ಭಾನುವಾರ, ಅಕ್ಟೋಬರ್ 8, 2023


 ಜಠರದ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

ಎಲ್ಲ ದಾನಗಳಿಗಿಂತಲೂ ಅನ್ನದಾನವೇ ಶ್ರೇಷ್ಟ. ವಸ್ತು, ವಾಹನ, ಸ್ಥಾನ, ಸಮ್ಮಾನ, ಪ್ರಾಣಿ, ಧನ, ಕನಕ ದಾನಗಳನ್ನು ಪಡೆಯುವ ಯಾಚಕ ಇನ್ನಷ್ಟು ಇದ್ದರೂ ಲೇಸು ಎನ್ನುತ್ತಾನೆ. ಇಂತಹುವುಗಳನ್ನು ಎಷ್ಟೇ ನೀಡಿದರೂ ಯಾಚಕನಿಗೆ ದಾನದ ಪ್ರಮಾಣದ ಬಗ್ಗೆ ತೃಪ್ತಿ ಇರುವುದಿಲ್ಲ. ಆದರೆ ಅನ್ನದಾನದಲ್ಲಿ ಮಾತ್ರ ಯಾಚಕನ ಬಾಯಿಂದ ಸಾಕು; ತೃಪ್ತಿಯಾಯಿತು ಎನ್ನುವ ಮಾತು ಬರುತ್ತದೆ. ಅದಕ್ಕಿಂತ ಮಿಗಿಲು ಯಾವುದೂ ಇಲ್ಲಎನ್ನುವ ಮಾತುಗಳನ್ನು ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ನಮ್ಮ ಬೇಕು-ಬೇಡಗಳನ್ನು ನಿರ್ವಹಿಸುವ ಮಿದುಳಿಗೆ ಸಾಕು ಎನ್ನುವ ಸಂಕೇತಗಳನ್ನು ಕಳಿಸುವಲ್ಲಿ ಮೊದಲ ಸ್ಥಾನ ಜಠರದ್ದು. ಜಠರಕ್ಕೆ ಹೊಟ್ಟೆ ಎಂದು ಸಾಮಾನ್ಯರ ಹೆಸರು. ಆದರೆ ಪ್ರತೀತಿಯಲ್ಲಿ ಜಠರ ಮತ್ತು ಕರುಳುಗಳನ್ನು ಹೊಂದಿರುವ ಇಡೀ ಭಾಗವನ್ನೂ ಕೆಲವರು ಹೊಟ್ಟೆ ಎಂದೇ ಗುರುತಿಸುತ್ತಾರೆ. ಈ ಗೊಂದಲದ ನಿವಾರಣೆಗಾಗಿ ಹೊಟ್ಟೆ ಎನ್ನುವ ಪದದ ಬದಲಿಗೆ ಜಠರ ಮತ್ತು ಕರುಳು ಎನ್ನುವ ಪ್ರತ್ಯೇಕ ಪದಗಳನ್ನು ಬಳಸಲಾಗುತ್ತದೆ.  

