವುದಿಲ್ಲ.

ಭಾರತದಲ್ಲಿ ವೈದ್ಯಕೀಯ ವೆಚ್ಚ ನಿಜವಾಗಿಯೂ ದುಬಾರಿಯೇ? ಎಂಬ ಪ್ರಶ್ನೆಗೆ ಉತ್ತರಿಸಲು ಇತರ ದೇಶಗಳೊಂದಿಗೆ ಹೋಲಿಕೆ ಮಾಡಬೇಕು. ಅದಕ್ಕೆ ಮುನ್ನ ಕೆಲವು ಇತರ ಕ್ಷೇತ್ರಗಳ ಕಡೆ ಗಮನ ಹರಿಸಬೇಕು. ಒಂದು ಒಳ್ಳೆಯ ಪಿಜ್ಜಾಗೆ ಎಷ್ಟು ಬೆಲೆ? ತೆರಿಗೆಗಳೂ ಸೇರಿ ಸುಮಾರು ರೂ.600. ಅಮೆರಿಕದಲ್ಲೂ ಸುಮಾರು 8 ರಿಂದ 10 ಡಾಲರ್ ಗೆ ಇಂತಹದೇ ಪಿಜ್ಜಾ ಸಿಗುತ್ತದೆ. ಟೊಯೋಟಾ ಕಾರುಗಳು ಅಮೆರಿಕಕ್ಕಿಂತಾ ಭಾರತದಲ್ಲಿ ದುಬಾರಿ. ಪೆಟ್ರೋಲ್ ಬೆಲೆಯಂತೂ ಕೇಳುವುದೇ ಬೇಡ. ನಗರದ ಹೃದಯಭಾಗದಲ್ಲಿರುವ ವೈಭವೋಪೇತ ಮನೆಗಳ ಬೆಲೆ ಸರಿಸುಮಾರು ಅಮೆರಿಕದಲ್ಲೂ, ಬೆಂಗಳೂರಿನಲ್ಲೂ ಒಂದೇ ಎಂದು ಹೇಳಲಾಗುತ್ತದೆ. ಬಹುರಾಷ್ಟ್ರೀಯ ಯಾಜಮಾನ್ಯದ ಹೋಟೆಲ್ ಕೋಣೆಯ ವಿಷಯ ಬಂದಾಗ ಬಾಡಿಗೆಗಳು ನಮ್ಮಲ್ಲಿ ಒಂದು ಸುತ್ತು ಅಧಿಕ ಎನ್ನುತ್ತಾರೆ! ಮಾಲ್ ಗಳಲ್ಲಿ ಖರೀದಿಸುವ ಬಟ್ಟೆಗಳ ಬೆಲೆ ಅಮೆರಿಕದಷ್ಟೇ ಇರುವುದು ಸಾಮಾನ್ಯ. ಇದೇ ಮಾತನ್ನು ದೂರದರ್ಶನ, ಮೊಬೈಲ್ ಫೋನು, ಗಣಕ ಯಂತ್ರಗಳ ವಿಷಯದಲ್ಲೂ ಹೇಳಬಹುದು. ಅಂದರೆ, ನಾವು ಯಾವ ಯಾವ ವಿಷಯಗಳಲ್ಲಿ ಸ್ವಲ್ಪ ಐಶಾರಾಮಿ ಗುಣಮಟ್ಟವನ್ನು ಬಯಸುತ್ತೇವೋ ಅಲ್ಲೆಲ್ಲಾ ವಿದೇಶೀ ಬೆಲೆಗೆ ಸಮನಾದ ಮೊತ್ತವನ್ನೇ ತೆರುತ್ತಿದ್ದೇವೆ. 

ಇದೇ ತರ್ಕವನ್ನು ಖಾಸಗೀ ಆಸ್ಪತ್ರೆಗಳಲ್ಲಿ ಅನ್ವಯಿಸಲು ನಮ್ಮ ಮನಸ್ಸು ಒಪ್ಪುವುದೇ ಇಲ್ಲ. “ಆರೋಗ್ಯ ಎನ್ನುವುದು ಐಶಾರಾಮೀ ವಿಷಯವಲ್ಲ; ಅದು ಮೂಲಭೂತ ಆವಶ್ಯಕತೆ” ಎನ್ನುವ ಮಂದಿ ಈ ಮೂಲಭೂತ ಅವಶ್ಯಕತೆಯನ್ನು ಪೂರೈಸಬೇಕಾದ್ದು ಖಾಸಗಿಯವರಲ್ಲ; ಅದು ಸರ್ಕಾರದ ಹೊಣೆ ಎನ್ನುವ ವಿಷಯವನ್ನು ಮರೆತುಬಿಡುತ್ತಾರೆ. ಸರ್ಕಾರ ಮನೆಮನೆಗೆ ತಲುಪಿಸುವ ಕುಡಿಯುವ ನೀರಿನ ಬೆಲೆ ಲೀಟರಿಗೆ ಪೈಸೆಗಳ ಲೆಕ್ಕದಲ್ಲಿ ಬರುತ್ತದೆ. ಅದನ್ನೇ ಖಾಸಗಿಯವರು ಲೀಟರಿಗೆ ಹದಿನೈದು ರೂಪಾಯಿಯಂತೆ ಮಾರುತ್ತಾರೆ. ಅದೇಕೆ ಎಂದು ಯಾರೂ ಪ್ರಶ್ನಿಸುವುದೇ ಇಲ್ಲ. ಕುಡಿಯುವ ನೀರಿಗಿಂತಾ ಪ್ರಾಥಮಿಕ ಅವಶ್ಯಕತೆ ಇನ್ಯಾವುದಿದ್ದೀತು?

ಇಷ್ಟಾಗಿಯೂ, ನಮ್ಮ ದೇಶದ ಖಾಸಗೀ ಆಸ್ಪತ್ರೆಗಳ ವೆಚ್ಚ ನಿಜಕ್ಕೂ ದುಬಾರಿಯೇ? ಐಶಾರಾಮಿ ಎನ್ನಬಹುದಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ವೆಚ್ಚವನ್ನು ಬೇರೆ ದೇಶದ ಖಾಸಗೀ ಆಸ್ಪತ್ರೆಗಳ ಜೊತೆ ಹೋಲಿಸಿದರೆ ಕೆಲವು ಸತ್ಯಗಳು ತಿಳಿಯುತ್ತವೆ. ಹೃದಯದ ಶಸ್ತ್ರಚಿಕಿತ್ಸೆಯಾಗಲೀ, ಮಂಡಿ ಬದಲಿಕೆಯಾಗಲೀ, ಮೆದುಳಿನ ಚಿಕಿತ್ಸೆಯಾಗಲೀ, ಕ್ಯಾನ್ಸರ್ ಚಿಕಿತ್ಸೆಯಾಗಲೀ – ಬೇರೆ ಯಾವುದೇ ದೇಶದ ಜೊತೆ ಹೋಲಿಸಿದರೆ ನಮ್ಮ ದೇಶದ ಆಸ್ಪತ್ರೆಗಳಲ್ಲಿ ತಗಲುವ ವೆಚ್ಚ ಬಹಳ ಕಡಿಮೆ. ಅಮೇರಿಕಾ ಅಂತಿರಲಿ, ನಮ್ಮ ನಾಯಕರು ಟುಸ್ ಪುಸ್ ಎಂದು ಚಿಕಿತ್ಸೆಗೆ ಹೋಗುವ ಸಿಂಗಪುರಕ್ಕೆ ಹೋಲಿಸಿದರೆ ನಮ್ಮ ಚಿಕಿತ್ಸೆಯ ವೆಚ್ಚ ಅದರಲ್ಲಿ ಶೇಕಡಾ 50 ಕೂಡ ಇಲ್ಲ! ಇದು ಐಶಾರಮಿ ಆಸ್ಪತ್ರೆಗಳ ಮಾತು. ನಮ್ಮ ದೇಶದ ಸಣ್ಣ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಖರ್ಚು ಇನ್ನೂ ಕಡಿಮೆ. ಬೇರೆ ವಿಷಯಗಳ ಖರ್ಚಿನಲ್ಲಿ ಅಮೆರಿಕಕ್ಕೆ ಸರಿದೂಗುವ ನಾವು ಆರೋಗ್ಯದ ವಿಷಯದಲ್ಲಿ ಉನ್ನತ ಗುಣಮಟ್ಟದ ಚಿಕಿತ್ಸೆಯನ್ನು ಬಹಳ ಅಗ್ಗವಾಗಿ ಪಡೆಯುತ್ತಿದ್ದೇವೆ ಎನ್ನುವುದು ನಂಬಲಾಗದ ಸತ್ಯ!

