ಬುಧವಾರ, ನವೆಂಬರ್ 25, 2020


 **ನಿಮ್ಮ ಶಸ್ತ್ರಚಿಕಿತ್ಸೆ ಯಾರು ಮಾಡಬೇಕು?**

"ಆಯುರ್ವೇದ ಕಲಿತಿರುವವರು ಇನ್ನು ಮುಂದೆ ಶಸ್ತ್ರಚಿಕಿತ್ಸೆ ಮಾಡಬಹುದು" ಎಂದು ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇದರ ಸಾಧಕಬಾಧಕಗಳ ಕುರಿತು ಚಿಂತಿಸುವಾಗ, ಒಂದು ಘಟನೆ ನೆನಪಾಯಿತು. ಕೆಲ ದಶಕಗಳ ಹಿಂದೆ “ಸಂಸ್ಕೃತ ಕಲಿಯುವವರು ಕಡಿಮೆಯಾಗಿದ್ದಾರೆ” ಎನ್ನುವ ಕಾರಣಕ್ಕೆ ಅಂದಿನ ಸರಕಾರ ಒಂದು ಭಯಂಕರ ಆಲೋಚನೆ ಮಾಡಿತು. ಪ್ರೌಢಶಾಲೆಯ ಮಟ್ಟದಲ್ಲಿ ಸಂಸ್ಕೃತ ತೆಗೆದುಕೊಂಡವರಿಗೆ ಧಾರಾಳವಾಗಿ ಅಂಕ ಕೊಡುವುದು! ಮೂರುವರ್ಷಗಳ ಅವಧಿಯಲ್ಲಿ ಸಣ್ಣವಯಸ್ಸಿನ ಮಕ್ಕಳು ಸಂಸ್ಕೃತ ಕಲಿಯುವುದು ಹೇಗೆ? ಚಿಂತೆಯಿಲ್ಲ; ಶೇಕಡಾ 15 ಅಂಕಗಳ ಪ್ರಶ್ನೆಗಳನ್ನು ಸಂಸ್ಕೃತದಲ್ಲಿ ಉತ್ತರಿಸಿದರೆ ಸಾಕು. ಉಳಿದ 85 ಅಂಕಗಳ ಪ್ರಶ್ನೆಗಳನ್ನು ಕನ್ನಡ, ಇಂಗ್ಲೀಷ್, ಇಲ್ಲವೇ ಮರಾಠಿ ಭಾಷೆಗಳಲ್ಲಿ ಉತ್ತರಿಸಬಹುದು ಎಂಬ ಏರ್ಪಾಡು. ಮಕ್ಕಳಿಗೆ ಸಂಸ್ಕೃತ ಭಾಷಾಭಿಮಾನ ಹೆಚ್ಚಾಗಿ, ಇನ್ನೆರಡು ದಶಕಗಳಲ್ಲಿ ದೇಶದ ತುಂಬಾ ಕಾಳಿದಾಸ, ಭಾರವಿ, ದಂಡಿ, ಮಾಘರಂತಹ ಕವಿಗಳು ಅಲೆದಾಡುತ್ತಾರೆ ಎಂಬ ಭ್ರಮೆ. ಯಾವುದೇ ಪರಿಣಾಮಗಳ ಬಗ್ಗೆ ಹಿಂದೆ-ಮುಂದೆ ಆಲೋಚಿಸದೇ ಈ ನಿರ್ಧಾರವನ್ನು ಸರ್ಕಾರ ಅಮಲುಗೊಳಿಸಿತ್ತು.
ಆದದ್ದೇ ಬೇರೆ! ಅಂಕಗಳ ಆಸೆಗೆ ಪ್ರೌಢಶಾಲೆಯಲ್ಲಿ ಸಂಸ್ಕೃತ ತೆಗೆದುಕೊಂಡವರಿಗೆ ಪದವಿಪೂರ್ವ ಓದಿನಲ್ಲಿ ತಮಗೆ ಬೇಕಾದ ಶಾಖೆ ಪಡೆಯಲಷ್ಟೇ ಇದು ನೆರವಾಯಿತು! ಕನ್ನಡ ಪ್ರಥಮ ಭಾಷೆ ಪರೀಕ್ಷೆಯಲ್ಲಿ 60 ಮುಟ್ಟುವುದು ತ್ರಾಸವಾಗಿದ್ದಾಗ, ಸಂಸ್ಕೃತ ಪರೀಕ್ಷೆಯನ್ನು ಕನ್ನಡದಲ್ಲಿ ಬರೆದವರು ಆರಾಮವಾಗಿ 90 ಪಡೆಯುತ್ತಿದ್ದರು! ಈ 30 ಅಂಕಗಳ ಅಂತರ ಎಷ್ಟೋ ಸಮರ್ಥ ವಿದ್ಯಾರ್ಥಿಗಳ ಪಾಲಿಗೆ ದುಬಾರಿಯಾಗುತ್ತಿತ್ತು. ಒಂದೆರಡು ವರ್ಷಗಳಲ್ಲಿ ಪದವಿಪೂರ್ವ ಕಾಲೇಜುಗಳು ಈ ಸಮಸ್ಯೆಯನ್ನು ಗ್ರಹಿಸಿದವು. ತಮ್ಮ ಕಾಲೇಜಿನ ಪ್ರವೇಶಕ್ಕೆ ಭಾಷೆಗಳಲ್ಲಿನ ಅಂಕಗಳನ್ನು ಹೊರತುಪಡಿಸಿ, ಕೇವಲ ಗಣಿತ, ವಿಜ್ಞಾನ, ಸಮಾಜ ವಿಷಯಗಳಲ್ಲಿ ಬಂದ ಅಂಕಗಳನ್ನು ಮಾತ್ರ ಪರಿಗಣಿಸಿದವು. ಮೊದಮೊದಲು ಇದನ್ನು ವಿರೋಧಿಸಿದ ಸರಕಾರ, ನಂತರ ತಾನೂ ಇದನ್ನೇ ಅನುಸರಿಸಿತು! ಮೊದಲೇ ಅಂಕಗಳ ಬೆನ್ನು ಬಿದ್ದಿದ್ದ ವಿದ್ಯಾರ್ಥಿಗಳು ಭಾಷೆಗಳನ್ನು ನಿರ್ಲಕ್ಷ್ಯ ಮಾಡಿದರು. “ಭಾಷೆಗಳಲ್ಲಿ ಜಸ್ಟ್-ಪಾಸ್ ಆದರೆ ಸಾಕು” ಎನ್ನುವ ಮನೋಭಾವ ಬೆಳೆಯಿತು. ವೈದ್ಯಕೀಯ ಮತ್ತು ಎಂಜಿನೀರಿಂಗ್ ಪ್ರವೇಶ ಪರೀಕ್ಷೆ ಬಂದ ಮೇಲಂತೂ ಪದವಿಪೂರ್ವ ವಿಜ್ಞಾನದಲ್ಲಿ ಭಾಷೆಗಳ ಕ್ಲಾಸು ಖಾಲಿ-ಖಾಲಿ! ಸಂಸ್ಕೃತ ಭಾಷೆ ಇದರಿಂದ ಎಷ್ಟು ಬೆಳೆಯಿತೋ ತಿಳಿಯದು. ಆದರೆ, ಅನೇಕ ತಲೆಮಾರುಗಳು ಭಾಷೆಯ ಕಲಿಕೆಯನ್ನು ಅವಗಣನೆ ಮಾಡಿ, ಅದು ನೀಡಬಹುದಾಗಿದ್ದ ಅತ್ಯುನ್ನತ ಅನುಭವಗಳಿಂದ ವಂಚಿತವಾದವು.
ಇದು ನಮ್ಮ ಸರ್ಕಾರಗಳ ಮಾದರಿ! ವ್ಯವಸ್ಥೆಗೆ ಪ್ರತಿಯೊಂದಕ್ಕೂ ಶಾರ್ಟ್-ಕಟ್ ಬೇಕು! ಆದರೆ, ಅದು ಪರಿಣಾಮಕಾರಿಯೇ? ಅದರಿಂದ ಅಪೇಕ್ಷಿತ ಫಲ ದಕ್ಕಿದೆಯೇ? ಎಲ್ಲಿ ಸೋತಿದ್ದೇವೆ? - ಇಂತಹ ಆತ್ಮಾವಲೋಕನಗಳು ನಿಷಿದ್ಧ! ತಳಪಾಯ ಭಧ್ರವಾಗಿರುವ ಭವ್ಯಮಹಲ್ ಯಾರದೋ ನಿರ್ಲಕ್ಷ್ಯದಿಂದ ಹಾಳಾಗಿದೆ ಎಂದರೆ, ಅದನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡುವುದಿಲ್ಲ. ಬದಲಿಗೆ, ಏಕಾಏಕಿ “ಇದು ವಾಸಕ್ಕೆ ಯೋಗ್ಯ” ಎಂದು ಘೋಷಿಸಿಬಿಡುತ್ತದೆ! ಕಟ್ಟಡದ ಒಳಗೆ ಬಂದವರು ಅದರ ಹೀನಾಯ ಸ್ಥಿತಿಯನ್ನು ಪ್ರಶ್ನಿಸಿದರೆ, “ಪಕ್ಕದ ಕಟ್ಟಡ ಗಟ್ಟಿಮುಟ್ಟಾಗಿದೆ. ಅಲ್ಲಿ ಉಳಿದುಕೊಳ್ಳಿ” ಎಂದು ಜಾರಿಕೊಳ್ಳುತ್ತದೆ!
