ಗುರುವಾರ, ಜನವರಿ 18, 2018

ವೈದ್ಯರು, ರೋಗಿಗಳು ಮತ್ತು ಗ್ರಾಹಕ ವೇದಿಕೆ - ವಿಶ್ವಾಸದ ಪ್ರಪಾತಕ್ಕೆ ಆಹ್ವಾನ?



ಕಳೆದ ವಾರ ಪತ್ರಿಕೆಗಳಲ್ಲಿ ಪ್ರಕಟವಾದ ಒಂದು ಸುದ್ದಿ ವೈದ್ಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಪಸ್ಮಾರ (ಫಿಟ್ಸ್) ಸಮಸ್ಯೆಯಿಂದ ಬಳಲುತ್ತಿದ್ದ 9 ವರ್ಷದ ಮಗುವಿಗೆ ಮಕ್ಕಳ ನರರೋಗ ತಜ್ಞರೊಬ್ಬರು ಅಪಸ್ಮಾರದ ನಿಯಂತ್ರಣಕ್ಕೆ ಔಷಧ ಸೂಚಿಸಿದ್ದರು. ಮಗುವಿನ ಚರ್ಮದ ಮೇಲೆ ಈ ಔಷಧದ ಅಡ್ಡ-ಪರಿಣಾಮಗಳಿಂದ ಮಗು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವಂತೆ ಆಯಿತು. ಔಷಧದ ಅಡ್ಡ-ಪರಿಣಾಮಕ್ಕೆ ವೈದ್ಯರನ್ನು ಹೊಣೆಯನ್ನಾಗಿಸಿ ಗ್ರಾಹಕ ವೇದಿಕೆ ಆ ವೈದ್ಯರಿಗೆ ರೂ.90,೦೦೦ ದಂಡ ವಿಧಿಸಿತು. ಔಷಧದಿಂದ ಅಡ್ಡ-ಪರಿಣಾಮ ಆಗಬಹುದೆಂದು ತಿಳಿದಿದ್ದರೂ ಆ ಔಷಧವನ್ನು ಸೂಚಿಸಿದ್ದಕ್ಕೆ ಈ ದಂಡ ಎಂದು ಹೇಳಲಾಗಿದೆ. ಇದು ಪತ್ರಿಕಾ ವರದಿಯಲ್ಲಿನ ಸಾರ.

ಈ ಪತ್ರಿಕಾ ವರದಿ ಸತ್ಯವೇ ಆಗಿದ್ದಲ್ಲಿ ಇದು ಕಳವಳಕಾರಿ ವಿಷಯ. ಸರಿ-ತಪ್ಪುಗಳ ಜಿಜ್ಞಾಸೆಗೆ ಹೋಗದೇ ಕೇವಲ ವಾಸ್ತವಿಕ ಅಂಶಗಳನ್ನು ಗಮನಿಸುತ್ತಾ ಹೋದರೆ ಈ ಕಳವಳದ ಕಾರಣ ತಿಳಿಯಬಹುದು. ಇದನ್ನು ಒಂದೊಂದಾಗಿ ನೋಡೋಣ.

1.       ಚಿಕಿತ್ಸೆ ನೀಡಿದ ವೈದ್ಯರ ಅರ್ಹತೆ ಮತ್ತು ತಜ್ಞತೆ: ಮಗುವಿನ ಅಪಸ್ಮಾರದ ಸಮಸ್ಯೆಯನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಿದ ಈ ವೈದ್ಯರು ಮಕ್ಕಳ ನರರೋಗ ತಜ್ಞರು. ಮಕ್ಕಳ ಆರೋಗ್ಯದ ವಿಷಯದಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದ ನಂತರ ನಮ್ಮ ದೇಶದ ಪ್ರತಿಷ್ಟಿತ ದೆಹಲಿಯ ಅಖಿಲ ಭಾರತ ಆಯುರ್ವಿಜ್ಞಾನ ಮಹಾ ಸಂಸ್ಥಾನದಲ್ಲಿ (AIIMS) ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿ ಮಕ್ಕಳ ನರರೋಗ ಶಾಸ್ತ್ರದಲ್ಲಿ ಅತ್ಯುನ್ನತ ಪದವಿ ಪಡೆದಿರುವ ದೇಶದ ಕೆಲವೇ ಕೆಲವು ಮಕ್ಕಳ ನರರೋಗ ತಜ್ಞರಲ್ಲಿ ಒಬ್ಬರು. ಮಕ್ಕಳ ಅಪಸ್ಮಾರ ಸಮಸ್ಯೆಯ ವಿಶೇಷ ತಜ್ಞರು. ಇದುವರೆವಿಗೆ ಇಂತಹ ಸಹಸ್ರಾರು ಮಕ್ಕಳಿಗೆ ಚಿಕಿತ್ಸೆ ನೀಡಿರುವವರು. ಒಟ್ಟಾರೆ, ಏನೋ ಓದಿ ಏನೋ ಚಿಕಿತ್ಸೆ ಮಾಡುವ “ಸೇತುಬಂಧ” ವೈದ್ಯರ ಗುಂಪಿಗೆ ಸೇರಿದವರಲ್ಲ! ಇಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಕೇವಲ ತಜ್ಞರಷ್ಟೇ ಅಲ್ಲ; ಅನುಭವಸ್ಥರು ಕೂಡ.

2.       ಚಿಕಿತ್ಸೆಗೆ ಬಳಸಿದ (ಅಡ್ಡ ಪರಿಣಾಮ ಉಂಟು ಮಾಡಿದ) ಔಷಧ: ಕಾರ್ಬಮಝಪಿನ್ ಎಂಬ ಹೆಸರಿನ ಈ ಔಷಧವನ್ನು 1953 ರಲ್ಲಿ ಕಂಡುಹಿಡಿಯಲಾಯಿತು. 1965 ರಿಂದ ಜಗತ್ತಿನಾದ್ಯಂತ ಅಪಸ್ಮಾರ ಸಮಸ್ಯೆಗೆ ಈ ಔಷಧವನ್ನು ಬಳಸಲಾಗುತ್ತಿದೆ. ಐದು ದಶಕಗಳಿಗೂ ಮೀರಿದ ಈ ಅವಧಿಯಲ್ಲಿ ಕೋಟ್ಯಾಂತರ ರೋಗಿಗಳು ಈ ಔಷಧದಿಂದ ತಮ್ಮ ಅಪಸ್ಮಾರದ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಅಪಸ್ಮಾರ ನಿಯಂತ್ರಣಕ್ಕೆ ಬಹಳ ಪರಿಣಾಮಕಾರಿ ಎಂದು ಸಾಕಷ್ಟು ಸೋವಿಯಾಗಿ ಲಭಿಸುವ ಈ ಔಷಧ ಹೆಸರು ಪಡೆದಿದೆ.

3.       ಔಷಧದ ಅಡ್ಡ-ಪರಿಣಾಮ: ಜಗತ್ತಿನಲ್ಲಿ ಅಡ್ಡ-ಪರಿಣಾಮ ಇಲ್ಲದ ಯಾವುದೇ ಔಷಧವೂ ಇಲ್ಲ. ತಮ್ಮ ಔಷಧಕ್ಕೆ ಅಡ್ಡ-ಪರಿಣಾಮ ಇಲ್ಲವೆಂದು ಯಾರಾದರೂ ಹೇಳಿದಲ್ಲಿ ಅದು ಇಲ್ಲವೇ ಹಸೀ ಸುಳ್ಳು; ಅಥವಾ ಆ ಔಷಧವನ್ನು ವೈಜ್ಞಾನಿಕವಾಗಿ ಯಾರೂ ಪರೀಕ್ಷಿಸಿಲ್ಲ ಅಷ್ಟೇ. ಇದು ಯಾವುದೇ ವೈಜ್ಞಾನಿಕ ಚಿಕಿತ್ಸಾ ಪದ್ದತಿಯಾ ಔಷಧಕ್ಕೂ ಅನ್ವಯವಾಗುತ್ತದೆ. ಕಾರ್ಬಮಝಪಿನ್ ಔಷಧಕ್ಕೂ ಅಡ್ಡ ಪರಿಣಾಮಗಳು ಇವೆ. ಕೆಲವರಲ್ಲಿ ಈ ಔಷಧ ರಕ್ತಕಣಗಳ ಉತ್ಪತ್ತಿಯನ್ನು ಕಡಿಮೆ ಮಾಡಬಹುದು. ಇನ್ನು ಕೆಲವರಲ್ಲಿ ಮೂತ್ರದ ಉತ್ಪತ್ತಿಯನ್ನು ನಿಲ್ಲಿಸಬಹುದು. ದೃಷ್ಟಿದೋಷ ಮಾಡಬಹುದು. ಹೃದಯದ ಬಡಿತವನ್ನು ಏರುಪೇರು ಮಾಡಬಹುದು. ಚರ್ಮದ ಉರಿಯೂತ ಉಂಟಾಗಬಹುದು. ಕೆಲವು ಬಾರಿ ಚರ್ಮದ ತುಂಬಾ ಬೊಕ್ಕೆಗಳಾಗಿ ಗಂಭೀರ ಪರಿಣಾಮ ಆಗಬಹುದು. ಆದರೆ ಈ ಅಡ್ಡ-ಪರಿಣಾಮಗಳು ಎಲ್ಲರಲ್ಲೂ ಆಗುವುದಿಲ್ಲ.

4.       ಈ ಸಂದರ್ಭದಲ್ಲಿ ಆದದ್ದೇನು?: ಕಾರ್ಬಮಝಪಿನ್ ಔಷಧ ಸೇವಿಸಿದ ಈ ಮಗುವಿಗೆ ಅಪಸ್ಮಾರವೇನೋ ನಿಯಂತ್ರಣಕ್ಕೆ ಬಂತು. ಆದರೆ ಚರ್ಮದ ಉರಿಯೂತ ಕಾಣಿಸಿತು. ಇದನ್ನು ಪೋಷಕರು ಆರಂಭದಲ್ಲಿ ಗಮನಿಸದೇ ಔಷಧ ಮುಂದುವರೆಸಿದ ಪರಿಣಾಮವಾಗಿ ಚರ್ಮದ ಉರಿಯೂತ ತೀವ್ರ ಸ್ವರೂಪವನ್ನು ಪಡೆದು ಗಂಭೀರವಾಯಿತು. ಆಗ ಮಗುವನ್ನು ಬೇರೆ ಆಸ್ಪತ್ರೆಗೆ ಸೇರಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಚರ್ಮದ ಮೇಲೆ ಈ ರೀತಿಯ ತೀವ್ರ ಸ್ವರೂಪದ ಉರಿಯೂತ ಸುಮಾರು 10000 ದಲ್ಲಿ 1 ಎಂದು ಹೇಳಲಾಗಿದೆ. ಅಂದರೆ, ಸುಮಾರು 10,000 ಜನ ಕಾರ್ಬಮಝಪಿನ್ ಔಷಧ ಸೇವಿಸಿದರೆ, ಅವರಲ್ಲಿ ಒಬ್ಬರಿಗೆ ಈ ರೀತಿ ಜರುಗಬಹುದು. ಆದ್ದರಿಂದ ಇದನ್ನು ಸಾಮಾನ್ಯ ಅಡ್ಡ-ಪರಿಣಾಮ ಎಂದು ಪರಿಗಣಿಸುವುದಿಲ್ಲ. ಇದು ಅತ್ಯಂತ ವಿರಳವಾಗಿ ಗೋಚರಿಸುವ ಅಡ್ಡ-ಪರಿಣಾಮ ಎಂದು ಹೇಳಲಾಗಿದೆ.

5.       ಅಡ್ಡ-ಪರಿಣಾಮಗಳು ಸಂಭವಿಸುವ ಬಗ್ಗೆ ವೈದ್ಯರಿಗೆ ತಿಳಿಯದೇ?: ಅಡ್ಡ-ಪರಿಣಾಮಗಳ ಬಗ್ಗೆ ವೈದ್ಯಕೀಯ ವ್ಯಾಸಂಗದಲ್ಲಿ ಬಹಳ ಶಿಸ್ತಿನ ಅಧ್ಯಯನ ಇರುತ್ತದೆ. ವಿಶೇಷ ತಜ್ಞ ವೈದ್ಯರು ಕೆಲವೇ ಔಷಧಗಳನ್ನು ಬಳಸುತ್ತಾರೆ. ಆದ್ದರಿಂದ ಅವರಿಗೆ ತಾವು ಬರೆಯುವ ಪ್ರತಿಯೊಂದು ಔಷಧದ ಅಡ್ಡ-ಪರಿಣಾಮಗಳ ಬಗ್ಗೆ ಸಾಕಷ್ಟು ಮಾಹಿತಿ ಇರುತ್ತದೆ. ಆದರೆ, ಯಾವ ರೋಗಿಗೆ ಅಡ್ಡ-ಪರಿಣಾಮ ಆಗಬಹುದು ಎಂದು ಊಹಿಸುವುದೂ ಅಸಾಧ್ಯ. ಅಂತೆಯೇ, 10000 ದಲ್ಲಿ ಒಬ್ಬರಿಗೆ ತೀವ್ರವಾದ ಅಡ್ಡ-ಪರಿಣಾಮ ಆಗುತ್ತದೆ ಎಂದು ಎಲ್ಲಾ ಹತ್ತು ಸಾವಿರ ರೋಗಿಗಳಿಗೂ ಆ ಔಷಧದ ಚಿಕಿತ್ಸೆ ತಡೆಹಿಡಿಯುವುದೂ ಅಶಕ್ಯ. ರಸ್ತೆಯಲ್ಲಿ ಅಪಘಾತ ಆಗುತ್ತದೆಂದು ವಾಹನ ಸಂಚಾರವನ್ನೇ ನಿಲ್ಲಿಸಿಬಿಡುವುದಕ್ಕೆ ಆಗುತ್ತದೆಯೇ? ಪ್ರಸವದ ವೇಳೆ ಗರ್ಭವತಿಯರಿಗೆ ಅಪಾಯ ಸಂಭವಿಸಬಹುದೆಂದು ಯಾರೂ ಗರ್ಭ ಧರಿಸಬಾರದು ಎನ್ನುವುದು ಹಾಸ್ಯಾಸ್ಪದ. ಅಂತೆಯೇ, ಯಾರಿಗೆ ಔಷಧದ ಅಡ್ಡ-ಪರಿಣಾಮ ಆಗಬಹುದು ಎಂದು ತಿಳಿಯಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಲ್ಲಿ “ಅಡ್ಡ-ಪರಿಣಾಮ ಆಗಬಹುದೆಂದು ತಿಳಿದಿದ್ದರೂ ಆ ಔಷಧವನ್ನು ಏಕೆ ಸೂಚಿಸಿದಿರಿ?” ಎಂದು ಪ್ರಶ್ನೆ ಮಾಡಿದರೆ ಏನು ಉತ್ತರ ಕೊಡಬೇಕು?

