ಶನಿವಾರ, ಆಗಸ್ಟ್ 20, 2022

 ವೈದ್ಯರು ಮತ್ತು ಅಂಕಣ ಬರಹ – ಕೆಲವು ಒಳನೋಟಗಳು

ಡಾ. ಕಿರಣ್ ವಿ.ಎಸ್.

ಬೆಂಗಳೂರು

ಪ್ರಸ್ತುತ ಮಾಧ್ಯಮಗಳ ಪ್ರಮುಖ ಆಕರ್ಷಣೆ ಅವುಗಳ ಅಂಕಣಗಳು. ಮುದ್ರಣ ರೂಪದ ಸಂವಹನವಾಗಲಿ ಅಥವಾ ವಿದ್ಯುನ್ಮಾನ ಪತ್ರಿಕೆಗಳಾಗಲಿ, ವೈವಿಧ್ಯಮಯ ಅಂಕಣಗಳು ಓದುಗ ವೃಂದವನ್ನು ಸೆಳೆಯುತ್ತವೆ. ಸಾಮಾನ್ಯ ವಾರ್ತಾಪತ್ರಿಕೆಗಳಲ್ಲಿ ಸುದ್ಧಿಗಳ ಜೊತೆಗೆ ಅಂಕಣ ಬರಹಗಳು ಕಡ್ಡಾಯವಾಗಿ ಇರುತ್ತವೆ. ಆದರೆ, ಎಷ್ಟೋ ನಿಯತಕಾಲಿಕೆಗಳಲ್ಲಿ ಅಂಕಣಗಳದ್ದೇ ದರ್ಬಾರು.

ಅಂಕಣ ಬರಹಗಳ ಆಕರ್ಷಣೆಗೆ ಕಾರಣವಿದೆ. ಅವನ್ನು ಬರೆಯುವವರು ಆಯಾ ಕ್ಷೇತ್ರದ ತಜ್ಞರು ಅಥವಾ ಬಹುಕಾಲ ಬರವಣಿಗೆಯಲ್ಲಿ ಪಳಗಿ, ಓದುಗರ ನಾಡಿಮಿಡಿತ ಬಲ್ಲ ಹೆಸರಾಂತ ಲೇಖಕರು. ಅಂಕಣಗಳ ಪದಮಿತಿ ಅವನ್ನು ಹತ್ತು ಹದಿನೈದು ನಿಮಿಷಗಳಲ್ಲಿ ಓದಿ ಮುಗಿಸುವಂತಿರುತ್ತವೆ. ಸುಮಾರು ಏಳುನೂರು ಪದಗಳ ಅಂಕಣ ಬರಹದಲ್ಲಿ ಏನೋ ಒಂದು ಹೊಸತು ಸಿಗುತ್ತದೆ. ಅಂಕಣಗಳ ಭಾಷೆ ಹಗುರ; ಆರಾಮವಾಗಿ ಓದಿಸಿಕೊಳ್ಳುತ್ತದೆ. ಅಂಕಣಗಳು ಓದುಗರಿಂದ ಯಾವುದೇ ಪೂರ್ವಭಾವಿ ಜ್ಞಾನವನ್ನು ಅಪೇಕ್ಷಿಸುವುದಿಲ್ಲ; ಹೇಳಬೇಕಾದ್ದನ್ನು ಪ್ರಾಸ್ತಾವಿಕ ಮುನ್ನುಡಿಯೊಡನೆ ಆರಂಭಿಸಿ, ಕ್ಲುಪ್ತವಾಗಿ ಹೇಳಿ ಮುಗಿಸುತ್ತವೆ. ಕೆಲವೊಮ್ಮೆ ಕಥನ ರೂಪದಲ್ಲಿ, ಕೆಲವೊಮ್ಮೆ ಮನೋರಂಜಕವಾಗಿ ಅಂಶಗಳನ್ನು ಮುಂದಿಡುತ್ತವೆ. ಹೀಗಾಗಿ, ಕೇವಲ ಅಂಕಣ ಬರಹಗಳಿಗಾಗಿ ಪತ್ರಿಕೆಗಳನ್ನು ಖರೀದಿಸುವ ಓದುಗರು ಹೆಚ್ಚಾಗುತ್ತಿದ್ದಾರೆ.

