ಶನಿವಾರ, ಅಕ್ಟೋಬರ್ 25, 2025

 


ನಮಗೆ ಅರ್ಥವಾಗದ ವಿಷಯ ಹೆಚ್ಚು ಬೈಗುಳಕ್ಕೆ ಒಳಗಾಗುತ್ತದೆ ಎನ್ನುವ ಮಾತಿದೆ. ವೈದ್ಯಕೀಯ ಕ್ಷೇತ್ರ ಇದಕ್ಕೆ ಹೊರತಲ್ಲ. ಅಸಾಧಾರಣ ಮಟ್ಟದಲ್ಲಿ ಸಂಕೀರ್ಣವಾಗಿ ಬೆಳೆದಿರುವ ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯನ್ನು ವಿವರಿಸುವುದು ಮಹಾ ಸಾಹಸದ ಸಂಗತಿ. ಸಾಮಾನ್ಯದವರು ಇದಕ್ಕೆ ಕೈ ಹಾಕುವುದಿಲ್ಲ. ಇಂತಹ ಅಸಾಮಾನ್ಯ ಸಾಹಸಿಗರು ಪ್ರಖ್ಯಾತ ನರರೋಗ ತಜ್ಞರಾದ ಡಾ. Suryanarayana Sharma P M ಅವರು. ಮೊದಲ ಬಾರಿಗೆ ಕನ್ನಡಿಗರಿಗೆ ವೈದ್ಯಕೀಯ ಕ್ಷೇತ್ರದಲ್ಲಿನ ನವನೂತನ ತಂತ್ರಜ್ಞಾನಗಳ ಪರಿಚಯ ಮಾಡಿಸುವ ಅತ್ಯುನ್ನತ ಗುಣಮಟ್ಟದ ಪುಸ್ತಕವನ್ನು ಹೊರತಂದಿದ್ದಾರೆ. ಒಬ್ಬರು ತಜ್ಞವೈದ್ಯರ 5-ನಿಮಿಷದ ಅಪಾಯಿಂಟ್ಮೆಂಟ್ ಪಡೆಯಲು ತತ್ತರಿಸಿ ಹೋಗುವ ಇಂದಿನ ದಿನಗಳಲ್ಲಿ ಅವರು ಇದಕ್ಕಾಗಿ ಹದಿನೇಳು ಮಂದಿ ವೈದ್ಯಕೀಯ ತಜ್ಞರನ್ನು ಒಗ್ಗೂಡಿಸಿದ್ದಾರೆ ಎಂದರೆ ಆ ಸಾಹಸದ ಒಂದು ಝಲಕ್ ಓದುಗರಿಗೆ ದೊರೆಯಬಹುದು!
ಈ ಮಹತ್ತರ ಪ್ರಯತ್ನಕ್ಕೆ ನನ್ನಿಂದ ಮುನ್ನುಡಿ ಬರೆಸಿದ್ದಾರೆ. ಅದ್ಯಾವ ಆಧಾರದ ಮೇಲೆ ನಾನು ಇಂತಹ ಗೌರವಕ್ಕೆ ಭಾಜನನಾದೆನೋ ನನಗೇ ತಿಳಿಯದು! ಅದು ಅವರು ನನ್ನ ಮೇಲಿಟ್ಟ ಪ್ರೀತಿ-ವಿಶ್ವಾಸಗಳ ಸಂಕೇತ ಎಂದು ಮಾತ್ರ ಹೇಳಬಲ್ಲೆ.
ಪುಸ್ತಕದ ಮುನ್ನುಡಿಯನ್ನು ಯಥಾವತ್ತಾಗಿ ಇಲ್ಲಿಡುತ್ತಿದ್ದೇನೆ. ಅದು ಪುಸ್ತಕದ ಕಿರು-ಪರಿಚಯವೂ ಹೌದು. ಸಮಸ್ತ ಕನ್ನಡಿಗರು ಈ ಪುಸ್ತಕವನ್ನು ಓದಿದರೆ ಅರಿವಿನ ವಿಸ್ತಾರಕ್ಕೆ ಅವಕಾಶ ಎನ್ನುವುದರಲ್ಲಿ ಸಂಶಯವೇ ಇಲ್ಲ.
ವೈದ್ಯಕೀಯ ಕ್ಷೇತ್ರದಲ್ಲಿನ ನೂತನ ತಂತ್ರಜ್ಞಾನಗಳು ಕೃತಿಯ ಮುನ್ನುಡಿ:
ಜಗದ್ವಿಖ್ಯಾತ Harrison’s Principles of Internal Medicine ಕೃತಿ ಆರಂಭವಾಗುವುದೇ “Medicine is an ever-changing science” ಎನ್ನುವ ಮಾತುಗಳಿಂದ. ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ ಸತ್ಯ. ವೈದ್ಯಕೀಯ ವಿಜ್ಞಾನವು ಇತಿಹಾಸದಲ್ಲಿ ಹಿಂದೆಂದೂ ಆಗಿರದಷ್ಟು ವೇಗವಾಗಿ ಬದಲಾಗುತ್ತಿದೆ. ಒಂದೆಡೆ ತಂತ್ರಜ್ಞಾನಗಳ ವಿಸ್ಮಯಕರ ಪ್ರಗತಿಯಾದರೆ, ಮತ್ತೊಂದೆಡೆ ಅದನ್ನು ಅತ್ಯಂತ ಕ್ಷಿಪ್ರವಾಗಿ ಆಚರಣ-ಯೋಗ್ಯ ಹಾದಿಗಳಿಗೆ ಬದಲಾಯಿಸುವ ವಿಧಾನಗಳ ಅಭಿವೃದ್ಧಿ ಜೊತೆಜೊತೆಗೆ ಸಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಸದ್ಯಕ್ಕಂತೂ ತಂತ್ರಜ್ಞಾನ ಪ್ರಭಾವಿಸದ ವಿಭಾಗ ವೈದ್ಯಕೀಯ ಕ್ಷೇತ್ರದಲ್ಲಿ ಇಲ್ಲವೇ ಇಲ್ಲ. ಹೊರ-ರೋಗಿ ವಿಭಾಗದಲ್ಲಿ ನಡೆಯುವ ದೈನಂದಿನ ರೋಗನಿರ್ಣಯಯಿಂದ ಆರಂಭಿಸಿ, ಮಾಹಿತಿ ಸಂರಕ್ಷಣೆ, ಅತ್ಯಾಧುನಿಕ ಚಿಕಿತ್ಸಾ ವಿಧಾನಗಳು, ಉನ್ನತ ಮಟ್ಟದ ರೋಗ ನಿರ್ವಹಣೆ, ಅತ್ಯಂತ ನಿಖರ ಶಸ್ತ್ರಚಿಕಿತ್ಸೆಯ ಪದ್ದತಿಗಳು – ಹೀಗೆ ಹೊಸ ತಂತ್ರಜ್ಞಾನಗಳ ಹರಹು ವಿಶಾಲವಾದದ್ದು. ‘ತಂತ್ರಜ್ಞಾನ ಪರ್ವ’ ಎಂದೇ ಕರೆಯಬಹುದಾದ ಇಂದಿನ ದಿನಗಳಲ್ಲಿ, ವೈದ್ಯಕೀಯ ಕ್ಷೇತ್ರವು ಒಂದೆಡೆ ಮಾನವನ ಆಯುಷ್ಯವನ್ನು ಹೆಚ್ಚಿಸುವ, ಮತ್ತೊಂದೆಡೆ ಎಲ್ಲರಿಗೂ ಗುಣಮಟ್ಟದ ಆರೋಗ್ಯವನ್ನು ನೀಡುವ ಪ್ರಯತ್ನಗಳನ್ನು ಜೊತೆಜೊತೆಗೆ ಮಾಡುತ್ತಿದೆ.
ಆದರೆ ನಾಗಾಲೋಟದ ಈ ಪ್ರಗತಿಯನ್ನು ಜನಸಾಮಾನ್ಯರಿಗೆ ವಿವರಿಸುವುದು ಸುಲಭವಲ್ಲ. ವೈದ್ಯಕೀಯದಲ್ಲಿ ತಂತ್ರಜ್ಞಾನದ ವೇಗ ಎಷ್ಟಿದೆಯೆಂದರೆ, ಒಂದು ಕ್ಷೇತ್ರದ ತಜ್ಞ ವೈದ್ಯರು ಮತ್ತೊಂದು ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಲು ಕೆಲವು ಗಂಟೆಗಳೇ ಹಿಡಿಯುತ್ತವೆ! ಹೀಗಿರುವಾಗ ಅದನ್ನು ಸಾಮಾನ್ಯ ಓದುಗರಿಗೆ ಸರಳ ಭಾಷೆಯಲ್ಲಿ ಅರ್ಥವಾಗುವಂತೆ ತಲುಪಿಸುವುದು ತೀರಾ ಸಾಹಸದ ವಿಷಯ. ಇಂತಹ ಸಾಹಸದಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ನುರಿತ ಹಲವಾರು ತಜ್ಞರು ಒಗ್ಗೂಡಿ ಸಫಲರಾಗಿದ್ದಾರೆ. ಈ ಪುಸ್ತಕವನ್ನು ರಚಿಸುವ ಉದ್ದೇಶ, ವೈದ್ಯಕೀಯ ತಂತ್ರಜ್ಞಾನಗಳ ಇಂದಿನ ಸ್ಥಿತಿಗತಿಯು ಯಾವ ಎತ್ತರಕ್ಕೆ ತಲುಪಿದೆ ಎಂಬುದನ್ನು ಸರಳವಾಗಿ, ವೈಜ್ಞಾನಿಕವಾಗಿ, ಹಾಗೂ ಸಮಗ್ರವಾಗಿ ಪರಿಚಯಿಸುವುದು. ಹದಿನೇಳು ಅಧ್ಯಾಯಗಳಲ್ಲಿ “ಆಸ್ಪತ್ರೆಗಳ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ” ಯಾವ ರೀತಿ ಆಗುತ್ತಿದೆ ಎನ್ನುವ ಮೂಲಭೂತ ಹಂತದಿಂದ ಹಿಡಿದು, “ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ರೋಬೋಟಿಕ್ ತಂತ್ರಜ್ಞಾನ” ಎನ್ನುವ ಅಸಾಧಾರಣ ಪ್ರಗತಿಯ ವಿವರಣೆಯವರೆಗೆ ಈ ಪುಸ್ತಕ ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸಿದೆ. ಆಸ್ಪತ್ರೆಯ ಆಧುನಿಕ ಪ್ರಯೋಗಾಲಯದಲ್ಲಿ ತಂತ್ರಜ್ಞಾನ ತಂದಿರುವ ಕ್ರಾಂತಿ; ತುರ್ತು ಚಿಕಿತ್ಸಾ ಘಟಕದಲ್ಲಿ ತಂತ್ರಜ್ಞಾನದ ಬಳಕೆಯಿಂದ ಆಗಿರುವ ಕ್ಷಿಪ್ರ ನಿರ್ವಹಣೆ; ಅಂಗ ಕಸಿಯಂತಹ ನಾಜೂಕು ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನ ತಂದಿರುವ ನಿಖರತೆಯ ಆಯಾಮ; ಈ ಮುನ್ನ ಬಹಳ ಅಪಾಯಕಾರಿ ಎಂದು ಪರಿಗಣಿಸಲಾಗುತ್ತಿದ್ದ ಚಿಕಿತ್ಸೆಗಳು ತಂತ್ರಜ್ಞಾನದ ನೆರವಿನಿಂದ ಯಾವ ರೀತಿ ಸುರಕ್ಷಿತವಾಗುತ್ತಿವೆ; ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಗಳನ್ನು ಈಗ ಶರೀರದ ಮೇಲೆ ಒಂದು ಗೆರೆಯೂ ಬೀಳದಂತೆ ಮಾಡುವ ವಿಧಾನಗಳು – ಇವುಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬಹುದಾದ ಸರಳ ನಿರೂಪಣೆಯಲ್ಲಿ ವಿವರಿಸಿರುವುದು ಈ ಕೃತಿಯ ವೈಶಿಷ್ಟ್ಯ. ಕನ್ನಡದ ಮಟ್ಟಿಗೆ ಇದು ಅನನ್ಯ. ನಮ್ಮ ಭಾಷೆಯಲ್ಲಿ ಈ ರೀತಿಯ ಕೃತಿ ಈವರೆಗೆ ಬಂದಿಲ್ಲ. ಕನ್ನಡದಲ್ಲಿ ಇಂತಹ ಮಾಹಿತಿಗೆ ಇದ್ದ ದೊಡ್ಡ ಕೊರತೆಯನ್ನು ಈ ಕೃತಿ ಸಾಕಷ್ಟು ಸಮರ್ಥವಾಗಿ ತುಂಬಿದೆ.
ಈ ಕೃತಿಯ ಪ್ರತಿಯೊಂದು ಅಧ್ಯಾಯವೂ ವೈದ್ಯಕೀಯ ರಂಗದ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ತಂತ್ರಜ್ಞಾನದ ಅದ್ಭುತ ಬಳಕೆಯಿಂದ ಆದ ಮಹತ್ತರ ಬದಲಾವಣೆಗಳನ್ನು ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ವಿವರಿಸುತ್ತದೆ. ಕೆಲವು ಉದಾಹರಣೆಗಳನ್ನು ಗಮನಿಸಬಹುದು. ಹೃದಯದ ಕವಾಟಗಳನ್ನು ಬದಲಿಸುವ ಶಸ್ತ್ರಚಿಕಿತ್ಸೆ ಎಂದರೆ ಎಂತಹವರಿಗಾದರೂ ಅಳ್ಳೆದೆಯಾಗಬಹುದು. ಎದೆಗೋಡೆಯ ಮೂಲಕ ಹೃದಯದ ಒಳಗಿಳಿದು, ಹೊಸ ಕವಾಟವನ್ನು ಜೋಡಿಸುವ ಶಸ್ತ್ರಚಿಕಿತ್ಸೆ ಹಲವಾರು ಗಂಟೆಗಳದ್ದು. ಶಸ್ತ್ರಚಿಕಿತ್ಸೆಯ ನಂತರ ಕೆಲವು ದಿನ ಆಸ್ಪತ್ರೆಯಲ್ಲಿ ಚೇತರಿಸಿಕೊಂಡು, ಆಮೇಲೆ ಕೆಲ ವಾರಗಳ ಕಾಲ ವಿಶ್ರಾಂತಿ ಪಡೆಯುವುದನ್ನು ಬಲ್ಲೆವು. ಇದರ ಬದಲಿಗೆ, ಎದೆಯನ್ನು ಮುಟ್ಟದೆಯೇ ಕಾಲಿನ ರಕ್ತನಾಳವೊಂದರಿಂದ ನಳಿಕೆಗಳ ಮೂಲಕ ಹೃದಯವನ್ನು ತಲುಪಿ, ಒಂದು ಗಂಟೆಯ ಅವಧಿಯಲ್ಲಿ ಕವಾಟವನ್ನು ಜೋಡಿಸಿ, ಮರುದಿನ ರೋಗಿ ಮನೆಗೆ ಹಿಂದಿರುಗುವುದು ಈಗ ಸಾಧ್ಯ.
ಒಂದು ಕಾಲದಲ್ಲಿ ಇಂಚುಗಳ ಉದ್ದದಲ್ಲಿ ಹೊಟ್ಟೆಯನ್ನು ಸೀಳಿ, ಹಲವರಿಂದ ರಕ್ತದಾನ ಮಾಡಿಸಿ ರೋಗಿಗೆ ನೀಡಿ, ವಾರಗಟ್ಟಲೆ ರೋಗಿಯನ್ನು ಆಸ್ಪತ್ರೆಯಲ್ಲಿ ಇಟ್ಟು ನಿಗಾ ವಹಿಸುತ್ತಿದ್ದ ಕಠಿಣ ಶಸ್ತ್ರಚಿಕಿತ್ಸೆಗಳು ಈಗ ಉದರದರ್ಶಕ ಯಂತ್ರದ ಮೂಲಕ ಆಗುತ್ತಿವೆ. ಇಂತಹ ರೋಗಿಗಳಿಗೆ ರಕ್ತಪೂರಣದ ಅಗತ್ಯವೇ ಇಲ್ಲದಷ್ಟು ಕಡಿಮೆ ರಕ್ತ ನಷ್ಟವಾಗುತ್ತದೆ. ಎಲ್ಲಿ ಅಗತ್ಯವೋ ಅಲ್ಲಿ ಮಾತ್ರ ಅತ್ಯಂತ ನಿಖರವಾಗಿ ಶಸ್ತ್ರಕ್ರಿಯೆ ಜರುಗುತ್ತದೆ. ಹೆಚ್ಚಿನ ವಿಳಂಬವಿಲ್ಲದೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಸಾಮಾನ್ಯ ಜೀವನ ಸಾಗುತ್ತದೆ.
ಮಂಡಿ ಬದಲಿ ಶಸ್ತ್ರಚಿಕಿತ್ಸೆ ಎಂದರೆ ಅತ್ಯಂತ ಹೆಚ್ಚು ನಿಖರತೆಯನ್ನು ಬಯಸುವ ಪ್ರಕ್ರಿಯೆ. ಇದನ್ನು ಸಾಧಿಸಲು ಈಗ ರೋಬೋಟಿಕ್ ತಂತ್ರಜ್ಞಾನ ಲಭ್ಯವಿದೆ. ಇಂಪ್ಲಾಂಟ್ ಗಳ ಕರಾರುವಾಕ್ ಜೋಡಣೆ ಮತ್ತು ಹೊಂದಾಣಿಕೆಯಿಂದ ಇಂತಹ ಕ್ಲಿಷ್ಟಕರ ಪ್ರಕ್ರಿಯೆಗಳು ಯಾವ ರೀತಿ ಅತ್ಯಂತ ಸುರಕ್ಷಿತವಾಗಿ ಮಾರ್ಪಟ್ಟಿವೆ ಎನ್ನುವ ಅಚ್ಚರಿಗಳನ್ನು ಅರಿಯಲು ಪುಸ್ತಕ ಓದಿಯೇ ರೋಮಾಂಚನಗೊಳ್ಳಬೇಕು.
ಈ ಪುಸ್ತಕ ಯಾರಿಗಾಗಿ? ನಮ್ಮ ಭಾಷೆಯನ್ನು ಓದಬಲ್ಲ ಪ್ರತಿಯೊಬ್ಬರಿಗಾಗಿ ಎನ್ನುವುದು ಉತ್ತರ. ಆರೋಗ್ಯವೆಂಬುದು ನಮ್ಮ ಹಕ್ಕು ಮತ್ತು ಜವಾಬ್ದಾರಿ. ತಮ್ಮ ಮತ್ತು ತಮ್ಮವರ ಆರೋಗ್ಯ ರಕ್ಷಣೆಯ ಕರ್ತವ್ಯ ಹೊತ್ತಿರುವ ಎಲ್ಲರಿಗೂ ಸಹಾಯಕವಾಗುವಂತೆ ಈ ಕೃತಿಯನ್ನು ರಚಿಸಲಾಗಿದೆ. ಮಾಹಿತಿಯ ಗಾಂಭೀರ್ಯವನ್ನು ಕಾಪಾಡಿಕೊಂಡು, ಕ್ಲಿಷ್ಟಕರ ತಾಂತ್ರಿಕ ವಿಷಯಗಳನ್ನು ಅತ್ಯಂತ ಸರಳವಾಗಿ ಬಿಂಬಿಸುವ ಪ್ರಯತ್ನ ಮಾಡಲಾಗಿರುವುದು ಕೃತಿಯ ವೈಶಿಷ್ಟ್ಯ. ತಂತ್ರಜ್ಞಾನವೆಂದರೆ ರೋಗಿಯನ್ನು ವೈದ್ಯರಿಂದ ದೂರ ಮಾಡುವ ವಿಧಾನವಲ್ಲ; ಬದಲಿಗೆ ಚಿಕಿತ್ಸೆಗೆ ಮಾನವೀಯ ಸಂಸ್ಪರ್ಶವನ್ನು ನೀಡುವ ಆಯಾಮ ಎನ್ನುವುದು ಈ ಕೃತಿಯನ್ನು ಓದಿದವರಿಗೆ ಮನದಟ್ಟಾಗುತ್ತದೆ. ರೋಗಿಯ ಆರೋಗ್ಯವನ್ನು ಕೇಂದ್ರಬಿಂದುವಾಗಿರಿಸಿ, ಅದಕ್ಕೆ ತಂತ್ರಜ್ಞಾನದ ನೆರವಿನಿಂದ ಯೋಗ-ಕ್ಷೇಮಗಳನ್ನು ಅಭಿವೃದ್ಧಿಗೊಳಿಸುವುದು ಪ್ರಸ್ತುತ ವೈದ್ಯಕೀಯ ಕ್ಷೇತ್ರದ ಮೂಲ ಧ್ಯೇಯ.
ಮನುಕುಲದ ಆರೋಗ್ಯಕ್ಕಾಗಿ ತುಡಿಯುವ ತಂತ್ರಜ್ಞಾನಗಳ ಅರಿವಿಗಾಗಿ ಈ ಕೃತಿಯು ಒಂದು ಮಹತ್ವದ ಹೆಜ್ಜೆಯಾಗಲಿ ಎಂದು ಹೃತ್ಪೂರ್ವಕ ಹಾರೈಕೆ.
ಡಾ. ಕಿರಣ್ ವಿ.ಎಸ್.
ವೈದ್ಯರು
--------------------
ವೈದ್ಯಕೀಯ ಕ್ಷೇತ್ರದಲ್ಲಿನ ನೂತನ ತಂತ್ರಜ್ಞಾನಗಳ ಅರಿವಿನ ಯಾತ್ರೆಗೆ ಎಲ್ಲ ಕನ್ನಡಿಗರಿಗೂ ಸ್ವಾಗತ! ಪುಸ್ತಕ ಖರೀದಿಸಲು ಫೋನ್ ಸಂಖ್ಯೆ 7760291482 ಸಂಪರ್ಕಿಸಬಹುದು.