ವೈದ್ಯಕೀಯ ಪ್ರವಾಸೋದ್ಯಮದ ವಿಷಯದಲ್ಲಿ ಭಾರತದ ಕೆಲವು ಖಾಸಗೀ ಆಸ್ಪತ್ರೆಗಳು ವಿಶ್ವದಾದ್ಯಂತ ಮಾನ್ಯತೆ ಗಳಿಸಿವೆ. ಮಧ್ಯಪ್ರಾಚ್ಯ ರಾಷ್ಟ್ರಗಳ, ಯೂರೋಪಿನ ಕೆಲವು ದೇಶಗಳ, ಆಫ್ರಿಕನ್ ದೇಶಗಳ ಬಹಳಷ್ಟು ಪ್ರಜೆಗಳು ಈಗ ಭಾರತಕ್ಕೆ ಬಂದು ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಇಂತಹ ಕೆಲವು ರಾಷ್ಟ್ರಗಳ ಸರ್ಕಾರಗಳು ನಮ್ಮ ದೇಶದ ಖಾಸಗೀ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡು ತಮ್ಮ ದೇಶದ ಪ್ರಜೆಗಳನ್ನು ಚಿಕಿತ್ಸೆಗೆ ಇಲ್ಲಿಗೆ ಕಳಿಸುತ್ತವೆ. ಇದಕ್ಕೆಲ್ಲ ಕಾರಣ ನಮ್ಮ ಖಾಸಗೀ ಆಸ್ಪತ್ರೆಗಳು ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆಯನ್ನು ಬೇರೆಲ್ಲಾ ದೇಶಗಳಿಗಿಂತ ಅಗ್ಗವಾಗಿ ನೀಡುತ್ತವೆ. ಯಾವುದೇ ಚಿಕಿತ್ಸೆಗೆ ನಮ್ಮ ದೇಶದ ಪ್ರಜೆಗಳು ನೀಡುವುದಕ್ಕಿಂತ ಕನಿಷ್ಠ ಐವತ್ತು ಪ್ರತಿಶತ ಹೆಚ್ಚಿನ ದರ ಇಂತಹ ರೋಗಿಗಳು ನೀಡುತ್ತಾರೆ. ಹಾಗಾಗಿಯೂ ಅವರಿಗೆ ನಮ್ಮ ದೇಶದ ಚಿಕಿತ್ಸೆ ಇತರ ದೇಶಗಳಿಗಿಂತ ಅಗ್ಗ!

