ಸೋಮವಾರ, ಅಕ್ಟೋಬರ್ 28, 2019


ಕ್ಷಯರೋಗದ ಶೀಘ್ರ ಪತ್ತೆಗೆ ಹೊಸ ಮಾದರಿಯ ಪರೀಕ್ಷೆ

ಡಾ ಕಿರಣ್ ವಿ ಎಸ್

ಪ್ರಪಂಚವನ್ನು ತಲ್ಲಣಗೊಳಿಸಿರುವ ರೋಗಗಳ ಪೈಕಿ ಕ್ಷಯರೋಗದ ಪಾತ್ರ ತುಂಬಾ ದೊಡ್ಡದು. “ರೋಗಗಳ ರಾಜ” ಎಂದೇ ಒಂದು ಕಾಲದಲ್ಲಿ ಕರೆಸಿಕೊಂಡ ವ್ಯಾಧಿ ಇದು. ಮೂಲತಃ ಶ್ವಾಸಕೋಶಗಳ ಖಾಯಿಲೆಯಾದರೂ, ಶರೀರದ ಯಾವುದೇ ಅಂಗಕ್ಕಾದರೂ ವ್ಯಾಪಿಸಿ ಇಡೀ ದೇಹವನ್ನೇ ಕಂಗೆಡಿಸಿಬಿಡುವ ಸಾಮರ್ಥ್ಯವಿರುವ ರೋಗ. ಮೆದುಳಿನ ಪೊರೆ, ಜೀರ್ಣಾಂಗಗಳು, ದುಗ್ಧ ಗ್ರಂಥಿ, ಬೆನ್ನು ಮೂಳೆಯಿಂದ ಹಿಡಿದು ಇತರ ಎಲುಬುಗಳು, ಸಂಧಿಗಳು, ಮೂತ್ರಪಿಂಡ, ಚರ್ಮ – ಹೀಗೆ ಕ್ಷಯರೋಗ ವ್ಯಾಪಿಸದ ಅಂಗಗಳೇ ಇಲ್ಲ ಎನ್ನಬಹುದು. ಸಾಮಾನ್ಯ ಔಷಧಗಳಿಗೆ ಬಗ್ಗದ ಈ ರೋಗದ ಪತ್ತೆಯೂ ಕಷ್ಟ; ಚಿಕಿತ್ಸೆಯೂ ದೀರ್ಘ!

Mycobacterium tuberculosis ಎಂಬ ವಿಶಿಷ್ಟ ಬಗೆಯ ಬ್ಯಾಕ್ಟೀರಿಯಾದಿಂದ ಬರುವ ಈ ಕ್ಷಯರೋಗ ಮಾನವಕುಲವನ್ನು ಶತಮಾನಗಳ ಕಾಲದಿಂದ ಕಾಡಿರುವ ವ್ಯಾಧಿ. ಒಂದು ಕಾಲದಲ್ಲಿ ಇಡೀ ಜಗತ್ತನ್ನೇ ವ್ಯಾಪಿಸಿದ್ದ ಈ ರೋಗ, ಕಾಲಾಂತರದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಜೀವನ ಮಟ್ಟದಲ್ಲಿ ಸುಧಾರಣೆ ಆಗುತ್ತಿದ್ದಂತೆ ಅಲ್ಲಿ ಕಡಿಮೆ ಆಯಿತು. ಆದರೆ ಬಡ ರಾಷ್ಟ್ರಗಳೇ ತುಂಬಿರುವ ತೃತೀಯ ವಿಶ್ವದಲ್ಲಿ ಕ್ಷಯರೋಗ ಇಂದಿಗೂ ಆರೋಗ್ಯ ವ್ಯವಸ್ಥೆಯ ಅತೀ ದೊಡ್ಡ ಕಂಟಕಗಳಲ್ಲಿ, ಸವಾಲುಗಳಲ್ಲಿ ಒಂದು. 