ವೈದ್ಯಕೀಯ ವಿಷಯಗಳನ್ನು ಅಂಕಣರೂಪದಲ್ಲಿ ತರುವುದು ಸವಾಲಿನ ಸಂಗತಿ. ಆದರೆ, ಇದನ್ನು ಸಮರ್ಪಕವಾಗಿ, ಯಶಸ್ವಿಯಾಗಿ ಮಾಡುತ್ತಿರುವ ವೈದ್ಯ ಸಾಹಿತಿಗಳು ಹಲವರಿದ್ದಾರೆ ಎನ್ನುವುದು ವೈದ್ಯಕೀಯ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ. ವೈದ್ಯಕೀಯ ರಂಗದ ಪ್ರಚಲಿತ ವಿದ್ಯಮಾನಗಳು, ಹೊಸ ಬೆಳವಣಿಗೆಗಳು, ಯಾವುದೇ ಬೆಳವಣಿಗೆಯ ಒಳನೋಟಗಳು, ಸಾಂದರ್ಭಿಕ ಪರಿಚಯಾತ್ಮಕ ಮಾಹಿತಿ, ವೈದ್ಯಕೀಯ ಪಯಣದ ಅನುಭವಗಳ ಕಥನ, ಸಂದೇಹಗಳ ನಿವಾರಣೆ - ಹೀಗೆ ಹಲವಾರು ವಿಷಯಗಳಿಗೆ ಅಂಕಣದ ಸ್ವರೂಪ ನೀಡಿ ಬರೆಯಬಹುದು. ಬರೆಯುವ ಆಸಕ್ತಿಯುಳ್ಳ, ಅಭಿರುಚಿಯುಳ್ಳ ಯಾರಾದರೂ ಅಂಕಣ ಬರೆಯಬಹುದು. ಒಮ್ಮೆ ಆರಂಭಿಸಿದರೆ ಕಾಲಕ್ರಮೇಣ ಬರವಣಿಗೆ ಪಳಗುತ್ತಾ ಹೋಗುತ್ತದೆ.

ವೈದ್ಯಕೀಯ ಅಂಕಣಗಳಿಗೆ ಓದುಗರ ಪ್ರತಿಕ್ರಿಯೆ ಏನು? ಸಾಮಾನ್ಯವಾಗಿ ರಾಜಕೀಯ, ಮನೋರಂಜನೆ, ಸಾಹಿತ್ಯಗಳ ಕುರಿತಾದ ಅಂಕಣಗಳಿಗೆ ಓದುಗರು ಮುಗಿಬೀಳುತ್ತಾರೆ. ಆದರೆ, ವೈದ್ಯಕೀಯ ಅಂಕಣಗಳಿಗೆ ಓದುಗರು ಕಡಿಮೆ. ಓದುಗರು ಇದಕ್ಕೆ ನೀಡುವ ಕಾರಣಗಳು ಹಲವು: ವೈದ್ಯಕೀಯ ಅಂಕಣಗಳು ಬೋರು ಹೊಡೆಸುತ್ತವೆ; ಅರ್ಥವಾಗದು; ಯಾವ ವಿಷಯ ಬರೆದಿದ್ದಾರೋ ಅದರ ಹಿನ್ನೆಲೆ ಸಾಮಾನ್ಯ ಓದುಗರಿಗೆ ತಿಳಿಯದು; ಓದುಗರಿಗೆ ಅಪರಿಚಿತವಾದ ಪಾರಿಭಾಷಿಕ ಪದಗಳ ಬಳಕೆ ಹೆಚ್ಚು. ಕಡೆಗೆ ಸಮಯ ಕೊಟ್ಟು ಓದಿದ ನಂತರ “ಏನೋ ಬರೆದಿದ್ದಾರೆ” ಎನ್ನುವ ಭಾವನೆ ಮೂಡುತ್ತದೆಯೇ ಹೊರತು, ಏನು ಬರೆದಿದ್ದಾರೆ ಎಂಬುದು ಎಷ್ಟೋ ಬಾರಿ ಸ್ಪಷ್ಟವಾಗುವುದಿಲ್ಲ ಎನ್ನುವುದು ಅನೇಕ ಓದುಗರ ಆಂಬೋಣ.