ಬಾಯಿಂದ ಆರಂಭವಾಗುವ ನಮ್ಮ ಆಹಾರ ವಿಲೇವಾರಿ ಅಂಗಗಳ ಸರಣಿ ಗಂಟಲಕುಳಿ (pharynx), ಅನ್ನನಾಳಗಳ ಮೂಲಕ ಜಠರವನ್ನು ತಲುಪಿ, ಅಲ್ಲಿಂದ ಸಣ್ಣ ಕರುಳು, ದೊಡ್ಡ ಕರುಳಿನ ಮೂಲಕ ಮಲದ್ವಾರವನ್ನು ತಲುಪುತ್ತದೆ. ಈ ಸರಣಿಯ ಮೊದಲ ನಿಲ್ದಾಣ ಜಠರ. ಅನ್ನನಾಳದ ಕೆಳತುದಿಯಿಂದ ಸಣ್ಣ ಕರುಳಿನ ಆರಂಭದವರೆಗೆ ಇದರ ಹರಹು. ಎದೆಯ ಭಾಗವನ್ನು ದೇಹದ ಕೆಳಗಿನ ಭಾಗದಿಂದ ಪ್ರತ್ಯೇಕಿಸುವ ವಪೆ (diaphragm) ಎನ್ನುವ ಮಾಂಸದ ಹಾಳೆಗೆ ಹೊಂದಿಕೊಂಡಂತೆ ಎಡಭಾಗದಲ್ಲಿ ಜಠರದ ಸ್ಥಾನ. ಎಡದಿಂದ ಮೊದಲಾಗಿ, ಶರೀರದ ಮಧ್ಯ ರೇಖೆಯನ್ನು ತುಸುವೇ ದಾಟಿ ಬಲಗಡೆಗೆ ಹೆಜ್ಜೆಯಿಡುವ ಜಠರ ಅಲ್ಲಿಗೆ ಕೊನೆಯಾಗಿ ಸಣ್ಣಕರುಳನ್ನು ಸೇರುತ್ತದೆ. ಮಾವಿನಕಾಯಿಯ ರಚನೆಯಂತೆ ಇಂಗ್ಲೀಷಿನ J ಅಕ್ಷರದ ರೀತಿಯಲ್ಲಿರುವ ಜಠರದ ಆಕಾರವನ್ನು ಉದ್ದುದ್ದವಾಗಿ ಸೀಳಿರುವ ಸಿಹಿಗುಂಬಳದ ತುಂಡಿಗೆ ಹೋಲಿಸಬಹುದು. ಜಠರದ ಅಡಿಭಾಗದ ಬದಿಯ ಉದ್ದ ಸುಮಾರು 30 ಸೆಂಟಿಮೀಟರ್.

ಮಾನವ ದೇಹ ಶಾಸ್ತ್ರಜ್ಞರು ಜಠರವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ. ಅನ್ನನಾಳ ಮುಂದುವರೆದು ಜಠರ ಆರಂಭವಾಗುವ ಭಾಗಕ್ಕೆ ಕಾರ್ಡಿಯಾ ಎಂದು ಹೆಸರು. ವಪೆಯ ಸಂಪರ್ಕಲ್ಲಿರುವ ಜಠರದ ಶಿರೋಭಾಗಕ್ಕೆ ಫಂಡಸ್ ಎನುತ್ತಾರೆ. ಆಹಾರವನ್ನು ಶೇಖರಿಸುವ ಜಠರದ ಬಹುತೇಕ ಮಧ್ಯಭಾಗವನ್ನು ಬಾಡಿ ಎನ್ನಬಹುದು. ಜಠರದ ಅಂತಿಮ ಭಾಗ ಮುಂದುವರೆದು ಸಣ್ಣ ಕರುಳನ್ನು ಸೇರುತ್ತದೆ. ಇದನ್ನು ಪೈಲೋರಸ್ ಎನುತ್ತಾರೆ. ಗ್ರೀಕ್ ಭಾಷೆಯಲ್ಲಿ ಪೈಲೋರಸ್ ಎಂದರೆ ಕಾವಲುಗಾರ. ಈ ಭಾಗದಲ್ಲಿರುವ ಬಲಶಾಲಿ ಮಾಂಸಪಟ್ಟಿಗಳು ಆಹಾರವನ್ನು ಸಣ್ಣಕರುಳಿಗೆ ತಳ್ಳಿ, ಅಲ್ಲಿಂದ ಅದು ಪುನಃ ಜಠರಕ್ಕೆ ವಾಪಸ್ ಬಾರದಂತೆ ಕಾಯುವುದರಿಂದ ಈ ಹೆಸರು. ಜಠರದ ಕಾಯಿಲೆಗಳ ತಜ್ಞರಿಗೆ ಅನಾರೋಗ್ಯ ಜಠರದ ಯಾವ ಪ್ರದೇಶದಲ್ಲಿದೆ ಎಂದು ಗುರುತಿಸುವುದಕ್ಕೆ ಈ ವಿಂಗಡಣೆ ಸಹಕಾರಿ. ಜಠರಕ್ಕೆ ಒಟ್ಟು ಐದು ರಕ್ತನಾಳಗಳು ಶುದ್ಧರಕ್ತವನ್ನು ಪೂರೈಸುತ್ತವೆ.