ವೈದ್ಯಕೀಯ ಸಂಶೋಧನೆ ಎನ್ನುವುದು ಬಹುಮಟ್ಟಿಗೆ ಶ್ರೀಮಂತ ದೇಶಗಳು ಮಾಡುವ ಕೆಲಸ. ಆ ಸಂಶೋಧನೆಯ ಫಲಗಳನ್ನು ಸ್ವಲ್ಪ ಕಾಲದ ನಂತರ ಬಡದೇಶಗಳು ಪಡೆದುಕೊಳ್ಳುತ್ತವೆ. ಕ್ಷಯರೋಗ ಈ ಶ್ರೀಮಂತ ದೇಶಗಳಲ್ಲಿ ಕಣ್ಮರೆ ಆದ ನಂತರ ಆ ಬಗೆಗಿನ ಸಂಶೋಧನೆ ಕೂಡ ಸ್ಥಗಿತವಾಯಿತು. ಫಲವಾಗಿ ಬಡ ದೇಶಗಳು ಅದೇ ಹಳೆಯ ರೋಗಪತ್ತೆ ವಿಧಾನಗಳನ್ನು, ಬೆರಳೆಣಿಕೆಯ ಹಳೆಯ ಔಷಧಗಳನ್ನೇ ನೆಚ್ಚಿಕೊಂಡು ಹೆಣಗುತ್ತಿದ್ದವು. ರೋಗಿಯ ಕಫವನ್ನು ಆಮ್ಲೀಯ ರಾಸಾಯನಿಕದಿಂದ ಸಂಸ್ಕರಿಸಿ ಅದರಲ್ಲಿ ಇರಬಹುದಾದ ಕ್ಷಯರೋಗಕಾರಕ ಬ್ಯಾಕ್ಟೀರಿಯಾಗಳನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ನೋಡಬೇಕಿತ್ತು. ಇದು ಹೇಳಿಕೊಳ್ಳುವಷ್ಟು ನಿಖರ ಫಲಿತಾಂಶ ನೀಡುವ ಪ್ರಕ್ರಿಯೆಯಲ್ಲ. ರೋಗಿಯ ಶರೀರದಲ್ಲಿನ ಕ್ಷಯರೋಗಕಾರಕ ಬ್ಯಾಕ್ಟೀರಿಯಾಗಳನ್ನು ಪ್ರಯೋಗಾಲಯದಲ್ಲಿ ಬೆಳೆಸಿ ಪರೀಕ್ಷಿಸುವ ವಿಧಾನ ನಿಖರವಾದರೂ, ತೀರಾ ನಿಧಾನದ, ಬಹಳ ತಾಳ್ಮೆ ಬೇಡುವ, ಅತ್ಯಂತ ಕಡಿಮೆ ಪ್ರಮಾಣದ ಫಲಿತಾಂಶ ನೀಡುವ ಪ್ರಕ್ರಿಯೆ!