ಆದರೆ ಇದ್ಯಾವುದೂ ಮೀರಲಾಗದ ಸಮಸ್ಯೆಗಳಲ್ಲ. ಬರಹಗಾರನ ಸ್ಥಾನದಿಂದ ಓದುಗನ ದೃಷ್ಟಿಕೋನಕ್ಕೆ ಬದಲಾದರೆ ಕೆಲವು ಹೊಳಹುಗಳು ಗೋಚರಿಸುತ್ತವೆ. ಒಂದು ಅಂಕಣದಲ್ಲಿ ಒಂದೇ ವಿಷಯವನ್ನು ಹೇಳುವುದು ಒಳಿತು. ಹಲವಾರು ವಿಷಯಗಳ ಪ್ರಸ್ತಾಪ ಒದುಗರಿಗೆ ಗೊಂದಲ ಮೂಡಿಸಬಹುದು. ಅಂಕಣ ಬರಹ ರೋಗಿಗಳ ಸಮಾಲೋಚನೆಯ ರೂಪ ತಳೆಯಬಾರದು. ಯಾವುದಾದರೂ ರೋಗದ ವಿಷಯ ಚರ್ಚಿಸುವಾಗ ನಿರ್ದಿಷ್ಟ ಔಷಧಗಳ ಪ್ರಸ್ತಾಪ ಇಲ್ಲದಿರುವುದು ಸೂಕ್ತ. ಸಮಸ್ಯೆಯ ನಿರ್ವಹಣೆಗೆ ಕ್ಲುಪ್ತವಾಗಿ ಸಾಮಾನ್ಯ ಸ್ವರೂಪದ ಅಂಶಗಳನ್ನು ಹೇಗೆ ಪಾಲಿಸಬೇಕು ಎಂದು ಹೇಳುವುದು ಸಮಂಜಸ; ಚಿಕಿತ್ಸೆಯ ಬಗ್ಗೆ ಅಧಿಕ ಆಯ್ಕೆಗಳನ್ನು ನೀಡುವುದು ವಿಷಯ ಸ್ಪಷ್ಟತೆಯನ್ನು ಗೋಜಲು ಮಾಡುತ್ತದೆ. ವಿಷಯವನ್ನು ಸುತ್ತು-ಬಳಸಿ ಹೇಳುವುದಕ್ಕಿಂತ ನೇರವಾದ, ನಿಖರವಾದ ಮಾತು ಹೆಚ್ಚು ಪರಿಣಾಮಕಾರಿ.

