ಶುಕ್ರವಾರ, ಜುಲೈ 20, 2018


ವೃದ್ಧಾಪ್ಯದಲ್ಲಿ ಆರೋಗ್ಯ ರಕ್ಷಣೆ – ಯಾರ ಜವಾಬ್ದಾರಿ?!
ಲೇಖಕ: ಡಾ ಕಿರಣ್ ವಿ ಎಸ್
ಅಮೇರಿಕಾದಲ್ಲಿ ಮಕ್ಕಳು ಬೆಳೆದ ನಂತರ ತಂದೆ-ತಾಯಿಯರ ಬಳಿ ಇರುವುದೇ ಇಲ್ಲ. ಅವರೇ ದುಡಿದು, ಅವರೇ ಓದುತ್ತಾ ಅವರ ಜೀವನ ಅವರೇ ಕಟ್ಟಿಕೊಳ್ಳುತ್ತಾರೆ. ಎಂದೋ ಒಂದು ಬಾರಿ ತಂದೆ-ತಾಯಿಯರ ಭೇಟಿ ಮಾಡುತ್ತಾರೆ. ನಮ್ಮಲ್ಲಿ ಮಕ್ಕಳು ಮನೆ ಬಿಟ್ಟು ಹೋದರೆ ಅವರ ಬಗ್ಗೆ ಸಮಾಜ ನಾನಾ ಮಾತುಗಳಾಡುತ್ತದೆ. ನಮ್ಮ ಮಕ್ಕಳೂ ಸ್ವತಂತ್ರ ಆಲೋಚನೆ ಕಲಿಯಬೇಕುಹೀಗೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಾರಿ ಸಂದೇಶಗಳು ಬರುತ್ತಲೇ ಇರುತ್ತವೆ. ಒಂದೋ ಎರಡೋ ತಿಂಗಳು ಅಮೇರಿಕಾ ಪ್ರವಾಸ ಮಾಡಿ ಬಂದ ಜನರ ಬಾಯಲ್ಲಿ ಕೂಡ ಈ ಮಾತುಗಳು ಸರ್ವೇ ಸಾಮಾನ್ಯ!
ಈ ಮಾತುಗಳಲ್ಲಿ ಸತ್ಯದ ಅಂಶವೇನೋ ಇದೆ. ಆದರೆ ವಸ್ತುಸ್ಥಿತಿಯ ಸರಿಯಾದ ಅರಿವು ಇಲ್ಲದ ಜನ ನಿರ್ಣಾಯಕವಾಗಿ ಮಾತನಾಡುವುದು ತಮಾಷೆ ಅನಿಸುತ್ತದೆ. ಬಹಳಷ್ಟು ಜನರಿಗೆ ವಿಷಯದ ಗಹನತೆಯನ್ನಾಗಲೀ, ಎರಡೂ ದೇಶಗಳ ನಡುವಿನ ವ್ಯವಸ್ಥೆಯ ವ್ಯತ್ಯಾಸವನ್ನಾಗಲೀ ಅರ್ಥ ಮಾಡಿಸುವುದು ಬಹಳ ತ್ರಾಸದ ವಿಷಯ.

ಆರೋಗ್ಯದ ಅವಶ್ಯಕತೆಯ ಬಗ್ಗೆ ಭಾರತೀಯರು ತೀರಾ ಅನಾಸಕ್ತರು! ನಡುವಯಸ್ಸಿನಲ್ಲಿ ಆರೋಗ್ಯ ರಕ್ಷಣೆಯ ಬಗ್ಗೆ ಏನಾದರೂ ಹೇಳಿದರೆ “ತೊಂದರೆ ಬಂದಾಗ ನೋಡಿಕೊಳ್ಳೋಣ” ಎಂಬ ಉಡಾಫೆಯ ಮನೋಭಾವ ವೃದ್ಧಾಪ್ಯದಲ್ಲಿ ಬಹಳ ಸಂಕಷ್ಟಗಳನ್ನು ಒಡ್ಡುತ್ತದೆ. “ಆರೋಗ್ಯವೇ ಮಹಾಭಾಗ್ಯ” ಎಂಬ ಅಣಿಮುತ್ತುಗಳನ್ನು ಉದುರಿಸುವ ಬಹಳಷ್ಟು ಮಂದಿ ತಮ್ಮ ಆರೋಗ್ಯ ವಿಮೆಯ ವಿಷಯದಲ್ಲಿ ತಾತ್ಸಾರ ಹೊಂದಿರುತ್ತಾರೆ. ಆರೋಗ್ಯ ಕೆಟ್ಟಾಗ ಆಸ್ಪತ್ರೆಗಳನ್ನೂ, ವೈದ್ಯರನ್ನೂ ಬೈಯುವ ಕಾಯಕ ಹಲವರದ್ದು. ವೃದ್ಧಾಪ್ಯದಲ್ಲಿ ಆರೋಗ್ಯ ರಕ್ಷಣೆಯ ಹೊಣೆಯನ್ನು ಹೇಗೆ ನಿರ್ವಹಿಸಬೇಕು ಎಂಬುದು ಎಲ್ಲರೂ ತಿಳಿದಿರಬೇಕಾದ ವಿಷಯ.

ಇದಕ್ಕೆ ಮುನ್ನ ವೃದ್ಧರ ಆರೋಗ್ಯದ ವಿಷಯದಲ್ಲಿ ಸರ್ಕಾರ ಏನು ಮಾಡುತ್ತಿದೆ ಎಂಬುದು ಮುಖ್ಯ. ವಿಪರ್ಯಾಸವೆಂದರೆ, ಈ ವಿಷಯದಲ್ಲಿ ಜನಸಾಮಾನ್ಯರಿಗೆ ನಿರಾಸೆಯೇ ಸರಿ! “ಅತ್ಯಂತ ಅಧಿಕ ಸಂಖ್ಯೆಯ ಯುವ ಜನತೆ ಇರುವ ದೇಶ ನಮ್ಮದು” ಎಂದು ಕೊಚ್ಚಿಕೊಳ್ಳುವ ಸರ್ಕಾರ, ಇನ್ನು ಕೆಲವೇ ದಶಕಗಳಲ್ಲಿ ಇದು “ಅತ್ಯಂತ ಅಧಿಕ ಸಂಖ್ಯೆಯ ವೃದ್ಧರು ಇರುವ ದೇಶ ಇದು” ಎಂಬ ಸ್ಥಿತಿಗೆ ಜಾರುತ್ತದೆ ಎನ್ನುವ ವಾಸ್ತವದ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ. ಪ್ರಜೆಗಳ ಆರೋಗ್ಯದ ವಿಷಯವಾಗಿ ಅತ್ಯಂತ ಎಚ್ಚರ ವಹಿಸುವ ಹಲವಾರು ಮುಂದುವರೆದ ದೇಶಗಳಲ್ಲಿ ಕೂಡ ವೃದ್ಧರ ಆರೋಗ್ಯ ರಕ್ಷಣೆಯ ಸಮಸ್ಯೆ ಈಗಾಗಲೇ ತಲೆ ಎತ್ತಿದೆ. ಅದನ್ನು ನಿರ್ವಹಿಸಲಾರದೇ ಅಲ್ಲಿನ ಸರ್ಕಾರಗಳು ಪರಿಹಾರೋಪಾಯಗಳ ಕುರಿತು ಚಿಂತಿಸುತ್ತಿವೆ. ಆದರೆ ನಮ್ಮ ಸರ್ಕಾರಗಳು ಅದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ. ಏನು ತೊಂದರೆ ಆದರೂ ಖಾಸಗೀ ಆಸ್ಪತ್ರೆಗಳನ್ನೂ, ವೈದ್ಯರನ್ನೂ ಹೊಣೆ ಮಾಡಿ ಪ್ರಜೆಗಳನ್ನು ರೊಚ್ಚಿಗೆಬ್ಬಿಸಿ ಪರಿಸ್ಥಿತಿ ಉಲ್ಬಣವಾಗಲು ನೆರವು ನೀಡುತ್ತವೆ. 

ನಮ್ಮ ದೇಶದ ಪ್ರಜೆಗಳು ವೈದ್ಯಕೀಯ ವಿಮೆಯ ಮೇಲೆ ಕೂಡ ಅತ್ಯಧಿಕ ಸ್ತರದ ತೆರಿಗೆ ತೆರುವ ನತದೃಷ್ಟರು! “ಆರೋಗ್ಯ ರಕ್ಷಣೆ ಪ್ರಜೆಗಳ ಹಕ್ಕು; ಸರ್ಕಾರಗಳ ಕರ್ತವ್ಯ” ಎಂಬುದು ನಮ್ಮ ದೇಶಕ್ಕೆ ಅನ್ವಯವಾಗುವುದಿಲ್ಲ! ಹೋಗಲಿ; ಪ್ರಜೆಗಳು ವಿಮಾ ಸಂಸ್ಥೆಗಳ ಆರೋಗ್ಯ ವಿಮೆಯ ಮೊರೆ ಹೋದರೆ ಅದಕ್ಕೆ ಬೆನ್ನು ಮುರಿಯುವಷ್ಟು ವಾರ್ಷಿಕ ವೆಚ್ಚ, ಅದರ ಮೇಲೆ ಬರೆ ಹಾಕಿದಂತೆ ಶೇಕಡಾ 18ರ ತೆರಿಗೆ! ಇದರ ಮೇಲೆ “ಇಂಥಿಂಥಾ ಖಾಯಿಲೆಗಳಿಗೆ ವಿಮೆ ಇಲ್ಲ” ಎನ್ನುವ ಷರತ್ತು. ಅಲ್ಲದೇ ವೃದ್ಧರಿಗೆ “ಇಂತಿಷ್ಟು ವರ್ಷ ವಯಸ್ಸಾದ ಮೇಲೆ ವಿಮೆ ಸೌಲಭ್ಯ ಇಲ್ಲ” ಎನ್ನುವ ನಿಯಮ! ಆಸ್ಪತ್ರೆಗೆ ಮಾಡಿದ ಖರ್ಚನ್ನು ವಿಮಾ ಸಂಸ್ಥೆಯಿಂದ ಪಡೆದುಕೊಳ್ಳುವುದು ಕೂಡ ಸುಲಭದ ಮಾತೇನೂ ಅಲ್ಲ. ಆದರೆ ಬಡಪಾಯಿ ಪ್ರಜೆಗಳಿಗೆ ಬೇರೆ ಪರ್ಯಾಯವೇ ಇಲ್ಲ.