ಇಷ್ಟಾಗಿಯೂ ಖಾಸಗೀ ಆಸ್ಪತ್ರೆಗಳು ಭಾರತದಲ್ಲಿ ಹೆಚ್ಚ್ಹು ಲಾಭವನ್ನೇನೂ ಮಾಡಿಕೊಳ್ಳುತ್ತಿಲ್ಲ. ಶೇರು ಮಾರುಕಟ್ಟೆಯಲ್ಲಿ ದಾಖಲಾಗಿರುವ ಸೂಪರ್ ಸ್ಪೆಷಾಲಿಟಿ ಖಾಸಗೀ ಆಸ್ಪತ್ರೆಗಳ ಆಯವ್ಯಯ ಪಟ್ಟಿ ಜಾಲತಾಣಗಳಲ್ಲಿ ದೊರಕುತ್ತದೆ. ಅದನ್ನು ಅವಲೋಕಿಸಿದರೆ ಖಾಸಗೀ ಆಸ್ಪತ್ರೆಗಳ ಲಾಭಾಂಶ ಒಂದಂಕಿ ಪ್ರತಿಶತವನ್ನು ಮೀರುವುದೇ ಕಷ್ಟ! ವಾರ್ಷಿಕ 6 ರಿಂದ 8 ಪ್ರತಿಶತ ಲಾಭಾಂಶ ಇರುವ ಸಾಧ್ಯತೆಯೇ ಹೆಚ್ಚು. ಇದಕ್ಕೆ ಕಾರಣಗಳಿವೆ. ಜನ ಹೆಚ್ಚು ಬರಬೇಕೆಂದರೆ ಆಸ್ಪತ್ರೆಗಳು ಇರುವ ಸ್ಥಳ ಸಾರಿಗೆ ವ್ಯವಸ್ಥೆಗೆ ಸಮೀಪವಾಗಿರಬೇಕು. ಕನಿಷ್ಠ ನಗರದ ಹೊರವಲಯದ ಆಸುಪಾಸಿನಲ್ಲಿ ಇರಬೇಕು. ಇಂತಹ ಸ್ಥಳಗಳ ಖರೀದಿಯಾಗಲೀ, ಬಾಡಿಗೆಯಾಗಲೀ ಬಹಳ ಅಧಿಕ. “ಆಸ್ಪತ್ರೆಗಳು ಸೇವೆ ಮಾಡಬೇಕು” ಎಂದು ಕೂಗುವ ಸರ್ಕಾರ ಅದೇ ಆಸ್ಪತ್ರೆಗಳನ್ನು ಉದ್ಯಮಎಂದು ಪರಿಗಣಿಸಿ ವಾಣಿಜ್ಯ ತೆರಿಗೆ ವಿಧಿಸುತ್ತದೆ! ನೀರು, ವಿದ್ಯುತ್, ಒಳಚರಂಡಿ, ಮೂಲ ಸೌಕರ್ಯ ಎಲ್ಲದಕ್ಕೂ ಅತ್ಯಂತ ಮೇಲಿನ ಸ್ತರದ ವಾಣಿಜ್ಯ ಮಟ್ಟದ ದರವನ್ನು ಖಾಸಗೀ ಆಸ್ಪತ್ರೆಗಳಿಂದ ವಸೂಲಿ ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಉನ್ನತ ಮಟ್ಟದ ಆರೋಗ್ಯ ಯಂತ್ರೋಪಕರಣಗಳು ತಯಾರಾಗುವುದೇ ಇಲ್ಲ. ಬೇರೆ ವಿಧಿ ಇಲ್ಲದೆ ಆಸ್ಪತ್ರೆಗಳು ಅಂತಹ ಎಲ್ಲಾ ಉಪಕರಣಗಳನ್ನೂ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕು. ಸರ್ಕಾರ ಅಂತಹ ಉಪಕರಣಗಳ ಮೇಲೆ ಅತೀ ಹೆಚ್ಚಿನ ಆಮದು ಸುಂಕ ವಿಧಿಸುತ್ತದೆ. ಇದರಿಂದ ಉಪಕರಣಗಳ ಬೆಲೆ ವಿಪರೀತ ಏರುತ್ತದೆ. ಅಲ್ಲದೇ, ಖಾಸಗೀ ಆಸ್ಪತ್ರೆಗಳು ಹೆಸರು ಮಾಡುವುದೇ ಉತ್ತಮ ವೈದ್ಯರಿಂದ. ಇಂತಹ ಕೌಶಲವಿರುವ ವೈದ್ಯರು ಅಗ್ಗವಾಗಿ ಸಿಗುವುದಿಲ್ಲ! ಅಂತಹ ವೈದ್ಯರಿಗೆ ಹೆಚ್ಚು ಸಂಬಳ ನೀಡಿ ಉಳಿಸಿಕೊಳ್ಳುವುದು ಆಸ್ಪತ್ರೆಗಳಿಗೆ ಅನಿವಾರ್ಯ. ಇದಲ್ಲದೇ, ಆಸ್ಪತ್ರೆ ಬೆಳೆದಷ್ಟೂ ಅದನ್ನು ಕಾರ್ಪೋರೆಟ್ ರೂಪದಲ್ಲಿ ನಿರ್ವಹಿಸಲು ಕುಶಲ ನಿರ್ವಾಹಕರೂ ಬೇಕು. ಈಚೆಗೆ ರೋಗಿಗಳ ಸಂಬಂಧಿಗಳ ಹೆಸರಿನಲ್ಲಿ ಯಾರ್ಯಾರೋ ಮಾಡುವ ಬೇಕಾಬಿಟ್ಟಿ ಗೂಂಡಾಗಿರಿ ಹಲ್ಲೆಗಳನ್ನು ನಿಯಂತ್ರಿಸಲು ಬಲಿಷ್ಟವಾದ ಭದ್ರತಾ ಸಿಬ್ಬಂದಿ ಬೇಕು. ಸ್ಪರ್ಧಾತ್ಮಕ ಪೈಪೋಟಿಯ ಯುಗದಲ್ಲಿ ಯಾವ ಚಿಕಿತ್ಸೆಗೂ ಯದ್ವಾ ತದ್ವಾ ಬೆಲೆ ಇಡಲು ಸಾಧ್ಯವಿಲ್ಲ. ಹಾಗೆಂದು ಆಸ್ಪತ್ರೆಗಳ ಜೀವಾಳವಾಗಿರುವ ಗುಣಮಟ್ಟವನ್ನೂ ತಗ್ಗಿಸಲಾಗದು. ಹೀಗಾಗಿ ಖಾಸಗೀ ಆಸ್ಪತ್ರೆಗಳ ಒಟ್ಟಾರೆ ಲಾಭಾಂಶ ಕಡಿಮೆ. ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆಯನ್ನು ಅಧಿಕಗೊಳಿಸಿದರೆ ಮಾತ್ರ ಖಾಸಗೀ ಆಸ್ಪತ್ರೆಗಳು ಲಾಭದಲ್ಲಿ ನಡೆಯಬಹುದು. ಇಲ್ಲವಾದರೆ ಹಾಕಿದ ಬೃಹತ್ ಬಂಡವಾಳ ಮುಳುಗುವ ಸಾಧ್ಯತೆ ಇರುತ್ತದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸರ್ಕಾರವೇ ಗುರುತಿಸಿರುವ ಉದ್ಯಮ. ದೊಡ್ಡ ದೊಡ್ಡ ಬಂಡವಾಳ ಹಾಕಬಲ್ಲ ಉದ್ಯಮಪತಿಗಳ ಮತ್ತೊಂದು ಹೂಡಿಕೆ. ಇಲ್ಲಿ ವ್ಯಾಪಾರ ವ್ಯವಹಾರಕ್ಕೆ ಮೊದಲ ಆದ್ಯತೆ. ಆನಂತರ ಅವಕಾಶ ಇದ್ದರೆ ಸೇವೆ! ಇಂತಹ ಆಸ್ಪತ್ರೆಗಳು ಜಾಹೀರಾತಿಗಾಗಿ ಬೇರೆ ಏನನ್ನು ಬರೆದರೂ, ಅವುಗಳ ಅಸ್ತಿತ್ವ ನಿಂತಿರುವುದೇ ವಾಣಿಜ್ಯ ವ್ಯವಹಾರದಲ್ಲಿ. ಪರಸ್ಪರ ಸ್ಪರ್ಧೆಯಿಂದ ಎಷ್ಟೇ ಕಡಿಮೆ ಲಾಭಕ್ಕಾಗಿ ಕೆಲಸ ಮಾಡಿದರೂ ಯಾವ ಖಾಸಗೀ ಆಸ್ಪತ್ರೆಯೂ ನಷ್ಟ ಮಾಡಿಕೊಳ್ಳಲು ಇಚ್ಚಿಸುವುದಿಲ್ಲ. ಒಂದೇ ಸಮನೆ ನಷ್ಟ ಆದರೆ ಕೆಲವು ವರ್ಷಗಳ ಬಳಿಕ ಆಸ್ಪತ್ರೆಯನ್ನು ಮುಚ್ಚುತ್ತರೆಯೇ ವಿನಃ ಸೇವೆಯ ಹೆಸರಿನಲ್ಲಿ ಮುಂದುವರೆಸುವುದಿಲ್ಲ. ಇಲ್ಯಾರೂ ಸಂತರಲ್ಲ!

ಇದು ಖಾಸಗೀ ಆಸ್ಪತ್ರೆಗಳ ವಸ್ತುಸ್ಥಿತಿಯ ಮಾತಾಯಿತು. ಆದರೆ ನಮ್ಮ ದೇಶದ ಮಧ್ಯಮವರ್ಗದ ಜನತೆಯ ಕತೆ ಏನು? ಇಂತಹ ಆಸ್ಪತ್ರೆಯಲ್ಲಿ ಆಗುವ ಒಂದು ದಾಖಲಾತಿ ಅವರ ಹೆಡೆಮುರಿ ಕಟ್ಟುವುದು ಸುಳ್ಳೇ? ಒಂದು ವಾರದ ಚಿಕಿತ್ಸೆಗೆ ಹಣ ಹೊಂದಿಸುವುದಕ್ಕೆ ಅವರು ಹೈರಾಣಾಗುವುದು ಸುಳ್ಳೇ? ಒಬ್ಬರ ಚಿಕಿತ್ಸೆಗೆ ಮನೆಮಂದಿಯೆಲ್ಲ ಟೊಂಕ ಕಟ್ಟಿ ಅದುವರೆಗೆ ಉಳಿಸಿದ್ದನ್ನೆಲ್ಲ ಕಳೆದುಕೊಳ್ಳುವುದು ಸುಳ್ಳೇ? ಚಿಕಿತ್ಸೆಯ ವೆಚ್ಚ ತೂಗಿಸಲು ಆಸ್ತಿ ಪಾಸ್ತಿ ಮಾರಿ ಹಣ ಹೊಂದಿಸುವುದು ಸುಳ್ಳೇ? ನಮ್ಮ ಕಣ್ಣ ಮುಂದೆ ಇಂತಹ ಹಲ;ಅವಾರು ಉದಾಹರಣೆಗಳು ಇರುವಾಗ ಯಾವುದನ್ನು ನಂಬಬೇಕು?