ವೈದ್ಯಕೀಯ ಅಂಕಣಗಳು ಸಂವಹನದ ಒಂದು ವಿಧಾನ. ಇದರಲ್ಲಿ ಓದುಗರ ಅಪೇಕ್ಷೆಯನ್ನು ಅರ್ಥ ಮಾಡಿಕೊಳ್ಳುವುದು ಬರಹಕ್ಕೆ ಸರಿಯಾದ ದಾರಿ ತೋರುತ್ತದೆ. ಹೊಸದಾಗಿ ಬರವಣಿಗೆಯನ್ನು ಆರಂಭಿಸುವ ಹಲವು ಪರಿಣತ ವೈದ್ಯರಿಗೆ ಬರಹದ ವಿಷಯವನ್ನು ಎಲ್ಲಿಂದ ಆರಂಭಿಸಬೇಕು, ಏನೆಲ್ಲಾ ಹೇಳಬೇಕು, ಎಷ್ಟು ಹೇಳಬೇಕು ಎನ್ನುವ ಬಗ್ಗೆ ಗೊಂದಲ ಮೂಡಬಹುದು. ಒಂದು ಉದಾಹರಣೆ ಈ ಗೊಂದಲವನ್ನು ಪರಿಹರಿಸಬಹುದು. ನಮ್ಮ ಕಾರು ಕೆಟ್ಟಾಗ ಅದನ್ನು ನಾವು ಕಾರು ರಿಪೇರಿಯವರ ಬಳಿಗೆ ಒಯ್ಯುತ್ತೇವೆ. ಆಗ ಅವರು “ಕಾರು ಏಕೆ ಕೆಟ್ಟಿದೆ?” ಎಂದು ಸರಳವಾಗಿ ಹೇಳಬೇಕು ಎಂದು ಬಯಸುತ್ತೇವೆ. ಪರಿಣತ ಕಾರು ರಿಪೇರಿಯವ ಇದನ್ನು ಸಾಧ್ಯವಾದಷ್ಟೂ ಸರಳವಾಗಿ ನಮಗೆ ವಿವರಿಸಬೇಕು. ಅದರ ಬದಲಿಗೆ ಆತ ಕಾರಿನ ಭಾಗಗಳು, ಅದು ಕೆಲಸ ಮಾಡುವ ಹಿಂದಿನ ಭೌತಶಾಸ್ತ್ರ, ಅವುಗಳ ಪರಸ್ಪರ ಅವಲಂಬನೆಗಳ ಬಗ್ಗೆ ಮಾತನಾಡಿದರೆ ನಮಗೆ ತಲೆಚಿಟ್ಟು ಹಿಡಿದೀತು! ಅಂತೆಯೇ, ಆರೋಗ್ಯಕ್ಕೆ ಸಂಬಂಧಿಸಿದ ಯಾವುದಾದರೂ ಮಾಹಿತಿಯನ್ನು ಬಯಸುವ ಸಾಮಾನ್ಯ ಜನರಿಗೆ ಅದನ್ನು ಸಾಧ್ಯವಾದಷ್ಟೂ ಸರಳವಾಗಿ, ನೇರವಾಗಿ ಹೇಳುವುದು ಸಫಲ ಸಂವಹನವಾಗುತ್ತದೆ.

ವೈದ್ಯಕೀಯ ವಿಷಯಗಳನ್ನು ಬರೆಯುವಾಗ “ನಮ ಅಂಕಣದ ಓದುಗರು ಯಾರು?” ಎನ್ನುವ ಪ್ರಶ್ನೆ ಮಾರ್ಗಸೂಚಕ. ಆಯಾ ಋತುವಿನಲ್ಲಿ ಕಾಣುವ ಆರೋಗ್ಯ ಸಮಸ್ಯೆಗಳ ಬಗ್ಗೆ ಬರೆಯುವುದು ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಅಂತೆಯೇ ಚಾಲ್ತಿಯಲ್ಲಿರುವ ಆರೋಗ್ಯ ಸಂಬಂಧಿ ಸುದ್ಧಿಗಳ ಕುರಿತಾಗಿ ಬರೆಯುವುದು ಜನರ ಆಸಕ್ತಿಯನ್ನು ಕೆರಳಿಸುತ್ತದೆ. ಅಂಕಣಕ್ಕೆ ಪದಮಿತಿ ಇರುವುದರಿಂದ ಪುಟ್ಟ ವಾಕ್ಯಗಳ ಬಳಕೆ ಒಳ್ಳೆಯದು. ಒಂದು ಪ್ಯಾರಾದಲ್ಲಿ ಒಂದು ವಿಷಯವನ್ನು ಹೇಳುವುದು ಓದುಗರಿಗೆ ಸರಳ ಓದಿನ ಅನುಭವ ನೀಡುತ್ತದೆ. ಮುಖ್ಯವಾದ ವಿಷಯಗಳಿಗೆ ಉದಾಹರಣೆಗಳನ್ನು, ದೃಷ್ಟಾಂತಗಳನ್ನು ಬಳಸಬಹುದು. ಇವುಗಳು ಸುದೀರ್ಘ ವಿವರಣೆಗಳಿಗಿಂತಲೂ ಪ್ರಭಾವಶಾಲಿ. ಓದುಗರ ಕುತೂಹಲ ಕೆರಳಿಸುವಷ್ಟು ಮಾಹಿತಿ ಸಾಕು; ಎಲ್ಲವನ್ನೂ ಹೇಳುವುದು ಲೇಖನದ ವ್ಯಾಪ್ತಿಯ ದೃಷ್ಟಿಯಿಂದ ಸಾಧ್ಯವಾಗದು.