ಆಯುರ್ವೇದ ನಮ್ಮ ದೇಶದ ಪ್ರಾಚೀನ ವೈದ್ಯಪದ್ದತಿ. ಎಷ್ಟೋ ಶತಮಾನಗಳು ರಾರಾಜಿಸಿದ ಚಿಕಿತ್ಸಾ ವಿಧಾನ. ನಾನಾ ಕಾರಣಗಳಿಂದ ಅವಗಣನೆಗೆ ಒಳಗಾಗಿದ್ದ ಇದರ ಪುನರುತ್ಥಾನ ಆಲೋಚನಾರ್ಹ. ಅದಕ್ಕೊಂದು ಸಮಗ್ರ ಕಾರ್ಯತಂತ್ರವೇ ಬೇಕು. ಸಂಸ್ಕೃತ ತಜ್ಞರು, ಆಯುರ್ವೇದ ಪಂಡಿತರು, ದೇಶೀ ಔಷಧ ತಜ್ಞರು, ಸಸ್ಯಶಾಸ್ತ್ರಜ್ಞರು, ಪ್ರಾಣಿತಜ್ಞರು, ವಂಶಪಾರಂಪರ್ಯವಾಗಿ ನಾಟಿವೈದ್ಯಚಿಕಿತ್ಸೆ ನೀಡುತ್ತಿರುವವರು – ಹೀಗೆ ಹಲವಾರು ಜ್ಞಾನಿಗಳಿರುವ ಸಮಿತಿಯಿಂದ ಕಾರ್ಯಸೂಚಿ ತಯಾರಾಗಬೇಕು. ಪುರಾತನ ಆಯುರ್ವೇದ ಗ್ರಂಥಗಳನ್ನು ಸಂಪಾದಿಸಿ, ಪರಿಷ್ಕರಿಸಬೇಕು. ಸಾವಿರಾರು ವರ್ಷಗಳ ಹಿಂದೆ ಇದ್ದ ಪದಗಳ ಅರ್ಥ; ಸಸ್ಯ/ಪ್ರಾಣಿಗಳ ಹೆಸರು; ವಿವರಣೆಯನ್ನು ಆಧರಿಸಿದ ಚಿಕಿತ್ಸೆಯ ಕ್ರಮವಿಧಾನ – ಮುಂತಾದ ಮೂಲಭೂತ ಅಂಶಗಳನ್ನು ನಿರ್ಧರಿಸಬೇಕು. ಪುರಾತನ ಪಠ್ಯಗಳನ್ನು ಪ್ರಸ್ತುತ ಕಾಲಘಟ್ಟದಲ್ಲಿ ಅನುಸರಿಸಲು ಯೋಗ್ಯವಾಗುವಂತೆ ನಿರ್ವಹಿಸಬೇಕು.
ದೇಶದ ತುಂಬಾ ಹಬ್ಬಿರುವ ಆಯುರ್ವೇದ ಕಾಲೇಜುಗಳ ಮೌಲ್ಯಮಾಪನ ಮಾಡಿ, ಕಟ್ಟುನಿಟ್ಟಾದ ಗುಣಮಟ್ಟ ನಿಷ್ಕರ್ಷೆ ಮಾಡಬೇಕು. ಆಯುರ್ವೇದ ವಿದ್ಯಾರ್ಥಿಗಳಿಗೆ ತಜ್ಞ ಸಮಿತಿ ನಿರ್ಧರಿಸಿರುವ ವೈಜ್ಞಾನಿಕ ಪಠ್ಯಕ್ರಮದಲ್ಲಿ ಕಿಂಚಿತ್ ದೋಷವೂ ಬಾರದಂತೆ ಅತ್ಯುನ್ನತ ಮಟ್ಟದ ಶಿಕ್ಷಣ ನೀಡಬೇಕು. ಆಯುರ್ವೇದ ವೈದ್ಯರು ಕೇವಲ ಆಯುರ್ವೇದದ ಚಿಕಿತ್ಸೆಯನ್ನಷ್ಟೇ ನೀಡುವಂತೆ ಕಾನೂನು ಮಾಡಬೇಕು. ಇದಕ್ಕೆ ಪೂರಕವಾಗಿ ಸರಕಾರವೇ ಆಯುರ್ವೇದ ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ನಿರ್ಮಿಸಿ ಪ್ರೋತ್ಸಾಹಿಸಬೇಕು. “ಆಯುರ್ವೇದ ಶಿಕ್ಷಣ ಎನ್ನುವುದು ಆಧುನಿಕ ವೈದ್ಯ ಪದ್ದತಿಗೆ ನುಗ್ಗುವ ಕಳ್ಳಮಾರ್ಗ” ಎನ್ನುವ ಜನರ ಭಾವನೆಯನ್ನು ಬದಲಾಯಿಸಬೇಕು. ಆಯುರ್ವೇದ ನಮ್ಮ ದೇಶದ ಸ್ವತ್ತು; ಅದನ್ನು ನಾವೇ ಕಾಪಾಡಿಕೊಳ್ಳಬೇಕು. ಆಯುರ್ವೇದದ ಉಳಿವಿಗೆ ಸರ್ಕಾರದ ನೆರವನ್ನು ವಿರೋಧಿಸುವಂತಹ ಮಾತುಗಳನ್ನು ಉಪೇಕ್ಷಿಸುವುದೇ ಸೂಕ್ತ!