ಇಲ್ಲಿ ಸಮಸ್ಯೆ ಇರುವುದು ನಮ್ಮ ವಿವೇಚನೆಯಲ್ಲಿ. ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ದೊಡ್ಡ ಹೊಂಡವಿದೆ. ಅದನ್ನು ತಪ್ಪಿಸಲು ಕಡೇ ಕ್ಷಣದಲ್ಲಿ ವಾಹನವನ್ನು ತಿರುಗಿಸುತ್ತೇವೆ. ಅದು ಪಕ್ಕದಲ್ಲಿ ಬರುತ್ತಿರುವ ವಾಹನಕ್ಕೆ ಬಡಿಯುತ್ತದೆ. ಅಪಘಾತ ಆಗುತ್ತದೆ. ಆಗ ಇಬ್ಬರೂ ವಾಹನದ ಚಾಲಕರು ಬೀದಿಗಿಳಿದು ಲಟಾಪಟಿ ಮಾಡಿ ಒಬ್ಬರನ್ನೊಬ್ಬರು ಬೈದು ಬಡಿದು ಮಾಡುತ್ತಾರೆಯೇ ಹೊರತು, ಆ ಅಪಘಾತಕ್ಕೆ ಮೂಲ ಕಾರಣವಾದ ರಸ್ತೆಹೊಂಡದ ಬಗ್ಗೆ ಕ್ರಮ ತೆಗೆದುಕೊಳ್ಳುವುದೇ ಇಲ್ಲ. ವಾಹನಗಳು ನಿಬಿಡವಾಗಿ ಚಲಿಸುವ ಆ ರಸ್ತೆಯಲ್ಲಿ ಆ ಹೊಂಡ ಇರಲೇಬಾರದು. ಆ ಹೊಂಡಕ್ಕೆ ಕಾರಣವಾದ ರಸ್ತೆ ಗುತ್ತಿಗೆದಾರ, ಆ ಹೊಂಡವನ್ನು ಮುಚ್ಚದ ನಗರ ಪಾಲಿಕೆ ವ್ಯವಸ್ಥಾಪಕ, ರಸ್ತೆಗಳ ಮೇಲುಸ್ತುವಾರಿ ವಹಿಸಿರುವ ಅಧಿಕಾರಿ, ಆ ಸ್ಥಾನದ ಚುನಾಯಿತ ಪ್ರತಿನಿಧಿ – ಇವರೆಲ್ಲರ ಅಸಮರ್ಥತೆಯಿಂದ ಆದ ಅಪಘಾತ ಅದು. ಆದರೆ ಆ ವಿಷಯವಾಗಿ ಏಟು ತಿನ್ನುವವರು ಇನ್ಯಾರೋ! ಇದು ನಮ್ಮ ದೇಶದ ವಾಸ್ತವ. ಆರೋಗ್ಯ ಕ್ಷೇತ್ರವೂ ಇದಕ್ಕೆ ಹೊರತಲ್ಲ.

ಪ್ರಜೆಗಳ ಆರೋಗ್ಯ ರಕ್ಷಣೆ ಸರ್ಕಾರದ ಹೊಣೆ ಎಂಬುದನ್ನು ನಾವು ಅತ್ಯಂತ ಮುಖ್ಯವಾಗಿ ಅರಿಯಬೇಕು. ಪ್ರಜೆಗಳ ಹಣಕಾಸಿನ ಪರಿಸ್ಥಿತಿ ಮುಕ್ಕಾಗದಂತೆ ಅವರಿಗೆ ಎಲ್ಲಾ ಸ್ತರಗಳಲ್ಲೂ ಆರೋಗ್ಯ ರಕ್ಷಣೆ ಒದಗಿಸುವುದು ಸರ್ಕಾರದ ಮೂಲ ಧ್ಯೇಯವಾಗಿರಬೇಕು. ಸರ್ಕಾರಿ ಆಸ್ಪತ್ರೆಗಳ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸದ ಹೊರತು ಇದು ಸಾಧ್ಯವಿಲ್ಲ. ಪ್ರಪಂಚದ ಯಾವ ರಾಷ್ಟ್ರವೂ ತನ್ನ ಪ್ರಜೆಗಳ ಆರೋಗ್ಯ ನಿರ್ವಹಣೆಗೆ ಖಾಸಗಿಯವರನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಆದರೆ ನಮ್ಮ ದೇಶದ ಸ್ಥಿತಿ ಡೋಲಾಯಮಾನವಾಗಿದೆ. ಸರ್ಕಾರ ತಾನು ಗಟ್ಟಿಯಾಗಿ ಏನನ್ನೂ ಮಾಡುವುದಿಲ್ಲ. ಮಾಡಲು ಯಾರಾದರೂ ಮುಂದೆ ಬಂದರೆ ಅವರಿಗೆ ನೂರಾರು ಕಾಯಿದೆ ನಿಯಮ ಹಾಕಿ ಅವರನ್ನು ಹಿಮ್ಮೆಟ್ಟಿಸುತ್ತದೆ. ತನ್ನ ಕೈಲಿ ಆಗದ ಕೆಲಸವನ್ನು ಖಾಸಗಿಯವರು ಮಾಡಿದರೆ ಅದಕ್ಕೆ ಸಹಕಾರ ನೀಡಿ ಪ್ರಜೆಗಳಿಗೆ ಒಳಿತು ಮಾಡಬಲ್ಲ ಒಪ್ಪಂದಗಳನ್ನು ಅವರೊಂದಿಗೆ ಮಾಡಿಕೊಳ್ಳುವ ವಿಧಾನಗಳನ್ನು ಬಿಟ್ಟು ಅವುಗಳ ನಡು ಮುರಿಯುವಂತೆ ತೆರಿಗೆ ಹಾಕಿ ಹೈರಾಣು ಮಾಡುತ್ತದೆ. ಇದಲ್ಲದೇ ಖಾಸಗೀ ಆಸ್ಪತ್ರೆಗಳಿಗೆ ಅಧಿಕಾರಶಾಹಿಯ ಆಟಾಟೋಪ, ಲಂಚಕೋರ ಅಧಿಕಾರಿಗಳ ವಿಕೃತಿಗಳ ಸಂಕಟ, ರಾಜಕಾರಣದ ಅಹಮಿಕೆಗೆ ತರುವ ಅಯೋಮಯ ಕಾಯಿದೆಗಳ ಸಂಕಷ್ಟಗಳು ಬೇರೆ. “ತಾನು ಮಾಡಲ್ಲ; ನೀವು ಮಾಡಲು ಬಿಡಲ್ಲ” ಎಂಬ ಸರ್ಕಾರಿ ನೀತಿಯಲ್ಲಿ ಪ್ರಜೆಗಳು ಬಡವಾಗುವುದು ಯಾರ ಅರಿವಿಗೂ ಬರುವಂತಿಲ್ಲ.

(22/6/2018 ರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ.)
ಯುನಿಕೋಡ್ ಲಿಂಕ್: https://www.vishwavani.news/poor-for-govt-policy/
.

ಶನಿವಾರ, ಜೂನ್ 9, 2018


Is the time ripe for MD in OPD practice?

The dissent was there - all the time. Now, it is reaching very uncomfortable proportions.