ಬಡ ದೇಶಗಳು ಕ್ಷಯರೋಗವನ್ನು ನಿಯಂತ್ರಿಸಲಾಗದೆ ಕಂಗಾಲಾಗುತ್ತಿದ್ದ ಕಾಲದಲ್ಲಿ ಇದರ ಸಮೀಕರಣವನ್ನು ಬದಲಾಯಿಸಿದ್ದು ಏಡ್ಸ್ ಎಂಬ ಮಹಾಮಾರಿ! ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಏಡ್ಸ್ ರೋಗಿಗಳು ಹೆಚ್ಚಾಗುತ್ತಿದ್ದಂತೆ ಆ ರೋಗಿಗಳ ಕ್ಷೀಣ ರೋಗನಿರೋಧಕ ಶಕ್ತಿಯ ಕಾರಣದಿಂದ ಅವರಲ್ಲಿ ಕ್ಷಯರೋಗ ಮತ್ತೆ ಕಾಣಿಸತೊಡಗಿತು. ಇದರಿಂದ ಶ್ರೀಮಂತ ದೇಶಗಳು ಕ್ಷಯರೋಗದ ಬಗ್ಗೆ ಮತ್ತೆ ಆಸಕ್ತಿ ತೋರಿ, ಹೊಸ ಹೊಸ ರೋಗಪತ್ತೆ ವಿಧಾನಗಳನ್ನು ಅಭಿವೃದ್ಧಿ ಪಡಿಸಿದರು. ಇದರ ಫಲವಾಗಿ ಇಂತಹ ಪರೀಕ್ಷೆಗಳು ತೃತೀಯ ವಿಶ್ವಕ್ಕೂ ಲಭಿಸಿತಾದರೂ ಇವು ತೀರಾ ದುಬಾರಿ. ಬಡ ದೇಶಗಳ ಆವಶ್ಯಕತೆ ಎಂದರೆ – ರೋಗ ಪತ್ತೆ ಮಾಡುವ ವಿಧಾನ ನಿಖರವಾಗಿರಬೇಕು; ಸೋವಿಯಾಗಿರಬೇಕು; ಶೀಘ್ರವಾಗಿ ಆಗಬೇಕು. ಆದರೆ ಇಂತಹ ವಿಧಾನಗಳನ್ನು ಸಾಧಿಸುವುದು ಸುಲಭವಲ್ಲ. ಒಂದು ವೇಳೆ ಇಂತಹ ರೋಗಪತ್ತೆ ವಿಧಾನಗಳನ್ನು ಸಾಧಿಸಿದರೆ, ಅದರಿಂದ ರೋಗ ಪತ್ತೆ ಕಾರ್ಯ ಶೀಘ್ರವಾಗಿ ಆಗಿ, ರೋಗಿಗೆ ಸೂಕ್ತವಾದ ಔಷದಗಳನ್ನು ನೀಡಿ ರೋಗದ ಉಲ್ಬಣವನ್ನು ಹತ್ತಿಕ್ಕಿ, ಜೀವ ಉಳಿಸಬಹುದು. ವಿಶ್ವ ಆರೋಗ್ಯ ಸಂಸ್ಥೆ ಕ್ರಿ ಶ 2035 ರೊಳಗೆ ಕ್ಷಯರೋಗವನ್ನು ಶೇಕಡಾ 90 ರಷ್ಟು ಕಡಿಮೆ ಮಾಡಬೇಕೆಂದು ಯೋಜನೆ ಹಾಕಿದೆ. ಇದಕ್ಕಾಗಿ ಸರಳ ರೋಗಪತ್ತೆ ವಿಧಾನಗಳನ್ನು ಅಭಿವೃದ್ಧಿ ಪಡಿಸುವುದು ಬಹಳ ಮುಖ್ಯ. ಪ್ರಸ್ತುತ ಸಂಶೋಧನೆಗಳು ಇದನ್ನೇ ಮುಖ್ಯ ಧ್ಯೇಯವಾಗಿ ಇಟ್ಟುಕೊಂಡು ಕೆಲಸ ಮಾಡುತ್ತಿವೆ. 

ಅಮೆರಿಕೆಯ ಹಾವರ್ಡ್ ನ ವೈಸ್ ಸಂಶೋಧನಾ ಕೇಂದ್ರದ ತಜ್ಞರು ಕ್ಷಯರೋಗಿಗಳ ರಕ್ತದಲ್ಲಿ ಮಾತ್ರ ಕಾಣುವ ವಿಶಿಷ್ಟ ಪ್ರೋಟೀನ್ ಗಳ ಮೂಲಕ ಕ್ಷಯರೋಗವನ್ನು ಪತ್ತೆ ಮಾಡಬಲ್ಲ ಸರಳ ವಿಧಾನವನ್ನು ಅಭಿವೃದ್ದಿ ಪಡಿಸಿದ್ದಾರೆ. ತಾಂಜಾನಿಯಾ ಮತ್ತು ಫಿಲಿಪೀನ್ಸ್ ದೇಶಗಳ 387 ಕ್ಷಯರೋಗಿಗಳ ರಕ್ತವನ್ನು ಸಂಗ್ರಹಿಸಿ ಅದರಲ್ಲಿ 47 ಬಗೆಯ ವಿಶಿಷ್ಟ ಪ್ರೋಟೀನ್ ಗಳನ್ನು ಪತ್ತೆ ಮಾಡಿದರು. ಇದರಲ್ಲಿ ನಾಲ್ಕು ಬಗೆಯ ವಿಶಿಷ್ಟ ಪ್ರೋಟೀನ್ ಗಳು ರೋಗಪತ್ತೆ ಯಂತ್ರಗಳ ಮೂಲಕ ಸುಲಭವಾಗಿ ಪತ್ತೆ ಮಾಡಬಲ್ಲ ಅಧಿಕ ಪ್ರಮಾಣದಲ್ಲಿ ಇದ್ದವು. ರೋಗಿಯ ಬೆರಳ ತುದಿಯಿಂದ ಪಡೆದ ಒಂದು ತೊಟ್ಟು ರಕ್ತವನ್ನು ಈ ತಂತ್ರದ ಮೂಲಕ ಪರೀಕ್ಷಿಸಿದಾಗ ಶೇಕಡಾ 86 ರಷ್ಟು ರೋಗಿಗಳ ಕ್ಷಯರೋಗವನ್ನು ಪತ್ತೆ ಮಾಡಲು ಸಾಧ್ಯವಾಯಿತು. ಈ ಪರೀಕ್ಷೆಯ ನಿಖರತೆ ಶೇಕಡಾ 65 ರಷ್ಟು ಇತ್ತು. ಏಡ್ಸ್ ರೋಗಿಗಳ ಕ್ಷಯರೋಗ ಪತ್ತೆಯಲ್ಲಿ ಈ ವಿಧಾನ ಶೇಕಡಾ 100 ರಷ್ಟು ನಿಖರವಾಗಿತ್ತು. ಕ್ಷಯ ರೋಗಕ್ಕೆ 6 ತಿಂಗಳ ಕಾಲ ಚಿಕಿತ್ಸೆ ಪಡೆದ ರೋಗಿಗಳ ರಕ್ತವನ್ನು ಈ ಮೂಲಕ ಪರೀಕ್ಷಿಸಿದಾಗ 84 ಪ್ರತಿಶತ ರೋಗಿಗಳಲ್ಲಿ ಈ ಪ್ರೋಟೀನ್ ಗಳು ಕಾಣಲಿಲ್ಲ. ಅಂದರೆ, ಕಡಿಮೆ ಸಮಯದಲ್ಲಿ ಮಾಡಬಲ್ಲ ಈ ಪರೀಕ್ಷೆ ಸುಲಭವೂ, ಸೋವಿಯೂ, ತಕ್ಕ ಮಟ್ಟಿಗೆ ನಿಖರವೂ ಆಗಿದೆ ಎಂದಂತಾಯ್ತು!