ಆಯುರ್ವೇದದ ಕುರಿತಾಗಿ ಹೆಚ್ಚಿನ ವ್ಯಾಸಂಗ, ಸಂಶೋಧನೆ ಮಾಡುವವರಿಗೆ ತಜ್ಞರ ಸಮಿತಿಯ ಮೇಲುಸ್ತುವಾರಿಯಲ್ಲಿ ಸರಕಾರ ನೆರವು ನೀಡಬೇಕು. ಉದ್ಯಮಿಗಳನ್ನು ಇದಕ್ಕೆ ಪ್ರೇರೇಪಿಸಿ, ಉದ್ಯೋಗಸೃಷ್ಟಿ ಮಾಡಬಹುದು. ಕೇಂದ್ರೀಯ ಮಟ್ಟದಲ್ಲಿ ಆಯುರ್ವೇದ ನಿಗಮ ಸ್ಥಾಪನೆಯಾದರೆ ಮತ್ತಷ್ಟು ಒಳ್ಳೆಯದು. ಆಯುರ್ವೇದವೆಂದರೆ ಇಷ್ಟ ಬಂದುದ್ದನ್ನೆಲ್ಲಾ ಯದ್ವಾತದ್ವಾ ಮಾಡಬಹುದು ಎಂಬ ನಿಕೃಷ್ಟ ಭಾವನೆ ಇರಬಾರದು. ವೈಜ್ಞಾನಿಕತೆಗೆ ಇಂಬು ನೀಡುವಂತೆ, ಆಧುನಿಕ ಸಂಶೋಧನೆಯ ನಿಯಮಗಳು ಒಪ್ಪುವಂತೆ ಗುಣಮಟ್ಟದ ಸಾಧನೆ ಆಗಬೇಕು. ಇಲ್ಲವಾದರೆ ಪ್ರಪಂಚದ ಲೇವಡಿ ಶತಸ್ಸಿದ್ಧ! ಅದಕ್ಕೆ ಆಸ್ಪದ ಇರಬಾರದು. ಆಯುರ್ವೇದವನ್ನು ಪ್ರೋತ್ಸಾಹಿಸುವುದು ಹೀಗೆ. ಮೂರು ತಿಂಗಳ ಬ್ರಿಜ್-ಕೋರ್ಸ್ ಮಾಡುವಂತಹ ಸಲಹೆಗಳನ್ನು ಸರಕಾರಕ್ಕೆ ಯಾರು ನೀಡುತ್ತಾರೋ ತಿಳಿಯದು!
ಶಸ್ತ್ರಚಿಕಿತ್ಸೆಯ ವಿಷಯದಲ್ಲಿ ಆಯುರ್ವೇದ ಬಹಳ ಪ್ರಾಚೀನ ಸ್ಥಿತಿಯಲ್ಲಿಯೇ ಇದೆ. ಅಂದಿನ ಕಾಲದ ಶಸ್ತ್ರಚಿಕಿತ್ಸೆಯ ವಿಧಾನಗಳು ಇಂದಿಗೆ ಹೊಂದುವುದಿಲ್ಲ. ಶಸ್ತ್ರಚಿಕಿತ್ಸೆ ಎಂದರೆ ಕತ್ತರಿಸುವುದು, ಹೊಲಿಯುವುದು ಅಲ್ಲ! ಅದೊಂದು ಅತ್ಯಂತ ಸೂಕ್ಷ್ಮ ವಿಜ್ಞಾನ. ಕೆಲವೊಮ್ಮೆ ಮಿಲಿಮೀಟರ್ ವ್ಯತ್ಯಾಸ ಕೂಡ ಆಗುವಂತಿಲ್ಲ. ಈ ಮಟ್ಟದ ಪರಿಣತಿಯನ್ನು ಸಾಧಿಸುವುದಕ್ಕೆ ಎಷ್ಟೋ ವರ್ಷಗಳ ಅನುಭವ ಬೇಕು. ನೈಜಾರ್ಥದಲ್ಲಿ, ಶಸ್ತ್ರಚಿಕಿತ್ಸೆ ಎನ್ನುವುದು ಒಬ್ಬರ ಸಾಧನೆಯಲ್ಲ; ಒಂದು ತಂಡದ ಪ್ರಯತ್ನ. ಶಸ್ತ್ರಚಿಕಿತ್ಸೆಗೆ ಮುನ್ನ ಕಾಯಿಲೆ ಪತ್ತೆಗೆ ಅನುಸರಿಸುವ ನಿಖರವಾದ ವಿಧಾನ; ಎಂತಹ ಶಸ್ತ್ರಚಿಕಿತ್ಸೆ ಮಾಡಬೇಕೆನ್ನುವ ನಿರ್ಧಾರ; ಕಾಯಿಲೆಯ ಹಂತವನ್ನು ಅನುಸರಿಸಿ ಆರೈಕೆಯ ಮಟ್ಟದ ಚಿಂತನೆ; ಅರಿವಳಿಕೆಯ ಹಂತ ಮತ್ತು ಕಾರ್ಯಸೂಚಿ; ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಆಗಬಹುದಾದ ಅನಾಹುತಗಳಿಗೆ ಪೂರ್ವಸಿದ್ಧತೆ; ಶಸ್ತ್ರಚಿಕಿತ್ಸೆ ನಂತರದ ಅವಧಿಯ ನಿಗಾ; ಲಭ್ಯವಿರುವ ನೂರಾರು ಔಷಧಗಳ ಪೈಕಿ ಆಯಾ ರೋಗಿಗೆ ನೀಡಬಹುದಾದ ಔಷಧಗಳ ನಿಷ್ಕೃಷ್ಟ ಲೆಕ್ಕಾಚಾರ; ಸೋಂಕು ಆಗದಂತೆ ನೋಡಿಕೊಳ್ಳಬೇಕಾದ ವಿಧಾನ; ರೋಗಿ ಗುಣ ಹೊಂದುವಾಗ ಗಮನಿಸಬೇಕಾದ ಪದ್ದತಿ – ಹೀಗೆ ಇದೊಂದು ಸಂಕೀರ್ಣ ಸರಣಿ! ಆಧುನಿಕ ವೈದ್ಯಪದ್ದತಿ ಈ ಮಟ್ಟ ತಲುಪುವುದಕ್ಕೆ ನೂರಾರು ವರ್ಷಗಳು ಹಿಡಿದಿವೆ. ಇಷ್ಟಾಗಿಯೂ ಅವಘಡಗಳು ಸಂಭವಿಸುತ್ತವೆ. ಪ್ರಪಂಚದಲ್ಲಿ ದಿನವೂ ಲಕ್ಷಾಂತರ ಶಸ್ತ್ರಚಿಕಿತ್ಸೆಗಳು ಆಧುನಿಕ ವೈದ್ಯಪದ್ದತಿಯ ನಿಯಮಗಳ ಅನುಸಾರ ನಡೆಯುತ್ತವೆ. ಪ್ರತಿಯೊಂದು ಅವಘಡವನ್ನೂ ದಾಖಲಿಸಿ, ಚರ್ಚಿಸಿ, ಆ ತಪ್ಪು ಮತ್ತೊಮ್ಮೆ ಮರುಕಳಿಸದಂತೆ ಪಾಠ ಕಲಿಯಲಾಗುತ್ತದೆ. ಮೂವತ್ತು ವರ್ಷಗಳ, ಸಾವಿರಾರು ಶಸ್ತ್ರಚಿಕಿತ್ಸೆಗಳ ಅನುಭವ ಇರುವ ಶಸ್ತ್ರಚಿಕಿತ್ಸಾತಜ್ಞರು ಕೂಡ ತಾವು ಪರಿಪೂರ್ಣ ಎಂದು ಭಾವಿಸುವುದಿಲ್ಲ. ಈ ಕ್ಷೇತ್ರದ ಸಂಕೀರ್ಣತೆ ಇಂತಹದ್ದು. ಒಂದು ವಾರ ಕಲಿಯದಿದ್ದರೆ ಹಿಂದೆ ಬಿದ್ದಂತೆ!
ಹೀಗಿರುವಾಗ ಸರಕಾರ ಏಕಾಏಕಿ ಆಯುರ್ವೇದದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡುವುದು ಎಷ್ಟು ಸರಿ ಎನ್ನುವ ಜಿಜ್ಞಾಸೆ. ಅದಕ್ಕೆ ಸಂಬಂಧಿಸಿದ ಪುಸ್ತಕಗಳು ಯಾವುವು? ಅವರು ಏನನ್ನು ಓದಬೇಕು? ಎರಡೂವರೆ ಸಾವಿರ ವರ್ಷಗಳ ಹಿಂದಿನ ಪಠ್ಯ ಓದಿ ಇಂದು ಶಸ್ತ್ರಚಿಕಿತ್ಸೆ ಮಾಡಲಾದೀತೇ? ಅರಿವಳಿಕೆಗೆ ಯಾವ ಆಯುರ್ವೇದ ಔಷಧ ನೀಡುತ್ತಾರೆ? ರೋಗಿಗೆ ಏನಾದರೂ ಅವಗಢಗಳಾದರೆ ಯಾರು ಹೊಣೆ? ಶಸ್ತ್ರಚಿಕಿತ್ಸೆಯ ನಂತರದ ನಿಗಾ ಸಮಯದಲ್ಲಿ ಯಾವ ಆಯುರ್ವೇದ ಔಷಧ ಬಳಸಬೇಕು? ಸರ್ವೋಚ್ಚ ನ್ಯಾಯಾಲಯ ಎರಡು ವಿಭಿನ್ನ ಚಿಕಿತ್ಸಾ ಪದ್ದತಿಗಳನ್ನು ಒಗ್ಗೂಡಿಸಬಾರದು ಎಂದು ತೀರ್ಪು ನೀಡಿದೆ. ಹೀಗಿರುವಾಗ, ಶಸ್ತ್ರಚಿಕಿತ್ಸೆ ಮಾತ್ರ ಆಯುರ್ವೇದದ ವೈದ್ಯರು ಮಾಡಿ, ಉಳಿದದ್ದನ್ನು ಆಧುನಿಕ ವೈದ್ಯ ಪದ್ಧತಿ ಮಾಡಲಾಗದು, ಅದು ನ್ಯಾಯಾಲಯದ ಅಧಿಸೂಚನೆಗೆ ವಿರುದ್ಧ! ಇದರ ನಿರ್ವಹಣೆ ಹೇಗೆ?