ಇಂತಹ ಪರಿಸ್ಥಿತಿಯಲ್ಲಿ ಯೋಜನಾಬದ್ಧವಾಗಿ ಆಲೋಚಿಸಿ ವ್ಯವಸ್ಥಿತವಾಗಿ ವೃದ್ಧಾಪ್ಯದ ಆರೋಗ್ಯ ರಕ್ಷಣೆಯನ್ನು ಪ್ರಜೆಗಳು ರೂಢಿಸಿಕೊಳ್ಳಲೇಬೇಕು. ಸರ್ಕಾರವನ್ನು ನಂಬಿದರೆ ಪ್ರಯೋಜನವಿಲ್ಲ. “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ” ಎಂಬ ಆಲೋಚನೆಯೇ ಸರಿ! ಇದರ ಕೆಲವು ಮಾರ್ಗೋಪಾಯಗಳನ್ನು ಆಲೋಚಿಸಬಹುದು.

೧. ನಡುವಯಸ್ಸಿನಿಂದಲೇ ಆರೋಗ್ಯ ರಕ್ಷಣೆಯ ಕಡೆ ಗಮನ ಕೊಡಬೇಕು. ನಿಯಮಿತ ವ್ಯಾಯಾಮ, ಕ್ಲುಪ್ತ ಸಮಯಕ್ಕೆ ಊಟ, ಸಮತೋಲಿತ ಆಹಾರ ಇವುಗಳನ್ನು ಪದ್ದತಿಯಂತೆ ಅನುಸರಿಸಬೇಕು. ಒಬ್ಬಿಬ್ಬರು ಒಳ್ಳೆಯ ಕುಟುಂಬ ವೈದ್ಯರನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕು. ಇಡೀ ಕುಟುಂಬದ ಆರೋಗ್ಯ ನಿರ್ವಹಣೆಯನ್ನು ಅವರ ಹೊಣೆಗಾರಿಕೆಗೆ ಬಿಡಬೇಕು. ಇಂತಹ ವೈದ್ಯರನ್ನು ಸಂಪರ್ಕಿಸಿ ತಮ್ಮ ಕುಟುಂಬದಲ್ಲಿ ಪ್ರಚಲಿತವಿರುವ ಆರೋಗ್ಯ ಸಮಸ್ಯೆಗಳನ್ನು ಅವರಲ್ಲಿ ಚರ್ಚಿಸಿ ಅವುಗಳನ್ನು ನಿಯಂತ್ರಿಸುವ ಯಾ ಬಾರದಂತೆ ತಡೆಯುವ ಮಾರ್ಗಗಳ ಬಗ್ಗೆ ಮಾಹಿತಿ ಪಡೆಯಬೇಕು. ವಾರ್ಷಿಕವಾಗಿ ವೈದ್ಯರ ಸಲಹೆ ಪಡೆದು ಅವಶ್ಯಕ ಎನಿಸಿದ ಕೆಲವೇ ಪರೀಕ್ಷೆಗಳನ್ನು ಮಾತ್ರ ಮಾಡಿಸಬೇಕು. ಕಾರ್ಪೋರೆಟ್ ಆಸ್ಪತ್ರೆಗಳ “ಮಾಸ್ಟರ್ ಚೆಕಪ್” ಎಂಬ ಜಾಹೀರಾತುಗಳಿಗೆ ಬಲಿ ಬೀಳುವ ಅವಶ್ಯಕತೆ ಇಲ್ಲ! ತೀರಾ ಅಗತ್ಯ ಬಿದ್ದಾಗ ಮಾತ್ರ ತಮ್ಮ ಕುಟುಂಬ ವೈದ್ಯರು ಸೂಚಿಸುವ ತಜ್ಞ ವೈದ್ಯರ ಸಲಹೆ ಪಡೆದರೆ ಸಾಕು. 

೨. ವಿಮಾ ತಜ್ಞರ ಸಲಹೆ ಪಡೆದು ಒಂದು ಒಳ್ಳೆಯ ಆರೋಗ್ಯ ವಿಮೆಯನ್ನು ಇಡೀ ಕುಟುಂಬಕ್ಕೆ ಅನ್ವಯವಾಗುವಂತೆ ಪಡೆಯಬೇಕು. ವಯಸ್ಸಿನ, ಆರೋಗ್ಯ ಪರಿಸ್ಥಿತಿಯ ಅನುಗುಣವಾಗಿ ಆ ವಿಮೆಯ ಮೊತ್ತವನ್ನು ಹೆಚ್ಚಿಸುತ್ತಾ ಹೋಗಬೇಕು. ಸಾಮಾನ್ಯವಾಗಿ ಕೆಲವು ವರ್ಷಗಳ ಕಾಲ ಸತತವಾಗಿ ವಿಮೆ ಪಡೆದರೆ ಸರಿಸುಮಾರು ಎಲ್ಲಾ ಕಾಯಿಲೆಗಳೂ ವಿಮೆಯ ಅಡಿಯಲ್ಲಿ ಬರುತ್ತವೆ. ಕಾಯಿಲೆ ಬರುವ ಮುನ್ನವೇ ಈ ವಿಮೆಯ ರಕ್ಷಣೆ ಪಡೆಯುವುದೇ ಸೂಕ್ತ. ಒಮ್ಮೆ ಕಾಯಿಲೆ ಆವರಿಸಿದರೆ ಆನಂತರ ಪಡೆಯುವ ವಿಮೆ ಅನೂರ್ಜಿತವಾಗಬಹುದು. ವಿಮೆಯ ಮೊತ್ತವನ್ನು ತಮ್ಮ ವೈದ್ಯರ ಬಳಿ ಚರ್ಚಿಸಬಹುದು.

೩. ಕಾಯಿಲೆ ಬಾರದ ಮನುಷ್ಯರೇ ಇಲ್ಲ. ವೃದ್ಧಾಪ್ಯದ ಕೆಲವು ಕಾಯಿಲೆಗಳು ಅನುವಂಶೀಯವಾಗಿ ಬಂದರೆ ಇನ್ನು ಕೆಲವು ಪರಿಸ್ಥಿತಿಯ ಪ್ರಭಾವದಿಂದ ಬರುತ್ತವೆ. ಹೀಗೆ ಬಂದ ಕಾಯಿಲೆಗಳಿಂದ ದಿಕ್ಕೆಡಬಾರದು. ಕಾಯಿಲೆಗಳ ನಿಯಂತ್ರಣಕ್ಕೆ ಈಗ ಬಹಳ ಉತ್ತಮ ಮಾರ್ಗಗಳಿವೆ. ವೈದ್ಯರ ಸಲಹೆ ಪಡೆದು ಈ ಮಾರ್ಗಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಕೆಲವೇ ಕೆಲವು ಕಾಯಿಲೆಗಳನ್ನು ಹೊರತುಪಡಿಸಿ ಎಲ್ಲಾ ಕಾಯಿಲೆಗಳ ನಿಯಂತ್ರಣವೂ ಸಾಧ್ಯ. ಕಾಯಿಲೆಯ ಜೊತೆ ಸುಖವಾಗಿ ಬದುಕಿದ ಜನರ ಸಾವಿರಾರು ಉದಾಹರಣೆಗಳು ಸಿಗುತ್ತಲೇ ಇರುತ್ತವೆ.

೪. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಒಂದು ಸಮಾನ ಅಭಿರುಚಿಯ ಗೆಳೆಯರ ಬಳಗ ಇರಬೇಕು. ಯಾವುದಾದರೂ ಒಂದು ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮನೆಮಂದಿಯ ಜೊತೆ ಆಗಾಗ ಕಾಲಕಳೆಯುವುದು ಕೂಡ ಮಾನಸಿಕ ಆರೋಗ್ಯ ಉತ್ತಮಗೊಳ್ಳುವ ವಿಧಾನ. ಇದರೊಂದಿಗೆ ಸಾಕಷ್ಟು ನಿದ್ರೆ, ನಶೆಯಿಂದ ದೂರ ಉಳಿಯುವಿಕೆ ಕೂಡ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

೫. ಬದಲಾವಣೆ ಜಗದ ನಿಯಮ. ಬದಲಾಗುವ ಜೀವನಶೈಲಿ, ವಸ್ತುಸ್ಥಿತಿಗೆ ಹೊಂದಿಕೊಳ್ಳಲೇ ಬೇಕು. ವೃದ್ಧಾಪ್ಯಕ್ಕೆ ಸರಿಹೊಂದುವ ಹಣಕಾಸು ವ್ಯವಸ್ಥೆಯನ್ನು ಹಲವಾರು ವರ್ಷಗಳ ನಿಯಮಿತ ಉಳಿತಾಯದಿಂದ ಮಾಡಿಕೊಳ್ಳಬೇಕು. ಇದಕ್ಕೆ ಆರ್ಥಿಕ ತಜ್ಞರ ಸಲಹೆ ಪಡೆಯಬಹುದು. ವೃದ್ಧಾಪ್ಯದಲ್ಲಿ ಒಳ್ಳೆಯ ಆರ್ಥಿಕ ಬೆಂಬಲ ಇದ್ದರೆ ಹಲವಾರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಯಾರ ಮೇಲೂ ಆರ್ಥಿಕ ಅವಲಂಬನೆ ಇಲ್ಲದೆ ಬದುಕುವ ವಿಧಾನವೇ ಅತ್ಯಂತ ಸೂಕ್ತ.