ಬಹುತೇಕ ಅಂಕಣ ಬರಹಗಳು ಸುಮಾರು 700 ಪದಗಳ ವ್ಯಾಪ್ತಿ ಹೊಂದಿರುತ್ತವೆ. ಇದರಲ್ಲಿ ಮೊದಲ 100 ಪದಗಳನ್ನು ಪ್ರವೇಶಕ್ಕೆ, ನಂತರದ 400 ಪದಗಳನ್ನು ವಿಷಯದ ವಿವರಣೆಗೆ, ಮುಂದಿನ 100 ಪದಗಳನ್ನು ವಿಶ್ಲೇಷಣೆಗೆ, ಅಂತಿಮ 100 ಪದಗಳನ್ನು ಸಾರಾಂಶ ಮತ್ತು ಉಪಸಂಹಾರಕ್ಕೆ ಸ್ಥೂಲವಾಗಿ ವಿಂಗಡಿಸಬಹುದು. ಬರಹ ಮುಕ್ತ ಸಂವಾದದಂತೆ ರೂಪುಗೊಂಡಾಗ ಓದುಗರ ಜೊತೆಗೆ ಸಂಬಂಧ ಏರ್ಪಡುತ್ತದೆ. ನಮ್ಮ ದೃಷ್ಟಿಕೋನಕ್ಕೆ ವಿರುದ್ಧವಾದ ಅಭಿಪ್ರಾಯ ಹೊಂದಿರುವವರನ್ನು ಗೌರವದಿಂದಲೇ ಸಂಬೋಧಿಸುವುದು ಸರಿಯಾದ ವಿಧಾನ. ಯಾವ ಕಾರಣಕ್ಕೂ ವೈಯಕ್ತಿಕ ಹಳಿಯುವಿಕೆ ಸಲ್ಲದು. ಇತರರ ಅಭಿಮತಗಳ ಬಗ್ಗೆ ನಮ್ಮ ವಿರೋಧ ಪ್ರಕಟಗೊಳ್ಳುವಾಗ ಸೂಕ್ತ ಪ್ರಮಾಣಲೇಖನಾವಳಿ ಒದಗಿಸಬೇಕು. ಇಲ್ಲವಾದರೆ ಗಾಳಿಯಲ್ಲಿ ಗುಂಡು ಹಾರಿಸಿದಂತಾಗಿ, ಓದುಗರ ಅಸಮ್ಮತಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಇದಮಿತ್ಥಂ ಎಂದು ಹೇಳುವುದಕ್ಕಿಂತಲೂ ಸಾಧ್ಯತೆಗಳನ್ನು ಸೂಚಿಸುವುದು ಒಳಿತು.