 

ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕು – ವ್ಯತ್ಯಾಸಗಳೇನು?

ಡಾ. ಕಿರಣ್ ವಿ.ಎಸ್.

ವೈದ್ಯರು

 ಇಂದಿನ ಜಂಜಾಟದ ಜೀವನದಲ್ಲಿ ಬದುಕಿನ ಆದ್ಯತೆಗಳು ಏರುಪೇರಾಗಿವೆ. ಆಹಾರ, ಆರೋಗ್ಯ, ವ್ಯಾಯಾಮ, ನಿದ್ರೆಯಂತಹ ಮೂಲಭೂತ ಅಗತ್ಯಗಳನ್ನು ಜನರು ನಿರ್ಲಕ್ಷಿಸುತಿದ್ದಾರೆ. ಇದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡಗಳು ಹೆಚ್ಚಾಗುತ್ತಿವೆ. ಪರಿಣಾಮವಾಗಿ ಶರೀರವನ್ನು ಕಾಡುವ ಸೋಂಕುಗಳು ಏರುತ್ತಿವೆ. ಹಲವಾರು ಪರೋಪಜೀವಿಗಳು ದೇಹವನ್ನು ಕಾಡಬಹುದಾದರೂ, ಇದರ ಬಹುಭಾಗ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು. ಇವೆರಡರ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿದರೆ, ಅವುಗಳ ನಿರ್ವಹಣೆ ಸಮಂಜಸವಾಗುತ್ತದೆ.