6.       ಪರಿಸ್ಥಿತಿ ಇಷ್ಟು ವಿಷಮವಾಗದಂತೆ ತಡೆಯಲು ಸಾಧ್ಯವಿರಲಿಲ್ಲವೇ? ಹಾಗಿದ್ದಲ್ಲಿ ಇದು ವೈದ್ಯಕೀಯ ನಿರ್ಲಕ್ಷ್ಯ ಏಕಲ್ಲ?: ಇದು ಕೇವಲ ವೈದ್ಯಕೀಯದ ಪ್ರಶ್ನೆಯಲ್ಲ. ಇದೊಂದು ಸಾಮಾಜಿಕ ಪ್ರಶ್ನೆ ಕೂಡ. ಯಾವುದೇ ಖಾಯಿಲೆಯ ಚಿಕಿತ್ಸೆ ಕೇವಲ ವೈದ್ಯರ ಜವಾಬ್ದಾರಿ ಮಾತ್ರವೇ ಅಲ್ಲ. ಅದೊಂದು ತಂಡದ ನಿರ್ವಹಣೆ ಇದ್ದಂತೆ. ಖಾಯಿಲೆ ಒಂದೆಡೆ – ಅದನ್ನು ನಿವಾರಿಸುವ, ನಿಯಂತ್ರಿಸುವ ಹೊಣೆಗಾರಿಕೆ ಇರುವವರು ಇನ್ನೊಂದೆಡೆ. ಈ ಎರಡನೇ ತಂಡದಲ್ಲಿ ರೋಗಿ, ರೋಗಿಯ ಆಪ್ತರು, ವೈದ್ಯರು, ಆಸ್ಪತ್ರೆ, ಔಷಧ, ಪರೀಕ್ಷೆಗಳು – ಎಲ್ಲವೂ ಇರುತ್ತವೆ. ಈ ಇಡೀ ತಂಡ ಒಟ್ಟುಗೂಡಿ ಖಾಯಿಲೆಯ ವಿರುದ್ಧ ಹೋರಾಡಬೇಕು. ಈ ತಿಳುವಳಿಕೆ ಎಲ್ಲರಿಗೂ ಅಗತ್ಯ. ಆದರೆ ನಮ್ಮಲ್ಲಿ ಈಚೆಗೆ ಈ ಹೊಣೆಯನ್ನು ಕೇವಲ ವೈದ್ಯರ, ಆಸ್ಪತ್ರೆಯ ಮೇಲೆ ಹಾಕುವ ಪರಿಪಾಠ ಅಧಿಕವಾಗುತ್ತಿದೆ. ಈ ಪ್ರಸಂಗದಲ್ಲೇ ನೋಡಿದರೆ, ವೈದ್ಯರ ಹೊಣೆ ಖಾಯಿಲೆಯನ್ನು ಪತ್ತೆ ಮಾಡುವುದು, ಅದಕ್ಕೆ ತಕ್ಕ ಔಷಧ ಸೂಚಿಸುವುದು, ಔಷಧದ ಬಗ್ಗೆ ವಿವರ ನೀಡುವುದು, ಹೇಗೆ ಖಾಯಿಲೆಯ ಪ್ರಗತಿಯನ್ನು ಮಾಪನ ಮಾಡುವುದು ಹೇಗೆಂದು ತಿಳಿಸುವುದು, ಪುನಃ ಪರೀಕ್ಷೆ ಮಾಡಿ ಖಾಯಿಲೆಯ ಪ್ರಗತಿಯ ಪರಿಷ್ಕರಣೆ ಮಾಡುವುದು – ಇಷ್ಟು. ಅದನ್ನು ಸದರಿ ವೈದ್ಯರು ಸರಿಯಾಗಿಯೇ ಮಾಡಿದ್ದಾರೆ ಎಂದು ರೋಗಿಯ ಆಪ್ತರು ಹಾಗೂ ಗ್ರಾಹಕ ವೇದಿಕೆ ಕೂಡ ಒಪ್ಪಿದೆ. ಆ ಮಗುವಿನ ಪೋಷಕರು ಮಗುವಿನ ಚರ್ಮದ ಮೇಲೆ ಆದ ಉರಿಯೂತ ಉಲ್ಬಣ ಆಗುವವರೆಗೆ ಅದನ್ನು ವೈದ್ಯರ ಗಮನಕ್ಕೆ ತಂದಿಲ್ಲ ಎಂಬ ಅಪವಾದವೂ ಇದೆ. ಇಲ್ಲಿ ಯಾವುದೇ ರೀತಿಯ ಪಕ್ಷಪಾತದ ಪ್ರಶ್ನೆ ಬರಬಾರದು. ಎರಡೂ ಬದಿಗಳಲ್ಲಿ ಸಂವಹನದ ಕೊರತೆ ಇತ್ತೇ? ಅದು ಹೇಗೆ ಆಯಿತು? ಅದನ್ನು ಸರಿಪಡಿಸುವುದು ಹೇಗೆ? ಎಂಬ ಪ್ರಶ್ನೆಗಳು ಹೆಚ್ಚು ಮೌಲಿಕವೇ ಹೊರತು, ಯಾರೊಬ್ಬರನ್ನೂ  ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಅಲ್ಲ.

ಮೂಲ ಪ್ರಶ್ನೆಗೆ ಹಿಂದಿರುಗೋಣ. ಅತ್ಯಂತ ವಿರಳವಾಗಿ ಘಟಿಸುವ ಕೆಲವು ಔಷಧೀಯ ಅಡ್ಡ-ಪರಿಣಾಮಗಳಿಗೆ ವೈದ್ಯರನ್ನು ಹೊಣೆಗಾರರನ್ನಾಗಿಸುವುದು ಎಷ್ಟು ಸೂಕ್ತ? ಇಡೀ ಸರಣಿಯಲ್ಲಿ ಎಲ್ಲೇ ತಪ್ಪು ಸಂಭವಿಸಿದ್ದರೂ ಅದನ್ನು ವೈದ್ಯರ ತಲೆಗೇ ಕಟ್ಟುವುದು ಆಘಾತಕಾರಿ ಮಾತ್ರವಲ್ಲ, ಅಪಾಯಕಾರಿ ಕೂಡ. ಸಮಾಜದ ಮತ್ತು ರೋಗಿಗಳ ಹಿತದೃಷ್ಟಿಯಿಂದ ಈ ರೀತಿಯ ನಿರ್ಣಯಗಳು ತೀವ್ರವಾದ ದೂರಗಾಮಿ ಪರಿಣಾಮಗಳನ್ನು ಬೀರಬಹುದು. ಯಾವ ಔಷಧ ಯಾವ ರೀತಿಯ ಅಡ್ಡ-ಪರಿಣಾಮ ಮಾಡಬಹುದೆಂದು ನಿರ್ಧರಿಸುವುದೇ ಅಸಾಧ್ಯವಾಗಿರುವಾಗ ಚಿಕಿತ್ಸೆ ನೀಡಲು ಹೇಗೆ ಸಾಧ್ಯ? ಅಂತಹ ಸಂದರ್ಭದಲ್ಲಿ ತೀರಾ ಕಡಿಮೆ ಅಡ್ಡ-ಪರಿಣಾಮ ಮಾಡಬಹುದಾದ ಯಾವುದೋ ಔಷಧವನ್ನು ಸೂಚಿಸಬೇಕಾಗುತ್ತದೆ. ಅಂತಹ ಔಷಧದ ಎಲ್ಲಾ ಅಡ್ಡ-ಪರಿಣಾಮಗಳನ್ನೂ ಬರವಣಿಗೆಯಲ್ಲಿ ನೀಡಿ ರೋಗಿಯ ಆಪ್ತರಿಂದ ಸಹಿ ಪಡೆಯಬೇಕಾಗುತ್ತದೆ. ಅಂತಹ ಔಷಧ ಅಷ್ಟೇನೂ ಫಲಕಾರಿಯಾಗದ ಚಿಕಿತ್ಸೆ ಆಗಿರಬಹುದು ಅಥವಾ ವಿಪರೀತ ದುಬಾರಿಯೂ ಆಗಿರಬಹುದು. ಇಲ್ಲಿ ಚಿಕಿತ್ಸೆ ನೀಡುವ ವೈದ್ಯರು ರೋಗಿಗಳ ಒಳಿತಿಗಿಂತ ತಮ್ಮ ಸ್ವಂತದ ಒಳಿತನ್ನು ಕಾಯುವ ಪರಿಸ್ಥಿತಿ ಎದುರಾಗುತ್ತದೆ. ಹೀಗೆ ಪ್ರತಿಯೊಂದು ರೋಗಿಗೂ ವಿರಳವಾಗಿ ಆಗಬಲ್ಲ ಪ್ರತಿಯೊಂದೂ ಅಡ್ಡ-ಪರಿಣಾಮವನ್ನೂ ವಿವರಿಸುತ್ತಾ ಅಧಿಕ ಸಮಯ ವ್ಯಯಿಸಿದರೆ ಇಡೀ ದಿನದಲ್ಲಿ ಬೆರಳೆಣಿಕೆಯ ಕೆಲವೇ ರೋಗಿಗಳಿಗೆ ಚಿಕಿತ್ಸೆ ನೀಡಲು ಮಾತ್ರ ಸಾಧ್ಯ. ಪ್ರತಿಯೊಂದು ಇಂತಹ ಸಮಾಲೋಚನೆಯೂ ಅತ್ಯಂತ ದುಬಾರಿ ಆಗಲೇಬೇಕು. ಅಷ್ಟಲ್ಲದೇ, ಹೆಚ್ಚು ರೋಗಿಗಳನ್ನು ನೋಡಲು ಸಾಧ್ಯವಾಗದಿರುವ ಕಾರಣ ತಜ್ಞರ ಸಲಹೆಗೆ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿಯೂ ಬರಬಹುದು. ಇದರ ನಷ್ಟ ಯಾರಿಗೆ ಎನ್ನುವುದು ಕನ್ನಡಿಯಷ್ಟೇ ಸ್ಪಷ್ಟ.

ಈ ತೀರ್ಪಿನ ಇನ್ನೊಂದು ಭಯಾನಕ ಮುಖವೂ ಮುಖ್ಯ. ಬಹಳ ಪರಿಣಾಮಕಾರಿಯಾದ, ಸಾಕಷ್ಟು ಸುರಕ್ಷಿತ ಎಂದು ವಿಶ್ವದಾದ್ಯಂತ ನಿರೂಪಿಸಲ್ಪಟ್ಟಿರುವ ಕಾರ್ಬಮಝಪಿನ್ ಔಷಧಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಸಂಭವಿಸುವ ಒಂದು ಅಡ್ಡ-ಪರಿಣಾಮವನ್ನು ಈ ತೀರ್ಪಿನಲ್ಲಿ ಉಲ್ಲೇಖಿಸಿ ಮಹತ್ವ ನೀಡಿದ್ದಾರೆ. ಸಹಜವಾಗಿ ಈಗಾಗಲೇ ಈ ಔಷಧ ಸೇವಿಸುತ್ತಿರುವ ಸಹಸ್ರಾರು ರೋಗಿಗಳಲ್ಲಿ ಈ ಸುದ್ದಿ ಆತಂಕ ಮೂಡಿಸುತ್ತದೆ. ಆ ಭಯದ ಪರಿಣಾಮದಿಂದ ಹಲವಾರು ಮಂದಿ ಔಷಧ ಸೇವನೆಯನ್ನು ನಿಲ್ಲಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇದರಿಂದ ಉಂಟಾಗುವ ಪರಿಣಾಮ ಭಯಂಕರ. ಅಪಸ್ಮಾರದ ರೋಗಿಗಳು ಹಠಾತ್ತನೆ ಔಷಧ ಸೇವನೆ ನಿಲ್ಲಿಸಿದರೆ ಅದು ಅವರ ಜೀವಕ್ಕೇ ಎರವಾಗಬಹುದು. ತೀರ್ಪಿನ ಈ ಕರಾಳ ಮುಖವನ್ನು ನಿರ್ಣಾಯಕರು ಗಮನಿಸಿದಂತಿಲ್ಲ.