ಈ ವಿಷಯವಾಗಿ ಸರ್ಕಾರ ಏನು ಮಾಡಬೇಕು? ನಾವು ಆಶಿಸಬಹುದೇ ವಿನಃ ನಂಬುವಂತಿಲ್ಲ! ಆದರೂ ಪರಿಗಣನೆಗೆ ಈ ಸಲಹೆಗಳಿವೆ.

೧. ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ತಜ್ಞ ವೈದ್ಯ ವ್ಯಾಸಂಗವನ್ನು ಸರ್ಕಾರ ಪ್ರೋತ್ಸಾಹಿಸಬೇಕು. ಇಂತಹ ತಜ್ಞರಿಗೆ ನಗರಗಳ, ಜಿಲ್ಲೆಗಳ ಮುಖ್ಯ ಆಸ್ಪತ್ರೆಗಳಲ್ಲಿ ವಿಭಾಗಗಳನ್ನು ಸೃಜಿಸಬೇಕು. ಈ ವ್ಯವಸ್ಥೆ ಸದ್ಯಕ್ಕೆ ಸರಕಾರೀ ಆಸ್ಪತ್ರೆಗಳಲ್ಲಿ ಇಲ್ಲ.

೨. ವೃದ್ಧರಿಗೆ ಸಹಾಯವಾಗುವಂತೆ ಆಸ್ಪತ್ರೆಗಳ ವಿನ್ಯಾಸವನ್ನು ಬದಲಿಸಬೇಕು. ಸಣ್ಣ ಎತ್ತರದ ಅಗಲ ಮೆಟ್ಟಿಲುಗಳು, ಜಾರದಂತಹ ನೆಲಹಾಸು, ಸಣ್ಣ ಕೋನದ ಇಳಿಜಾರು, ಲಿಫ್ಟ್ ವ್ಯವಸ್ಥೆ, ನೆಲಮಹಡಿಯಲ್ಲೇ ವೃದ್ಧರ ಎಲ್ಲಾ ಆರೋಗ್ಯ ವಿಭಾಗಗಳು ಇರಬೇಕು.

೩. ವೃದ್ಧರಿಗೆ ಆರೋಗ್ಯ ವಿಮೆಯ ಸೌಲಭ್ಯವನ್ನು ವಿಸ್ತರಿಸಬೇಕು. ತಮ್ಮ ಜೀವನದುದ್ದಕ್ಕೂ ಈ ವೃದ್ಧರು ಸರ್ಕಾರಕ್ಕೆ ನಾನಾ ತೆರಿಗೆಗಳನ್ನು ಕಟ್ಟಿದ್ದಾರೆ ಎಂಬ ಋಣಭಾವನೆ ಸರ್ಕಾರಕ್ಕೆ ಇರಬೇಕು. ಇದಕ್ಕೆ ಪ್ರತಿಯಾಗಿ ಕನಿಷ್ಠ ವೃದ್ಧರ ಆರೋಗ್ಯವನ್ನಾದರೂ ಸರ್ಕಾರ ಕಾಯಬೇಕು.

೪. ಮಕ್ಕಳ ಸಹಕಾರ ಇಲ್ಲದ ವೃದ್ಧರ ಆರೋಗ್ಯ ಸಂರಕ್ಷಣೆಗೆ ಅಲ್ಲಲ್ಲಿ ಪ್ರಾಥಮಿಕ ಆರೋಗ್ಯ ಘಟಕಗಳ ಮೂಲಕ ವೃದ್ಧರ ಮನೆಬಾಗಿಲಿಗೆ ದಾಯಿಯರನ್ನೋ, ಆರೋಗ್ಯ ಸಹಾಯಕರನ್ನೋ ಕಳಿಸುವ ವ್ಯವಸ್ಥೆ ಮಾಡಬೇಕು.

೫. ವೃದ್ಧರಿಗೆ ತೀರಾ ಅವಶ್ಯಕವಾದ ಔಷಧಗಳನ್ನು ರಿಯಾಯತಿ ದರದಲ್ಲಿ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು.

೬. ನಡುವಯಸ್ಸಿನವರಿಗೆ ವೃದ್ಧಾಪ್ಯದ ಆರೋಗ್ಯ ರಕ್ಷಣೆಯ ವಿಷಯವಾಗಿ ಜಾಗೃತಿ ಮೂಡಿಸಿ, ಅದಕ್ಕೆ ಸರ್ಕಾರದ ಕಡೆಯಿಂದ ವಿಮೆಯ ಸೌಲಭ್ಯ ಒದಗಿಸಬೇಕು. ಸರ್ಕಾರಗಳು ಬದಲಾದಂತೆ ಈ ಸೌಲಭ್ಯಗಳು ಬದಲಾಗದಂತೆ ಸ್ವಾಯತ್ತ ಸಂಸ್ಥೆಯ ಅಧೀನದಲ್ಲಿ ಈ ಸೌಲಭ್ಯವನ್ನು ಇಟ್ಟು ಅದರ ಕಾರ್ಯ ಕೆಡದಂತೆ ಎಚ್ಚರ ವಹಿಸಬೇಕು. 

ವೃದ್ಧಾಪ್ಯ ಜೀವನದ ಅನಿವಾರ್ಯತೆ. ಅದನ್ನು ಸಹನೀಯವಾಗಿಸಿ ಆನಂದಿಸುವುದು ಬದುಕಿನ ಮೂಲ ಧ್ಯೇಯಗಳಲ್ಲಿ ಒಂದು. ಅದು ವ್ಯಕ್ತಿಯ ದೃಷ್ಟಿಯಿಂದಲೂ, ಸಮಷ್ಟಿಯ ದೃಷ್ಟಿಯಿಂದಲೂ ಬಹಳ ಮುಖ್ಯ.

ಭಾನುವಾರ, ಜುಲೈ 15, 2018




ಭಾರತೀಯ ವೈದ್ಯರ “ಅತ್ತ ದರಿ – ಇತ್ತ ಪುಲಿ” ಪರಿಸ್ಥಿತಿ!
ಇಂಗ್ಲೀಶ್ ಮೂಲ: ಡಾ ನೀರಜ್ ನಾಗಪಾಲ್, ಚಂಡೀಘಡ
ಕನ್ನಡ ಭಾವಾನುವಾದ: ಡಾ ಕಿರಣ್ ವಿ ಎಸ್

ಆಧುನಿಕ ವೈದ್ಯ ಪದ್ದತಿಯ (ಜನರು ತಪ್ಪಾಗಿ ಅಲೋಪತಿ ಎಂದು ಕರೆಯುವ) ವೈದ್ಯರ ವಿರುದ್ಧ ಕಳೆದೊಂದು ದಶಕದಲ್ಲಿ ವ್ಯವಸ್ಥಿತ ಮಿಥ್ಯಾರೋಪಗಳು ಬಲವಾಗಿ ಜರುಗುತ್ತಿವೆ. ಈ ಆರೋಪಗಳ ಪ್ರಸರಣದಲ್ಲಿ ಬಹಳಷ್ಟು ಬಾರಿ ಸರ್ಕಾರ ಸ್ವತಃ ಭಾಗಿಯಾಗಿದೆ. ತಾರಕ ಸ್ವರದಲ್ಲಿ ಒಂದೇ ಸಮನೆ ಮಿಥ್ಯಾರೋಪಗಳನ್ನು ಅರಚುತ್ತಿದ್ದರೆ ಒಂದಲ್ಲ ಒಂದು ದಿನ ಸಾಮಾನ್ಯ ಜನರೂ ಅದನ್ನು ನಂಬುವಂತೆ ಆಗುತ್ತದೆ. ಮಿಥ್ಯೆ ಮತ್ತು ವಾಸ್ತವಗಳ ನಡುವಿನ ಅಂತರ ತಿಳಿಯದ ಜನರಿಗೆ ಇಂತಹ ಮಾತುಗಳು ಗೊಂದಲ ಮೂಡಿಸುತ್ತಿವೆ. ಪರಿಣಾಮವಾಗಿ ವೈದ್ಯ ಜಗತ್ತಿನ ಬಗ್ಗೆ ಜನತೆಯಲ್ಲಿ ಋಣಾತ್ಮಕ ಅಭಿಪ್ರಾಯಗಳು ಮನೆಮಾಡುತ್ತಿವೆ. ಮಗಳ ಮದುವೆಗೆ ಹಣ ಕೂಡಿಡಬೇಕು ಎಂಬ ಹಳೆಯ ಸಿದ್ಧಾಂತಕ್ಕೆ ಜೋತು ಬಿದ್ದ ನಮ್ಮ ಜನಕ್ಕೆ ಅದಕ್ಕಿಂತಲೂ ವೃದ್ಧಾಪ್ಯದ ಅವಶ್ಯಕತೆಗಳಿಗೆ ಉಳಿತಾಯ ಮಾಡಬೇಕು ಎಂಬ ತಾರ್ಕಿಕ ಸತ್ಯವನ್ನು ಅರ್ಥ ಮಾಡಿಸುವುದು ಕಷ್ಟ. ಪರಿಣಾಮವಾಗಿ, ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಗಳು ಕಾಡಿದಾಗ ಸರಕಾರೀ ಆಸ್ಪತ್ರೆಗಳಿಗೆ ಹೋಗಲೊಲ್ಲರು; ಖಾಸಗೀ ಆಸ್ಪತ್ರೆಗಳ ವೆಚ್ಚ ಭರಿಸಲು ಅಶಕ್ತರು. ಇದು ವೈದ್ಯರ ಮೇಲೆ ಮತ್ತಷ್ಟು ಅಸಮಾಧಾನ ಬೆಳೆಯಲು ಕಾರಣವಾಗುತ್ತದೆ. ಸರ್ಕಾರ ಭಾರತೀಯ ವೈದ್ಯ ಸಮುದಾಯದ ವಿರುದ್ಧ ಮಾಡುವ ಮಿಥ್ಯಾರೋಪಗಳ ಕಡೆಗೆ ಗಮನ ಹರಿಸಿದರೆ ಕೆಲವು ವಿಷಯಗಳು ಸ್ಪಷ್ಟವಾಗುತ್ತವೆ. 