ಬ್ಯಾಕ್ಟೀರಿಯಾ ಸ್ವತಂತ್ರ ಪರೋಪಜೀವಿ. ಅಂದರೆ, ಅದು ತನ್ನ ಬೆಳವಣಿಗೆಗಾಗಿ ಅಗತ್ಯವಾದ ಪೋಷಕಾಂಶಗಳು ದೊರೆತರೆ ಸ್ವತಂತ್ರವಾಗಿ ಬದುಕಬಲ್ಲದು. ಇಂತಹ ಪೋಷಕಾಂಶಗಳನ್ನು ನೀಡಿ ಅವುಗಳನ್ನು ಪ್ರಯೋಗಶಾಲೆಯಲ್ಲಿ ಬೆಳೆಸಬಹುದು. ಹೀಗಾಗಿ ಅವು ಅಭಿವೃದ್ಧಿಗೊಳ್ಳಲು ಜೀವಕೋಶಗಳೇ ಬೇಕು ಎನ್ನುವ ಕಡ್ಡಾಯವಿಲ್ಲ. ಜಗತ್ತಿನಲ್ಲಿ ಸಾವಿರಾರು ಬಗೆಯ ಬ್ಯಾಕ್ಟೀರಿಯಾಗಳು ಇವೆಯಾದರೂ, ಅವುಗಳಲ್ಲಿ ಕೆಲವು ಮಾತ್ರ ಮಾನವರಲ್ಲಿ ಸೋಂಕು ಉಂಟು ಮಾಡುತ್ತವೆ. ಸೋಂಕು ಉಂಟುಮಾಡದ ಕೋಟ್ಯಂತರ ಬ್ಯಾಕ್ಟೀರಿಯಾಗಳು ನಮ್ಮ ಕರುಳಿನೊಳಗೇ ವಾಸ ಮಾಡುತ್ತಾ, ನಮ್ಮೊಡನೆ ಸಹಜೀವನ ನಡೆಸುತ್ತಾ, ನಮ್ಮ ದೇಹದ ಕಾರ್ಯಗಳನ್ನು ನಿಯಂತ್ರಿಸುತ್ತಿರುತ್ತವೆ. ನಮ್ಮೊಳಗಿನ ಒಡನಾಡಿ ಬ್ಯಾಕ್ಟೀರಿಯಾಗಳ ಸಂಖ್ಯೆ ನಮ್ಮ ಶರೀರದ ಒಟ್ಟಾರೆ ಎಲ್ಲ ಜೀವಕೋಶಗಳಿಗಿಂತಲೂ ಹೆಚ್ಚು.

ಇದರ ಹೊರತಾಗಿ, ನಮ್ಮ ದೇಹಕ್ಕೆ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳೂ ನೂರಾರು ಬಗೆಯವು. ಇವುಗಳಲ್ಲಿ ಕೆಲವು ತೀವ್ರ ಪ್ರಮಾಣದ ಸೋಂಕು ಉಂಟುಮಾಡಿ, ಶರೀರವನ್ನು ಅಪಾಯಕ್ಕೆ ಸಿಲುಕಿಸಬಲ್ಲವು. ಶರೀರವನ್ನು ಸೇರಿದ ಬ್ಯಾಕ್ಟೀರಿಯಾಗಳು ಮೊದಲು ದೇಹದ ಜೀವಕೋಶಗಳನ್ನು ಹಿಡಿದು, ಪೋಷಕಾಂಶಗಳನ್ನು ಸೆಳೆಯುತ್ತವೆ. ಆನಂತರ ತಮ್ಮ ಸಂಖ್ಯೆಯನ್ನು ವೃದ್ಧಿಸುತ್ತವೆ. ಕೆಲವೇ ಕಾಲದಲ್ಲಿ ಇಂತಹ ಸೋಂಕುಕಾರಕ ಬ್ಯಾಕ್ಟೀರಿಯಾಗಳ ಸಂಖ್ಯೆ ವಿಪರೀತವಾಗುತ್ತದೆ. ಶರೀರದಲ್ಲಿ ಲಭ್ಯವಿರುವ ಪೋಷಕಾಂಶಗಳನ್ನು ಬ್ಯಾಕ್ಟೀರಿಯಾಗಳು ಬಳಸಿಕೊಳ್ಳುವುದರಿಂದ, ಶರೀರಕ್ಕೆ ಸಹಜವಾಗಿ ದೊರೆಯಬೇಕಿದ್ದ ಪೋಷಕಾಂಶಗಳು ತಲುಪದೆ ಅಂಗಗಳು ಸೊರಗುತ್ತವೆ; ಅವುಗಳ ಕೆಲಸ ಕುಂಠಿತವಾಗುತ್ತದೆ. ಬ್ಯಾಕ್ಟೀರಿಯಾ ಉತ್ಪಾದಿಸುವ ವಿಷಕಾರಿ ವಸ್ತುಗಳಿಂದ ದೇಹಕ್ಕೆ ಬಾಧೆಯಾಗುತ್ತದೆ. ಅಪಾಯಕಾರಿ ಪರೋಪಜೀವಿಯೊಂದು ದೇಹವನ್ನು ಕಂಗೆಡಿಸುತ್ತಿದೆ ಎನ್ನುವ ಸೂಚನೆ ಬಂದ ಕೂಡಲೇ ಶರೀರದ ರಕ್ಷಕ ವ್ಯವಸ್ಥೆ ಜಾಗೃತವಾಗಿ, ಬ್ಯಾಕ್ಟೀರಿಯಾ ವಿರುದ್ಧ ಹೊಡೆದಾಟಕ್ಕೆ ಸಜ್ಜಾಗುತ್ತದೆ. ಕೆಲವೊಮ್ಮೆ ಬ್ಯಾಕ್ಟೀರಿಯಾ ಸೋಂಕಿನ ತೀವ್ರತೆಗಿಂತಲೂ ರಕ್ಷಕ ವ್ಯವಸ್ಥೆಯ ಪ್ರತಿಕ್ರಿಯೆ ದೇಹದ ಪಾಲಿಗೆ ಹೆಚ್ಚು ಭಯಂಕರವಾಗಿರುತ್ತದೆ. ರಕ್ಷಕ ವ್ಯವಸ್ಥೆಯ ಹುಚ್ಚಾಪಟ್ಟೆ ಕಾದಾಟದಲ್ಲಿ ಶರೀರ ಹೆಚ್ಚು ನಷ್ಟ ಅನುಭವಿಸುವ ಪ್ರಸಂಗಗಳೂ ಇವೆ.

ಬ್ಯಾಕ್ಟೀರಿಯಾ ನಿಗ್ರಹದಲ್ಲಿ ದೇಹದ ರಕ್ಷಕ ವ್ಯವಸ್ಥೆ ಬಹುತೇಕ ಯಶಸ್ವಿಯಾಗಬಲ್ಲದಾದರೂ, ಕೆಲವೊಮ್ಮೆ ಈ ಸಂಗ್ರಾಮದಲ್ಲಿ ಬ್ಯಾಕ್ಟೀರಿಯಾದ್ದೇ ಮೇಲುಗೈ ಆಗಬಹುದು. ಇಂತಹ ಸಂದರ್ಭಗಳಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ಆಂಟಿಬಯಾಟಿಕ್ ಔಷಧಗಳ ನೆರವು ಬೇಕಾಗುತ್ತದೆ. ಒಂದೇ ಆಂಟಿಬಯಾಟಿಕ್ ಎಲ್ಲ ರೀತಿಯ ಬ್ಯಾಕ್ಟೀರಿಯಾ ಮೇಲೂ ಪರಿಣಾಮಕಾರಿ ಆಗಲಾರದು. ಒಂದೊಂದು ಬಗೆಯ ಬ್ಯಾಕ್ಟೀರಿಯಾಗೆ ಒಂದೊಂದು ಬಗೆಯ ಆಂಟಿಬಯಾಟಿಕ್ ಕೆಲಸ ಮಾಡುತ್ತದೆ. ಆಂಟಿಬಯಾಟಿಕ್ಗಳು ಶರೀರದ ಇತರ ಜೀವಕೋಶಗಳ ಮೇಲೆಯೂ ಧಾಳಿ ಮಾಡಿ, ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತವೆ. ರೋಗದ ಲಕ್ಷಣಗಳನ್ನು ಗಮನಿಸಿ ವೈದ್ಯರು ಸೂಕ್ತವಾದ ಆಂಟಿಬಯಾಟಿಕ್ ಅಂದಾಜು ಮಾಡಬಹುದು. ತೀವ್ರ ಸೋಂಕುಗಳಲ್ಲಿ ಈ ಅಂದಾಜು ಕೆಲಸಕ್ಕೆ ಬಾರದು. ಆಗ ಮೊದಲು ರೋಗಕಾರಕ ಬ್ಯಾಕ್ಟೀರಿಯಾ ಯಾವುದೆಂದು ಗುರುತಿಸಿ, ಅದಕ್ಕೆ ಯಾವ ಆಂಟಿಬಯಾಟಿಕ್ ಕೆಲಸ ಮಾಡುತ್ತದೆ ಎಂಬುದನ್ನು ಪ್ರಯೋಗಾಲಯದ ದುಬಾರಿ ಪರೀಕ್ಷೆಗಳ ಮೂಲಕ ತಿಳಿಯಬೇಕು. ಇದಕ್ಕೆ ಎರಡು-ಮೂರು ದಿನಗಳ ಕಾಲಾವಧಿ ಹಿಡಿಯುತ್ತದೆ. ಬಹಳಷ್ಟು ಬಾರಿ ಚಿಕಿತ್ಸೆಗಿಂತಲೂ ಪರೀಕ್ಷೆಗಳೇ ದುಬಾರಿ. “ನಾಲ್ಕಾಣೆ ಕೋತಿಗೆ ಹನ್ನೆರಡಾಣೆ ಬೆಲ್ಲ” ಎನ್ನುವ ಮಾತಿನಂತಾಗುತ್ತದೆ.