ಹಾಗೆಂದು ಪ್ರತಿಯೊಂದು ವೈದ್ಯಕೀಯ ಸ್ಖಾಲಿತ್ಯವನ್ನೂ ಸಮರ್ಥನೆ ಮಾಡುತ್ತಿಲ್ಲ ಎಂಬುದನ್ನು ಗಮನಿಸಬೇಕು. ವೈದ್ಯರು ತಪ್ಪು ಮಾಡಿದರೆ ಅದಕ್ಕೆ ಶಿಕ್ಷೆ ಆಗಬೇಕು. ಅದರಲ್ಲಿ ಸಂದೇಹವಿಲ್ಲ. ನಮ್ಮ ದೇಶದಲ್ಲಿ ತಪ್ಪು ಮಾಡಿದರೆ ಶಿಕ್ಷೆಗೆ ಒಳಪಡಿಸುವ ಅತ್ಯಂತ ಅಧಿಕ ಮಾರ್ಗಗಳು ಇರುವುದು ವೈದ್ಯರ ಮೇಲೆ ಮಾತ್ರ! ಆದರೆ ಆ ತಪ್ಪುಗಳ ನಿರ್ಧಾರ ಕನಿಷ್ಠ ವೈಜ್ಞಾನಿಕ ಮಟ್ಟದಲ್ಲಿ ಇರಬೇಕು. ಭಾವನಾತ್ಮಕವಾಗಿ ಮಾತ್ರ ಆಲೋಚಿಸಿ ನಿರ್ಧಾರ ತೆಗೆದುಕೊಂಡರೆ ಅದು ಯಾರಿಗೋ ಮಾಡುವ ಅನ್ಯಾಯ ಆಗುತ್ತದೆ. ಕಡೆಗೆ ಇದರ ವ್ಯತಿರಿಕ್ತ ಪರಿಣಾಮ ಆಗುವುದು ಸಮಷ್ಟಿ ಸಮಾಜದ ಮೇಲೆ ಎಂಬುದನ್ನು ಮರೆಯಬಾರದು. ವೈದ್ಯಕೀಯ ಚಿಕಿತ್ಸೆ ಒಂದು ಸುವರ್ಣ ಮಧ್ಯಮಾರ್ಗದ ಪ್ರಯಾಣ ಆಗಬೇಕೇ ವಿನಃ ಋಣಾತ್ಮಕ ದಾರಿಯದ್ದಲ್ಲ. ಕನಿಷ್ಠ, ವೈದ್ಯರಿಗೆ ಶಿಕ್ಷೆ ಪ್ರಕಟಿಸುವವರಿಗೆ ವೈದ್ಯಕೀಯ ಜ್ಞಾನ ಅತ್ಯಗತ್ಯ ಎಂಬ ಕಾನೂನು ಇರುವುದು ಸೂಕ್ತ. ಇಂತಹ ಪ್ರಕರಣಗಳಲ್ಲಿ ಹಿರಿಯ ವೈದ್ಯರ ಸೇರ್ಪಡೆ ನ್ಯಾಯದ ದೃಷ್ಟಿಯಿಂದ ಬಹಳ ಸ್ವಾಗತಾರ್ಹ. ವೈದ್ಯಕೀಯ ಶಿಕ್ಷಣ ಮತ್ತು ಸೇವೆ ಹದಗೆಡುತ್ತಿರುವ ಕಾಲಘಟ್ಟದಲ್ಲಿರುವ ನಮ್ಮ ದೇಶದಲ್ಲಿ ಈ ಅವಿಶ್ವಾಸದ ಪ್ರಪಾತ ಮುಚ್ಚುವ ಪ್ರಯತ್ನಗಳು ಆಗಬೇಕೇ ಹೊರತು, ಅದನ್ನು ಇನ್ನೂ ಆಳವಾಗಿಸುವ ನಿರ್ಣಯಗಳಲ್ಲ.
----------------------
 (ಜನವರಿ 2018 ರಲ್ಲಿ "ವಿಶ್ವವಾಣಿ" ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಮಂಗಳವಾರ, ಜನವರಿ 9, 2018

ನಿಮ್ಮ ಮಕ್ಕಳು ವೈದ್ಯರಾಗಬೇಕೆ? ಈ ಲೇಖನದಿಂದ ಆರಂಭಿಸಿ!



ಕೆಲವು ಭಾವನೆಗಳನ್ನು ಜನಮಾನಸದಿಂದ ಬದಲಾಯಿಸಿವುದು ಕಷ್ಟ. ಮನುಷ್ಯ ಮಸ್ತಿಷ್ಕವೇ ಹಾಗೆ; ಅದರಲ್ಲಿ ಬಹಳ ಮಟ್ಟಿಗೆ ನಿರ್ವಾತವೇ ಇರುತ್ತದೆ. ಮೊದಲು ಯಾವ ಭಾವನೆ ಅದರಲ್ಲಿ ಮನೆ ಮಾಡುತ್ತದೋ, ಅದೇ ಗಟ್ಟಿ. ಅದು ಸರಿಯೋ ತಪ್ಪೋ ಎಂಬ ವಿವೇಚನೆ ಕಡಿಮೆ. ಆ ತಪ್ಪನ್ನು ಯಾರಾದರೂ ತೋರಿದರೂ, ಅದು ಬದಲಾಗುವ ಸಾಧ್ಯತೆ ಅಲ್ಪವೇ. ಇನ್ನು ಆ ತಪ್ಪು ತಂತಮ್ಮ ವಾದಸರಣಿಗೆ ಅನುಗುಣವಾಗಿದ್ದರೆ ಚಿತ್ತದಲ್ಲಿ ಅದೇ ಶಾಶ್ವತ!

ಇಷ್ಟೆಲ್ಲಾ ಪೀಠಿಕೆಗೆ ಕಾರಣವಿದೆ. ನಮಗೆ “ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ; ಯಮಸ್ತು ಹರತಿ ಪ್ರಾಣಾನ್ ವೈದ್ಯಃ ಪ್ರಾಣಾನ್ ಧನಾನಿಚ” ಎಂದು ಹೇಳಲು ಜಿಜ್ಞಾಸೆಯೇ ಬೇಡ. “ಯಾರನ್ನಾದರೂ ಟೀಕಿಸುವ ಮುನ್ನ ಅವರ ಸ್ಥಾನದಲ್ಲಿ ನಿಂತು ಕೆಲಕಾಲ ಪರಿವೀಕ್ಷಿಸಬೇಕು” ಎಂಬ ಸುಭಾಷಿತ ನೆನಪಾಗುವುದಿಲ್ಲ. ನಮಗೆ ಯಾವುದು ಅನುಕೂಲವೋ, ಅದೇ ಸರಿ.
ಈ ಲೇಖನ ವೈದ್ಯರ ಬಗ್ಗೆ ಅನುಕಂಪ ಮೂಡಿಸಲು ಅಲ್ಲವೇ ಅಲ್ಲ. ವಿಪರ್ಯಾಸ ಎಂದರೆ, ಪ್ರಪಂಚದ ಯಾವುದೇ ದೇಶದಲ್ಲೂ ವೈದ್ಯರಿಗೆ ಅನುಕಂಪ ತೋರಿಸುವ ಪ್ರಸಕ್ತಿ ಇಲ್ಲ. ಅದರ ಅವಶ್ಯಕತೆ ದುರದೃಷ್ಟವಶಾತ್ ನಮ್ಮ ದೇಶಕ್ಕೆ ಬಂದು ಒದಗಿದೆ. ಜನಮಾನಸದಲ್ಲಿನ ನಿರ್ವಾತವನ್ನು ಕೆಟ್ಟ ಅಭಿಪ್ರಾಯಗಳಿಂದ ತುಂಬಿದ್ದು ರಾಜಕಾರಣ ಮತ್ತು ದೃಶ್ಯಮಾಧ್ಯಮ. ಇವೆರಡರ ಮಟ್ಟ ನಮ್ಮ ದೇಶದಲ್ಲಿ ಯಾವ ಸ್ಥಾನದಲ್ಲಿದೆ ಎಂಬುದರ ಸಂಪೂರ್ಣ ಅರಿವಿದ್ದರೂ ಪ್ರಜೆಗಳು ಅವನ್ನು ನಂಬುತ್ತಾರೆ. ಕಾರಣಗಳ ಅವಶ್ಯಕತೆ ಇಲ್ಲ.

ಮತ್ತೆ, ಈ ಲೇಖನ ಏಕೆ? ಕೆಲವು ವಿಷಯಗಳ ಕುರಿತು ಸ್ಪಷ್ಟನೆ ಅಗತ್ಯ. “ಯಾರನ್ನಾದರೂ ಟೀಕಿಸುವ ಮುನ್ನ ಅವರ ಸ್ಥಾನದಲ್ಲಿ ನಿಂತು ಕೆಲಕಾಲ ಪರಿವೀಕ್ಷಿಸಬೇಕು” ಎಂಬ ಸುಭಾಷಿತದ ಬಗ್ಗೆ ಹೇಳಿದೆವಷ್ಟೇ? ಈ ಲೇಖನ ಅದಕ್ಕೆ ಪೂರಕ ಮಾತ್ರ. ಅದರ ವಿನಃ ಯಾವುದೇ ಸಮಜಾಯಿಶಿಗಾಗಲೀ, ಕರುಣೆಗಾಗಲೀ ಅಲ್ಲ.

ಮೊದಲು, ಒಂದು ಸಲಹೆ. ನಿಮ್ಮ ಮನೆಯಲ್ಲಿ ಅಥವಾ ಬಹಳ ಪರಿಚಯಸ್ಥರಲ್ಲಿ ವೈದ್ಯರಾಗಲೀ, ವೈದ್ಯಕೀಯ ವ್ಯಾಸಂಗ ಮಾಡುವವರಾಗಲೀ ಯಾರಾದರೂ ಇದ್ದರೆ, ಈ ಲೇಖನ ಓದಿದ ಬಳಿಕ ಅವರನ್ನು ಒಮ್ಮೆ ಭೇಟಿಯಾಗಿ ಸ್ವಲ್ಪ ಸಹಾನುಭೂತಿಯಿಂದ ಮಾತನಾಡಿ. ಕೆಲವು ಸತ್ಯಗಳ ಪರಿಚಯ ಮುಖತಃ ಆಗಬಹುದು.

ಪ್ರಶ್ನೆ 1. ವೈದ್ಯಕೀಯ ವ್ಯಾಸಂಗ ಮಾಡುವವರು ಯಾರು? ಏಕೆ?

ತಮ್ಮ ಮಕ್ಕಳು ವೈದ್ಯರಾಗಬೇಕೆಂಬ ಅಭಿಲಾಷೆ ಇರುವವರು ಲಕ್ಷಾಂತರ ಮಂದಿ ಇದ್ದಾರೆ. ಇದರಲ್ಲಿ ಮೂರು ವಿಧ: ತಂತಮ್ಮ ಆಸ್ಪತ್ರೆಗಳೋ ಅಥವಾ ದೊಡ್ಡ ಕ್ಲಿನಿಕ್ ಗಳೋ ಇರುವ ತಂದೆ ತಾಯಿ ತಮ್ಮ ಮಕ್ಕಳನ್ನು ವೈದ್ಯರನ್ನಾಗಿಸಿ ತಮ್ಮ “ಪರಂಪರೆ”ಯನ್ನು ಮುಂದುವರೆಸುವ ಇಚ್ಛೆ ಇರುವವರು. ಇದಕ್ಕೆ ಪೂರಕವಾಗಿ ಇಷ್ಟು ದುಡ್ಡಿಗೆ ಇಷ್ಟು ಡಿಗ್ರೀ ಎಂಬ ವ್ಯವಹಾರ ಇರುವ ಖಾಸಗೀ ವೈದ್ಯಕೀಯ ಕಾಲೇಜುಗಳಿವೆ. ನಿಮ್ಮ ಬಳಿ ಕೋಟಿಗಟ್ಟಲೆ ದುಡ್ಡು ಇದ್ದರೆ ನಿಮ್ಮ ಮಕ್ಕಳಿಗೆ ವೈದ್ಯಕೀಯ ಡಿಗ್ರಿ ಖಚಿತ. ಇಂತಹ ವೈದ್ಯಕೀಯ ಕಾಲೇಜುಗಳಿಗೆ ಧಾರಾಳವಾಗಿ ಮುಕ್ತಮನಸ್ಸಿನಿಂದ ಅನುಮತಿ ನೀಡಿರುವುದು ಘನತೆವೆತ್ತ ಸರ್ಕಾರವೇ. ಬೇಲಿ ಹೊಲ ಮೇಯ್ದರೆ ಕೇಳುವವರ್ಯಾರು? ಅದೃಷ್ಟವಶಾತ್ ಇಂದಿಗೂ ಇಂತಹವರ ಸಂಖ್ಯೆ ನಗಣ್ಯ. ನೂರಕ್ಕೆ ಇಬ್ಬರೋ ಮೂವರೋ ಇರಬಹುದು.