ಹೊಸದಾಗಿ ವೈದ್ಯಕೀಯ ಅಂಕಣ ಬರೆಯುವವರು ಕೆಲವು ಮಾರ್ಗಸೂಚಿಗಳನ್ನು ಗಮನಿಸಬಹುದು. ಆರಂಭದಲ್ಲಿ ಪರಿಣತ ಲೇಖಕರ ಕೆಲವು ಮಾದರಿ ಬರಹಗಳನ್ನು ಅಧ್ಯಯನ ಮಾಡಿದರೆ ಬರಹಗಳ ಧಾಟಿಯ ಪರಿಚಯವಾಗುತ್ತದೆ. ತಂತಮ್ಮ ಪರಿಣತಿಯ ವಿಷಯಗಳನ್ನು ಆಯ್ದುಕೊಂಡು, ಅದರ ಬಗ್ಗೆ ಬರೆಯುವುದು ಸೂಕ್ತ. ಯಾವುದಾದರೂ ವಿಷಯದ ಬಗ್ಗೆ ಸಣ್ಣ ಲೇಖನ ಬರೆದು, ಅದೇ ವಿಷಯವನ್ನು ಪರಿಣತ ಲೇಖಕರು ಹೇಗೆ ಬರೆದಿದ್ದಾರೆ ಎಂದು ಗಮನಿಸಿ, ಹೋಲಿಕೆ ಮಾಡಿಕೊಳ್ಳಬಹುದು. ಆಗ ಯಾವ್ಯಾವ ಅಂಶಗಳನ್ನು ನಿರೂಪಿಸಿದರೆ ಲೇಖನ ಮಹತ್ವಪೂರ್ಣವಾಗುತ್ತದೆ ಎಂಬುದರ ಪರಿಚಯವಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಬರಹ ಆಪ್ತವೇ ಆಗುತ್ತದೆ. ಆದರೆ, ನಮ್ಮ ಲೇಖನವನ್ನು ನಾವು ಮಾತ್ರವೇ ಓದುವುದಿಲ್ಲ! ಹೀಗಾಗಿ, ನಮ್ಮ ಸಮಾಧಾನಕ್ಕಿಂತಲೂ ಓದುಗರ ಅಭಿಪ್ರಾಯವೇ ಮುಖ್ಯ. ಆದ್ದರಿಂದ ಸ್ವವಿಮರ್ಶೆ ಲೇಖಕರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಬರೆದ ಲೇಖನ ಓದುಗರನ್ನು ತಲುಪಬೇಕು. ಹಿಂದಿನ ಕಾಲದಲ್ಲಿ ಇದಕ್ಕೆ ಪತ್ರಿಕೆಗಳು ಮಾತ್ರವೇ ಸಾಧನವಾಗುತ್ತಿದ್ದವು. ಆದರೆ ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಓದುಗರನ್ನು ತಲುಪಲು ಹಲವಾರು ಮಾರ್ಗಗಳಿವೆ. ಪತ್ರಿಕೆಗಳು ನಮ್ಮ ಬರಹವನ್ನು ನಿರಾಕರಿಸಿದರೆ ಮನಗುಂದಬಾರದು. ಇಂತಹ ನಿರಾಕರಣೆ ಸಾಮಾನ್ಯ. ಪ್ರತಿಯೊಂದು ಲೇಖನದ ಜೊತೆಗೆ ಲೇಖಕರೂ ಬೆಳೆಯುತ್ತಾರೆ ಎನ್ನುವ ಮಾತು ಸತ್ಯ. ಒಳ್ಳೆಯ ಮಾಹಿತಿಯನ್ನು ಸರಳವಾಗಿ ತಿಳಿಸುವ ಲೇಖನಗಳನ್ನು ತಂತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಪ್ರಕಟಿಸಿ, ಓದುಗರ ಅಭಿಪ್ರಾಯ ಸಂಗ್ರಹಿಸಬಹುದು. ಇಂದು ನಾವು ಕಾಣುವ ಹಲವಾರು ಪ್ರಸಿದ್ಧ ಅಂಕಣಕಾರರು ಈ ದಾರಿಯ ಮೂಲಕವೇ ಬೆಳೆದಿದ್ದಾರೆ. ಬರವಣಿಗೆಯ ಬಗ್ಗೆ ಪ್ರಾಮಾಣಿಕತೆ ಮತ್ತು ಶ್ರದ್ಧೆ ಇದ್ದರೆ ಕಾಲಕ್ರಮೇಣ ಲೇಖಕರ ಬೆಳವಣಿಗೆ ತಂತಾನೇ ಆಗುತ್ತದೆ.   