ವೈರಸ್ ಸೋಂಕು ಬ್ಯಾಕ್ಟೀರಿಯಾಗಿಂತ ಭಿನ್ನ. ವೈರಸ್ ಎಂಬುದು ಸ್ವತಂತ್ರ ಜೀವಿಯಲ್ಲ; ಅದು ಜೀವ-ನಿರ್ಜೀವಗಳ ಗಡಿಯಲ್ಲಿರುವುದು. ವೈರಸ್ ಮೂಲತಃ ಪ್ರೋಟೀನ್ ಕೋಟೆಯೊಳಗಿನ ಡಿ.ಎನ್.ಎ. ಇಲ್ಲವೇ ಆರ್.ಎನ್.ಎ. ಎನ್ನುವ ಜೀವದ್ರವ್ಯ. ಪರಕೀಯ ಜೀವಕೋಶದೊಳಗೆ ಪ್ರವೇಶಿಸುವ ವೈರಸ್, ಅಲ್ಲಿಯ ಪೋಷಕಾಂಶಗಳಿಂದ ನೇರವಾಗಿ ಬೆಳೆಯುವುದಿಲ್ಲ. ಬದಲಿಗೆ ತನ್ನ ಪ್ರೋಟೀನ್ ಆವರಣವನ್ನು ಕಳಚಿ, ಡಿ.ಎನ್.ಎ. ಇಲ್ಲವೇ ಆರ್.ಎನ್.ಎ. ಎನ್ನುವ ತನ್ನ ಜೆನೆಟಿಕ್ ದ್ರವ್ಯವನ್ನು ಪರಕೀಯ ಜೀವಕೋಶದ ನ್ಯೂಕ್ಲಿಯಸ್ ಒಳಗೆ ಸೇರಿಸಿ, ಇಡೀ ಕೋಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ತನ್ನ ಪ್ರಭೇದದ ಹೊಸ ವೈರಸ್ಗಳನ್ನು ಉತ್ಪಾದಿಸುವ ಕಾರ್ಖಾನೆ ಆಗುತ್ತದೆ. ಹೀಗೆ ಉತ್ಪತ್ತಿಯಾದ ಹೊಸ ವೈರಸ್ಗಳು ಅಕ್ಕಪಕ್ಕದ ಕೋಶಗಳಿಗೆ ಲಗ್ಗೆ ಇಟ್ಟು ಅದೇ ಪ್ರಕ್ರಿಯೆಯನ್ನು ಮುಂದುವರೆಸುತ್ತವೆ.

ವೈರಸ್ ಧಾಳಿಗೂ ಶರೀರದ ರಕ್ಷಕ ವ್ಯವಸ್ಥೆ ಸ್ಪಂದಿಸುತ್ತದೆ; ಬಹುತೇಕ ವೈರಸ್ಗಳನ್ನು ನಿರ್ಮೂಲನ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತರಬಲ್ಲದು. ವೈರಸ್ ಸೋಂಕಿನ ವಿರುದ್ಧ ಆಂಟಿಬಯಾಟಿಕ್ ಔಷಧಗಳು ಯಾವುದೇ ಪರಿಣಾಮ ಉಂಟುಮಾಡಲಾರವು. ಬಹಳ ತೀವ್ರವಾದ ವೈರಸ್ ಸೋಂಕಿನಲ್ಲಿ ಮಾತ್ರ ಆಂಟಿ-ವೈರಲ್ ಔಷಧಗಳನ್ನು ನೀಡಬೇಕಾಗುತ್ತದೆ. ಬ್ಯಾಕ್ಟೀರಿಯಾಗಳನ್ನು ಪ್ರಯೋಗಾಲಯದಲ್ಲಿ ನೇರವಾಗಿ ಪತ್ತೆ ಮಾಡುವಂತೆ ವೈರಸ್ಗಳನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಕೆಲವು ಪರೋಕ್ಷ ವಿಧಾನಗಳು ಮಾತ್ರ ಇವೆ. ಕೆಲವೇ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅವನ್ನು ಬಳಸಬೇಕು.

ಸೋಂಕು ಎಂದ ಕೂಡಲೇ ಆಂಟಿಬಯಾಟಿಕ್ ಎನ್ನುವುದು ಸರಿಯಲ್ಲ. ವೈರಸ್ ಕಾಯಿಲೆಗಳಲ್ಲಿ ಆಂಟಿಬಯಾಟಿಕ್ಗಳ ಪಾತ್ರವೇ ಇಲ್ಲ. ಅಕಾರಣವಾಗಿ ಆಂಟಿಬಯಾಟಿಕ್ ಬಳಸುತ್ತಿದ್ದರೆ ಬ್ಯಾಕ್ಟೀರಿಯಾಗಳು ಅವುಗಳ ವಿರುದ್ಧ ಪ್ರತಿರೋಧ ಬೆಳೆಸಿಕೊಳ್ಳುತ್ತವೆ; ಅದರಿಂದ ಆಂಟಿಬಯಾಟಿಕ್ ಪರಿಣಾಮ ಕಡಿಮೆಯಾಗಿ, ಕಾಯಿಲೆಯ ಚಿಕಿತ್ಸೆಗಳು ಮತ್ತಷ್ಟು ದುಬಾರಿಯೂ, ಕೆಲವೊಮ್ಮೆ ನಿಷ್ಫಲವೂ ಆಗುತ್ತವೆ. ಈ ಎಚ್ಚರವನ್ನು ಮೀರಿದರೆ ಇಡೀ ಮನುಕುಲ ದೊಡ್ಡ ಬೆಲೆ ತೆರುವಂತಾಗುತ್ತದೆ.

------------------------

22/7/2025 ಪ್ರಜಾವಾಣಿ ದಿನಪತ್ರಿಕೆಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ:  https://www.prajavani.net/health/difference-between-bacterial-and-viral-infections-3417421


 

ರಕ್ತದ ಗಣಿತ – ಭಾಗ 1 – ಕೋಶಗಳು

ಡಾ. ಕಿರಣ್.ವಿ.ಎಸ್.

ವೈದ್ಯರು

 ಷೇಕ್ಸ್ಪಿಯರ್ ಮಹಾಶಯನ ಎಲ್ಲ ನಾಟಕಗಳಲ್ಲಿ ಇರುವ ಸಾಮಾನ್ಯ ಅಂಶ ಎಂದರೆ “ರಕ್ತ” ಎನ್ನುವ ಪದದ ಬಳಕೆ! ಜಗತ್ತಿನ ಬಹಳಷ್ಟು ಜನರನ್ನು ಭಾವನಾತ್ಮಕವಾಗಿ ಬೆಸೆಯಬಲ್ಲ ಅಂಗಾಂಶ ರಕ್ತ. ಕವಿಗಳು, ಸಾಹಿತಿಗಳು, ವಾಗ್ಮಿಗಳು, ಸಿನೆಮಾದವರು ರಕ್ತದ ಬಗ್ಗೆ ಸಾಕಷ್ಟು ಮನಮುಟ್ಟುವ ಮಾತುಗಳನ್ನು ಹೇಳಿದ್ದಾರೆ; ಜನರ ಅಂತರಂಗವನ್ನು ತಟ್ಟಿದ್ದಾರೆ. ವೈಜ್ಞಾನಿಕ ದೃಷ್ಟಿಯಿಂದಲೂ ರಕ್ತ ಶರೀರದ ಬಹು ಮುಖ್ಯ ಅಂಗಾಂಶ. ಇದರ ಅತಿ ದೊಡ್ಡ ವಿಸ್ಮಯ ಎಂದರೆ, ಇದು ದ್ರವರೂಪದ್ದು. ಶರೀರದಲ್ಲಿ ಇರುವ ಎಲ್ಲ ವಿಶಿಷ್ಟ ದ್ರವಗಳೂ ರಕ್ತದ ಜರಡಿಯಿಂದ ಬಂದಂಥವುಗಳೇ.

ನದಿಗಳು ದೇಶದ ಜೀವನಾಡಿ ಎಂದು ಕೇಳಿದ್ದೇವೆ. ನೀರಿನ ಸ್ರೋತವಾಗಿ, ಕೃಷಿಗೆ ಆಧಾರವಾಗಿ, ಪ್ರಯಾಣಕ್ಕಾಗಿ, ಹಲವಾರು ಸ್ಥಳಗಳನ್ನು ಬೆಸೆಯುವುದಕ್ಕಾಗಿ, ಸಾಮಾನು-ಸರಂಜಾಮುಗಳ ಸಾಗಣೆಗಾಗಿ, ಒಟ್ಟಾರೆ ನಾಗರಿಕ ಜೀವನದ ಆಧಾರಶಕ್ತಿಯಾಗಿ ನದಿಗಳ ಪಾತ್ರವಿದೆ. ಅಂತೆಯೇ ನಮ್ಮ ಶರೀರದಲ್ಲಿ ರಕ್ತವೂ ಕೂಡ. ಇಡೀ ದೇಹದಲ್ಲಿ, ಒಂದು ನಿಗದಿತ ಸ್ಥಳದಲ್ಲಿ ಹೆಚ್ಚು ಚಲನೆ ಇಲ್ಲದೆ ವ್ಯಾಪಿಸಿಕೊಂಡಿರುವ ಎಲ್ಲ ಅಂಗಾಂಗಗಳನ್ನು ಬೆಸೆಯುವುದು ರಕ್ತ; ಅವುಗಳ ಬೇಕು-ಬೇಡಗಳನ್ನು ಪೂರೈಸುವುದು ರಕ್ತ. ಆಯಾ ಅಂಗಗಳ ಸಂದೇಶಗಳನ್ನು ಮಿದುಳಿಗೆ ಒಯ್ಯುವ ಕೆಲಸವನ್ನು ಕೂಡ ರಕ್ತ ಮಾಡುತ್ತದೆ. ನಿರ್ನಾಳ ಗ್ರಂಥಿಗಳ ಹಾರ್ಮೋನ್ ಸ್ರವಿಕೆಗಳ ವಾಹಕವೂ ರಕ್ತ. ಹೀಗೆ ರಕ್ತ ಜೀವದ್ರವ; ರಕ್ತವೇ ಜೀವ.

ಶರೀರದೊಳಗೆ ರಕ್ತದ ಪರಿಚಲನೆ ಅತ್ಯಂತ ವ್ಯವಸ್ಥಿತವಾಗಿ ಆಗುವಂತಹ ಕ್ರಿಯೆ. ಅಸಲಿಗೆ ರಕ್ತ ಎನ್ನುವ ದ್ರವ ಕೇವಲ ರಕ್ತನಾಳಗಳ ಒಳಗೆ ಮಾತ್ರ ಇರುವಂತಹದ್ದು. ಈ ರಕ್ತನಾಳಗಳ ಹರಹು ಅತ್ಯಂತ ವಿಶಾಲ. ಎದೆಗೂಡಿನಲ್ಲಿ ಸುರಕ್ಷಿತವಾಗಿ ಕುಳಿತಿರುವ ಹೃದಯದ ಎಡಭಾಗದಿಂದ ಅಯೋರ್ಟಾ ಎನ್ನುವ ಮಹಾಧಮನಿ ಟಿಸಿಲು ಟಿಸಿಲಾಗಿ ಕವಲೊಡೆಯುತ್ತಾ, ಅತ್ಯಂತ ಸೂಕ್ಷ್ಮರೂಪದ ರಕ್ತನಾಳಗಳ ಮೂಲಕ ಇಡೀ ಶರೀರವನ್ನು ವ್ಯಾಪಿಸುತ್ತದೆ. ರಕ್ತನಾಳಗಳ ನೇರ ಸರಬರಾಜು ಇಲ್ಲದ ದೇಹದ ಭಾಗಗಳೂ ರಕ್ತದಿಂದಲೇ ಪರೋಕ್ಷವಾಗಿ ಸಾರವನ್ನು ಹೀರುತ್ತವೆ. ಹೀಗೆ ರಕ್ತ ಶರೀರದ ಎಲ್ಲ ಅಂಗಗಳನ್ನು ತಲುಪಿದರೂ ಎಲ್ಲಿಯೂ ಮುಕ್ತವಾಗಿ ಚೆಲ್ಲಾಡುವುದಿಲ್ಲ; ಎಲ್ಲೆಡೆಯೂ ರಕ್ತನಾಳಗಳ ಒಳಗೇ ಉಳಿಯುತ್ತದೆ.