1. ವೈದ್ಯರು ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುವುದಿಲ್ಲ – ಇದು ಬಹಳ ಪ್ರಬಲವಾಗಿ ಹರಡಿರುವ ಅಸತ್ಯ. 2012 ರ ಸರಕಾರೀ ವರದಿಗಳ ಪ್ರಕಾರ ನಮ್ಮ ದೇಶದಲ್ಲಿ ಇರುವ 28863 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಕೇವಲ 1750 ಕೇಂದ್ರಗಳಲ್ಲಿ ವೈದ್ಯರ ಅಲಭ್ಯತೆ ಇದೆ. ಏಕೆಂದರೆ ಈ ಕೇಂದ್ರಗಳಲ್ಲಿ ಖಾಲೀ ಇರುವ ಹುದ್ದೆಗಳಿಗೆ ಸರ್ಕಾರ ಯಾವುದೇ ಅರ್ಜಿಯನ್ನು ಆಹ್ವಾನಿಸಿಲ್ಲ! ಭಾರತದಲ್ಲಿ ಪ್ರತೀ ವರ್ಷ ಸುಮಾರು 67000 ವೈದ್ಯರು ತರಬೇತಿ ಹೊಂದಿ ಪ್ರಮಾಣಪತ್ರ ಪಡೆಯುತ್ತಾರೆ. ನಮ್ಮಲ್ಲಿ ವೈದ್ಯರ ಕೊರತೆ ಇಲ್ಲ. ಇರುವುದು ಸರ್ಕಾರದ ಇಚ್ಚಾಶಕ್ತಿಯ ಕೊರತೆ. 130 ಕೋಟಿ ಜನಸಂಖ್ಯೆಗೆ ಕೇವಲ 29000 ಪ್ರಾಥಮಿಕ ಆರೋಗ್ಯ ಘಟಕಗಳು ಸಾಕೇ? ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಕಳೆದ ಮೂವತ್ತು ವರ್ಷಗಳಿಂದ ಈ ಸಂಖ್ಯೆ ಗಣನೀಯವಾಗಿ ಏಕೆ ಏರಿಕೆ ಕಂಡಿಲ್ಲ? ಎಂದು ಯಾರೂ ಪ್ರಶ್ನಿಸುವುದಿಲ್ಲ. ಈ ಕೇಂದ್ರಗಳನ್ನು ಹೆಚ್ಚಿಸಿ, ಅಲ್ಲಿ ಕೆಲಸ ಮಾಡುವ ವೈದ್ಯರಿಗೆ ಅಗತ್ಯ ಸೌಲಭ್ಯ ಮತ್ತು ಸ್ವಾಯತ್ತತೆಯನ್ನ್ನು ಕಲ್ಪಿಸಿದರೆ ಪರಿಸ್ಥಿತಿ ಬಹಳಷ್ಟು ಸುಧಾರಿಸುತ್ತದೆ. ಇಲ್ಲಿ ಏನಾದರೂ ಮಾಡಬೇಕಾದ್ದು ಸರ್ವಶಕ್ತ ಸರ್ಕಾರವೇ ಹೊರತು ಯಾವುದೇ ಅಧಿಕಾರವಿಲ್ಲದ ವೈದ್ಯರಲ್ಲ.

೨. ಸರ್ಕಾರ ವೈದ್ಯರ ತರಬೇತಿಯ ಮೇಲೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತದೆ – ಪ್ರಾಯಶಃ ಭಾರತ ದೇಶ ಕಂಡ ಅತೀ ದೊಡ್ಡ ಸುಳ್ಳುಗಳಲ್ಲಿ ಇದೂ ಒಂದು! ನಮ್ಮ ದೇಶದ ಅತೀ ದೊಡ್ಡ ಸರಕಾರೀ ವೈದ್ಯಕೀಯ ಸಂಸ್ಥೆಯಾದ ಚಂಡೀಘಡದ ಸ್ನಾತಕೋತ್ತರ ವೈದ್ಯಕೀಯ ಮಹಾವಿದ್ಯಾಲಯದ ಉದಾಹರಣೆ ನೀಡಬಹುದು. ಈ ಸಂಸ್ಥೆಗೆ ಪ್ರತೀವರ್ಷ ಸರ್ಕಾರ 1200 ಕೋಟಿ ರೂಪಾಯಿ ಅನುದಾನ ನೀಡುತ್ತದೆ. ಇಲ್ಲಿ ಪ್ರತೀವರ್ಷ 25 ಲಕ್ಷ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಅಂದರೆ ಅತ್ಯಂತ ಕಠಿಣ ಕಾಯಿಲೆಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ಪಡೆಯುವ ಪ್ರತೀ ರೋಗಿಯ ಚಿಕಿತ್ಸೆಗೆ ಸರಾಸರಿ ರೂ 4800/- ವ್ಯಯವಾಗುತ್ತದೆ. ಈ ಮೊತ್ತವೇ ತೀರಾ ನಗಣ್ಯ! ಇನ್ನು ವೈದ್ಯರ ತರಬೇತಿಗೆ ಸರ್ಕಾರ ಯಾವ ಹಣ ಖರ್ಚು ಮಾಡಿದೆ? ಇಲ್ಲಿ ತರಬೇತಿ ಪಡೆಯುವ ವೈದ್ಯರನ್ನು ಜೀತದಾಳಿನಂತೆ ವಾರಕ್ಕೆ ಕನಿಷ್ಠ 90 ಗಂಟೆಗಳ ಕಾಲ ಕೆಲಸ ಮಾಡಿಸಲಾಗುತ್ತದೆ. ಆ ವೈದ್ಯರು ಪಡೆಯುವ ಅಲ್ಪ ಶಿಷ್ಯವೇತನಕ್ಕೆ ಇಷ್ಟು ಕೆಲಸವನ್ನು ಪ್ರಪಂಚದ ಯಾವ ನಾಗರಿಕ ಸಮಾಜವೂ ಮಾಡಿಸುವುದಿಲ್ಲ. ಒಂದು ಲೆಕ್ಕದಲ್ಲಿ ಈ ವೈದ್ಯರೇ ತಾವು ಪಡೆಯುವ ಸಂಬಳಕ್ಕಿಂತ ಅಧಿಕವಾಗಿ ದುಡಿದು ಸರ್ಕಾರಕ್ಕೆ ಕೋಟಿಗಳಷ್ಟು ಹಣ ಮಿಗಿಸುತ್ತಾರೆ! ದೇಶದ ಯಾವುದೇ ಸರಕಾರೀ ಮಹಾವಿದ್ಯಾಲಯವನ್ನು ಪರಿಗಣಿಸಿದರೂ ಇದೇ ಮಾತು ಸತ್ಯವಾಗುತ್ತದೆ. ಇದನ್ನು ಬೇರೆ ಪದವಿಗಳಿಗೆ ಹೋಲಿಸಿ ನೋಡಬಹುದು. ಪ್ರತಿಯೊಂದು ಐ ಐ ಟಿ ಯಾ ಐ ಐ ಎಂ ಸಂಸ್ಥೆಗಳಿಗೆ ಸರ್ಕಾರ ಸುಮಾರು 400 ಕೋಟಿ ರೂಪಾಯಿ ವಾರ್ಷಿಕ ಅನುದಾನ ನೀಡುತ್ತದೆ. ಆದರೆ ಅಲ್ಲಿಂದ ಸರ್ಕಾರಕ್ಕೆ ಬರುವ ವರಮಾನ ಶೂನ್ಯ! ಈ ಸಂಸ್ಥೆಗಳಲ್ಲಿ ಸರ್ಕಾರದ ಅನುದಾನದಿಂದ ಪದವಿ ಪಡೆದ ಸ್ನಾತಕರಲ್ಲಿ ಶೇಕಡಾ 90 ಜನ ವಿದೇಶಗಳಿಗೆ ಹಾರುತ್ತಾರೆ. ಆದರೆ ಕೆಟ್ಟ ಹೆಸರು ದೇಶದಲ್ಲೇ ಉಳಿದು ಕೆಲಸ ಮಾಡುವ ವೈದ್ಯರಿಗೆ! ಇದು ನಮ್ಮ ದೇಶದ ಸರಕಾರೀ ನೀತಿ! 

೩. ವೈದ್ಯರು ದುಬಾರೀ ಬೆಲೆಯ ಔಷಧಗಳನ್ನು ಬರೆದು ಕಮಿಷನ್ ಹೊಡೆಯುತ್ತಾರೆ – ಭಾರತದ ದೊಡ್ಡ ಉದ್ಯಮಗಳಾದ ಬಟ್ಟೆ ಮತ್ತು ಸೌಂದರ್ಯ ಸಾಧನಗಳ ಸಂಸ್ಥೆಗಳ ಮೇಲೆ ಸರ್ಕಾರದ ಯಾವ ನಿಯಂತ್ರಣವೂ ಇಲ್ಲ. ಅಂದರೆ ಯಾವುದೇ ಅಂಗಿಯನ್ನಾಗಲೀ, ಮುಖಕ್ಕೆ ಹಾಕುವ ಕ್ರೀಮ್ ಆಗಲೀ, ಅದನ್ನು ಯಾವುದೇ ಬೆಲೆಗೆ ಮಾರಲು ಅವರು ಸ್ವತಂತ್ರರು. ಆದರೆ ಔಷಧೋದ್ಯಮ ಹಾಗಲ್ಲ. ಔಷಧಗಳ ತಯಾರಿಕೆ ಹಾಗೂ ಬೆಲೆ ನಿಯಂತ್ರಣ ಸಂಪೂರ್ಣವಾಗಿ ಸರ್ಕಾರದ ಹತೋಟಿಯಲ್ಲಿದೆ. ಯಾವುದೋ ಒಂದು ಕಂಪೆನಿ ತನ್ನ ಔಷಧವನ್ನು ಹೆಚ್ಚು ಬೆಲೆಗೆ ಮಾರುತ್ತದೆ ಎಂದರೆ ಅದು ಸರ್ಕಾರದ ಸಂಪೂರ್ಣ ಅನುಮತಿಯ ನಂತರ ಮಾತ್ರ ಸಾಧ್ಯ. ಒಂದೇ ಔಷಧಕ್ಕೆ ಬೇರೆ ಬೇರೆ ಕಂಪೆನಿಗಳಿಗೆ ಬೇರೆ ಬೇರೆ ಬೆಲೆಗಳನ್ನು ನಿಗದಿ ಪಡಿಸಲು ಅನುಮತಿ ನೀಡುವ ಸರ್ಕಾರ ಕಡೆಗೆ ಔಷಧಗಳ ಬೆಲೆಯ ಬಗ್ಗೆ ದೂಷಿಸುವುದು ಮಾತ್ರ ವೈದ್ಯರನ್ನು! ಹೀಗೇಕೆ ಎಂದು ಕೇಳುವಂತಿಲ್ಲ. ವೈದ್ಯರು ತಮ್ಮ ಅನುಭವದಲ್ಲಿ ಒಳ್ಳೆಯದು ಎನಿಸಿದ ಒಂದೆರಡು ಕಂಪೆನಿಗಳ ಔಷಧಗಳನ್ನು ಮಾತ್ರ ತಿಳಿದುಕೊಂಡಿರುತ್ತಾರೆ. ಹೀಗಾಗಿ ಔಷಧದ ಬೆಲೆಗಳ ಬಗ್ಗೆ ನಿಯಂತ್ರಣ ವಹಿಸಬೇಕಾದ್ದು ಸರ್ಕಾರವೇ ಹೊರತು ವೈದ್ಯರಲ್ಲ. ಯಾವುದೇ ಕಂಪೆನಿ ತಯಾರಿಸಿದರೂ ಸರಿ; ಒಂದು ಔಷಧಕ್ಕೆ ಏಕರೂಪದ ಬೆಲೆಯನ್ನು ಸರ್ಕಾರ ನಿಗದಿ ಪಡಿಸಿದರೆ ವೈದ್ಯರನ್ನು ಹೀಗೆಳೆಯುವ ಪರಿಸ್ಥಿತಿಯೇ ಇಲ್ಲ. ಆದರೆ ಸರ್ಕಾರಕ್ಕೆ ಇದು ಬೇಕಿಲ್ಲ!

೪. ವೈದ್ಯರು ಕಿಡ್ನಿ ಕದಿಯುತ್ತಾರೆ – ಇದಂತೂ ಸಂಪೂರ್ಣ ಸಿನೀಮಯ ಮಾತು! ಕಿಡ್ನಿ ಪಿಕ್ ಪಾಕೆಟ್ ಮಾಡಿ ಎಗರಿಸುವಂತಹ ಅಂಗವಲ್ಲ. ಅಂಗ ಕಸಿ ವ್ಯವಸ್ಥೆಯಿಲ್ಲದ ಸರಕಾರೀ ಆಸ್ಪತ್ರೆ, ಸಣ್ಣ ನರ್ಸಿಂಗ್ ಹೋಂ ಗಳಲ್ಲಿ ಯಾರಿಂದಲೋ ಕಿಡ್ನಿ ತೆಗೆದು ಇನ್ಯಾರಿಗೋ ಹಾಕಲು ಸಾಧ್ಯವೇ ಇಲ್ಲ. ಅದನ್ನು ಕದ್ದು ಮುಚ್ಚಿ ಬೇರೆಡೆಗೆ ಸಾಗಿಸುವುದೂ ಸುಲಭವಾಗಿ ಆಗದ ಮಾತು. ನಮ್ಮಲ್ಲಿ ಅಂಗ-ಕಸಿಗೆ ಗಟ್ಟಿಯಾದ ಸರಕಾರೀ ನೀತಿ ಇಲ್ಲ. ಈ ಕಾರಣಕ್ಕೆ ಸುಮಾರು ಒಂದು ಲಕ್ಷ ರೋಗಿಗಳು ಕಿಡ್ನಿ ವೈಫಲ್ಯದಿಂದ ಪ್ರತೀ ವರ್ಷ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ಕೇಂದ್ರ ಸಚಿವರಿಗೆ ಈ ಕಷ್ಟಗಳು ಅನ್ವಯವಾಗುವುದಿಲ್ಲ. ಸಾಮಾನ್ಯ ರೋಗಿಗಳು ಹತ್ತು ವರ್ಷ ಹೆಣಗಿದರೂ ಸಿಗದ ಕಿಡ್ನಿ ಭಾಗ್ಯ ಸಚಿವರಿಗೆ ಒಂದು ವಾರದೊಳಗೆ ಲಭ್ಯವಾಗುತ್ತದೆ! ರೋಗಿಗಳಿಗೆ ಕಿಡ್ನಿಯ ಲಭ್ಯತೆಯನ್ನು ಅತ್ಯಂತ ತ್ರಾಸದಾಯಕ ಮಾಡಿರುವುದೇ ಸರ್ಕಾರದ ಹೆಗ್ಗಳಿಕೆ. ಈ ಕಾರಣಕ್ಕೆ ಕಿಡ್ನಿ ಹಗರಣದ ಜಾಲ ತಯಾರಾಗಿದೆ. ಯಾರೋ ಅಮಾಯಕರನ್ನು ಓಲೈಸಿ ಕಿಡ್ನಿ ಮಾರುವಂತೆ ಮಾಡುವ ದಲ್ಲಾಳಿಗಳು ಪ್ರತೀ ನಗರದಲ್ಲೂ ಸಿಗುತ್ತಾರೆ. ಅವರ ವ್ಯವಹಾರವೆಲ್ಲಾ ಕುದುರಿದ ಮೇಲೆ ವೈದ್ಯರ ಪ್ರವೇಶ ಆಗಬೇಕು. ಕಾನೂನಿನ ಪ್ರಕಾರ ವೈದ್ಯರಿಗೆ ಕಿಡ್ನಿಯ ದಾನಿ ಯಾರು ಎಂಬುದು ಅಪ್ರಸ್ತುತ. ಅವರ ಕೆಲಸ ಕಾಗದ ಪತ್ರಗಳು ಕಾನೂನುಬದ್ಧವಾಗಿ ಇವೆಯೇ ಎಂದು ಪರೀಕ್ಷಿಸಿ ಕಿಡ್ನಿ ಕಸಿ ಮಾಡುವುದು ಅಷ್ಟೇ. ಈ ಕಿಡ್ನಿ ದಾನಿ-ದಲ್ಲಾಳಿಗಳ ಮಧ್ಯೆ ಹಣಕಾಸಿನ ಸಮಸ್ಯೆ ಆದರೆ ಇಡೀ ಪ್ರಸಂಗ ಬೇರೆಯೇ ದಿಕ್ಕು ಪಡೆಯುತ್ತದೆ. ಸುಖಾಸುಮ್ಮನೆ ವೈದ್ಯರು ಈ ಹಗರಣಕ್ಕೆ ಬಲಿಯಾಗುತ್ತಾರೆ. ಒಮ್ಮೆ ಹೀಗೆ ಹೆಸರು ಕೆಡಿಸಿಕೊಂಡರೆ ಅವರ ವೃತ್ತಿಜೀವನವೇ ಕೊನೆಯಾದಂತೆ. ಇದೇ ಕಾರಣಕ್ಕೆ ಅಂಗ ಕಸಿ ಮಾಡುವ ಪರಿಣತ ವೈದ್ಯರು ದೇಶ ಬಿಟ್ಟು ಹೋಗುತ್ತಿದ್ದಾರೆ. ಈ ನಷ್ಟ ನಮ್ಮ ದೇಶಕ್ಕೆ ಮುಂಬರುವ ದಿನಗಳಲ್ಲಿ ಬಹಳ ದುಬಾರಿಯಾಗಲಿದೆ. ಸರ್ಕಾರ ಮನಸ್ಸು ಮಾಡಿದರೆ ಅಂಗ ಕಸಿ ವ್ಯವಸ್ಥೆಯನ್ನು ಸರಳಗೊಳಿಸಿ ರೋಗಿಗಳಿಗೆ ಮಹೋಪಕಾರ ಮಾಡಬಹುದು. ಈ ವ್ಯವಸ್ಥಿತ ಕಳ್ಳ ಮಾರುಕಟ್ಟೆಯನ್ನೂ ನಿರ್ನಾಮಗೊಳಿಸಬಹುದು. ಇದನ್ನು ಬಿಟ್ಟು ವೈದ್ಯರನ್ನು ವಿಲನ್ ಮಾಡಿ ಗಳಿಸುವುದೇನೋ ತಿಳಿಯದು.

