ಬುಧವಾರ, ಡಿಸೆಂಬರ್ 16, 2020

 


“ನಿರಾಮಯ” ಇ-ಪುಸ್ತಕದ ಎಲ್ಲಾ ಓದುಗರಿಗೆ ಸ್ವಾಗತ!
ವೈದ್ಯಕೀಯ ಸಾಹಿತ್ಯಕ್ಕೆ “ನಿರಾಮಯ” ಇ-ಪುಸ್ತಕ ಮತ್ತೊಂದು ಸೇರ್ಪಡೆ; ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿದೆ.
“ನಿರಾಮಯ” ಪಡೆಯುವ ಬಗೆ:
1. “ನಿರಾಮಯ” ಇ-ಪುಸ್ತಕವನ್ನು Google Play Books ಮೂಲಕ ಉಚಿತವಾಗಿ ಪಡೆಯಬಹುದು. ಇದಕ್ಕೆ https://play.google.com/store/books/details?id=SLALEAAAQBAJ ಎಂಬ ಜಾಲತಾಣವನ್ನು ಪ್ರವೇಶಿಸಿ, ಅಲ್ಲಿ “Get ebook” ಎಂಬುದನ್ನು ಕ್ಲಿಕ್ ಮಾಡಿರಿ. Google ನಿಮ್ಮನ್ನು Sign in ಆಗುವಂತೆ ಕೇಳಬಹುದು. ಅದಕ್ಕೆ ಒಪ್ಪಿಗೆ ನೀಡಿ. ನಿಮ್ಮ gmail ಖಾತೆಯ login ಮತ್ತು password ಆಯ್ಕೆ ಬರುತ್ತದೆ. ನಿಮ್ಮ gmail ತೆರೆಯುವ ರೀತಿಯಲ್ಲಿಯೇ ತೆರೆಯಿರಿ. ಇದು Google ಅವರದ್ದೇ ತಾಣವಾದ್ದರಿಂದ ಮತ್ತೊಮ್ಮೆ ಹೊಸ ಖಾತೆ ತೆರೆಯುವ ಅಗತ್ಯವಿಲ್ಲ. ಈಗಾಗಲೇ ಇರುವ ನಿಮ್ಮ gmail ಖಾತೆಯೇ ಸಾಕು. ನೀವು login ಮಾಡಿದ ನಂತರ ತೆರೆದ ಪುಟದಲ್ಲಿ “Read” ಎಂಬ ಆಯ್ಕೆ ಬರುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಕೆಲವು ಸೆಕೆಂಡುಗಳಲ್ಲಿ “ನಿರಾಮಯ” ಇ-ಪುಸ್ತಕ ತೆರೆದುಕೊಳ್ಳುತ್ತದೆ. ಒಮ್ಮೆ ಹೀಗೆ ತೆರೆದರೆ, ಆನಂತರ “ನಿರಾಮಯ” ನಿಮ್ಮ Google Book ಖಾತೆಯ Library ನಲ್ಲಿ ಇರುತ್ತದೆ. ಮತ್ತೆ ಮತ್ತೆ ಅದನ್ನು download ಮಾಡುವ ಅಗತ್ಯ ಇಲ್ಲ. ಮೊದಲ ಪುಟದಿಂದ ಆರಂಭಿಸಿ ಓದಲು ಎಲ್ಲರಲ್ಲೂ ವಿನಂತಿ!
ಇಡೀ ಪುಸ್ತಕದಲ್ಲಿ 200 ಕ್ಕಿಂತ ಹೆಚ್ಚು ಅಪರೂಪದ ಚಿತ್ರಗಳಿವೆ. ಅದಕ್ಕೆ ಸಂಬಂಧಿಸಿದ ಮಾಹಿತಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಆಯಾ ಚಿತ್ರದ ಜೊತೆಗಿವೆ. ಚಿತ್ರಗಳೇ “ನಿರಾಮಯ”ದ ಜೀವಾಳ. ಕಂಪ್ಯೂಟರ್ ನಲ್ಲಿ ಪ್ರತಿಯೊಂದು ಚಿತ್ರವನ್ನು ಕ್ಲಿಕ್ ಮಾಡಿದಾಗಲೂ ಅದು ಅಂತರ್ಜಾಲದಲ್ಲಿನ ಮೂಲ ಚಿತ್ರವನ್ನು ತೆರೆಯುತ್ತದೆ.
ಜೊತೆಗೆ, ಇಂಗ್ಲೀಷ್ ಮಾಹಿತಿಯಲ್ಲಿ ಕೆಲವು ಪದಗಳು ನೀಲಿ ಬಣ್ಣದಲ್ಲಿ ಇವೆ. ಅಂತಹ ಪದಗಳನ್ನು ಕ್ಲಿಕ್ ಮಾಡಿದರೆ, ಆ ಪದಕ್ಕೆ ಸಂಬಂಧಿಸಿದ ಅಧಿಕೃತ ಮಾಹಿತಿ ಇರುವ ಪುಟ ಅಂತರ್ಜಾಲದಲ್ಲಿ ತೆರೆದುಕೊಳ್ಳುತ್ತದೆ! ಹೀಗೆ, ಪುಸ್ತಕದ ಪ್ರತಿಯೊಂದು ಪುಟವೂ ಮಾಹಿತಿಯನ್ನು ಹಲವಾರು ಪಟ್ಟು ವಿಸ್ತರಿಸಬಲ್ಲದು!
ನಿಮ್ಮ ಮೊಬೈಲ್ ಫೋನ್ ನಲ್ಲಿ ಕೂಡ “ನಿರಾಮಯ” ಪುಸ್ತಕವನ್ನು ಹೀಗೆಯೇ ಓದಬಹುದು. ಆದರೆ, ಅದರಲ್ಲಿ ಚಿತ್ರಗಳು ಅಂತರ್ಜಾಲದ ಮೂಲಕ ತೆರೆದುಕೊಳ್ಳುವುದಿಲ್ಲ. ಜೊತೆಗೆ, ಮೊಬೈಲ್ ನ ಸಣ್ಣ ಪರದೆಯ ಮೇಲೆ ಚಿತ್ರಗಳನ್ನು ಅಸ್ವಾದಿಸುವುದು ಸ್ವಲ್ಪ ಕಷ್ಟ! ಉಳಿದಂತೆ, ಮಾಹಿತಿಯೆಲ್ಲಾ ಒಂದೇ.
2. “ನಿರಾಮಯ” ಇ-ಪುಸ್ತಕದ ಆವೃತ್ತಿಯನ್ನು https://archive.org/details/niramaya-1607197361.-print ಎಂಬ ಜಾಲತಾಣದಲ್ಲಿ ಪಡೆಯಬಹುದು. ಪರದೆಯ ಮೇಲೆ Full Screen ಆಯ್ಕೆ ಒತ್ತಿ, ಪುಸ್ತಕವನ್ನು ನೇರವಾಗಿ ಆ ಜಾಲತಾಣದಲ್ಲೇ ಓದಬಹುದು. ಅದು ಸುಲಭ ಮತ್ತು ಸರಳ. ಆ ಜಾಲತಾಣವನ್ನು ನಿಮ್ಮ ಬ್ರೌಸರ್ ನಲ್ಲಿ bookmark ಮಾಡಿಕೊಂಡರೆ, ಪದೇಪದೇ ಹುಡುಕುವ ಅಗತ್ಯ ಇರುವುದಿಲ್ಲ.
“ನಿರಾಮಯ” ಪುಸ್ತಕವನ್ನು ಓದುವ ಬಗೆ:
“ನಿರಾಮಯ” ಒಂದು ಅಸಾಂಪ್ರದಾಯಿಕ ಕೃತಿ. ಇದು non-linear ಮಾದರಿಯ ರಚನೆ. ಇದು ಮೂಲತಃ ವೈದ್ಯಕೀಯ ಇತಿಹಾಸದ ಹಲವಾರು ಕವಲುಗಳನ್ನು ಚಿತ್ರಗಳ ಮೂಲಕ ಪರಿಚಯಿಸುವ ಕೃತಿ. ಈ ಕವಲುಗಳು ಒಂದೇ ಕಾಲದಲ್ಲಿ ವಿವಿಧ ದಿಕ್ಕುಗಳಲ್ಲಿ ಬೆಳೆದವು. ಹೀಗಾಗಿ, ಒಂದೊಂದೇ ಕವಲನ್ನು ಸ್ಥೂಲವಾಗಿ ಪರಿಚಯಿಸುತ್ತಾ ಹೋದಂತೆ ಕಾಲದ ಮಾಪನದಲ್ಲಿ ಹಿಂದೆ ಮುಂದೆ ಆಗಾಗ ಸಂಚಾರ ಮಾಡುತ್ತಾ ಹೋಗುವುದು ಪುಸ್ತಕದ ಅಗತ್ಯ.