ಪ್ರಜೆಗಳ ಆರೋಗ್ಯದ ಬಗ್ಗೆ ಈಗ ಸದ್ಯಕ್ಕೆ ಸರಕಾರ ವ್ಯಯಿಸುತ್ತಿರುವ ಹಣ ತೀರಾ ತೀರಾ ಕಡಿಮೆ. ನಮ್ಮ ದೇಶದ ಬಹುತೇಕ ಮಂದಿ ತಮ್ಮ ಅನಾರೋಗ್ಯದ ಚಿಕಿತ್ಸೆಗೆ ತಾವೇ ಹಣ ಖರ್ಚು ಮಾಡಿ ದಾರಿ ಕಂಡುಕೊಳ್ಳುತ್ತಾರೆ. ವಾಸ್ತವ ಹೀಗಿರುವಾಗ, ಸರಕಾರ ಮಾಡುವ ಅವೈಜ್ಞಾನಿಕ ನಿರ್ಧಾರಗಳಿಂದ ಪ್ರಜೆಗಳು ತಮ ಕಷ್ಟಾರ್ಜಿತವನ್ನು ಖರ್ಚು ಮಾಡಿದ ನಂತರವೂ ಇಲ್ಲಸಲ್ಲದ ಸಮಸ್ಯೆಗಳಿಗೆ ಒಳಗಾಗಬಾರದು. ಒಂದು ವೇಳೆ ಆಯುರ್ವೇದ ವ್ಯಾಸಂಗ ಮಾಡಿದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡುವ ಸವಲತ್ತನ್ನು ನೀಡಲೇಬೇಕು ಎಂದು ಸರಕಾರಕ್ಕೆ ಅನಿಸಿದರೆ, ಆ ಹಠಕ್ಕೆ ಸಾಮಾನ್ಯ ಪ್ರಜೆಗಳ ಅನಾರೋಗ್ಯ ಪ್ರಯೋಗಶಾಲೆ ಆಗಬಾರದು. ಮೊದಲು ಸರಕಾರ ಆಯುರ್ವೇದ ಶಲ್ಯಚಿಕಿತ್ಸೆಯ ರೂಪುರೇಷೆಗಳನ್ನು ನಿರ್ಧರಿಸಬೇಕು. ಅದಕ್ಕೆ ಸಂವಾದಿಯಾದ ಅರಿವಳಿಕೆ, ಔಷಧಗಳು, ತೀವ್ರ ನಿಗಾ ಘಟಕ, ತುರ್ತುಚಿಕಿತ್ಸೆಯ ಆಯುರ್ವೇದ ತಜ್ಞರು – ಇವರನ್ನೆಲ್ಲಾ ಸಿದ್ಧಗೊಳಿಸಬೇಕು. ಈ ತಯಾರಿ ಆದ ಮೇಲೆ ಕಾನೂನಿನ ದೃಷ್ಟಿಯಿಂದ ಇದಕ್ಕೆ ಮಾನ್ಯತೆ ಕೊಡಿಸಬೇಕು. ಶಲ್ಯಚಿಕಿತ್ಸೆಯ ಅವಗಢಗಳಿಗೆ ಕಾನೂನಾತ್ಮಕ ಹೊಣೆಗಾರಿಕೆಯನ್ನು ಪ್ರಜೆಗಳ ಮುಂದೆ ಸ್ಪಷ್ಟಪಡಿಸಬೇಕು. ಇದಕ್ಕೆ ನ್ಯಾಯಾಂಗದ ಮಾನ್ಯತೆ ಕೊಡಿಸಬೇಕು. ಈ ಮೂಲಭೂತ ತಯಾರಿ ಇಲ್ಲದೇ ದುಡುಕಿನ ಹೆಜ್ಜೆಗಳನ್ನು ಇಡುವುದು ಪ್ರಜೆಗಳಿಗಾಗಲೀ, ಆಯುರ್ವೇದ ವೈದ್ಯರಿಗಾಗಲೀ ಅಪಾಯಕಾರಿಯಾಗಬಹುದು.