ಖಾಲಿ ಕೊಳವೆಯಂತಹ ರಚನೆಯ ಜಠರದ ಪ್ರತಿಯೊಂದು ಭಾಗದ ಗೋಡೆಯ ದಪ್ಪವೂ ಭಿನ್ನ. ಈ ಗೋಡೆಯ ಸರಾಸರಿ ದಪ್ಪ ಸುಮಾರು ಐದು ಮಿಲಿಮೀಟರ್. ಜಠರದ ಗೋಡೆಯಲ್ಲಿ ಐದು ಪದರಗಳಿವೆ. ಜಠರದ ಗೋಡೆಯ ಒಳಗಿನ ಭಾಗ ಅತ್ಯಂತ ನಯವಾದ ಲೋಳೆ ಪದರ ಹೊಂದಿದೆ. ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಈ ಲೋಳೆಪದರದ ಕೋಶಗಳಲ್ಲಿ ಸ್ಥಂಭಾಕಾರದ ರಚನೆಗಳಿರುತ್ತವೆ. ಲೋಳೆಪದರದ ಅಡಿಭಾಗದಲ್ಲಿ ಸಹಾಯಕ ಜೀವಕೋಶಗಳು, ಕೆಲವು ನರಗಳು ಇರುತ್ತವೆ. ಇದರ ಅಡಿಯಲ್ಲಿ ಜಠರದ ಬಲಶಾಲಿಯಾದ ಮೂರು ಪದರಗಳ ಮಾಂಸಪಟ್ಟಿಗಳಿವೆ. ಪ್ರತಿಯೊಂದು ಪದರದಲ್ಲೂ ಮಾಂಸಪಟ್ಟಿಗಳ ಎಳೆಗಳು ಬೇರೆ ಬೇರೆ ದಿಕ್ಕಿನಲ್ಲಿ ಹರಡುತ್ತವೆ. ಮೂರೂ ಪದರಗಳು ಒಟ್ಟಿಗೆ ಕೆಲಸ ಮಾಡಿ ಮೇಲಿನಿಂದ ಕೆಳಗಿನ ದಿಕ್ಕಿಗೆ ಸಂಕುಚಿಸಿದಾಗ ವೃತ್ತಾಕಾರವಾದ ಅಲೆಯ ನಿರ್ಮಾಣವಾಗಿ ಆಹಾರ ಕೆಳಗೆ ತಳ್ಳಲ್ಪಡುತ್ತದೆ. ಈ ಅಲೆಯನ್ನು ಪೆರಿಸ್ಟಾಲ್ಸಿಸ್ ಎನ್ನುತ್ತಾರೆ. ಈ ಅಲೆಗೆ ಕಾರಣವಾಗುವ ನರಗಳು ಎರಡನೆಯ ಮತ್ತು ಮೂರನೆಯ ಪದರಗಳ ನಡುವೆ ಇರುತ್ತವೆ. ಇಡೀ ಜೀರ್ಣಾಂಗದಲ್ಲಿ ಮೂರು ಪದರಗಳ ಮಾಂಸಪಟ್ಟಿಗಳು ಇರುವುದು ಜಠರದಲ್ಲಿ ಮಾತ್ರ. ಮಾಂಸಪಟ್ಟಿಗಳ ಅಡಿಭಾಗದಲ್ಲಿ ಎರಡು ನಯವಾದ ಆವರಣಗಳಿವೆ. ಇವು ಜಠರದ ಹೊರಭಾಗ ನಯವಾಗಿ ಇರುವಂತೆ ಕಾಯ್ದು, ಜಠರದ ಆಸುಪಾಸು ಇರುವ ಇತರ ಅಂಗಗಳಿಗೆ ಹಾನಿಯಾಗದಂತೆ ಕಾಪಾಡುತ್ತವೆ.