ರಕ್ತದಲ್ಲಿ ಮುಖ್ಯವಾಗಿ ಎರಡು ಭಾಗಗಳು – ರಕ್ತದ 45% ಕೋಶಗಳು ಮತ್ತು ಉಳಿದ 55% ದ್ರವರೂಪದಲ್ಲಿನ ಪ್ಲಾಸ್ಮಾ. ಇದರಲ್ಲಿ ಕೋಶದ ಭಾಗವನ್ನು ಪ್ರಸ್ತುತ ಸಂಚಿಕೆಯಲ್ಲಿ ವಿವರಿಸಲಾಗುತ್ತದೆ. ಎರಡನೆಯ ಭಾಗದಲ್ಲಿ ಪ್ಲಾಸ್ಮಾ ಕುರಿತಾದ ವಿವರಣೆ ಬರುತ್ತದೆ.

ರಕ್ತದ ಕೋಶಗಳಲ್ಲಿ ಮೂರು ವಿಧ – ಕೆಂಪು ರಕ್ತಕಣಗಳು, ಬಿಳಿಯ ರಕ್ತಕೋಶಗಳು ಮತ್ತು ಪ್ಲೇಟ್ಲೆಟ್ ಕಣಗಳು. ಇದರಲ್ಲಿ ಅತ್ಯಂತ ವಿಫುಲ ಸಂಖ್ಯೆಯಲ್ಲಿ ಇರುವುದು ಕೆಂಪು ರಕ್ತಕಣಗಳು. ನಮ್ಮ ಶರೀರದಲ್ಲಿ ಇರುವ ಎಲ್ಲ ಕೋಶಗಳ ಪೈಕಿ ಶೇಕಡಾ 80 ಕ್ಕಿಂತಲೂ ಅಧಿಕ ಸಂಖ್ಯೆ ಕೆಂಪು ರಕ್ತಕಣಗಳದ್ದು. ವಯಸ್ಕರ ಶರೀರದಲ್ಲಿ ಕನಿಷ್ಠ 25 ಟ್ರಿಲಿಯನ್ (25 ಲಕ್ಷ-ಕೋಟಿ) ಕೆಂಪು ರಕ್ತಕಣಗಳಿವೆ ಎಂದು ಅಂದಾಜು. ಒಂದು ಮಿಲಿಲೀಟರ್ ರಕ್ತದಲ್ಲಿ ಸುಮಾರು 500-ಕೋಟಿ ಕೆಂಪು ರಕ್ತಕಣಗಳು ಇರುತ್ತವೆ. ಪ್ರತಿಯೊಂದು ಕೆಂಪು ರಕ್ತಕಣದ ವ್ಯಾಸ ಸುಮಾರು 6-8 ಮೈಕ್ರೋಮೀಟರ್. ಅಂದರೆ, ಒಂದು ಮಿಲಿಮೀಟರ್ ಅನ್ನು ಸಾವಿರ ಭಾಗ ಮಾಡಿದರೆ, ಅದರಲ್ಲಿ 6-8 ಭಾಗ. ಕೆಂಪು ರಕ್ತಕಣದ ಆಕಾರ ಎರಡೂ ಬದಿಯ ನಿಮ್ನ ಮಸೂರದ್ದು. ಸರಳವಾಗಿ ಹೇಳುವುದಾದರೆ ಎರಡು ತಟ್ಟೆಗಳನ್ನು ಬೆನ್ನು-ಬೆನ್ನಿಗೆ ಒತ್ತಿ ಹಿಡಿದಂತೆ. ಇದರಿಂದ ಕೆಂಪು ರಕ್ತಕಣಗಳು ಮಗುಚಿ, ಬಳುಕಿ, ಬಾಗಿ ತಮಗಿಂತ ಸಣ್ಣ ವ್ಯಾಸದ ರಕ್ತನಾಳಗಳ ಒಳಗೂ ನುಸುಳುತ್ತವೆ.

ಕೆಂಪು ರಕ್ತಕಣಗಳ ಅತಿ ಮುಖ್ಯ ಅಂಶವೆಂದರೆ, ಅವುಗಳಲ್ಲಿ ಕೋಶಕೇಂದ್ರ ಇಲ್ಲ; ಅವುಗಳು ವಿಭಜಿಸುವುದಿಲ್ಲ. ಕೋಶದ್ರವ್ಯವನ್ನು ಹೊರತುಪಡಿಸಿ, ಸಾಮಾನ್ಯ ಜೀವಕೋಶದಲ್ಲಿರುವ ಬೇರಾವ ಅಂಶಗಳೂ ಕೆಂಪು ರಕ್ತಕಣಗಳಲ್ಲಿ ಇಲ್ಲ. ಒಂದು ಲೆಕ್ಕಕ್ಕೆ, ಅವುಗಳಿಗೆ ಜೀವವೇ ಇಲ್ಲ. ಅವೇನಿದ್ದರೂ ಆಕ್ಸಿಜನ್ ಎನ್ನುವ ಸರಂಜಾಮು ಹೊತ್ತೊಯ್ಯುವ ವಾಹನಗಳು ಇದ್ದಂತೆ. ಅದರೊಳಗೆ ಆಕ್ಸಿಜನ್ ಎನ್ನುವ ಸರಕು ತುಂಬುವುದು ಶ್ವಾಸಕೋಶಗಳು. ಬಂಡಿ ಓಡಿಸುವ ಚಾಲಕ ಹೃದಯದ ಎಡಭಾಗದ ಪಂಪ್. ಆಯಾ ಅಂಗಗಳ ಜೀವಕೋಶಗಳು ಈ ಸರಕಿನ ಗ್ರಾಹಕರು. ತಮ್ಮ ಮನೆಯ ಬಳಿ ಕೆಂಪು ರಕ್ತಕಣ ಎನ್ನುವ ವಾಹನ ಬಂದಾಗ ಆಕ್ಸಿಜನ್ ಎನ್ನುವ ಸರಕನ್ನು ತಮಗೆ ಬೇಕಾದ ಪ್ರಮಾಣದಲ್ಲಿ ಇಳಿಸಿಕೊಳ್ಳುವುದು ಆಯಾ ಅಂಗದ ಕರ್ತವ್ಯ. ಹೀಗೆ ಸರಕು ಇಳಿಸಿಕೊಂಡ ನಂತರ ಖಾಲಿ ಬಂಡಿ ವಾಪಸ್ ಕಳಿಸುವುದು ಹೇಗೆ? ಹಾಗಾಗಿ, ತಮಗೆ ಬೇಡವಾದ ಇಂಗಾಲದ ಡೈ-ಆಕ್ಸೈಡ್ ಎನ್ನುವ ತ್ಯಾಜ್ಯವನ್ನು ಕೆಂಪು ರಕ್ತಕಣವೆಂಬ ವಾಹನಕ್ಕೆ ತುಂಬಿ ಮತ್ತೆ “ರೈಟ್-ರೈಟ್” ಎಂದರೆ ಹೃದಯದ ಬಲಭಾಗದ ಕಡೆಗೆ, ಅಲ್ಲಿಂದ ಶ್ವಾಸಕೋಶಗಳತ್ತ ಮತ್ತೆ ಅವುಗಳ ಪಯಣ ಆರಂಭ. ಕೆಂಪು ರಕ್ತಕಣಗಳ ಬಂಡಿ ಹೀಗೆ ಶ್ವಾಸಕೋಶ ತಲುಪಿದಾಗ ಅದರ ಇಂಗಾಲದ ಡೈ-ಆಕ್ಸೈಡ್ ಅನ್ನು ಇಳಿಸಿಕೊಂಡು, ಅದರೊಳಗೆ ಮತ್ತೆ ಆಕ್ಸಿಜನ್ ಸರಕನ್ನು ತುಂಬುವುದು ಶ್ವಾಸಕೋಶಗಳ ಕೆಲಸ. ಈ ಲೋಡಿಂಗ್-ಅನ್ಲೋಡಿಂಗ್ ಕೆಲಸ ಬದುಕಿನ ಉದ್ದಕ್ಕೂ ನಿರಂತರ ಸಾಗುತ್ತಲೇ ಇರಬೇಕು. ಅದಕ್ಕಾಗಿಯೇ, ಉಸಿರಾಟ ಮತ್ತು ಹೃದಯ ಬಡಿತಗಳಿಗೆ ಜೀವನದ ಉದ್ದಕ್ಕೂ ಪುರುಸೊತ್ತು ಎಂಬುದು ಇಲ್ಲವೇ ಇಲ್ಲ. ಅವುಗಳು ದಣಿದು “ಸಾಕು” ಎಂದರೆ ಜೀವವೂ ಇಲ್ಲ.

ತಮ್ಮನ್ನು ತಾವು ರಿಪೇರಿ ಮಾಡಿಕೊಳ್ಳದ ವಾಹನಗಳು ಎಷ್ಟು ಕಾಲ ಬಾಳಿಕೆ ಬಂದಾವು? ಯಾವುದೇ ಸಮಸ್ಯೆ ಬಾರದಿದ್ದರೆ ಕೆಂಪು ರಕ್ತಕಣ ಎನ್ನುವ ಬಂಡಿ ಸುಮಾರು 120 ದಿನಗಳ ಕಾಲ ತನ್ನ ಕೆಲಸ ಮಾಡಿಕೊಂಡು ಹೋಗುತ್ತದೆ. ಅದಕ್ಕೆ ವಯಸ್ಸಾಯಿತು; ಬಳುಕುವ, ಬಾಗುವ ಸಾಮರ್ಥ್ಯ ನಶಿಸಿತು; ಆಕ್ಸಿಜನ್ ಹೊರುವ ತ್ರಾಣ ಇಲ್ಲವಾಯಿತು ಎಂದಾಗ ಅದನ್ನು ಗುಲ್ಮದ ಗುಜರಿ ಅಂಗಡಿಗೆ ನುಗ್ಗಿಸಿ, ಮುರಿದು ಹಾಕುವುದು ಒಂದೇ ದಾರಿ. ಹೀಗೆ ಗುಲ್ಮದಲ್ಲಿ ಮುರಿದು ಬೀಳುವ ಕೆಂಪು ರಕ್ತಕಣಗಳ ಸಂಖ್ಯೆ ಒಂದು ಸೆಕೆಂಡಿಗೆ ಸುಮಾರು 20-25 ಲಕ್ಷ. ಅಷ್ಟೇ ಸಂಖ್ಯೆಯ ಹೊಸ ಕೆಂಪು ರಕ್ತಕಣಗಳನ್ನು ನಮ್ಮ ಅಸ್ಥಿಮಜ್ಜೆ ಎನ್ನುವ ಎಲುಬಿನ ನೆಣ ತಯಾರಿಸುತ್ತದೆ. ಹೀಗಾಗಿ, ಶರೀರದಲ್ಲಿನ ಒಟ್ಟಾರೆ ಕೆಂಪು ರಕ್ತಕಣಗಳ ಸಂಖ್ಯೆ ಸ್ಥಿರವಾಗಿ ಉಳಿಯುತ್ತದೆ.