ಇದೇ ರೀತಿ ಸ್ಟೆಂಟ್ ಗಳ ವಿಷಯ, ಅನಾವಶ್ಯಕ ಸಿಜೆರಿಯನ್ ಶಸ್ತ್ರಚಿಕಿತ್ಸೆಯ ವಿಷಯ, ರೋಗಿಯ ಮರಣದ ನಂತರವೂ ವೆಂಟಿಲೇಟರ್ ನಲ್ಲಿ ರೋಗಿಗಳನ್ನು ಉಳಿಸಿಕೊಳ್ಳುವ ವಿಷಯವಾಗಿ ಸಾಕಷ್ಟು ಮಿಥ್ಯಾರೋಪಗಳನ್ನು ವೈದ್ಯರು ನಿತ್ಯವೂ ಎದುರಿಸಬೇಕಾಗಿದೆ. ಸರ್ಕಾರಕ್ಕೆ ಬೇಕಾದ್ದು ಜನರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ವ್ಯವಸ್ಥೆಯೂ ಅಥವಾ ತನ್ನ ಅಸಾಮರ್ಥ್ಯಕ್ಕೆ ವೈದ್ಯರನ್ನು ಬಲಿಪಶು ಮಾಡುವುದೋ ಎನ್ನುವುದೇ ಪ್ರಶ್ನೆ. ವೈದ್ಯವೃತ್ತಿಯನ್ನು ವ್ಯವಸ್ಥಿತವಾಗಿ ಹಣಿಯುವ ತನ್ನ ಹುನ್ನಾರದ ದೂರಗಾಮಿ ಪರಿಣಾಮಗಳು ಸರ್ಕಾರದ ಅರಿವಿಗೆ ಬಂದಂತಿಲ್ಲ. ಪ್ರಜೆಗಳ ಆರೋಗ್ಯದ ವಿಷಯದಲ್ಲಿ ಸರ್ಕಾರ ಸ್ಪಷ್ಟ ನೀತಿಯನ್ನು ತುರ್ತಾಗಿ ತಂದು ಅನುಸರಿಸುವ ಅವಶ್ಯಕತೆ ಇದೆ. ಇದು ತಡವಾದಷ್ಟೂ ದೇಶದ ಆರೋಗ್ಯ ವ್ಯವಸ್ಥೆಗೆ ಮಾರಕ ಎಂಬುದನ್ನು ನಮ್ಮ ಆಳುಗರು ಅರಿಯಬೇಕು.
------------
ದಿನಾಂಕ 17/7/2018 ರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ನನ್ನ ಅನುವಾದಿತ ಲೇಖನ. ಮೂಲ ಲೇಖಕ ಡಾ ನೀರಜ್ ನಾಗಪಾಲ್. 
ಯುನಿಕೋಡ್ ಕೊಂಡಿ: https://www.vishwavani.news/the-situation-of-indian-doctors/
 ಮೂಲ ಲೇಖಕರಾದ ಡಾ ನೀರಜ್ ನಾಗಪಾಲ್ ಅವರು ಚಂಡಿಘಡದಲ್ಲಿ ಜಠರ-ಕರುಳಿನ ತಜ್ಞ ಶಸ್ತ್ರಚಿಕಿತ್ಸಕರು. ವೈದ್ಯಕೀಯ ಕಾನೂನಿನ ವಿಷಯದ ತಜ್ಞರು.

ಗುರುವಾರ, ಜೂನ್ 28, 2018




ದೇಶದ ಅಂತಿಮ ಪ್ರಜೆ ಕೂಡ ಆರೋಗ್ಯದಿಂದ ವಂಚಿತನಾಗಬಾರದು.
ಡಾ. ಕಿರಣ್ ವಿ. ಎಸ್.
ಸರ್ಕಾರೀ ವ್ಯವಸ್ಥೆ ಪ್ರದರ್ಶಿಸುವ ಉಡಾಫೆ ಮನೋಭಾವ ನಮ್ಮ ದೇಶಕ್ಕೆ ಅಂಟಿದ ಶಾಪ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ದೇಶದಲ್ಲಿ ಅತ್ಯಂತ ಕಂಗೆಟ್ಟಿರುವ ಎರಡು ಕ್ಷೇತ್ರಗಳೆಂದರೆ ಶಿಕ್ಷಣ ಮತ್ತು ಆರೋಗ್ಯ. ಯಾವುದೇ ದೇಶದ ಅಭಿವೃದ್ಧಿಗೆ ಪ್ರಾಥಮಿಕ ಅವಶ್ಯಕತೆಗಳಾದ ಈ ಎರಡೂ ಕ್ಷೇತ್ರಗಳನ್ನು ಅಭಿವೃದ್ಧಿ ಹೊಂದಿರುವ ದೇಶಗಳ ಸರ್ಕಾರಗಳು ಬಹಳ ಜತನದಿಂದ, ನಿಷ್ಠೆಯಿಂದ ಸ್ವತಃ ನಿಭಾಯಿಸುತ್ತವೆ. ಖಾಸಗಿಯವರ ಭಾಗದಾರಿಕೆ ಅಂತಹ ದೇಶಗಳಲ್ಲಿ ಬಹಳ ಕಡಿಮೆ. ಅದೇ ರೀತಿ, ಈ ಎರಡೂ ಕ್ಷೇತ್ರಗಳನ್ನು ನಿರ್ಲಕ್ಷಿಸುವ ದೇಶಗಳು ಸಂಕಷ್ಟಗಳ ಸರಮಾಲೆಯಿಂದ ಹೊರಬರಲಾರದೇ ತೊಳಲುತ್ತವೆ. ಪ್ರಸ್ತುತ ನಮ್ಮ ದೇಶದ ಪರಿಸ್ಥಿತಿಯೂ ಇದೇ.

ನೂರ ಮೂವತ್ತು ಕೋಟಿ ಜನರ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಸರ್ಕಾರದ ಪಾಲುದಾರಿಕೆ ಎಷ್ಟು ಗೊತ್ತೇ? ಹೊರರೋಗಿಗಳಲ್ಲಿ ನೂರಕ್ಕೆ ಹದಿನೆಂಟು ಮಂದಿ ಮಾತ್ರ ಸರ್ಕಾರೀ ಆಸ್ಪತ್ರೆಗೆ ಹೋಗುತ್ತಾರೆ. ಇವರಲ್ಲಿ ಬಹಳಷ್ಟು ಜನ ಅಲ್ಲಿಗೆ ಬೇರೆ ವಿಧಿ ಇಲ್ಲದೆ ಹೋಗುತ್ತಾರೆ. ಅದಕ್ಕೆ ಕಾರಣ ಬಡತನವೋ ಅಥವಾ ಖಾಸಗೀ ಆಸ್ಪತ್ರೆಗಳ ಅನುಪಸ್ಥಿತಿಯೋ ಆಗಿರುತ್ತದೆ. ಅಂದರೆ, ಎಂಭತ್ತೆರಡು ಪ್ರತಿಶತ ಹೊರರೋಗಿಗಳ ಚಿಕಿತ್ಸೆ ಖಾಸಗೀ ಆಸ್ಪತ್ರೆ ಅಥವಾ ಕ್ಲಿನಿಕ್ ಗಳಲ್ಲಿ ನಡೆಯುತ್ತದೆ. ಶೇಕಡಾ ಎಪ್ಪತ್ತಕ್ಕಿಂತ ಹೆಚ್ಚು ಮಂದಿ ಒಳರೋಗಿ ಚಿಕಿತ್ಸೆ ಪಡೆಯಲೂ ಕೂಡ ಖಾಸಗೀ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಇವರಲ್ಲಿ ಬಹಳಷ್ಟು ಜನ ಸಾಲ-ಸೋಲ ಮಾಡಿಯಾದರೂ ಖಾಸಗೀ ಆಸ್ಪತ್ರೆಗಳಿಗೆ ಹೋಗುತ್ತಾರೆ. ಆದರೆ ಕೈಗೆಟಕುವ ಖರ್ಚಿನ ಸರಕಾರೀ ಚಿಕಿತ್ಸಾಲಯಕ್ಕೆ ಮಾತ್ರ ಹೋಗಲಾರರು. ಅನೇಕ ಅಧ್ಯಯನಗಳಲ್ಲಿ ಈ ಮನೋಭಾವಕ್ಕೆ ಕಾರಣಗಳನ್ನು ಹುಡುಕಲಾಗಿವೆ. ಮುಖ್ಯವಾಗಿ ಸರ್ಕಾರೀ ಆಸ್ಪತ್ರೆಗಳ ಅವ್ಯವಸ್ಥೆ, ವಿಪರೀತ ಜನಸಂದಣಿ, ಅನುಕೂಲಗಳ ಕೊರತೆ, ಗಲೀಜು, ಅಶುಚಿತ್ವ, ಲಂಚಕೋರತನ, ಪ್ರತಿಯೊಂದು ಕೆಲಸಕ್ಕೂ ತಗಲುವ ವಿಪರೀತ ಸಮಯ, ಬೇರೆಬೇರೆ ವಿಭಾಗಗಳಲ್ಲಿ ಸಮನ್ವಯದ ಕೊರತೆ, ಸಿಬ್ಬಂದಿಯ ಅಮಾನವೀಯ ವರ್ತನೆ, ಸೌಕರ್ಯಗಳ ಅಲಭ್ಯತೆ ಹೀಗೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಸರ್ಕಾರ ಮಾತ್ರ ಇದ್ಯಾವುದನ್ನೂ ಲೆಕ್ಕಿಸದೆ ತನ್ನ ಜಡತೆಯನ್ನು ಪ್ರದರ್ಶಿಸುತ್ತಲೇ ಇರುತ್ತದೆ.