ಖಾಸಗಿ ಆಸ್ಪತ್ರೆಗಳೇ ರಾರಾಜಿಸುವ ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯ ಮಟ್ಟ ಕಡಿಮೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಪ್ರಬಲವಾಗಿದೆ. ಅದಕ್ಕೆ ಪೂರಕ ಎಂಬಂತೆ ಖಾಸಗಿ ಆಸ್ಪತ್ರೆಗಳು ನಡೆದುಕೊಳ್ಳುತ್ತವೆ. ವಿದ್ಯಾರ್ಹತೆ ಇಲ್ಲದವರಿಗೆ ಕಡಿಮೆ ಸಂಬಳ ನೀಡಿ ಅವರನ್ನು ರೋಗಿಗಳ ಆರೈಕೆಗೆ ನೇಮಿಸಿಕೊಳ್ಳುವುದು, ಯಾರದೋ ಹಿರಿಯ ವೈದ್ಯರ ಹೆಸರಿನಲ್ಲಿ ರೋಗಿಯನ್ನು ದಾಖಲು ಮಾಡಿಕೊಂಡು ಮತ್ತೊಬ್ಬರಿಂದ ಅವರ ಚಿಕಿತ್ಸೆ ಮಾಡಿಸುವುದು, ಯಾವುದೇ ತರಬೇತಿ ಇಲ್ಲದ ದಾದಿಯರನ್ನು ತೀವ್ರನಿಗಾ ಘಟಕಗಳಲ್ಲಿ ಕೆಲಸ ಮಾಡಿಸುವುದು – ಹೀಗೆ ಹಲವಾರು ಒಳಸುಳಿಗಳು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಕಾಡುತ್ತಿವೆ. ಇದರ ಮೇಲೆ ಸರಕಾರ ತೆಗೆದುಕೊಳ್ಳುವ ಪ್ರತಿಯೊಂದು ಅವೈಜ್ಞಾನಿಕ ನಿರ್ಧಾರವೂ ಖಾಸಗಿ ಆಸ್ಪತ್ರೆಗಳಿಗೆ ಮತ್ತಷ್ಟು ಬಲವನ್ನು ನೀಡುತ್ತವೆ. “ನಮ್ಮ ಸರ್ಜನ್ ನಿಮ್ಮ ಆಪರೇಷನ್ ಮಾಡುತ್ತಾರೆ” ಎಂದು ಖಾಸಗಿ ಆಸ್ಪತ್ರೆ ಹೇಳಿದಾಗ, ಅದು ಯಾವ ಸರ್ಜನ್ ಎಂಬುದು ನಮಗೇ ಖಾತ್ರಿ ಇರಬೇಕು. ಎರಡು ಸಾವಿರ ವರ್ಷಗಳ ಹಿಂದಿನ ಪಠ್ಯ ಓದಿರುವ ಸರ್ಜನ್ ಬಳಿ ತಮ್ಮ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಎಷ್ಟು ಮಂದಿ ಸಿದ್ಧವೋ ತಿಳಿಯದು. ಆ ಶಸ್ತ್ರಚಿಕಿತ್ಸೆಯ ವೇಳೆ ಏನಾದರೂ ಅವಗಢವಾಗಿ ನ್ಯಾಯ ಬೇಡಲು ಹೋದಾಗ, ನಮ್ಮ ಘನ ನ್ಯಾಯಾಲಯಗಳು ನೋಡುವುದು “ಆ ವೈದ್ಯ ಪಠ್ಯಪುಸ್ತಕದ ಮಾದರಿಯನ್ನು ಅನುಸರಿಸಿದ್ದಾನೋ ಇಲ್ಲವೋ; ಈ ಶಸ್ತ್ರಚಿಕಿತ್ಸೆಯ ವಿಷಯವಾಗಿ ಜಾಗತಿಕ ಮಾರ್ಗಸೂಚಿ ಏನಿದೆ? ಅದು ಇಲ್ಲಿ ಸರಿಯಾಗಿ ಪಾಲನೆ ಆಗಿದೆಯೇ; ಆಗಿರುವ ಅವಗಢದಲ್ಲಿ ಶಸ್ತ್ರಚಿಕಿತ್ಸಕರ ನಿರ್ಲಕ್ಷ್ಯ ಇದೆಯೇ ಇಲ್ಲವೇ?” ಎಂಬುದು. ಹೀಗಾಗಿ, ಯದ್ವಾತದ್ವಾ ಆದೇಶಗಳನ್ನು ಹೊರಡಿಸುವ ಮುನ್ನ ಸರಕಾರ ಶಲ್ಯ ಚಿಕಿತ್ಸೆಯ ಪಠ್ಯಕ್ರಮವನ್ನು ನಿಷ್ಕರ್ಷೆ ಮಾಡಲೇಬೇಕು. ಆಧುನಿಕ ವೈದ್ಯ ಪದ್ದತಿಯ ಜಾಗತಿಕ ಮಾರ್ಗಸೂಚಿಗಳಿಗೆ ಪೂರಕವಾದ ಆಯುರ್ವೇದ ಶಲ್ಯಚಿಕಿತ್ಸೆಯ ಮಾರ್ಗಸೂಚಿಗಳನ್ನು ನಿರ್ಮಾಣ ಮಾಡಬೇಕು. ಈ ರೀತಿಯ ಸಮ್ಯಕ್ ಪೂರ್ವತಯಾರಿ ಇಲ್ಲದೇ ಯಾರನ್ನೂ ದೂಡಬಾರದು. ಇದನ್ನು ಪಾಲಿಸದಿದ್ದರೆ ರೋಗಿಗಳಿಗೆ ನ್ಯಾಯ ಬೇಡುವ ಮಾರ್ಗವೂ ದಕ್ಕುವುದಿಲ್ಲ.