ಕೆಂಪು ರಕ್ತಕಣಗಳ ಒಡಲಿನಲ್ಲಿರುವ, ಅದರ ಕೆಂಪು ಬಣ್ಣಕ್ಕೆ ಕಾರಣವಾದ ಹೀಮೋಗ್ಲೋಬಿನ್ ಎನ್ನುವ ವಿಶಿಷ್ಟ ರಾಸಾಯನಿಕ ವಸ್ತುವೇ ನಮ್ಮ ಶರೀರದ ಆಕ್ಸಿಜನ್ ವಾಹಕ. ಹೀಮೋಗ್ಲೋಬಿನ್ ಎಂಬುದು ರಾಸಾಯನಿಕ ಸಂಯುಕ್ತ: ಹೀಮ್ ಎನ್ನುವ, ಆಕ್ಸಿಜನ್ ಅನ್ನು ತನ್ನೊಳಗೆ ಬಿಗಿದು ಇಡುವ ಅಣುಗಳ ಗುಂಪು ಮತ್ತು ಅದರ ಸುತ್ತ ಗ್ಲೋಬಿನ್ ಎನ್ನುವ ಪ್ರೋಟೀನಿನ ಗೋಡೆ ಸೇರಿದರೆ ಹೀಮೋಗ್ಲೋಬಿನ್. ಹೀಮ್ ರಾಸಾಯನಿಕ ಕೆಲಸ ಮಾಡಲು ಅತ್ಯಗತ್ಯವಾದ ಧಾತು ಕಬ್ಬಿಣ. ಹೀಗಾಗಿ, ಶರೀರದಲ್ಲಿ ಕಬ್ಬಿಣದ ಅಂಶ ಕಡಿಮೆಯಾದರೆ ಆಕ್ಸಿಜನ್ ಒಯ್ಯುವ ಸಾಮರ್ಥ್ಯವೂ ನಶಿಸಿ, ದೇಹ ನಿತ್ರಾಣಗೊಳ್ಳುತ್ತದೆ. ಒಂದು ಕೆಂಪು ರಕ್ತಕಣದಲ್ಲಿ 27 ಕೋಟಿ ಹೀಮೋಗ್ಲೋಬಿನ್ ಅಣುಗಳಿರುತ್ತವೆ. ಪ್ರತಿಯೊಂದು ಹೀಮೋಗ್ಲೋಬಿನ್ ಅಣುವೂ 4 ಆಕ್ಸಿಜನ್ ಅಣುಗಳನ್ನು ಸಾಗಿಸುತ್ತವೆ. ಹೀಗೆ, ಒಂದು ಕೆಂಪು ರಕ್ತಕಣ ಸುಮಾರು 100 ಕೋಟಿ ಆಕ್ಸಿಜನ್ ಅಣುಗಳನ್ನು ಹೊತ್ತೊಯ್ಯಬಲ್ಲದು. ಅಂದರೆ, ಶರೀರದಲ್ಲಿ ಯಾವುದೇ ಘಳಿಗೆಯಲ್ಲೂ ಸುಮಾರು 12 ಕೋಟಿ ಕೋಟಿ ಕೋಟಿ ಆಕ್ಸಿಜನ್ ಅಣುಗಳಿರುತ್ತವೆ (12 ರ ಮುಂದೆ 21 ಸೊನ್ನೆಗಳು). ಇದೊಂದು ರೀತಿಯಲ್ಲಿ ಊಹೆಗೂ ನಿಲುಕದ ಸಂಖ್ಯೆ!

ಬಿಳಿಯ ರಕ್ತಕಣಗಳ ಸಂಖ್ಯೆ ಸೀಮಿತ. ಅವುಗಳಲ್ಲಿ ಕೋಶಕೇಂದ್ರವಿದೆ. ಇದರಲ್ಲಿ ಮೂರು ಮುಖ್ಯ ಪ್ರಭೇದಗಳು; ಅವುಗಳ ಎಲ್ಲ ಉಪವಿಭಾಗಗಳೂ ಸೇರಿ 50ಕ್ಕೂ ಹೆಚ್ಚು ಬಗೆಯ ಕೋಶಗಳನ್ನು ಗುರುತಿಸಲಾಗಿದೆ. ಒಂದು ಮಿಲಿಲೀಟರ್ ರಕ್ತದಲ್ಲಿ ಸುಮಾರು 40-100 ಲಕ್ಷ ಬಿಳಿಯ ರಕ್ತಕಣಗಳು ಇರುತ್ತವೆ. ಕಾಯಿಲೆಗಳ ವಿರುದ್ಧ ಹೋರಾಡುವುದು ಇವುಗಳ ಮುಖ್ಯ ಕರ್ತವ್ಯ. ಹೀಗಾಗಿ, ಕಾಯಿಲೆಗಳ ವೇಳೆ ಇವುಗಳ ಸಂಖ್ಯೆ ವೃದ್ಧಿಸುತ್ತದೆ. ಹಾಗಾಗಿ, ರಕ್ತದಲ್ಲಿನ ಬಿಳಿಯ ರಕ್ತಕಣಗಳ ಸಂಖ್ಯೆಯನ್ನು ಲೆಕ್ಕ ಹಾಕಿದರೆ ಶರೀರದಲ್ಲಿ ಕಾಯಿಲೆ ಇರುವಿಕೆ ತಿಳಿಯುತ್ತದೆ. ಅದರ ಜೊತೆಗೆ ಮಾನಸಿಕ ಒತ್ತಡ, ಕ್ಯಾನ್ಸರ್, ಅಲರ್ಜಿ ಸಮಸ್ಯೆಗಳು, ಔಷಧ ಸೇವನೆ ಮೊದಲಾದ ವೇಳೆ ಬಿಳಿಯ ರಕ್ತಕಣಗಳ ಸಂಖ್ಯೆ ಏರುಪೇರಾಗುತ್ತದೆ.

ಒಡೆದ, ಬಿರುಕು ಬಿಟ್ಟ ರಕ್ತನಾಳಗಳನ್ನು ರಿಪೇರಿ ಮಾಡುವುದು, ರಕ್ತ ಹೆಪ್ಪುಗಟ್ಟುವುದನ್ನು ಪ್ರಚೋದಿಸುವುದು ಪ್ಲೇಟ್ಲೆಟ್ ಕೋಶಗಳ ಮುಖ್ಯ ಕೆಲಸ. ಕೆಂಪು ರಕ್ತಕಣಗಳಂತೆಯೇ ಇವುಗಳಿಗೂ ಕೋಶಕೇಂದ್ರವಿಲ್ಲ; ವಿಭಜನೆಯಿಲ್ಲ. ಹೆಚ್ಚೆಂದರೆ 8-9 ದಿನಗಳ ಕಾಲ ಇವು ಕೆಲಸ ಮಾಡುತ್ತವೆ. ಆದರೆ ಇಷ್ಟು ಅವಧಿಗೆ ಮುನ್ನವೇ ಅವು ಉಪಯೋಗಿಸಲ್ಪಟ್ಟು ಖರ್ಚಾಗಿ ಹೋಗುತ್ತವೆ. ಒಂದು ಮಿಲಿಲೀಟರ್ ರಕ್ತದಲ್ಲಿ 15-45 ಕೋಟಿ ಪ್ಲೇಟ್ಲೆಟ್ ಕೋಶಗಳಿರುತ್ತವೆ. ದಿನವೊಂದಕ್ಕೆ ಶರೀರದಲ್ಲಿ ಸುಮಾರು ಹತ್ತುಸಾವಿರ-ಕೋಟಿ ಪ್ಲೇಟ್ಲೆಟ್ ಗಳು ಉತ್ಪತ್ತಿಯಾಗುತ್ತವೆ.

ರಕ್ತದಿಂದ ಕೋಶಗಳನ್ನು ತೆಗೆದರೆ ಉಳಿಯುವ ನುಸುಹಳದಿ ಬಣ್ಣದ ದ್ರವವನ್ನು ಪ್ಲಾಸ್ಮಾ ಎನ್ನಲಾಗುತ್ತದೆ. ಇದು ರಕ್ತದ ದ್ರವಭಾಗ. ರಕ್ತದ ಶೇಕಡಾ 55 ಭಾಗ ಪ್ಲಾಸ್ಮಾ; ಉಳಿದದ್ದು ಕೋಶಗಳು. ಅಂದರೆ, ಶರೀರದಲ್ಲಿ ಸುಮಾರು 3 ಲೀಟರ್ನಷ್ಟು ಪ್ಲಾಸ್ಮಾ ಇರುತ್ತದೆ. ಶರೀರಕ್ಕೆ ಅಗತ್ಯವಾದ ಹಲವಾರು ಪ್ರೋಟೀನುಗಳು, ಗ್ಲುಕೋಸ್, ಖನಿಜಾಂಶಗಳು, ಹಾರ್ಮೋನುಗಳು, ರಕ್ತವನ್ನು ಹೆಪ್ಪುಗಟ್ಟಿಸುವ ಅಂಶಗಳು ಇರುತ್ತವೆ. ರಕ್ತವನ್ನು ಹೆಪ್ಪುಗಟ್ಟಿಸುವ ಅಂಶಗಳನ್ನು ಪ್ಲಾಸ್ಮಾದಿಂದ ತೆಗೆದರೆ ಉಳಿಯುವ ದ್ರವಾಂಶವನ್ನು ಸೀರಮ್ ಎನ್ನುತ್ತಾರೆ. ಪ್ಲಾಸ್ಮಾದ ಶೇಕಡಾ 95 ಭಾಗ ನೀರು. ಅದರ ಉಳಿದ ಎಲ್ಲ ಅಂಶಗಳೂ ಸೇರಿ ಶೇಕಡಾ 5. ಹೀಗಾಗಿಯೇ ಪ್ಲಾಸ್ಮಾದ ಸಾಂದ್ರತೆ ಸರಿಸುಮಾರು ನೀರಿನಷ್ಟೇ ಇರುತ್ತದೆ (1.025). ಅನೇಕ ಕಾಯಿಲೆಗಳಲ್ಲಿ ಪ್ಲಾಸ್ಮಾದ ಬಣ್ಣ ಬದಲಾಗಿರುತ್ತದೆ; ಕಾಯಿಲೆಯನ್ನು ಅಂದಾಜಿಸಲು ಇದು ಸಹಕಾರಿ.  

ಶರೀರದಲ್ಲಿನ ದ್ರವವನ್ನು ಎರಡು ಮುಖ್ಯ ಭಾಗಗಳನ್ನಾಗಿ ವಿಂಗಡಿಸಬಹುದು – ಜೀವಕೋಶಗಳ ಒಳಗೆ ಇರುವ ದ್ರವ ಮತ್ತು ಜೀವಕೋಶಗಳ ಹೊರಗೆ ಇರುವ ದ್ರವ. ಈ ಎರಡನೆಯ ಭಾಗವನ್ನು ರಕ್ತನಾಳಗಳ ಒಳಗೆ ಮತ್ತು ಹೊರಗೆ ಇರುವ ದ್ರವಗಳು ಎನ್ನುವ ಮತ್ತೆರಡು ವಿಭಾಗಗಳನ್ನಾಗಿಸಬಹುದು. ಇದರ ಪೈಕಿ ರಕ್ತನಾಳಗಳ ಒಳಗೆ ಇರುವ ಶರೀರದ ದ್ರವಾಂಶ ಪ್ಲಾಸ್ಮಾ. ಶರೀರದ ಇತರ ಭಾಗದಲ್ಲಿ ನೀರಿನ ಅಂಶ ಕಡಿಮೆಯಾದಾಗ ಪ್ಲಾಸ್ಮಾದಿಂದ ಸ್ವಲ್ಪ ಭಾಗ ನೀರಿನ ಅಂಶ ರಕ್ತನಾಳಗಳಿಂದ ಹೊರಗೆ ಹರಿದು, ಸಹಾಯ ಮಾಡಬಲ್ಲದು. ಆದರೆ ಇಂತಹ ಪ್ರಮಾಣಕ್ಕೆ ಮಿತಿ ಇರುತ್ತದೆ.