ಈಗಾಗಲೇ ಖಾಸಗಿಯವರ ಅಧೀನದಲ್ಲಿರುವ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಭವಿಷ್ಯ ಜನರ ಹಿತದೃಷ್ಟಿಯಿಂದ ಅಷ್ಟೇನೂ ಆಶಾದಾಯಕವಾಗಿಲ್ಲ. ಸರ್ಕಾರದ ದಶಕಗಳ ನಿಷ್ಕ್ರಿಯತೆ, ಆರೋಗ್ಯ ಕ್ಷೇತ್ರಕ್ಕೆ ಹಣ ನೀಡುವಲ್ಲಿ ಮಾಡಿದ ಕಂಜೂಸಿತನ, ಜನರ ಅವಶ್ಯಕತೆಗಳಿಗೆ ಸ್ಪಂದಿಸದೇ ಕೇವಲ ಇನ್ನೊಬ್ಬರನ್ನು ದೂರುವದರಲ್ಲಿಯೇ ಕಳೆದ ಕಾಲ, ವಿಪರೀತ ಅಹಂಕಾರದ ದರ್ಪದಲ್ಲಿ ವ್ಯವಹರಿಸುವ ಅಧಿಕಾರಶಾಹಿ, ಯಾವುದೇ ಮುಂದಾಲೋಚನೆ ಇಲ್ಲದೆ ಕೆಲಸ ಮಾಡುವ ಇಲಾಖೆ - ಇವೆಲ್ಲಾ ಸರ್ಕಾರೀ ಆರೋಗ್ಯ ವ್ಯವಸ್ಥೆಯನ್ನು ಸಿಕ್ಕಾಪಟ್ಟೆ ಹಾಳುಗೆಡವಿವೆ. ತಿಂಗಳುಗಳು ಅಂತಿರಲಿ; ವರ್ಷಗಳು, ದಶಕಗಳು ಕಳೆದರೂ ಜಡ್ಡು ಹಿಡಿದ ಈ ವ್ಯವಸ್ಥೆ ಸುಧಾರಿಸುವುದು ಕಷ್ಟ. ಈ ಮಧ್ಯೆ ಖಾಸಗಿಯವರ ಹಿಡಿತ ಇನ್ನೂ ಬಲವಾಗುತ್ತಾ ಹೋಗುತ್ತವೆ. ಈಗಂತೂ ಬೃಹತ್ ಹಣ ಹೂಡಿಕೆ ಮಾಡಬಲ್ಲ ಬಹುರಾಷ್ಟ್ರೀಯ ಕಂಪೆನಿಗಳು ಕೂಡ ಈ ಕ್ಷೇತ್ರಕ್ಕೆ ಇಳಿಯುತ್ತಿವೆ. ಕಾರ್ಪೊರೇಟ್ ಆಸ್ಪತ್ರೆಗಳ ಸಂಖ್ಯೆ ದಿನೇದಿನೇ ಏರುತ್ತಿದೆ. ಸರ್ಕಾರದ ನಿರ್ಲಕ್ಷ್ಯ ಒಂದೆಡೆಯಾದರೆ ಬೃಹತ್ ಖಾಸಗೀ ಸಂಸ್ಥೆಗಳ ಮಾರುಕಟ್ಟೆ ವಿಸ್ತರಣಾ ತಂತ್ರಗಾರಿಕೆ ಇನ್ನೊಂದೆಡೆ. ಒಟ್ಟಿನಲ್ಲಿ ಜನರ ಕಷ್ಟದ ಉಳಿತಾಯವೆಲ್ಲ ಇಂಗಿ ಹೋಗುವುದೇ ಭವಿಷ್ಯ!

ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡಬಹುದು? ಸರ್ಕಾರೀ ಆಸ್ಪತ್ರೆಗಳನ್ನು ಉನ್ನತ ಮಟ್ಟಕ್ಕೆ ಏರಿಸಿ ಖಾಸಗಿಯವರ ಜೊತೆ ಪೈಪೋಟಿಗೆ ಇಳಿಯುವಂತೆ ಮಾಡುವುದು ದೂರದ ಮಾತು. ಪ್ರಾಮಾಣಿಕ ಪ್ರಯತ್ನ ನಡೆದರೂ ಇದಕ್ಕೆ ವರ್ಷಗಳೇ ಬೇಕಾಗಬಹುದು. ಗೋಸುಂಬೆಗಳನ್ನೂ ಮೀರಿಸುವ ನಮ್ಮ ವ್ಯವಸ್ಥೆಯ ಪರಿಪಾಠಗಳು ಇದಕ್ಕೆ ಆಸ್ಪದ ನೀಡುವುದು ಕೂಡ ಕಷ್ಟ.

ಕೆಲವು ಪರಿಹಾರಗಳನ್ನು ಸೂಚಿಸಬಹುದು. ಮೊದಲನೆಯದು – ಈಗ ಇರುವ ವ್ಯವಸ್ಥೆಯನ್ನು ಬಲಪಡಿಸುವುದು. ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಈಗ ನೀಡುತ್ತಿರುವ ಅನುದಾನ ಶೇಕಡಾ 1 ಕ್ಕಿಂತಾ ಕಡಿಮೆ. ಇದು ಕನಿಷ್ಠ ಶೇಕಡಾ 2.5 ಕ್ಕೆ ಏರಬೇಕು. ಈ ರೀತಿ ಬರುವ ಅಧಿಕ ಹಣ ವ್ಯವಸ್ಥೆಯೊಳಗಿನ ದಗಾಕೋರರ ಪಾಲಾಗದಂತೆ ತಡೆಯಬೇಕು. ತಜ್ಞರ ಸಲಹೆ ಪಡೆದು ಈ ಹಣ ಜನರ ಒಳಿತಿಗೆ ಹೇಗೆ ಬಳಕೆ ಆಗಬಹುದೆಂದು ನಿರ್ಧರಿಸಿ, ಹಣ ವ್ಯವಹಾದ ನಿಯಂತ್ರಣವವನ್ನು ಕೇಂದ್ರೀಕರಿಸಬೇಕು. ದುಷ್ಟರ ಕೈಲಿ ಹಣ ಪೋಲಾಗದಂತೆ ತಡೆಯಬೇಕು.

ಎರಡನೆಯದು – ಖಾಸಗಿಯವರ ಮೇಲೆ ಸಮನ್ವಯವನ್ನು ಹೆಚ್ಚಿಸಬೇಕು. ಸರ್ಕಾರ ಅರ್ಥಹೀನ ಕಾಯಿದೆಗಳನ್ನು ಹೇರುತ್ತಾ ಹೋದರೆ ಖಾಸಗಿಯವರ ಜೊತೆ ಅಂತರ ಹೆಚ್ಚುತ್ತಲೇ ಹೋಗುತ್ತದೆ. ತನ್ನ ಗುರುತರ ಜವಾಬ್ದಾರಿಯನ್ನು ಖಾಸಗೀ ಆಸ್ಪತ್ರೆಗಳು, ವೈದ್ಯರು ನಿರ್ವಹಿಸುತ್ತಿದ್ದಾರೆ ಎಂಬ ಪ್ರಜ್ಞೆ ಸರ್ಕಾರಕ್ಕೆ ಇರಬೇಕು. ಅದಕ್ಕೆ ಸರ್ಕಾರ ಸ್ವಲ್ಪ ಕೃತಜ್ಞತೆಯನ್ನೂ ತೋರಬಹುದು! ಈ ನಿಟ್ಟಿನಲ್ಲಿ ಎರಡೂ ಪಕ್ಷದವರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಿಗೆ ಕೆಲಸ ಮಾಡಬೇಕು. ಖಾಸಗಿ ಆಸ್ಪತ್ರೆಯವರಿಗೆ ವಿಧಿಸುವ ಅಧಿಕ ಸುಂಕ, ಮೇಲ್ಸ್ತರದ ವ್ಯಾಪಾರೀ ದರಗಳು, ಕಟ್ಟುನಿಟ್ಟಿನ ವ್ಯಾಪಾರೀ ಕಾಯಿದೆಗಳು, ವೈದ್ಯಕೀಯ ಉಪಕರಣಗಳ ಮೇಲಿನ ಆಮದು ಸುಂಕ ಇವನ್ನು ಸರ್ಕಾರ ಸಡಿಲಗೊಳಿಸಬೇಕು. ಇದಕ್ಕೆ ಪ್ರತಿಯಾಗಿ ಹೊರರೋಗಿಗಳು, ಸಾಮಾನ್ಯ ವಾರ್ಡ್ ನ ರೋಗಿಗಳಿಗೆ ರಿಯಾಯತಿ ದರದಲ್ಲಿ ಚಿಕಿತ್ಸೆ ಮಾಡುವಂತೆ ಒಡಂಬಡಿಕೆ ಮಾಡಿಕೊಳ್ಳಬೇಕು. ಆಸ್ಪತ್ರೆಗಳ ಲಾಭಾಂಶ ತೀರಾ ಕಡಿಮೆ ಆಗದಂತೆ ಹಣಕಾಸು ತಜ್ಞರ ಸಲಹೆ ಪಡೆದು ಇದನ್ನು ನಿಭಾಯಿಸಬೇಕು. ಖಾಸಗೀ ಆಸ್ಪತ್ರೆಗಳನ್ನು ತಮ್ಮ ವೈರಿಯಂತೆ ಕಾಣದೇ, ದೇಶದ ಆರೋಗ್ಯ ನಿರ್ವಹಣೆಯಲ್ಲಿ ಸರ್ಕಾರದ ಪಾಲುದಾರನಂತೆ ಮಾನ್ಯತೆ ನೀಡಬೇಕು. ಉತ್ತಮ ಕಾರ್ಯಸಂಬಂಧದ ನಿರ್ಮಾಣ ಆಗಬೇಕು.