“ನಿರಾಮಯ”ದಲ್ಲಿ ಮಾತನಾಡುವುದು ಚಿತ್ರಗಳು! ಇದರ ಜೊತೆಗೆ ಇರುವ ವಿವರಣೆಗಳು ತೀರಾ ಸರಳ ಮತ್ತು ಸ್ಥೂಲ. ಇದು ಕೇವಲ ಪರಿಚಯದ ಪುಸ್ತಕ! ಪ್ರತಿಯೊಂದು ಚಿತ್ರವೂ ವೈದ್ಯಕೀಯ ಇತಿಹಾಸದ ಒಂದು ತುಣುಕನ್ನು ಪರಿಚಯಿಸುತ್ತವೆ. ಅದರ ಮುಂದಿನ ಹಂತವನ್ನು ಮುಂದಿನ ಚಿತ್ರದಲ್ಲಿ ಕಾಣಬಹುದು. ಎರಡರ ನಡುವೆ ಇರುವ ಇತಿಹಾಸದ ಭಾಗವನ್ನು ಪಡೆದುಕೊಳ್ಳುವುದು ಅವರವರ ಆಸಕ್ತಿಯ ವಿಷಯ! ಈ ಬಗ್ಗೆ ಪುಸ್ತಕದ “ಮೊದಲ ಮಾತು” ವಿಭಾಗದಲ್ಲಿ ಬರೆದಿದ್ದೇನೆ.
“ನಿರಾಮಯ” ಪುಸ್ತಕವನ್ನು ಯಾವುದೇ ನಿರ್ಬಂಧವಿಲ್ಲದೆ ಮುಕ್ತವಾಗಿಯೇ ಓದಬೇಕು. ಮೊದಲು ಪುಸ್ತಕದಲ್ಲಿನ ಚಿತ್ರವನ್ನು ನೋಡಿರಿ. ನಂತರ ಅದಕ್ಕೆ ಸಂಬಂಧಿಸಿದ ವಿವರಣೆಯನ್ನು ಕನ್ನಡದಲ್ಲೋ ಅಥವಾ ಇಂಗ್ಲೀಷ್ ನಲ್ಲೋ (ಅಥವಾ ಎರಡೂ ಭಾಷೆಗಳಲ್ಲೊ) ಓದಿರಿ. ಅದರ ನಂತರ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ, ಚಿತ್ರದ ಮೂಲ ಜಾಲತಾಣ ತೆರೆದುಕೊಳ್ಳುತ್ತದೆ. ಈಗ ಆ ಚಿತ್ರದ ಪೂರ್ಣ ಸ್ವರೂಪವನ್ನು ಅದರ ಬಗ್ಗೆ ಓದಿರುವ ಮಾಹಿತಿಯ ಹಿನ್ನೆಲೆಯಲ್ಲಿ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.
“ನಿರಾಮಯ” ಒಂದು ಬೃಹತ್ ಸಂಗ್ರಹ. ಇದರಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಿವೆ! ಪ್ರತಿಯೊಂದು ಚಿತ್ರದ ಹಿಂದೆಯೂ ಚಂದದ ಇತಿಹಾಸವಿದೆ! ಹೀಗಾಗಿ, ದಿನಕ್ಕೆ 3-4 ಚಿತ್ರಗಳನ್ನು ಪುರುಸೊತ್ತಾಗಿ ನೋಡುತ್ತಾ ಹೋಗಬಹುದು. ಯಾವುದೇ ಪುಟವನ್ನಾದರೂ bookmark ಹಾಕಿ ಗುರುತು ಮಾಡಬಹುದು. ಮುಂದಿನ ಓದಿನಲ್ಲಿ ಅದೇ ಚಿತ್ರಕ್ಕೆ ಪುಸ್ತಕ ಮತ್ತೆ ತೆರೆಯುತ್ತದೆ. ಸಾಧ್ಯವಾದರೆ, ವಿವರಣೆಯ ಜೊತೆಗೆ ನೀಡಿರುವ ಅಧಿಕ ಮಾಹಿತಿಯ ಜಾಲತಾಣಗಳಲ್ಲಿನ ಮಾಹಿತಿಯನ್ನೂ ನೋಡಬಹುದು.