ಈ ವಿಧಾನವನ್ನು ವಿಯಟ್ನಾಂ, ಪೆರು ಮತ್ತು ದಕ್ಷಿಣ ಆಫ್ರಿಕಾ ದೇಶಗಳ ನೂರಾರು ರೋಗಿಗಳಲ್ಲಿ ಪರೀಕ್ಷಿಸಿದಾಗ ಉತ್ತಮ ಫಲಿತಾಂಶಗಳು ಲಭ್ಯವಾದವು. ಜೊತೆಗೆ, ಈ ನಾಲ್ಕು ಪ್ರೋಟೀನ್ ಗಳ ಜೊತೆಗೆ ಇನ್ನೂ ಒಂದೆರಡು ಪ್ರೋಟೀನ್ ಗಳನ್ನೂ ಸೇರಿಸಿದಾಗ ಇನ್ನೂ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನುವುದನ್ನೂ ಪತ್ತೆ ಮಾಡಲಾಯಿತು. ಇದನ್ನು ಹೀಗೆಯೇ ಅಭಿವೃದ್ಧಿಗೊಳಿಸುತ್ತಾ ಹೋದಂತೆ ಫಲಿತಾಂಶದ ನಿಖರತೆ, ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ ಎಂಬುದು ಸಂಶೋಧಕರ ಅಭಿಮತ.