ಎರಡನೆಯ ವಿಧ: ತಮ್ಮ ಮಕ್ಕಳು ವೈದ್ಯರಾಗಬೇಕೆಂಬ ಹಂಬಲ ಉಳ್ಳ ಸಾಮಾನ್ಯ ಜನತೆ. ಇವರಲ್ಲಿ ದುಡ್ಡು ಇರುವವರಿಗೆ ಚಿಂತೆ ಇಲ್ಲ. ಮೆರಿಟ್ ಸೀಟು ಸಿಕ್ಕದಿದ್ದರೆ ಹಣದ ಮೂಲಕ ಸೀಟು ಪಡೆಯಬಹುದು. ಅದಕ್ಕಾಗಿಯೇ ಘನತೆವೆತ್ತ  ಸರ್ಕಾರ ಬೇಕಾದಷ್ಟು ಖಾಸಗೀ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಿದೆ. ಅವರು ನಿಗದಿ ಪಡಿಸಿದಷ್ಟು ಹಣ ನೀಡಿದರೆ ಸೀಟು ಸಿಗುತ್ತದೆ. ಪಾಸು ಆಗುವುದು ಅವರವರ ಹಣೆಬರಹ. ಇಂತಹವರ ಸಂಖ್ಯೆ ನೂರಕ್ಕೆ ಸುಮಾರು ಹದಿನೈದು ಇರಬಹುದು.
ಮೂರನೆಯ ವಿಧದಲ್ಲಿ ಉಳಿದ ಎಂಭತ್ತು ಮಂದಿ ಇರುತ್ತಾರೆ. ಅಧಿಕತರ ಮಧ್ಯಮ ವರ್ಗಕ್ಕೆ ಸೇರಿದವರು. ಇದರಲ್ಲಿನ ಬಹಳಷ್ಟು ಜನರಿಗೆ ವಿದ್ಯೆಯೇ ಆಸ್ತಿ; ಓದುವುದೇ ಬಂಡವಾಳ. ಸ್ವಲ್ಪ ಚೆನ್ನಾಗಿ ಓದಿದರೆ ಸಾಕು, ಅಂತಹ ಮಕ್ಕಳನ್ನು ವೈದ್ಯರನಾಗಿ ಮಾಡುವ ಹಂಬಲ ತಾಯಿ-ತಂದೆರಿಗೆ. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿ, ಪೈಪೋಟಿಯಲ್ಲಿ ಅಂಕಗಳನ್ನು ಸಂಪಾದಿಸಿ, ಹಲವಾರು ಅಡೆತಡೆಗಳನ್ನು ದಾಟಿ, ಸಿಕ್ಕ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಪಡೆದು, ವಿದ್ಯಾಭ್ಯಾಸ ಸಾಲ ಮಾಡಿ ಫೀಸು ಕಟ್ಟಿ, ಇಲಿಗೂಡಿನಂತಹ ಹಾಸ್ಟೆಲ್ಗಳಲ್ಲಿ ಹೊತ್ತು ಹಾಕಿ, ಅರೆಬರೆ ಊಟ, ಅರೆಬರೆ ನಿದ್ದೆಗಳ ನಡುವೆ, ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಕೊಂಡು ಓದಿ ಹೈರಾಣಾಗಿ, ಭ್ರಷ್ಟಾಚಾರಗಳಿಂದ ಆವೃತ್ತವಾದ ವಿಶ್ವವಿದ್ಯಾಲಯಗಳ ಹೊಲಬುಗೆದ್ದ ಪರೀಕ್ಷೆಗಳನ್ನು ತೇರ್ಗಡೆ ಮಾಡಿ, ಉಸ್ಸಪ್ಪಾ ಎಂದು ವೈದ್ಯರಾಗುವವರು. ನೀವು ಕಾಣಬಹುದಾದ ಬಹುತೇಕ ವೈದ್ಯರು ಈ ವಿಭಾಗಕ್ಕೆ ಸೇರಿದವರು.

ಪ್ರಶ್ನೆ 2. ವೈದ್ಯರಾದ ಮೇಲೆ ಎಲ್ಲಾ ಮಜಾ ಅಲ್ಲವೇ? ಕೂತು ಏನೋ ಒಂದು ಔಷಧ ಬರೆಯುವುದಕ್ಕೆ ಕೈ ತುಂಬಾ ಸಂಬಳ! ಕಷ್ಟಕ್ಕೆ ಪ್ರತಿಫಲ ಬಂತಲ್ಲವೇ?

ವೈದ್ಯಕೀಯ ವ್ಯಾಸಂಗದ ಎಂ ಬಿ ಬಿ ಎಸ್ ಅಂತಿಮ ಪರೀಕ್ಷೆ ತೇರ್ಗಡೆಯಾದವರ ಸಂಕಷ್ಟ ಅಲ್ಲಿಗೆ ಮುಗಿಯುವುದಿಲ್ಲ. ಒಂದು ವರ್ಷದ ಕಡ್ಡಾಯ ತರಬೇತಿ ಅವಧಿ ಇರುತ್ತದೆ ಕೂಡ. ಬಹಳಷ್ಟು ಕಡೆ ಈ ಹಂತದಲ್ಲೂ ಯಾವುದೇ ವೇತನ ಸಿಗುವುದಿಲ್ಲ. ಹೆಸರಿಗೆ ವೈದ್ಯರಾದರೂ ತಮ್ಮ ದಿನನಿತ್ಯದ ಖರ್ಚಿಗೂ ಅಪ್ಪ-ಅಮ್ಮನ ಮೇಲೆ ಆಧಾರ. ಈ ಒಂದು ವರ್ಷದ ತರಬೇತಿ ಅವಧಿಯಲ್ಲಿ ತಾನು ಓದಿದ್ದಕ್ಕೂ, ವಾಸ್ತವಿಕ ವೈದ್ಯಕೀಯ ಆಚರಣೆಗೂ ನಡುವಿನ ಅಗಾಧ ಅಂತರ ತಿಳಿಯುತ್ತದೆ. ನಮ್ಮ ದೇಶಕ್ಕೆ ಬೇಕಾದ ರೀತಿಯಲ್ಲಿ ವ್ಯಾಸಂಗದ ಪುಸ್ತಕಗಳನ್ನೂ ತರುವ ಸಾಮರ್ಥ್ಯವಿಲ್ಲದ ನಮ್ಮ ವೈದ್ಯಕೀಯ ವಿಶ್ವವಿದ್ಯಾಲಯಗಳು ಪ್ರಪಂಚದಲ್ಲಿ ಅತೀ ಹೆಚ್ಚು ಸಂಖ್ಯೆಯ ವೈದ್ಯರನ್ನು ಹೊರತರುತ್ತವೆ ಎಂಬ ವಿಡಂಬನೆ ಕಣ್ಣಿಗೆ ರಾಚುತ್ತದೆ. ಓದುವುದು ಅಮೇರಿಕಾ, ಯುರೋಪ್ ಗಳಲ್ಲಿ ಪ್ರಕಟವಾದ ಪುಸ್ತಕಗಳನ್ನು – ಕೆಲಸ ಮಾಡಬೇಕಾಗಿರುವುದು ನಯಾಪೈಸೆ ಸೌಕರ್ಯವಿಲ್ಲದ ಸರ್ಕಾರಿ ಆಸ್ಪತ್ರೆಗಳಲ್ಲಿ. ಓದಿಗೂ ಆಚರಣೆಗೂ ತಾಳಮೇಳವೇ ಇಲ್ಲ. ತಮ್ಮ ಬದುಕಿನ ದುರಂತವಾಸ್ತವದ ಅರಿವು ಆಗುವುದು ಬಹುತೇಕ ವೈದ್ಯರಿಗೆ ಇದೇ ಹಂತದಲ್ಲೇ. ಸುಮಾರು ಇಪ್ಪತ್ತು ವಿವಿಧ ವಿಭಾಗಗಳಲ್ಲಿ ಇಂತಹ ಕಡ್ಡಾಯ ತರಬೇತಿ ಪಡೆದ ನಂತರ ಇವರಿಗೆ ವೈದ್ಯಕೀಯ ಪದವಿ ಸಿಗುತ್ತದೆ.

ಸರ್ಕಾರದ ನಿಯಮಗಳ ಪ್ರಕಾರ ಇದರ ನಂತರ ಎರಡು ವರ್ಷ ಗ್ರಾಮೀಣ ಸೇವೆ ಮಾಡಬೇಕು. ಸರ್ಕಾರಿ ವ್ಯವಸ್ಥೆಯ ಕರಾಳ ಮುಖದ ಪರಿಚಯ ಆಗುವುದು ಈ ಅವಧಿಯಲ್ಲೇ. ಲಂಚದ ಮಹಾಪ್ರಪಂಚದ ದರ್ಶನ ಇಲ್ಲಿ ಆರಂಭ. ತಾನು ಕೆಲಸ ಮಾಡಬೇಕಾದ ಸ್ಥಳ ತಿಳಿಯುವುದರಿಂದ ಹಿಡಿದು, ತನಗೆ ಬರಬೇಕಾದ ಅಲ್ಪ ವರಮಾನದವರೆಗೆ ವ್ಯವಸ್ಥೆಯ ಕೈ ಬೆಚ್ಚಗೆ ಮಾಡದೇ ಇದ್ದರೆ ಹೊಟ್ಟೆಗೆ ಮಣ್ಣು ತಿನ್ನಬೇಕು. ಇದು ತಾತ್ಕಾಲಿಕ ಹುದ್ದೆ ಆದ್ದರಿಂದ ಇಂತಹ ವೈದ್ಯರ ಕಡೆಗೆ ವ್ಯವಸ್ಥೆಯ ತಾತ್ಸಾರ ಹೇಳತೀರದು. ನಿಯಮಗಳ ಅರಿವಿಲ್ಲದ ಇಂತಹ ವೈದ್ಯರ ಸಹಿಯನ್ನು ಎಲ್ಲೆಂದರಲ್ಲಿ ಮಾಡಿಸಿಕೊಂಡು ಅನ್ಯಾಯ ಮಾಡುವ ನುರಿತ ಸಿಬ್ಬಂದಿ ಪ್ರತೀ ಆಸ್ಪತ್ರೆಗಳಲ್ಲೂ ಇರುತ್ತಾರೆ. ಈ ಎರಡು ವರ್ಷಗಳನ್ನು ಕ್ಷೇಮವಾಗಿ ಕಳೆದು ಬರುವುದೇ ಒಂದು ಸಾಹಸ. ಹದಿನೆಂಟು ವರ್ಷದ ವಯಸ್ಸಿಗೆ ವೈದ್ಯಕೀಯ ವ್ಯಾಸಂಗ ಆರಂಭವಾದರೆ ಇಷ್ಟು ಮಟ್ಟ ತಲುಪುವುದಕ್ಕೆ ಕನಿಷ್ಠ ೨೬ ವಯಸ್ಸು ದಾಟಿರುತ್ತದೆ. ಅದೂ ಎಲ್ಲೂ ಡುಮ್ಕಿ ಹೊಡೆಯದೆ, ಪರೀಕ್ಷೆಗಳೆಲ್ಲಾ ಸರಾಗವಾಗಿ ಆಗಿ, ವಿಶ್ವವಿದ್ಯಾಲಯ ಯಾವುದೇ ಹಗರಣಕ್ಕೆ ಸಿಲುಕದೆ ಮೌಲ್ಯಮಾಪನ ಮಾಡಿ ಸರಿಯಾದ ವೇಳೆಗೆ ಫಲಿತಾಂಶ ನೀಡಿದರೆ ಮಾತ್ರ!

ಇದರ ನಂತರ ಆರಂಭವಾಗುವುದೇ ನಿಜವಾದ ಜೀವನ. ವಿದೇಶಗಳಲ್ಲಿ ಇರುವಂತೆ ನಮ್ಮ ಸಮಾಜದಲ್ಲಿ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಮಟ್ಟದ ವೈದ್ಯಕೀಯ ಸೇವೆಗಳ ಶ್ರೇಣೀಕೃತ ವ್ಯವಸ್ಥೆ ಇಲ್ಲ. ಇಲ್ಲಿ ಬರಿಯ ಎಂ ಬಿ ಬಿ ಎಸ್ ಮಾಡಿದ ವೈದ್ಯರಿಗೆ ಬೆಲೆ ಇಲ್ಲ. ಉನ್ನತ ವ್ಯಾಸಂಗ ಮಾಡದೆ ಹೋದರೆ ಅದು ಒಂದು ಕಳಂಕ ಕೂಡ! ಉನ್ನತ ವ್ಯಾಸಂಗಕ್ಕೆ ಇರುವ ಸೀಟುಗಳು ಬಹಳ ನಗಣ್ಯ. ಇಂತಹ ಒಂದು ಸೀಟಿಗೆ ಸಾವಿರ ಮಂದಿ ಎಂ ಬಿ ಬಿ ಎಸ್ ವೈದ್ಯರು ಪೈಪೋಟಿ ಮಾಡುವುದು ಬಹಳ ಸಾಮಾನ್ಯ. ನೀಟ್ ಪರೀಕ್ಷೆಯ ಅಂಕಿ ಅಂಶ ಗಮನಿಸಿದರೆ ಇದು ತಿಳಿಯುತ್ತದೆ. ಸಾಮಾನ್ಯವಾಗಿ ಇನ್ನೂ ಒಂದೆರಡು ವರ್ಷ ಸರಿಯಾಗಿ ತರಬೇತಿ ಪಡೆದ ಹೊರತು ಇಷ್ಟು ಪೈಪೋಟಿಯಲ್ಲಿ ಸೀಟು ಪಡೆಯುವುದು ಕಷ್ಟ. ಅಂದರೆ, ಎಂ ಬಿ ಬಿ ಎಸ್ ನಂತರ ಉನ್ನತ ವ್ಯಾಸಂಗ ಆರಂಭ ಆಗುವ ಹೊತ್ತಿಗೆ ವಯಸ್ಸು ಇಪ್ಪತ್ತೆಂಟು. ಇನ್ನೂ ಸರಿಯಾದ ವರಮಾನ ಆರಂಭವೇ ಆಗಿಲ್ಲ. ಎಂ ಬಿ ಬಿ ಎಸ್ ವ್ಯಾಸಂಗದ ಬ್ಯಾಂಕ್ ಸಾಲ ತೀರಿಲ್ಲ. ಆದರೆ ಉನ್ನತ ವ್ಯಾಸಂಗದ ಬ್ಯಾಂಕ್ ಸಾಲ ಅದಕ್ಕೆ ಸೇರಿದೆ. ವೃತ್ತಿಜೀವನ ಆರಂಭವೇ ಆಗಿಲ್ಲ – ಸಾಲ ಮಾತ್ರ ಗುಡ್ಡದಷ್ಟು! ಈ ಹಂತದಲ್ಲಿ ವಿದೇಶಗಳಿಗೆ ಹೋಗುವ ವೈದ್ಯರೂ ಸಾಕಷ್ಟು. ಆದರೆ ಇದಕ್ಕೆ ಹಣ ಯಾ ಗುಂಡಿಗೆ ಸಾಲದವರಿಗೆ ಆ ದಾರಿಯೂ ಬಂದ್!