I am talking about the perpetual tussle between Governments and Doctors. Both are blaming each other for what they perceive as lack of accountability towards the society. While the doctors are sure that the successive Governments have fared miserably in managing healthcare in the nation, the Government always blames doctors for neglecting rural sector in extending healthcare. Apart from the direct onslaught, the Governments use surrogate tools on the entire medical community to hide their inept performance in healthcare.

The element of truth exists on either side. At current scenario, it is not easy for a doctor with mere MBBS degree to derive success and money through practice. The current medical education treats MBBS as a pre-requisite for writing PG Entrance exams rather than creating a doctor who can be benefit to primary healthcare in society. Mere MBBS has been de-glamorized beyond expectations!

Also, the quality of medical education has been deteriorating with successive years. The medical faculty who used to be the sources of inspiration for generations, has been slowly vanishing. Advent of Post-Graduate courses in every medical colleges have been eating up the hands-on opportunities from MBBS interns. The internship after MBBS is becoming more and more clerical and uninspiring. No wonder internship is no longer seen as preparation for future career as practitioner.

With this kind of natural history, doctors with mere MBBS qualification perceive themselves "not good enough" for practice. Also, the society expects every doctor to be a "super-specialist" and looks down upon someone who lacks specialty qualification. This is a very big moral let down for a fresh medical graduate who genuinely wishes to practice after MBBS. Overall, the scenario is not bright enough for primary healthcare.

The vacuum created in primary healthcare by inadequate number of MBBS doctors has been easily filled by quacks who either lack qualification or those with AYUSH qualification but shamelessly practice modern medicine in surrogacy. Since Governments have the onus of covering up their own lacunae, they openly support AYUSH quacks irrespective of what the law dictates! It's marriage of convenience between AYUSH quacks and inept Governments!

There is DNB in Family medicine, but appears ill-constructed and less advertised. Also, the centres that offer DNB family medicine do not do any justice for the candidates. Many of these institutes use such candidates as cheap labour rather than training them effectively to cater the needs of society. Also, the objectives and curriculum of this course do not seem to be functioning. Something more concrete and much bigger than this is the need of present times.

It is probably ripe time for MD in OPD practice. Those who wish to serve as family physicians in enforcing the primary healthcare should be given a proper training and support to counter blames from Governments as well as to fight quackery. The following suggestions can be considered. The medical community can feel free to add to these suggestions:

1. There should be 2 or 3 year course in MD in OPD practice. There should not be any entrance exam for this course. Those who are interested should be allowed to continue after completing interneship. These candidates should not be allowed to write any other PG entrance exams for 5 years after finishing the MD in OPD Practice course.

2. The fee structure should be minimal and the stipend should be equal to any other PG course. Private medical colleges should also follow the same principle. 

3. The training rotation should be exclusively in OPD with about 3 months posting in emergency to learn the principles of triage. These students should not be misused for ward duties, discharge summaries, emergency duties and so on. The broad specialties should have longer posting with few weeks each in specialty OPDs. The curriculum should be carefully designed by a panel of senior expert faculty from many specialties.

4. There should be 1-2 months posting in Laboratory to understand the functioning of basic autoanalysers, procurement of basic reagents, maintaining them, principles of biomedical waste management, and operating a simple laboratory which caters to basic set of investigations.

5. There should be another 1-2 months posting in pharmacy to understand procurement, stocking, arrangement and dispensing of medicines with basic principles of book keeping. It should be enough to manage a small pharmacy which dispenses important medications.

6. There should be periodic assessment rather than one tough exit exam. These assessments can be at every 6 months interval and should summate to the final results. There need not be a grand exit exam or viva voce.

7. The Government should mandate these doctors with MD in OPD practice to set up clinics only in rural areas. They should be provided interest-free loans to be repaid in 3 to 5 years to set up their clinics in rural areas. They should be given permission to set up their small laboratory which can perform basic set of investigations and should be given permission to dispense medications in the clinic without any need of additional license. This will ensure adequate financial compensation and will encourage more and more qualified doctors in rural areas. It should be ensured that two such clinics should be separated by at least 2-3 km to avoid clustering and to discourage unhealthy practices.

8. Periodic CMEs should be conducted in this area and every doctor should accumulate at least 6 CME credits every year to sustain the life of license.

Overall, the objectives of this course should be
a) create more competent and confident primary care physicians
b) check quackery
c) encourage doctors moving towards rural areas to deliver primary healthcare
d) elevate the overall quality of primary healthcare
e) reconstruct the skewed healthcare pyramid of this nation

Hence, this course should not be made painful by unnecessary hardships or tough training protocols or rigid exit exams. This course is a need of this nation and should have the objective of meeting the required needs rather than making life tough!

Constructive criticisms and suggestions are welcome. Those who have something pessimistic to say, please keep away. It is time for constructive action rather than cribbing, blaming and complaining.
------------------

ಮಂಗಳವಾರ, ಜೂನ್ 5, 2018




ಶ್ರೇಣೀಕೃತ ಆರೋಗ್ಯ ವ್ಯವಸ್ಥೆ: ಭಾರತ ದೇಶದ ಅವಶ್ಯಕತೆ

ಈ ದಿನ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಅಸಮರ್ಪಕತೆಯ ಬಗ್ಗೆ ದೊಡ್ಡ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಖಾಸಗೀ ಆಸ್ಪತ್ರೆಗಳು ಏರಿಗೆಳೆದರೆ ಸರ್ಕಾರ ನೀರಿಗೆಳೆಯುತ್ತದೆ. ಪರಿಹಾರ ಮಾತ್ರ ಶೂನ್ಯ. ಈ ನಿಟ್ಟಿನಲ್ಲಿ ಒಂದು ಪರಿಹಾರವೆಂದರೆ ಹಲವಾರು ಮುಂದುವರೆದ ದೇಶಗಳಲ್ಲಿ ಇರುವಂತಹಾ ಶ್ರೇಣೀಕೃತ ಆರೋಗ್ಯ ವ್ಯವಸ್ಥೆ. ಹಾಗೆಂದರೇನು?

ತಲೆನೋವಿನಿಂದ ಬಳಲುತ್ತಿರುವ ರೋಗಿಯೊಬ್ಬರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ತಲೆನೋವು ಇದೆ ಎಂದು ಆ ರೋಗಿ ಪ್ರಾಥಮಿಕ ನೆಲೆಗಟ್ಟಿನ ವೈದ್ಯರ (primary care physician) ಬಳಿ ಬಂದಿದ್ದಾರೆ. ತಲೆನೋವಿಗೆ ಸೈನಸ್ ಸಮಸ್ಯೆಯಿಂದ ಹಿಡಿದು ಮೆದುಳಿನ ಕ್ಯಾನ್ಸರ್ ವರೆಗೆ ನೂರಾರು ಕಾರಣಗಳು ಇರಬಹುದು. ಈ ಹಂತದ ವೈದ್ಯರು ರೋಗಿಯ ಕಾಯಿಲೆಯ ವಿವರಗಳನ್ನು ಕೇಳಿ ತಿಳಿದು, ದೈಹಿಕ ಪರೀಕ್ಷೆ ಮಾಡಿ ಈ ಕಾರಣಗಳನ್ನು ನೂರರಿಂದ ಹತ್ತಕ್ಕೆ ಇಳಿಸುತ್ತಾರೆ. ಆ ಹತ್ತರಲ್ಲಿ ಯಾವುದು ಅತ್ಯಂತ ಸಾಮಾನ್ಯ ಕಾರಣವೋ ಅಂತಹ ಕಾರಣಕ್ಕೆ ಚಿಕಿತ್ಸೆ ನೀಡುತ್ತಾರೆ. ಗುಣವಾಗದಿದ್ದರೆ ಇನ್ನೊಂದು ಕಾರಣದ ಚಿಕಿತ್ಸೆ ನಡೆಯುತ್ತದೆ. ಪ್ರಾಥಮಿಕ ಹಂತದಲ್ಲಿ ಪ್ರಯೋಗಾಲಯದ ಪರೀಕ್ಷೆಗಳು ತೀರಾ ಕಡಿಮೆ. ಶೇಕಡಾ 80 ರಷ್ಟು ತಲೆನೋವುಗಳು ಈ ಹಂತದಲ್ಲೇ ಗುಣವಾಗುತ್ತವೆ. ಹಾಗೆ ಗುಣ ಆಗದಿದ್ದರೆ ಪ್ರಾಥಮಿಕ ಹಂತದಿಂದ ರೋಗಿ ದ್ವಿತೀಯ ಹಂತಕ್ಕೆ ಏರಬೇಕಾಗುತ್ತದೆ.