ಬಹುತೇಕ ಅಂಕಣಕಾರರು ತಮ್ಮ ಆರಂಭಿಕ ಲೇಖನಗಳಲ್ಲಿ ತಮ್ಮ ನೆಚ್ಚಿನ ಇತರ ಅಂಕಣಕಾರರ ಬರಹಗಳಿಂದ ಪ್ರಭಾವಿತರಾಗಿ, ತಮಗೇ ಅರಿವಿಲ್ಲದಂತೆ ಅಂತಹವರ ಶೈಲಿಯನ್ನು ಅನುಸರಿಸಿರುತ್ತಾರೆ. ಇದು ಅನುಚಿತವಲ್ಲ. ಶೈಲಿಯ ಅನುಕರಣೆಯನ್ನು ಪ್ರಜ್ಞಾವಂತ ಓದುಗರು ಗುರುತಿಸುತ್ತಾರೆ. ಲೇಖಕರು ಬೆಳೆಯುತ್ತಾ ಹೋದಂತೆ ಅನುಕರಣೆಯ ಹಿಡಿತದಿಂದ ಹೊರಬಂದು ತಮ್ಮದೇ ಶೈಲಿಯನ್ನು ರೂಪಿಸಿಕೊಳ್ಳಬೇಕು. ಬರೆಯುವ ವಿಷಯದ ಬಗ್ಗೆ ಹಿಡಿತವಿದ್ದಾಗ ಸ್ವಂತಿಕೆ ಸುಲಭ. ಲೇಖನವನ್ನು ಇನ್ನಷ್ಟು ಚಂದಗೊಳಿಸುವ ಬಗ್ಗೆ ಆಪ್ತರಿಂದ ಸಲಹೆ ಪಡೆಯಬಹುದು. ವಿಮರ್ಶೆ ಮತ್ತು ಆತ್ಮವಿಮರ್ಶೆಗಳು ಲೇಖಕರ ಬೆಳವಣಿಗೆಗೆ ರಹದಾರಿಗಳು.

ಯಾವುದಾದರೂ ಕಾಯಿಲೆಯ ಬಗ್ಗೆ ಇರಬಹುದಾದ ಪ್ರಮುಖ ಸಂದೇಹಗಳ ನಿವಾರಣೆಯ ಲೇಖನಗಳು, ವೈವಿಧ್ಯಮಯ ಮಾಹಿತಿ, ಪ್ರಚಲಿತ ಆರೋಗ್ಯ ಸಮಸ್ಯೆಯ ಬಗ್ಗೆ ಇತ್ತೀಚಿನ ಬೆಳವಣಿಗೆಗಳು, ವಿಷಯ ವಿಸ್ತಾರದ ಬರಹಗಳು ಓದುಗರ ಆಸಕ್ತಿಯನ್ನು ಕೆರಳಿಸುತ್ತವೆ. ಸರಿಯಾದ ಮಾಹಿತಿಯ ಪ್ರಸಾರವೇ ವೈದ್ಯಕೀಯ ಅಂಕಣಗಳ ಮೂಲೋದ್ದೇಶ. ಯಾವುದೇ ವಿಷಯವನ್ನೂ ತೀರಾ ಆಳವಾಗಿ ಚರ್ಚಿಸುವುದು ಸಮಂಜಸವಲ್ಲ. ಸಮಾಜದಲ್ಲಿನ ಸೂಕ್ಷ್ಮ ವಿಷಯಗಳನ್ನು ವೈದ್ಯಕೀಯ ಲೇಖನದಲ್ಲಿ ಪ್ರಸ್ತಾಪಿಸುವುದು ಸರಿಯಾದ ಮಾರ್ಗವಲ್ಲ. ಜನಪ್ರಿಯತೆಯ ಚಪಲಕ್ಕೆ ರಾಜಕೀಯ ವಿಷಯಗಳನ್ನು ಲೇಖನದ ಪರಿಧಿಯಲ್ಲಿ ತರುವುದು ಸರ್ವದಾ ಸರಿಯಾದ ಮಾರ್ಗವಲ್ಲ. ಇಂತಹ ಪ್ರಲೋಭನೆಗಳನ್ನು ಹತ್ತಿಕ್ಕುವುದು ವೈದ್ಯರ ಸಾಮಾಜಿಕ ಜವಾಬ್ದಾರಿ ಕೂಡ ಆಗಿದೆ.