ಮೂರು ವರ್ಷದ ಉನ್ನತ ವ್ಯಾಸಂಗ ಪ್ರಾಯಶಃ ಒಬ್ಬ ವೈದ್ಯನ ಜೀವನದ ಅತ್ಯಂತ ಕಷ್ಟದ ಮೂರು ವರ್ಷಗಳು. ತಿಂಗಳಿಗೆ ಕನಿಷ್ಠ ಹತ್ತು ಡ್ಯೂಟಿ. ಈ ಡ್ಯೂಟಿ ಎಂದರೆ ಕನಿಷ್ಠ 24 ತಾಸುಗಳಿಂದ ಕೆಲವೊಮ್ಮೆ 48 ತಾಸುಗಳು. ಈ ಡ್ಯೂಟಿಯಲ್ಲಿ ನಿದ್ರೆ ಅಂತಿರಲಿ, ಊಟ ಕೂಡ ಮಾಡುವ ಸಾಧ್ಯತೆ ಬಹಳಷ್ಟು ಕಡಿಮೆ. ತುರ್ತುಸ್ಥಿತಿಯಲ್ಲಿ ದಿನದ 24 ತಾಸುಗಳಲ್ಲಿ ಯಾವಾಗ ಬೇಕಾದರೂ ಬರಬಹುದಾದ ರೋಗಿಗಳ ಆರೈಕೆ, ಸರಾಸರಿ ಇನ್ನೂರು ಹಾಸಿಗೆಗಳಿರುವ ಸರ್ಕಾರಿ ಆಸ್ಪತ್ರೆಯಲ್ಲಿ ತಲಾ ಹಾಸಿಗೆಯಲ್ಲಿ ಇಬ್ಬರೋ, ಮೂವರೋ ರೋಗಿಗಳಿರುವ ವಾರ್ಡ್ ನಲ್ಲಿ ಯಾರಿಗೆ ಯಾವಾಗ ಬೇಕಾದರೂ ಬರುವ ತೊಂದರೆಗಳ ಉಲ್ಬಣದ ಚಿಕಿತ್ಸೆ, ತುರ್ತು ನಿಗಾ ಘಟಕದಲ್ಲಿ ಇರುವ ತೀವ್ರವಾದ ಖಾಯಿಲೆಯ ರೋಗಿಗಳ ನಿಗಾ, ಈ ರೀತಿ ನೂರಾರು ಜನರ ಸಮಸ್ಯೆಗಳನ್ನು ಗಮನಿಸಬೇಕು. ಇದರೊಂದಿಗೆ, ಆಯಾ ರೋಗಿಗಳ ಆರೋಗ್ಯ ದಾಖಲೆಗಳ ನಿರ್ವಹಣೆ, ತನ್ನ ವೈಯುಕ್ತಿಕ ವ್ಯಾಸಂಗ, ತನ್ನನ್ನು ಕೀಳಾಗಿ ಕಾಣುವ ಹಿರಿಯ ವೈದ್ಯರು ಇಂತಹ ರೋಗಿಗಳ ಬಗ್ಗೆ ಮಾಡಬಹುದಾದ ಪ್ರಶ್ನೆಗಳಿಗೆ ಉತ್ತರ ಹೇಳುವ ಸಿದ್ಧತೆ, ಮರುದಿನ ತನ್ನ ವ್ಯಾಸಂಗದ ವಿಷಯದಲ್ಲಿ ನಡೆಯಬೇಕಾದ ತರಗತಿಯ ನಿರ್ವಹಣೆ – ಇಂತಹ ಇಕ್ಕಟ್ಟಿನ ಸಂದರ್ಭಗಳನ್ನು ನಿರ್ವಹಿಸುವುದು ಅತ್ಯಂತ ಕಷ್ಟಕರ. ಅದರ ಮೇಲೆ ಈಚಿನ ದಿನಗಳಲ್ಲಿ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಗಳು ಇಂತಹ ಉನ್ನತ ವ್ಯಾಸಂಗ ನಿರತ ವೈದ್ಯರ ಜಂಘಾಬಲವನ್ನು ಉಡುಗಿಸಿರುವುದು ಸುಳ್ಳಲ್ಲ. ಕಡೆಯ ಅಂಶವಂತೂ ವೈದ್ಯರ ಪಾಲಿಗೆ ಸಿಂಹಸ್ವಪ್ನವಾಗಿದೆ. ಇಷ್ಟು ಕಷ್ಟದಿಂದ ಸಂಪಾದಿಸಿದ ಉನ್ನತ ವೈದ್ಯವ್ಯಾಸಂಗದ ಸೀಟನ್ನು ಬಿಟ್ಟು ಹೊರಟ ವೈದ್ಯರೂ ಇದ್ದಾರೆ ಎಂದರೆ ಈ ಅಂಶ ಇನ್ನೆಷ್ಟು ನೋವು ತಂದಿರಬಹುದು ಎಂಬುದು ತಿಳಿಯುತ್ತದೆ. ಇಂತಹ ಅಮಾನವೀಯ ಕೃತ್ಯಗಳು ನಮ್ಮ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ. ಇದನ್ನು ಮುಕ್ತವಾಗಿ ಖಂಡಿಸುವ ರಾಜಕಾರಣವಾಗಲೀ, ಮಾಧ್ಯಮವಾಗಲೀ ನಮ್ಮಲ್ಲಿ ಇಲ್ಲ. ಅದಕ್ಕಿಂತಲೂ, ಇವೆರಡೂ ಆ ಹಲ್ಲೆಕೋರರನ್ನು ಸಮರ್ಥಿಸುವ ಮಾತನಾಡುವುದು ನಮ್ಮ ದರಿದ್ರ ವ್ಯವಸ್ಥೆಗೆ ಹಿಡಿದ ಕನ್ನಡಿ.

ಹೇಗೋ ಈ ಮೂರೂ ವರ್ಷಗಳ ತರಬೇತಿಯನ್ನು ದಾಟಿದರೂ, ಅದರ ಅಂತ್ಯದ ಪರೀಕ್ಷೆ ಅತ್ಯಂತ ಕ್ಲಿಷ್ಟಕರ. ಏನು ಕೇಳಬೇಕು, ಹೇಗೆ ಪರೀಕ್ಷಿಸಬೇಕು, ಯಾವ ನಿರೀಕ್ಷೆಗಳಿಂದ ಪರೀಕ್ಷೆ ನಡೆಸಬೇಕು ಎಂಬ ನಿರ್ದಿಷ್ಟ ಮಾನದಂಡಗಳು ಇಲ್ಲದ ಪರೀಕ್ಷಾ ವ್ಯವಸ್ಥೆ ನಮ್ಮದು. ತನ್ನಿಂದ ಪರೀಕ್ಷೆಯಲ್ಲಿ ಏನನ್ನು ಅಪೇಕ್ಷಿಸಲಾಗುತ್ತದೆ ಎಂಬ ಯಾವುದೇ ಮಾಹಿತಿ ಇಲ್ಲದೆ ಪರೀಕ್ಷೆ ನೀಡುವ ವಿದ್ಯಾರ್ಥಿಯ ಮನಸ್ಥಿತಿ ಹೇಗಿರಬಹುದು? ಅನೇಕ ಹತಾಷೆಗಳಿಗೆ ಇಂತಹ ಪರೀಕ್ಷೆಗಳು ಕಾರಣವಾಗಿವೆ.

ಇದನ್ನೆಲ್ಲಾ ದಾಟಿ ಮುಂದೆ ಬಂದರೂ ಜೀವನ ಅಷ್ಟೊಂದು ಆಶಾಜನಕವಲ್ಲ. ಈಗಿನ ಸೂಪರ್-ಸ್ಪೆಷಾಲಿಟಿ ಖಾಸಗಿ ಕಾರ್ಪೋರೇಟ್ ಆಸ್ಪತ್ರೆಗಳಿಗೆ ಇಷ್ಟು ವ್ಯಾಸಂಗ ಸಾಲದು. ಇದರ ಜೊತೆ ವಿದೇಶಗಳಿಂದ ಹಿಂದಿರುಗಿ ಬಂದ ಸಹ ವೈದ್ಯರ ಪೈಪೋಟಿ ಬೇರೆ! ಆ ಮಟ್ಟಕ್ಕೆ ಏರಲು ಇನ್ನೂ ಮೂರು ವರ್ಷ ವ್ಯಾಸಂಗ ಮಾಡಬೇಕು. ಇದಕ್ಕೆ ಇರುವ ಸೀಟುಗಳು ಮತ್ತೂ ಕಡಿಮೆ! ಪೈಪೋಟಿ ಮಾತ್ರ ಇನ್ನೂ ಅಧಿಕ. ಈ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಆಗಲು ಮತ್ತೊಂದೆರಡು ವರ್ಷ ತರಬೇತಿ ಬೇಕು. ಈಗಾಗಲೇ ಮೂವತ್ತು - ಮೂವತೈದು ವರ್ಷ ವಯಸ್ಸು ದಾಟಿ, ಸರಿಯಾದ ವರಮಾನ, ಮದುವೆ ಇಲ್ಲದೆ ಹೈರಾಣಾದ ಬಹಳಷ್ಟು ಮಂದಿ ಈ ಹಂತವನ್ನು ದಾಟುವುದೇ ಇಲ್ಲ. ಇರುವ ವಿದ್ಯಾರ್ಹತೆಗೆ ತಕ್ಕ ಕೆಲಸ ಹುಡುಕಿಕೊಂಡು, ಬರುವ ಆದಾಯದಿಂದ ಇರುವ ಬೆಟ್ಟದಷ್ಟು ಸಾಲವನ್ನು ವರ್ಷಗಟ್ಟಲೆ ನಿಧಾನವಾಗಿ ತೀರಿಸಿ, ಹೇಗೋ ಒಂದು ಜೀವನ ಕಟ್ಟಿಕೊಳ್ಳುವ ದಾರಿಯಲ್ಲಿ ನಡೆಯುತ್ತಾರೆ. ಈ ದಾರಿಯಲ್ಲಿ ನಿರಂತರವಾಗಿ ಅಡೆತಡೆಗಳನ್ನು ಒದಗಿಸುವ ಕೆಲಸ ಘನತೆವೆತ್ತ ಸರ್ಕಾರ ಮಾಡುತ್ತಲೇ ಇರುತ್ತದೆ. ತನ್ನ ಜೀವನಕ್ಕೆ ಏಕೈಕ ಆಧಾರವಾದ ತನ್ನ ಕ್ಲಿನಿಕ್ ಅನ್ನು ಮುಚ್ಚಿ ಇಂತಹ ಒಬ್ಬ ವೈದ್ಯ ಪ್ರತಿಭಟಿಸುತ್ತಾನೆ ಅಂದರೆ ಇದರ ಹಿಂದಿರುವ ನೋವು ಅರ್ಥ ಮಾಡಿಕೊಳ್ಳಲು ಈಗ ಕಷ್ಟ ಅನಿಸುತ್ತದೆಯೇ?

ಇದು ಒಬ್ಬ ಸಾಮಾನ್ಯ ಮನುಷ್ಯ ಸಾಮಾನ್ಯ ವೈದ್ಯನಾಗಲು ಕ್ರಮಿಸುವ ದಾರಿ. ಇನ್ನೊಮ್ಮೆ ಓದಿ ನೋಡಿ. ಇದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ; ಅತಿಶಯೋಕ್ತಿ ಮಾಡಿಲ್ಲ. ಮೆರಿಟ್ ಆಧಾರದಲ್ಲಿ ತನ್ನ ಹಾದಿ ಕ್ರಮಿಸಿರುವ ವೈದ್ಯರ ಕತೆ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವಿಲ್ಲ. ವೈಯುಕ್ತಿಕ ಅನುಭವಗಳು ಆಚೀಚೆ ಇರಬಹುದೇ ಹೊರತು, ಹೆಚ್ಚು ಅಂತರವಿರುವುದಿಲ್ಲ.

ಪ್ರಶ್ನೆ 3: ಇಷ್ಟೆಲ್ಲಾ ಕಷ್ಟ ಎಂದು ಗೊತ್ತಿದ್ದರೂ ವೈದ್ಯರಾಗುವುದು ಏಕೆ? ಒಮ್ಮೆ ಸ್ವ-ಇಚ್ಛೆಯಿಂದ ನಿರ್ಧಾರ ಮಾಡಿದ ಮೇಲೆ ಕೊರಗುವುದು ಏಕೆ? ಜನರಿಂದ ಅನುಕಂಪ ಬಯಸುವುದು ಏಕೆ?