“ನಿರಾಮಯ” ವೈದ್ಯಕೀಯ ಇತಿಹಾಸದ ಬಗ್ಗೆ ಕನ್ನಡದಲ್ಲಿ ಬಂದಿರುವ ಮೊದಲ “ಕಾಫಿ-ಟೇಬಲ್” ಮಾದರಿಯ ಇ-ಪುಸ್ತಕ! ಯಾವುದೇ ಭಾರತೀಯ ಭಾಷೆಯಲ್ಲಿ ಇಂತಹ ಪ್ರಯೋಗ ಬಂದಿಲ್ಲ. ಇದು ಕನ್ನಡದ ಹೆಮ್ಮೆ!
“ನಿರಾಮಯ” ಪುಸ್ತಕದಲ್ಲಿನ ಯಾವುದೇ ಮಾಹಿತಿಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಇಚ್ಛೆ ಇರುವವರು ಈ ಪುಸ್ತಕದ advanced ಆವೃತ್ತಿಯನ್ನು ಪಡೆಯಲು 
Techfiz Inc
 ಸಂಸ್ಥೆಯನ್ನು info@techfiz.com ಎಂಬ email ವಿಳಾಸದಲ್ಲಿ ಸಂಪರ್ಕಿಸಬಹುದು.
“ನಿರಾಮಯ”ದ ಪ್ರಸ್ತುತ ಆವೃತ್ತಿಗಳು ಸಂಪೂರ್ಣ ಉಚಿತ. ಇದನ್ನು Google playbook ನಿಂದಾಗಲೀ ಅಥವಾ archive ಜಾಲತಾಣದಿಂದಾಗಲೀ ಪಡೆಯಲು ಯಾವುದೇ ವೆಚ್ಚವಿಲ್ಲ. ಪುಸ್ತಕವನ್ನು ಓದಿ, ಮೆಚ್ಚಿದವರು ಯಾವುದಾದರೂ ದೇಣಿಗೆ ನೀಡಬಯಸಿದರೆ ಅದನ್ನು ನೇರವಾಗಿ ಶ್ರೀಯುತ ಓಂಶಿವಪ್ರಕಾಶ್ ಅವರು ನಡೆಸುತ್ತಿರುವ “ಸಂಚಿ ಫೌಂಡೇಶನ್ ®” ಎಂಬ ಕನ್ನಡ ಸಂಸ್ಥೆಗೆ ನೀಡಬಹದು. ಕನ್ನಡದ ಅಪರೂಪದ ಹಳೆಯ ಪುಸ್ತಕಗಳನ್ನು scan ಮಾಡಿ, ಅವನ್ನು ಅಂತರ್ಜಾಲದ archive ಜಾಲತಾಣಕ್ಕೆ ಸೇರಿಸಿ, ಮುಕ್ತವಾಗಿ ಎಲ್ಲರಿಗೂ ದೊರಕಿಸುವ ಒಳ್ಳೆಯ ಕೆಲಸದಲ್ಲಿ ಸಂಚಿ ಫೌಂಡೇಶನ್ ® ನ “ಸಂಚಯ” ಸಮುದಾಯ ನಿರತವಾಗಿದೆ. “ನಿರಾಮಯ” ಓದುಗರಿಂದ “ಸಂಚಯ”ದ ಕೆಲಸಗಳಿಗೆ ಮತ್ತಷ್ಟು ಪ್ರೇರಣೆ ಸಿಗಲಿ ಎಂದು ಹಾರೈಕೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಶ್ರೀಯುತ ಓಂಶಿವಪ್ರಕಾಶ್ ಅವರನ್ನು info@sanchifoundation.org ಅಥವಾ info@sanchaya.org ಎಂಬ ವಿಳಾಸದಲ್ಲಿ ಸಂಪರ್ಕಿಸಬಹುದು.