ದ್ವಿತೀಯ ಹಂತದ ವೈದ್ಯರ ವಿದ್ಯಾರ್ಹತೆ ಹೆಚ್ಚು ಇರುತ್ತದೆ. ಇಂತಹ ರೋಗಿಗಳನ್ನು ಪರೀಕ್ಷಿಸಿದ ಅನುಭವವೂ ಹೆಚ್ಚು ಇರುತ್ತದೆ. ಇದರ ಆಧಾರದ ಮೇಲೆ ಅವರು ಕೆಲವು ಪರೀಕ್ಷೆಗಳನ್ನು ಮಾಡಿ ಚಿಕಿತ್ಸೆ ನೀಡುತ್ತಾರೆ. ರೋಗಿಯ ತಲೆನೋವಿನ ಕಾರಣಗಳು ಈ ಹಂತದಲ್ಲಿ ಇಪ್ಪತ್ತರಿಂದ ಎರಡೋ-ಮೂರೋ ಸಂಖ್ಯೆಗೆ ಇಳಿದಿರುತ್ತವೆ. ನೂರಕ್ಕೆ ತೊಂಭತ್ತೆಂಟು ರೋಗಿಗಳು ಈ ಹಂತದಲ್ಲಿ ಗುಣಪಡುತ್ತಾರೆ.

ಈ ಸ್ತರದ ಚಿಕಿತ್ಸೆಗೂ ಗುಣವಾಗದ ಎರಡು-ಮೂರು ಪ್ರತಿಶತ ರೋಗಿಗಳು ಮೂರನೆಯ ಹಂತದ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ. ಇಲ್ಲಿ ಆ ವಿಷಯದ ವಿಶೇಷ ತಜ್ಞರು ಇರುತ್ತಾರೆ. ಈ ಹಂತದ ಪ್ರಯೋಗಾಲಯದ ಪರೀಕ್ಷೆಗಳು ಕೂಡ ಅಧಿಕ ಮತ್ತು ದುಬಾರಿ. ತೀರಾ ಅಸಾಮಾನ್ಯ ಕಾಯಿಲೆಗಳಿಗೆ ಮಾತ್ರ ಇವನ್ನು ಬಳಸಬೇಕು. ಇದರ ಸ್ಪಷ್ಟ ಕಲ್ಪನೆ ಆ ತಜ್ಞ ವೈದ್ಯರಿಗೆ ಇರುತ್ತದೆ. ಇಷ್ಟಾಗಿಯೂ ನಾಲ್ಕೈದು ಸಾವಿರಕ್ಕೆ ಒಬ್ಬ ರೋಗಿಗೆ ತಲೆನೋವಿನ ಕಾರಣ ತಿಳಿಯದೆ ಹೋಗಬಹುದು. ವೈದ್ಯಕೀಯ ಸಂಶೋಧನೆ ನಡೆಯುವುದು ಇಂತಹ ಅಪರೂಪದ ರೋಗಿಗಳಲ್ಲಿಯೇ.

ಮುಂದುವರೆದ ದೇಶಗಳಲ್ಲಿ ಯಾವ ರೋಗಿಯೂ ಸೀದಾ ಮೂರನೇ ಹಂತದ ತಜ್ಞ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಮೊದಲ ಶ್ರೇಣಿಯಿಂದ ಎರಡನೇ ಶ್ರೇಣಿಗೆ, ಆನಂತರವೇ ಮೂರನೆಯ ಶ್ರೇಣಿಗೆ ಅಧಿಕೃತವಾಗಿ ವರ್ಗಾವಣೆ ಆಗಬೇಕು. ವ್ಯವಸ್ಥೆಯ ಶಿಸ್ತು ಹಾಗಿದೆ. ಈಗ ಕೆಳಹಂತದ ಪ್ರಾಥಮಿಕ ವೈದ್ಯರು ರೋಗಿಗೆ ಚಿಕಿತ್ಸೆ ನೀಡಿ, ತನ್ನ ಕೈಮೀರಿದ ರೋಗಿಯನ್ನು ಮೇಲಿನ ಹಂತಕ್ಕೆ ವರ್ಗಾಯಿಸಿದರೆ ಅದು ನ್ಯೂನತೆವಾಗಲೀ, ಅಲಕ್ಷ್ಯವಾಗಲೀ ಆಗುವುದಿಲ್ಲ. ಹೀಗೆ ಎರಡನೇ ಹಂತದಲ್ಲೂ ಸಹ. ಮೂರನೇ ಹಂತದ ತಜ್ಞರು ಇಂತಹ ರೋಗಿಗಳಿಗೆ ಸರಿಯಾಗಿ ಪರೀಕ್ಷಿಸದೇ ಇದ್ದರೆ ಮಾತ್ರ ಅದು ಅವಘಡ. ಒಂದು ವೇಳೆ ತನ್ನ ಬಳಿ ಸರಿಯಾಗಿ ಚಿಕಿತ್ಸೆಯಾಗದ ರೋಗಿಯನ್ನು ಮೇಲಿನ ವಿಶೇಷಜ್ಞರ ಬಳಿ ವರ್ಗಾಯಿಸದೆ ಇದ್ದರೆ ಅದು ಪ್ರಾಥಮಿಕ ವೈದ್ಯರ ಅಲಕ್ಷ್ಯ. ಎಷ್ಟು ರೋಗಿಗಳನ್ನು ಹೀಗೆ ಒಬ್ಬ ಪ್ರಾಥಮಿಕ ವೈದ್ಯ ಮೇಲಿನ ಸ್ತರಕ್ಕೆ ವರ್ಗಾಯಿಸಿದ್ದಾನೆ? ಹಾಗೆ ವರ್ಗಾಯಿಸಿದ ಪ್ರಕ್ರಿಯೆ ಸರಿಯೇ ತಪ್ಪೇ? ಇಂತಹ ಪರಿಮಾಣಗಳು ಮುಂದುವರೆದ ದೇಶಗಳಲ್ಲಿ ಇವೆ. ಇದರಿಂದ ಒಬ್ಬ ಪ್ರಾಥಮಿಕ ವೈದ್ಯನ ಗುಣಮಟ್ಟದ ನಿರ್ಧಾರ ಆಗುತ್ತದೆ. ತಜ್ಞರ ಅವಶ್ಯಕತೆ ಇರುವ ರೋಗಿಯನ್ನು ವರ್ಗಾಯಿಸದೆ ಇರುವುದೂ ತಪ್ಪು; ತಜ್ಞರ ಅವಶ್ಯಕತೆ ಇಲ್ಲದ ರೋಗಿಯನ್ನು ಅವರ ಬಳಿ ಕಳಿಸುವುದೂ ತಪ್ಪು. Act of ommission ಮತ್ತು act of commission ಎಂದು ಕರೆಯಲಾಗುವ ಈ ಪ್ರಕ್ರಿಯೆ ಮುಂದುವರೆದ ದೇಶಗಳಲ್ಲಿ ಚೆನ್ನಾಗಿ ರೂಪುಗೊಂಡಿದೆ.