ಪ್ಲಾಸ್ಮಾದ ಪ್ರೋಟೀನ್ಗಳು ಶರೀರದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಲ್ಬ್ಯುಮಿನ್ ಎನ್ನುವುದು ಇಲ್ಲಿ ಕಾಣುವ ಅತಿ ಹೆಚ್ಚು ಪ್ರಮಾಣದ ಪ್ರೋಟೀನ್. ಒಂದು ಲೀಟರ್ ಪ್ಲಾಸ್ಮಾದಲ್ಲಿ 35-50 ಗ್ರಾಂ ಆಲ್ಬ್ಯುಮಿನ್ ಇರುತ್ತದೆ. ಯಕೃತ್ತಿನಲ್ಲಿ ಉತ್ಪತ್ತಿಯಾಗುವ ಆಲ್ಬ್ಯುಮಿನ್ ನೀರಿನಲ್ಲಿ ಕರಗುವಂತಹದ್ದು. ಸುಮಾರು 67 ಕಿಲೋಡಾಲ್ಟನ್ ತೂಕದ ಆಲ್ಬ್ಯುಮಿನ್ನಲ್ಲಿ 585 ಅಮೈನೊ-ಆಮ್ಲಗಳಿವೆ. ಇದು ಯಕೃತ್ತಿನಲ್ಲಿ ಉತ್ಪತ್ತಿಯಾಗಿ, ಪ್ಲಾಸ್ಮಾ ಸೇರುತ್ತದೆ. ಹಲವಾರು ಹಾರ್ಮೋನುಗಳನ್ನು ಹೊತ್ತೊಯ್ಯುವ ಪ್ರಮುಖ ಜವಾಬ್ದಾರಿ ಇದರದ್ದು. ಇದರ ಜೊತೆಗೆ ಮೇದಸ್ಸಿನ ಆಮ್ಲಗಳು, ಔಷಧಗಳು, ಕ್ಯಾಲ್ಸಿಯಂ, ಬಿಲಿರುಬಿನ್ ಮೊದಲಾದುವುಗಳನ್ನು ಕೂಡ ಹೊತ್ತು, ಅವುಗಳ ಗಮ್ಯಸ್ಥಾನಕ್ಕೆ ತಲುಪಿಸುತ್ತವೆ.

ಪ್ಲಾಸ್ಮಾ ಪ್ರೋಟೀನುಗಳ ಪೈಕಿ ಎರಡನೆಯ ಸ್ಥಾನ ಗ್ಲಾಬ್ಯುಲಿನ್ ಪಂಗಡದ್ದು. ಇವುಗಳ ಪ್ರಮಾಣ ಒಂದು ಲೀಟರ್ ಪ್ಲಾಸ್ಮಾಗೆ 25-35 ಗ್ರಾಂ. ಇವುಗಳಲ್ಲಿ ಮೂರು ಪ್ರಭೇದಗಳಿವೆ. ಮೊದಲನೆಯ ಆಲ್ಫಾ ಪ್ರವರ್ಗ ಯಕೃತ್ತಿನಲ್ಲಿ ಉತ್ಪತ್ತಿಯಾಗಿ, ಶರೀರದಲ್ಲಿ ಖನಿಜಗಳ ಸಾಗಣೆಗೆ ನೆರವಾಗುತ್ತದೆ. ಎರಡನೆಯ ಬೀಟಾ ಪ್ರವರ್ಗ ಮೇದಸ್ಸಿನ ಜೊತೆಗೂಡಿ, ಶರೀರದ ಸ್ಟೀರಾಯ್ಡುಗಳ ಉತ್ಪಾದನೆಗೆ, ಕೋಶಗಳ ಹೊರ ಆವರಣದ ತಯಾರಿಗೆ ಸಹಾಯ ಮಾಡುತ್ತದೆ. ಮೂರನೆಯ ಗ್ಯಾಮಾ ಪ್ರವರ್ಗವನ್ನು ಪ್ರತಿಕಾಯಗಳು ಎಂದೂ ಕರೆಯಲಾಗುತ್ತದೆ. ಇದು ಶರೀರದ ರಕ್ಷಕ ವ್ಯವಸ್ಥೆಯ ಭಾಗವಾಗಿ, ರೋಗಗಳ ವಿರುದ್ಧದ ಹೊಡೆದಾಟದಲ್ಲಿ ಕೆಲಸ ಮಾಡುತ್ತದೆ.

ಪ್ಲಾಸ್ಮಾ ಪ್ರೋಟೀನುಗಳಲ್ಲಿ ಮೂರನೆಯ ಭಾಗ ಯಕೃತ್ತಿನಲ್ಲಿ ತಯಾರಾಗುವ ಫಿಬ್ರಿನೋಜೆನ್ ಎನ್ನುವ ಸಕ್ಕರೆ-ಮಿಶ್ರಿತ ಪ್ರೋಟೀನ್. ಇದು ರಕ್ತ ಹೆಪ್ಪುಗಟ್ಟುವಿಕೆಯ ಪ್ರಮುಖ ಪಾತ್ರಧಾರಿ. ಒಂದು ಲೀಟರ್ ಪ್ಲಾಸ್ಮಾದಲ್ಲಿ ಇದರ ಭಾಗ 1.5-3 ಗ್ರಾಂ. ಇದರ ಜೊತೆಗೆ ಪ್ಲಾಸ್ಮಾದಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುವ ಇತರ ಅಂಶಗಳೂ ಇರುತ್ತವೆ. ಒಟ್ಟು 12 ಬಗೆಯ ಇಂತಹ ಅಂಶಗಳನ್ನು ಗುರುತಿಸಲಾಗಿದೆ. ಇದರ ಜೊತೆಗೆ ಇನ್ನೂ 20 ರಾಸಾಯನಿಕಗಳನ್ನು ರಕ್ತ ಹೆಪ್ಪುಗಟ್ಟಿಸುವ ಮತ್ತು ಅದನ್ನು ಕರಗಿಸುವ ಪ್ರಕ್ರಿಯೆಯ ಸಹಕಾರಿಗಳೆಂದು ಪತ್ತೆ ಮಾಡಲಾಗಿದೆ.

ಒಂದು ಕಾಲದಲ್ಲಿ ರಕ್ತವನ್ನು ದಾನಿಯಿಂದ ಪಡೆದು, ಗುಂಪು ಹೊಂದುವ ರೋಗಿಗೆ ಇಡಿಯಾಗಿ ನೀಡುವುದಿತ್ತು. ಈಗ ಆ ಪದ್ದತಿ ಬಹಳ ಅಪರೂಪ. ಈಗ ದಾನಿಯಿಂದ ಪಡೆದ ರಕ್ತವನ್ನು ಹಲವಾರು ಬಗಗಳಲ್ಲಿ ವಿಂಗಡಣೆ ಮಾಡಬಹುದು. ರಕ್ತಹೀನತೆಯ ರೋಗಿಗಳಿಗೆ ಪ್ಲಾಸ್ಮಾ ಅಗತ್ಯ ಇರುವುದಿಲ್ಲ. ಅಂತಹವರಿಗೆ ಕೇವಲ ಕೆಂಪು ರಕ್ತಕಣಗಳನ್ನು ಮಾತ್ರ ನೀಡಬಹುದು. ಅಂತೆಯೇ, ಸಾಂದ್ರಗೊಳಿಸಿದ ಪ್ಲೇಟ್ಲೆಟ್ ದ್ರವವನ್ನೂ ನೀಡಲು ಸಾಧ್ಯ. ಹೀಗೆ ರಕ್ತಕಣಗಳನ್ನು ವಿಂಗಡಿಸಿದ ನಂತರ ಉಳಿಯುವ ಪ್ಲಾಸ್ಮಾವನ್ನು ಹಲವಾರು ರೋಗಗಳ ಆಂಗಿಕ ಚಿಕಿತ್ಸೆಯಾಗಿ ಬಳಸಬಹುದು. ರಕ್ತದಲ್ಲಿ ದ್ರವಾಂಶ ಕಡಿಮೆಯಾದವರಿಗೆ, ಕಾಯಿಲೆಯ ವೇಳೆ ರಕ್ತದ ಪ್ರೋಟೀನ್ ಕಳೆದುಕೊಂಡವರಿಗೆ, ರಕ್ತವನ್ನು ಹೆಪ್ಪುಗಟ್ಟಿಸುವ ಅಂಶಗಳ ಕೊರತೆ ಇರುವವರಿಗೆ ಪ್ಲಾಸ್ಮಾ ಮರುಪೂರಣ ಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಅತ್ಯಗತ್ಯ ಔಷಧಗಳ ಪಟ್ಟಿಯಲ್ಲಿ ಪ್ಲಾಸ್ಮಾ ಉಲ್ಲೇಖವಿದೆ. ದಾನಿಯ ರಕ್ತದಿಂದ ಪ್ರತ್ಯೇಕಿಸಿ ತೆಗೆದ ಪ್ಲಾಸ್ಮಾವನ್ನು ಶೈತ್ಯೀಕರಣಗೊಳಿಸಿ, ಮೈನಸ್ 30 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಕಾದಿಟ್ಟು, ಸುಮಾರು ಒಂದು ವರ್ಷ ಕಾಲದವರೆಗೆ ಬಳಕೆ ಮಾಡಬಹುದು. ಹೀಗೆ ಶೈತ್ಯೀಕರಿಸಿದ ಪ್ಲಾಸ್ಮಾವನ್ನು ಸಾಮಾನ್ಯ ತಾಪಮಾನಕ್ಕೆ ತಂದ ನಂತರ ಕೂಡಲೇ ಬಳಸಬೇಕು; ಮತ್ತೊಮ್ಮೆ ಶೈತ್ಯೀಕರಣ ಮಾಡಲಾಗದು. ರಕ್ತದ ಹೆಪ್ಪುಗಟ್ಟುವಿಕೆಗೆ ಕಾರಣವಾದ ಪ್ರಮುಖ ಅಂಶವೊಂದನ್ನು ಮಾತ್ರ ಪ್ಲಾಸ್ಮಾದಿಂದ ಪ್ರತ್ಯೇಕಿಸಿ, ಅದನ್ನು ಅಗತ್ಯ ರೋಗಿಗಳಿಗೆ ಮರುಪೂರಣ ಮಾಡುವ ವ್ಯವಸ್ಥೆಯೂ ಇದೆ. ರಕ್ತದಾನಿಗಳು ಈಗ ಕೇವಲ ಪ್ಲಾಸ್ಮಾವನ್ನು ಮಾತ್ರ ದಾನ ಮಾಡಲು ಕೂಡ ಸಾಧ್ಯ. ಅಂದರೆ, ದಾನಿಯ ರಕ್ತವನ್ನು ತೆಗೆದು, ಅದರಿಂದ ಪ್ಲಾಸ್ಮಾವನ್ನು ಪ್ರತ್ಯೇಕಿಸಿ, ರಕ್ತಕಣಗಳನ್ನು ಪುನಃ ದಾನಿಗೆ ವಾಪಸ್ ನೀಡುವ ವ್ಯವಸ್ಥೆ. ಸಾಮಾನ್ಯ ರಕ್ತದಾನಿಯಿಂದ 300 ಮಿಲಿಲೀಟರ್ ರಕ್ತವನ್ನು ಒಮ್ಮೆಗೆ ಪಡೆಯಲಾಗುತ್ತದೆ. ಆದರೆ, ಕೇವಲ ಪ್ಲಾಸ್ಮಾವನ್ನು ಮಾತ್ರ ನೀಡುವ ದಾನಿಯಿಂದ ಒಂದು ಬಾರಿಗೆ ಸುಮಾರು ಒಂದು ಲೀಟರ್ ಪ್ಲಾಸ್ಮಾವನ್ನು ಪಡೆಯಲು ಸಾಧ್ಯ. ಇದರ ಬದಲಿಗೆ ಅಷ್ಟು ಪ್ರಮಾಣದ ಖನಿಜಯುಕ್ತ ದ್ರವವನ್ನು ದಾನಿಗೆ ಮರುಪೂರಣ ಮಾಡಬಹುದು. ಪ್ಲಾಸ್ಮಾ ದಾನಿಗಳ ಶರೀರದಲ್ಲಿ 24 ತಾಸುಗಳಲ್ಲಿ ಸಹಜ ಪ್ಲಾಸ್ಮಾ ತಯಾರಾಗಿರುತ್ತದೆ. ಸಾಮಾನ್ಯ ರಕ್ತದಾನಿಗೆ ಎರಡು ರಕ್ತದಾನಗಳ ಸುಮಾರು 2-3 ತಿಂಗಳ ಅಂತರ ಇರಬೇಕಾಗುತ್ತದೆ. ಆದರೆ ಕೇವಲ ಪ್ಲಾಸ್ಮಾ ದಾನವನ್ನು ಮಾತ್ರ ಮಾಡುವವರು ಒಂದು ವಾರಕ್ಕೆ ಒಮ್ಮೆಯಂತೆ ಕೂಡ ಮಾಡಲು ಸಾಧ್ಯ.