ಬರೆದ ಪ್ರತಿಯೊಂದು ಅಕ್ಷರವೂ ಪತ್ರಿಕೆಗಳಲ್ಲಿ ಪ್ರಕಟವಾಗಬೇಕೆಂದೇನಿಲ್ಲ. ಆರಂಭದಲ್ಲಿ ಹಲವಾರು ವಿಷಯಗಳನ್ನು ಬರೆದು ಪಳಗುವುದು ಒಳ್ಳೆಯ ವಿಧಾನ. ಎಂದೋ ಲಹರಿ ಹುಟ್ಟಿದ ದಿನ ಬರೆದರೆ ಸಾಲದು. ಅಂಕಣ ಬರಹಕ್ಕೆ ಕೈಹಾಕುವವರು ಅದಕ್ಕೆ ಒಳ್ಳೆಯ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕು. ಪ್ರತಿದಿನವೂ ಯಾವುದಾದರೂ ವಿಷಯವನ್ನು ಆಲೋಚಿಸಿ, ಅದರ ಬಗ್ಗೆ ಇಂತಿಷ್ಟು ಪದಗಳನ್ನು ಬರೆಯುವುದು ಚಿಂತನೆಗಳ ಸರಾಗ ಹರಿವಿಗೆ ನೆರವಾಗುತ್ತದೆ. ನಮ್ಮದೇ ಸ್ವಂತ ಬ್ಲಾಗ್ ಅನ್ನು ಉಚಿತವಾಗಿ ತೆರೆದು, ನಾವು ಬರೆದದ್ದನ್ನು ಅದರಲ್ಲಿ ಪ್ರಕಟಿಸಿ, ಆಸಕ್ತರ ಗಮನ ಸೆಳೆದು, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಬಹುದು. ಇದರಿಂದ ಆತ್ಮವಿಶ್ವಾಸ ಹೆಚ್ಚಿ, ಬರವಣಿಗೆಯ ಶೈಲಿ ಸುಧಾರಿಸುತ್ತದೆ.

ಬರವಣಿಗೆ ವೈದ್ಯರ ಚಿಂತನೆಗಳ ಅಭಿವ್ಯಕ್ತಿಗೆ ಬಹಳ ಉತ್ತಮ ಮಾರ್ಗ. ಪ್ರತಿಯೊಬ್ಬ ವೈದ್ಯರೂ ಮೂಲತಃ ಶಿಕ್ಷಕರು. ಪ್ರತಿಯೊಂದು ವೈದ್ಯಕೀಯ ಸಮಾಲೋಚನೆಯೂ ಒಂದು ರೀತಿಯ ಶಿಕ್ಷಣ. ಹೀಗಾಗಿ, ತಮ್ಮ ಆಲೋಚನೆಗಳ ಸಂವಹನವನ್ನು ವೈದ್ಯರು ಪ್ರತಿದಿನವೂ ಹಲವರ ಜೊತೆ ಸಾಧಿಸುತ್ತಲೇ ಇರುತ್ತಾರೆ. ಇದಕ್ಕೆ ಮತ್ತಷ್ಟು ಮೂರ್ತರೂಪ ನೀಡುವುದು ಬರವಣಿಗೆ. ಮಾತನ್ನು ಬರಹವಾಗಿಸಲು ವ್ಯವಸ್ಥಿತ ಸಿದ್ಧತೆ, ಬದ್ಧತೆ ಬೇಕು ಎನ್ನುವುದನ್ನು ಬಿಟ್ಟರೆ, ವೈದ್ಯರಿಗಿಂತಲೂ ಉತ್ತಮ ಸಂವಹನಕಾರರು ವಿರಳ. ಪ್ರತಿಯೊಬ್ಬ ವೈದ್ಯರೂ ಈ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು. ವೈದ್ಯಕೀಯ ಬರವಣಿಗೆ ನಮ್ಮ ಸಾಮಾಜಿಕ ಜವಾಬ್ದಾರಿಗಳಲ್ಲಿ ಒಂದು ಎನ್ನುವ ಭಾವನೆ ಬೆಳೆಸಿಕೊಂಡರೆ ಈ ಹಾದಿಯ ಪಯಣ ಸುಲಭವಾಗುತ್ತದೆ. ಬರವಣಿಗೆ ಎನ್ನುವುದು ವೈದ್ಯರ ಬದುಕಿನ ಒತ್ತಡವನ್ನು ತಗ್ಗಿಸುವ ಪ್ರಭಾವಶಾಲಿ ವಿಧಾನ. ಇದನ್ನು ಪ್ರತಿಯೊಬ್ಬ ವೈದ್ಯರೂ ಪ್ರಯತ್ನಿಸಬೇಕು. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಕೆ!

--------------------

IMA ವೈದ್ಯ ಲೇಖಕರ ಸಂಘ ಪ್ರಕಟಿಸಿದ ಲೇಖನ 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