ಈ ವಿಷಯವಾಗಿ ಸಾರ್ವಜನಿಕರು ಜಾಗೃತರಾಗುವುದು ಅಗತ್ಯ. ಇದು ಆಧುನಿಕ ವೈದ್ಯ ಪದ್ದತಿ ಮತ್ತು ಆಯುರ್ವೇದದ ನಡುವಿನ ಜಟಾಪಟಿ ಎಂದು ಭಾವಿಸಿದರೆ, ವಿಷಯದ ಗಹನತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದೇವೆ ಎಂದಾಯಿತು. ಇದು ಸರ್ಕಾರದ ಆತುರದ ಕ್ರಮವನ್ನು ಪ್ರಶ್ನಿಸುವ ನಿರ್ಧಾರ. ಪುನರ್ವಸತಿ ಎಂದರೆ ಹೊಸದಾದ ಮನೆಗಳನ್ನು ಕಟ್ಟಿಕೊಡುವುದೇ ಹೊರತು, ಇನ್ಯಾರೊ ಕಷ್ಟಪಟ್ಟು ಕಟ್ಟಿಕೊಂಡ ಮನೆಗಳಲ್ಲಿ ತೂರಿಕೊಳ್ಳುವಂತೆ ಆದೇಶಿಸುವುದಲ್ಲ. ಸರಕಾರಕ್ಕೆ ಆಯುರ್ವೇದದ ಪುನಶ್ಚೇತನ ಮಾಡುವ ಹೊಣೆಗಾರಿಕೆ ಇದ್ದರೆ, ಅದನ್ನು ಸರಿಯಾದ ದಾರಿಯಲ್ಲಿ ನಿರ್ವಹಿಸಬೇಕು. ಅದನ್ನು ಬಿಟ್ಟು ಸಾಮಾನ್ಯ ಜನರ ಆರೋಗ್ಯದ ವಿಷಯದಲ್ಲಿ ಅನವಶ್ಯಕ ಪ್ರಯೋಗ ಮಾಡಿ ಗೊಂದಲ ಮೂಡಿಸಬಾರದು. ಸರಕಾರಕ್ಕೆ ಈ ವಿಷಯದಲ್ಲಿ ಹಠವಿದ್ದರೆ, ಮೊದಲು ಕೆಲವು ನಿಗದಿತ ಸರ್ಕಾರಿ ಆಸ್ಪತ್ರೆಗಳಲ್ಲಿ “ಶಲ್ಯ ಚಿಕಿತ್ಸೆ” ಆಯುರ್ವೇದ ತಜ್ಞರನ್ನು ನೇಮಿಸಿಕೊಂಡು, ಐದು ವರ್ಷಗಳ ಕಾಲ ಅವರ ಕೆಲಸಕ್ಕೆ ಜನರ ಪ್ರತಿಸ್ಪಂದನೆ ಹೇಗಿರುತ್ತದೆ ಎಂದು ಮೌಲ್ಯಮಾಪನ ಮಾಡಿ ನಿರ್ಧರಿಸಲಿ. ಆ ಎಲ್ಲಾ ಮಾಹಿತಿಯನ್ನೂ ನ್ಯಾಯಾಲಯದ ಮುಂದೆ ಇಟ್ಟು ಅನುಮತಿ ಪಡೆಯಲಿ. ಆನಂತರ ಅದನ್ನು ಎಲ್ಲೆಡೆಯೂ ಜಾರಿಗೊಳಿಸಬಹುದೇ ಎಂಬುದು ನಿರ್ಧಾರವಾಗಲಿ.
ಕಟ್ಟಕಡೆಗೆ, ತಾನು ಯಾರಿಂದ ಚಿಕಿತ್ಸೆ ಪಡೆಯಬೇಕು ಎಂಬುದರ ಅಂತಿಮ ನಿರ್ಧಾರ ರೋಗಿಯದ್ದೇ! ಶಸ್ತ್ರಚಿಕಿತ್ಸೆ ಯಾರು ಮಾಡಬೇಕು ಎಂಬುದರ ಬಗ್ಗೆ ಪ್ರತಿಯೊಬ್ಬರಿಗೂ ಸ್ಪಷ್ಟತೆ ಇರಬೇಕು! ಪ್ರತಿಕ್ಷಣವೂ ಅಮೂಲ್ಯವಾಗುವ ತುರ್ತುಚಿಕಿತ್ಸೆಯ ಕಾಲದಲ್ಲಿ ಅತ್ಯುತ್ತಮ ಚಿಕಿತ್ಸೆಯೇ ಎಲ್ಲರಿಗೂ ಲಭಿಸಬೇಕು. ಅಂತಹ ಸಂದರ್ಭಗಳಲ್ಲಿ ನಮ್ಮ ಜೀವ ಉಳಿಸಲು ಯಾರು ಹಿತವರು ಎಂಬುದು ಅಂತಿಮ ಕ್ಷಣದ ನಿರ್ಧಾರ ಆಗಬಾರದು. ನಮ್ಮ ಜೀವನ್ಮರಣದ ಪ್ರಶ್ನೆ ಬಂದಾಗ ನಮ್ಮನ್ನು ಉಳಿಸಬೇಕಾದ್ದು ಸರ್ಕಾರದ ನಿರ್ಧಾರಗಳಲ್ಲ; ನಮ್ಮದೇ ಬುದ್ಧಿಪೂರ್ವಕ ಆಲೋಚನೆ! ಇಲ್ಲವಾದರೆ, ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದವನ ಕತೆಯಾದೀತು!

ನವೆಂಬರ್ 25, 2020 ರ ವಿಶ್ವವಾಣಿ ದಿನಪತ್ರಿಕೆಯಲ್ಲಿನ ಲೇಖನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