ನಾವು ಸೇವಿಸುವ ವಿಧವಿಧವಾದ ಆಹಾರವು ಕರುಳಿನಲ್ಲಿ ಜೀರ್ಣವಾಗಲು ಬೇಕಾದ ಪ್ರಮುಖ ತಯಾರಿ ಆಗುವುದು ಜಠರದಲ್ಲೇ. ಏಳು ಬಗೆಯ ಗ್ರಂಥಿಗಳು ಜಠರದಲ್ಲಿ ಸಕ್ರಿಯವಾಗಿವೆ. ಈ ಗ್ರಂಥಿಗಳಲ್ಲಿನ ವಿಶಿಷ್ಟ ಕೋಶಗಳು ಜಠರ ರಸವನ್ನು ಬಿಡುಗಡೆ ಮಾಡುತ್ತವೆ. ಇದರಲ್ಲಿ ಅತಿ ಮುಖ್ಯವಾದದ್ದು ಹೈಡ್ರೊಕ್ಲೋರಿಕ್ ಆಮ್ಲ. ಇದರಿಂದ ಜಠರದಲ್ಲಿ ಆಮ್ಲೀಯ ವಾತಾವರಣ ನಿರ್ಮಾಣವಾಗುತ್ತದೆ. ರಸಾಯನ ಶಾಸ್ತ್ರದ ಅತ್ಯಂತ ತೀಕ್ಷ್ಣ ಆಮ್ಲಗಳಲ್ಲಿ ಒಂದೆಂದು ಹೆಸರಾದ ಹೈಡ್ರೊಕ್ಲೋರಿಕ್ ಆಮ್ಲ ನಮ್ಮ ಆಹಾರದಲ್ಲಿ ಇರಬಹುದಾದ ಹಲವಾರು ರೋಗಕಾರಕ ಸೂಕ್ಷ್ಮಜೀವಿಗಳನ್ನು ನಿರ್ನಾಮ ಮಾಡುತ್ತದೆ. ಜೊತೆಗೆ, ಪ್ರೋಟೀನ್ ಪಚನಗೊಳಿಸುವ ಕಿಣ್ವಗಳನ್ನು ಪ್ರಚೋದಿಸುತ್ತದೆ. ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ ಒಂದು ಕ್ಷೌರದ ಬ್ಲೇಡ್ ಅನ್ನು ಕರಗಿಸಬಲ್ಲದು ಎಂದು ಅಂದಾಜಿದೆ. ಇಷ್ಟು ತೀಕ್ಷ್ಣ ಆಮ್ಲ ಜಠರವನ್ನೇ ಏಕೆ ಸುಟ್ಟುಹಾಕುವುದಿಲ್ಲ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಜಠರದಲ್ಲಿ ಶ್ಲೇಷ್ಮಯುಕ್ತ ಲೋಳೆಯಂತಹ ವಸ್ತು ಸತತವಾಗಿ ತಯಾರಾಗುತ್ತಲೇ ಇರುತ್ತದೆ. ಇದು ಜಠರದ ಗೋಡೆ ಮತ್ತು ಆಮ್ಲದ ನಡುವೆ ಕವಚದಂತಹ ಪದರವನ್ನು ನಿರ್ಮಾಣ ಮಾಡುತ್ತದೆ. ಇದರಿಂದ ಆಮ್ಲದ ಪ್ರಭಾವ ಜಠರದ ಗೋಡೆಯ ಮೇಲೆ ನೇರವಾಗಿ ಆಗುವುದಿಲ್ಲ. ಸಣ್ಣಕರುಳಿನ ಮತ್ತು ಮೇದೋಜೀರಕ ಗ್ರಂಥಿಗಳು ಕ್ಷಾರಯುಕ್ತ ಬೈಕಾರ್ಬೊನೇಟ್ ಲವಣವನ್ನು ಉತ್ಪತ್ತಿ ಮಾಡುತ್ತವೆ. ಜಠರದಿಂದ ಸಣ್ಣಕರುಳನ್ನು ಸೇರುವ ಆಮ್ಲವನ್ನು ಇದು ತಟಸ್ಥಗೊಳಿಸುತ್ತದೆ.