ನಮ್ಮ ದೇಶದಲ್ಲಿ ಈ ರೀತಿಯ ಶಿಸ್ತನ್ನು ಅವಶ್ಯಕತೆ ಎಂದು ಪರಿಗಣಿಸಿಯೇ ಇಲ್ಲ. ಎಲ್ಲಾ ಝಟ್-ಪಟ್ ವೇಗದಿಂದ ಆಗಬೇಕು. ವ್ಯವಸ್ಥೆಯಲ್ಲಿ ಬಿಗಿ ಇಲ್ಲ; ಅಧಿಕೃತ ವರ್ಗಾವಣೆ ಬೇಕಿಲ್ಲ; ರೋಗನಿದಾನದ ಪ್ರಕ್ರಿಯೆಯ ಹಂತಗಳ ಅರಿವಿಲ್ಲ. ಔಷಧ ತೆಗೆದುಕೊಂಡ ಹತ್ತು ನಿಮಿಷಗಳಲ್ಲಿ ಎಲ್ಲಾ ಸರಿಹೋಗದಿದ್ದರೆ ನಮಗೆ ಚಡಪಡಿಕೆ! ಮೊದಲೆನೆಯ ಭೇಟಿಗೆ ಸಮಸ್ಯೆ ಗುಣವಾಗದಿದ್ದರೆ ಆ ವೈದ್ಯನೇ ಅಸಮರ್ಥ; ಅವನ ಕೈಗುಣ ಸರಿಯಿಲ್ಲ! ತಲೆನೋವು ಎಂದಾಕ್ಷಣ ಏಕ್ದಂ ನರರೋಗ ತಜ್ಞರನ್ನು ಭೇಟಿ ಆಗಬಹುದು. ತಲೆನೋವಿನ ನೂರಾರು ಕಾರಣಗಳನ್ನೂ ಆ ತಜ್ಞರೇ ಪರಿಷ್ಕರಿಸಬೇಕು. ಸಮಯದ, ಒತ್ತಡದ ರೀತ್ಯಾ ಇದು ಬಹಳ ತ್ರಾಸದ ಕೆಲಸ. ಯಾವ ಕೆಲಸವನ್ನು ಮುಂದುವರೆದ ದೇಶಗಳಲ್ಲಿ ಮೂರು ವೈದ್ಯರು ಸಾಕಷ್ಟು ಸಮಯ ತೆಗೆದುಕೊಂಡು ಮಾಡುತ್ತಾರೋ, ಅದೇ ಕೆಲಸವನ್ನು ಇಲ್ಲಿ ಮೇಲಿನ ಸ್ತರದ ಒಬ್ಬ ತಜ್ಞ ಕೆಲವೇ ನಿಮಿಷಗಳಲ್ಲಿ ಮಾಡುವುದು ಅಸಮಂಜಸ. ನಮ್ಮ ದೇಶದ ರೋಗಿಗಳ ಸಂಖ್ಯಾಬಾಹುಳ್ಯ ಈ ಒತ್ತಡವನ್ನು ಅಧಿಕಗೊಳಿಸುತ್ತದೆ. ಅಲ್ಲದೇ, ಮೂರನೆಯ ಸ್ತರದ ತಜ್ಞ ವೈದ್ಯನ ಮಾತು ಅಂತಿಮ ಎನಿಸಿಕೊಳ್ಳುವುದರಿಂದ, ಆತ ಅವಕಾಶಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ತನ್ನ ಬಳಿ ಬಂದ ಪ್ರತೀ ರೋಗಿಗೂ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿ ತನ್ನ ತೀರ್ಪು ನೀಡಬೇಕಾಗುತ್ತದೆ. ಹೀಗಾಗಿ ಪ್ರಯೋಗಾಲಗಳಿಗೆ ಸುಗ್ಗಿ! ಇಂತಹ ಸಂದರ್ಭದಲ್ಲಿ ಅವರ ಮಧ್ಯೆ ಅನೈತಿಕ ಒಪ್ಪಂದಗಳೂ ಏರ್ಪಡುವುದು ಅಸಹಜವಲ್ಲ.

ನಮ್ಮ ದೇಶದ ಯಾವುದೇ ಸರ್ಕಾರವೂ ವೈದ್ಯಕೀಯ ಶ್ರೇಣೀಕೃತ ವ್ಯವಸ್ಥೆಯನ್ನು ನಿರ್ಮಿಸಿಯೇ ಇಲ್ಲ. ಕನಿಷ್ಠ ಅದರ ಬಗ್ಗೆ ಕಾಳಜಿಯನ್ನೂ ತೆಗೆದುಕೊಂಡಿಲ್ಲ! ಈ ವ್ಯವಸ್ಥೆಯ ಪ್ರಾಥಮಿಕ ಹಂತದಲ್ಲಿ ಶೇಕಡಾ 80 ವೈದ್ಯರು ಇರಬೇಕು. ಹದಿನೈದು ಪ್ರತಿಶತ ಮುಂದಿನ ಹಂತದ ತಜ್ಞರು ಇರಬೇಕು. ಅಂತಿಮ ಹಂತದ ವಿಶೇಷ ತಜ್ಞರ ಸಂಖ್ಯೆ ಶೇಕಡಾ ಐದು ಇದ್ದರೆ ಸಾಕು. ಆದರೆ ನಮ್ಮ ದೇಶದಲ್ಲಿ ಈ ಸಂಖ್ಯೆಗಳು ಬೆಚ್ಚಿಬೀಳಿಸುವಷ್ಟು ಏರುಪೇರಾಗಿವೆ.