ಮೊದಲ ಹೆಜ್ಜೆಯಲ್ಲಿ ಈ ಪರೀಕ್ಷೆಯನ್ನು ಏಕಾಏಕಿ ಅಂತಿಮ ಪರೀಕ್ಷೆಯಾಗಿ ಬಳಸುವ ಆಲೋಚನೆ ಇದರ ಸಂಶೋಧಕರಿಗೆ ಇಲ್ಲ. ಇದನ್ನು ಮೊದಲ ಹಂತದ ಪರೀಕ್ಷೆಯಾಗಿ ಬಳಸುವ ಯೋಜನೆ ಮಾಡಲಾಗಿದೆ. ಅಂದರೆ, ಕ್ಷಯರೋಗ ಇರಬಹುದು ಎಂಬ ಅನುಮಾನ ಇರುವ ವ್ಯಕ್ತಿಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಯಾರಲ್ಲಿ ಈ ಪರೀಕ್ಷೆ positive ಆಗುತ್ತದೋ, ಅಂತಹವರಿಗೆ ಕ್ಷಯ ರೋಗ ಇರುವ ಸಾಧ್ಯತೆ ಹೆಚ್ಚು. ಕೇವಲ ಅಂತಹವರಲ್ಲಿ ಮಾತ್ರ ಮುಂದಿನ ಹಂತದ ದುಬಾರಿ ಪರೀಕ್ಷೆ ಮಾಡಬಹುದು. ಇದರ ಫಲಿತಾಂಶ ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಲಭ್ಯವಾಗುವುದರಿಂದ, “ಮುಂದಿನ ಹಂತದ ಪರೀಕ್ಷೆ ಯಾರಿಗೆ ಮಾಡಬೇಕು” ಎನ್ನುವ ನಿರ್ಧಾರಕ್ಕೆ ಪೂರಕವಾಗಿ ಈ ಪರೀಕ್ಷೆಯ ಫಲಿತಾಂಶವನ್ನು ಬಳಸಲಾಗುತ್ತದೆ. ಇದರಿಂದ ಹಲವಾರು ವ್ಯಕ್ತಿಗಳನ್ನು ಅನಾವಶ್ಯಕವಾಗಿ ದುಬಾರಿ ಪರೀಕ್ಷೆಗಳಿಂದ ಮುಕ್ತಗೊಳಿಸಿದಂತಾಗುತ್ತದೆ. ಆರೋಗ್ಯ ವ್ಯವಸ್ಥೆಯ ದೃಷ್ಟಿಯಿಂದ ಇದು ಬಹಳ ಉತ್ತಮ ವಿಧಾನ. ಬಡ ದೇಶಗಳಲ್ಲಿ ಅತೀ ಹೆಚ್ಚು ಆವಶ್ಯಕತೆ ಇರುವ ರೋಗಿಗಳಿಗೆ ಮಾತ್ರ ದೊಡ್ಡ ಪರೀಕ್ಷೆಗಳನ್ನು ನಡೆಸಲು ಈ ವಿಧಾನ ಸಹಕಾರಿ. ಇದರಿಂದ ಹಣದ, ಪರಿಕರಗಳ, ಸಮಯದ, ಸಂಪನ್ಮೂಲಗಳ ಉಳಿತಾಯ ಆಗುತ್ತದೆ. ಬಹಳ ಹೆಚ್ಚಿನ ಸಂಖ್ಯೆಯ ರೋಗಿಗಳು ತುಂಬಿರುವ ದೇಶಗಳಲ್ಲಿ ಇಂತಹ ತಂತ್ರಜ್ಞಾನಗಳ ಬಳಕೆ ಸಮುದಾಯ ವೈದ್ಯದ ದೃಷ್ಟಿಯಿಂದ ಬಹಳ ಉಪಯುಕ್ತ. 

ಒಟ್ಟಿನಲ್ಲಿ ಹೊಸ ತಂತ್ರಜ್ಞಾನಗಳು ಜನ ಸ್ನೇಹಿ ಆದಂತೆಲ್ಲಾ ಸಮುದಾಯದ ಒಟ್ಟಾರೆ ಆರೋಗ್ಯ ಬೆಳೆಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ “ಎಲ್ಲರಿಗೂ ಆರೋಗ್ಯ” ಎಂಬ ಧ್ಯೇಯಕ್ಕೆ ವಿಜ್ಞಾನ ಇಂಬು ನೀಡಲೇ ಬೇಕಲ್ಲವೇ? ಇಂತಹ ಸರಳ ತಂತ್ರಜ್ಞಾಗಳು ಒಂದು ಖಾಯಿಲೆಯ ವಿಷಯದಲ್ಲಿ ಯಶಸ್ಸು ಪಡೆದರೆ ಅದೇ ತತ್ತ್ವವನ್ನು ಬಳಸಿಕೊಂಡು ಹಲವಾರು ಖಾಯಿಲೆಗಳ ಪತ್ತೆಗೆ ನೀಲಿನಕ್ಷೆ ಸಿದ್ಧಪಡಿಸಬಹುದು. ಈ ಕಾರಣದಿಂದಲೇ ಇಂತಹ ಸುಲಭ ಗ್ರಾಹ್ಯ ತಂತ್ರಜ್ಞಾನ ಯಶಸ್ಸು ಕಾಣುವುದು ತುಂಬಾ ಮುಖ್ಯ. ವಿಜ್ಞಾನ ಜೀವನಕ್ಕೆ ಪೂರಕವಾಗುವುದೇ ಎಲ್ಲಾ ವಿಜ್ಞಾನಿಗಳ, ತತ್ತ್ವಜ್ಞಾನಿಗಳ ಚಿರಂತನ ಕನಸು!

(Vishwavani - 2/November/2019)
--------------