“ನಿರಾಮಯ”ದ ಓದು ನಿರಾಳವಾಗಿ ಸಾಗಲಿ! ಪುಸ್ತಕದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಲು ವಿನಂತಿ. ಇ-ಪುಸ್ತಕ ಪ್ರಪಂಚದಲ್ಲಿನ ಈ ನವೀನ ಪ್ರಯೋಗ ನಿಮಗೆ ಹೇಗೆನಿಸಿತು ಎಂಬುದನ್ನು ಮಾತ್ರ ತಪ್ಪದೇ ತಿಳಿಸಿ.

 


ಉದಯವಾಣಿ ದಿನಪತ್ರಿಕೆ "ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದು ಸಮಂಜಸವೇ?" ಎನ್ನುವ ವಿಷಯದ ಬಗ್ಗೆ 13/12/2020 ರ ಭಾನುವಾರ ಕೆಲವು ವೈದ್ಯರ ಅಭಿಪ್ರಾಯಗಳನ್ನು ಪ್ರಕಟಿಸಿತ್ತು. ಇದರಲ್ಲಿ ನನ್ನ ಎರಡು ಮಾತು ಇಲ್ಲಿದೆ.

**ರೋಗಿಗಳ ಅವರ ಉತ್ತರವೇ ಸರಿಯಾದ ಉತ್ತರ**
"ಆಯುರ್ವೇದದ ಶಲ್ಯಚಿಕಿತ್ಸೆ ಓದಿರುವ ವೈದ್ಯರು ಆಧುನಿಕ ವೈದ್ಯಪದ್ಧತಿಯ ಅನುಸಾರವಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕೆ?" ಎಂಬ ಪ್ರಶ್ನೆಯಲ್ಲಿ ಸರಿ-ತಪ್ಪುಗಳ ಜಿಜ್ಞಾಸೆ ಇರಬೇಕಾದ್ದು ವೈದ್ಯರ ಮಟ್ಟದಲ್ಲಿ ಮಾತ್ರವಲ್ಲ; ಅದಕ್ಕೆ ಪ್ರಮುಖವಾಗಿ ಆಧಾರವಾಗಬೇಕಾದ್ದು ರೋಗಿಗಳ ಸುರಕ್ಷತೆ ಮತ್ತು ಶಸ್ತ್ರಚಿಕಿತ್ಸೆಯ ಸಫಲತೆ. ಗಡಿಯಾರದ ರಿಪೇರಿಗೆ ಅಥವಾ ಕಾರಿನ ಸರ್ವೀಸಿಗೆ ಕೂಡ ತಜ್ಞರನ್ನು ಬಯಸುವ ನಮ್ಮ ಸಮಾಜ, ತಮ್ಮ ಸ್ವಂತ ಶರೀರದ ಶಸ್ತ್ರಚಿಕಿತ್ಸೆಯಂತಹ ಸಂಕೀರ್ಣ ಪ್ರಕ್ರಿಯೆಗೆ “ಯಾವುದೋ ವೈದ್ಯಪದ್ಧತಿಯನ್ನು ಅಧ್ಯಯನ ಮಾಡಿ ಇನ್ಯಾವುದೋ ವೈದ್ಯಪದ್ಧತಿಯನ್ನು ಅನುಸರಿಸಿ ಮಾಡುವವರನ್ನು ಯಾವ ಮಾನದಂಡಗಳಿಂದ ಒಪ್ಪುತ್ತದೆ?” ಎಂಬುದು ನಾವು ಕೇಳಬೇಕಾದ ನೈಜ ಪ್ರಶ್ನೆ.
ಶಸ್ತ್ರಚಿಕಿತ್ಸೆ ಒಂದು ಸಾಂಘಿಕ ಪ್ರಯತ್ನ. ರೋಗ ಪತ್ತೆ ಮಾಡುವವರು, ಪ್ರಯೋಗಾಲಯಗಳು ಕ್ಷ-ಕಿರಣ ತಜ್ಞರು, ಅರಿವಳಿಕೆ ತಜ್ಞರು, ಶಸ್ತ್ರಚಿಕಿತ್ಸೆಯ ವೈದ್ಯರು, ತೀವ್ರ-ನಿಗಾ ಘಟಕದ ತಜ್ಞರು, ಫಿಸಿಯೋಥೆರಪಿ - ಹೀಗೆ ಹಲವಾರು ತಜ್ಞರ ತಂಡ ಏಕರೂಪವಾಗಿ ಬೆಸೆದುಕೊಂಡು ಮಾಡಬೇಕಾದ ಸರಣಿ ಪ್ರಕ್ರಿಯೆ. ಇಂತಹ ಸಂಕೀರ್ಣ ಸರಣಿಯ ಅತ್ಯುತ್ತಮ ನಿರ್ವಹಣೆಗೆ ಪ್ರತಿಯೊಬ್ಬರೂ ಒಂದೇ ಮಾದರಿಯ ತರಬೇತಿ ಹೊಂದಿರುವುದು ಬಹಳ ಮುಖ್ಯ.