ಸಮಸ್ಯೆ ಇರುವುದೇ ಇಲ್ಲಿ. ನಮ್ಮ ದೇಶದಲ್ಲಿ ನಾವು ಏನೇ ಓದಲು ಬಯಸಿದರೂ, ಅದರ ಪಕ್ಷಿನೋಟ ಮೊದಲೇ ನೀಡುವ ವ್ಯವಸ್ಥೆಯೇ ಇಲ್ಲ. ಈಗ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಗಣಿತ ಓದಲು ಇಚ್ಛೆ ಪಡುತ್ತಾನೆ ಎಂದುಕೊಳ್ಳೋಣ. ಅವನದ್ದು ಕೇವಲ ಇಚ್ಚೆಯೋ, ಅಥವಾ ಅವನಿಗೆ ಅದಕ್ಕೆ ಬೇಕಾದ ಆಸಕ್ತಿ, ಅಭಿರುಚಿ, ಕಷ್ಟಸಹಿಷ್ಣುತೆ ಇದೆಯೋ ಎಂಬುದನ್ನು ವೈಜ್ಞಾನಿಕವಾಗಿ ಪತ್ತೆ ಮಾಡಿ ನಿರ್ಧರಿಸುವ ವ್ಯವಸ್ಥೆ ಇಲ್ಲ. ಅದು ಪ್ರಾಯಶಃ ಸರಕಾರೀ ಮಟ್ಟದಲ್ಲಿ ಬರುವ ಸಾಧ್ಯತೆಯೂ ಇಲ್ಲ. ಅಂತಹ ವಿದ್ಯಾರ್ಥಿಗೆ ಆತ ಕ್ರಮಿಸಬೇಕಾದ ಮಾರ್ಗ, ಈ ವಿಷಯವಾಗಿ ಅಧ್ಯಯನ ಮುಂದುವರೆಸಲು ಇರುವ ಸಾಧ್ಯತೆಗಳು, ವೃತ್ತಿಮಾರ್ಗ, ಸಂಶೋಧನಾ ಹಾದಿ, ಅನುದಾನ ಸಹಾಯಗಳು, ವಿದೇಶದಲ್ಲಿ ವ್ಯಾಸಂಗದ ಅವಕಾಶಗಳು – ಇವನ್ನೆಲ್ಲಾ ಪೋಷಕರ ಜೊತೆ ಸೇರಿ ಚರ್ಚಿಸಿ ಒಂದು ನೀಲಿನಕ್ಷೆ ಸಿದ್ಧಪಡಿಸುವ ವ್ಯವಸ್ಥೆ ನಮ್ಮಲ್ಲಿ ಈವರೆಗೆ ಇಲ್ಲ. ಇದು ವೈದ್ಯಕೀಯ ವ್ಯಾಸಂಗದ ವಿಷಯದಲ್ಲಿ ಕಟುಸತ್ಯವಾಗುತ್ತದೆ. ಬಹಳಷ್ಟು ವಿದ್ಯಾರ್ಥಿಗಳು ವೈದ್ಯಕೀಯ ವ್ಯಾಸಂಗವನ್ನು ತಮ್ಮ ಹದಿನೇಳು-ಹದಿನೆಂಟನೆಯ ವಯಸ್ಸಿನಲ್ಲಿ ಆಯ್ದುಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರ ಪೋಷಕರು. ಹೋಗಲಿ ಅವರ ಪೋಷಕರಿಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೆಯೇ? ಆ ಪೋಷಕರ ಮನಸ್ಸಿನಲ್ಲಿ ಇರುವುದು ಸಿನೆಮಾ ಯಾ ಧಾರಾವಾಹಿಗಳಲ್ಲಿ ಬರುವ ವೈದ್ಯರ ಚಿತ್ರಣ. ಇಲ್ಲವೇ, ಕೈತುಂಬಾ ದುಡಿಯುತ್ತಿರುವ ಯಾವುದೋ ಒಬ್ಬ ವೈದ್ಯರ ಉದಾಹರಣೆ. ಇಂತಹ ಅಸಾಂದರ್ಭಿಕ ಉದಾಹರಣೆಗಳ ಆಧಾರದ ಮೇಲೆ ತಮ್ಮ ಮಕ್ಕಳ ಭವಿಷ್ಯ ನಿರ್ಧರಿಸುವ ಪೋಷಕರೇ ಹೆಚ್ಚು. ವೈದ್ಯರು ಕ್ರಮಿಸಬೇಕಾದ ದುರ್ಗಮ ಹಾದಿಯ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದೆ ಆ ಪ್ರಯಾಣಕ್ಕೆ ತೊಡಗುವ ಹಲವಾರು ವಿದ್ಯಾರ್ಥಿಗಳು ತಮ್ಮ ಮಾನಸಿಕ ಸ್ಥಿಮಿತ, ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಇಂದಿಗೂ ಕನಿಷ್ಠ ಐವತ್ತು ಪ್ರತಿಶತ ವೈದ್ಯರು ತಮಗೆ ಅವಕಾಶ ಇದ್ದಿದ್ದರೆ ಈ ವೃತ್ತಿಗೆ ಬರುತ್ತಲೇ ಇರುತ್ತಿರಲಿಲ್ಲ ಎಂದು ನುಡಿಯುತ್ತಾರೆ. ಜೊತೆಗೆ, ನಮ್ಮ ದೇಶದಲ್ಲಿ ಒಮ್ಮೆ ಒಂದು ದಾರಿ ಹಿಡಿದರೆ ಮುಗಿಯಿತು. ಅದು ಏಕಮುಖ ರಸ್ತೆ! ಹಿಂದೆ ತಿರುಗುಬಹುದಾದ ಸಾಧ್ಯತೆ ಬಹಳ ಕಡಿಮೆ. ನೋವೋ ನಲಿವೋ – ಅದರಲ್ಲೇ ಮುಂದುವರೆಯಬೇಕು. ಹಣವಿದ್ದವರ ಮಾತು ಬೇರೆ; ಇಲ್ಲಿ ಮಾತು ಬಹುಸಂಖ್ಯಾತರಾದ ಸಾಲ ಮಾಡಿ ವ್ಯಾಸಂಗ ಮಾಡುವ ಮಧ್ಯಮವರ್ಗದವರದ್ದು.

ಅಂದರೆ, ಈ ದಾರಿ ಹಿಡಿಯುವ ಮುನ್ನ ಪ್ರಯಾಣವೂ ಗೊತ್ತಿಲ್ಲ; ಅಂತ್ಯವೂ ಗೊತ್ತಿಲ್ಲ ಎಂಬುದೇ ನಿಜ. ಸ್ವ-ಇಚ್ಚೆಯ ನಿರ್ಧಾರವಂತೂ ಅಲ್ಲ. ಇನ್ನು ಅನುಕಂಪದ ಪರಿಭಾಷೆಯೇ ತಿಳಿಯದ ಸಮಾಜದಿಂದ ಅನುಕಂಪ ಬಯಸಿದರೆ ಸಿಗುವುದು ಅವರು ಬೀಸಿದ ಕಲ್ಲು ಮಾತ್ರ!

ಪ್ರಶ್ನೆ 4: ಅದೆಲ್ಲಾ ಆಗಲಿ. ಇಷ್ಟು ಕಷ್ಟ ಪಟ್ಟರೂ ವೈದ್ಯರು ನಂತರ ಸುಖವಾಗಿಯೇ ಇರುತ್ತಾರಲ್ಲವೇ? ಕಾರು-ಮನೆ ಮಾಡಿಕೊಂಡು, ವಿದೇಶ ತಿರುಗುತ್ತಾ, ಕಮೀಶನ್ ಕಮಾಯಿಸುತ್ತಾ, ಕೂತ ಖುರ್ಚಿಯಿಂದ ಏಳದೇ ದುಡ್ಡು ಮಾಡುವುದಿಲ್ಲವೇ? ಇದಕ್ಕೇನು ಹೇಳುತ್ತೀರಿ?

“ವೈದ್ಯರ ದುಡಿತದ ಫಲ ಅವರ ಮಕ್ಕಳಿಗೆ” ಎಂಬ ಮಾತಿದೆ. ಅದು ತಕ್ಕ ಮಟ್ಟಿಗೆ ನಿಜವೂ ಹೌದು. ಎಷ್ಟೇ ವ್ಯಾಸಂಗ ಮಾಡಿದರೂ ವೈದ್ಯ ವೃತ್ತಿಯ ಆರಂಭಿಕ ದಿನಗಳಲ್ಲಿ ಹಣ ಮಾಡುವುದು ಕಷ್ಟ. ವೈದ್ಯರ ವಿಷಯ ಬಂದಾಗ ನಮ್ಮ ದೇಶದಲ್ಲಿ ನರೆತ ಕೂದಲಿಗೆ ಇರುವ ಬೆಲೆ ಕಪ್ಪು ಕೂದಲಿಗೆ ಇಲ್ಲ! ಈ ಕಾರಣಕ್ಕೇ ಆರಂಭಿಕ ದಿನಗಳಲ್ಲಿ ವೈದ್ಯರು ಕೆಲಸದ ವಿಷಯವಾಗಿ ಸುತ್ತಾಡಬೇಕಾಗುತ್ತದೆ. ಹಲವಾರು ಆಸ್ಪತ್ರೆಗಳನ್ನು ಎಡತಾಕಿ ಹೊತ್ತಲ್ಲದ ಹೊತ್ತಿನಲ್ಲೂ ರೋಗಿಗಳನ್ನು ನೋಡುವುದು; ಉಚಿತ ವೈದ್ಯಕೀಯ ಕ್ಯಾಂಪ್ ಗಳಿಗೆ ಹೋಗಿ ಅಲ್ಲಿ ಸ್ವಲ್ಪ ಹೆಸರು ಮಾಡಿಕೊಳ್ಳುವುದು; ಎಂತಹ ಅವೇಳೆಯಲ್ಲೂ ತುರ್ತುಕರೆಗಳನ್ನು ಸ್ವೀಕರಿಸಿ ಸಲಹೆ ನೀಡುವುದು – ಇಂತಹ ಕೆಲಸಗಳನ್ನು ಹಲವಾರು ವರ್ಷಗಳ ಕಾಲ ಬೇಸರವಿಲ್ಲದೆ ಮಾಡಿದರೆ ಮಾತ್ರ ವೈದ್ಯರು ಹೆಸರು, ಹಣ ಮಾಡಲು ಸಾಧ್ಯ. ತೀರಾ ಇಂತಹ ಯಾವುದನ್ನೂ ತಾಕಿಸಿಕೊಳ್ಳದೆ ಒಂದೇ ಜಾಗದಲ್ಲಿ ಕ್ಲಿನಿಕ್ ಮಾಡಿ ಕೂರುವ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಬಹಳ ಕಾಲ ತೆಗೆದುಕೊಳ್ಳುತ್ತಾರೆ ಅಥವಾ ಜೀವನವಿಡೀ ಯಶಸ್ಸು ಕಾಣದೆ ಇರಬಹುದು ಕೂಡ. ಜೊತೆಗೆ, ಹೆಚ್ಚು ರೋಗಿಗಳನ್ನು ನೋಡಿ, ಅವರ ಸಮಸ್ಯೆಗಳನ್ನು ಪರಿಹರಿಸುತ್ತಾ ಹೋದಂತೆ ವೈದ್ಯರ ಅನುಭವ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ರೋಗದ ಪತ್ತೆ ಹಚ್ಚುವಿಕೆ, ಚಿಕಿತ್ಸೆ ನಿಖರವಾಗುತ್ತಾ ಹೋಗುತ್ತದೆ. ಒಬ್ಬ ಒಳ್ಳೆಯ ವೈದ್ಯನಿಗೆ ಅನುಭವ ಮತ್ತು ಸತತ ವ್ಯಾಸಂಗ ಎರಡೂ ಮುಖ್ಯ. ಕೇವಲ ವ್ಯಾಸಂಗ ಮಾಡುತ್ತಾ ಅನುಭವ ಪಡೆದುಕೊಳ್ಳದೆ ಹೋದರೆ ನೀರಿಗಿಳಿಯದೆ ಈಜು ಕಲಿತಂತೆ! ಕೇವಲ ಅನುಭವ ಮಾತ್ರ ಪಡೆದುಕೊಳ್ಳುತ್ತಾ ಸತತ ವ್ಯಾಸಂಗದ ಕಡೆ ಗಮನ ಕೊಡದೆ ಹೋದರೆ ಬಹಳ ಬೇಗ ಗತಕಾಲಕ್ಕೆ ಇಳಿಯಬೇಕಾಗುತ್ತದೆ. ಈಗಿನ ಮಾಹಿತಿ ಯುಗದಲ್ಲಿ ಸತತ ವ್ಯಾಸಂಗ ಇಲ್ಲದ ವೈದ್ಯರು ರೋಗಿಗಳಿಂದ ಅವಹೇಳನಕ್ಕೆ ಗುರಿಯಾಗಬಹುದು! ಇದೇ ಋಣಾತ್ಮಕವಾಗಿ ಅವರ ವೃತ್ತಿಜೀವನಕ್ಕೆ ಬಾಧಕ ಆಗಬಹುದು. ಆದ್ದರಿಂದ ವೈದ್ಯರ ವ್ಯಾಸಂಗ ಕೇವಲ ಕಾಲೇಜಿಗೆ ಮುಗಿಯುವುದಿಲ್ಲ. ಅದು ಜೀವನವಿಡೀ ಇರಬೇಕಾಗುತ್ತದೆ.