ನಮ್ಮ ದೇಶದಲ್ಲಿ ಕೇವಲ ಎಂ ಬಿ ಬಿ ಎಸ್ ವ್ಯಾಸಂಗ ಮಾಡಿದವರಿಗೆ ಸಾಮಾಜಿಕ ಮನ್ನಣೆ ಹೆಚ್ಚು ಇಲ್ಲದ ಕಾರಣ ಅವರು ತಜ್ಞ ವ್ಯಾಸಂಗ ಮಾಡಲು ಮುಂದಾಗುತ್ತಿದ್ದಾರೆಯೇ ವಿನಃ ಪ್ರಾಥಮಿಕ ಶ್ರೇಣಿಯಲ್ಲಿ ಕೆಲಸ ಮಾಡಲು ಸಿದ್ಧರಿಲ್ಲ. ಇದರಿಂದ ಉಂಟಾದ ನಿರ್ವಾತದ ಪರಿಣಾಮ ಪ್ರಾಥಮಿಕ ಹಂತದಲ್ಲಿ ಖೊಟ್ಟಿ ವೈದ್ಯರು ತುಂಬಿದ್ದಾರೆ. ಈ ಮೋಸಗಾರರು ವೈದ್ಯಕೀಯ ವ್ಯಾಸಂಗವನ್ನೇ ಮಾಡದ ಖೂಳರು ಆಗಿರಬಹುದು; ಇಲ್ಲವೇ ಯಾವುದೋ ಬೇರೆ ವಿಧಾನದ ವೈದ್ಯಕೀಯ ಪದ್ಧತಿಯ ವ್ಯಾಸಂಗ ಮಾಡಿ, ತಾವು ಎಂದಿಗೂ ಓದದೇ ಇರುವ ಆಧುನಿಕ ವೈದ್ಯ ಪದ್ದತಿಯ ಔಷಧಗಳನ್ನು ಬೇಕಾಬಿಟ್ಟಿ ಬರೆಯುವ ಪಾಖಂಡಿಗಳಿರಬಹುದು. ಒಟ್ಟಿನಲ್ಲಿ ನಮ್ಮ ಪ್ರಾಥಮಿಕ ಶ್ರೇಣಿಯ ವೈದ್ಯಕೀಯ ಚಿಕಿತ್ಸೆ ಗಬ್ಬೆದ್ದು ಹೋಗಿದೆ. ಇದರಲ್ಲಿ ಸರ್ಕಾರದ ಪಾತ್ರ ಎಷ್ಟೋ ಸಮಾಜದ ಪಾತ್ರವೂ ಅಷ್ಟೇ ಇದೆ. ಈ ಹಳ್ಳವನ್ನು ಕೆಣಕಿ ಕಣಿವೆ ಮಾಡಲು ರಾಜಕಾರಣ, ಮಾಧ್ಯಮ, ವೈದ್ಯಕೀಯ ಉದ್ಯಮ ನಡೆಸುವ ಪಟ್ಟಭದ್ರರು ಇದ್ದಾರೆ. ಯಾರಿಗೂ ವ್ಯವಸ್ಥೆಯ ಹೀನಾಯ ಸ್ಥಿತಿಗತಿಯ ಅರಿವೂ ಇಲ್ಲ; ಪರಿಹಾರವಂತೂ ಬೇಕಾಗಿಯೇ ಇಲ್ಲ. ಇದರ ಬಗ್ಗೆ ಹೊರಡುವ ಪರಿಹಾರದ ಕೆಲವು ಕ್ಷೀಣ ಸ್ವರಗಳು ಆಳುಗರನ್ನು ತಲುಪುವುದೇ ಇಲ್ಲ. ಇದು ನಮ್ಮ ವ್ಯವಸ್ಥೆಯ ವಿಪರ್ಯಾಸ.

ಅತ್ಯಂತ ಜರೂರಾಗಿ ನಮ್ಮ ಸರ್ಕಾರಕ್ಕೆ ಒಂದು ಆರೋಗ್ಯ ನೀತಿ ಬೇಕು. ಅಮೇರಿಕಾದಲ್ಲಿ ರೂಪಿಸುವ ನೀತಿಗಳ ಕಾಪಿ-ಪೇಸ್ಟ್ ಆಗುವ ಪರಿಸ್ಥಿತಿಯಲ್ಲಿ ನಮ್ಮ ದೇಶ ಇಲ್ಲ. ಅಲ್ಲಿ ಕುಣಿದಂತೆ ನಾವು ಇಲ್ಲಿ ಕುಣಿಯಲಾಗದು. ನಮಗೆ ನಮ್ಮದೇ ಆದ ಸಮಸ್ಯೆಗಳು, ವ್ಯಕ್ತಿವಿಶೇಷಗಳು, ವಿಚಿತ್ರ ಸಂದರ್ಭಗಳು, ತರಹೇವಾರಿ ರೋಗಿಗಳೂ, ಊಹಿಸಲೂ ಆಗದ ಪರಿಸ್ಥಿತಿಗಳೂ ಇದ್ದಾವೆ. ಇದಕ್ಕೆ ನಮ್ಮದೇ ಆದ ನವನವೀನ ಪರಿಹಾರಗಳು ಬೇಕು. ಸರ್ಕಾರ ಎಲ್ಲಾ ಸರಕಾರೀ ಹಾಗೂ ಖಾಸಗೀ ಆರೋಗ್ಯ ಸಂಸ್ಥೆಗಳಿಗೆ ವರ್ಗೀಕೃತ ಶ್ರೇಣಿ ನೀಡಬೇಕು. ಅವುಗಳಲ್ಲಿ ಇರುವ ಅನುಕೂಲಕ್ಕೆ ತಕ್ಕಂತೆ ಅವುಗಳು ಮಾಡಬಹುದಾದ ಚಿಕಿತ್ಸೆಯನ್ನು ನಿಯಂತ್ರಿಸಬೇಕು. ಹೆರಿಗೆ ಮಾಡಿಸಲೂ ಸೌಕರ್ಯ ಇಲ್ಲದ ಆಸ್ಪತ್ರೆಯು ಶಸ್ತ್ರಚಿಕಿತ್ಸೆ ಮಾಡಲು ಅವಕಾಶ ಕೊಡಬಾರದು. ಇದಕ್ಕೆ ತಜ್ಞ ಸಮಿತಿ ಏರ್ಪಾಡಾಗಿ ಒಂದು ನಿಯಮಿತ ಕಾಲದಲ್ಲಿ ವರದಿ ನೀಡುವಂತೆ ಮಾಡಬೇಕು. ಆ ವರದಿಯನ್ನು ಸಾರ್ವಜನಿಕವಾಗಿ ವೈದ್ಯರ ಮುಂದಿಟ್ಟು ಪರಿಷ್ಕರಣೆ ಮಾಡಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಬೇಕು. ಸರ್ಕಾರದಿಂದಲೇ ಆರೋಗ್ಯವಿಮೆಯನ್ನು ವಿಸ್ತರಿಸಬೇಕು. ಅದಕ್ಕೆ ಸ್ತರಗಳನ್ನು ನಿಗದಿ ಮಾಡಬೇಕು. ಆ ವಿಮಾ ಸೌಲಭ್ಯಕ್ಕೆ ಖಾಸಗಿ ಆಸ್ಪತ್ರೆಗಳನ್ನು ಸೇರಿಸಬೇಕು. ಆರೋಗ್ಯ ನಿರ್ವಹಣೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವಂತೆ ಸ್ವಾಯತ್ತ ಸಮಿತಿಗಳ ಏರ್ಪಾಡು ಆಗಬೇಕು. ಇದನ್ನೆಲ್ಲಾ ಬೇರುಮಟ್ಟದಿಂದ ಪರಿಹರಿಸದೇ ಆಸ್ಪತ್ರೆಗಳನ್ನು ನಿಯಂತ್ರಣದಲ್ಲಿ ಇಡುವ, ವೈದ್ಯರ ಹೆಡೆಮುರಿ ಕಟ್ಟುವ ಕಾನೂನುಗಳನ್ನು ಸರ್ಕಾರ ಜಾರಿಗೆ ತಂದು ಪರಿಸ್ಥಿತಿಯನ್ನು ಇನ್ನೂ ಡೋಲಾಯಮಾನ ಮಾಡುವುದು ದೊಡ್ಡ ವಿಪರ್ಯಾಸ.

(9 ಜೂನ್ 2018 ರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. 
ಯುನಿಕೋಡ್ ಕೊಂಡಿ: https://www.vishwavani.news/health/)
----------------