ಮೂರನೆಯದು – ಎಂ ಬಿ ಬಿ ಎಸ್ ವ್ಯಾಸಂಗದ ವಿಧಾನವನ್ನು ಬದಲಾಯಿಸಬೇಕು. ಸೈದ್ಧಾಂತಿಕ ವ್ಯಾಸಂಗವನ್ನು ಮಿತಿಗೊಳಿಸಿ ಪ್ರಾಯೋಗಿಕ ಅಂಶಗಳ ಕಡೆ ಹೆಚ್ಚು ಒತ್ತು ನೀಡುವ ಪಠ್ಯಕ್ರಮ ಜಾರಿಗೆ ಬರಬೇಕು. ಎಂ ಬಿ ಬಿ ಎಸ್ ಅಂತಿಮ ಪರೀಕ್ಷೆಯ ನಂತರದ ತರಬೇತಿ ಅವಧಿಯನ್ನು ಜಿಲ್ಲಾಸ್ಪತ್ರೆ ಅಥವಾ ತಾಲೂಕು ಆಸ್ಪತ್ರೆಗಳಲ್ಲಿ ಮಾಡಿಸಬೇಕು. ವಿದ್ಯಾರ್ಥಿಗಳಿಗೆ ಅಲ್ಲಿ ಕೈಯಾರೆ ಕಲಿಯಲು ಅವಕಾಶಗಳು ದೊರೆಯುತ್ತವೆ. ಅಲ್ಲದೇ ಅಂತಹ ಆಸ್ಪತ್ರೆಗಳ ಹಿರಿಯ ವೈದ್ಯರಿಗೆ ಅಗತ್ಯವಾಗಿ ಬೇಕಾದ ನುರಿತ ಸಹಾಯಕರೂ ದೊರೆತಂತಾಗುತ್ತದೆ. ಇದರ ಜೊತೆ, ವ್ಯಾಸಂಗದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸುವ ನವವೈದ್ಯರಿಗೆ ಹಣ ಸಹಾಯ ಒದಗಿಸಿ ಐದು ವರ್ಷಗಳ ಕರಾರು ಪತ್ರವನ್ನೂ ಮಾಡಬಹದು. ಆರೋಗ್ಯ ಸೇವೆಗಳು ನಗರದಿಂದ ವಿಕೇಂದ್ರಿತಗೊಂಡು ಗ್ರಾಮೀಣ ಪ್ರದೇಶಗಳನ್ನೂ ತಲುಪಬೇಕು. 

ನಾಲ್ಕನೆಯದು – ಕಾರ್ಪೊರೇಟ್ ಕಂಪೆನಿಗಳಿಗೆ ಸಾಮಾಜಿಕ ಜವಾಬ್ದಾರಿಯ ಹೆಸರಿನಲ್ಲಿ ಅವರ ಲಾಭಾಂಶದ ಶೇಕಡಾ ಎರಡನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಲು ಪ್ರೇರೆಪಿಸಲಾಗಿದೆ. ಅಂತೆಯೇ, ಇಂತಹ ಹಲವು ಕಂಪೆನಿಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವ ಜವಾಬ್ದಾರಿ ನೀಡಬೇಕು. ಒಂದು ಹೋಬಳಿ ಅಥವಾ ಸಣ್ಣ ತಾಲೂಕು ಕೇಂದ್ರದಲ್ಲಿ ಹೊರರೋಗಿ ವಿಭಾಗ ಅಥವಾ ಸಣ್ಣ ಆಸ್ಪತ್ರೆಯನ್ನು ಸ್ಥಾಪಿಸಿ ಸಂಪೂರ್ಣವಾಗಿ ಆ ಕಂಪನಿಯೇ ಉಚಿತವಾಗಿಯೋ ಇಲ್ಲವೇ ಸಾಂಕೇತಿಕವಾದ ಶುಲ್ಕಕ್ಕೋ ನಡೆಸಬೇಕು. ಇದರಲ್ಲಿ ಕೆಲಸ ಮಾಡುವ ವೈದ್ಯರಿಗೆ ಆಯಾ ಕಂಪೆನಿ ಉದ್ಯೋಗಿಗಳ ಭತ್ಯೆ ಮತ್ತು ಇತರ ಪ್ರಯೋಜನಗಳನ್ನು ನೀಡಬೇಕು. ಆಗ ಇಂತಹ ಸ್ಥಳಗಳಲ್ಲಿ ಕೆಲಸ ಮಾಡಲು ಹಲವಾರು ವೈದ್ಯರು ಮುಂದಾಗುತ್ತಾರೆ. ಹೀಗೆ ಸೌಲಭ್ಯ ವಂಚಿತ ಪ್ರದೇಶಗಳೂ ಆರೋಗ್ಯ ಕ್ಷೇತ್ರದ ವ್ಯಾಪ್ತಿಗೆ ಬರಬೇಕು.

ಐದನೆಯದು – ಸರ್ಕಾರ ಆರೋಗ್ಯ ವಿಮೆಯ ಸಂಪೂರ್ಣ ಉಸ್ತುವಾರಿ ವಹಿಸಬೇಕು. ತೀರಾ ಕಡಿಮೆ ಬೆಲೆಯಲ್ಲಿ ವಾರ್ಷಿಕ ಎರಡು ಲಕ್ಷ ರೂಪಾಯಿವರೆಗಿನ ಕುಟುಂಬ ಆರೋಗ್ಯ ವಿಮೆ ಎಲ್ಲರಿಗೂ ನೀಡುವಂತೆ ಮಾಡಬೇಕು. ನಂತರ ಪ್ರತಿಯೊಂದು ಲಕ್ಷದ ಸ್ತರಕ್ಕೂ ಈ ಬೆಲೆಯನ್ನು ಘಾತ ರೂಪದಲ್ಲಿ ಏರಿಸುತ್ತಾ ಹೋಗಬಹುದು. ದೇಶದಲ್ಲಿನ ಅರ್ಧದಷ್ಟು ಕುಟುಂಬಗಳು ಈ ವಿಮೆಯ ಅಡಿಯಲ್ಲಿ ಬಂದರೂ ಕೆಲವೇ ವರ್ಷಗಳಲ್ಲಿ ದೇಶದ ಆರೋಗ್ಯ ಕ್ಷೇತ್ರದ ನಕ್ಷೆಯೇ ಬದಲಾಗಿ ಹೋಗುತ್ತದೆ. ಸರ್ಕಾರೀ ಆಸ್ಪತ್ರೆಗಳಲ್ಲಿನ ಜನಸಂದಣಿ ಇಳಿದು ಅಲ್ಲಿನ ಸೇವೆಗಳು ಉತ್ತಮಗೊಳ್ಳುತ್ತವೆ. ಖಾಸಗೀ ವಲಯ ಇನ್ನೂ ಸ್ಪರ್ಧಾತ್ಮಕವಾಗುತ್ತದೆ. ಆದರೆ, ವಿಮೆಯ ಹಣದಲ್ಲಿ ಯಾವುದೇ ಆವ್ಯವಹಾರ ಆಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಸಂಪೂರ್ಣ ಸಹಕಾರ ಪಡೆಯಬೇಕು. ಯಾವುದೇ ಆಸ್ಪತ್ರೆ ಅವ್ಯವಹಾರದಲ್ಲಿ ಭಾಗಿಯಾಗಿರುವುದು ಧೃಡಪಟ್ಟರೆ ಕಟ್ಟುನಿಟ್ಟಾದ ಕ್ರಮ ಜರುಗಿಸಬೇಕು.

ಆರನೆಯದು – ವೈದ್ಯಕೀಯ ಕ್ಷೇತ್ರವನ್ನು ಸ್ವಾಯತ್ತಗೊಳಿಸಬೇಕು. ಸರ್ಕಾರ ಕೇವಲ ಮೇಲ್ವಿಚಾರಕನಂತೆ, ಮಾರ್ಗದರ್ಶಕನಂತೆ ಇರಬೇಕೇ ಹೊರತು ಜಿಗುಟಿನ ಯಜಮಾನನಂತೆ ಇರಬಾರದು! ಇದಕ್ಕೆ ಮುಖ್ಯವಾಗಿ ಭಾರತೀಯ ಆಡಳಿತ ಸೇವೆ, ಪೋಲೀಸ್ ಸೇವೆ ಇರುವಂತೆ ಭಾರತೀಯ ಆರೋಗ್ಯ ಸೇವೆ ಕೂಡ ಇರಬೇಕು. ಯೋಜನೆಗಳ ನಿರ್ಧಾರ, ಕಾರ್ಯಗತಗೊಳಿಸುವಿಕೆ, ಹಣಕಾಸು ನಿಯಂತ್ರಣ, ಸುಪರ್ದಿ, ಅಪರಾಧ ಪ್ರಕರಣಗಳ ವಿಚಾರಣೆ ಮತ್ತು ಶಿಕ್ಷೆ – ಇವೆಲ್ಲಾ ಈ ಸ್ವಾಯತ್ತ ಸಂಸ್ಥೆಯ ಅಧೀನದಲ್ಲಿ ಇರಬೇಕು. ಪ್ರಾಮಾಣಿಕರು ಬೆಳೆಯುವಂತಹ ಪ್ರೋತ್ಸಾಹ, ಉತ್ತೇಜನದ ವಾತಾವರಣ ಇರಬೇಕು.

ಈ ಪಟ್ಟಿಗೆ ಇನ್ನೂ ಹಲವು ಸಲಹೆಗಳನ್ನು ಸೇರಿಸಬಹುದು. ಆದರೆ ಒಂದು ಆರಂಭ ಎಲ್ಲಕ್ಕಿಂತ ಮುಖ್ಯ. ಇದಕ್ಕೆ ರಾಜಕೀಯ ಇಚ್ಚಾಶಕ್ತಿ ಬೇಕು. ನ್ಯಾಯಾಂಗ ಸ್ವಯಂಪ್ರೇರಿತವಾಗಿ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಆದೇಶ ನೀಡಬೇಕು. ದೇಶದ ಅಂತಿಮ ಪ್ರಜೆ ಕೂಡ ಆರೋಗ್ಯದಿಂದ ವಂಚಿತನಾಗಬಾರದು. 

8/ಜುಲೈ/2018 ರಂದು ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. 
ಯುನಿಕೋಡ್ ಕೊಂಡಿ: https://www.vishwavani.news/govt-duty-towards-public-health/
--------