ಅಂದರೆ, ವೈದ್ಯರಾದವರು ಕಾಸು ನೋಡುವುದೇ ಇಳಿವಯಸ್ಸಿನಲ್ಲಿ. ಮೇಲ್ನೋಟಕ್ಕೆ ನೋಡುವ ಜನಕ್ಕೆ ಈ ಕಾರು – ಮನೆ ಕಾಣುತ್ತದೆ ಹೊರತು ಅದರ ಹಿಂದೆ ಇರುವ ವರ್ಷಗಳ ಶ್ರಮ ಕಾಣುವುದಿಲ್ಲ. ಸುಮ್ಮನೆ ಒಂದೆಡೆ ಕೂತು ಹಣ ಮಾಡುವ ವೈದ್ಯ ಈಜುವ ಬಾತುಕೋಳಿಯಂತೆ – ನೋಡುವವರಿಗೆ ಮೋಜಿನ ಈಜು ಕಾಣುತ್ತದೆಯೇ ಹೊರತು ನೀರಿನೊಳಗೆ ಒಂದೇ ಸಮನೆ ಬಡಿಯುವ ಅದರ ಕಾಲುಗಳಲ್ಲ!

ಕಮೀಶನ್ ಗಳಿಸುವ ವೈದ್ಯರು ಇಲ್ಲದಿಲ್ಲ. ಅಂತಹವರು ವೃತ್ತಿಗೇ ಕಳಂಕ. ಆದರೆ ಅದೃಷ್ಟವಶಾತ್, ಅಂತಹವರ ಸಂಖ್ಯೆ ಈಗಲೂ ಹೆಚ್ಚೇನೂ ಇಲ್ಲ. ಈ ದಿನಗಳಲ್ಲೂ ಪ್ರಾಮಾಣಿಕ ವೈದ್ಯರು ಅತ್ಯಧಿಕ ಸಂಖ್ಯೆಯಲ್ಲಿ ಇದ್ದಾರೆ ಎಂಬುದೇ ನಿರಾಳ.

ಪ್ರಶ್ನೆ 5: ವೈದ್ಯಕೀಯ ಸಲಹೆ ಏಕೆ ಅಷ್ಟು ದುಬಾರಿ? ವೈದ್ಯಕೀಯ ಚಿಕಿತ್ಸೆಯ ವೆಚ್ಚ ಏಕೆ ಅಷ್ಟು ಹೆಚ್ಚಾಗಿರುತ್ತದೆ?

ನಮ್ಮಲ್ಲಿ ಸರಿಯಾದ ವೈದ್ಯಕೀಯ ಶ್ರೇಣೀಕೃತ ವ್ಯವಸ್ಥೆ ಇಲ್ಲ. ನೂರಕ್ಕೆ ಎಂಭತ್ತರಷ್ಟು ಕಾಯಿಲೆಗಳನ್ನು ಪ್ರಾಥಮಿಕ ಶ್ರೇಣಿಯ ವೈದ್ಯಕೀಯ ವ್ಯವಸ್ಥೆಯಲ್ಲೇ ಗುಣಪಡಿಸಬಹುದು. ಇನ್ನುಳಿದ ಇಪ್ಪತ್ತರಲ್ಲಿ ಹದಿನೈದರನ್ನು ಮೀರಿ ಎರಡನೇ ಶ್ರೇಣಿಯ ವೈದ್ಯರು ನಿರ್ವಹಿಸಬಲ್ಲರು. ಕೇವಲ ನಾಲ್ಕೈದು ಪ್ರತಿಶತ ಮಾತ್ರ ಅಂತಿಮ ಹಂತದ ತಜ್ಞರಿಗೆ ಹೋಗಬೇಕು. ವೈದ್ಯಕೀಯ ವ್ಯವಸ್ಥೆಯಲ್ಲಿ ಈ ಪ್ರಮಾಣದಲ್ಲಿಯೇ ಪ್ರಾಥಮಿಕ ಹಂತದಲ್ಲಿ ಶೇಕಡಾ 80 ವೈದ್ಯರು ಇರಬೇಕು. ಹದಿನೈದು ಪ್ರತಿಶತ ಮುಂದಿನ ಹಂತದ ತಜ್ಞರು ಇರಬೇಕು. ಅಂತಿಮ ಹಂತದ ವಿಶೇಷ ತಜ್ಞರ ಸಂಖ್ಯೆ ಶೇಕಡಾ ಐದು ಇದ್ದರೆ ಸಾಕು.

ಕೇವಲ ಎಂ ಬಿ ಬಿ ಎಸ್ ವ್ಯಾಸಂಗ ಮಾಡಿದವರಿಗೆ ಸಾಮಾಜಿಕ ಮನ್ನಣೆ ಹೆಚ್ಚು ಇಲ್ಲದ ಕಾರಣ ಅವರು ತಜ್ಞ ವ್ಯಾಸಂಗ ಮಾಡಲು ಮುಂದಾಗುತ್ತಿದ್ದಾರೆಯೇ ವಿನಃ ಪ್ರಾಥಮಿಕ ಶ್ರೇಣಿಯಲ್ಲಿ ಕೆಲಸ ಮಾಡಲು ಅಲ್ಲ. ಇದರಿಂದ ಉಂಟಾದ ನಿರ್ವಾತದ ಪರಿಣಾಮ ಪ್ರಾಥಮಿಕ ಹಂತದಲ್ಲಿ ಖೊಟ್ಟಿ ವೈದ್ಯರು ತುಂಬಿದ್ದಾರೆ. ಈ ಮೋಸಗಾರರು ವೈದ್ಯಕೀಯ ವ್ಯಾಸಂಗವನ್ನೇ ಮಾಡದ ಖೂಳರು ಆಗಿರಬಹುದು; ಇಲ್ಲವೇ ಯಾವುದೋ ಬೇರೆ ವಿಧಾನದ ವೈದ್ಯಕೀಯ ಪದ್ಧತಿಯ ವ್ಯಾಸಂಗ ಮಾಡಿ, ತಾವು ಎಂದಿಗೂ ಓದದೇ ಇರುವ ಆಧುನಿಕ ವೈದ್ಯ ಪದ್ದತಿಯ ಔಷಧಗಳನ್ನು ಬೇಕಾಬಿಟ್ಟಿ ಬರೆಯುವ ಪಾಖಂಡಿಗಳಿರಬಹುದು. ಒಟ್ಟಿನಲ್ಲಿ ನಮ್ಮ ಪ್ರಾಥಮಿಕ ಶ್ರೇಣಿಯ ವೈದ್ಯಕೀಯ ಚಿಕಿತ್ಸೆ ಗಬ್ಬೆದ್ದು ಹೋಗಿದೆ. ಇದರಲ್ಲಿ ಘನತೆವೆತ್ತ ಸರ್ಕಾರದ ಪಾತ್ರ ಎಷ್ಟೋ ಸಮಾಜದ ಪಾತ್ರವೂ ಅಷ್ಟೇ ಇದೆ. ಈ ಹಳ್ಳವನ್ನು ಕೆಣಕಿ ಕಣಿವೆ ಮಾಡಲು ರಾಜಕಾರಣ, ಮಾಧ್ಯಮ, ವೈದ್ಯಕೀಯ ಉದ್ಯಮ ನಡೆಸುವ ಪಟ್ಟಭದ್ರರು ಇದ್ದಾರೆ. ಯಾರಿಗೂ ವ್ಯವಸ್ಥೆಯ ಹೀನಾಯ ಸ್ಥಿತಿಗತಿಯ ಅರಿವೂ ಇಲ್ಲ; ಪರಿಹಾರವಂತೂ ಬೇಕಾಗಿಯೇ ಇಲ್ಲ. ಇದರ ಬಗ್ಗೆ ಹೊರಡುವ ಪರಿಹಾರದ ಕೆಲವು ಕ್ಷೀಣ ಸ್ವರಗಳು ಆಳುಗರನ್ನು ತಲುಪುವುದೇ ಇಲ್ಲ.

ಪ್ರತಿಯೊಂದು ಸಣ್ಣ ಸಮಸ್ಯೆಗೂ ತಜ್ಞ ವೈದ್ಯರ ಬಳಿ ಹೋದರೆ ಚಿಕಿತ್ಸೆಯ ವೆಚ್ಚ ಏನಾದೀತು? ಪ್ರಾಥಮಿಕ ಶ್ರೇಣಿಯ ವೈದ್ಯರಿಗೆ ಜವಾಬ್ದಾರಿ ಅಧಿಕವಾಗಿ ಇರಬೇಕಿಲ್ಲ. ತನ್ನ ಅರಿವನ್ನು ಮೀರಿದ ರೋಗಿಯನ್ನು ಮುಂದಿನ ಹಂತಕ್ಕೆ ತಲುಪಿಸಿದರೆ ಆಯಿತು. ಆ ಶ್ರೇಣಿಯಲ್ಲಿ ಒಂದು ಶಿಷ್ಟಾಚಾರದ ರೀತ್ಯಾ ರೋಗಿಯ ಕಾಯಿಲೆಯನ್ನು ಪರೀಕ್ಷಿಸಿದರೆ ಹೆಚ್ಚಿನ ಖಾಯಿಲೆಗಳು ಗುಣವಾಗುತ್ತವೆ. ಇಂತಹ ವೈದ್ಯರು ದಿನಕ್ಕೆ ಹತ್ತು ತಾಸು ಕೆಲಸ ಮಾಡಿದರೂ ಸುಮಾರು ಅರವತ್ತು ರೋಗಿಗಳಿಗೆ ಚಿಕಿತ್ಸೆ ನೀಡಬಹುದು. ಅದರಲ್ಲಿ ಸುಮಾರು ಐವತ್ತು ರೋಗಿಗಳು ಮುಂದಿನ ಹಂತಕ್ಕೆ ಹೋಗುವ ಅವಶ್ಯಕತೆ ಇಲ್ಲ. ಒಬ್ಬ ರೋಗಿ ತಲಾ ರೂ.೧೦೦/- ಫೀಸು ನೀಡಿದರೂ ಸಾಕು. ಒಂದು ತಿಂಗಳಿಗೆ ಒಳ್ಳೆಯ ಮೊತ್ತ ಆಗುತ್ತದೆ.

ಆದರೆ ತಜ್ಞ ವೈದ್ಯರ ಸ್ಥಿತಿ ಹಾಗಿಲ್ಲ. ತನ್ನ ಬಳಿ ಬರುವ ಪ್ರತಿಯೊಂದು ರೋಗಿಯ ಸಂಪೂರ್ಣ ಚಿಕಿತ್ಸೆಯ ಜವಾಬ್ದಾರಿ ಅವರದ್ದು. ಅವರೇ ಅಂತಿಮ ಹಂತದ ವೈದ್ಯರಾದ್ದರಿಂದ ಮುಂದಿನ ಹಂತಕ್ಕೆ ರೋಗಿಯನ್ನು ತಲುಪಿಸುವ ಅವಕಾಶ ಅವರಿಗಿಲ್ಲ! ಹೀಗಾಗಿ ರೋಗಿಯನ್ನು ಕೂಲಂಕುಶವಾಗಿ ಪರೀಕ್ಷೆ ಮಾಡಲೇ ಬೇಕು. ಸಣ್ಣ ಸಣ್ಣ ಅವಶ್ಯಕತೆಗಳಿಗೂ ಪ್ರಯೋಗಾಲಯಗಳ ಪರೀಕ್ಷೆ ಮಾಡಬೇಕಾಗಬಹುದು. ಒಬ್ಬ ರೋಗಿಯ ಭೇಟಿಗೆ ಸುಮಾರು ಇಪ್ಪತ್ತು – ಮೂವತ್ತು ನಿಮಿಷ ತಗುಲುತ್ತದೆ. ಇದು ಅಧಿಕ ಒತ್ತಡದ ಕೆಲಸ ಕೂಡ. ಹೀಗಾಗಿ ಇಡೀ ದಿನಕ್ಕೆ ಅವರಿಗೆ ನೋಡಲು ಸಾಧ್ಯವಾಗುವುದು ಹೆಚ್ಚೆಂದರೆ ಇಪ್ಪತ್ತು ರೋಗಿಗಳನ್ನೇ. ಅವರ ಇಪ್ಪತ್ತು ವರ್ಷ ವ್ಯಾಸಂಗದ ಫಲಶ್ರುತಿಯಾಗಿ ನಡೆಯುವ ಇಂತಹ ಸಲಹೆಗೆ ಅವರು ಎಷ್ಟು ಫೀಸು ತೆಗೆದುಕೊಳ್ಳಬೇಕು? ಇದು ಯಾರು ಬೇಕಾದರೂ ಲೆಕ್ಕ ಹಾಕಬಹುದಾದ ವಿಷಯ. ಇಪ್ಪತ್ತು ವರ್ಷಗಳ ಅನುಭವ ಇರುವ ವಕೀಲರು ಪ್ರತೀ ಸಲಹೆಗೆ ಎಷ್ಟು ಹಣ ಪಡೆಯುತ್ತಾರೆ? ಅದರ ಲೆಕ್ಕದಲ್ಲಿ ವೈದ್ಯರು ತೆಗೆದುಕೊಳ್ಳುವ ಈ ಮೊತ್ತ ತೀರಾ ಕಡಿಮೆ! ಇನ್ನು ದುಬಾರಿ ಪದಕ್ಕೆ ಅರ್ಥವ್ಯಾಪ್ತಿ ಏನು?