ಶರೀರದ ರಕ್ಷಕ ವ್ಯವಸ್ಥೆಗೆ ಸಂಬಂಧಿಸಿದ ಕೆಲವು ಕಾಯಿಲೆಗಳು ಇರುತ್ತವೆ. ಇದರಲ್ಲಿ ಕಾಯಿಲೆಗಳ ಉಲ್ಬಣಕ್ಕೆ ಕಾರಣವಾದ ಕೆಲವು ರಾಸಾಯನಿಕ ಸಂಯುಕ್ತಗಳು ರೋಗಿಯ ಪ್ಲಾಸ್ಮಾದಲ್ಲಿ ಹರಿದಾಡುತ್ತಿರುತ್ತವೆ. ಇಂತಹ ಸಂದರ್ಭಗಳಲ್ಲಿ ರೋಗಿಯ ರಕ್ತದಲ್ಲಿನ ಪ್ಲಾಸ್ಮಾವನ್ನು ಸೋಸಿ, ಕಾಯಿಲೆಗೆ ಕಾರಣವಾಗಬಲ್ಲ ಅಂಶಗಳನ್ನು ನಿವಾರಿಸಿ, ಚಿಕಿತ್ಸೆ ನೀಡಬಹುದು. ಇದನ್ನು ಪ್ಲಾಸ್ಮಾಫೆರೆಸಿಸ್ ಎಂದು ಕರೆಯುತ್ತಾರೆ. ರೋಗಿಯ ಪ್ಲಾಸ್ಮಾವನ್ನು ಸೋಸಿ, ಕಾಯಿಲೆಕಾರಕ ಅಂಶಗಳನ್ನು ನಿವಾರಿಸಿ, ಅದನ್ನೇ ಮರುಪೂರಣ ಮಾಡಬಹುದು. ಇಲ್ಲವೇ, ರೋಗಿಯ ರಕ್ತದಲ್ಲಿನ ಎಲ್ಲ ಪ್ಲಾಸ್ಮಾವನ್ನು ಪ್ರತ್ಯೇಕಿಸಿ, ಅದನ್ನು ಹೊರ ಹಾಕಿ, ಅದರ ಬದಲಿಗೆ ದಾನಿಯ ಪ್ಲಾಸ್ಮಾ ನೀಡಿ ಮರುಪೂರಣ ಮಾಡಬಹುದು. ಹಲವಾರು ಕ್ಲಿಷ್ಟಕರ ಕಾಯಿಲೆಗಳ ಚಿಕಿತ್ಸೆಯಲ್ಲಿ ಈ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.

ಪ್ಲಾಸ್ಮಾದ ಮತ್ತೊಂದು ಅಂಶ ಖನಿಜಗಳು. ಇವುಗಳಲ್ಲಿ ಅಯಾನುಗಳ ಮೂಲಕ ವಿದ್ಯುದಾವೇಶವನ್ನು ಹೊಮ್ಮಿಸಬಲ್ಲ ಸೋಡಿಯಂ, ಪೊಟಾಸಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂ ಮೊದಲಾದ ಖನಿಜಾಂಶಗಳಿರುತ್ತವೆ. ಪ್ರತಿಯೊಂದು ಜೀವಕೋಶದ ಹೊರ ಆವರಣದಲ್ಲಿ ಬಾಗಿಲುಗಳು ಇರುತ್ತವೆ. ಇಂತಹ ಬಾಗಿಲುಗಳನ್ನು ತೆರೆಯುವ ಮತ್ತು ಮುಚ್ಚುವ ಮೂಲಕ ಜೀವಕೋಶಗಳಲ್ಲಿನ ಅಯಾನುಗಳ ಮಟ್ಟ ಅದರ ಹೊರಗಿನ ದ್ರವದ ಮಟ್ಟಕ್ಕಿಂತಲೂ ಭಿನ್ನವಾಗಿರುವಂತೆ ವ್ಯವಸ್ಥೆಯಿದೆ. ಇಂತಹ ವ್ಯತ್ಯಾಸದಿಂದಲೇ ಜೀವಕೋಶಗಳ ವಿದ್ಯುದಾವೇಶವೂ ನಿರ್ಧಾರವಾಗುತ್ತದೆ. ಇಂತಹ ಅಯಾನುಗಳ ಖಜಾನೆಯಂತೆ ಪ್ಲಾಸ್ಮಾ ವರ್ತಿಸುತ್ತದೆ. ಶರೀರದ ಜೀವಕೋಶಗಳ ಅಯಾನುಗಳ ಮಟ್ಟದಲ್ಲಿ ಏರುಪೇರಾದರೆ, ಅದು ಪ್ಲಾಸ್ಮಾದಲ್ಲಿನ ಅಯಾನುಗಳ ಮಟ್ಟವನ್ನು ಬದಲಾಯಿಸುತ್ತದೆ. ಜೀವಕೋಶಗಳ ಒಳಗಿನ ಅಯಾನುಗಳನ್ನು ಲೆಕ್ಕ ಹಾಕುವುದು ಆಚರಣೆಯ ದೃಷ್ಟಿಯಿಂದ ಬಹಳ ಕಷ್ಟ. ಆದರೆ, ಪ್ಲಾಸ್ಮಾದಿಂದ ಸೀರಮ್ ಅನ್ನು ಪಡೆದು, ಅದರಲ್ಲಿ ಅಯಾನುಗಳ ಮಟ್ಟವನ್ನು ಲೆಕ್ಕ ಹಾಕುವುದು ಸುಲಭ. ಹೀಗಾಗಿ, ಶರೀರದ ಅಯಾನುಗಳ ಪರಿಸ್ಥಿತಿಗೆ ಪ್ಲಾಸ್ಮಾ ಕನ್ನಡಿ ಹಿಡಿಯುತ್ತದೆ. ಹಲವಾರು ಕಾಯಿಲೆಗಳ ಪತ್ತೆಗೆ (ಅದರಲ್ಲೂ ಮೂತ್ರಪಿಂಡಗಳ ಸಮಸ್ಯೆಗಳ ನಿರ್ಧಾರಕ್ಕೆ), ಚಿಕಿತ್ಸೆಗಳ ಆಯ್ಕೆಗಳಿಗೆ, ನೀಡುತ್ತಿರುವ ಚಿಕಿತ್ಸೆ ಫಲಕಾರಿ ಆಗುತ್ತಿದೆಯೇ ಇಲ್ಲವೇ ಎಂಬ ಆಲೋಚನೆಗಳಿಗೆ ಸೀರಮ್ ಅಯಾನುಗಳ ಮಟ್ಟವನ್ನು ಪರೀಕ್ಷಿಸುವುದು ಬಹಳ ಸಹಕಾರಿ.

ಶರೀರದ ನಿರ್ನಾಳ ಗ್ರಂಥಿಗಳು ಉತ್ಪಾದಿಸುವ ಹಾರ್ಮೋನುಗಳು ಸೀದಾ ಪ್ಲಾಸ್ಮಾಗೆ ಇಳಿಯುತ್ತವೆ. ಪ್ಲಾಸ್ಮಾದಲ್ಲಿನ ಪ್ರೋಟೀನುಗಳ ಸವಾರಿ ಮಾಡುತ್ತಾ ಹಾರ್ಮೋನುಗಳು ತಮ್ಮ ಗಮ್ಯವನ್ನು ತಲುಪುತ್ತವೆ. ಇದಕ್ಕಾಗಿಯೇ ವಿಶೇಷ ಬಗೆಯ ಪ್ರೋಟೀನುಗಳು ಪ್ಲಾಸ್ಮಾದಲ್ಲಿ ಇವೆ. ಇಂತಹ ಹಾರ್ಮೋನುಗಳ ಮಟ್ಟವನ್ನು ಪ್ಲಾಸ್ಮಾದ ಪರೀಕ್ಷೆಯ ಮೂಲಕ ತಿಳಿದು, ನಿರ್ನಾಳ ಗ್ರಂಥಿ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ನಿರ್ಧರಿಸಬಹುದು. ಸಮಸ್ಯೆ ಇದ್ದರೆ ಆಯಾ ಹಾರ್ಮೋನುಗಳ ಚಿಕಿತ್ಸೆ ನೀಡಿ, ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು. ಮಧುಮೇಹಿಗಳಲ್ಲಿ ರಕ್ತವನ್ನು ಪರೀಕ್ಷಿಸಿ, ಸಕ್ಕರೆಯ ಅಂಶವನ್ನು ತಿಳಿದು, ಅದಕ್ಕೆ ಸರಿಯಾಗಿ ಇನ್ಸುಲಿನ್ ಚಿಕಿತ್ಸೆ ಮಾಡುವ ಮೂಲಕ ಸಮಸ್ಯೆಯನ್ನು ಹತೋಟಿಯಲ್ಲಿ ಇಡುವುದು ಬಹುತೇಕ ಎಲ್ಲರೂ ಅರಿತಿರುವ ಸಂಗತಿ.

ಒಟ್ಟಿನಲ್ಲಿ ರಕ್ತ ಎನ್ನುವುದು ಅಚ್ಚರಿಗಳ ಗಣಿ. ಅದರ ಗಣಿತವನ್ನು ಅರಿಯುವುದು ರಕ್ತವನ್ನು, ತನ್ಮೂಲಕ ಇಡೀ ಶರೀರವನ್ನು ಅರ್ಥ ಮಾಡಿಕೊಳ್ಳುವ ಅತ್ಯುತ್ತಮ ವಿಧಾನ.

-------------------- 

#ಮಾನವ_ದೇಹದ_ಗಣಿತ

ಜುಲೈ 2025 ತಿಂಗಳ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ.

ಜುಲೈ 2025 ತಿಂಗಳ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಕೊಂಡಿ: https://www.flipbookpdf.net/web/site/96999c7307f2bff9f7a4b91a6e94f256c5281648FBP32051436.pdf.html?fbclid=IwY2xjawNpTpRleHRuA2FlbQIxMABicmlkETFtR0J5YmZnM1p3TXRDQ0g1AR5LO8UER4NEIWi_HQDVjeVYloFEV-UN09lbBjXfUbxECYAPaJFw_0lSZae0RQ_aem_23UKJlhpAMZeN6qxceswYw