ಆಮ್ಲದ ಜೊತೆಗೆ ಜಠರ ಮತ್ತಷ್ಟು ಮಹತ್ವದ ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತದೆ. ಶರೀರದ ಡಿ.ಎನ್.ಎ. ನಿರ್ವಹಣೆಯಲ್ಲಿ ಪಾತ್ರ ವಹಿಸುವ ವಿಟಮಿನ್ ಬಿ-12 ದೇಹಕ್ಕೆ ಲಭ್ಯವಾಗಲು ಅತ್ಯಗತ್ಯವಾದ ರಾಸಾಯನಿಕವೊಂದು ಜಠರದಲ್ಲೇ ತಯಾರಾಗುತ್ತದೆ. ಇದು ಲಭ್ಯವಾಗದೇ ಹೋದಲ್ಲಿ ಅಪಾಯಕಾರಿ ರಕ್ತಹೀನತೆ ಎಂಬ ಕಾಯಿಲೆಯಿಂದ ಬಳಲುವಂತಾಗುತ್ತದೆ. ಇದರ ಜೊತೆಗೆ ಪ್ರೋಟೀನ್ ಪಚನಕ್ಕೆ ಕಾರಣವಾಗುವ ಮಹತ್ವದ ಕಿಣ್ವವೊಂದನ್ನು ಜಠರ ತಯಾರಿಸುತ್ತದೆ. ಈ ಎಲ್ಲ ಗ್ರಂಥಿಗಳೂ ಸೇರಿ ದಿನವೊಂದಕ್ಕೆ ಸುಮಾರು ಒಂದೂವರೆ ಲೀಟರ್ ಜಠರ ರಸವನ್ನು ಉತ್ಪತ್ತಿ ಮಾಡುತ್ತವೆ.