ವೈದ್ಯಕೀಯ ಚಿಕಿತ್ಸೆ ಖರ್ಚು ಅಷ್ಟು ಹೆಚ್ಚೇಕೆ? ಇದನ್ನು ಈಗಾಗಲೇ ಹಲವಾರು ಲೇಖನಗಳಲ್ಲಿ ಚರ್ಚಿಸಲಾಗಿದೆ. ಘನತೆವೆತ್ತ ಸರ್ಕಾರ ತನ್ನ ಹೊಣೆಗಾರಿಕೆಯನ್ನು ಖಾಸಗಿ ಆಸ್ಪತ್ರೆಗಳ ಕೈಗೆ ವರ್ಗಾಯಿಸಿದರೆ ಏನೆಲ್ಲಾ ಆಗಬಹುದು ಎಂಬುದು ವಿಸ್ತೃತವಾಗಿ ಚರ್ಚೆ ಆಗಿರುವ ವಿಷಯ. ಆದರೆ ಒಂದು ಮಾತು: ಆಸ್ಪತ್ರೆಗಳ ಒಟ್ಟಾರೆ ಬಿಲ್ ನಲ್ಲಿ ವೈದ್ಯರಿಗೆ ಸಿಗುವ ಮೊತ್ತ ಬಹಳ ಕಡಿಮೆ. ಯಾವುದೋ ಆಸ್ಪತ್ರೆಯಲ್ಲಿ ಒಟ್ಟು ಬಿಲ್ ಆರು ಲಕ್ಷ ಐವತ್ತೆಂಟು ಸಾವಿರ ರೂಪಾಯಿ ಆಗಿತ್ತಂತೆ. ರೋಗಿಯ ಸಂಬಂಧಿಕರು ಆಸ್ಪತ್ರೆಯವರನ್ನು ಕನಿಷ್ಠ ಆ ಎಂಟು ಸಾವಿರ ಬಿಟ್ಟು ಆರೂವರೆ ಲಕ್ಷ ಮಾಡಿ ಎಂದು ಕೇಳಿದಾಗ ಆಸ್ಪತ್ರೆಯವರು “ನಮ್ಮ ಡಾಕ್ಟರಿಗೆ ನಾವು ಕೊಡುವ ಆ ಮೊತ್ತವನ್ನು ನೀವು ಹಾಗೆ ಬಿಟ್ಟುಬಿಡಿ ಎಂದು ಕೇಳಿದರೆ ನಾವು ಡಾಕ್ಟರಿಗೆ ಏನು ಕೊಡಬೇಕು?” ಎಂದು ದಬಾಯಿಸಿದರಂತೆ! ಇದು ಜೋಕಲ್ಲ; ವಾಸ್ತವ.

ಪ್ರಶ್ನೆ 6: ವೈದ್ಯರ ತಪ್ಪುಗಳಿಂದ ಅಮಾಯಕ ಜನರ ಪ್ರಾಣಗಳು ಹೋಗುತ್ತಿವೆ. ಇದಕ್ಕೆ ವೈದ್ಯರ ಹೊಣೆ ಏನು?

ವೈದ್ಯಕೀಯ ವಿಜ್ಞಾನ ಪರಿಪೂರ್ಣವಲ್ಲ. ಇದು ವ್ಯಾಸಂಗ, ಅನುಭವ, ಅಂದಾಜು, ಆಲೋಚನೆ, ಅವಕಾಶ ತೆಗೆದುಕೊಳ್ಳುವಿಕೆ, ಅದೃಷ್ಟ ಇನ್ನೂ ಹಲವಾರು ವಿಷಯಗಳ ಕಲಸುಮೇಲೋಗರ! ಅಪೇಕ್ಷಿತ ಫಲಿತಾಂಶ ಏನಿರಬೇಕು ಎಂಬುದರಿಂದ ತಪ್ಪು – ಒಪ್ಪುಗಳ ನಿರ್ಧಾರ ಆಗುತ್ತದೆ. ರೋಗಿಯೊಬ್ಬ ಆಸ್ಪತ್ರೆಯಲ್ಲಿ ದಾಖಲಾದಾಗ ಯಾವ ವೈದ್ಯನೂ “ತಾನು ರೋಗಿಯನ್ನು ಬದುಕಿಸಿಯೇ ತೀರುತ್ತೇನೆ” ಎಂಬ ವಾಗ್ದಾನ ನೀಡಲು ಸಾಧ್ಯವೇ ಇಲ್ಲ. ರೋಗಿಯನ್ನು ಪರಿಶೀಲಿಸಿ, ಕಾಯಿಲೆಯನ್ನು ಪತ್ತೆ ಮಾಡಿ, ಅದಕ್ಕೆ ಸೂಕ್ತವಾದ ಚಿಕಿತ್ಸೆ ನೀಡುವುದು ವೈದ್ಯರಿಂದ ಅಪೇಕ್ಷಿತ ಕೆಲಸ. ಅದನ್ನು ಸರಿಯಾಗಿ ಮಾಡದಿದ್ದರೆ ಅದು ತಪ್ಪು. ರೋಗಿಯ ಬದುಕುವಿಕೆ ಖಾಯಿಲೆಯ ಗಂಭೀರತೆಯ ಮೇಲೆ ನಿಂತಿದೆಯೇ ಹೊರತು, ವೈದ್ಯರ ಮೇಲೆ ಸಂಪೂರ್ಣವಾಗಿ ಅಲ್ಲ. ಇಲ್ಲಿ ರೋಗಿಯ ಕುಟುಂಬ ವೈದ್ಯರ, ಆಸ್ಪತೆಯ ಜೊತೆ ನಿಂತು ರೋಗದ ಮೇಲೆ ಬಡಿದಾಡಬೇಕು. ಆದರೆ ದುರದೃಷ್ಟವಶಾತ್, ನಮ್ಮ ದೇಶದಲ್ಲಿ ರೋಗಿಯ ಸಂಬಂಧಿಗಳು ವೈದ್ಯರ ಬದಲಿಗೆ ರೋಗವನ್ನು ತಮ್ಮ ಬೆಂಬಲಿಗ ಎಂದು ಭಾವಿಸಿಕೊಂಡು ವೈದ್ಯರನ್ನು ಸಾಯಬಡಿಯುತ್ತಾರೆ!

ಹಾಗಾದರೆ ವೈದ್ಯರ ತಪ್ಪೇ ಇರುವುದಿಲ್ಲವೇ? ಖಂಡಿತಾ ಇರುತ್ತದೆ. ವೈದ್ಯರು ಆಗಸದಿಂದ ಇಳಿದು ಬಂದವರಲ್ಲ. ಅವರೂ ಎಲ್ಲರಂತೆ ಮೂಳೆ ಮಾಂಸದ ತಡಿಕೆಗಳೇ! ಆದರೆ ಅವರ ತಪ್ಪುಗಳನ್ನು ನಿರ್ಧರಿಸಬೇಕಾದವರು ಮಾಧ್ಯಮದವರಾಗಲೀ, ರೋಗಿಯ ಮನೆಯವರ ಪೈಕಿ ಗೂಂಡಾಗಳ ರೀತಿಯಲ್ಲಿ ವರ್ತಿಸುವ ಜನರಾಗಲೀ ಅಲ್ಲ. ವೈದ್ಯರ ತಪ್ಪು ಇದೆ ಎಂದರೆ ಮೊದಲು ಆಯಾ ಆಸ್ಪತ್ರೆಯ ನಿರೀಕ್ಷಕರಿಗೆ ದೂರು ಕೊಡಬಹುದು. ಅದು ಪರಿಣಾಮ ಬೀರದಿದ್ದರೆ ಆಯಾ ರಾಜ್ಯದ ಮೆಡಿಕಲ್ ಕೌನ್ಸಿಲ್ ಗೆ ದೂರು ನೀಡಬಹುದು. ಜೊತೆಗೆ ಗ್ರಾಹಕರ ವೇದಿಕೆಗೆ ದೂರು ನೀಡಬಹುದು. ಇದಲ್ಲದೆ ಪೋಲೀಸ್ ದೂರು ನೀಡಿ ನ್ಯಾಯಾಲಯಕ್ಕೆ ಎಳೆಯಬಹುದು. ಈ ದೂರನ್ನು ದೇಶದ ಪರಮೋಚ್ಛ ನ್ಯಾಯಸ್ಥಾನದವರೆಗೆ ಕೊಂಡೊಯ್ಯಬಹುದು. ಇಷ್ಟೆಲ್ಲಾ ಸ್ಥಾನಗಳಲ್ಲಿ ದೂರು ನೀಡುವ ಸಾಧ್ಯತೆ ಇರುವುದು ಈ ದೇಶದಲ್ಲಿ ವೈದ್ಯರ ಮೇಲೆ ಮಾತ್ರ! ಬೇರೆ ಯಾವುದೇ ವೃತ್ತಿಪರರ ಮೇಲೆ ಇಷ್ಟೊಂದು ಬಗೆಗಳಲ್ಲಿ ದೂರು ನೀಡಲು ಸಾಧ್ಯವೇ ಇಲ್ಲ. ಇಷ್ಟೆಲ್ಲಾ ತೂಗುಗತ್ತಿಗಳ ಅಡಿಯಲ್ಲಿ ಕೆಲಸ ಮಾಡವುದು ಅಂದರೆ ಬೇರೆ ಎಲ್ಲರಿಗಿಂತ ಕೆಲಸದ ಒತ್ತಡವೂ ವೈದ್ಯರಿಗೇ; ಜವಾಬ್ದಾರಿಯೂ ವೈದ್ಯರದ್ದೇ! ತಪ್ಪು ಮಾಡಿದ ವೈದ್ಯರಿಗೆ ಹತ್ತು ಹಲವೆಡಯಿಂದ ಶಿಕ್ಷೆಯಾಗಿ ವೃತ್ತಿ ಜೀವನ ಕೊನೆಗೊಂಡಿದ್ದೂ ಅಲ್ಲದೆ ತಾನು ಸಂಪಾದಿಸಿದ ಹಣವೆಲ್ಲಾ ದಂಡದ ರೂಪದಲ್ಲಿ ನೀಡಿದ ಉದಾಹರಣೆಗಳು ಉಂಟು. ಈಚಿನ ದಿನಗಳಲ್ಲಿ ತನ್ನ ನಿರ್ಲಕ್ಷ್ಯದ ಕಾರಣದಿಂದ ತಪ್ಪು ಮಾಡಿದ ವೈದ್ಯ ತಪ್ಪಿಸಿಕೊಳ್ಳುವ ಸಂಭವ ಕಡಿಮೆ. ಇದಕ್ಕಿಂತ ಹೆಚ್ಚಿನ ಹೊಣೆಗಾರಿಕೆಯನ್ನು ಯಾವ ವೃತ್ತಿ ನೀಡಬಲ್ಲದು?

ಇದು ಸ್ಥೂಲವಾಗಿ ವೈದ್ಯಕೀಯ ಜಗತ್ತಿನ ಅಂತರಂಗ. ವೈದ್ಯರ ಬಗ್ಗೆ ಅನುಕಂಪ ಹುಟ್ಟಿಸುವ ಪ್ರಯತ್ನ ಇದಲ್ಲ. ಒಂದು ವೇಳೆ ನಿಮ್ಮ ಮಕ್ಕಳು ಭವಿಷ್ಯದಲ್ಲಿ ವೈದ್ಯರಾಗಲು ಹೊರಟರೆ ಆ ಹಾದಿಯ ಪಯಣದ ಸ್ಥಿತಿ-ಗತಿ, ನಿಮ್ಮ ಮಕ್ಕಳ ಭವಿಷ್ಯ ಹೇಗಿರಬಹುದು ಎಂಬುದರ ಪಕ್ಷಿನೋಟ. ವೈದ್ಯರತ್ತ ಕಲ್ಲು ಬೀರುವ ಮುನ್ನ ಆ ಕಲ್ಲಿನ ಪೆಟ್ಟು ತಿನ್ನುವ ಮನುಷ್ಯನ ಗತದ ಹಾದಿ ಎಂತಹದು ಎಂದು ತೋರುವ ಪ್ರಯತ್ನ. ಇಲ್ಲಿ ಬಿಂಬಿತವಾಗಿರುವ ಸತ್ಯಗಳು ಒಬ್ಬ ಸಾಮಾನ್ಯ ಮಧ್ಯಮವರ್ಗದ ಹದಿವಯಸ್ಸಿನ ವಿದ್ಯಾರ್ಥಿ ತನಗೆ ಅರಿವಿಲ್ಲದ ದುರ್ಗಮ ದಾರಿಯಲ್ಲಿ ನಡೆಯುತ್ತಾ, ಪೆಟ್ಟುಗಳನ್ನು ತಿನ್ನುತ್ತಾ, ನೋವು-ನಲಿವುಗಳನ್ನು ಅನುಭವಿಸುತ್ತಾ, ಪ್ರಪಂಚದ ಚಿತ್ರವಿಚಿತ್ರ ಸತ್ಯಗಳನ್ನು ಅರಿಯುತ್ತಾ ಹಲವಾರು ವರ್ಷಗಳನ್ನು ದಾಟಿ ಮತ್ತೊಬ್ಬ ಸಹಮಾನವನ ನೋವಿಗೆ ಸ್ಪಂದಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳುವ ಸ್ಥಿತ್ಯಂತರ. ಇಲ್ಲಿ ಪ್ರಶ್ನೆಗಳಿಗೆ ಕೊನೆಯಿಲ್ಲ; ಉತ್ತರಗಳು ಬರಿದಾಗುವುದಿಲ್ಲ. ಆದರೆ ಪ್ರಶ್ನೆಗಳ ಹಿಂದಿನ ಭಾವ ಬದಲಾದರೆ ಅದೊಂದು ನೈಜ ಬದಲಾವಣೆ. ಈ ಲೇಖನದ ಮೂಲೋದ್ದೇಶವೂ ಅದೇ.