ಹೀಗಾಗಿ, ಆಯುರ್ವೇದದ ಶಲ್ಯಚಿಕಿತ್ಸಕರು ಶಸ್ತ್ರಚಿಕಿತ್ಸೆ ಮಾಡಬೇಕೆಂದರೆ, ಇಡೀ ತಂಡವನ್ನು ಆಯುರ್ವೇದದ ಆಧಾರದ ಮೇಲೆ ಸಂಪೂರ್ಣವಾಗಿ ಕಟ್ಟಬೇಕಾಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆ ಇದನ್ನು ಸಫಲವಾಗಿ ಮಾಡಿದರೆ ಯಾರಿಗೂ ಅಭ್ಯಂತರವಿಲ್ಲ. ಆದರೆ ಬೇರೆ ಯಾವುದೋ ಪದ್ಧತಿಯಲ್ಲಿ ಅಧ್ಯಯನ ಮಾಡಿರುವವರನ್ನು ಮತ್ತೊಂದು ತಂಡದಲ್ಲಿ ಅನಾಮತ್ತಾಗಿ ಸೇರಿಸಿದರೆ ಅದು ಒಂದು ತಂಡವಾಗಿ ಉಳಿಯುವುದಿಲ್ಲ.
ಒಂದು ವೇಳೆ ಶಸ್ತ್ರಚಿಕಿತ್ಸೆ ಸಫಲವಾಗದಿದ್ದರೆ ಅದರ ಹೊಣೆಗಾರಿಕೆ ಯಾರದ್ದು? ಎರಡು ಬೇರೆ-ಬೇರೆ ಪದ್ಧತಿಗಳನ್ನು ಬೆರೆಸಿದ ತಂಡದಲ್ಲಿ ಸಾಫಲ್ಯವನ್ನು ಎಲ್ಲರೂ ಸಂಭ್ರಮಿಸುತ್ತಾರೆ. ಆದರೆ, ಸೋಲಿನ ಹೊಣೆಗಾರಿಕೆಗೆ ಯಾರೂ ಸಿದ್ಧರಿರುವುದಿಲ್ಲ. ಈ ದ್ವಂದ್ವದಲ್ಲಿ ಸೋಲುವವರು ರೋಗಿಗಳು. ಹಾಗೆ ಆಗುವುದು ಅಸಹನೀಯ ಮತ್ತು ವೈದ್ಯಕೀಯ ವ್ಯವಸ್ಥೆಯ ಮೂಲೋದ್ದೇಶದ ಸೋಲು.
ರೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಮಾತ್ರ ಈ ಪ್ರಶ್ನೆಯನ್ನು ವಿವೇಚಿಸಬೇಕು. ಇದು ಯಾರೊಬ್ಬರ ಪ್ರತಿಷ್ಠೆಯ ಪ್ರಶ್ನೆ ಆಗಬಾರದು. “ನಮ್ಮ ಶಸ್ತ್ರಚಿಕಿತ್ಸೆಯನ್ನು ಯಾರು ಮಾಡಬೇಕು?” ಎಂಬುದನ್ನು ನಿರ್ಧರಿಸಬೇಕಾದವರು ಖುದ್ದು ರೋಗಿಗಳು! "ನಿಮ್ಮ ದೇಹದ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನೀವು ಶಲ್ಯಚಿಕಿತ್ಸೆ ಓದಿರುವ ಆಯುರ್ವೇದ ವೈದ್ಯರಿಂದ ಮಾಡಿಸಿಕೊಳ್ಳುತ್ತೀರಾ?" ಎಂದು ರೋಗಿಗಳನ್ನು ಕೇಳಬೇಕು. ಅವರ ಉತ್ತರವೇ ಸರಿಯಾದ ಉತ್ತರ.