ಜಠರ ಮೂಲತಃ ಆಹಾರದ ಸಂಗ್ರಹಾಲಯ. ಪ್ರಾಣಿಗಳಲ್ಲಿ ಇದರ ಅಗತ್ಯವೇನು; ಜಠರವೇ ಇಲ್ಲದೆ ನೇರವಾಗಿ ಕರುಳು ಇರುವ ಪ್ರಾಣಿಗಳೂ ಇಲ್ಲವೇ ಎಂಬ ಪ್ರಶ್ನೆ ಸಹಜ. ಜೀವವಿಕಾಸದಲ್ಲಿ ಬೇಟೆಯಾಡುವ ಹಂತಕ ಪ್ರಾಣಿಗಳು ಪ್ರಬಲವಾದಾಗ, ದುರ್ಬಲ ಪ್ರಾಣಿಗಳಿಗೆ ಆಹಾರ ದಕ್ಕಿದಾಗ ಬೇಗಬೇಗನೆ ತಿಂದು, ಸಾವಕಾಶವಾಗಿ ಜೀರ್ಣಿಸಿಕೊಳ್ಳುವ ಅಗತ್ಯ ಒದಗಿತು. ಆಗ ಬೆಳವಣಿಗೆಯಾದದ್ದು ಜಠರ. ಹೀಗಾಗಿ, ಜಠರದಲ್ಲಿ ಆಹಾರ ಸಂಗ್ರಹಕ್ಕೆ ಸಾಕಷ್ಟು ಜಾಗವಿದೆ. ಜಠರದ ಒಳಭಾಗದಲ್ಲಿ ಲೋಳೆಪದರದ ಮಡಿಕೆಗಳಿವೆ. ಇವುಗಳನ್ನು ರೂಗೇ ಎನ್ನುತ್ತಾರೆ. ಜಠರದಲ್ಲಿ ಆಹಾರ ಸಂಗ್ರಹವಾಗುತ್ತಿದ್ದಂತೆ ಈ ಮಡಿಕೆಗಳು ಸಪಾಟಾಗುತ್ತವೆ ಮತ್ತು ಜಠರದ ಸಂಗ್ರಹ ಸಾಮರ್ಥ್ಯ ಏರುತ್ತದೆ. ಈ ಮಡಿಕೆಗಳನ್ನೆಲ್ಲ ಸಪಾಟಾಗಿಸಿದರೆ ಜಠರದ ಕ್ಷೇತ್ರಫಲ ಸುಮಾರು ಮುಕ್ಕಾಲು ಚದರ ಮೀಟರ್ ಆಗಬಹುದು ಎಂದು ಅಂದಾಜು. ಇಷ್ಟು ಪ್ರದೇಶದಲ್ಲಿ ಸುಮಾರು ನಾಲ್ಕು ಲೀಟರ್ ದ್ರವ ತುಂಬಬಹುದು. ಖಾಲಿ ಜಠರದಲ್ಲಿ ರೂಗೇ ಮಡಿಕೆಗಳು ಒತ್ತೊತ್ತಾಗಿ ಇರುವಾಗ ಅದರ ಅಳತೆ ಸುಮಾರು 75 ಮಿಲಿಲೀಟರ್ ಮಾತ್ರ. ಅಂದರೆ, ಖಾಲಿ ಜಠರಕ್ಕೂ, ಸಂಪೂರ್ಣ ತುಂಬಿದ ಜಠರಕ್ಕೂ ಅಳತೆಯಲ್ಲಿ 50 ಪಟ್ಟು ವ್ಯತ್ಯಾಸ ಇರುತ್ತದೆ ಎಂದಾಯಿತು. ಆದರೆ ಇಷ್ಟು ಪ್ರಮಾಣ ತುಂಬಲು ನಮ್ಮ ಮಿದುಳು ಅವಕಾಶ ನೀಡುವುದಿಲ್ಲ. ಜಠರದ ಹಿಗ್ಗುವಿಕೆ ಒಂದು ಹಂತ ತುಂಬಿದ ಕೂಡಲೇ ಇಷ್ಟು ಸಾಕುಎನುವ ಸಂಕೇತಗಳನ್ನು ಮಿದುಳು ನೀಡುತ್ತದೆ. ಅದಕ್ಕಿಂತ ಹೆಚ್ಚಿಗೆ ತುಂಬಲು ಪ್ರಯತ್ನಿಸಿದರೆ ವಾಂತಿಯ ಮೂಲಕ ಜಠರದಲ್ಲಿನ ಆಹಾರವನ್ನು ಹೊರಹಾಕುತ್ತದೆ. ಆಹಾರದ ವಿಷಯದಲ್ಲಿ ಯಾಚಕನ ಸಾಕುಭಾವನೆಯ ಹಿನ್ನೆಲೆ ಇದೇ.

ಜಠರದಲ್ಲಿ ಕೆಲವೊಂದು ರಾಸಾಯನಿಕ ಚೋದಕಗಳೂ ಬಿಡುಗಡೆಯಾಗುತ್ತವೆ. ಈ ರಾಸಾಯನಿಕಗಳು ಜೀರ್ಣಾಂಗ ವ್ಯವಸ್ಥೆಯ ಮಹತ್ವದ ಅಂಶಗಳನ್ನು ನಿರ್ದೇಶಿಸುತ್ತವೆ. ಇಂತಹ ಐದು ಚೋದಕಗಳು ಈಗ ಪತ್ತೆಯಾಗಿವೆ. ಇವುಗಳ ಸಂಖ್ಯೆ ಇನ್ನೂ ಅಧಿಕ ಎಂದು ವಿಜ್ಞಾನಿಗಳ ಅಭಿಮತ.

ಜಠರ ಕೇವಲ ಆಹಾರ ಸಂಗ್ರಹಾಲಯವಷ್ಟೇ ಅಲ್ಲ, ಅದಕ್ಕಿಂತಲೂ ಮಿಗಿಲು ಎನ್ನುವುದಕ್ಕೆ ಅದರ ಗಣಿತವೇ ಪ್ರಮಾಣ.

--------------------

ಜುಲೈ-ಆಗಸ್ಟ್ 2023 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: https://flipbookpdf.net/web/site/df1e3319edb3c0237b741164ec8fcb59c339a71b202310.pdf.html 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